ಹಿಮಗಿರಿಯ ಮಡಿಲಲ್ಲಿ..................
ಮನಸ್ಸಿನ ತುಂಬಾ ಹಿಮಗಿರಿಯನ್ನು ಕಾಣುವಾಸೆಯಿಂದ ಅಂದು ಮೊದಲಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡುವವರಿದ್ದೆವು. "ಡಮ್ ಡಮ್" ವಿಮಾನ ನಿಲ್ದಾಣದಿಂದ "ಬಾಗ್ ಡೊದ್ರಾ" ಕ್ಕೆ ಹೋಗಬೇಕಾಗಿತ್ತು. ವಿಮಾನದಲ್ಲಿ ಹಕ್ಕಿಯಹಾಗೆ ಮೋಡಗಳನ್ನು ಹಾದುಹೋಗುವ ಅನಿರ್ವಚನೀಯ ಆನಂದವನ್ನನುಭವಿಸಿದೆವು. ಅಲ್ಲಿಯೂ ನನಗೆ ಕಿಡಕಿಯ ಪಕ್ಕದ ಸೀಟೇ ಸಿಕ್ಕಿತ್ತು. ವಿಮಾನ ಮೇಲೇರುವಾಗ ಕೆಳಗೆ ನೋಡಿದರೆ ಕಲ್ಕತ್ತಾ ನಗರ ಆಟಿಕೆಗಳಿಂದ ಜೋಡಿಸಿದ ಮಾದರಿಯ ಹಾಗೆ ಕಾಣುತ್ತಿತ್ತು. ಇನ್ನೂ ಮೇಲೇರಿದಾಗ ಹತ್ತಿಯನ್ನು ವಿಮಾನದ ಸುತ್ತಾ ಹರಡಿದ ಹಾಗೆ ಕಾಣುತ್ತಿತ್ತು. ಸಿನಿಮಾಗಳಲ್ಲಿ ಮೋಡಗಳ ನಡುವೆ ದೇವತೆಗಳು ಪುಷ್ಪಕ ವಿಮಾನದಲ್ಲಿ ಚಲಿಸುವುದನ್ನು ತೋರಿಸುವಂತೆ ನಾವೂ ಮೋಡಗಳ ಮೇಲೆ ತೇಲಾಡುತ್ತಿರುವಂತೆ ಭಾಸವಾಗುತ್ತಿತ್ತು. ಇಷ್ಟೆಲ್ಲದರ ನಡುವೆ ಮೈಮರೆತಿದ್ದರೂ, ಒಮ್ಮೆ ಮನೆಮಕ್ಕಳ ನೆನಪು ಬಂದು ಒಮ್ಮೆ ಸುರಕ್ಷಿತವಾಗಿ ವಿಮಾನ ಕೆಳಗಿಳಿದರೆ ಸಾಕು ಎನ್ನಿಸುತ್ತಿತ್ತು. ಅಷ್ಟರಲ್ಲಿಯೇ ಹಿಮಾಲಯದ ಬುಡದಲ್ಲಿರುವ ಪುಟ್ಟ ವಿಮಾನ ನಿಲ್ದಾಣ "ಬಾಗ್ ಡೊದ್ರಾ" ದಲ್ಲಿ ನಮ್ಮ ವಿಮಾನ ಇಳಿಯಿತು.
ಅಲ್ಲಿಂದ ಒಂದು ವ್ಯಾನಿನಲ್ಲಿ ಹಿಮಾಲಯ ಪರ್ವತವನ್ನು ಏರಲು ಏರ್ಪಾಡಾಗಿತ್ತು. ಅಷ್ಟೊತ್ತಿಗಾಗಲೇ ರಾತ್ರಿಯಾಗುತ್ತಾ ಬಂದುದರಿಂದ ಕತ್ತಲಲ್ಲಿ ಏನೂ ಕಾಣುತ್ತಿರಲಿಲ್ಲ. ವಾಹನದ ದೀಪಗಳ ಬೆಳಕಿನಲ್ಲಿ ಮುಂದಿರುವ ಹಾವಿನಂತಹ ರಸ್ತೆ ಮಾತ್ರ ಕಾಣುತ್ತಿತ್ತು. ನನ್ನಲ್ಲಿ ಹಿಮಾಲಯವನ್ನು ನೋಡಬೇಕೆಂಬ ಬಯಕೆ ತೀವ್ರವಾಗುತ್ತಿದ್ದಂತೆ, ಇವರನ್ನು ಕೇಳಿದೆ, " ರೀ, ಹಿಮಾಲಯ ಪರ್ವತ ನಮ್ಮ ಕಾಣಿಗೆ ಬೀಳುವುದು ಯಾವಾಗ?" ಎಂದು. ಅದಕ್ಕೆ ಅವರು, " ನೀನು ಕೇಳಿದಾಕ್ಷಣ ಎದುರು ಬಂದು ನಿನ್ನ ಮುಂದೆ ನಿಲ್ಲೋದಕ್ಕೆ ಅದೇನು ನಿನ್ನ ಗಂಡನ ಹಾಗೆ ಎಂದುಕೊಂಡೆಯಾ ? ಅದು ಇದ್ದಲ್ಲಿಗೇ ನಾವು ಹೋಗಬೇಕು. ಅದಕ್ಕೆ ಪರ್ವತಾರೋಹಣ ಮಾಡುವುದು ಗೊತ್ತಿರಬೇಕು" ಎಂದರು. ಆಗ ಒಂದು ಥರಾ ನಿರಾಶೆಯಿಂದ ನನ್ನ ಉತ್ಸಾಹವೆಲ್ಲಾ ಇಳಿದುಹೋಯಿತು.
