ಮಾವಿನ ಮಿಡಿ - ಒಂದು ಪ್ರಬಂಧ

ಮಾವಿನ ಮಿಡಿ - ಒಂದು ಪ್ರಬಂಧ

 

 ಗೋರಾಜೆ ಶಾಲೆಯಿಂದ ಮನೆಗೆ ವಾಪಸು ಬರುವಾಗ ಶಾಲೆ ಮಕ್ಕಳಲ್ಲಿ ಒಂದು ಸುದ್ದಿ ಹಬ್ಬಿತು : "ಮುತ್ತಯ್ಯ ಶೆಟ್ರ ಮನೆಯ ಹತ್ತಿರ ಮಾವಿನ ಮಿಡಿ ಕೊಯ್ತರಂಬ್ರು ". ನಮ್ಮ ಹುಡುಗರ ಸೈನ್ಯ, ಮಾಮೂಲಿ ದಾರಿ ಬದಲಿಸಿ, ನೆಟ್ಟಗೆ ಮುಡಾರಿಯ ಹಾಡಿದಾರಿ ಹಿಡಿದು, ಮುತ್ತಯ್ಯ ಶೆಟ್ರ ಮನೆ ಹತ್ತಿರ ಸಾಗಿತು. ಗುಡ್ಡೆಬದಿಯ ಎತ್ತರವಾದ ಮಾವಿನ ಮರದಲ್ಲಿ ಯಾರೋ ಕುಳಿತು, ಮಾವಿನ ಮಿಡಿಗಳನ್ನು ಕೊಯ್ಯುತ್ತಿದ್ದುದು ದೂರದಿಂದಲೇ ಕಾಣುತ್ತಿತ್ತು. ಮರದ ಬುಡಕ್ಕೆ ಹೋಗಿ ನೋಡಿದರೆ, ನಾಲ್ಕೆಂಟು ಮಂದಿ ನೆರೆಹೊರೆಯವರು, ಚೀಲ, ಅಥವಾ ಕುಕ್ಕೆ ಹಿಡಿದುಕೊಂಡು, ತಲೆ ಮೇಲಕ್ಕೆ ಮಾಡಿಕೊಂಡು ಮಾವಿನಮರದ ತುದಿಯನ್ನೇ ನೋಡುತ್ತಿದ್ದರು.

ಮೇಲೇರಿದಾತ ಮಾವಿನ ಮಿಡಿಯನ್ನು ಕೊಯ್ದು, ತನ್ನ ಸೊಂಟಕ್ಕೆ ಕಟ್ಟಿಕೊಂಡ ಚೀಲಕ್ಕೆ ತುಂಬಿಕೊಳ್ಳುತ್ತಿದ್ದ, ಅವನ ಕೈ ತಪ್ಪಿ ಕೆಳಗೆ ಉದುರಿದ ಮಿಡಿಗಳನ್ನು ನಾವೆಲ್ಲ ಆರಿಸಿ ತಿನ್ನುತ್ತಿದ್ದೆವು! "ಮಕ್ಕಳೆಲ್ಲ ಮನೆಗೆ ಹೋಯಿನಿ " ಎಂದು ಗದರಿಸಿದ್ದು ಯಾರೆಂದು ನೋಡಿದರೆ, ನಮ್ಮ ಅಮ್ಮಮ್ಮ! ಮಾವಿನ ಮಿಡಿ ತರಲು ಅವರೂ ಒಂದು ಕುಕ್ಕೆಯನ್ನು ಹಿಡಿದು, ಆ ಮರದ ಬುಡದಲ್ಲಿ ನಿಂತಿದ್ದರು.
 
