ವಿಶ್ವಾಸದಲ್ಲಿ ಸಾಲ ತೆಗೆದುಕೊಂಡ ಈರಭದ್ರ ಕೈಕೊಟ್ಟಾಗ !!!! ಸಹಾಯಮಾಡಿದವನ ಸಂಕಟ ನೋ ಡೋ ವೆಂಕಟರಮಣ ...!!! !!!!

ವಿಶ್ವಾಸದಲ್ಲಿ ಸಾಲ ತೆಗೆದುಕೊಂಡ ಈರಭದ್ರ ಕೈಕೊಟ್ಟಾಗ !!!! ಸಹಾಯಮಾಡಿದವನ ಸಂಕಟ ನೋ ಡೋ ವೆಂಕಟರಮಣ ...!!! !!!!

ಇದು ಕಥೆಯೋ ,ಘಟನೆಯೋ ನಿರ್ಧಾರ ನಿಮಗೆ ಬಿಟ್ಟದ್ದು. ನಿಮಗೂ ಇಂತಹ ಘಟನೆ ನಡೆದಿರಬಹುದು.ಬ್ಲಾಗ್ ಲೋಕ ಬೆಳೆದಂತೆ ಪರಸ್ಪರ ಪರಿಚಯ , ಸ್ನೇಹ  ಬೆಳೆಯುತ್ತದೆ.ಒಮ್ಮೊಮ್ಮೆ ಕೆಲವರು ತಮ್ಮ ಅಸಾದ್ಯವೆನ್ನುವ ಕ್ರಿಯಾಶೀಲತೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ.ಅಂತಹವರಬಗ್ಗೆ ಬ್ಲಾಗಿಗರಿಗೂ ಆತ್ಮೀಯತೆ ಜಾಸ್ತಿಯಾಗಿ ಅವರ ಸ್ನೇಹಕ್ಕಾಗಿ ಹಾತೊರೆಯುತ್ತಾರೆ.ಇಂತಹ ಸ್ನೇಹವನ್ನು ಉಪಯೋಗಿಸಿಕೊಂಡು ಕೆಲವರು ಹಣದ ಸಹಾಯ ಪಡೆದು ವಾಪಸ್ಸು ಮಾಡಲು ಸತಾಯಿಸಿ ಸ್ನೇಹದ ಅರ್ಥವನ್ನು ಹಾಳು ಮಾಡಿ  ಸಹಾಯಮಾಡಿದ ತಪ್ಪಿಗೆ ಅಮಾಯಕರು ನರಳುವಂತೆ ಮಾಡಿದ ಘಟನೆಗಳು ವರಧಿಯಾಗುತ್ತಿವೆ.ಕೆಳಗಿನ ಒಂದು  ಉದಾಹರಣೆ ನಿಮಗಾಗಿ.
  ಮೈಸೂರಿನಲ್ಲಿ  ಅದೊಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಲವು ಸ್ನೇಹಿತರು ಸೇರಿದ್ದರು , ಬಹಳ ವರ್ಷಗಳ ನಂತರ ಸಿಕ್ಕ ಬಾಲ್ಯದ ಗೆಳೆಯ "ಈರಭದ್ರ"[ ಕಾಲ್ಪನಿಕ ಹೆಸರು]  ನಮ್ಮನ್ನು ಕೂಡಿಕೊಂಡ , ಸರಿ ನಾನೂ ನನ್ನ ಗೆಳೆಯರನ್ನು ಪರಿಚಯ ಮಾಡಿಕೊಟ್ಟೆ. ಅವನೂ ಸಹ ಎಲ್ಲರೊಡನೆ ಬೆರೆತು ತಾನು ಸಾಧಿಸಿರುವ ಸಾಧನೆಗಳಬಗ್ಗೆ , ಸಾಹಿತ್ಯ ಕೃಷಿಬಗ್ಗೆ ಹೇಳಿ ತನ್ನ ಅಸಾಧ್ಯ ಬುದ್ದಿವಂತಿಕೆ ತೋರಿದ್ದ . ಎಲ್ಲರೂ ಅವನನ್ನು ಮೆಚ್ಚುವವರೇ ಕಾರ್ಯಕ್ರಮ ಆರಂಭವಾಗಿ ಅವನ ಹೆಸರನ್ನು ಕೂಗಿದಾಗ ವೇದಿಕೆಯೇರಿದ ಅವನನ್ನು ಕಂಡು ನಮಗೆ ಖುಷಿಯೋ ಖುಷಿ, ನನಗೋ ನನ್ನ ಸ್ನೇಹಿತ ಗಣ್ಯ ವ್ಯಕ್ತಿಯೆಂಬ ಬಗ್ಗೆ ಗರ್ವ ಮೂಡಿತು. ಅವನ ಸರಧಿ ಬಂದಾಗ ನಿರರ್ಗಳವಾಗಿ ಮಾತಾಡಿ ಚಪಾಳೆ ಗಿಟ್ಟಿಸಿ  ಮೆರೆದ. ಕಾರ್ಯಕ್ರಮ ಮುಗಿದಾಗ ಎಲ್ಲರೂ ಅವನ ಹಿಂದೆ ಬಿದ್ದರು.ನನ್ನ ಹಾಗು ನನ್ನ ಗೆಳೆಯರ ಅನೇಕರ ವಿಳಾಸ , ಮೇಲ್ ಐ.ಡಿ. ,ಫೋನ್ ,ಮೊಬೈಲ್ ನಂಬರ್ ಪಡೆದ ಅವನು  ತನಗೆ ಅವಸರದ ಕೆಲಸ ವಿರುವುದಾಗಿ ತಿಳಿಸಿ ತೆರಳಿದ.ಇದಾಗಿ ಒಂದು ಆರು ತಿಂಗಳು ಕಳೆದಿರ ಬಹುದು ನನ್ನ ಸ್ನೇಹಿತರೊಬ್ಬರು ಬಂದು  ಬಾಲು ನಿಮ್ಮ ಸ್ನೇಹಿತ  ಈರಭದ್ರ ಅವರಿಗೆ ಫೋನ್ ಮಾಡಿದ್ರೆ ತೆಗೀತಾನೆ ಇಲ್ಲ, ಕೆಲವೊಮ್ಮೆ ಆಫ್ ಆಗಿರುತ್ತೆ ನಾನು ಅವರನ್ನು ಅರ್ಜೆಂಟ್ ಆಗಿ ಭೇಟಿಮಾಡ ಬೇಕೂ ಅಂದ್ರೂ , ಯಾಕೆ ಸ್ವಾಮೀ  ಇದ್ದಕಿದ್ದಂತೆ ನನ್ನ ಗೆಳೆಯನ ಬಗ್ಗೆ  ವಿಚಾರ ತೆಗೆದ್ರೀ ಅಂದೇ. ಅಯ್ಯೋ ಅದಾ ಏನಿಲ್ಲಾ ನಿಮಗೆ ಹೇಳೋದೇ ಮರ್ತು ಹೋಗಿತ್ತು  ನಿಮ್ಮ ಗೆಳೆಯನಿಗೆ ಇಪ್ಪತ್ತು ಸಾವಿರ ಸಾಲಾ ಕೊಟ್ಟಿದ್ದೆ , ಪಾಪಾ ಏನೋ ತೊಂದ್ರೆ ಇತ್ತು ಅವರಿಗೆ ನಿಮಗೂ ಹೇಳೋಕೆ ನಾಚಿಕೆ ಪಟ್ಟು ನನ್ನ ಹತ್ತಿರ ಕೇಳಿದರು  ಅಂತಹ ವ್ಯಕ್ತಿಗೆ ಇಲ್ಲಾ ಅನ್ನೋಕೆ ನನಗೆ ಮನಸು ಬರಲಿಲ್ಲ ಅದಕ್ಕೆ ಕೊಟ್ಟೆ. ಆದ್ರೆ ನೋಡಿ ನನ್ನ ಮನೆಯವಳಿಗೆ ಆರೋಗ್ಯ ಸರಿ ಇಲ್ಲ ಆಸ್ಪತ್ರೆಗೆ ಐವತ್ತು ಸಾವಿರ  ದುಡ್ಡು ಕಟ್ಟ ಬೇಕೂ ಇಂತಹ ಸಮಯ ದಲ್ಲಿ ನಿಮ್ಮ ಸ್ನೇಹಿತರು ಕೈಗೆ ಸಿಗುತ್ತಿಲ್ಲಾ , ಕಳೆದ ಆರು ತಿಂಗಳಿಂದ ಆಗ ಕೊಡ್ತೀನಿ, ಈಗ ಕೊಡ್ತೀನಿ ಅಂತಾ ಹೇಳ್ತಿದ್ದವರು ಈಗ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ ಏನು ಮಾಡೋದು ದಿಕ್ಕೇ ತೋಚುತ್ತಿಲ್ಲಾ ಅಂದ್ರೂ .