ಅಷ್ಟರಲ್ಲಿ ಡಾರ್ಜಿಲಿಂಗ್ ಬಂದೇಬಿಟ್ಟಿತು. ಅಲ್ಲಿ ಒಂದು ಬೆಟ್ಟದ ತುದಿಯ ಮೇಲಿದ್ದ ಹೋಟೆಲ್ಲಿಗೆ ನಮ್ಮನ್ನು ಕರೆದುಕೊಂಡು ಹೋದರು. ಅಲ್ಲಿಂದ ಕೆಳಗೆ ನೋಡಿದಾಗ ರಾತ್ರಿಯ ಕತ್ತಲಲ್ಲಿ ನಕ್ಷತ್ರಗಳಿಂದ ತುಂಬಿದ ಆಕಾಶದಂತೆ ಫಳಫಳ ಹೊಳೆಯುತ್ತಿರುವ ಪುಟ್ಟ ಪುಟ್ಟ ಊರುಗಳ ದೀಪಗಳು. ಆಷ್ಟರವರೆಗೆ ವ್ಯಾನಿನಲ್ಲಿ ಬೆಚ್ಚಗೆ ಕುಳಿತು, ಅದರಿಂದ ಹೊರಗೆ ಬಂದಾಗ ಒಮ್ಮಿಂದೊಮ್ಮೆಗೆ ಅನುಭವವಾದ ಚಳಿ ಮೈಯನ್ನು ಮರಗಟ್ಟಿಸುವಂತಿತ್ತು. ಹೋಟೆಲ್ಲಿನ ಒಳಗೆ ಹೋಗಿಗೂಡಿನ ಎದುರು ಕುಳಿತು ಬಿಸಿಬಿಸಿ ಕಾಫಿ ಕುಡಿದಾಗ ಬೆಚ್ಚಗಿನ ಹಿತಾನುಭವವಾಯಿತು. ಅದು ಸಾಕಷ್ಟು ಆಧುನಿಕ ಪರಿಕರಗಳಿಂದ ಸುಸಜ್ಜಿತವಾದ ಹೋಟೆಲ್. ರಾತ್ರಿ ಊಟದ ನಂತರ ರಜಾಯಿಗಳನ್ನು ಹೊದ್ದು ಮಲಗಿದ್ದೊಂದೇ ನೆನಪು. ಅರ್ಧ ರಾತ್ರಿಯ ಹೊತ್ತಿನಲ್ಲಿ ನಮ್ಮ ರೂಮಿನ ಎದುರು ಜನರ ಗದ್ದಲ ಕೇಳಿಸಿತು. ಆಗಿನ್ನೂ ಬೆಳಗಿನ ಜಾವ ನಾಲ್ಕೂವರೆ ಗಂಟೆಯಾಗಿತ್ತಷ್ಟೇ. ನಾವೂ ಎದ್ದು ಹೊರಗೆ ಬಂದು ನೋಡಿದರೆ, ಎಲ್ಲರೂ ನಮ್ಮ ರೂಮಿನ ಪಕ್ಕದಲ್ಲೇ ಇದ್ದ ವರಾಂಡದಲ್ಲಿ ಹಾಕಿದ ಕುರ್ಚಿಗಳಲ್ಲಿ ಕುಳಿತು ಕಾಫಿ ಕುಡಿಯುತ್ತಿದ್ದರು. ಅವರೆಲ್ಲಾ ತಾವು ಕುಳಿತ ಸ್ಥಳಕ್ಕೆ ನೇರವಾಗಿ ಎದುರಲ್ಲಿ ಕಾಣುತ್ತಿದ್ದ ಪರ್ವತಶ್ರೇಣಿಯತ್ತ ತಮ್ಮ ದೃಷ್ಟಿಯನ್ನು ಕೀಲಿಸಿದ್ದರು. ಅಲ್ಲಿ ಕಾಣುತ್ತಿದ್ದ ರೋಚಕ ದೃಶ್ಯವನ್ನು ವರ್ಣಿಸಲು ನನಗಂತೂ ಸಾಧ್ಯವಿಲ್ಲ. ಬಂಗಾರದ ಎಳೆಗಳಿಂದ ಹೆಣೆದ ಬಟ್ಟೆಯಿಂದ ತನ್ನ ಅನುಪಮ ಸೌಂದರ್ಯವನ್ನು ಮರೆಮಾಡಿಕೊಂಡು ಕುಳಿತ ಹೆಣ್ಣಿನ ಹಾಗೆ, ಹಿಮಾಲಯ ಪರ್ವತ, ಹೇಮಗಿರಿಯ ಹಾಗೆ ಫಳಫಳ ಹೊಳೆಯುತ್ತಿತ್ತು. ಆಗತಾನೆ ಬೆಟ್ಟಗಳ ಮರೆಯಿಂದ ಬಂದ ಬಾಲರವಿಯ ಕಿರಣಗಳು ಎದುರಿನ ಬೆಟ್ಟದ ಮೇಲೆ ಬಿದ್ದಾಗ, ಪ್ರಿಯತಮನು ತನ್ನ ಪ್ರೇಯಸಿಯ ಚೆಲುವನ್ನು ನೋಡಲು ಆಕೆ ಧರಿಸಿದ್ದ ದುಕೂಲವನ್ನು ಪಕ್ಕಕ್ಕೆ ಸರಿಸುವಂತೆ, ಮಂಜಿನ ತೆರೆ ಆಗಾಗ್ಗೆ ಪಕ್ಕಕ್ಕೆ ಸರಿದು, ಹೊಂಬಣ್ಣದಲ್ಲಿ ಮಿಂದ ಪರ್ವತಶ್ರೇಣಿಯನ್ನು ಅನಾವರಣಗೊಳಿಸುತ್ತಿತ್ತು. ಇದ್ದಕ್ಕಿದ್ದ ಹಾಗೇ ಕಣ್ಣ ಮುಂದೆ ಕಂಡುಬಂದ ಇಂತಹ ಅಲೌಕಿಕ ದೃಶ್ಯವನ್ನು ಕಾಣುವ ಅವಕಾಶ ಹೀಗೆ ದೊರೆತೀತೆಂದು ನಾನು ಕನಸುಮನಸ್ಸಿನಲ್ಲೂ ಎಣಿಸಿರಲಿಲ್ಲ. ಕಣ್ಣು ಮುಚ್ಚಿದರೆ ಎಲ್ಲಿ ಆ ಅದ್ಭುತ ದೃಶ್ಯ ಮಾಯವಾದೀತೋ ಎಂದು ಕಣ್ಣುರೆಪ್ಪೆ ಅಲುಗಿಸದೆ ನೋಡುತ್ತಿದ್ದೆ. ಈ ಸುವರ್ಣಬೆಟ್ಟಕ್ಕೂ ಸೂರ್ಯನಿಗೂ ನಡುವೆ ವರ್ಣರಂಜಿತ ಕಾಮನಬಿಲ್ಲು ಸೇತುವೆಯ ಹಾಗೆ ಮೂಡಿ ಬಂದಿತ್ತು.
ಇಂತಹ ಅಧ್ಬುತ ಅನುಭವದಲ್ಲಿ ಮೈಮರೆತಿದ್ದಾಗ, "ಮೇಡಂ, ಕಾಫಿ ಲೀಜೀಯೇ..." ಎನ್ನುವ ಮಾತು ಎಚ್ಚರಿಸಿತು. "ಮುಝೆ ಅಬ್ ಕಾಫಿ ನಹಿ ಚಾಹಿಯೇ....ಬಾದ್ ಮೇ ಪೀತೀ ಹೂಂ...." ಎಂದೆ. ಆ ಅನುಭವದಿಂದ ಹೊರಬರಲು ನಾನು ಸಿದ್ಧಳಿರಲಿಲ್ಲ. ಇವರು ಬಂದು ಶಾಲು ಹೊಸಿದಿದಾಗಲೇ ಈ ಲೋಕಕ್ಕೆ ಮರಳಿ ಬಂದೆ. ಜಾತ್ರೆಯಲ್ಲಿ ಮಕ್ಕಳ ಕೈಗೆ ತಾವು ಬಯಸಿದಂತಹ ಆಟಿಕೆ ಕೈಗೆ ದೊರಕಿದಷ್ಟು ಸಂತೋಷವಾಗಿತ್ತು. "ಈಗ ನೀನು ತಿಂಡಿ ತಿನ್ನಲು ಬರುತ್ತೀಯಾ ? ಆ ಬೆಟ್ಟ ಎಲ್ಲಿಗೂ ಓಡಿ ಹೋಗೋಲ್ಲ. ನಿನ್ನ ಎದುರಿಗೆ ನನ್ನ ಹಾಗೆ ಕೈಕಟ್ಟಿಕೊಂಡು ಇರುತ್ತದೆ. ಆದರೆ ಹೋಟಿಲ್ಲಿನಲ್ಲಿ ಮಾತ್ರ ಹೊತ್ತಾದರೆ ತಿಂಡಿ ಸಿಗುವುದಿಲ್ಲ. " ಎಂದು ಬಲವಂತವಾಗಿ ನನ್ನನ್ನು ಒಳಗೆ ಕರೆದುಕೊಂಡು ಹೋದರು.
