ಮುಖಾಮುಖಿ: ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜ಼ಾರೆ

ಮುಖಾಮುಖಿ: ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜ಼ಾರೆ

ಎಲ್ಲೆಲ್ಲಿ ಭ್ರಷ್ಟಾಚಾರದ ಪ್ರಭಾವವಿರುವುದೋ ಅಲ್ಲಲ್ಲಿ ಎರಡು ರೀತಿಯ ಜನರನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ. ಒಂದು ಅದರೊಂದಿಗೆ ಹೊಂದಿಸಿಕೊಂಡು ಹೋಗುವ ಗುಂಪಾದರೆ ಇನ್ನೊಂದು ಅದರ ವಿರುದ್ಧ. ಇವೆರಡು ನಮ್ಮ ದೇಶದ ಇಂದಿನ ಮುಖಗಳಾಗಿರುವುದು ನಮ್ಮ ಅದೃಷ್ಟವಂತೂ ಖಂಡಿತವಾಗಿ ಅಲ್ಲ.

ಭ್ರಷ್ಟಾಚಾರ ನಮಗೆ ಹಿಡಿದಿರುವ ಭೂತ! ಪಿಲ್ಚಂಡಿಯೋ, ಪಂಜುರ್ಲಿಯೋ ಅಲ್ಲ... ಪೆಡಂಭೂತ! ಇದು ಹಿಡಿದಿದ್ದು ಸ್ವಾತಂತ್ರ್ಯ ಬಂದಾಗ, ಮೊದಲೂ ಇತ್ತು. ಆದರೆ ಪ್ರಜಾಪ್ರಭುತ್ವ ಬಂದಿದ್ದು ಸ್ವಾತಂತ್ರ್ಯಾನಂತರವಲ್ವೇ? ಆದ್ದರಿಂದ ಮೊದಲು ಇದ್ದದ್ದು ನಗಣ್ಯ. ಏಕೆಂದರೆ ಜನರೇ ಸರಕಾರ ಮಾಡಿದಾಗ ಅದರಲ್ಲಿ ಭ್ರಷ್ಟಾಚಾರಕ್ಕೆ ಸ್ಥಳವಿರಬಾರದಿತ್ತು. ಈಗ ಒಬ್ಬ ವ್ಯಕ್ತಿ ಅದರ ಎದುರು ಸೆಣಸಾಟಕ್ಕಿಳಿದಿದ್ದಾನೆ. ಈ ಸೆಣಸಾಟ ಕೇವಲ ಭ್ರಷ್ಟಾಚಾರದ ವಿರುದ್ಧವಲ್ಲ ಅದರೊಂದಿಗೆ ಮೆರೆದು ಅದನ್ನು ಬೆಳೆಸುತ್ತಿರುವ ರಾಜಕೀಯ ವ್ಯವಸ್ಥೆಯೊಂದಿಗೂ ಆಗಿದೆ. ಇವತ್ತಿಗೆ ಕಿಸಾನ್ ಬಾಪಟ್ ಬಾಬುರಾವ್ ಹಜಾರೆಯವರ ಉಪವಾಸ ಸತ್ಯಾಗ್ರಹಕ್ಕೆ ಮೂರನೇ ದಿನ. ಅಣ್ಣಾ ಹಜ಼ಾರೆ ಎಂದೇ ಪ್ರಖ್ಯಾತರಾಗಿರುವ ಇವರು ರಾಲೆಗಾಂವ್ ಸಿದ್ಧಿ ಎಂಬ ಸಣ್ಣ ಹಳ್ಳಿಗೆ ಆದರ್ಶ ಹಳ್ಳಿಯ ರೂಪ ಕೊಟ್ಟವರು, ಅದರಿಂದಲೇ ೧೯೯೨ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿ ಅರಸಿಕೊಂಡು ಬಂದಿತು.

