ಮಾತಿನ ಮಹತ್ವ

ಮಾತಿನ ಮಹತ್ವ

                                  ನಮ್ಮ ಜೀವನದಲ್ಲಿ 'ಮಾತು' ಎನ್ನುವ ಎರಡು ಅಕ್ಷರದ ಶಬ್ದಕ್ಕೆ ಮಹತ್ವದ ಪಾತ್ರವಿದೆ.ನಾವು ಆಡುವ ಮಾತು 'ಮುತ್ತಿ'ನಂತಿರಬೇಕು.ನಮ್ಮ 'ಮಾತು'ಗಳಲ್ಲಿ 'ನಯ-ವಿನಯ'ವಿದ್ದರೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಸಿಕ್ಕುವ ಸಹ ಪ್ರಯಾಣಿಕರೂ . . .ಕೂಡ ಒಳ್ಳೆಯ ಸ್ನೇಹಿತರಾಗಬಲ್ಲರು. ಆದರೆ ಪರಿಸ್ಥಿತಿಯ ಪರಾಮರ್ಶೆಯಿಲ್ಲದೆ . . .ಏನಾದರೂ . . .ಮಾತನಾಡಿದರೆ . . .ಪರಿಸ್ಥಿತಿ ವಿಕೋಪಕ್ಕೆ ತಿರುಗಬಹುದು.ಕೈ-ಕೈ ಮಿಸಲಾಯಿಸಿದರೂ ಅಚ್ಚರಿ ಇಲ್ಲ. ಅದರ ಅಂತ್ಯ ಕಲ್ಪನೆಗೂ ಸಿಗದು,ಅದಕ್ಕೆ ಅಲ್ಲವೇ ಹಿರಿಯರು ಕೆಲವು ಮಾತುಗಳನ್ನು ಹೇಳಿರುವುದು. 'ಮಾತು-ಬೆಳ್ಳಿ ಮೌನ-ಬಂಗಾರ' >ಮಾತು ಆಡಿದರೆ ಹೋಯಿತು -ಮುತ್ತು ಒಡೆದರೆ ಹೋಯಿತು>ಮಾತು ಮಾತು ಪ್ರಸಂಗೇಣ ಗೇಣಿ ಅಕ್ಕಿ ವಿನಶ್ಯತಿ.

                                 ಕೆಟ್ಟ ಮಾತುಗಳಿಂದ ನಡೆದ ಘಟನೆಯೊಂದು ನನ್ನ ಮನದಲ್ಲಿ ಹಸಿರಾಗಿದೆ.ಹತ್ತು ವರುಷಗಳ ಹಿಂದೆ ನಾನು 'ಶಸ್ತ್ರಕ್ರಿಯೆ'ಗಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದೆ.ಆ ಘಟನೆ ನಡೆದಾಗ ನನ್ನ 'ಶಸ್ತ್ರಕ್ರಿಯೆ' ನಡೆದು ನಾಲ್ಕು ದಿವಸಗಳು ಕಳೆದಿತ್ತು. 'ಕೋಣೆ'ಯ ಒಳಗೇ. . .ಮಲಗಿ ಬೇಸರವಾಗಿ ನಾನು ಹೊರಗೆ ಬಂದು ನಿಂತಿದ್ದೆ. ಆಸ್ಪತ್ರೆಗೆ ದಾಖಲಾಗಲು ಬರುವವರನ್ನು ಹೋಗುವವರನ್ನು ನೋಡುತ್ತಿದ್ದೆ. ಸ್ವಲ್ಪ ಹೊತ್ತಿನಲ್ಲಿ ಸುಮಾರು ಹದಿನೆಂಟು ಇಪ್ಪತ್ತು ವಯಸ್ಸಿನ ನಡುವಿನ ಸುಂದರವಾದ ಯುವತಿಯೊಬ್ಬಳು ನನ್ನ ಬಳಿಗೆ ಬಂದಳು.ನನ್ನ ಕೆನ್ನೆಯ ತುಂಬಾ ಬ್ಯಾಂಡ್-ಏಡ್ ಇರುವುದನ್ನು ಕಂಡು ನನ್ನ 'ಅನಾರೋಗ್ಯ' ಕುರಿತು ವಿಚಾರಿಸಿದಳು.ನಾನು ನನ್ನ ಅನಾರೋಗ್ಯವನ್ನು ಆಕೆಗೆ ತಿಳಿಸಿದೆ.ನಿಮ್ಮ ನೆಂಟರು ಯಾರಾದರೂ ಇಲ್ಲಿ ಅಡ್ಮಿಟ್ ಆಗಿದ್ದಾರ ?ಅವರನ್ನು ನೋಡಲು ಬಂದದ್ದಾ ? ಎಂದು ಆಕೆಯನ್ನು ಕೇಳಿದೆ.''ನನಗೆ . . .ತಲೆಗೆ ಸ್ವಲ್ಪ ಸರಿಯಿಲ್ಲ ,ಮಾನಸಿಕ ನಂಗೆ . . .ಶಾಕ್ ಟ್ರೀಟ್ಮೆಂಟ್ ಗೆ ಬಂದದ್ದು'' ಎಂದು ಆಕೆ ಹೇಳಿದಾಗ ಅಚ್ಚರಿಗೊಂಡಿದ್ದೆ.ಇಷ್ಟು ಸರಿಯಾಗಿ ಮಾತಾಡ್ತಾಳೆ. . .ಎಷ್ಟು ಚಂದ ಇದ್ದಾಳೆ . . .ಅಂತ ಅಂದುಕೊಂಡೆ.
                                 ಅಸ್ಟರಲ್ಲೇ ಬೆಡ್ ಶೀಟ್ ,ತಲೆದಿಂಬಿನ ಕವರ್ ಕೈಯಲ್ಲಿ ಹಿಡಿದುಕೊಂಡು ಇಬ್ಬರು 'ನರ್ಸು'ಗಳು ಬಂದರು. "ಈಗ ಅಡ್ಮಿಟ್ ಆದ್ಳಲ್ಲ . . .ಹೊಸ ಪೇಷೆಂಟ್ ,ಆಕೆಗೆ ಏನಾಗಿದೆಯಂತೆ ?" ಎಂದು ಒಬ್ಬಾಕೆ ಇನ್ನೊಬ್ಬಳಲ್ಲಿ ಕೇಳಿದಳು."ಅಯ್ಯೋ... ನಿಂಗೆ ಗೊತ್ತಿಲ್ವಾ ...ಅದು 'ನಟ್-ಲೂಸ್'ಆದ ಕೇಸ್" ಎಂದು ಮತ್ತೊಬ್ಬಳು ನರ್ಸು ಹೇಳಿದಳು.ಅವರ ಮಾತುಗಳು ...ನನ್ನ ಜೊತೆಗೆ ಮಾತಾಡುತ್ತಿದ್ದ ಯುವತಿಗೂ ಕೇಳಿಸಿತ್ತು. ಆ ಕ್ಷಣದಲ್ಲಿ ಅವಳಲ್ಲಿ ಅದೆಂತ ...ಪರಿವರ್ತನೆ ! ನರ್ಸುಗಳ ಬಳಿ ಹೋಗಿ ನಿಂತವಳೇ ...ಬಾಯಿಗೆ ಬಂದಂತೆಲ್ಲಾ ಬೈಯ್ಯಲಾರಂಭಿಸಿದಳು, ಇಡೀ...ಆಸ್ಪತ್ರೆಗೆ ಕೇಳುವಸ್ಟು  ದೊಡ್ಡದಾದದನಿಯಲ್ಲಿ ಕಿರುಚಲು ಆರಂಭಿಸಿದ್ದಳು.ಕೊನೆಗೆ ...'ವಾರ್ಡ್ ಬಾಯ್'ಗಳು ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕೋಣೆಗೆ ಕರೆದುಕೊಂಡು ಹೋಗಿದ್ದರು.ವೈದ್ಯರು ಬಂದು ನಿದ್ದೆಯ 'ಚುಚ್ಚುಮದ್ದು' ಚುಚ್ಚುವಲ್ಲಿಗೆ ಕೊನೆಯಾಗಿತ್ತು.ನನ್ನ ಮನಸಿಗೆ ಆ ಕ್ಷಣ ತುಂಬಾ ನೋವಾಗಿತ್ತು.ಅವರಿಬ್ಬರೂ ನರ್ಸ್ ವ್ರತ್ತಿಗೇ ...ಯೋಗ್ಯರಲ್ಲ ಎಂದು ನನಗೆ ಅನಿಸಿತ್ತು. ಅಸ್ತು ಒಳ್ಳೆಯ ವ್ರತ್ತಿಗೆ ಕಳಂಕ ತಂದರಲ್ಲಾ ...ಎಂದುಕೊಂಡಿದ್ದೆ. ಅವರು ಈ ರೀತಿ ಮಾತನಾಡದಿದ್ದರೆ ಆ ಘಟನೆ ನಡೆಯುತ್ತಿರಲಿಲ್ಲ. ಆ ಯುವತಿ ಈಗ ಎಲ್ಲಿರುವಳೋ ಗೊತ್ತಿಲ್ಲ , ಅಲ್ಲಿ ಇರುವಷ್ಟು ದಿವಸ ನಾವಿಬ್ಬರು ಗೆಳತಿಯರಾಗಿದ್ದೆವು.
                                 ಯಾವ ಜಾಗದಲ್ಲಿ ಹೇಗೆ ಮಾತನಾಡಬೇಕೆಂಬ  ಪರಿಜ್ಞಾನ ನಮಗಿರಲೇಬೇಕು. ನಮ್ಮ ಮಾತಿನಿಂದ ಯಾರಿಗೂ ನೋವಾಗದಂತೆ  ಎಚ್ಚರವಹಿಸಬೇಕು.ಇದಕ್ಕೆ ಅಲ್ಲವೇ ಪುರಂದರದಾಸರು "ಆಚಾರವಿಲ್ಲದ ನಾಲಿಗೇ...ನಿನ್ನ ನೀಚ ಬುದ್ದಿಯ ಬಿಡು ನಾಲಿಗೇ ..." ಎಂದು ಹೇಳಿದ್ದು .  
 

Comments