ಹೈವೇಯಲ್ಲಿ ಒಂದು ರಾತ್ರಿ ...

ಹೈವೇಯಲ್ಲಿ ಒಂದು ರಾತ್ರಿ ...

ಅದು ಬೆಂಗಳೂರು ಮೈಸೂರು ಹೈವೇ. ಪ್ರೀತಂ ತನ್ನ ಪಲ್ಸರ್ ಬೈಕ್ ಅನ್ನು ನೂರು ಸ್ಪೀಡಿನಲ್ಲಿ ಓಡಿಸುತ್ತಿದ್ದಾನೆ ಅವನ ಹಿಂದುಗಡೆ ಸಂಜನಾ ಅವನನ್ನು ಬಿಗಿದಪ್ಪಿ ಕೂತಿದ್ದಾಳೆ. ಅಂದು ಬೆಳಿಗ್ಗೆ ಮೈಸೂರಿಗೆ ಪ್ರವಾಸಕ್ಕೆಂದು ಹೋಗಿದ್ದ ಅವರಿಬ್ಬರೂ ಶ್ರೀರಂಗಪಟ್ಟಣ, ಅರಮನೆ, ಪ್ರಾಣಿ ಸಂಗ್ರಹಾಲಯ, K R S ನೋಡಿಕೊಂಡು ಬಿಡುವಷ್ಟರಲ್ಲಿ ಸಂಜೆ ಎಂಟಾಗಿತ್ತು. ಆಗಾಗಲೇ ಕತ್ತಲಾಗಿದ್ದರಿಂದ ಪ್ರೀತಂ ಸ್ವಲ್ಪ ಜೋರಾಗೆ ಗಾಡಿ ಓಡಿಸುತ್ತಿದ್ದ. ಆ ವೇಗಕ್ಕೆ ಹಿಂದೆ ಕೂತಿದ್ದ ಸಂಜನಾ ಗಾಭರಿಯಾಗಿ ಅವನನ್ನು ಗಟ್ಟಿಯಾಗಿ ಹಿಡಿದು ಕೂತಿದ್ದಳು. ಗಾಡಿ ರಾಮನಗರ ಸಮೀಪಿಸುತ್ತಿತ್ತು ಅಮಾವಾಸ್ಯೆ ಹಿಂದಿನ ದಿನವಾದ್ದರಿಂದ ಕತ್ತಲು ಸ್ವಲ್ಪ ಜೋರಾಗೆ ಇತ್ತು. ಇದ್ದಕ್ಕಿದ್ದಂತೆ ಗಾಡಿ ದಡಕ್ ದಡಕ್ ಎಂದು ಶಬ್ದ ಮಾಡುತ್ತಾ ನಿಂತುಕೊಂಡು ಬಿಟ್ಟಿತು. ಪ್ರೀತಂ ಸಂಜಾನ ಇಬ್ಬರೂ ಗಾಡಿಯಿಂದ ಕೆಳಗಿಳಿದು ಪ್ರೀತಂ ಗಾಡಿ ಪರೀಕ್ಷಿಸುತ್ತಿದ್ದ. ಸುತ್ತಲೂ ಗಾಢ ಕತ್ತಲಾವರಿಸಿದ್ದರಿಂದ ತನ್ನ ಮೊಬೈಲ್ ಟಾರ್ಚ್ ನಲ್ಲೆ ನೋಡುತ್ತಿದ್ದ. ಸಂಜು, ಗಾಡಿಯಲ್ಲಿ ಪೆಟ್ರೋಲ್ ಏನೋ ಇದೆ ಆದರೆ ಏನಾಗಿದೆ ಎಂದು ಗೊತ್ತಾಗುತ್ತಿಲ್ಲ ಕಣೇ, ಪ್ರೀತು, ಅದಕ್ಕೆ ನಾನು ಹೇಳಿದ್ದು ಬೇಗ ಬಿಡೋಣ ಅಂತ ಈಗ ನೋಡು ಎಲ್ಲಿ ಅಂತ ಹೋಗ್ತಿಯ ಹೈವೇ ಮಧ್ಯದಲ್ಲಿ ಕೆಟ್ಟು ನಿಂತಿದೆ, ನಂಗೆ ಭಯ ಆಗ್ತಿದೆ ಎಂದು ಕಣ್ಣಲ್ಲಿ ನೀರು ತುಂಬಿಕೊಂಡಳು. ಸಂಜು, ದಯವಿಟ್ಟು ಅಳಬೇಡ ನೋಡೋಣ ಸ್ವಲ್ಪ ದೂರ ತಳ್ಳಿಕೊಂಡು ಹೋಗಿ ಅಲ್ಲಿ ಯಾವುದಾದರೂ ಗ್ಯಾರೇಜ್ ಇದೆಯಾ ಎಂದು ನೋಡೋಣ ಬಾ ಎಂದು ತಳ್ಳಿಕೊಂಡು ಬಂದ. ಸ್ವಲ್ಪ ದೂರ ತಳ್ಳಿದರೂ ಯಾವುದೇ ಅಂಗಡಿ ಹಾಗೂ ಜನ ಕಾಣಿಸಲಿಲ್ಲ. ಒಂದು ಮೈಲಿಗಲ್ಲು ಬಳಿ ಗಾಡಿ ನಿಲ್ಲಿಸಿದ ಪ್ರೀತಂ. ಅದರಲ್ಲಿ ರಾಮನಗರ ೧೫ ಎಂದು ಬರೆದಿತ್ತು. ಪಕ್ಕದಲ್ಲೇ ಇನ್ನೊಂದು ಬೋರ್ಡ್ ಇತ್ತು. ಅದರಲ್ಲಿ ಒಂದು ಅಸ್ಥಿ ಪಂಜರದ ಚಿತ್ರ ಬರೆದು ಅದರಲ್ಲಿ ಅಪಘಾತ ಸ್ಥಳ ಎಂದು ಬರೆದಿತ್ತು. ಯಾವುದೇ ಗಾಡಿ ಬಂದರೂ ಅದರ ಲೈಟ್ ಆ ಬೋರ್ಡಿನ ಮೇಲೆ ಬಿದ್ದು ಆ ಅಸ್ಥಿಪಂಜರದ ಚಿತ್ರ ಎದ್ದು ಕಾಣುತ್ತಿತ್ತು. ಸಂಜನಾ ಆ ಬೋರ್ಡ್ ನೋಡಿ ಬಹಳ ಹೆದರಿಬಿಟ್ಟಲು. ಪ್ರೀತಂ ಅವಳನ್ನು ಸಂತೈಸುತ್ತ ಆಕಡೆ ಈಕಡೆ ನೋಡುತ್ತಿದ್ದ. ಅಲ್ಲೇ ಪಕ್ಕದಲ್ಲೇ ಸ್ವಲ್ಪ ದೂರದಲ್ಲಿ ಒಂದು ದೊಡ್ಡ ಮರದ ಕೆಳಗೆ ಮನೆಯೊಂದು ಅದರಲ್ಲಿ ಲೈಟ್ ಒಂದು ಉರಿಯುತ್ತಿದ್ದದ್ದು ಕಂಡು ಪ್ರೀತಂ ಗೆ ಸ್ವಲ್ಪ ಸಂತಸ ಉಂಟಾಯಿತು. ಸಂಜು ಒಂದೇ ಒಂದು ನಿಮಿಷ ಇಲ್ಲೇ ಇರು ಆ ಮನೆಗೆ ಹೋಗಿ ಅಲ್ಲಿ ಕೇಳಿ ಬರುತ್ತೇನೆ ಗ್ಯಾರೇಜ್ ಎಷ್ಟು ದೂರ ಎಂದು ಆ ಮನೆಯತ್ತ ಹೊರಟನು.