ಈಗ ಅಣ್ಣಾ ಹಜ಼ಾರೆಯವರು ಹಿಡಿದಿರುವ ಉಪವಾಸ ಭ್ರಷ್ಟಾಚಾರದ ವಿರುದ್ಧ ತೆಗೆದುಕೊಳ್ಳಬೇಕಾಗಿರುವ ಸರಕಾರದ ಕ್ರಮದ ಬಗ್ಗೆ. ಅವರು ಹೇಳುತ್ತಾರೆ," ಲೋಕಾಯುಕ್ತ ಬಿಲ್ ನಿರ್ಧರಿಸಲು ಒಂದು ಜಂಟಿ ಕಮಿಟಿಯನ್ನು ರಚಿಸಬೇಕು. ಈ ಬಗ್ಗೆ ನಾವು ಮಾರ್ಚಿನಿಂದ ಪ್ರಧಾನಿಯವರಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ. ಪ್ರಧಾನಿಯವರಿಗೆ ಭ್ರಷ್ಟರಹಿತ ಭಾರತದ ಕನಸಿದ್ದರೆ ಅದಕ್ಕೆ ಜಂಟಿ ಕಮಿಟಿ ಇರುವುದು ಅವಶ್ಯಕ"

ಲೋಕಾಯುಕ್ತ ಸಂತೋಷ ಹೆಗ್ಡೆ, ಪ್ರಶಾಂತ್ ಭೂಷಣ್ ಮತ್ತು ’ಭ್ರಷ್ಟಾಚಾರದ ವಿರುದ್ಧ ಭಾರತ’ದ ಇತರ ಸದಸ್ಯರಿಂದ ಹೊಸ ಬಿಲ್ ಒಂದನ್ನು ತಯಾರಿಸಲಾಗಿದೆ. ಇದನ್ನೆ ’ಜನ್ ಲೋಕಪಾಲ್ ಬಿಲ್’ ಎಂದು ಹೆಸರಿಸಲಾಗಿದೆ. ಇದರಿಂದ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರವನ್ನು ಕೊಟ್ಟು ಈ ಮೂಲಕ ಭಾರತದಲ್ಲಿ ಭ್ರಷ್ಟಾಚಾರದ ನಿರ್ಮೂಲನೆಗೆ ಸರಕಾರ ಕ್ರಮ ತೆಗೆದುಕೊಳ್ಳಬೇಕು ಎಂಬುದು ಹಜಾರೆಯವರ ಉಪವಾಸ ಸತ್ಯಾಗ್ರಹದ ಹಿಂದಿನ ಉದ್ದೇಶ. ಆದರೆ ಈ ಬಿಲ್ಲನ್ನು ಪಾರ್ಲಿಮೆಂಟ್ ಎದುರು ಮಂಡಿಸಲು ಪ್ರಧಾನಿಯವರು ನಿರಾಕರಿಸಿದ್ದಾರೆ.

ಈ ಬಿಲ್ಲಿನ ಪ್ರಮುಖ ಅಂಶಗಳು ಹೀಗಿವೆ:
ಲೋಕಾಯುಕ್ತರಿಗೆ ಜನರಿಂದ ಕಂಪ್ಲೇಂಟುಗಳನ್ನು ಸ್ವೀಕರಿಸುವ ಅಧಿಕಾರವಿರುತ್ತದೆ
ಲೋಕಾಯುಕ್ತರನ್ನು ಕೇವಲ ಸಲಹಾ ಅಂಗಗಳೆಂದು ಪರಿಗಣಿಸದೆ ಅವರಿಗೆ ತಪ್ಪಿತಸ್ಥರೆದುರು ಪ್ರಾಸೆಕ್ಯೂಶನ್ ಮಾಡಲು ಅಧಿಕಾರ ನೀಡುವುದು
ಲೋಕಾಯುಕ್ತರಿಗೆ ಪೊಲೀಸ್ ಬೆಂಬಲ ನೀಡುವುದು. ಇದು ಎಫ್ ಐ ಆರ್ ಮಾಡಿಸಲು ಅನುಕೂಲ
ತಪ್ಪಿತಸ್ಥರಿಗೆ ಕನಿಷ್ಟ ೫ ವರ್ಷದ ಜೈಲು ಶಿಕ್ಷೆ ಮತ್ತು ಗರಿಷ್ಟ ಜೀವಾವಧಿ ಶಿಕ್ಷೆ
ಲೋಕಾಯುಕ್ತ ಮತ್ತು ಭ್ರಷ್ಟಾಚಾರದ ವಿರುದ್ಧದ ಸಿಬಿಐ ಒಂದೇ ಸ್ವತಂತ್ರ ಭಾಗವಾಗುವುದು.