ನಾಲ್ಕಾರು ಮಾವಿನ ಮಿಡಿ ತಿಂದು, ನಾವೆಲ್ಲ ಮನೆಗೆ ಹೋದೆವು. ಸ್ವಲ್ಪ ಹೊತ್ತಾದ ನಂತರ, ಒಂದು ಕುಕ್ಕೆಯ ತುಂಬಾ ಮಾವಿನ ಮಿಡಿಯನ್ನು ತುಂಬಿಕೊಂಡು ಅಮ್ಮಮ್ಮ ಬಂದರು. ಮನೆ ತುಂಬಾ ಮಾವಿನಮಿಡಿಯ ವಾಸನೆ ಘಂ ಎಂದು ತುಂಬಿಕೊಂಡಿತು! ಅದಾಗಲೇ ಸಂಜೆಗತ್ತಲು. ಅಮ್ಮಮ್ಮ ಮೆಟ್ಟು ಕತ್ತಿಯ ಮುಂದೆ ಕುಳಿತು,ಮಾವಿನ ಮಿಡಿಗಳನ್ನು ಸೋಸಲು ತೊಡಗಿದರು. " ಇವತ್ತು ರಾತ್ರಿಯೇ ಉಪ್ಪಿಗೆ ಹಾಕಿ ಇಡ್ಕ್ - ಮತ್, ಹಾಂಗೇ ಬಿಟ್ರೆ ಮಿಡಿ ಹಾಳಾತ್ " ಎನ್ನುತ್ತಾ ಒಂದೊಂದೇ ಮಿಡಿಯನ್ನು ಆರಿಸಿ, ಅದರ ತೊಟ್ಟು ಎಷ್ಟು ಬೇಕೋ ಅಷ್ಟನ್ನು ಉಳಿಸಿಕೊಂಡು, ದಂಟನ್ನು ಕತ್ತರಿಸಿ ಮತ್ತೊಂದು ಕಡೆ ರಾಶಿ ಹಾಕುತ್ತಿದ್ದರು.
 
ಉಪ್ಪಿನ ಕಾಯಿ ಮಾಡಲು ಆರಿಸುವ ಮಾವಿನ ಮಿಡಿಗೆ, ಅದರದ್ದೇ ಆದ ಒಂದು ಹದ ಇದೆ. ಮಿಡಿಗಳು ಹದವಾಗಿ ಬಲಿತಿರಬೇಕು - ಒಳಗಿರುವ ಕೋಂಗಿಲ ಸ್ವಲ್ಪ ಮೃದುವಾಗಿರಬೇಕು. ಗೊರಟು ಆಗಲು ಆರಂಭವಾಗಿರಬಾರದು. ಮಿಡಿ ಕೊಯ್ಯುವಾಗ, ಮಿಡಿಗೆ ಗಾಯವಾಗಿರಬಾರದು. ಮಾವಿನ ಮಿಡಿ ಬಿಸಿಲಿಗೆ ಸುಟ್ಟು ಕಪ್ಪಾಗಿರಬಾರದು. ಸೊನೆ ಸುಟ್ಟಿರಬಾರದು. ಒಂದೇ ಗಾತ್ರದ ಮಿಡಿಗಳನ್ನು ಆರಿಸಿ ಪ್ರತ್ಯೇಕಿಸಿದ ನಂತರ ಅಮ್ಮಮ್ಮ ಉಪ್ಪಿನ ಮರಿಗೆ ತೆಗೆಯುತ್ತಾರೆ.
 
ದೊಡ್ಡ ಪಾತ್ರೆಗೆ ತಳದಲ್ಲಿ ಸ್ವಲ್ಪ ಕಲ್ಲುಉಪ್ಪನ್ನು ಹಾಕಿ, ಅದರ ಮೇಲೆ ಒಂದು ಪದರ ಮಾವಿನ ಮಿಡಿ ಹರಡುತ್ತಾರೆ. ಅದರ ಮೇಲೆ ಒಂದಿಂಚು ಉಪ್ಪಿನ ಪದರ - ಅದರ ಮೇಲೆ ಮಿಡಿ - ಪುನ: ಉಪ್ಪಿನ ಪದರ - ಈ ರೀತಿ ಪಾತ್ರೆ ತುಂಬುವ ತನಕ ಮಿಡಿ ಮತ್ತು ಉಪ್ಪು ತುಂಬಿ, ಪಾತ್ರೆಯ ಮೇಲೆ ಭಾರಕ್ಕೆಂದು, ಅದೆಂದೋ ಸೀತಾನದಿಯಿಂದ ತಂದಿಟ್ಟಿದ್ದ ದೊಡ್ಡ ಒರೆಯುವ ಕಲ್ಲುಗಳನ್ನು ಇಡುತ್ತಾರೆ. ಈ ಕಲ್ಲುಗಳ್ಯಾಕೆ? " ಮಿಡಿ ಸಮಾ ಚಿರುಟಬೇಕು! "

