ನಾನೂ ಅಪ್ಪನಂತಾಗಬೇಕು..

ನಾನೂ ಅಪ್ಪನಂತಾಗಬೇಕು..

 

ನಾನೂ ಅಪ್ಪನಂತಾಗಬೇಕು..

ನಾನು ಸಣ್ಣವನಿದ್ದಾಗ ಒಂಥರಾ ಕ್ರೀಮ್ ಕಲರಿನ ಉರುಟುರುಟು ಪಾಪಿನ್ಸ್ ನ್ನು ದಿನಾ ಒಂದರಂತೆ ಕೊಡುತ್ತಿದ್ದಾಗಿನದೇ ಅಪ್ಪ ಇವತ್ತಿನ ಫೋನಿನಲ್ಲಿ ಸಿಕ್ಕಾಗಲೂ ಇದ್ದಾನೆ. ನಿನ್ನೆ ತಾಲೂಕಾ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ತನ್ನ ಕವನ ವಾಚಿಸಿ ಜನರಿಂದ ಚಪ್ಪಾಳೆ ಗಿಟ್ಟಿಸಿದ್ದನ್ನು ಅದೇ ಹಳೆಯ ಚಿಕ್ಕ ಮಕ್ಕಳ ಮುಗ್ಧತೆಯಲ್ಲಿ ವಿವರಿಸಿದಾಗ ಇವತ್ತೊಂದು ಲೇಖನ ಬರೆಯಲೇ ಬೇಕು ಎಂದು ನಿರ್ಧರಿಸಿ ಬಿಟ್ಟೆ. ಅಪ್ಪನ ಕುರಿತು ಒಂದು ಲೇಖನ ಬರೀಬೇಕು ಅಂತ ಅಂದುಕೊಂಡಿದ್ದಷ್ಟೇ ನಿಜ..ಆದರೆ ಏನು ಬರೆಯಬೇಕು ಎಂಬುದು ಗೊತ್ತಾಗುತ್ತಿಲ್ಲ.. ಎಲ್ಲಿಂದ ಶುರು ಮಾಡಿ ಎಲ್ಲಿ ಮುಗಿಸಲಿ ಎಂಬುದೇ ಒಗಟಾಗಿದೆ.

ನನಗೆ ಅಪ್ಪನಲ್ಲಿ ಎಲ್ಲವೂ ಕಾಣುತ್ತದೆ. ಮಕ್ಕಳು ಹೇಳಿದ್ದಕ್ಕೆಲ್ಲಾ ಹೂಂ ಅನ್ನುವ ಪ್ರೀತಿಯಿದೆ..ಯಾವುದೋ ಮೊಬೈಲಿನಲ್ಲಿ ಬರುವ ಹೊಸ ಆಟವನ್ನು ದಿನಗಟ್ಟಲೆ ಕೂತು ಆಡುವಷ್ಟು ಜೀವನ ಪ್ರೀತಿಯಿದೆ... ಆ ಆಟದ ಪ್ರತಿ ಹಂತವನ್ನು ತನ್ನ ಡೈರಿಯ ಪುಟಗಳಲ್ಲಿ ಕೂತು ಚಿತ್ರಿಸುವ ಆಸಕ್ತಿಯಿದೆ.. ಒಬ್ಬನೇ ಕುಳಿತು ಲಾಪ್ಟಾಪಿನ ಪೇಂಟ್ ಅಪ್ಲಿಕೇಶನ್ ಹುಡುಕಿ ತೆಗೆದು ಬಣ್ಣ ಹಚ್ಚುವ ಉತ್ಸಾಹ ಇದೆ.. ದಿನಂಪ್ರತಿ ಆದ ಕರ್ಚು ವೆಚ್ಚವನ್ನು ಎಲ್.ಐ.ಸಿ ಯ ಡೈರಿಯ ಪುಟದ ತುಂಬಾ ಬರೆದು ಕೂಡಿಸಿ ಕಳೆದು ತಲೆಕೆರೆದುಕೊಳ್ಳುವ ಹುಮ್ಮಸ್ಸಿದೆ.. ದಿನಾ ಫೋನು ಮಾಡಿದರೂ ವಿಷಯಕ್ಕೆ ಕೊರತೆ ಬಾರದಂತ ಮಾತಿದೆ.. ಬೇರೆಯವರು ತಪ್ಪು ಮಾಡಿದಾಗ ಹೆದರಿಸಲು ಮೌನವಿದೆ..

