ಗುಣಗಣಮಂಡಿತ ಶ್ರೀ ರಾಮಚಂದ್ರ

ಗುಣಗಣಮಂಡಿತ ಶ್ರೀ ರಾಮಚಂದ್ರ

 

 

ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ

ಸಹಸ್ರ ನಾಮ ತತ್ತುಲ್ಯಂ ರಾಮನಾಮ ವರಾನನೇ

 

ಜಗದೀಶ್ವರನಾದ ಪರಮೇಶ್ವರ ಪಾರ್ವತಿಗೆ ಹೇಳುತ್ತಾನೆ,ಮನೋರಮೇ ಶ್ರೀರಾಮನ ನಾಮವನ್ನು ಓಮ್ಮೆ  ಅನುರಣಿಸಿದರೂ ಅದರಿಂದ ಇಡೀ ವಿಷ್ಣು ಸಹಸ್ರ ನಾಮವನ್ನು ಓದಿದ ಫಲ ಲಭಿಸುತ್ತದೆ ಎಂದು

ಶ್ರೀರಾಮನವಮಿಯ ಶುಭದಿನದಂದು ಶೂರನೂ, ಉದಾರಿಯೂ, ಕಾಂತಿಮಂತನೂ,ಸ್ನೇಹಶೀಲನೂ,ಸುಂದರನೂ,ಮೃದುಭಾಷಿಯೂ ಆಗಿ ಗುಣಗಣಮಂಡಿತನಾಗಿ ಮೆರೆಯುತ್ತಿರುವ ದೀರೋದಾತ್ತನಾದ ಶ್ರೀರಾಮ ಚಂದ್ರನ ಅಭೂತಪೂರ್ವ ವ್ಯಕ್ತಿತ್ವದ ಚಿತ್ರಣವನ್ನಿಲ್ಲಿ ನೋಡೋಣ,

ರಾಮನ ಗುಣಗಣಗಳನ್ನು ವರ್ಣಿಸುವ ಮೊದಲು ರಾಮ ಮಂತ್ರವೆಂದು ಪ್ರಸಿದ್ಧವಾದ ರಾಮ ನಾಮದ ಮಹಿಮೆಯನ್ನು ನೋಡೋಣ

ರಕಾರೋಚ್ಚಾರ ಮಾತ್ರೇಣ ಮುಖಾನ್ನಿರ್ಯಾಂತಿ ಪಾತಕಾಃ

ಪುನಃ ಪ್ರವೇಶ ಭೀತ್ಯಾತು ಮಕಾರಸ್ತು ಕವಾಟವತ್

 

ರಾ ಎಂದಾಗ ನಮ್ಮೊಳಗಿನ ಪಾಪ ಹೊರಹೋಗುವುದಂತೆ.

 

ಪುನಃ ಹೊರಹೋದ ಪಾಪಗಳೇನಾದರೂ ಹಿಂತಿರುಗಿ ಮನೆಯದಾರಿ ಹಿಡಿದು ನಮ್ಮೊಳಪ್ರವೇಶ ಮಾಡಿದರೆ

ಅದಕ್ಕೇ ರಾ ಏಂದು ಬಾಯಿತೆರೆದಾಗ ಹೊರಹೋದ ಪಾಪಗಳು ಹಿಂತಿರುಗಿ ಒಳ ಬರದಂತೆ

"ಮಕಾರಸ್ತು ಕವಾಟವತ್"

ಮಕಾರವು ಕವಾಟದಂತೆ (ಪಾಪಗಳನ್ನು ಒಳ ಬರದಂತೆ) ತಡೆಯುತ್ತದೆ. ಅರ್ಥಾತ್ "ಮ" ಎಂದಾಗ ನಾವು ಬಾಯನ್ನ ಸಂಪೂರ್ಣವಾಗಿ ಮುಚ್ಚಿ ಬಿಡುತ್ತೇವೆ.