ಒಂದೆರಡು ದಿನ ಉಪ್ಪಿನಲ್ಲಿ ಕುಳಿತಮಿಡಿಗಳು, ಚಿರುಟುತ್ತವೆ. ಕಲ್ಲುಉಪ್ಪು ಮಿಡಿಯ ನೀರನ್ನು ಹೀರಿಕೊಂಡು, ಪಾತ್ರೆ ತುಂಬಾ ಉಪ್ಪಿನ ನೀರು ತುಂಬಿಕೊಳ್ಳುತ್ತದೆ - ಮಾವಿನ ಮಿಡಿಗಳು ಗಾತ್ರದಲ್ಲಿ ಚಿಕ್ಕದಾಗಿ ಚಿರುಟುತ್ತವೆ. ಆ ಮಿಡಿಗಳನ್ನು ಆರಿಸಿ ನೆರಳಿನಲ್ಲಿ ಒಣಗಿಸಬೇಕು. ಅಮ್ಮಮ್ಮ ಮಿಡಿಗಳನ್ನು ಆರಲು ಹಾಕುತ್ತಿದ್ದ ಜಾಗವೆಂದರೆ,ಮಧ್ಯದ ಪಡಸಾಲೆಯ ನೆಲ. ಉಪ್ಪಿನಲ್ಲಿ ಚಿರುಟಿದ ಮಿಡಿಗಳು, ಪಡಸಾಲೆಯ ನೆಲದಲ್ಲಿ ಹರಡಿಕೊಂಡಾಗ ಮನೆ ತುಂಬಾ ಮಿಡಿಯದ್ದೇ ಪರಿಮಳ. ಅಮ್ಮಮ್ಮನ ಕಣ್ಣು ತಪ್ಪಿಸಿ, ನಾವು ಮಕ್ಕಳು ಒಂದೊಂದೇ ಮಿಡಿಯನ್ನು ತಿನ್ನುವುದೂ ಉಂಟು. ದೊಡ್ಡವರು ನೋಡಿದರೆ, ಅವರಿಂದ ಬೈಸಿಕೊಳ್ಳುತ್ತಿದ್ದೆವು " ಈಗಲೇ ನೀವು, ಎಲ್ಲಾ ಮಿಡಿ ತಿಂದು ಖರ್ಚು ಮಾಡಿದರೆ, ಉಪ್ಪಿನಕಾಯಿಗೆ ಮಿಡಿ ಎಲ್ಲಿ ಉಳಿತ್ತ್ ? " ನೀರಿಗೆ ಹಾಕಿದ ಮಿಡಿಗಳಲ್ಲಿ ಒಂದೊಂದು ಬಣ್ಣಗೆಟ್ಟು ನೀರು ನೀರಾಗಿ ಇರುತ್ತಿತ್ತು. ಅದನ್ನು ತಿನ್ನಲು ಪರವಾನಗಿ ಉಂಟು - ಏಕೆಂದರೆ, ಆ ಮಿಡಿಯನ್ನು ಉಪ್ಪಿನ ಕಾಯಿಮಾಡಿದರೆ, ಬೇಗ ಕೆಟ್ಟುಹೋಗುತ್ತದಂತೆ.
 

" ಮಿಡಿ ನೆನೆಸಿದರೆ ಸಾಕಾ? ಮೆಣಸಿನ ಕಾಯಿ ತರ್ಕಲೆ? " ಅಂಗಡಿಯಿಂದ ಒಳ್ಳೆಯ ಮೆಣಸಿನ ಕಾಯಿ ತಂದು, ಉಪ್ಪಿನ ಕಾಯಿ ಮಾಡುವ ಸಂಭ್ರಮ! ಮೆಣಸಿಕಾಯಿಯನ್ನು ಚೆನ್ನಾಗಿ ಒಣಗಿಸಿ, ಅದನ್ನು ಸ್ವಲ್ಪ ಕುಟ್ಟಿ, ನಂತರ, ಅರೆಯುವ ಕಲ್ಲಿನಲ್ಲಿ ಹಾಕಿ ಅರೆಯುವಿಕೆ! ಆಗಿನ್ನೂ ಮೆಣಸಿನ ಪುಡಿ ಮಾಡುವ ಮಿಲ್ಲು ನಮ್ಮೂರಿಗೆ ಬಂದಿರಲಿಲ್ಲ! ದೊಡ್ಡ ಅರೆಯುವ ಕಲ್ಲಿನಲ್ಲಿ ಮೆಣಸಿನ ಕಾಯಿ ಹಾಕಿ, ಕುದಿಸಿದ ಉಪ್ಪು ನೀರನ್ನು ಬೆರೆಸಿ, ಚೆನ್ನಾಗಿ ಅರೆಯುವ ಕೆಲಸ ನಿಜಕ್ಕೂ ಕಷ್ಟದ್ದು. ಅರೆಯುವಾಗ ಸಾಸಿವೆ, ಇಂಗು ಬೆರೆಸುತ್ತಿದ್ದರು. ಅರೆದು, ಅರೆದು, ಒಳ್ಳೆಯ ಉಪ್ಪಿನಕಾಯಿ ರಸ ತಯಾರಾದಾಗ, ಪಿಂಗಾಣಿ ಜಾಡಿ ಅಟ್ಟದಿಂದ ಕೆಳಗಿಳಿಯುತ್ತದೆ. ಚೊಕ್ಕಟ ಮಾಡಿದ ದೊಡ್ಡ ಜಾಡಿಯಲ್ಲಿ ಚಿರುಟಿದ ಮಾವಿನ ಮಿಡಿಗಳನ್ನು ಹಾಕಿ, ಮೆಣಸಿನ ಕಾಯಿ ರಸವನ್ನು ತುಂಬಿಸಿದರೆ, ಉಪ್ಪಿನಕಾಯಿ ತಯಾರು. ಪಿಂಗಾಣಿ ಭರಣಿಯ ಬಾಯಿಗೆ ಬಟ್ಟೆ ಸುತ್ತಿ, ಮುಚ್ಚಳವನ್ನು ಭದ್ರವಾಗಿ ತಿರುಪಿ, ಪುನ: ಅಟ್ಟದ ಮೇಲೆ ಇಡುತ್ತಾರೆ. " ಅದೇನಿದ್ದರೂ, ಈ ಜಾಡಿಯ ಉಪ್ಪಿನ ಕಾಯಿಯನ್ನು ಮಳೆಗಾಲ ಬರುವ ತನಕ ಮುಟ್ಟಬಾರದು " ಎನ್ನುತ್ತಿದ್ದರು ಅಮ್ಮಮ್ಮ. ದಿನದ ಉಪಯೋಗಕ್ಕೆ, ಬೇರೆ ಚಿಕ್ಕ ಮರಿಗೆಯಲ್ಲಿ ಸ್ವಲ್ಪ ತೆಗೆದಿಡುತ್ತಿದ್ದರು. ಮುಖ್ಯವಾಗಿ, ಮಿಡಿಉಪ್ಪಿನಕಾಯಿಯನ್ನು ಸಾಧ್ಯವಾದಷ್ಟೂ ದಿನ ಕಾಪಾಡುವುದೇ ಒಂದು ಹೆಮ್ಮೆಯ ವಿಚಾರ. " ಎರಡು ವರ್ಷ ಇಟ್ಟರೂ, ನಾನು ಮಾಡಿದ ಈ ಉಪ್ಪಿನ ಕಾಯಿ ಲಾಯಕ್ ಇರತ್ " ಎನ್ನುವಾಗ, ಅಮ್ಮಮ್ಮನಿಗೆ ಹೆಮ್ಮೆ. ಮಾವಿನ ಮಿಡಿಗಳು ಜಾಸ್ತಿ ಸಿಗುವ ವರ್ಷಗಳಲ್ಲಿ , ಹೆಚ್ಚಾಗಿಯೇ ಉಪ್ಪಿನಕಾಯಿ ಮಾಡಿ, ಬಂಧುಗಳಿಗೆ, ಮಕ್ಕಳು - ಮೊಮ್ಮಕ್ಕಳಿಗೆ ಸ್ವಲ್ಪ ಕಳಿಸಿಕೊಡುವ ಪರಿಪಾಠ ಇದ್ದದ್ದೇ. ಅಕ್ಕ ಪಕ್ಕದ ಮನೆಗಳವರೂ ಹಲವಾರು ಬಾರಿ ಸ್ವಲ್ಪ ಸ್ವಲ್ಪ ತೆಗೆದುಕೊಳ್ಳುತ್ತಿದ್ದರು - ಆಸಾಡಿಯಲ್ಲಿ ಜಿರಾಪತಿ ಮಳೆ ಬೀಳುವಾಗ, ಹಿಂದಿನ ಮನೆಯ ನರ್ಸಿ ಬಂದು, " ನಮ್ಮ ಲಚ್ಚುಗೆ ಜ್ವರ ಬಂದ್, ಬಾಯಿ ರುಚಿ ಇಲ್ಲೆ ಕಾಣಿ, ಒಂಚೂರ್ ಉಪ್ಪಿನ್ ಕಾಯ್ ಕೊಡಿನಿ " ಎಂದು ಅಂಗಲಾಚಿದಾಗ, ಅಮ್ಮಮ್ಮ ಇಲ್ಲ ಅನ್ನುವವರಲ್ಲ. ಚಿಕ್ಕ ಲೋಟದಲ್ಲಿ ಸ್ವಲ್ಪ ರಸ ಜಾಸ್ತಿಯೇ ಹಾಕಿ, ನಾಲ್ಕೆಂಟು ಮಿಡಿ ಉಪ್ಪಿನಕಾಯಿಯನ್ನು ಕೊಡುತ್ತಿದ್ದರು. " ನಿಮ್ಮ ಮನೆಯ ಮಿಡಿ ಉಪ್ಪಿನಕಾಯಿ ತಿಂದೇ ನಮ್ಮ ಲಚ್ಚು ಜ್ವರ ಬಿಡ್ತ್ , ಕಾಣಿ " ಎಂದು ನಂತರ, ನರ್ಸಿ ಜಾಪಿನಿಂದ ಹೊಗಳುತ್ತಿದ್ದುದೂ ಉಂಟು.