ಇತ್ತೀಚಿಗೆ ಅಂದರೆ ನನಗೆ ಬುದ್ಧಿ ಬಂದಾಗಿನಿಂದ (?), ಅಪ್ಪ ಕವಿತೆ ಬರೆದಾಗ ಮೊದಲು ಓದುವುದು ಸುಮಾರಿಗೆ ನಾನೆ.. ಒಂದೊಂದು ಸಲ ತಂಗಿ.. ಓದಾದ ಮೇಲೆ ಅಪ್ಪ ಹೇಗಿದೆ ಅಂತೆಲ್ಲ ಕೇಳುವುದಿಲ್ಲ.. ಚೆನ್ನಾಗಿದೆ ಅಂದರೆ ನಮಗರ್ಥವಾದ ಅದರ ಭಾವವನ್ನು ಕೇಳಬಹುದು.. ಇಲ್ಲದಿದ್ದರೆ ಅದೂ ಇಲ್ಲ.. ಸಾಲು ಸಾಲು ಕವಿತೆಗಳನ್ನು ಬರೆದು ಸುಮ್ಮನೆ ಡೈರಿ ತುಂಬಿಸಿದ್ದಾನೆಯೇ ಹೊರತು, ಇದು ತಾನು ಬರೆದ ಕೃತಿ ಎಂದಾಗಲೀ, ತನ್ನ ರಚನೆಯೆಂದಾಗಲೀ ಅದನ್ನು ಹೊರಜಗತ್ತಿಗೆ ಪರಿಚಯಿಸಿ ಬೀಗುವ ಗೊಡವೆಗೇ ಹೋಗಿಲ್ಲ.. ಹೌದು ಅಪ್ಪನ ಕೆಲಸದ ರೀತಿಯೇ ಹಾಗೆ.. ತಾನು ಇಂತಹುದೊಂದನ್ನು ಮಾಡಿದ್ದೇನೆ ಎಂದು ಯಾವತ್ತೂ ಹೇಳಿದವನಲ್ಲ.. ತಾನಾಯಿತು ತನ್ನ ಕೆಲಸವಾಯಿತು ಎಂದು ಬದುಕುತ್ತಿರುವವನು ನನ್ನಪ್ಪ. ಉಮರ ಖಯ್ಯಾಮನ ಯಾವುದೋ ಕೃತಿಯೊಂದನ್ನು ಕನ್ನಡೀಕರಿಸಿದ್ದು.. ಕಾಳಿದಾಸ ಋತು ಸಂಹಾರವನ್ನು ಪ್ರಾಸಬದ್ಧವಾಗಿ ಚಂದೋಬದ್ಧವಾಗಿ ಅನುವಾದಿಸಿದ್ದು, ಎಂ.ಎನ್ ವ್ಯಾಸರ ಸ್ನಾನ ಕಥಾಸಂಕಲನವನ್ನು ಸಂಸ್ಕೃತಕ್ಕಿಳಿಸಿದ್ದು ಇದ್ಯಾವುದನ್ನೂ ಯಾರಿಗೂ ಗೊತ್ತಿಲ್ಲದಂತೆ ಮುಗಿಸಿ ಬದಿಗಿಟ್ಟಿರುವ ಅಪ್ಪನಿಗೆ, ಯಾರ ಪ್ರಶಂಸೆಯೂ ಬೇಕಾಗಿಲ್ಲ.. ಬರೆದದ್ದನ್ನು ಇನ್ನೂ ಚೆನ್ನಾಗಿ ತನ್ನ ಗುಂಡು ಗುಂಡು ಮುದ್ರಣಲಿಪಿಯಲ್ಲಿ ಬರೆದಿಡುವುದೋ, ಅಥವಾ ಟೈಪ್ ರೈಟರಿನಲ್ಲಿ ಕೀ ಕುಟ್ಟಿ ಕುಟ್ಟಿ ಹಾಳೆ ತುಂಬಿಸಿಡುವುದೋ ಮಾಡಿ ಅದರಲ್ಲಿ ಸಂತೃಪ್ತಿ ಕಾಣುವವನು ಅಪ್ಪ.