ಇತ್ತ ಗಾಡಿಯ ಮೇಲೆ ಕುಳಿತ ಸಂಜನಾ ಭಯದಲ್ಲೇ ನೆನಪಿನ ಸುರುಳಿಯನ್ನು ಬಿಚ್ಚಿಕೊಂಡಳು. ಮೂರು ತಿಂಗಳ ಹಿಂದಷ್ಟೇ ಪರಿಚಯವಾಗಿದ್ದ ಹುಡುಗ ಪ್ರೀತಂ. ಪ್ರೀತಂ ಒಳ್ಳೆಯ ಹುಡುಗ, ಸಿರಿವಂತರ ಹುಡುಗ. ಸಂಜನಾ ಕೂಡ ಸಿರಿವಂತರ ಮನೆಯವಳೇ. ಸ್ನೇಹದಿಂದ ಶುರುವಾಗಿದ್ದ ಇವರ ಪರಿಚಯ ಪ್ರೀತಿಗೆ ತಿರುಗಿತ್ತು. ಕೇವಲ ಒಂದೇ ತಿಂಗಳಲ್ಲಿ ಸ್ನೇಹವನ್ನು ಪ್ರೀತಿಗೆ ಬದಲಾಯಿಸಿದ್ದ ಪ್ರೀತಂ ಏನು ಮೋಡಿ ಮಾಡಿದ್ದನೋ ಅರಿಯದಾಗಿದ್ದಳು. ಸಂಜನಾಗೆ ಬೈಕಿನಲ್ಲಿ ಲಾಂಗ್ ರೈಡ್ ಎಂದರೆ ಹುಚ್ಚು. ಕಳೆದ ವಾರ ಅವಳೇ ಪ್ರೀತಂ ಗೆ ಮೈಸೂರಿಗೆ ಲಾಂಗ್ ರೈಡ್ ಹೋಗೋಣ ಎಂದಾಗ ಬೇಡ ಕಾರಿನಲ್ಲಿ ಹೋಗೋಣ ಎಂದು ಎಷ್ಟೇ ಹೇಳಿದ್ದರೂ ಕೇಳಿರಲಿಲ್ಲ ಸಂಜನಾ. ಇಲ್ಲ ಬೈಕಿನಲ್ಲೇ ಹೋಗಬೇಕು ಎಂದು ಹಠ ಹಿಡಿದಿದ್ದರಿಂದ ಬೈಕಿನಲ್ಲಿ ಬಂದಿದ್ದರು. ಬೆಳಿಗ್ಗೆ ಹೊರಟದ್ದು ಸ್ವಲ್ಪ ತಡವಾದ್ದರಿಂದ ಈಗ ಈ ಪರಿಸ್ಥಿತಿ ಎದುರಾದದ್ದು ಎಂದು ಆಲೋಚಿಸುತ್ತಿದ್ದಾಗಲೇ ಕ್ರೀಂ ಕ್ರೀಂ ಎಂಬ ಬಸ್ಸಿನ ಹಾರನ್ ಸದ್ದಿಗೆ ವಾಸ್ತವಕ್ಕೆ ಬಂದಳು. ಬಸ್ಸಿನ ಹೆಡ್ ಲೈಟ್ ಆ ಬೋರ್ಡಿನ ಮೇಲೆ ಬಿದ್ದು ಅಲ್ಲಿದ್ದ ಅಸ್ಥಿ ಪಂಜರ ಇವಳನ್ನು ನೋಡಿ ನಕ್ಕಂತೆ ಭಾಸವಾಗಿ ಥರಗುಟ್ಟಿದಳು. ಪ್ರೀತಂ ಹೋಗಿ ಹದಿನೈದು ನಿಮಿಷವಾಯಿತು ಇನ್ನೂ ಬರಲಿಲ್ಲವಲ್ಲ ಎಂದು ಆಲೋಚಿಸುತ್ತ ಕುಳಿತಿದ್ದಳು.