ಇದನ್ನೇ ಕನ್ನಡದಲ್ಲಿ ದಾಸ ವರೇಣ್ಯರು

ರಾ ಎಂದ ಮಾತ್ರ ದೊಳು ರಕ್ತ ಮಾಂಸಗಳಲ್ಲಿ

ಆ ಅಸ್ತಿಗತವಾದ ಅತಿ ಪಾಪವ

ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ

ದಾಯವರ ವಾಲ್ಮೀಕಿ ಮುನಿತಾನೆ ಬಲ್ಲ

 

ಮತ್ತೆ ಎಂದೆನಲು ಹೊರಬಿದ್ದ ಪಾಪಗಳು

ಒತ್ತಿಒಳ ಹೋಗದಂತೆ ಕವಾಟ……

ಇನ್ನೊಂದೆಡೆಯಲ್ಲಿ ದಾಸರು

ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ

ಸೋಮಶೇಖರ ತನ್ನ ಭಾಮೆಗೊರೆದ ಮಂತ್ರ

ರಾಮ ಮಂತ್ರವ ಜಪಿಸೋ ಹೇ ಮನುಜ……..

ಕುಲಹೀನನಾದವನೂ ಜಪಿಸುವಂಥ,ಹಲವು ಪಾಪಗಳನ್ನು ಹಿಂಗಿಸಿಬಿಡುವಂಥ,ಬಹಳ ಸುಲಭವಾಗಿ ಸ್ವರ್ಗವನ್ನು ಸೂರೆಗೊಳ್ಳುವ ಅಪಾರ ಶಕ್ತಿಯನ್ನು ಹೊಂದಿರುವಂಥ ಈ ರಾಮ ಮಂತ್ರ ಸಕಲ ವೇದಗಳ ಸಾರವಾಗಿದ್ದು ಮುಕ್ತಿಮಾರ್ಗಕ್ಕೇ ಮೂಲಮಂತ್ರವಾಗಿದೆ ಎಂದು ರಾಮಮಂತ್ರದ ಮಹಿಮೆಯನ್ನು ಕೊಂಡಾಡಿದ್ದಾರೆ

ಇದನ್ನೇ ಭದ್ರಾಚಲ ರಾಮದಾಸರು ತೆಲುಗಿನಲ್ಲಿ

ತಾರಕ ಮಂತ್ರಮು ಕೋರಿನ ದೊರಿಕೆನು

ಧನ್ಯುಡನೈತಿನಿ ಒರನ್ನ

ಮೀರಿದ ಕಾಲುನಿ ದೂತರ ಪಾಲಿಟಿ

ಮೃತ್ಯುವನೀ ಮದಿ ನಮ್ಮನ್ನ

ಯಮದೂತರ ಪಾಲಿಗೇ ಮೃತ್ಯುಪ್ರಾಯವಾದಂತಹ ಈ ತಾರಕ ಮಂತ್ರ ಧನ್ಯರಲ್ಲದವರಿಗೆ ಕೋರಿದರೂ ದೊರೆಯುವುದಿಲ್ಲ ಎಂಬುದಾಗಿ ಹಾಡಿದ್ದಾರೆ

ತ್ಯಾಗರಾಜರು "ರಾಮನಾಮಮು ಜನ್ಮ ರಕ್ಷಕ ಮಂತ್ರಂ" ಏಂದಿದ್ದಾರೆ.

ನಮ್ಮ ಜನ್ಮರಕ್ಷಕ ಮಂತ್ರ ಈ ರಾಮ ನಾಮ ಏಂಬುದಾಗಿ

ರಾಮನಿಗಿಂತಾ ರಾಮನ ನಾಮದ ಮಹಿಮೇ ದೊಡ್ಡದು

ಈ ಬಗ್ಗೆ ಕಥೆಯೊಂದಿದೆ

 

ಶರಧಿಗೆ ಸೇತುವೆಯನ್ನು ನಿರ್ಮಿಸುವಾಗ ಕಲ್ಲು ಬಂಡೆಗಳ ಮೇಲೆ ರಾಮ ನಾಮವನ್ನು ಬರೆದು ಅದನ್ನು ಕಡಲಲ್ಲಿ ಹಾಕಿದಾಗ ರಾಮನಾಮದ ಮಹಿಮೆಯಿಂದ ಆ ಕಲ್ಲುಬಂಡೆಗಳು ತೇಲುತ್ತಿದ್ದವಂತೆ.ಇದನ್ನು ನೋಡಿದಂತಹ ಶ್ರೀರಾಮಚಂದ್ರ ತಾನೂ ಓಂದು ಕಲ್ಲನ್ನು ಶರಧಿಗೆ ಎಸೆದರೆ ಆ ಕಲ್ಲು ಮುಳುಗಿತಂತೆ.