ನಮ್ಮ ಮನೆಯಲ್ಲಿ, ನಾ ಹುಟ್ಟುವುದಕ್ಕಿಂತ ಮುಂಚಿನ ಸುಧಾ ತರಂಗ ಮಯೂರಗಳು ಕೆಲವಿವೆ.. ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಹಳೇ ಕೆಲವು ಅಂಕಣಗಳ ಕಟ್ಟಿಂಗುಗಳು ಯಾವುದೋ ಪ್ಲಾಸ್ಟಿಕ್ ಚೀಲದಲ್ಲಿ ಬಿದ್ದಿದೆ. ಇದಕ್ಕೆಲ್ಲಾ ಅಪ್ಪನೇ ಕಾರಣ. ಪದಬಂಧ, ಸುಡೊಕು, ಯಾವುದೇ ಎಲ್ಲಿ ಕಂಡರೂ ಪೆನ್ನು ಹಿಡಿದು ಕೂತು ಬಿಡುವ ಅಪ್ಪನಿಗೆ ಎಲ್ಲವುದರಲ್ಲೂ ಆಸಕ್ತಿ ಇದೆ.. ಕ್ರಿಕೆಟ್ ಬಂದಾಗ ಬಾಲಿಗೆ ಬಾಲ್ ಲೆಕ್ಕ ಹಾಕಿ ನೋಡಿದರೂ, ಕ್ರಿಕೆಟ್ ಇಲ್ಲದಿದ್ದರೆ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನೂ ಅದೇ ಆಸಕ್ತಿಯಲ್ಲಿ ನೋಡುತ್ತಾನೆ. ಅನಿಮಲ್ ಪ್ಲಾನೆಟ್ ನ ಪ್ರತೀ ಪ್ರಾಣಿಯ ಚಲನೆಯನ್ನು ಮಕ್ಕಳ ಬೆರಗು ಕಣ್ಣಿಂದ ವೀಕ್ಷಿಸಿ ವಾಹ್ ವಾಹ್ ಎನ್ನುತ್ತಾನೆ. ಅಮ್ಮ ನೋಡುವ ಧಾರಾವಾಹಿಯ ಕಥೆಯೂ ಅಪ್ಪನಿಗೆ ಗೊತ್ತಿರುತ್ತದೆ. ನೆರೆಮನೆಯ ಮಕ್ಕಳ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆಗೆ ಅಪ್ಪನ ತಯಾರಿ ಅವರಿಗಿಂತ ಜೋರಾಗಿರುತ್ತದೆ. ನಾವು ಮನೆಗೆ ಲ್ಯಾಪ್ ಟಾಪ್ ತೆಗೆದುಕೊಂಡು ಹೋದಾಗ ಅಪ್ಪನಿಗದು ಹಬ್ಬ.. ಭಾಷೆ ತಿಳಿಯದ ತೆಲಗು ಚಿತ್ರಗಳನ್ನೂ ಮಗಳ ಜೊತೆಗೆ ಕೂತು ಮೂರು ತಾಸು ನೋಡಿ ಚೆನ್ನಾಗಿದೆ ಎಂದು ತಲೆ ಆಡಿಸುತ್ತಾನೆ. ಇಂಗ್ಲಿಷ್ ಕೀಬೋರ್ಡಿನಿಂದ ಮೂಡುವ ಕನ್ನಡ ಅಕ್ಷರಗಳನ್ನು ತದೇಕದೃಷ್ಟಿಯಿಂದ ನೋಡಿ, ಬರೆಯುವವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾನೆ.. ಈಗಿನ ಕಾಲದವರಂತೆ ಯೋಚಿಸುವ ಅಪ್ಪ ಕಾಲಕ್ಕೆ ತಕ್ಕಂತೆ ಹೊಂದಿಕೊಂಡಿದ್ದಾನೆ,, ನನ್ನ ಹಾಗೆ ಫ್ರೆಂಚ್ ಗಡ್ಡ ಬಿಟ್ಟಿದ್ದಾನೆ.. (ಅಥವಾ ಅವನ ಹಾಗೆ ನಾನು)