ತಿಂಡಿ ತಿಂದು, ಸ್ನಾನ ಮಾಡಿ, ಊರಲ್ಲೆಲ್ಲಾ ತಿರುಗಾಡಿಕೊಂಡು ಬರಲು ಹೋದೆವು.ಅಷ್ಟೊತ್ತಿಗಾಗಲೇ ಬಿಸಿಲೇರಿದ್ದರಿಂದ, ಮಂಜು ಕರಗಿ ಮಾಯವಾಗಿತ್ತು. ತಂಪು ಹವೆಯಲ್ಲಿ ತಿರುಗಾಡುವುದು ತುಂಬಾ ಹಿತಕರವಾಗಿತ್ತು. ಅಲ್ಲಿಯ ಜನರು ಕುಳ್ಳಗೆ, ಕೆಂಪು ಕೆಂಪಾಗಿ, ಸೇಬುಹಣ್ಣಿನ ಹಾಗೆ ಇರುತ್ತಾರೆ. ಕಪ್ಪು ಕೂದಲು, ಕೆಂದುಟಿ ಇನ್ನೂ ಮೆರುಗು ನೀಡುತ್ತದೆ ಅವರ ಲಾವಣ್ಯಕ್ಕೆ. ನಮ್ಮ ಹೋಟೆಲ್ ಎದುರುಗಡೆಯೇ ಒಂದು ರೆಸಿಡೆನ್ಷಿಯಲ್ ಶಾಲೆ ಇತ್ತು. ಅದರಲ್ಲಿ ವಿವಿಧ ದೇಶಗಳ ಮಕ್ಕಳು ಓದುತ್ತಿದ್ದರು. ಅವರೆಲ್ಲಾ ಗುಂಪು ಗುಂಪಾಗಿ ಬಣ್ಣ ಬಣ್ಣದ ಸ್ವೆಟರ್ ಗಳನ್ನು ಹಾಕಿಕೊಂಡು ನಗುನಗುತ್ತ ಓಡಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬದೂಟವಾಗಿತ್ತು. ಆಲ್ಲಲ್ಲಿ ಬೆಟ್ಟದ ಮೇಲೆ ಜನರು ಪುಟ್ಟಪುಟ್ಟ ಮನೆಗಳನ್ನು ಕಟ್ಟಿಕೊಂಡಿದ್ದರು. ಅವರ ಪುಟ್ಟ ಮಕ್ಕಳು ಮನೆಯ ಎದುರುಗಡೆ ಆಟವಾಡುತ್ತಿದ್ದರು. ಚಳಿಯಿಂದ ಅವರ ಕೆನ್ನೆಗಳೆಲ್ಲಿ ರಕ್ತ ಹೆಪ್ಪುಗಟ್ಟಿದಂತೆ ಕಾಣುತ್ತಿತ್ತು. ಆಲ್ಲಿಯ ಜನ ತುಂಬಾ ಕಷ್ಟಜೀವಿಗಳು. ಅಲ್ಪ ತೃಪ್ತರು. ಬೆನ್ನಮೇಲೆ ದೊಡ್ಡ ದೊಡ್ಡಾ ಬಿದಿರಿನ ಬುಟ್ಟಿಗಳಲ್ಲಿ ಕಟ್ಟಿಗೆ, ಇತರ ಸಾಮಾನುಗಳನ್ನು ಹೊತ್ತು ಓಡಾಡುತ್ತಿದ್ದರು. ಹಾಗೇಯೇ ಸುನಾಯಾಸವಾಗಿ ಬೆಟ್ಟವನ್ನು ಹತ್ತುತ್ತಿದ್ದರು. ನಮ್ಮನ್ನು ನೋಡಿದ ತಕ್ಷಣ ಅವ್ರ ಮುಖಗಳಲ್ಲಿ ನಗು ಕಾಣುತ್ತಿತ್ತು. ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ನಮ್ಮ ಕೋಣೆಗೆ ಬರುತ್ತಿದ್ದ ಒಬ್ಬ ಕೆಲಸದವನನ್ನು ಹಿಂದಿಯಲ್ಲಿ ಮಾತನಾಡಿಸಿ ಅಲ್ಲಿಯ ಜೀವನದ ಬಗ್ಗೆ ಸ್ವಲ್ಪ ತಿಳಿದುಕೊಂಡೆ. ಅವನಿಗೆ ಮದುವೆಯಾಗಿ ಎರಡು ವರ್ಷವಾಗಿತ್ತಂತೆ. ಅವನ ಹೆಂಡತಿ ಎಂಟು ತಿಂಗಳ ಬಸುರಿ. ಅವನಿಗೆ ಸೀತಾಫಲದ ಹಣ್ಣುಗಳನ್ನು ಕೊಟ್ಟೆ. "ಏ ಕ್ಯಾ ಹೈಜೀ.." ಎಂದು ಆ ಹಣ್ಣುಗಳನ್ನು ತಿರುಗಿಸಿ ಮುರುಗಿಸಿ ನೋಡಲು ಶುರುಮಾಡಿದ. ಸೀತಾಫಲ ಹಣ್ನುಗಳನ್ನು ತಿನ್ನುವ ವಿಧಾನವನ್ನು ಅವನಿಗೆ ತೋರಿಸಿಕೊಟ್ಟೆ. "ಬಹುತ್ ಅಚ್ಛಾ ಹೈಜೀ..." ಎಂದು ಸಂತೋಷದಿಂದ ಅವುಗಳನ್ನು ತೆಗೆದುಕೊಂಡು ಹೋದ.
ಅಲ್ಲಿಯ ಬಜಾರು ತುಂಬಾ ಚಿಕ್ಕದು. ಕೆಲವು ಅಂಗಡಿಗಳಲ್ಲಿ ಅಲಂಕಾರಿಕ ವಸ್ತುಗಳನ್ನು ಮಾರುತ್ತಾರೆ. ಕಾಶ್ಮೀರಿ ಶಾಲು, ಸ್ವೆಟರ್ ಗಳನ್ನಂತೂ ಬೀದಿಯಲ್ಲಿಯೇ ಮಾರಾಟಕ್ಕಿಟ್ಟುಕೊಂಡಿರುತ್ತಾರೆ. ಇನ್ನು ಟೇಬಲ್ ಕ್ಲಾತ್, ಬೆಡ್ ಶೀಟ್ ಗಳನ್ನು ಕೈನಲ್ಲಿಯೇ ಕಸೂತಿ ಮಾಡಿ ಮಾರಾಟಕ್ಕಿಟ್ಟಿರುತ್ತಾರೆ. ಹೆಂಗಸರು ಸ್ವೆಟರ್ ಗಳನ್ನು ಹೆಣೆಯುತ್ತಿರುವಂತೆಯೇ ತಮ್ಮ ಇತರ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಮಾರೆನೇ ದಿನ ಬೆಳಿಗ್ಗೆ ಎದ್ದವರೇ ಡಾರ್ಜಿಲಿಂಗ್ ಊರಿನ ಹೊರಭಾಗದಲ್ಲಿರುವ ಟೀ ತೋಟಗಳನ್ನು ನೋಡಲು ಹೊರಟೆವು. ಟೀ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಬಹಳಷ್ಟು ಮಂದಿ ಸ್ತ್ರೀಯರೇ. ಅವರು ತಮ್ಮ ಸಾಂಪ್ರದಾಯಿಕೆ ಉಡುಗೆಗಳನ್ನುಟ್ಟು, ಬೆನ್ನಿನ ಹಿಂಭಾಗಕ್ಕೆ ದೊಡ್ಡ ದೊಡ್ಡ ಬಿದಿರಿನ ಬುಟ್ಟಿಗಳನ್ನು ಕಟ್ಟಿಕೊಂಡಿರುತ್ತಾರೆ. ಬಾಯಲ್ಲಿ ಹಾಡುಗಳನ್ನು ಗುಣುಗುಣಿಸುತ್ತಾ, ಸಾಲುಸಾಲಾಗಿ ಸಾಗುತ್ತಾ, ಎಲೆಗಳನ್ನು ಆಯ್ದು ಬುಟ್ಟಿಗಳಲ್ಲಿ ಸಂಗ್ರಹಿಸುತ್ತಾರೆ. ಪ್ರತಿ ದಿನ ಅವರು ಸಂಗ್ರಹಿಸಿದ ಟೀ ಎಲೆಗಳ ಪ್ರಮಾಣಕ್ಕನುಸಾರವಾಗಿ ಕೂಲಿ ಪಡೆಯುತ್ತಾರೆ. ಆಗಲೂ ಅವರ ಮುಖಗಳಲ್ಲಿ ನಿಷ್ಕಲ್ಮಷ ನಗುವನ್ನು ಕಾಣಬಹುದಿತ್ತು. ತೋಟದ ಪಕ್ಕದಲ್ಲಿ ಒಂದು ಚಾಯ್ ಅಂಗಡಿಯಿರುತ್ತದೆ. ಅಲ್ಲಿಗೆ ಬಂದ ಪ್ರವಾಸಿಗಳಿಗೆ, ಅಲ್ಲಿಯೇ ತಯಾರಿಸಿದ ತಾಜಾ ಚಹಾ ದೊರೆಯುತ್ತದೆ. ಪ್ರವಾಸಿಗಳಿಗೆ ಅವರ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಲು ಬಾಡಿಗೆಗೂ ದೊರೆಯುತ್ತವೆ. ಪ್ರವಾಸಿಗಳು ಅವುಗಳನ್ನು ಧರಿಸಿ ಅವರ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅವರು ತಮಅದೇ ರೀತಿ ನಾನು ಮತ್ತು ನನ್ನ ಗೆಳೆತಿಯರು ಅವರ ಜೊತೆ ಫೋಟೋ ತೆಗೆಸಿಕೊಂಡಾಗ ನಮ್ಮ ಮುಖದಲ್ಲಿ ಫೋಟೋಗಾಗಿ ಮೂಡಿಸಿದ ನಮ್ಮ ಕೃತಕ ನಗುವಿಗೂ ಇದ್ದ ವ್ಯತ್ಯಾಸ ಸುಲಭವಾಗಿ ಗೋಚರಿಸುತ್ತಿತ್ತು.
ಅಂದು ರತ್ನಗಂಬಳಿ ತಯರಿಸುವ ಮಗ್ಗಗಳಿಗೆ ಭೇಟಿ ಕೊಟ್ಟೆವು. ಅಲ್ಲಿ ಕುರಿಗಳ ಉಣ್ಣೆಯಿಂದ ತಯಾರಿಸಿದ ನೂಲನ್ನು ಮಗ್ಗಗಳಿಗೆ ಜೋಡಿಸಿ, ಸುಂದರವಾದ ಕಲಾತ್ಮಕವಾದ ರತ್ನಗಂಬಳಿಗಳನ್ನು ನೇಯುತ್ತಾರೆ. ಅಲ್ಲಿಯೂ ಕೂಡ ಕೆಲಸ ಮಾಡುವವರು ಬಹಳಷ್ಟು ಮಂದಿ ಸ್ತ್ರೀಯರು. ಕೆಲವರಂತೂ ಪುಟ್ಟ ಪುಟ್ಟ ಮಕ್ಕಳನ್ನು ತಮ್ಮ ಬೆನ್ನಿಗೆ ಕಟ್ಟಿಕೊಂಡೇ ಕೆಲಸ ಮಾಡುತ್ತಿದ್ದರು. ಈ ಕಾರ್ಮಿಕರಲ್ಲಿ ವಯಸ್ಸಾದವರೂ ಇದ್ದರು. ಅವರ ಪಳಗಿದ ಕೈಗಳು ಬಹಳ ಚುರುಕಾಗಿ ಕೆಲಸ ಮಾಡುತ್ತಿದ್ದುವು. ಅವರ ಮುಖಗಳಲ್ಲಿ ಕಾಣುತ್ತಿದ್ದ ಆಳವಾದ ಗೆರೆಗಳು ಅವರ ಶ್ರಮದಾಯಕೆ ಜೀವನವನ್ನು ಎತ್ತಿ ತೋರಿಸುತ್ತಿದ್ದುವು. ಸಿದ್ಧವಾಗಿದ್ದ ರತ್ನಗಂಬಳಿಗಳನ್ನು ಅಲ್ಲಿ ಮಾರಾಟಕ್ಕೂ ಇಟ್ಟಿದ್ದರು. ಅವುಗಳನ್ನು ಮಾರಾಟ ಮಾಡುವುದರಲ್ಲಿ ಆಸಕ್ತಿಯಿದ್ದರೂ, ಅದರಲ್ಲಿ ಹೆಚ್ಚು ಸಮಯ ಕಳೆಯದೆ ತಮ್ಮ ನೇಯ್ಗೆ ಕೆಲಸದ ಮೇಲೆಯೇ ಹೆಚ್ಚು ಲಕ್ಷ್ಯವನ್ನಿತ್ತಿದ್ದರು.
