ದೇಶಿ ಶ್ಯಾವಿಗೆ ಗಳು
ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಹೆಚ್ಚಾಗಿ ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಆಸುಪಾಸಿನ ಊರುಗಳಲ್ಲಿನ ಮನೆಗಳಲೆಲ್ಲಾ ಸರ್ವೇ ಸಾಮಾನ್ಯವಾಗಿ ತಯಾರಿಸುತ್ತಾರೆ . ಈ ರೀತಿಯ ವಿಧ-ವಿಧ ಶಾವಿಗೇಯನ್ನು ಚಳಿಗಾಲದಲ್ಲಿ ಹೆಚ್ಚಾಗಿ ಮಾಡಿಟ್ಟುಕೊಂಡು ವರ್ಷವಿಡಿ ಬಳಸಬಹುದಾದ . ಇವುಗಳು ನಮ್ಮ ದೇಸಿ ಪಾಸ್ತಗಳು ಎಂದು ಹೇಳಬಹುದು . ಇದು ಈಗಿನ ಪರದೇಶಿ ಪಾಸ್ತಗಳಿಗಿಂತ ಹೆಚ್ಚು ರುಚಿಕರ, ನೈಸರ್ಗಿಕವಾಗಿ ಮನೆಯಲ್ಲೆ ತಯಾರಾದ ಆರೋಗ್ಯಕರವಾದ ಶ್ಯಾವಿಗೇಗಳು .
ಇದನ್ನು ನಾವು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು .ಹಿಟ್ಟು ತಯಾರಿಸಲು ಎರಡು ವಿಧಾನಗಳಿವೆ .
ಮೊದಲನೆಯ ವಿಧಾನವೆಂದ್ರೆ ಮೈದಾ ಹಾಗೂ ಶ್ಯಾವಿಗೇ ರವೆಯನ್ನು [ಅಥವಾ ಚಿರೋಟಿ ರವೆ ] ಸಮಪ್ರಮಾಣದಲ್ಲಿ ತೆಗೆದುಕೊಂಡು ನೀರು ಹಾಕಿ ಕಲಸಿ ಚಪಾತಿ ಹಿಟ್ಟಿನ ಹದಕ್ಕೆ ಬಂದ ನಂತರ ಅದನ್ನು ಒಂದು ಘಂಟೆ ನೆನೆಯಲು ಬಿಡಬೇಕು .
ಎರಡನೆಯ ವಿಧಾನ ; ಈ ವಿಧಾನ ಮೊದಲನೆಯದಕ್ಕಿಂತ ಸ್ವಲ್ಪ ಕಷ್ಟಕರವಾದರು ಬಹಳ ರುಚಿಕರವಾಗಿ ತಯಾರಿಸಬಹುದಾದ ವಿಧಾನ .
ಚಿರೋಟಿರವೆಯನ್ನು ನೀರಿನಲ್ಲಿ ಕಲಸಿ ತುಪ್ಪ ಹಚ್ಚಿ ಒಂದು ಘಂಟೆ ನೆನೆಯಲು ಬಿಟ್ಟು ಉಪ್ಪು ನೀರಿನ ಅಣಿ ಮಾಡಿ . ಅರ್ಧ ಘಂಟೇ ನೆನೆಯಲು ಬಿಟ್ಟು ಉಪ್ಪು ನೀರಿನ ಅಣಿ ಮಾಡಿ ಅರ್ಧ ಘಂಟೇ ಹಿಟ್ಟು ಕುಟ್ಟಬೇಕು . ಮಧ್ಯದಲ್ಲಿ ಉಪ್ಪು ನೀರಿನ ಅಣಿ ಹೆಚ್ಚುತ್ತಾ ಕುಟ್ಟಬೇಕು.
ಹೀಗೇ ತಯಾರಾದ ಹಿಟ್ಟಿನಿಂದ ಈ ರೀತಿಯ ವಿಧ ವಿಧವಾದ ಶ್ಯಾವಿಗೆ ಮಾಡಬಹುದು .
ಗೌಲಿ; ಹಿಟ್ಟನ್ನು ಹೆಬ್ಬೆರಳು ಹಾಗು ತೋರುಬೆರಳ ಸಹಾಯದಿಂದ ಜೀರಿಗೆ ಆಕಾರದಂತೆ ಹೊಸೆದು ತಟ್ಟೆಗೆ ಹಾಕುತ್ತ ಹೋಗುವುದು .
ಪರಡಿ ;ತೆಗೆದುಕೊಂಡ ಹಿಟ್ಟನ್ನು ಗೋಲಾಕಾರ ಮಾಡಿ ತಟ್ಟೆಗೆ ಹಾಕುತ್ತ ಹೋಗುವುದು .
ಸೌತೆಕಾಯಿ ಬೀಜ; ತೆಗೆದುಕೊಂಡ ಹಿಟ್ಟನ್ನು ಸೌತೆಕಾಯಿ ಬೀಜದ ತರಹ ಮಾಡಿ ತಾಟಿಗೆ ಹಾಕುತ್ತಾ ಹೋಗುವುದು.
ಚಿಗರೆ ಕೊಂಬು; ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಉದ್ದವಾಗಿ ಮಾಡಿ ಅಂಗೈಯಿಂದ ಸ್ವಲ್ಪ ಸ್ವಲ್ಪವೇ ಒತ್ತಿ ಬಿಡುವುದು.ಆಗ ಅದು ಸುರಳಿ ಸುತ್ತಿ ಚಿಗರೆ ಕೊಂಬಿನ ತರಹ ಆಗುತ್ತದೆ .