ಅಪ್ಪ ಹೆದರಿಸುವುದು ಮೌನದಿಂದ.. ನಾನು ತಂಗಿ ಜಗಳ ಮಾಡಿಕೊಂಡು, ದೊಡ್ಡವನಾದ ನನಗೇ ಶಿಕ್ಷೆ ಕೊಡುವ ಪರಿಸ್ಠಿತಿ ಸೃಷ್ಟಿಯಾದಾಗೆಲ್ಲಾ ನನಗೆ ಸಿಗುತ್ತಿದ್ದುದು ಅದೇ ಅಪ್ಪನ ಮೌನ. ಅಪ್ಪ ನಿನ್ ಜೊತೆ ಮಾತಾಡುವುದಿಲ್ಲ ಎಂದರೆ ಸಾಕು.. ನನಗಾಗಲೀ ತಂಗಿಗಾಗಲೀ ಬಹುದೊಡ್ಡ ಶಿಕ್ಷೆಯಾಗಿತ್ತು.. ಆ ಶಿಕ್ಷೆ ಎರಡು ಮೂರು ದಿನಗಳ ವರೆಗೆ ಮುಂದುವರಿಯುತ್ತಿದ್ದುದು ವಿಶೇಷ.. ಅದೆಷ್ಟೇ ದಿನ ನಡೆದರೂ ದಿನಾ ರಾತ್ರಿ ಮಲಗಲು ನನಗೆ ಅಪ್ಪನ ಮಗ್ಗುಲೇ ಬೇಕಾಗಿತ್ತು.. ಅಪ್ಪ ’ಭಾವ’ಜೀವಿ.. ಆದರೆ ತನ್ನ ಭಾವನೆಗಳನ್ನು ಉಳಿದವರ ಮೇಲೆ ಎಂದೂ ಪ್ರಯೋಗಿಸಿಲ್ಲ.. ಸಂತೋಷಕ್ಕೆ ಸಣ್ಣ ನಗು, ದುಃಖಕ್ಕೆ ಸಣ್ಣ ಮೌನ.. ಅಷ್ಟೆ.. ಅಪ್ಪನಿಂದ ಹೊರಬರುವುದು. ಸಿಟ್ಟು ಬಂದ ಘಟನೆಗಳು ಸೊನ್ನೆಯೆನ್ನಬಹುದು. ಬಂದರೂ ಅದು ಸಾತ್ವಿಕವಾದದ್ದು. ಅರ್ಥವಿಲ್ಲದ ತನಗೆ ಸಂಬಂಧವಿರದ ವಿಚಾರಗಳಿಗೆ ಅಪ್ಪ ತಲೆಹಾಕಿದ್ದೇ ಇಲ್ಲ ಅನಿಸುತ್ತದೆ. ಅದಕ್ಕೇ ಇರಬೇಕು ಅಪ್ಪ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿರುವುದು.

