ಕಣ್ಣಿಗೆ ಕಣ್ಣು, ಹಲ್ಲಿಗೆ, ಹಲ್ಲು..ಸಮ್ಮತವೇ?

ಕಣ್ಣಿಗೆ ಕಣ್ಣು, ಹಲ್ಲಿಗೆ, ಹಲ್ಲು..ಸಮ್ಮತವೇ?

ಕಣ್ಣಿಗೆ ಕಣ್ಣು, ಹಲ್ಲಿಗೆ, ಹಲ್ಲು – ಕ್ರೈಸ್ತ ಧರ್ಮದ “ಹಳೇ ಒಡಂಬಡಿಕೆ” ಯ ಈ ಮಾತುಗಳು ಇಸ್ಲಾಮಿನ ಶರಿಯಾ ಕಾನೂನಿನಲ್ಲೂ ಶಿಫಾರಸು ಮಾಡಲಾಗಿದೆ. ಒಂದು ರೀತಿಯ ಸೇಡಿಗೆ ಸೇಡು. ಆದರೆ ಇದನ್ನು ತಪ್ಪು ಎನ್ನುವವರೂ ಕೆಲವೊಮ್ಮೆ ಘಟನೆಗಳ, ಅಪರಾಧಗಳ ಕ್ರೌರ್ಯದ ಗಂಭೀರತೆಯನ್ನು ಗಮನದಲ್ಲಿಟ್ಟು ಕೊಂಡು ಈ ರೀತಿಯ retributory justice ವಿಧಾನ ಸರಿ ಎಂದು ವಾದಿಸುವರು.   

ಕಣ್ಣಿಗೆ ಕಣ್ಣು ಬೇಕು ಎನ್ನುವವರು ಒಂದು ಕಡೆಯಾದರೆ ಮಾನವೀಯ ದೃಷ್ಟಿಯಿಂದ ದೃಷ್ಟಿಯನ್ನು ಬೇರೆಡೆ ಹೊರಳಿಸಬೇಕು ಎನ್ನುವವರು ಮತ್ತೊಂದು ಕಡೆ. ಪ್ರತೀಕಾರ ಮಾನವ ಸಹಜ ಗುಣ. ಪುಟ್ಟ ಮಕ್ಕಳ ಪ್ರತಿಕ್ರಿಯೆಗಳೂ ಈ ಮಾನವ ಸಹಜ ಗುಣಕ್ಕೆ ಅನುಗುಣವಾಗಿಯೇ ಇರುವುದನ್ನು ಗಮನಿಸಿದ್ದೇವೆ. ಕ್ಷಮಿಸುವವನು ಉದಾರಿ, ಆ ಗುಣ ಎಲ್ಲರಿಗೂ ಬರಬೇಕೆಂದಿಲ್ಲ. ಸಮಾಜ ಶಿಕ್ಷೆಯನ್ನು ಪ್ರತೀಕಾರ ಎನ್ನುವ ದೃಷ್ಟಿಯಿಂದ ನೋಡಬಾರದು, ಹಾಗೆ ನೋಡಿದಾಗ ಒಸಮಾ ಬಿನ್ ಲಾದೆನ್ ನ ವಧೆಯೂ ಸಮ್ಮತವೆನ್ನಿಸದು. ಒಸಾಮಾ ನ ವಧೆ ಸರಿ ಎಂದು ನಾಗರೀಕ ಸಮಾಜ ಖಂಡಿತವಾಗಿ ಒಪ್ಪುತ್ತದೆ. ಕೆಲವರು ಅವನನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷಿಸಬೇಕಿತ್ತು ಎನ್ನುವವರೂ ಇದ್ದಾರೆ. ಆದರೆ ಆತನನ್ನು ಹಿಡಿದು ವಿಚಾರಣೆಗೆ ಒಳಪಡಿಸಲು ಮಾಡಿ ಕೊಳ್ಳ ಬೇಕಾದ ಸಿದ್ಧತೆಗಳನ್ನು ನೋಡಿದಾಗ, ಅದರ ಎಡರು ತೊಡರು ಗಳನ್ನು, ಗಮನಕ್ಕೆ ತೆಗೆದು ಕೊಂಡಾಗ targeted elemination ಹೆಚ್ಚು ಪ್ರಾಯೋಗಿಕ ಎಂದು ತೋರುತ್ತದೆ.  