ರಾಮಚಂದ್ರನಿಗೆ ಪರಮಾಶ್ಚರ್ಯವಾಯ್ತು.

ಶ್ರೀರಾಮ ಹನುಮಂತನನ್ನು ಕೇಳುತ್ತಾನೆ ನೀವೆಲ್ಲಾ ಹಾಕಿದ ಕಲ್ಲುಗಳು ತೇಲುತ್ತಾ ಇವೆ ನಾನು ಹಾಕಿದ ಕಲ್ಲೇಕೆ ಮುಳುಗಿತು? ಆಗ ಹನುಮಂತ ಹೇಳಿದನಂತೆ ಪ್ರಭೋ ನಾವು ಹಾಕಿದ ಕಲ್ಲುಗಳು ರಾಮ ನಾಮದ ಮಹಿಮೆಯಿಂದ ತೇಲುತ್ತಿವೆ ಆದರೆ ನೀನು ಹಾಕಿದ ಕಲ್ಲಿನಲ್ಲಿ ರಾಮನಾಮವೇ ಇಲ್ಲ.ಮೇಲಾಗಿ ರಾಮನು ಯಾವುದನ್ನು ಕೈಬಿಟ್ಟನೊ ಅದು ಹೇಗೆತಾನೇ ಉಳಿದೀತು?

ಇನ್ನು ಶ್ರೀರಾಮಚಂದ್ರನ ಗುಣಗಳನ್ನು ಕೌಟಿಲ್ಯ ಈರೀತಿ ವರ್ಣಿಸಿದ್ದಾನೆ

ಧರ್ಮೇ ತತ್ಪರತಾ-

ಶ್ರೀರಾಮಚಂದ್ರನಿಗೆ ಧರ್ಮದಲ್ಲಿ ಅಪಾರವಾದ ಶ್ರದ್ಧೆ.

ವಿಶ್ವಾಮಿತ್ರರು ಯಜ್ಞರಕ್ಷಣೆಗಾಗಿ ರಾಮಲಕ್ಷ್ಮಣ ರನ್ನು ಕರೆದೊಯ್ದಾಗ ತಾಟಕಿಯನ್ನು ಕೊಲ್ಲುವಂತೆ ರಾಮನಿಗೆ ಆದೇಶ ವೀಯುತ್ತಾರೆ.ಆದರೆ ರಾಮನು, ರಾಕ್ಷಸಿಯಾದರೂ- ಸ್ತ್ರೀಯಾದ್ದರಿಂದ ತಾಟಕಿಯನ್ನು ಕೊಲ್ಲುವುದು ಧರ್ಮವೇ ಎಂದು ವಿಶ್ವಾಮಿತ್ರರನ್ನೇ ಪ್ರಶ್ನಿಸುತ್ತಾನೆ. ಆಗ ವಿಶ್ವಾಮಿತ್ರರು ಅಧರ್ಮ ನಿರತರಾದ ನಾರಿಯರನ್ನು ಕೊಲ್ಲುವುದು ಧರ್ಮಕ್ಕೆ  ವಿರುದ್ಧವೇನಲ್ಲ ಏಂದು ಪ್ರತಿಪಾದಿಸಿದ ಮೇಲೆಶ್ರೀರಾಮನು ತಾಟಕಿಯ ಸಂಹಾರ ಮಾಡುತ್ತಾನೆ.ಇಂತಹ ಅನೇಕ ಘಟನೆಗಳು ರಾಮನ ಧರ್ಮಶ್ರದ್ಧೆಯನ್ನು  ತೋರಿಸುತ್ತವೆ.

 

ಮುಖೇ ಮಧುರತಾ

ರಾಮನ ಮಾತು ಬಹು ಮಧುರವಾದಂಥಾದ್ದು.ಶ್ರೀರಾಮನನ್ನು ಕುರಿತು

"ಮೃದು ಪೂರ್ವಂಚ ಭಾಷತೇ",

ಎಂದು ವಾಲ್ಮೀಕಿಗಳೇ ಹೇಳಿದ್ದಾರೆ.ಶ್ರೀ ರಾಮನು ತನ್ನ ಮೃದು ಮಧುರ ನುಡಿಗಳಿಂದ ಏಲ್ಲರ ಮೆಚ್ಚುಗೆ ಗಳಿಸಿದ್ದನು.ತನ್ನೆದುರು ಯಾರೇ ಬರಲಿ ಅವರು ಮಾತನಾಡುವುದಕ್ಕಿಂತ ಮೊದಲೇ ತಾನು ಪ್ರೀತಿಯಿಂದ ಅವರೊಡನೆ ಮಾತನಾಡುತ್ತಿದ್ದನು.