ಅಪ್ಪ ಇಂಚುಪಟ್ಟಿಯಿಲ್ಲದೆ ನೇರ ಗೆರೆ ಹಾಕಬಲ್ಲ. ಪೋಸ್ಟ್ ಕಾರ್ಡಿನಲ್ಲಿ ಯಾವ ಗ್ರಾಫಿಕ್ಸ್ ಡಿಸೈನರ್ರೂ ಮಾಡಲಾಗದಂತ ರೇಖಾವಿನ್ಯಾಸ ಮಾಡಬಲ್ಲ. ಹಳೇ ಸ್ಟಾಂಪ್ ಸೈಜಿನ ಫೋಟೋಗಳನ್ನು ಚೌಕ ಚೌಕ ಹಾಕಿ ದೊಡ್ಡದು ಮಾಡಿ ಬಿಡಿಸಬಲ್ಲ. ಖಾಲೀ ಡೈರಿಗಳನ್ನು ಧೂಳು ಹಿಡಿಯದಂತೆ ಬಂದೋಬಸ್ತ್ ಮಾಡಿ ಕಪಾಟಿನಲ್ಲಿ ಎಷ್ಟುವರ್ಷಗಳಾದರೂ ಕಾದಿರಿಸಬಲ್ಲ.. ನವವಿವಾಹಿತರ ಹೆಸರನ್ನು ಜೋಡಿಸಿ ಕವಿತೆ ಬರೆದು ಅದಕ್ಕೆ ಅಂದದ ಫ್ರೇಮ್ ಹಾಕಿಸಿ ಉಡುಗೊರೆ ಕೊಡಬಲ್ಲ. ಸಾಮಾಜಿಕ, ರಾಜಕೀಯದಂತ ವಸ್ತುಗಳಿಗೂ ಭಾವಲೇಪನ ಮಾಡಿ ತನ್ನ ಶೈಲಿಯಲ್ಲಿ, ತತ್ವಹೇಳುವ ಪ್ರಬಂಧ ರಚಿಸಬಲ್ಲ. ಅಪ್ಪನ ಡೈರಿಗಳ ಬಗ್ಗೆ ಹೇಳಲೇ ಬೇಕು.. ಅದು ಡೈರಿಯೇ ಆದರೂ ಅದರಲ್ಲಿ ಇರುವುದು ಮಾತ್ರ ಖರ್ಚು ವೆಚ್ಚ.. ಬಲತುದಿಗೆ ವ್ಯಯವಿದ್ದರೆ, ಎಡಬದಿಗೆ ಆಯ. ಕೂಡಿಸಿ ಕಳೆದಾಗ ಕಿಸೆಯಲ್ಲಿರುವ ಮೊತ್ತಕ್ಕೆ ತಾಳೆಯಾಗಬೇಕು, ಇಲ್ಲವಾದಲ್ಲಿ ಅಪ್ಪ ಮನೆಯವರೆಲ್ಲರ ತಲೆ ತಿನ್ನುತ್ತಾನೆ.. ಕೊನೆಗೆ ಬ್ಯಾಗಿನಲ್ಲೋ, ಕಪಾಟಿನಲ್ಲೋ ವ್ಯತ್ಯಾಸ ಪತ್ತೆಯಾದಾಗ ಡೈರಿ ಮುಚ್ಚಿಡುತ್ತಾನೆ. ಇನ್ನೊಂದು ವಿಚಾರ. ಆ ಡೈರಿಗಳಲ್ಲಿ ಆ ಹೊತ್ತಿನ ವಿಶೇಷವೂ ಇರುತ್ತದೆ. ’ಗಣರಾಜ್ಯೋತ್ಸವ’ ದಂದು ಡೈರಿಯಲ್ಲಿ ಧ್ವಜ ಹಾರಾಡಿದರೆ, ಚೌತಿಯಲ್ಲಿ ಗಣಪತಿ ಆಕಾರದ ಲಿಪಿಯಲ್ಲಿ ’ಗಣೇಶ ಚತುರ್ಥಿ’ ಎಂದು ಬರೆದಿರುತ್ತದೆ. ಕೊನೆ ಕೊಯಿಲು, ಗೊಬ್ಬರ ಕಂಬಳ, ಎಲೆ ಬಳ್ಳಿ ನೆಟ್ಟಿದ್ದಕ್ಕೂ ಡೈರಿಯಲ್ಲಿ ಜಾಗವಿದೆ.

