ಇರುವುದೆಲ್ಲವ ಬಿಟ್ಟು ಬೇರೆಡೆಗೆ ತುಡಿವುದೆ ಜೀವನ....

ಇರುವುದೆಲ್ಲವ ಬಿಟ್ಟು ಬೇರೆಡೆಗೆ ತುಡಿವುದೆ ಜೀವನ....

ಮುಂಜಾನೆ ಬೇಗನೆ ಎದ್ದು "ಕರಾಗ್ರೆ ವಸತೆ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರ ಮೂಲೆ ಸ್ಥಿತೇ ಗೌರಿ ಪ್ರಭಾತೆ ಕರದರ್ಶನಂ" ಎಂದು ಹೇಳುತ್ತ ಏಳುತ್ತಿದ್ದಂತೆ. ನನ್ನ ಮಗ ಕೂಗಿ "ಅಪ್ಪ ನಿಮ್ಮ ಚಪ್ಪಲಿ ಕಾಣುತ್ತಾ ಇಲ್ಲ" ಎಂದ. ಹೊರಗೆ ಹೋಗಿ ನೋಡಿದೆ. ಒಂದೇ ಚಪ್ಪಲಿ ಇತ್ತು. ಒಂದೇ ಚಪ್ಪಲಿ ಯಾರು ಕದ್ದರು ಎಂಬ ಯೋಚನೆಗೆ, ಯಾರಾದರೂ ಕು೦ಟ ಕಳ್ಳ ಇರಬಹುದು ಎಂದು, ಬರೀ ಕಾಲಲ್ಲಿ ಹೋಗಿ ನೋಡಿದೆ. ಒಂದು ಚಿಕ್ಕ ನಾಯಿ ಮರಿ ನನ್ನ ಚಪ್ಪಲಿ ತೆಗೆದುಕೊಂಡು ಆಟ ಆಡುತ್ತಾ ಇತ್ತು. ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ನಾಯಿ... ನಾಯಿನೆ ಅಲ್ಲವೇ. ಮೊದಲಿನಿಂದಲೂ ನಾಯಿ ಎಂದರೆ ಹೆದರಿಕೆ. ಅದನ್ನು ಕಷ್ಟ ಪಟ್ಟು ಓಡಿಸಿ, ಒಂದೇ ಚಪ್ಪಲಿ ಹಾಕಿಕೊಂಡು ಬರುತ್ತಾ ಇದ್ದೆ. ಮಂಜ "ಒಂದೇ ಚಪ್ಪಲಿ ಕೊಂಡು ಕೊಂಡಿದ್ದೀಯಾ ಜುಗ್ಗ" ಎಂದು ಅಪಹಾಸ್ಯ ಮಾಡಿದ. ನಾಯಿ ಮಾಡಿದ ಅವಾಂತರ ಹೇಳಿ, ಚಪ್ಪಲಿ ಕೈಯಲ್ಲಿ ಹಿಡಿದುಕೊಂಡು ಮನೆ ಒಳಗಡೆ ನಡೆದೆ.

ಮಡದಿ ಎರಡು ದಿನಗಳಿಂದ ಕೋಪ ಮಾಡಿಕೊಂಡಿದ್ದಳು. ಮನೆ ಕಸ ಇನ್ನೂ ಗುಡಿಸಿರಲಿಲ್ಲ. ಒಳಗೆ ಬಂದು "ಹೊರಗಡೆ ನನ್ನ ಕಾಲು ತುಂಬಾ ಸ್ವಚ್ಛ ಇದ್ದವು, ಒಳಗಡೆ ಬಂದೊಡನೆ ನನ್ನ ಕಾಲು ಹೊಲಸು ಆಗಿದ್ದಾವೆ" ನೋಡು ಪುಟ್ಟ ಎಂದು ನಗುತ್ತಾ ಮಗನಿಗೆ ಹೇಳಿದೆ. ಅಷ್ಟರಲ್ಲಿ ಮಡದಿ ಕೋಪದಿಂದ, ಪೊರಕೆ ನನ್ನ ಬಳಿ ಇಟ್ಟು ಒಳಗಡೆ ಹೋದಳು. ನಾನೇ ಕಸ ಗುಡಿಸಬೇಕಾಯಿತು.