ಮಾರನೇ ದಿನ ಬೆಳಿಗ್ಗೆ ನಾಲ್ಕು ಗಂಟೆಗೆ ನಮಗೆಲ್ಲರಿಗೂ ಸಿದ್ಧವಾಗಿರಲು ಹೇಳಿದ್ದರು. ಅಲ್ಲಿಂದ ಟೈಗರ್ ಪಾರ್ಕಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದರು. ಆದರೆ ಅದರ ವಿಶೇಷತೆಯ ಬಗ್ಗೆ ಎನೂ ಹೇಳಿರಲ್ಲಿಲ್ಲ. ನಾವು ಅಲ್ಲಿಗೆ ತಲುಪಿದಾಗ ಸುತ್ತಲೂ ಬೆಳ್ಳಿಬೆಟ್ಟಗಳ ಕೋಟೆಯನ್ನು ಹೊಕ್ಕಂತಾಯಿತು. ನಾವು ನಿಂತ ಭಾಗದಿಂದ ಸಾಲಾಗಿ ನಿಂತ ಪರ್ವತ ಶಿಖರಗಳು ಕಿರೀಟಧಾರಿಗಳಾಗಿ ನಿಂತ ಸುಂದರ ಅಪ್ಸರೆಯರ ಹಾಗೆ ಕಾಣುತ್ತಿದ್ದುವು. ಇಂದ್ರನ ಒಡ್ಡೋಲಗದಲ್ಲಿ ದೇವತೆಗಳೆಲ್ಲಾ ಸೂರ್ಯನ ದರ್ಶನಕ್ಕಾಗಿ ಕಾದು ನಿಂತಿರುವ ಹಾಗೆ ಕಾಣುತ್ತಿತ್ತು. ಘನ ಗಾಂಭೀರ್ಯದಿಂದ ರಥದಲ್ಲಿ ಕುಳಿತ ಸೂರ್ಯ ಮೆಲ್ಲಮೆಲ್ಲನೆ ಮೇಲೇರಿ ಬಂದು ತನ್ನ ಕೃಪಾದೃಷ್ತಿಯನ್ನು ಎಲ್ಲರ ಮೇಲೆ ಬೀರುವಂತೆ ಸೂರ್ಯನ ಕಿರಣಗಳು ಬೆಳ್ಳಿಬೆಟ್ಟಗಳನ್ನು ಬೆಳಗತೊಡಗಿದುವು. ಬೆಟ್ಟಗಳ ಮೇಲೆ ಬಿದ್ದ ಸೂರ್ಯನ ಕಿರಣಗಳು ಪ್ರತಿಫಲಿತವಾಗಿ ವರ್ಣರಂಜಿತವಾದ ಪುಷ್ಪಗಳನ್ನು ಸೂರ್ಯನ ಮೇಲೆ ಎರಚುತ್ತಿರುವಂತೆ ಭಾಸವಾಯಿತು. ಇಂತಹ ಮಂಗಳ ಸಮಯದಲ್ಲಿ ಮಂತ್ರಘೋಷಗಳು ಮೊಳಗಿದಂತೆ ಹಕ್ಕಿಗಳು ಇಂಪಾದ ಸ್ವರದಲ್ಲಿ ಹಾಡತೊಡಗಿದುವು. ಆಗ ಅಲ್ಲಿ ನೆರೆದಿದ್ದ ಜನರೆಲ್ಲಾ ಮಂತ್ರಮುಗ್ಧರಾಗಿ ಧನ್ಯೆತೆಯ ಭಾವದಿಂದ ಸ್ಫೂರ್ತಿಗೊಂಡು ತಮಗೆ ತೋಚಿದ ರೀತಿಯಲ್ಲಿ ವರ್ಣಿಸಲಾರಂಭಿಸಿದರು.