ಉಗುರೊತ್ತು ;ಕೈಯಲ್ಲಿ ಹಿಟ್ಟನ್ನು ತೆಗೆದುಕೊಂಡು ಹೆಬ್ಬೆರಳಿನ ಉಗುರಿನಿಂದ ಒತ್ತಿ ಬಿಡುವುದು .
ಹೀಗೆ ತಯಾರಾದ ಶಾವಿಗೆಗಳನ್ನು ಒಣಗಿಸಿ ಡಬ್ಬಿಯಲ್ಲಿ ತುಂಬಿಟ್ಟುಕೊಂಡರೆ ಧಿಡೀರನೇ ಮನೆಗೆ ನೆಂಟರು ಬಂದರೆ ತಕ್ಷಣ ಪಾಯಸ ತಯಾರಿಸಬಹುದು.ಅಷ್ಟೇಅಲ್ಲದೆ ಇದರಿಂದ ಉಪ್ಪಿಟನ್ನು,ಹುಗ್ಗಿಯನ್ನು ತಯಾರಿಸಬಹುದು.ಇದರ ಇನ್ನೊಂದು ರಹಸ್ಯ ಎಂದರೆ ಇದನ್ನು ಎರಡ ರಿಂದ ಮೂರು ತಿಂಗಳು ಹಳತು ಮಾಡಿ ಬಳಸಿದರೆ ಇನ್ನೂ ರುಚಿಕರ .
ನೀರನ್ನು ಕುದಿಯಲು ಇಟ್ಟು ,ನೀರು ಕುದಿಯಲು ಪ್ರಾರಂಭಿಸಿದಾಗ ಶ್ಯಾವಿಗೆಗಳನ್ನು ಹಾಕಿ , ಶ್ಯಾವಿಗೆ ಬೆಂದ ನಂತರ ರುಚಿಗೆ ತಕ್ಕಷ್ಟು ಬೆಲ್ಲ ಕುಟ್ಟಿ ಸೇರಿಸಿ,ಗಸಗಸೆ ಹಾಗು ಒಣಕೊಬ್ಬರಿ ತಿರುವಿ ಸೇರಿಸಿ .ಸುವಾಸನೆಗೆ ಸ್ವಲ್ಪ ಏಲಕ್ಕಿ ಹಾಗು ಒಣಶುಂಠಿ ಪುಡಿ ಸೇರಿಸಿ
ಕೊನೆಗೆ ಹಾಲು ಮತ್ತು ತುಪ್ಪ ಹಾಕಿ ಕುದಿಸಿದರೆ ಪಾಯಸ ರೆಡಿ .
ಬಾಣಂತನದಲ್ಲೂ ಈ ಪಾಯಸವನ್ನು ಹೆಚ್ಚಾಗಿ ಮಾಡಿ ಬಡಸುತ್ತಾರೆ. ವಿವಿಧ ಶಾವಿಗೆ ಪಾಯಸಗಳಾದ ಗೌಲಿ,ಪರಡಿ ಮುಂತಾದವುಗಳನ್ನು ಬೆಳ್ಳಿ ಬಟ್ಟಲಿನಲ್ಲಿ ಹಾಕಿ , ಬೆಳ್ಳಿ ತಟ್ಟೆಯಲ್ಲಿ ಇಟ್ಟು ಒಂದು ಬಾಳೆಎಲೆ ಮುಚ್ಚಿ . ಬಸರಿಯರಿಗೆ ಇದರಲ್ಲಿ ಒಂದನ್ನು ಮುಟ್ಟಲು ಹೇಳುತ್ತಾರೆ .ಆಗ ಅವಳು ಮುಟ್ಟುವ ಪಾಯಸದ ಮೇಲೆ ಹುಟ್ಟುವ ಮಗು ಯಾವುದೆಂದು ಊಹಿಸುತ್ತಾರೆ .ಇದು ಈಗಿನ ಚೀನಾಚಾರ್ಟ್ ನ ತರಹ .
ಚಿಗರೆಕೊಂಬು ,ಗೌಲಿ ಪಾಯಸ ಮುಟ್ಟಿದರೆ ಗಂಡು ಮಗು ಎಂದು ,ಸೌತೆಬೀಜ ಹಾಗು ಪರಡಿ ಮುಟ್ಟಿದರೆ ಹೆಣ್ಣು ಮಗು ಎಂದು ಹೇಳುತ್ತಾರೆ . ಹೇಗಿದೆ ನೋಡಿ ಪಾಯಸದ ಮಹಿಮೆ.
ತಯಾರಿಸುವುದು ಆರಂಭದಲ್ಲಿ ಕಷ್ಟವೆನಿಸಿದರೂ ಮಾಡುತ್ತ ಬಹಳ ಸುಲಭವೆನ್ನಿಸುತ್ತಾ ಹೋಗುವುದೆಂದು ಹೇಳ್ಳುತ್ತಾರೆ ,ಇದನ್ನು ಹೇಳಿಕೊಟ್ಟ ಜಯಶೀಲರವರು.
ಈ ದೇಸಿ ಶ್ಯಾವಿಗೆಯ ರುಚಿನೋಡಬೇಕೆಂದರೆ ಖಂಡಿತ ಮನೆಯಲ್ಲಿ ಒಮ್ಮೆ ಪ್ರಯತ್ನಿಸಿ .
Comments
ಉ: ದೇಶಿ ಶ್ಯಾವಿಗೆ ಗಳು
ಉ: ದೇಶಿ ಶ್ಯಾವಿಗೆ ಗಳು