ನನಗೆ ದಿಗ್ಭ್ರಮೆ  ಆಯಿತು. ಅಲ್ಲಾ ಸರ್ ನನ್ನನ್ನು ಒಂದು ಮಾತು ಕೇಳದೆ ಹಣ  ಕೊಟ್ಟು ಬಿಡೋದೇ , ಆಗ ಕೇಳದೆ ಈಗ ಬಂದು ವಿಚಾರ ಹೇಳಿದರೆ ನಾನು ಏನು ಮಾಡಲು ಸಾಧ್ಯ ಹೇಳಿ ಅಂದೇ.ಅವತ್ತು ಸಿಕ್ಕ ಸ್ನೇಹಿತ ಅವನು ಇವತ್ತಿನ ವರೆಗೂ ನನಗೆ ಒಂದು ಕರೆ ಮಾಡಿಲ್ಲ ,ಎಲ್ಲಿದ್ದಾನೋ ಹೇಗಿದ್ದಾನೋ ಒಂದೂ ತಿಳಿಯದು.ಎಂದೇ. ಅದಕ್ಕೆ ಅವರು ಸಾರ್ ಈಗ ನನ್ನ ಕಷ್ಟ ಕುತ್ತಿಗೆಗೆ ಬಂದಿದೆ ಏನು ಮಾಡಲಿ ತಿಳಿಯುತ್ತಿಲ್ಲಾ ಅಂತಾ ತಲೆಮೇಲೆ ಕೈ ಹೊತ್ತು ಕುಳಿತರು.ನನಗೆ ಮನಸ್ಸು ಕರಗಿ ಸರ್ ನನ್ನ ಬಳಿ ಹಣವಿಲ್ಲ ಬನ್ನಿ ನಮ್ಮಿಬ್ಬರಿಗೂ ಸ್ನೇಹಿತನಾದ ಕುಮಾರನನ್ನು ಕೇಳೋಣ ಅಂತಾ ಅವನಬಳಿ ತೆರಳಿದೆವು .[ ಕುಮಾರ ವ್ಯಾಪಾರಿಯಾಗಿದ್ದು, ಹಣಕಾಸು ವಹಿವಾಟು ಜೋರಾಗಿದ್ದವ.]ಅವನ ಬಳಿ ತೆರಳಿದ ನಮ್ಮನ್ನು ನೋಡಿ ಏನೋ ಮಗ ಅಪರೂಪಕ್ಕೆ ನನ್ನ ಬಳಿ ಬಂದಿದ್ದೀಯ ಏನ್ ಸಮಾಚಾರ ಅಂದಾ , ಅವನಿಗೆ ನನ್ನ ಸ್ನೇಹಿತರ ಕಥೆಯನ್ನು ಹೇಳಿ ಅವರಿಗೆ ಹಣದ ಸಹಾಯ ಮಾಡುವಂತೆ ವಿನಂತಿಸಿದೆ. ಆ ಹಣಾ ನಾ ...ಅಂತಾ ರಾಗ ತೆಗೆದ!!!! , ಯಾಕೋ ಕುಮಾರ ಅಂದ್ರೆ  ಲೋ ಬಾಲು ನನಗೆ ಈ ಸ್ನೇಹದ ಮೇಲೆ ವಿಶ್ವಾಸವೇ ಹೊರಟು ಹೋಗಿದೆ  ಮಾರಾಯ  ನಿಂಗೆ  ಒಂದು ವಿಚಾರ ತಿಳಿಸಿಲ್ಲ ಕೇಳು , ಆವತ್ತು ಸಿಕ್ಕಿದ್ದನಲ್ಲ ನಿನ್ನ ಸ್ನೇಹಿತ ನನ್ನ ಬಳಿಯೂ ಬಂದು ಒಂದು ಸೈಟ್  ಖರೀಧಿಸಲು ಹಣ ಸಾಲದಾಗಿದೆ ಅಂತಾ ಹೇಳಿ ದಾಖಲೆ ತೋರಿಸಿ ಎರಡು ಲಕ್ಷ  ಪಡೆದು ಇದನ್ನು ಒಂದು ತಿಂಗಳಲ್ಲಿ ಕೊಡುವುದಾಗಿ ತಿಳಿಸಿ ಹೋದವ ಆರು ತಿಂಗಳಾದರೂ ಪತ್ತೆ ಇಲ್ಲ . ನಾನೂ ಸಹ ಅವನಂತ  ಗಣ್ಯ ವ್ಯಕ್ತಿಗೆ ಸಹಾಯ ಮಾಡುವುದು ನನ್ನ ಪುಣ್ಯಾ ಅಂತಾ ತಿಳಿದು ಸಹಾಯ ಮಾಡಿದೆ.