ಪ್ರತಿಭಾವಂತಳಾದ ಇಂಜಿನಿಯರಿಂಗ್ ಪದವೀಧರೆಯಾದ ಇರಾನಿನ ಯುವತಿ ಅಮೀನ ಬೆಹ್ರಾಮಿಯ ಜೀವನ ಸಂಪೂರ್ಣವಾಗಿ ನಾಶವಾಗಿ ಹೋಯಿತು, ತನ್ನನ್ನು ಬಯಸಿದ ಮಾಜಿದ್ ಮೋವಾಹೆದಿ ಎನ್ನುವ ನರ ರಾಕ್ಷಸನಿಂದ. ಆಮಿನಾಳನ್ನು ವಿವಾಹವಾಗಲು ಬಯಸಿದ್ದ ಮಾಜಿದ್ ಈಕೆಯ ಅಸಮ್ಮತಿಯಿಂದ ಕ್ರುದ್ಧನಾದ. ನನ್ನನ್ನು ಮದುವೆಯಾಗದಿದ್ದರೆ ಕೊಲ್ಲುತ್ತೇನೆ ಎಂದು ಮೊದಲಿಗೆ ಬೆದರಿಸಿದ್ದ ಇವನು ಮನಸ್ಸು ಬದಲಿಸಿ ನನಗೆ ಸಿಗದ ಇವಳು ಬೇರಾರಿಗೂ ಸಿಗಕೂಡದು ಎಂದು ತೀರ್ಮಾನಿಸಿದ . ಒಂದು ಬಕೆಟ್ ತುಂಬಾ ಆಸಿಡ್ ಅನ್ನು ಅಮೀನಾಳ ಮುಖದ ಮೇಲೆ ಎರಚಿದ. ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡ ಈಕೆ ಭಯ ಹುಟ್ಟಿಸುವಂಥ ಕುರೂಪಿಯಾದಳು.  ಇರಾನಿನ ನ್ಯಾಯಾಲಯ ದಂಡವನ್ನೂ ಸೆರೆವಾಸದ ಶಿಕ್ಷೆಯನ್ನೂ ವಿಧಿಸಿತು ಮಾಜಿದ್ ನಿಗೆ. ಈ ತೀರ್ಪಿಗೆ ಅಮೀನ ಸಮ್ಮತಿಸಲಿಲ್ಲ. ನನ್ನ ನೋವನ್ನು  ಸ್ವತಃ ತನ್ನ ಕಣ್ಣು ಗಳನ್ನು ಕಳೆದು ಕೊಳ್ಳುವ ಮೂಲಕ ಮಾತ್ರ ಮಾಜಿದ್ ಅರಿಯಬಲ್ಲ ಎಂದು ವಾದಿಸಿದಳು. ಇದೇ ೧೪ ಮೇ, ೨೦೧೧ ರಂದು ಆಕೆಗೆ ಸಿಕ್ಕಿತು ಬಯಸಿದ ನ್ಯಾಯ. ಹತ್ತಿರದ ಆಸ್ಪತ್ರೆಗೆ ಮಾಜಿದ್ ನನ್ನು ದಾಖಲಿಸಿ ಅವನಿಗೆ ಅರಿವಳಿಕೆ ಕೊಟ್ಟು ಅವನ ಕಣ್ಣುಗಳಲ್ಲಿ ಆಸಿಡ್ ಪ್ರೋಕ್ಷಣೆ ಮಾಡಲು ತೀರ್ಮಾನ ವಾಯಿತು. ಈಗ ಆಗಮನವಾಯಿತು “ಕರುಣಾನಿಧಿ” ಜನರ ದಂಡು. amnesty international ನೇತೃತ್ವದ ಈ ದಂಡು ಹೇಳಿದ್ದು ಈ ರೀತಿ ನ್ಯಾಯ “ ಕಿರುಕುಳಕ್ಕೆ ಸಮಾನ” ಎಂದು. ಕ್ರೂರ ಮಾಜಿದ್ ಎಸಗಿದ ಕೃತ್ಯಕ್ಕೆ ಯಾವ ರೀತಿಯ ವಿಶ್ಲೇಷಣೆ ಕೊಡುತ್ತದೋ ಅಮ್ನೆಸ್ಟಿ. ಪಾಶ್ಚಾತ್ಯರ ಯಾವುದೇ ಮಾತಿಗೂ ಒಲ್ಲೆ ಎಂದು ಹೇಳಿ ಸುಖ ಅನುಭವಿಸುವ ಇರಾನ್ amnesty ಯ ಮಾತಿಗೆ ತಲೆ ಬಾಗಿತು. ಆದರೆ ಅಮೀನಾ ಮಾತ್ರ ತನ್ನ ಹೊರಾಟವನ್ನು ಖಂಡಿತಾ ಮುಂದುವರೆಸುವಳು. ಕಣ್ಣಿಗೆ ಕಣ್ಣು, ಈ ನ್ಯಾಯದಿಂದ ಮಾತ್ರ ಈಕೆ ತೃಪ್ತಳಾಗುವಳು. ಈ ತೆರನಾದ ನ್ಯಾಯದಿಂದ ಭಾವೀ ರಾಕ್ಷಸರು ಪಾಠ ಕಲಿಯಬೇಕು.          