ದಾನೇ ಸಮುತ್ಸಾಹತಾ

ದಾನದಲ್ಲಿ ರಾಮಚಂದ್ರನಿಗೆ ಬಹಳ ಉತ್ಸಾಹ

ರಾಮಚಂದ್ರ ವನವಾಸಕ್ಕಾಗಿ ಹೊರಟು ನಿಂತಾಗ ವೃದ್ಧಬ್ರಾಹ್ಮಣನೋರ್ವನು ಬಂದು ಯಾಚಿಸುತ್ತಾನೆ.ಆಗ ರಾಮಚಂದ್ರ ಆ ವೃದ್ಧನಿಗೆ ಅವನ ಕೋಲನ್ನು ಎಸೆಯುವಂತೆ ಹೇಳುತ್ತಾನೆ.ಆ ಬ್ರಾಹ್ಮಣನಾದರೂ ಸರಯೂ ನದೀ ತೀರದ ವರೆಗೇ ಕೋಲನ್ನೆಸೆದರೆ ಮಹಾದಾನಿಯಾದ ರಾಮನು ತನಗೇ ಮಾವನಾದ ಜನಕ ಮದುವೆಯಲ್ಲಿ ಬಳುವಳಿಯಾಗಿ ಕೊಟ್ಟಿದ್ದ  ಸುಲಕ್ಷಣ ಭರಿತವಾದ ಸಾವಿರಾರು ಹಸುಗಳನ್ನು ಅಲ್ಲಿಯವರೆಗೂ ಸಾಲಾಗಿ ನಿಲ್ಲಿಸಿ ದಾನ ಕೊಟ್ಟನಂತೆ.

ಮಿತ್ರೇವಂಚಕತಾ

ಮಿತ್ರರಲ್ಲಿ ಯಾವಾಗಲೂ ನಿರ್ವಂಚನೆಯಿಂದ ವ್ಯವಹರಿಸುತ್ತಿದ್ದನು.

ಗುರೌ ವಿನಯಿತಾ

ಗುರುಗಳಲ್ಲಿ ಅಪಾರವಾದ ವಿನಯ.

ಚಿತ್ತೇತಿ ಗಂಭೀರತಾ

ಸದಾ ಮಂದಹಾಸ ಭರಿತನಾಗಿದ್ದರೂ ಶ್ರೀ ರಾಮ ಚಿತ್ತದಲ್ಲಿ ಗಂಭೀರಸ್ವಭಾವದವನಾಗಿದ್ದನು

.ಅಂದರೆ ಸಮಚಿತ್ತ.

"ದಧತೌ ಮಂಗಲಕ್ಷೌಮೇ ವಸಾನಸ್ಯ ಚ ವಲ್ಕಲೇ

ದದ್ರುಶುರ್ವಿಸ್ಮಿತಾಸ್ತಸ್ಯ ಮುಖರಾಗಸಮಂ ಜನಾಃ"

ಪಟ್ಟಾಭಿಷೇಕವಿದೆಯೆಂದಾಗ ಮಂಗಲ ರೇಶ್ಮೆ ವಸ್ತ್ರವನ್ನುಟ್ಟಾಗಲೂ,ವನವಾಸಕ್ಕೆ ಹೊರಟಾಗ ನಾರುಡಿಗೆಯನ್ನುಟ್ಟಾಗಲೂ ಅವನ ಮುಖದಲ್ಲಿ ವೈಕಲ್ಯವಿಲ್ಲದ ಸಮಭಾವಗಳನ್ನು ಕಂಡು ಅಯೋಧ್ಯೆಯ ಜನತೆ ಬೆಕ್ಕಸಬೆರಗಾಯಿತಂತೆ.ಇಷ್ಟೊಂದು ಸಮಚಿತ್ತನಾಗಿದ್ದ ಆ ಶ್ರೀರಾಮಚಂದ್ರ.

ಆಚಾರೇ ಶುಚಿತಾ

ಅತ್ಯಂತ ಶುದ್ಧವಾದ ಆಚಾರವನ್ನು ರಾಮನು ಹೊಂದಿದ್ದನು

ಗುಣೇ ರಸಿಕತಾ

ಗುಣಸ್ವಭಾವಗಳಲ್ಲಿ ರಸಿಕ ನಾಗಿದ್ದನು.