ನಾನು ಅವನ ಮನೆಗೆ ಹೋದ್ರೆ ಅವ ಸಿಗೋದಿಲ್ಲ , ಮೊಬೈಲ್ ನಂಬರ್ ಬದಲಾಯಿಸಿದ್ದಾನೆ, ಒಮ್ಮೆ ಹೋಗಿ ಜಗಳಾ ಆಡಿ ಬಂದೆ ಏನೂ ಪ್ರಯೋಜನವಿಲ್ಲ , ಜಾಸ್ತಿ ಮಾತಾಡಿದ್ರೆ ಪೋಲಿಸ್ ಗೆ ದೂರು ಕೊಡುವುದಾಗಿ ಹೇಳ್ತಾನೆ ಅದಕ್ಕೆ ಗುರು ಯಾರು ಸತ್ರೂ ಸರಿ ನಾನು ಸಹಾಯ ಮಾಡಲ್ಲಾ ಅಂಥಾ ತೀರ್ಮಾನಿಸಿದ್ದೇನೆ. ಅಂದಾ . ಅವನಿಂದ ಬಂದ ದಾರಿಗೆ ಸುಂಕವಿಲ್ಲವಿಂದು ವಾಪಸ್ಸು ಬಂದು ಬೇರೆ ಗೆಳೆಯರನ್ನು ಕೇಳಿದ್ರೆ ನಮ್ಮ ಈರ ಭದ್ರ ಒಬ್ಬರಿಗೆ ಗೊತ್ತಾಗದಂತೆ ಮತ್ತೊಬ್ಬರಿಂದ  ಹಣ ಸಾಲ ಪಡೆದು ಉಂಡೆ ನಾಮ ತಿಕ್ಕಿದ್ದ. ಕೊನೆಗೆ ಗುರುತಿನ ಬ್ಯಾಂಕ್ ಮ್ಯಾನೇಜರ್ ಒಬ್ಬರ ಸಹಕಾರ ಪಡೆದು ಸ್ನೇಹಿತನಿಗೆ ಸಾಲ ನೀಡಿಸಿ ಅವನ ಸಮಸ್ಯೆ ಬಗೆಹರಿಸಿದ್ದಾಯ್ತು. ಇಂತಹ ಘಟನೆ ನಿಮಗೂ ನಡೆದಿರ ಬಹುದು, ದಯಮಾಡಿ ಒಬ್ಬ ವ್ಯಕ್ತಿಯ ಕ್ರಿಯಾಶೀಲತೆ , ಬುದ್ದಿವಂತಿಕೆ ,ಇವುಗಳಿಗೆ ಮಾರುಹೋಗಿ ಅವರನ್ನು ದೇವರೆಂದು ತಿಳಿದು ಹಣ ಸಹಾಯ ಮಾಡಿ ನರಳ ಬೇಡಿ , ಕೆಲವರಿಗೆ ತಮ್ಮ ಕ್ರಿಯಾಶೀಲತೆ, ಬುದ್ದಿವಂತಿಕೆ, ಜ್ಞಾನ ಇವುಗಳನ್ನು ಮೋಸ ಮಾಡಲು ಉಪಯೋಗಿಸಿಕೊಳ್ಳುವ ಚಟವಿರುತ್ತದೆ .ಇದರಿಂದ ನರಳುವ ಇತರ ಅಮಾಯಕರ ನೋವು ಅವರಿಗೆ   ಅರ್ಥವಾಗುವುದಿಲ್ಲ ದಯಮಾಡಿ ಹಣ ಸಹಾಯ ಮಾಡುವ ಮೊದಲು ಯೋಚಿಸಿ ನಂತರ ನಿರ್ಧರಿಸಿ, ಹಣ ಸಹಾಯ ಮಾಡಿ ಆ ತಪ್ಪಿಗೆ ನರಳುವ ಸರಧಿ ನಿಮ್ಮದಾಗದಿರಲಿ. ಅಥವಾ ಈಗಾಗಲೇ ಮೋಸ ಹೋಗಿದ್ದರೆ  ನಿಮ್ಮ ಇತರ ಸ್ನೇಹಿತರನ್ನು ಎಚ್ಚರ ಗೊಳಿಸಿ.

Comments