ಅತ್ತ ಮನೆಯತ್ತ ಹೊರಟ ಪ್ರೀತಂ ಮನೆ ಹತ್ತಿರ ಬಂದ. ಅದೊಂದು ಪಾಳು ಬಿದ್ದ ಮನೆ. ಪಕ್ಕದಲ್ಲೇ ದೊಡ್ಡದೊಂದು ಆಲದ ಮರ. ಮರದ ಬಿಳಲುಗಳು ಇವನನ್ನು ತಬ್ಬಿಕೋ ಬಾ ಎಂದು ಕರೆದಂತಿದ್ದವು. ಹಲೋ ಯಾರಾದರೂ ಇದ್ದೀರಾ ಎಂದು ಕೂಗಿದ, ಯಾರೂ ಉತ್ತರಿಸಲಿಲ್ಲ. ಒಂದು ಸಲ ರಸ್ತೆಯ ಕಡೆ ತಿರುಗಿದ ಅಲ್ಲಿ ಸಂಜನಾ ಕಾಣಿಸಲಿಲ್ಲ. ಒಂದು ಮರ ಅಡ್ಡ ಇತ್ತು ಆ ಮರದ ಬದಿಗೆ ಬಂದು ನೋಡಿದ ಸಂಜನಾ ಕಾಣಿಸಿದಳು. ನಿಟ್ಟುಸಿರು ಬಿಟ್ಟು ಮನೆಯ ಕಡೆ ತಿರುಗಿದ ತಕ್ಷಣ ಗಾಭರಿಯಿಂದ ಹೌಹಾರಿದ. ಅಲ್ಲಿ ಮೂರು ಜನ ನಿಂತಿದ್ದರು. ಒಬ್ಬ ಮಧ್ಯಮ ವಯಸ್ಕ ವ್ಯಕ್ತಿ, ಆತನ ಪಕ್ಕದಲ್ಲೇ ಒಬ್ಬಳು ಹೆಂಗಸು ಜೊತೆಯಲ್ಲಿ ಒಂದು ಪುಟ್ಟ ಹುಡುಗಿ. ಆ ಮೂವರು ನೋಡಲು ಅತೀ ಸುಂದರವಾಗಿದ್ದರು. ಒಳ್ಳೆಯ ಬಟ್ಟೆ ಎಲ್ಲರ ಮೈ ಮೇಲೂ ಆಭರಣಗಳು ಹೊಳೆಯುತ್ತಿದ್ದವು. ಪ್ರೀತಂ ಗೆ ಒಂದು ಕ್ಷಣ ಗೊಂದಲ ಉಂಟಾಯಿತು. ಈ ಹೆದ್ದಾರಿಯಲ್ಲಿ ಈ ಮರದ ಕೆಳಗೆ ಈ ಪಾಳು ಬಿದ್ದ ಮನೆಯಲ್ಲಿ ಈ ಮೂವರು ಈ ಅವತಾರದಲ್ಲಿ ಅವನಿಗೆ ಏನೊಂದು ಅರ್ಥವಾಗಲಿಲ್ಲ. ಆ ಮಧ್ಯ ವಯಸ್ಕ ವ್ಯಕ್ತಿಯೇ ಮಾತಿಗೆ ಶುರುವಿಟ್ಟುಕೊಂಡ. ಏನಾಗಬೇಕಿತ್ತು ಈ ಹೊತ್ತಿನಲ್ಲಿ ಇಲ್ಲೇಕೆ ಬಂದೆ ಎಂದು ಕೇಳಿದ. ಪ್ರೀತಂ ಇನ್ನೂ ಗಾಭಾರಿಯಲ್ಲೇ ಇದ್ದ. ತಡವರಿಸುತ್ತಲೇ ಪರಿಸ್ಥಿತಿ ವಿವರಿಸಿದ. ಅಷ್ಟರಲ್ಲಿ ಆ ಹೆಂಗಸು ಒಳಗೆ ಹೋಗಿ ಬರುತ್ತೀನಿ ಎಂದು ಒಳಗೆ ಹೋಗಿ ಕೈಯಲ್ಲಿ ಒಂದು ಲೋಟ ತಂದು ಪ್ರೀತಂ ಕೈಗಿತ್ತಳು. ಏನಿದು ಎಂದ ಪ್ರೀತಂ, ಕುಡಿಯಿರಿ ದಣಿವಾಗಿದ್ದೀರಿ ಎಂದಳು ಆ ಹೆಂಗಸು. ಪ್ರೀತಂ ಗೆ ಏನು ಮಾಡುವುದು ಗೊತ್ತಾಗದೆ ಗಟಗಟನೆ ಕುಡಿದು ಆ ಲೋಟವನ್ನು ಮರಳಿ ಆಕೆಯ ಕೈಗಿತ್ತಳು. ಆ ಪುಟ್ಟ ಹುಡುಗಿ ಮಾತಾಡಿದಳು. ಅಂಕಲ್ ಈ ಹೊತ್ತಿನಲ್ಲಿ ಇಲ್ಲೆಲ್ಲಾ ಬರಬಾರದು. ಇಲ್ಲಿಂದ ಅರ್ಧ ಕಿ.