ಒಳ್ಳೆಯ ಮಿಡಿ ಉಪ್ಪಿನಕಾಯಿಯಲ್ಲಿ ಔಷಧೀಯ ಗುಣವೂ ಉಂಟು ಎನ್ನುತ್ತಾರೆ. ಅದಕ್ಕೆ ಬೆರೆಸುವ ಸಾಸಿವೆ, ಇಂಗು ಮೊದಲಾದ ಪದಾರ್ಥಗಳಲ್ಲಿ ರೋಗ ವಾಸಿ ಮಡುವ ಶಕ್ತಿ ಸ್ವಲ್ಪ ಇರಲಿಕ್ಕೇ ಬೇಕು. ಉತ್ತಮ ಮಾವಿನ ಕಾಯಿಯ ಸೊನೆಯ ಪರಿಮಳವೇ ನೆಗಡಿಯನ್ನು ದೂರ ಓಡಿಸೀತು! ಒಳ್ಳೆಯ ಅಪ್ಪೆಮಿಡಿಯ ಚೊಟ್ಟನ್ನು ಮುರಿದಾಗ ಬರುವ ರಸಕ್ಕೆ ಬೆಂಕಿ ತೋರಿಸಿದರೆ, ಆ ರಸವು ದಹಿಸುತ್ತದೆ! ಜೀರಿಗೆ ಮಾವಿನ ಮಿಡಿ, ಅಪ್ಪೆ ಮಿಡಿಗಳ ಪರಿಮಳವು ಅವುಗಳಲ್ಲಿರುವ ವಿಶಿಷ್ಟ ರಾಸಾಯನಿಕ ವಸ್ತುಗಳ ಮಿಶ್ರಣದಿಂದಲೇ ಬರುವುದು ತಾನೆ. ಅವುಗಳಿಂದ ಮಾಡಿದ ಉಪ್ಪಿನ ಕಾಯಿ ರಸವನ್ನು ಮಾತ್ರ ಬಳಸಿ, ಅನ್ನ ಕಲಸಿ ಊಟ ಮಾಡಿದ ರೋಗಿಗಳು ಬೇಗನೆ ಗುಣ ಹೊಂದಿದರೆ ಅಚ್ಚರಿಯೇನೂ ಇಲ್ಲ. ತರಕಾರಿಗಳು ದುರ್ಲಭವಾಗಿದ್ದ ಅಂದಿನ ಮಳೆಗಾಲದಲ್ಲಿ ಉಪ್ಪಿನ ಕಾಯಿ ರಸದಲ್ಲಿ ಕಲಸಿದ ಅನ್ನ ನಿಜಕ್ಕೂ ರುಚಿಕರ. ಇತ್ತ ಮಜ್ಜಿಗೆ ಅನ್ನಕ್ಕೂ ನಂಜಿಕೊಳ್ಳಲು ಮಾವಿನ ಮಿಡಿಯು ಪ್ರಶಸ್ತ.

ನಮ್ಮ ಮನೆಯ ಹತ್ತಿರದ ಮೂಲೆಗದ್ದೆಯ ಅಂಚಿನಲ್ಲಿ ಎತ್ತರವಾದ ಒಂದು ಕಾಟು ಮಾವಿನ ಮರವಿತ್ತು. ಅದರ ಮಿಡಿಗಳು, ಒಳ್ಳೆಯ ಅಪ್ಪೆ ಮಿಡಿಯ ರುಚಿ ಉಳ್ಳದ್ದು ಎನ್ನುತ್ತಿದ್ದರು ಅಮ್ಮಮ್ಮ. ಆದರೆ, ಆ ಎತ್ತರವಾದ ಮರದಲ್ಲಿ ಮಿಡಿ ಬಿಟ್ಟದ್ದನ್ನೇ ನಾನು ಕಂಡಿಲ್ಲ. ಅದರಲ್ಲಿ ಜಾಸ್ತಿ ಮಿಡಿಗಳು ಆಗುವುದಿಲ್ಲ ಎಂಬ ಸಿಟ್ಟಿನಿಂದ, ಅಮ್ಮಮ್ಮ ಪ್ರತಿ ವರ್ಷವೂ ಅದರ ಟೊಂಗೆಗಳನ್ನು, ಎಲೆಗಳನ್ನು ಕಡಿಸಿಹಾಕಿ, ಸುಡು ಮಣ್ಣನ್ನು ಮಾಡಿಸುತ್ತಿದರು ಅಥವಾ ತೋಟದ ಬುಡ ಮಾಡಲು ಉಪಯೋಗಿಸುತ್ತಿದ್ದರು. ನಮ್ಮ ಮನೆ ಹತ್ತಿರವೇ ತೋಟದ ಮೂಲೆಯಲ್ಲಿ ಎರಡು ದೊಡ್ಡ ಕಾಟು ಮಾವಿನ ಮರಗಳಿದ್ದವು. ಒಂದರಲ್ಲಿ ಮಿಡಿ ಕಡಿಮೆ; ಇನ್ನೊಂದರಲ್ಲಿ ಸಾವಿರಾರು ಮಿಡಿಗಳು ಆಗುತ್ತಿದ್ದವು. ಆದರೆ ಆ ಮಿಡಿಗಳಿಗೆ ಪರಿಮಳ ಕಡಿಮೆ. ರುಚಿಯೂ ಕಡಿಮೆ. ಬರೀ ಹುಳಿಯೊಂದೇ ಆ ಕಾಯಿಯ ವಿಶೇಷ. ಅದು "ದಿಂಡಿನ ಕಾಯಿ" ಎಂದು ಶೃಂಗೇರಿ ಚಿಕ್ಕಮ್ಮ ಹೇಳಿದರು, ತಮ್ಮ ಊರಿನ ಸನಿಹದ ಯಾವುದೋ ಮಾವಿನ ಮರಕ್ಕೆ ಹೋಲಿಸುತ್ತಾ. ಸ್ವಲ್ಪ ಒಳ್ಳೆಯ ಪರಿಮಳವಿರುವ ಮಿಡಿ ಬೇಕೆಂದಾಗ ಅಬ್ಲಿಕಟ್ಟೆ ಅಥವಾ ತಾರಿಕಟ್ಟೆಯಿಂದ ಮಾವಿನ ಮಿಡಿಗಳನ್ನು ಅಮ್ಮಮ್ಮ ತರಿಸುತ್ತಿದ್ದರು. ಸಾಕಷ್ಟು ಉಪ್ಪಿನಕಾಯಿ ಮಾಡಿದ ಮೇಲೂ, ಎಲ್ಲಾದರೂ ಒಳ್ಳೆಯ ಮಾವಿನ ಮಿಡಿ ಸಿಕ್ಕಿದರೆ, ತರಿಸಿ ತೊಟ್ಟು ಕತ್ತರಿಸಿ, ಉಪ್ಪಿನಲ್ಲಿ ನೆನೆಸಿಯೇ ಬಿಡುತ್ತಾರೆ. " ಎರಡು ವರ್ಷ ಇಟ್ಟರೂ, ಮಿಡಿ ಉಪ್ಪಿನಕಾಯಿ ಹಾಳಾತಿಲ್ಲೆ ! " ಎನ್ನುತ್ತಾ ಮೆಣಸಿನ ಕಾಯಿ ಅರೆದು ಮಿಡಿಯ ಜೊತೆ ಪಿಂಗಾಣಿ ಜಾಡಿಗೆ ತುಂಬಿಸುತ್ತಾರೆ! ಮಾವಿನ ಮಿಡಿ ಎಂದರೆ ಅಮ್ಮಮ್ಮನಿಗೆ ಎಲ್ಲಿಲ್ಲದ ಅಂಗಲಾಪು!
-
ಶಶಿಧರ ಹೆಬ್ಬಾರ ಹಾಲಾಡಿ.

 

ಚಿತ್ರ ಕೃಪೆ: flickr

 

Rating
No votes yet

Comments