ದೇಶಿ ಶ್ಯಾವಿಗೆ ಗಳು

ದೇಶಿ ಶ್ಯಾವಿಗೆ ಗಳು

ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಹೆಚ್ಚಾಗಿ ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಆಸುಪಾಸಿನ ಊರುಗಳಲ್ಲಿನ ಮನೆಗಳಲೆಲ್ಲಾ ಸರ್ವೇ ಸಾಮಾನ್ಯವಾಗಿ ತಯಾರಿಸುತ್ತಾರೆ . ಈ ರೀತಿಯ   ವಿಧ-ವಿಧ ಶಾವಿಗೇಯನ್ನು ಚಳಿಗಾಲದಲ್ಲಿ ಹೆಚ್ಚಾಗಿ ಮಾಡಿಟ್ಟುಕೊಂಡು   ವರ್ಷವಿಡಿ ಬಳಸಬಹುದಾದ . ಇವುಗಳು ನಮ್ಮ ದೇಸಿ ಪಾಸ್ತಗಳು ಎಂದು ಹೇಳಬಹುದು . ಇದು ಈಗಿನ ಪರದೇಶಿ ಪಾಸ್ತಗಳಿಗಿಂತ   ಹೆಚ್ಚು ರುಚಿಕರ, ನೈಸರ್ಗಿಕವಾಗಿ ಮನೆಯಲ್ಲೆ ತಯಾರಾದ ಆರೋಗ್ಯಕರವಾದ   ಶ್ಯಾವಿಗೇಗಳು .
        ಇದನ್ನು ನಾವು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು .ಹಿಟ್ಟು ತಯಾರಿಸಲು ಎರಡು ವಿಧಾನಗಳಿವೆ .
         ಮೊದಲನೆಯ ವಿಧಾನವೆಂದ್ರೆ ಮೈದಾ ಹಾಗೂ ಶ್ಯಾವಿಗೇ   ರವೆಯನ್ನು [ಅಥವಾ ಚಿರೋಟಿ ರವೆ ] ಸಮಪ್ರಮಾಣದಲ್ಲಿ ತೆಗೆದುಕೊಂಡು ನೀರು ಹಾಕಿ ಕಲಸಿ ಚಪಾತಿ ಹಿಟ್ಟಿನ ಹದಕ್ಕೆ ಬಂದ ನಂತರ ಅದನ್ನು ಒಂದು ಘಂಟೆ ನೆನೆಯಲು ಬಿಡಬೇಕು .

       ಎರಡನೆಯ ವಿಧಾನ ; ಈ ವಿಧಾನ ಮೊದಲನೆಯದಕ್ಕಿಂತ   ಸ್ವಲ್ಪ ಕಷ್ಟಕರವಾದರು ಬಹಳ    ರುಚಿಕರವಾಗಿ ತಯಾರಿಸಬಹುದಾದ ವಿಧಾನ .
        ಚಿರೋಟಿರವೆಯನ್ನು   ನೀರಿನಲ್ಲಿ ಕಲಸಿ ತುಪ್ಪ ಹಚ್ಚಿ ಒಂದು ಘಂಟೆ   ನೆನೆಯಲು ಬಿಟ್ಟು   ಉಪ್ಪು ನೀರಿನ   ಅಣಿ ಮಾಡಿ . ಅರ್ಧ ಘಂಟೇ ನೆನೆಯಲು   ಬಿಟ್ಟು ಉಪ್ಪು ನೀರಿನ ಅಣಿ ಮಾಡಿ ಅರ್ಧ   ಘಂಟೇ   ಹಿಟ್ಟು ಕುಟ್ಟಬೇಕು . ಮಧ್ಯದಲ್ಲಿ ಉಪ್ಪು ನೀರಿನ ಅಣಿ   ಹೆಚ್ಚುತ್ತಾ   ಕುಟ್ಟಬೇಕು.
        ಹೀಗೇ ತಯಾರಾದ ಹಿಟ್ಟಿನಿಂದ ಈ  ರೀತಿಯ  ವಿಧ  ವಿಧವಾದ ಶ್ಯಾವಿಗೆ  ಮಾಡಬಹುದು .

 

ಗೌಲಿ; ಹಿಟ್ಟನ್ನು   ಹೆಬ್ಬೆರಳು  ಹಾಗು  ತೋರುಬೆರಳ  ಸಹಾಯದಿಂದ  ಜೀರಿಗೆ  ಆಕಾರದಂತೆ ಹೊಸೆದು  ತಟ್ಟೆಗೆ  ಹಾಕುತ್ತ  ಹೋಗುವುದು .
 
ಪರಡಿ ;ತೆಗೆದುಕೊಂಡ  ಹಿಟ್ಟನ್ನು  ಗೋಲಾಕಾರ  ಮಾಡಿ ತಟ್ಟೆಗೆ  ಹಾಕುತ್ತ  ಹೋಗುವುದು .


ಸೌತೆಕಾಯಿ ಬೀಜ; ತೆಗೆದುಕೊಂಡ ಹಿಟ್ಟನ್ನು  ಸೌತೆಕಾಯಿ  ಬೀಜದ  ತರಹ  ಮಾಡಿ  ತಾಟಿಗೆ   ಹಾಕುತ್ತಾ ಹೋಗುವುದು.


ಚಿಗರೆ ಕೊಂಬು; ಸ್ವಲ್ಪ ಹಿಟ್ಟನ್ನು  ತೆಗೆದುಕೊಂಡು  ಉದ್ದವಾಗಿ ಮಾಡಿ  ಅಂಗೈಯಿಂದ  ಸ್ವಲ್ಪ  ಸ್ವಲ್ಪವೇ ಒತ್ತಿ ಬಿಡುವುದು.ಆಗ  ಅದು ಸುರಳಿ  ಸುತ್ತಿ ಚಿಗರೆ  ಕೊಂಬಿನ  ತರಹ  ಆಗುತ್ತದೆ .
 
