ಕಾವೇರಿ ತೀರದಲ್ಲಿ..

ಕಾವೇರಿ ತೀರದಲ್ಲಿ..

ಫ್ಯಾಮಿಲಿ ಸಹಿತ ಮೈಸೂರು ಸಮೀಪದ "ಫ್ಯಾಂಟಸಿ ಪಾರ್ಕ್"ನಲ್ಲಿ ನೀರಲ್ಲಿ ಆಡಿ ಬಂದೆವು ಎಂದು ಪರಿಚಿತನೊಬ್ಬ ಹೇಳಿದನು. ವರ್ಷದಲ್ಲಿ ೨-೩ ಸಲವಾದರೂ ಹೀಗೆ ಹೋಗಿ ಹಣವನ್ನು ನೀರಲ್ಲಿ ಹೋಮ ಮಾಡಿ ಬರುವನು. ಅವನ ದುಡ್ಡು-ಅವನ ಖುಷಿ, ನನಗೇನು ಅಲ್ವಾ?  

ಈಗ ಬಿಡಿ. ಮಕ್ಕಳಿಗಾಗಿ ಹಣ ನೀರಿನಂತೆ ಖರ್ಚು ಮಾಡಲು ತಂದೆ ತಾಯಿ ತುದಿಗಾಲಲ್ಲಿ ನಿಂತಿರುತ್ತಾರೆ. ಹೆಚ್ಚಿನ ಮನೆಗಳಲ್ಲಿ ಟೂರ್/ಪಿಕ್ನಿಕ್ ಎಲ್ಲಿ ಹೋಗುವುದು ಎಂದು ನಿರ್ಧರಿಸುವುದು ಮಕ್ಕಳೇ! ಗೆಳೆಯರು ಹೋಗಿದ್ದಾರೆ, ನಾವೂ ಅಲ್ಲಿಗೆ ಹೋಗಬೇಕು ಅಥವಾ ಈ ಫ್ಯಾಂಟಸಿ ಪಾರ್ಕ್‌ಗಳ ಟಿ.ವಿ. ಜಾಹೀರಾತುಗಳು ಅವರನ್ನು ಮೋಡಿ ಮಾಡುತ್ತದೆ. ಈ ಸಲ SSLC ಹಾಲ್ ಟಿಕೆಟ್ ತಂದವರಿಗೆ ರಿಯಾಯಿತಿ(ಪುಡಿಗಾಸು!) ಇತ್ತಂತೆ- ಪಾಪ ಮಕ್ಕಳು ಪರೀಕ್ಷೆಗಾಗಿ ಹಗಲೂ ರಾತ್ರಿ ಒದ್ದಾಡಿ ಓದಿದ್ದಾರೆ, ಒಂದು ದಿನದ ಮಟ್ಟಿಗೆ ಫ್ರೀ ಬಿಟ್ಟಿದ್ದರೆ ಮೆಚ್ಚಬಹುದಿತ್ತು.  

ಇನ್ನು ಮಳೆಗಾಲ/ಚಳಿಗಾಲದಲ್ಲಿ ಅಲ್ಲಿಗೆ ಜನವೇ ಬರದಿದ್ದಾಗ ಸ್ಕೂಲ್‌ಗಳಿಗೆ ಆಮಿಷವೊಡ್ಡಿ ಅಲ್ಲಿನ ಪುಟ್ಟಪುಟ್ಟ ಕಂದಮ್ಮಗಳನ್ನು ಕರೆಸಿ, ಕೆಮ್ಮು/ಶೀತ/ಜ್ವರವನ್ನು ಫ್ರೀ ಆಗಿ ಹಂಚುವರು. 

ದುಡ್ಡಿದ್ದವರು ಮಜಮಾಡಲಿ ಬಿಡಿ ಅನ್ನುವಂತಿಲ್ಲ. ಮೊದಲಿಗೆ ಇನಾಕ್ಸ್/ಪಿ.ವಿ.ಆರ್ ಇತ್ಯಾದಿ ಬಂದಾಗ ನಮಗೆ ಖುಷಿಯಾಯಿತು. ಈಗ ಅವು ಒಂದೊಂದೇ ಸಿನೆಮಾ ಥಿಯೇಟರ್‌ಗಳನ್ನು ಕಬಳಿಸುತ್ತಾ ಹೋಗಿದೆ. ಈಗ ೫೦ ರೂ ಕೊಟ್ಟು ನೋಡುವ ಸಿನೆಮಾ ೨೦೦+ರೂ ಕೊಟ್ಟು ನೋಡಬೇಕಾಯಿತು. 

ಉತ್ಪಾದಕರಿಂದ ನೇರ ಬಳಕೆದಾರರಿಗೆ, ಕಡಿಮೆ ದರದಲ್ಲಿ, ಎಂದೆಲ್ಲಾ ಹೇಳಿ, ಒಂದೊಂದೇ ಮಾಲ್‌ಗಳು ಬಂದವು,- ಕಮ್ಮಿ ಎಲ್ಲಿ ಆಯಿತು? ಎಣ್ಣೆ, ಬೇಳೆ, ಕಾಳುಗಳೆಲ್ಲಾ ಸೆಂಚುರಿ ಬಾಗಿಲಲ್ಲೇ ಇದೆ! ಸಣ್ಣಪುಟ್ಟ ಅಂಗಡಿಯವರೂ ಏರಿಸಿದರು. ಬಳಕೆದಾರರಿಗೆ ನೇರ ಟೋಪಿ ಹಾಕಿದರು. 