ಈ ಸಿಟ್ಟು ಎನ್ನುವುದು ನನ್ನ ಮಡದಿಯೊಬ್ಬಳ ಕಾಯಿಲೆ ಅಥವಾ ಎಲ್ಲ ಹುಡುಗಿಯರ ಕಾಯಿಲೆನಾ ಎಂಬ ಯೋಚನೆ ಬಂತು. "ಹುಡುಗಿಯರು ಕೋಪ ಮಾಡಿಕೊಂಡಾಗ ತುಂಬಾ ಮುದ್ದಾಗಿ ಕಾಣುತ್ತಾರೆ" ಎಂದು ಅರ್ಥ ಮಾಡಿಕೊಂಡು ಕಾಯಿಲೆ ಅಲ್ಲದೇ ಖಯಾಲಿ ಕೂಡ ಆಗಿರಲೂಬಹುದು. ಆಗ ಎಲ್ಲ ಸಮಯದಲ್ಲೂ ಮುದ್ದಾಗಿ ಕಾಣಬಹುದು ಎಂದು ಕೂಡ ಹೀಗೆ ಮಾಡಿರಬಹುದು.

ಕೋಪ ಹೋಗಿಸೋಕೆ ಏನೇನು ಯೋಜನೆಗಳು ಎಂದು ಆಲೋಚನೆಗೆ ಬಿದ್ದೆ. ಚಿಕ್ಕ ವಯಸ್ಸಿನಲ್ಲಿ ನನ್ನ ಒಬ್ಬ ಆಪ್ತ ಗೆಳೆಯ ಹೇಳುತ್ತಿದ್ದ "ಸಿಟ್ಟು ಬಂದರೆ ಪಡಿ ಹಿಟ್ಟು ಮುಕ್ಕು" ಎಂದು. ಆದರೆ ಯಾವ ಹಿಟ್ಟು ಎಂದು ಮಾತ್ರ ಹೇಳಿರಲಿಲ್ಲ ಮಹಾರಾಯ. ಯಾವುದಾದರೂ ಮುಕ್ಕಬಹುದು ಆದರೆ ಸಿಟ್ಟು ಜ್ಯಾಸ್ತಿ ಆಯಿತು ಎಂದರೆ ಕಷ್ಟ. ಅಥವಾ ಗಿರಣಿಯಲ್ಲಿರುವ ಹಿಟ್ಟಿನ ಮಿಶ್ರಣವ ಎಂದು ಕೂಡ ಯೋಚಿಸಿದೆ.

ಮತ್ತೆ ಕೆಲವರು ಸಿಟ್ಟು ಬಂದಾಗ ನಮ್ಮ ಇಂಗ್ಲೀಶ್ ಮೇಷ್ಟ್ರು ಹೇಳುವ ಕೌಂಟ್ ವನ್ ಟು ಟೆನ್ ಕೂಡ ನೆನಪು ಆಯಿತು. ಆದರೆ ಕೋಪ ಬಂದರೆ ಇಂಗ್ಲೀಶ್ ಕಡ್ಡಾಯವಾಗಿ ಬರಲೇ ಬೇಕು. ಅಷ್ಟರಲ್ಲಿ ಲಗುಬಗೆಯಿಂದ ಏನೇ? ನಿನಗೆ ಇಂಗ್ಲೀಶ್ ಬರುತ್ತ ಎಂದೆ. ಇಲ್ಲ ಕಣ್ರೀ ನೀವೇ ಜಾಣರು ಎಂದು ಮತ್ತಷ್ಟು ಕೋಪ ಮಾಡಿಕೊಂಡಳು. ಮತ್ತೆ ಕನ್ನಡದಲ್ಲಿ ಒಂದರಿಂದ ಹತ್ತರವರಗೆ ಎಣಿಸು ಎಂದೆ. ಅದು ಬರಲ್ಲ ಕಣ್ರೀ ಏನ್ರೀ? ಈವಾಗ ಎಂದಳು.

ಅವಳ ಕೋಪಕ್ಕೂ ಮತ್ತು ನಮ್ಮ ಜಗಳಕ್ಕು ಒಂದು ಕಾರಣವಿದೆ. ಅವಳು ಊರಿಗೆ ಹೋಗುತ್ತೇನೆ ಎಂದು ಕ್ಯಾತೆ ತೆಗೆದಿದ್ದು. ಹೀಗಾಗಿ ನಾನು ಹೋಗಿ ಟಿಕೆಟ್ ಮಾಡಿಸಿಕೊಂಡು ಬಂದು ಅವಳಿಗೆ ಕೊಟ್ಟೆ. ಅವಳು ಕೋಪಕ್ಕೆ ತಿಲಾಂಜಲಿ ಹಾಕಿದ್ದಳು.