ಉಗುರೊತ್ತು ;ಕೈಯಲ್ಲಿ    ಹಿಟ್ಟನ್ನು  ತೆಗೆದುಕೊಂಡು  ಹೆಬ್ಬೆರಳಿನ  ಉಗುರಿನಿಂದ  ಒತ್ತಿ  ಬಿಡುವುದು .
 
ಹೀಗೆ  ತಯಾರಾದ  ಶಾವಿಗೆಗಳನ್ನು  ಒಣಗಿಸಿ  ಡಬ್ಬಿಯಲ್ಲಿ  ತುಂಬಿಟ್ಟುಕೊಂಡರೆ  ಧಿಡೀರನೇ   ಮನೆಗೆ  ನೆಂಟರು ಬಂದರೆ  ತಕ್ಷಣ ಪಾಯಸ ತಯಾರಿಸಬಹುದು.ಅಷ್ಟೇಅಲ್ಲದೆ ಇದರಿಂದ  ಉಪ್ಪಿಟನ್ನು,ಹುಗ್ಗಿಯನ್ನು  ತಯಾರಿಸಬಹುದು.ಇದರ ಇನ್ನೊಂದು  ರಹಸ್ಯ  ಎಂದರೆ  ಇದನ್ನು ಎರಡ ರಿಂದ ಮೂರು ತಿಂಗಳು  ಹಳತು  ಮಾಡಿ  ಬಳಸಿದರೆ  ಇನ್ನೂ  ರುಚಿಕರ .
      ನೀರನ್ನು  ಕುದಿಯಲು ಇಟ್ಟು ,ನೀರು  ಕುದಿಯಲು  ಪ್ರಾರಂಭಿಸಿದಾಗ  ಶ್ಯಾವಿಗೆಗಳನ್ನು ಹಾಕಿ , ಶ್ಯಾವಿಗೆ  ಬೆಂದ  ನಂತರ  ರುಚಿಗೆ  ತಕ್ಕಷ್ಟು  ಬೆಲ್ಲ  ಕುಟ್ಟಿ ಸೇರಿಸಿ,ಗಸಗಸೆ  ಹಾಗು  ಒಣಕೊಬ್ಬರಿ  ತಿರುವಿ  ಸೇರಿಸಿ  .ಸುವಾಸನೆಗೆ  ಸ್ವಲ್ಪ  ಏಲಕ್ಕಿ ಹಾಗು  ಒಣಶುಂಠಿ ಪುಡಿ  ಸೇರಿಸಿ
ಕೊನೆಗೆ  ಹಾಲು  ಮತ್ತು  ತುಪ್ಪ  ಹಾಕಿ  ಕುದಿಸಿದರೆ  ಪಾಯಸ  ರೆಡಿ .
        ಬಾಣಂತನದಲ್ಲೂ ಈ   ಪಾಯಸವನ್ನು ಹೆಚ್ಚಾಗಿ  ಮಾಡಿ  ಬಡಸುತ್ತಾರೆ. ವಿವಿಧ  ಶಾವಿಗೆ   ಪಾಯಸಗಳಾದ ಗೌಲಿ,ಪರಡಿ ಮುಂತಾದವುಗಳನ್ನು ಬೆಳ್ಳಿ ಬಟ್ಟಲಿನಲ್ಲಿ  ಹಾಕಿ  , ಬೆಳ್ಳಿ ತಟ್ಟೆಯಲ್ಲಿ  ಇಟ್ಟು   ಒಂದು  ಬಾಳೆಎಲೆ   ಮುಚ್ಚಿ . ಬಸರಿಯರಿಗೆ  ಇದರಲ್ಲಿ  ಒಂದನ್ನು  ಮುಟ್ಟಲು  ಹೇಳುತ್ತಾರೆ .ಆಗ  ಅವಳು  ಮುಟ್ಟುವ  ಪಾಯಸದ ಮೇಲೆ  ಹುಟ್ಟುವ  ಮಗು  ಯಾವುದೆಂದು  ಊಹಿಸುತ್ತಾರೆ .ಇದು  ಈಗಿನ  ಚೀನಾಚಾರ್ಟ್ ನ   ತರಹ .
         ಚಿಗರೆಕೊಂಬು ,ಗೌಲಿ ಪಾಯಸ  ಮುಟ್ಟಿದರೆ  ಗಂಡು  ಮಗು  ಎಂದು ,ಸೌತೆಬೀಜ ಹಾಗು ಪರಡಿ ಮುಟ್ಟಿದರೆ  ಹೆಣ್ಣು  ಮಗು ಎಂದು  ಹೇಳುತ್ತಾರೆ . ಹೇಗಿದೆ  ನೋಡಿ  ಪಾಯಸದ ಮಹಿಮೆ.
        ತಯಾರಿಸುವುದು   ಆರಂಭದಲ್ಲಿ  ಕಷ್ಟವೆನಿಸಿದರೂ   ಮಾಡುತ್ತ  ಬಹಳ  ಸುಲಭವೆನ್ನಿಸುತ್ತಾ  ಹೋಗುವುದೆಂದು ಹೇಳ್ಳುತ್ತಾರೆ  ,ಇದನ್ನು  ಹೇಳಿಕೊಟ್ಟ  ಜಯಶೀಲರವರು.
        ಈ ದೇಸಿ  ಶ್ಯಾವಿಗೆಯ   ರುಚಿನೋಡಬೇಕೆಂದರೆ   ಖಂಡಿತ   ಮನೆಯಲ್ಲಿ  ಒಮ್ಮೆ  ಪ್ರಯತ್ನಿಸಿ .

Comments