ಮೀ ಹೋಗಿ ಅಲ್ಲೊಂದು ಗ್ಯಾರೇಜ್ ಇದೆ ಅಲ್ಲಿ ಗಾಡಿ ಸರಿಪಡಿಸಿಕೊಳ್ಳಿ ಎಂದು ಹೇಳಿದಳು. ತಕ್ಷಣ ಪ್ರೀತಂ ಆ ಮೂವರಿಗೂ ಧನ್ಯವಾದ ಹೇಳಿ ತಿರುಗಿ ಬಂದ ದಾರಿಯಲ್ಲೇ ರಸ್ತೆ ಕಡೆ ಅತೀ ವೇಗವಾಗಿ ನಡೆದ. ರಸ್ತೆಗೆ ಬರುತ್ತಿದ್ದ ಹಾಗೆ ಅಲ್ಲಿ ಸಂಜನಾ ಹಾಗೂ ಗಾಡಿ ಎರಡೂ ಕಾಣಿಸಲಿಲ್ಲ. ಗಾಭರಿಯಾಗಿ ಒಂದು ಸಲ ಹಿಂದೆ ತಿರುಗಿದ. ಅಲ್ಲಿ ಅವನು ಮುಂಚೆ ನೋಡಿದ್ದ ಮರವಾಗಲಿ ಮನೆಯಾಗಲಿ ಏನೂ ಇರಲಿಲ್ಲ. ಅದೊಂದು ಬಟಾಬಯಲು ಪ್ರದೇಶವಾಗಿತ್ತು. ಇದ್ದಕ್ಕಿದ್ದಂತೆ ಇವನ ಕಾಲುಗಳು ನಡುಗಲು ಶುರುವಾಯಿತು. ಅಷ್ಟರಲ್ಲಿ ಪ್ರೀತಂ ಪ್ರೀತಂ ಎಂದು ಸಂಜನಾ ಧ್ವನಿ ಕೇಳಿಸಿತು. ಅವಳು ಮುಂಚೆ ನಿಂತಿದ್ದ ಜಾಗದಿಂದ ೧೦೦ ಅಡಿ ಮುಂದೆ ಹೋಗಿ ನಿಂತಿದ್ದಳು.

ಸಂಜನಾ, ಯಾಕೆ ಅಲ್ಲಿ ಹೋಗಿ ನಿಂತೆ ನನಗೆ ಎಷ್ಟು ಗಾಭರಿಯಾಯಿತು ಎಂದ ಪ್ರೀತಂ. ಇಲ್ಲ ಪ್ರೀತು ನಾನು ಇಲ್ಲೇ ನಿಂತಿದ್ದೆ ಅಷ್ಟರಲ್ಲಿ ಒಬ್ಬ ಮಧ್ಯವಯಸ್ಕ ಒಂದು ಹೆಂಗಸು ಮತ್ತೆ ಒಂದು ಪುಟ್ಟ ಹುಡುಗಿ ಇಲ್ಲಿ ಬಂದು ಇಲ್ಲಿ ನಿಲ್ಲಬೇಡಮ್ಮ ಇದು ಸುರಕ್ಷಿತವಾದ ಸ್ಥಳವಲ್ಲ ಇದು ಅಪಘಾತಗಳ ಸ್ಥಳ ಎಂದು ಆ ವ್ಯಕ್ತಿಯೇ ಬೈಕನ್ನು ಇಲ್ಲಿ ತಂದು ನಿಲ್ಲಿಸಿ ಹೊರಟು ಹೋದರು.  ಪ್ರೀತಂ ಗೆ ಜಂಘಾಬಲವೇ ಉಡುಗಿಹೋಯಿತು.