ಗಾಂಧೀಜಿ ಪ್ರಕಾರ ಕಣ್ಣಿಗೆ ಕಣ್ಣು ಎನ್ನುವ ಪ್ರತೀಕಾರದ ಶಿಕ್ಷೆಯಿಂದ ಪ್ರಪಂಚವೇ ಕುರುಡಾಗಬಹುದು. ಇಡೀ ಪ್ರಪಂಚವೇ ಅನೈತಿಕತೆ, ಅನ್ಯಾಯ, ಹಿಂಸೆ ಎಸಗುವ ಕಣ್ಣಾಗುವುದಾದರೆ ಅದು ಕುರುಡಾಗಿರುವುದೇ ಹೆಚ್ಚು ಲೇಸು. ಇಲ್ಲದಿದ್ದರೆ ಪ್ರಪಂಚವೇ ಕುರೂಪಗೊಳ್ಳುವ ಸಾಧ್ಯತೆ ಹೆಚ್ಚು. ಗಾಂಧೀಜಿಯ ಈ ಮಾತಿಗೆ ನಾವು ಸಮ್ಮತಿಸಿದರೆ ಅವರನ್ನು ವಧಿಸಿದ ದ್ರೋಹಿಯನ್ನು ದೇಶ ಸುಮ್ಮನೆ ಬಿಡಬೇಕಿತ್ತು. ಯೋಚಿಸಿ ನೋಡಿ, ಮೈ ಝುಮ್ಮೆನ್ನುವುದಿಲ್ಲವೇ?  ಕೆಲವೊಂದು ಮಾತುಗಳು ಎಲ್ಲಾ ಕಾಲಕ್ಕೂ ಉದ್ಧರಿಸಲು ಉಪಯೋಗಕ್ಕೆ ಬರಬಹುದು, ದಯೆಯ ಆ ಮಾತುಗಳನ್ನು ಭಾಷಣಗಳಲ್ಲೂ, ಬರಹಗಳಲ್ಲೂ ಉಪಯೋಗಿಸಲು ಸುಂದರವಾಗಬಹುದು. quote ರೂಪದಲ್ಲಿ ಆಕರ್ಷಕ ಈ ಹೇಳಿಕೆಗಳು. ಆದರೆ ಸಮಾಜದ ಸ್ವಾಸ್ಥ್ಯವನ್ನೂ, ಹಿತವನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡಾಗ ಮಾಜಿದ್ ನಂಥ ದುರುಳರ ಕಣ್ಣುಗಳನ್ನು ಕೀಳಲೇಬೇಕು. ಮುಗ್ಧ, ಅಮಾಯಕ ಹೆಣ್ಣಿನ ಕಣ್ಣುಗಳನ್ನು ಕಿತ್ತ ಅವನ ಕಣ್ಣುಗಳು ತನ್ನ ಕ್ರೌರ್ಯವನ್ನು ಕಂಡು ಹಿಗ್ಗಬಾರದು. ಅಂತಾರಾಷ್ಟ್ರೀಯ ಒತ್ತಡಕ್ಕೆ ಇರಾನ್ ತಲೆಬಾಗದೆ ಆಕೆ ಬಯಸಿದ ನ್ಯಾಯವವನ್ನು ಅವಳಿಗೆ ದಯಪಾಲಿಸಲೇಬೇಕು.  

ಹಿಂಸೆಗೆ ಪ್ರತಿ ಹಿಂಸೆಯಾಗಿ ಅಸ್ತ್ರ ದ ಪ್ರಯೋಗ ನಡೆಯದಿದ್ದರೆ ಪ್ರಪಂಚ ಸುರಕ್ಷಿತ ಸ್ಥಳವಲ್ಲ. ಸ್ಪೇನ್ ದೇಶದ ದ್ವೀಪವೊಂದರ ಪ್ರವಾಸದಲ್ಲಿದ್ದ ಇಂಗ್ಲೆಂಡಿನ ಮಧ್ಯ ವಯಸ್ಕ ಮಹಿಳೆಯೊಬ್ಬರನ್ನು ಯಾವುದೇ ಕಾರಣವಿಲ್ಲದೆ ಓರ್ವ ಯುವಕ ೧೫ ಬಾರಿ ಚಾಕುವಿನಿಂದ ಇರಿದದ್ದು ಸಾಲದು ಎಂದು ಆಕೆಯ ರುಂಡಚ್ಛೇದ ಮಾಡಿ ರಸ್ತೆ ಬದಿಗೆ ಎಸೆದ. ಈ ಮಹಿಳೆ ಪ್ರವಾಸದ ವೇಳೆ ಅಲ್ಲಿನ ಶಾಲೆಯ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಪಾಠ ಹೇಳಿ ಕೊಡುತ್ತಿದ್ದಳಂತೆ. ಇಂಥ ಹಿಂಸ್ರ ಪಶುಗಳನ್ನು ಸಮಾಜ ಸಹಿಸಿದಾಗ, ಅವರಿಗೆ ತಕ್ಕ ಶಿಕ್ಷೆ ಕೊಡುವಲ್ಲಿ ವಿಫಲವಾದಾಗ ಇಂಥ ಕರುಳು ಹಿಂಡುವ ಘಟನೆಗಳು ಎಲ್ಲೆಲ್ಲೂ ಕಾಣಲು ಸಿಗುತ್ತವೆ. ಕೊಲೆಗಾರ ಒಂದೆರಡು ವರ್ಷ ಜೇಲಿನಲ್ಲಿ ಕಳೆದು ಸಮಾಜಕ್ಕೆ ಮರಳಿ ಬರುತ್ತಾನೆ ತನ್ನ ಮಿಕವನ್ನು ಅರಸುತ್ತಾ.   

Comments