ಇಂತಹ ಅಧ್ಬುತ ಅನುಭವದಲ್ಲಿ ಪುಳಕಗೊಂಡು ಕಂಗಳಲ್ಲಿ ಮೂಡಿದ ಆನಂದಬಾಷ್ಪಗಳನ್ನು ಒರೆಸಿಕೊಳ್ಳುತ್ತಿದ್ದೆ. ನನ್ನ ಪಕ್ಕದಲ್ಲಿಯೇ ನಿಂತಿದ್ದ ನನ್ನವರು, "ಹುಂ, ಎಂದು ಯಾವಾಗ ಹೋಗುತ್ತೀ...?" ಎಂದು ಕೇಳಿದಾಗ, ಈ ವಿಲಕ್ಷಣ ಪ್ರಶ್ನೆಯಿಂದ ಗಲಿಬಿಲಿಗೊಂಡು, "ಎಲ್ಲಿಗೆ ?" ಎಂದು ಕೇಳಿದೆ. "ಅದೇ , ನೀನು ಯಾವಾಗಲೂ ಹೇಳುತ್ತಿದ್ದೆಯಲ್ಲ... ತಾಜ್ ಮಹಲ್ ಮತ್ತು ಹಿಮಾಲಯ ಇವೆರಡನ್ನು ನೋಡಿದ ಮೇಲೆ ದೇವರು ನನ್ನನ್ನು ಯಾವಾಗ ಕರೆದರೂ ನಾನು ಸಿದ್ಧ ಎಂದು ಹೇಳುತ್ತಿದ್ದೆಯಲ್ಲಾ......" "ಓಹೋ ಅದಕ್ಕೇ ಆದಷ್ಟು ಬೇಗ ಬಿಡುಗಡೆಯಾಗಲೀ ಎಂದು ಇಲ್ಲಿಗೆ ಕರೆದುಕೊಂಡು ಬಂದಿರಾ ? " ಎಂದು ನಾನು ಮಾರುತ್ತರವಿತ್ತಾಗ, ಇಬ್ಬರೂ ಅಬ್ಬರಿಸಿ ನಕ್ಕೆವು. ಈಂತಹ ರಮಣೇಯವಾದ ಜಾಗಕ್ಕೆ "ಟೈಗರ್ ಪಾರ್ಕ್" ಎಂಬ ಹೆಸರನ್ನು ಯಾವ ಅರಸಿಕನು ಇಟ್ಟನೋ ಎಂದುಕೊಂಡೆ. "ದೇವದೇವನ ಒಡ್ಡೋಲಗ" ಎಂದು ಹೆಸರಿಟ್ಟಿದ್ದರೆ ಉಚಿತವಾಗಿರುತ್ತಿತ್ತೇನೋ. ಸೂರ್ಯ ಮೇಲೆ ಬಂದ ಹಾಗೆಲ್ಲಾ ಬೆಟ್ಟಗಳಿಗೆಲ್ಲಾ ಕ್ಷೀರಾಭಿಷೇಕ ಮಾಡಿದಂತೆ ಬೆಳ್ಳಗೆ ಫಳಫಳ ಹೊಳೆಯುತ್ತಿದ್ದುವು. ಅಬ್ಬಾ ಯಗಯುಗಗಳು ಕಳೆದರೂ ಕವಿಗಳಿಗೆ ಸ್ಫೂರ್ತಿ ನೀಡುತ್ತಾ ಅವರಿಂದ ಅದ್ವೀತಿಯವಾದ ಕೃತಿಗಳನ್ನು ಸೃಷ್ಟಿಮಾಡಿಸಿದ ಹಿಮಾಲಯವನ್ನು ನೋಡಿದವರೇ ಧನ್ಯರು. ಅಲ್ಲಿಂದ ಸ್ವಲ್ಪ ದೂರದ ತನಕ ಕಾಲಿನಡಿಗೆಯಲ್ಲೇ ಸುತ್ತಲಿನ ಸೌಂದರ್ಯವನ್ನು ಸವಿಯುತ್ತಾ ಹೊರೆಟೆವು. ಅಲ್ಲಿದ್ದ ಮೂರುದಿನಗಳು ಮೂರು ಕ್ಷಣಗಳಂತೆ ಕಳೆದುಹೋಗಿ, ಮೂರು ದಿನಗಳ ನಂತರ ಕಲ್ಕತ್ತಾಗೆ ಮರಳಿ ಬಂದಮೇಲೂ ಅದರ ಗುಂಗಿನಿಂದ ಹೊರಬರಲಾಗಿರಲಿಲ್ಲ................. ++++
Comments
ಉ: ಹಿಮಗಿರಿಯ ಮಡಿಲಲ್ಲಿ..................
ಉ: ಹಿಮಗಿರಿಯ ಮಡಿಲಲ್ಲಿ..................
ಉ: ಹಿಮಗಿರಿಯ ಮಡಿಲಲ್ಲಿ..................
ಉ: ಹಿಮಗಿರಿಯ ಮಡಿಲಲ್ಲಿ..................
ಉ: ಹಿಮಗಿರಿಯ ಮಡಿಲಲ್ಲಿ..................