ಅಲ್ಲಿ ಏನು ನಡೆಯುತ್ತಿದೆ ಎಂದು ಅವನಿಗೆ ಸ್ವಲ್ಪ ಸ್ವಲ್ಪವೇ ಅರಿವಾಗತೊಡಗಿತು ಆದರೂ ಅದನ್ನು ತೋರಗೊಡದೆ ಬೈಕನ್ನು ತಳ್ಳಲು ಶುರುಮಾಡಿದನು. ಪ್ರೀತು ಅಲ್ಲಿ ಆ ಮನೆಯಲ್ಲಿ ಏನು ಹೇಳಿದರು ಎಂದು ಸಂಜನಾ ಕೇಳಿದಾಗ ಇಲ್ಲೇ ಮುಂದೆ ಗ್ಯಾರೇಜ್ ಇದೆ ಎಂದಷ್ಟೇ ಹೇಳಿ ಗಾಡಿ ತಳ್ಳಲು ಶುರು ಮಾಡಿದನು. ಸ್ವಲ್ಪ ದೂರ ಬರುವಷ್ಟರಲ್ಲಿ ಗ್ಯಾರೇಜ್ ಕಾಣಿಸಿತು. ಅವನು ಆಗಷ್ಟೇ ಬಾಗಿಲು ಮುಚ್ಚುತ್ತಿದ್ದ. ಕೂಡಲೇ ಅವನ ಬಳಿ ಹೋಗಿ ಹೀಗೆ ಬೆಂಗಳೂರಿಗೆ ಹೋಗಬೇಕು ದಯವಿಟ್ಟು ಸಹಾಯ ಮಾಡಿ ಎಂದು ಕೇಳಿಕೊಂಡಾಗ ಆತ ಒಪ್ಪಿ ಗಾಡಿಯನ್ನು ಪರೀಕ್ಷಿಸಲು ಶುರು ಮಾಡಿದನು. ಸಂಜನಾ ಹತ್ತು ಅಡಿ ದೂರದಲ್ಲಿ ನಿಂತಿದ್ದಳು. ಪ್ರೀತಂ ಆ ಗ್ಯಾರೇಜ್ನವನೊಂದಿಗೆ ನಡೆದ ವಿಷಯ ತಿಳಿಸಿದನು. ಅದಕ್ಕೆ ಆತ ಕೊಟ್ಟ ವಿವರ "ಸಾರ್ ಈಗ ಒಂದು ತಿಂಗಳ ಹಿಂದಷ್ಟೇ ನೀವು ನಿಂತಿದ್ದ ಅದೇ ಜಾಗದಲ್ಲಿ ಮೈಸೂರಿನಿಂದ ಕಾರಲ್ಲಿ ಬರುತ್ತಿದ್ದ ಗಂಡ ಹೆಂಡತಿ ಹಾಗೆ ಒಂದು ಹೆಣ್ಣು ಮಗು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟರು. ಅಂದಿನಿಂದ ಆ ಸ್ಥಳದಲ್ಲಿ ಯಾರಾದರೂ ನಿಂತುಕೊಂಡರೆ ಅಥವಾ ಏನಾದರೂ ಅಪಘಾತ ಸಂಭವಿಸಿದರೆ ಈ ಮೂವರು ಅಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ ಸರ್. ಆದರೆ ಯಾರಿಗೂ ತೊಂದರೆ ಮಾಡುವುದಿಲ್ಲ ಎಂದನು. ಸರ್ ಗಾಡಿ ಸರಿ ಆಯಿತು ನೂರು ರೂಪಾಯಿ ಕೊಡಿ ಎಂದು ಬಾಗಿಲು ಹಾಕಿದನು. ಪ್ರೀತಂ ಆತನ ಕೈಗೆ ನೂರು ರೂ ಕೊಟ್ಟು ಮನದಲ್ಲೇ ಆ ಮೂವರಿಗೆ ಸಂತಾಪ ಸೂಚಿಸಿ ನಗುತ್ತ ಬೆಂಗಳೂರ ಕಡೆ ಗಾಡಿ ಓಡಿಸಿದನು.

ಹಿನ್ನುಡಿ : ಈ ಕಥೆಯಲ್ಲಿ ಬರುವ ಯಾವುದೇ ಪಾತ್ರ ಹಾಗೂ ಸನ್ನಿವೇಶ ಕೇವಲ ಕಾಲ್ಪನಿಕ. ಯಾವುದೇ ವ್ಯಕ್ತಿಗೆ ಸಂಬಂಧಿಸಿದ್ದಲ್ಲ
Rating
No votes yet

Comments