ಶಾಸ್ತ್ರೇತಿ ವಿಜ್ಞಾನತಾ

ಶಾಸ್ತ್ರಗಳಲ್ಲಿ ಅಪಾರವಾದ  ಜ್ಞಾನ ರಾಮನಿಗಿತ್ತು

 

ರೂಪೇ ಸುಂದರತಾ

ರೂಪದಲ್ಲಿ ಶ್ರೀ ರಾಮನು ಪರಮ ಸುಂದರ.

ಅವನ ಹೆಸರೇ ಹೇಳುವಂತೆ "ರಮಯತೇ ಇತಿ ರಾಮಃ"

ನೋಡಿದವರನ್ನು ರಮಿಸುವ ಶಕ್ತಿ ಆ ರಾಮನಿಗಿತ್ತು.ಹಾಗಿದ್ದರೆ ಅವನ ರೂಪವೆಂಥಾದ್ದಿರಬೇಕು?

ತುಲಸೀದಾಸರು

"ನವ ಕಂಜ ಲೋಚನ ಕಂಜಮುಖ ಕರಕಂಜ ದಳ ಕಂಜಾರುಣಂ"

ಎಂಬುದಾಗಿ ಅವನ ಸೌಂದರ್ಯವನ್ನು ಕೊಂಡಾಡಿದ್ದಾರೆ

ಕನ್ನಡದಲ್ಲಿ

ನೀಲಮಣಿಗಳ ಸಾಲ ಕುಂತಲಜಾಲ ನೋಡಲು ಬಾಲ ಚಂದ್ರನ

ಹೋಲುತಿರುವುದು ಫಾಲಭಾಗ ವಿಶಾಲ ಕಮಲಾಕ್ಷಿ

ಭ್ರೂ ಲತೇ ಇಂದ್ರ ಕಾರ್ಮುಕವೋ ಸೋಗೇಗಂಗಳಢಾಳಗಳು

ಪುಂಡರೀಕವು ನೇತ್ರಸಮ ಕಪೋಲ ಚಂಪಕ ನಾಸಿಕವು

 

ಲಾಲಿಪ ಮುಕ್ತಾಫಲಗಳ ಹೋಲುತಿಹುದು ರದನಂಗಳ ಚೆಲುವು

ಲಾಲಿಪ ಚೆಂದುಟಿ ನವ ಕುರುವಿಂದವು ಮೇಲಹ ನುಡಿಗಳು ವರ ಮಕರಂದವು

ಬಾಲಕಿ ನಸುನಗೆ ಬಲುತರಚೆಂದವು ಎಂದು

ರಾಮನೆಂಥಾ ಚೆಲುವ ನೋಡಮ್ಮ ಸೀತೆ

ಎಂಬುದಾಗಿ ಸಖಿಯರು ಶ್ರೀ ರಾಮ ಚಂದ್ರನ ಸೌಂದರ್ಯವನ್ನು ಸೀತೆಯ ಮುಂದೆ ವರ್ಣಿಸುತ್ತಾರಂತೆ.

ಹರೌ ಭಜನಿತಾ

ಹರನಲ್ಲಿ ಪರಮ ಭಕ್ತಿ .ಶ್ರೀರಾಮಚಂದ್ರ ಈಶ್ವರನನ್ನು ಅರ್ಚಿಸಿದ ಸ್ಥಳವೇ ರಾಮೇಶ್ವರ ಏಂದು ಪ್ರಸಿದ್ಧವಾಗಿದೆ.

ಏತಾ ಗುಣೇ ರಾಘವೇ

ಎಂಬುದಾಗಿ ಕೌಟಿಲ್ಯ ಶ್ರೀರಾಮನಗುಣಗಳನ್ನು ವರ್ಣಿಸುತ್ತಾನೆ.

ಇಂತಹ ಗುಣಗಣ ಮಂಡಿತನಾದ ಆ ಶ್ರೀರಾಮನ ಪಾದಾರವಿಂದಗಳಲ್ಲಿ ನಮನಪುಷ್ಪಗಳನ್ನು ಸಮರ್ಪಿಸೋಣ.

 

 

 

 

 

 

Comments