ಮುಂದೊಂದು ದಿನ ಊರೂರಿಗೂ ಈ ಫ್ಯಾಂಟಸಿ ಪಾರ್ಕ್‌ಗಳು ನುಗ್ಗಿ, ಒಮ್ಮೆ ಕೋಟಿ ಬಂಡವಾಳ ಹೂಡಿ, ತಿಂಗಳಿಗೆ ಕೋಟ್ಯಾಂತರ ದುಡಿದು, ಸ್ವಿಮ್ಮಿಂಗ್ ಪೂಲ್, ಕೆರೆ, ನದಿಗಳನ್ನೆಲ್ಲಾ ನುಂಗಿ ತೇಗಲಿದ್ದಾವೆ. 

ಪರಿಚಿತನಿಗೆ ಹೇಳಿದೆ- "ಅಲ್ವೋ, ಫ್ಯಾಂಟಸಿ ಪಾರ್ಕ್‌ನಿಂದ ಒಂದು ೨೦ ಕಿ.ಮೀ ಮೊದಲೇ ಶ್ರೀರಂಗಪಟ್ಟಣವಿತ್ತಲ್ಲಾ.. ಆರಾಮ ಕಾವೇರಿ ನೀರಲ್ಲಿ ಆಟವಾಡಿ ಬರಬಹುದಿತ್ತಲ್ವಾ.." ಅಂದೆ. 

ಗಲೀಜು ನೀರೆಂದ ಪಾಪಿ. 

ಹೇಗೆ ತಾಯಿ ತನ್ನ ಮಕ್ಕಳ ಆಟೋಟ ರಕ್ಷಣೆಯ ಹೊಣೆ ಹೊತ್ತಿರುವಳೋ, ಹಾಗೇ ಕಾವೇರಿ ತಾಯಿ ಕರ್ನಾಟಕದ ತಲಕಾವೇರಿಯಿಂದ ಹೊಗೆನಕಲ್ ಫಾಲ್ಸ್‌ನ ವರೆಗೆ ಅನೇಕ ಕಡೆ ನೀರಲ್ಲಿ ಆಡಲು ವ್ಯವಸ್ಥೆ ಮಾಡಿರುವಳು. ರಕ್ಷಣೆಯ ಹೊಣೆಯೂ ಹೊತ್ತಿರುವಳು- ಒಂದು ಫೀಟ್ ನೀರು ಕಮ್ಮಿಯಾದರೂ ಸಾಕು ತಮಿಳುನಾಡು ಬಡಿದಾಡಲು ಬರುವುದು. ಬಡಿದಾಡಲು ಬಿಡಿ, ಜೋರಾಗಿ ಮಾತನಾಡಲೂ ಆಗದ ಸರ್ಕಾರ ಇಲ್ಲೊಂದಿದೆ ಎಂಬ ಅರಿವಿರುವ ಕಾವೇರಿ ತಾಯಿ ಮೇ-ಜೂನ್ ತಿಂಗಳಲ್ಲೂ ತುಂಬಿ ಹರಿದಳು. ಬ್ರಿಟಿಷರ ವಿರುದ್ಧ ಎದೆಸೆಟೆಸಿ ನಿಂತಿದ್ದ ಹೈದರಾಲಿ/ಟಿಪ್ಪುಸುಲ್ತಾನ್‌ರ ರಕ್ಷಣೆಯಲ್ಲಿ ಶ್ರೀರಂಗಪಟ್ಟಣವನ್ನು ಸುತ್ತಿ ಹರಿಯುತ್ತಿರುವ ಕಾವೇರಿ ತಾಯಿಯ ಪಾತ್ರವೂ ಇದೆ. 

ಬ್ರಹ್ಮನಿಂದ ವರಪಡೆದು ಕಾವೇರಿ ಹುಟ್ಟಿದ್ದೇ ಎಲ್ಲರಿಗೆ ಒಳಿತು ಮಾಡಲು. ಸಕಲ ಜನರ ಪಾಪ ಪರಿಹಾರಕ್ಕಾಗಿ. ಗಂಗೆಯೇ ವರ್ಷದಲ್ಲಿ ಒಂದು ಬಾರಿ ಪಾಪ ಪರಿಹಾರಕ್ಕಾಗಿ ಕಾವೇರಿ ಬಳಿ ಬರುವಳಂತೆ! 

ಪಿಕ್ನಿಕ್/ಟೂರ್‌ನ ಮಜದ ಜತೆ ಪಾಪ ಪರಿಹಾರದ ಬೋನಸ್ ಬೇರೆ ಸಿಗುವಾಗ ಯಾಕೆ ಮಕ್ಕಳನ್ನು ಸಮೀಪದ ಕಾವೇರಿ ತೀರಕ್ಕೆ ಕರಕೊಂಡು ಹೋಗಿ ಪ್ರಕೃತಿ ಮಡಿಲಲ್ಲಿ ಆಡಿಸಿ ಬರಬಾರದು?

- ಗಣೇಶ.

 

 

-

Rating
No votes yet

Comments