ಮರುದಿನ ಬೆಳಿಗ್ಗೆ ಅವರನ್ನು ಕಳುಹಿಸಲು ಆಟೋ ಹುಡುಕಿದೆ. ಬೆಳಿಗ್ಗೆ ಒಂದೂ ಆಟೋ ಸಿಗಲೇ ಇಲ್ಲ. ಕಡೆಗೆ ಒಂದು ಆಟೋ ಮಾಡಿ ಹೋಗುವಷ್ಟರಲ್ಲಿ ತುಂಬಾ ಲೇಟ್ ಆಗಿತ್ತು. ಮೂರು ಬ್ಯಾಗ್ ನಾನೇ ಹಿಡಿದುಕೊಂಡು ಹೋಗಿ ಲಗುಬಗೆಯಲ್ಲಿ ಬಿಟ್ಟು ಬಂದೆ. ಸ್ಟೇಶನ್ ಹೊರಗೆ ಬಂದೆ. ಅಷ್ಟರಲ್ಲಿ ಒಬ್ಬ ಕರೆದು "ಬರುತ್ತೀಯ..." ಎಂದ ಕೇಳಿದ. ನನಗೆ ದಿಕ್ಕೇ ತೋಚದಾಗಿತ್ತು. ಎಲ್ಲಿ? ಎಂದೆ. ನೀವು ಕೂಲಿ ಅಲ್ಲವ ಎಂದ. ನಾನು ಇಲ್ಲ ಸರ್ ಎಂದು ನನ್ನ ಕೆಂಪು ಅಂಗಿ ನೋಡಿ ನಗುತ್ತಾ ಮನೆಗೆ ಬಂದೆ.

ಅವಳಿಲ್ಲದೇ ತುಂಬಾ ಮಜವಾಗಿ ಇರಬಹುದು ಎಂದು ಯೋಚಿಸುತ್ತಾ ಬಂದ ನನಗೆ ಮನೆಯಲ್ಲಿ ಮಡದಿ, ಮಗ ಇಲ್ಲದೇ ನಿಶಬ್ದವಾಗಿತ್ತು. ಮನೆ, ಮನೆಸೆಲ್ಲ ಖಾಲಿ ಖಾಲಿ. ಯಾರು ಇಲ್ಲದಿದ್ದರೂ ಮನೆಯಲ್ಲಿ ನನ್ನೊಟ್ಟಿಗೆ ಇರುವರೇನೋ ಎಂಬ ಹುಸಿ ಭಾವನೆ. ಆಮೇಲೆ ನೋಡಿ ಯಾರು ಇಲ್ಲ ಎಂದು ಮನವರಿಕೆಯಾಗುತಿತ್ತು. "ಇರುವುದೆಲ್ಲವ ಬಿಟ್ಟು ಬೇರೆಡೆಗೆ ತುಡಿವುದೆ ಜೀವನ" ಎಂಬ ಗೋಪಾಲ್ ಕೃಷ್ಣ ಅಡಿಗರ ಉಕ್ತಿಯಂತೆ, ಅಂತಹ ಖುಷಿಯೇನು ಅನ್ನಿಸಲಿಲ್ಲ.

ಚಹಾ ಮಾಡೋಣ ಎಂದು ಅರ್ಧ ಹಾಲನ್ನು ಇನ್ನೊಂದು ಪಾತ್ರೆಗೆ ಸುರುವಿದೆ. ಮತ್ತು ಚಹಾ ಪುಡಿ ಹಾಕಿದೆ. ಅಷ್ಟರಲ್ಲಿ ದೇವರ ಕಟ್ಟೆ ಮೇಲೆ ಇಟ್ಟಿರುವ ಗುಲಾಬಿ ಹೂ ಕಾಣಿಸಿತು. ಅವಳು ಅದನ್ನು ಆತುರದಲ್ಲಿ ಅಲ್ಲಿಯೇ ಇಟ್ಟು ಹೋಗಿದ್ದಳು. ಅದನ್ನು ದೇವರಿಗೆ ಏರಿಸಿ, ಸಕ್ಕರೆ ಹಾಕಿದೆ. ಚಹಾ ಮಾಡಿ ಹೊರಗಡೆ ಬಂದು ಚಹಾ ಹೀರುತ್ತಾ ಕುಳಿತೆ. ಚಹಾ ಕಹಿಯಾಗಿತ್ತು, ಏಕೆಂದರೆ? ನಾನು ಚಹಾ ಪುಡಿ ಮತ್ತು ಸಕ್ಕರೆ ಹಾಕಿದ್ದು ಬೇರೆ ಬೇರೆ ಪಾತ್ರೆಗೆ. ಕಡೆಗೆ ಸಕ್ಕರೆ ಬೆರೆಸಿ ಚಹಾ ಹೀರುತ್ತಾ ಕುಳಿತಾಗ ನಾವಿಬ್ಬರೇ ನಾನು ಮತ್ತು ಒಂದು ಗುಯ್‌ಗೂಡುವ ನೊಣ.

Rating
No votes yet

Comments