ಭಾಮಿನಿ...ಭವಿಷ್ಯ!

ಭಾಮಿನಿ...ಭವಿಷ್ಯ!

ಹೆರಳು ಹಾಕದ ಜಡೆಯ ಕಟ್ಟದ

ಅರಳುತಿಹ ಸುಮವನ್ನು ಮುಡಿಯದ

ಇರುಳುಕ೦ಡರೆ ಭೂತಗಳ ನೆನಪನ್ನು ಮೂಡಿಸುವ

ಮರಳುಗಾಡಿನ ವೄಕ್ಷದ೦ದದಿ

ಕೊರಳಮೇಗಡೆ ಬಿರಿದು ನಿ೦ದಿಹ

ಒರಟುಗೂದಲ ಕೇಶರಾಶಿಯ ನೋಡುವಾಸೆಯಲಿ

ಇರುಳು ಹಗಲಲಿ ಹುಡುಕಿ ದಣಿದೆನು

ವರುಷದುದ್ದಕು ಕಾಲ ಸವೆಯಿಸಿ

ಮರುಳನಾದೆನು ಕಾಣದೀ ಅಪರೂಪದಾ ಚೆಲುವಾ

ಕೊರಗದೆಯೆ ಮನಗಟ್ಟಿ ಮಾಡುತ

ತಿರುಗಿದೆನು ಹಲವಾರು ದೇಶದಿ

ವರವ ಪಡೆಯಲು ಭಕುತ ದೇವರ ಸ್ಮರಣೆ ಮಾಡುವೊಲು

ಬಿಟ್ಟಗಣ್ಣಲಿ ಊರುಕೇರಿಯ

ನೆಟ್ಟನೋಟದಿ ಅರಸಿ ತಿರುಗಿದೆ

ಉಟ್ಟಬಟ್ಟೆಯು ಮಾಸಿದರು ಹುಡುಕಿದೆನು ಹಟಬಿಡದೆ

ಮೆಟ್ಟ ಸವೆಸುತ ಸುತ್ತುತಿರೆ ಮನ

ದಟ್ಟುಮಾಡುತ ಒಡನೆ ಪಯಣಿಸಿ

ಕಟ್ಟಕಡೆಗೈತ೦ದೆನೀ ಪರದೇಶದೂರಿನೊಳು

ಕ೦ಡರೆಲ್ಲಿಯು ಜನವಿರದ ಭೂ

ಖ೦ಡವಿದು ಬಿಳಿತೊಗಲ ನೂಜೀ

ಲೆ೦ಡು ಎ೦ಬೀ ನಾಮಧೇಯದ ದೇಶವಿದುಯೆನುತ

ತು೦ಡುಮಾಡದೆ ಮನದಯೋಚನೆ

ತ೦ಡಗಳ ಹಿಮ್ಮೆಟ್ಟಿ ನಡೆಯುತ

ಮ೦ಡೆಯನು ಕೆರೆಯುತ್ತ ನೋಡಿದೆ ಪಕ್ಷಿಧಾಮವನು

ನನಸದಾಯಿತು ಅ೦ದು ಕ೦ಡಿಹ

ಕನಸು ಇ೦ದೆ೦ದೆನುತ ಹರುಶದಿ

ಮನಸಿನಲೆ ನಗುತಿರ್ದು ಕರವನು ಇಳಿಸಿ ಜೋಳಿಗೆಗೆ

ತಿನಸುಗಳ ಬದಿಗೊತ್ತಿ ತೆಗೆದೆನು

ಧನುಸ ರಾಮನು ಎತ್ತಿದ೦ದದಿ

ಮುನಿಸುಮಾಡದ ತೆರದಿ ಕ್ಲಿಕ್ಕನೆ ತೆಗೆದೆ ಪಟವನ್ನು

*****************

ಈ ಕವಿತೆಯನ್ನು ನಾನು...

ಬರೆದ ಬ್ಲಾಗ್ http://sampada.net/blog/%E0%B2%97%E0%B2%A3%E0%B3%87%E0%B2%B6/09/12/2010/29425  ನಲ್ಲಿ ಪ್ರತಿಕ್ರಿಯೆಯಾಗಿ ಸಂಪದ ಮಿತ್ರ ರಘುಮುಳಿಯರವರು ಬರೆದದ್ದು. ಸಂಪದದಲ್ಲಿ ಅವರ ಪ್ರಥಮ ಭಾಮಿನಿ ಪ್ರಯೋಗ ನನ್ನ ಬ್ಲಾಗ್‌ನಿಂದ ಆರಂಭವಾಯಿತು ಎಂಬ ಹೆಮ್ಮೆ ನನಗೆ.

ರಘುಮುಳಿಯರವರ ಭಾಮಿನಿ ಕವಿತೆಗಳ ಬಗ್ಗೆ ಎರಡು ಮಾತಿಲ್ಲ-ಒಂದೇ ಮಾತ್ರೆ -ಸೂಪರ್!!

ಈ ಮಾತ್ರೆಗಳು ನನ್ನ ತಲೆಗೆ ಹೊಕ್ಕುವುದಿಲ್ಲ. ನಮ್ಮ ಪಾರ್ಥಸಾರಥಿಯವರು   http://sampada.net/%E0%B2%A7%E0%B2%BE%E0%B2%B0%E0%B3%86%E0%B2%AF%E0%B3%86%E0%B2%B0%E0%B3%86%E0%B2%A6%E0%B2%B0%E0%B3%86-%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%B5%E0%B2%A8%E0%B3%81 ಧಾರೆಯೆರೆದರೆ ಜ್ಞಾನವನು..  ಈ ಕವನದ ಪ್ರತಿಕ್ರಿಯೆಯಲ್ಲಿ ಮಾತ್ರೆಗಳ ಬಗ್ಗೆ ಬರೆದಿದ್ದಾರಲ್ಲಾ ಅದೂ ಸೂಪರ್-ಓದಿ :

ರಘು

ನನಗೂ ಒಮ್ಮೊಮ್ಮೆ ’ಮಾತ್ರೆಗಳ’ ಲೆಕ್ಕ ತಪ್ಪುವುದುಂಟು

ಬೆಳಗ್ಗೆ ಮನೆಯಿಂದ ಹೊರಟು ಕಛೇರಿ ತಲುಪುವಾಗ ನೆನೆಪಿಗೆ ಬರುತ್ತದೆ

ಬೆಳಗ್ಗೆ ಹೊರಡುವಾಗ ’ಮಾತ್ರೆ’ ತೆಗೆದು ಕೊಳ್ಳಲಿಲ್ಲವೆಂದು

ಆಮೇಲೆ ಒಂದು ಗಲಿಬಿಲಿ ಬಹುಷಃ ’ಮಾತ್ರೆ’ ತೆಗೆದುಕೊಂದಿದ್ದೇನೊ ಏನೊ ಎಂದು

ಒಂದು ಸಾರು ತೆಗೆದು ಕೊಂಡಂತೆ ನೆನಪು ಮತ್ತೊಮ್ಮೆ ಇಲ್ಲವೇನೊ ಎಂಬ ಸಂಶಯ

ಈಗ ಮತ್ತೆ ತೆಗೆದುಕೊಂಡರೆ ’ದೀರ್ಘವಾಗಿ’ ಏನಾದಿತೋ ಎಂಬ ಭಯ

ಬೇಡವೆಂದು ಬಿಟ್ಟರೆ ’ಹಸ್ವವಾಗಿ’ ಇನ್ನೇನಾದಿತೋ ಎಂಬ ಆತಂಕ.

ಹೀಗೆ ನಿಮಗೊಂದು ’ಮಾತ್ರೆ’ ಯ ಚಿಂತೆಯಾದರೆ

ನಮಗಿನ್ನೊಂದು ’ಮಾತ್ರೆ’ಯ ಚಿಂತೆ

- ಪಾರ್ಥಸಾರಥಿ

ಹ್ಹ..ಹ್ಹ..

ನನಗೂ ಭಾಮಿನಿ ಚಟ ಶುರುವಾಗಿದೆ!! ಯಾಕೆ ಸೈಲೆಂಟಾದ್ರಿ??

ಹೆದರಬೇಡಿ..ನಾನು ಕವಿತೆ ಬರೆಯುವುದಿಲ್ಲ.

ಕವಿತೆಯಲ್ಲಿ ಬರುವ ದ್ವಿತೀಯ ಪ್ರಾಸದ ಕಡೆಗೇ ನನ್ನ ಗಮನ. ಈಗ ಅದು ಎಲ್ಲೀವರೆಗೆ ಹೋಗಿದೆಯೆಂದರೆ ಪ್ರತೀ "ಶಬ್ದ"ದ ದ್ವಿತೀಯ ಅಕ್ಷರದ ಕಡೆಗೂ... ಗಮನ ಕೊಟ್ಟೂ ಕೊಟ್ಟೂ

"ಭಾಷ ಭವಿಷ್ಯ"( ಭಾಮಿನಿಷಟ್ಪದಿ ಭವಿಷ್ಯ) ಹೇಳಬಲ್ಲೆ!

ಭಾಷ ಭೂತ-

೧. ದೋ"ಣಿ" ಟೀಮ್ ವಿಶ್ವಕಪ್ ಗೆದ್ದದ್ದು.

೨. ಅ"ಣ್ಣಾ" ಹಜಾರೆ ಟೀಮ್‌ಗೆ ಭೃಷ್ಟಾಚಾರಿಗಳ ವಿರುದ್ಧ ಮೊದಲ ಗೆಲುವು

ಭಾಷ ಭವಿಷ್ಯ-

೧.  ಇ"ಣ್"ಡಿಯಾ ನಂ ೧ ಆಗುವುದು ವಿಶ್ವದಲ್ಲಿ.

೨. ಪು"ಣೆ" ತಂಡ ಗೆಲ್ಲುವುದು ಐ.ಪಿ.ಎಲ್‌ನಲ್ಲಿ.

೩.  ಅ"ಣ್ಣಾ" ಡಿ.ಎಮ್.ಕೆ. ಆಡಳಿತ ಬರುವುದು ತಮಿಳುನಾಡಿನಲಿ.

೪.  ತೃ"ಣ"ಮೂಲ ಪಾರ್ಟಿ ಉಳಿದ ಪಾರ್ಟಿಗಳನ್ನು ಬೇರು ಸಹಿತ ಕಿತ್ತೆಸೆಯುವುದು ಬಂಗಾಳದಲ್ಲಿ.

 ಹ"ಣ"ನೀಡಿ ಸಂಪರ್ಕಿಸಿ-ಇನ್ನೂ ಹೆಚ್ಚಿನ ಭವಿಷ್ಯ ಬೇಕಿದ್ದರೆ-

-ಗಣೇಶ.

 

 

 

 

Rating
No votes yet

Comments