 

ಅಪ್ಪನಿಗೆ ಭರ್ಜರಿ ತಾಳ್ಮೆಯಿದೆ.. ಜೊತೆಗೆ ಬದುಕಿನ ರಸಿಕತೆಯಿದೆ.. ಸೆಂಟ್ ಹೊಡೆದುಕೊಂಡು, ಒಂದಿಷ್ಟು ಫೇರ್ ಅಂಡ್ ಲವ್ಲಿ ಹಚ್ಚಿಕೊಂಡು ಎಂದಿನ ಶೈಲಿಯ ತಿಳಿಬಣ್ಣದ ಅಂಗಿ ಹಾಕಿ, ಪೆನ್ನಂತೆ ಕಿಸೆಗೆ ಸಿಕ್ಕಿಸಿಕೊಳ್ಳುವ ಗೂಡಿಂದ ಬಂಗಾರದ ಫ್ರೇಮಿನ ಕನ್ನಡಕವನ್ನು ಮೂಗಿನ ಮೇಲಿಟ್ಟು, ಒಂದು ಸಲ ಸೈಡ್ ಫೋಸಿನಲ್ಲಿ ನಿಂತು ಕನ್ನಡಿ ಮುಂದೆ ನಿಲ್ಲುವ ಅಪ್ಪನಿಗೀಗ ಐವತ್ತೆರಡು ತುಂಬಿದೆ,, ಮೊನ್ನೆ ಮಾರ್ಚ್ ಆರಕ್ಕೆ. ಫೋನ್ ಮಾಡಿ ಶುಭಾಷಯಗಳನ್ನು ಹೇಳುವಾಗ ನಮ್ಮ ಅಪ್ಪ-ಮಗನ ವಾತ್ಸಲ್ಯವನ್ನು ಮೀರಿದ ಆತ್ಮೀಯತೆಯ ಸಂಬಂಧದಲ್ಲಿ ಇದೆಲ್ಲಾ ಕೃತಕ ಅನಿಸಿತು. ಅಪ್ಪನ ಧನ್ಯವಾದಗಳು ಎಂಬ ಮಾತಿನಲ್ಲೂ ಅಲವರಿಕೆಯಿತ್ತು. ನಿಜ ನಮ್ಮಿಬ್ಬರಿಗೆ ಅದು ಬೇಕಾಗಿಲ್ಲ. ಈ ಬರಹವೂ ನಮ್ಮ ಭಾವವನ್ನು ಹೆಚ್ಚಾಗಲೀ ಕಡಿಮೆಯಾಗಲೀ ಮಾಡುವುದಿಲ್ಲ.

ಅಪ್ಪ ನಮಗೆ ಹೀಗಿರಿ ಎಂದು ಹೇಳಿಲ್ಲ, ಅವನು ಹಾಗಿದ್ದು ತೋರಿಸಿದ್ದಾನೆ. ಮೌನದಲ್ಲೂ ಮಾತಾಡುವ ಅಪ್ಪನ ಎಲ್ಲಾ ಗುಣಗಳೂ ನನಗೆ ಬೇಕು.. ನಾನೂ ಅಪ್ಪನಾಗಬೇಕು. ಕೂದಲು ನಿಲ್ಲದ ತಲೆ ಮತ್ತು ಡಯಾಬಿಟೀಸ್ ಬಿಟ್ಟು...

bhatkartikeya.weebly.com

 

Rating
No votes yet

Comments