ಹಜಾರೆಯವರು ಜನರನ್ನು ಹಾದಿ ತಪ್ಪಿಸುವ ಮತ್ತು ತಮ್ಮ ನಿಲುವನ್ನು ರಾಜಕೀಯ ತಂತ್ರಗಳಿಗಾಗಿ ಉಪಯೋಗಿಸುವ ರಾಜಕೀಯ ಪಕ್ಷಗಳಿಗೆ ಛೀಮಾರಿ ಹಾಕಿದ್ದಾರೆ. ಹಾಗೆಯೇ ತನ್ನನ್ನು ನೋಡಲು ಬಂದ ರಾಜಕಾರಣಿಗಳಿಗೆ ತನ್ನ ಬಳಿಯಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ್ದಾರೆ.    

ಈ ಚಳುವಳಿ ಇಡೀ ದೇಶವನ್ನು ಆಕರ್ಷಿಸಬೇಕಾದರೆ ಭ್ರಷ್ಟಾಚಾರದಿಂದ ಜನ ಎಷ್ಟು ಬೇಸತ್ತಿದ್ದಾರೆ ಎಂದು ಅರಿವಾಗುತ್ತಿದೆ. ಬೆಂಗಳೂರಿನಿಂದ ಶ್ರೀನಗರದವರೆಗೆ ವ್ಯಾಪಕವಾಗಿ ಅಣ್ಣಾ ಹಜ಼ಾರೆಯವರ ಚಳುವಳಿಗೆ ಬೆಂಬಲ ವ್ಯಕ್ತವಾಗಿದೆ. ಈ ಹೊತ್ತಿನಲ್ಲಿ ಅಮೀರ್ ಖಾನ್ ಕೊಟ್ಟಿರುವ ಈ ಹೇಳಿಕೆ ಹೆಚ್ಚು ಅರ್ಥಪೂರ್ಣ," ಈ ಚಳುವಳಿಗೆ ಕ್ರಿಕೆಟ್ ವಿಶ್ವಕಪ್ ಗಿಂತಲೂ ಹೆಚ್ಚಿನ ಬೆಂಬಲ ಬೇಕಾಗಿದೆ". ನಿಜ ಅಲ್ಲವೇ? ಭ್ರಷ್ಟಾಚಾರದ ವಿರುದ್ಧ ಹೋರಾಡಿ... ಮಾಡು ಇಲ್ಲವೇ ಮಡಿ!

ಕೊನೆಯದಾಗಿ, ಈ ಚಳುವಳಿ ನಿಮಗೆ ಗಾಂಧೀಜಿಯವರ ಸತ್ಯಾಗ್ರಹದ ನೆನಪು ತರುತ್ತದೆಯೇ? ತಂದರೆ, ನಮ್ಮ ಸದ್ಯದ ದುರಂತ ಸ್ಥಿತಿ ನೋಡಿ.. ತರದಿದ್ದರೆ ಬಿಡಿ... ನಿಮ್ಮ ಮೇಲೆ ನನಗೆ ಅನುಕಂಪವಿದೆ!!!

[ಮೂಲ ಆಂಗ್ಲ ಲೇಖನ ನನ್ನ ಬ್ಲಾಗಿನಲ್ಲಿ]

Comments