ಬಸ್ ಪ್ರಯಾಣದ ನೆನಪುಗಳು

ನಮ್ಮ ಬಸ್ ಮೂಡಿಗೆರೆಯಲ್ಲಿ ನಿಂತಿತು. ಕೆಲವರು ಬಸ್ಸಿನಿಂದ ಇಳಿದರು. ಹಲವರು ಬಸ್ ಹತ್ತಿದರು. ಒಂದು ಕಾಲಿನ ವ್ಯಕ್ತಿಯೊಬ್ಬ ಮುಂಭಾಗದ ಬಾಗಿಲಿನಿಂದ ಬಸ್ಸೇರತೊಡಗಿದ. ತನ್ನ ಊರುಗೋಲುಗಳನ್ನು ಬಸ್ಸಿನೊಳಗಿಟ್ಟ. ಜೊತೆಗಿದ್ದ ಮಗಳ ಸಹಾಯದಿಂದ ನಿಧಾನವಾಗಿ ಬಸ್ಸೇರಿದ. ಮಗಳು ಅತ್ತಿತ್ತ ನೋಡಿ "ಸೀಟು ಯಾವುದೂ ಖಾಲಿ ಇಲ್ಲ, ಅಪ್ಪಾ" ಅಂದಳು. ಆತ ಸೀಟಿನಲ್ಲಿ ಕೂತಿದ್ದವರ ಕಡೆಗೊಮ್ಮೆ ನೋಡಿದ. ಕೂತಿದ್ದವರು ಯಾರೂ ಎದ್ದು ಆತನಿಗೆ ಸೀಟು ಬಿಟ್ಟು ಕೊಡಲಿಲ್ಲ. "ಇಲ್ಲೇ ಕೂರ್ತೀನಿ ಬಿಡು" ಎಂದು ಆತ ಕೈಗಳನ್ನೂರಿ ಚಾಲಕನ ಕ್ಯಾಬಿನ್ನೊಳಗೆ ಸಾಗಿ, ಅಲ್ಲಿದ್ದ ಕಂಡಕ್ಟರರ ಸೀಟಿನ ಬುಡದಲ್ಲಿ ಕೂತು ಬಿಟ್ಟ. ಆಗ ಇಳಿದು ಹೋಗಿದ್ದ ಚಾಲಕ ಮತ್ತು ಕಂಡಕ್ಟರ್ ಬಂದು ಬಸ್ಸೇರಿದರು. ಚಾಲಕ ತನ್ನ ಸೀಟಿನಲ್ಲಿ ಕೂತು, ಪಕ್ಕದಲ್ಲಿದ್ದ ಒಂದೇ ಕಾಲಿನ ವ್ಯಕ್ತಿಯ ನೋಡಿದ. ಅವನ ತುಂಡಾದ ಕಾಲನ್ನೂ ನೋಡಿದ. "ನಿಮಗೆ ಇದೇನಾಯಿತು?" ಎಂದು ಕೇಳಿದ. ಅವನು ನಿಧಾನವಾಗಿ ಉತ್ತರಿಸಿದ, "ಏನ್ ಹೇಳೋದ್ರಿ, ಕಳೆದ ವರುಷ ಇಲ್ಲೇ ಆಕ್ಸಿಡೆಂಟ್ ಆಗಿತ್ತು ನೋಡಿ. ಒಂದು ಟ್ಯಾಂಕರ್ ಬಸ್ಸಿಗೆ ಬಡಿದಿತ್ತು. ನನ್ನ ಕಾಲು ತುಂಡಾಗಿ ಹೋಯ್ತು."
ಅಲ್ಲೇ ನಿಂತು ಇದನ್ನೆಲ್ಲ ಕೇಳುತ್ತಿದ್ದ ಕಂಡಕ್ಟರಿಗೆ ಏನೆನ್ನಿಸಿತೋ.... "ಏಳಿ ನೀವು, ಈ ಸೀಟಲ್ಲಿ ಕೂರಿ" ಎಂದು ತನ್ನ ಸೀಟನ್ನೇ ತೋರಿಸಿದರು. ಅವನು ಕುಳಿತಲ್ಲಿಂದ ಕೈಯೂರಿ ಎದ್ದು, ಆ ಸೀಟಿನಲ್ಲಿ ಕೂತ. ಕಂಡಕ್ಟರತ್ತ ಭಾವ ತುಂಬಿದ ಕಣ್ಣುಗಳಿಂದ ನೋಡಿದ. ಆ ಕಂಡಕ್ಟರ್ ಹೊಸ ಪ್ರಯಾಣಿಕರಿಗೆ ಟಿಕೇಟ್ ಕೊಡಲು ಶುರು ಮಾಡಿದರು. ಇಂತಹ ಕಂಡಕ್ಟರರೂ ಇರುತ್ತಾರೆ.
ಬಸ್ ತಡವಾಗಿ ಹೋಗಲು ಕಾರಣ
ಚಿಕ್ಕಮಗಳೂರಿನಿಂದ ಹೊರಡುವ ಬಸ್ಸೇರಿ ಕೂತಿದ್ದೆ. ಚಾಲಕ ತನ್ನ ಸೀಟಿನಲ್ಲಿ ಕೂತರು. ಆದರೆ ಬಸ್ ಹೊರಡುವ ಹೊತ್ತಾದರೂ ಎಂಜಿನ್ ಚಾಲೂ ಮಾಡಲಿಲ್ಲ. ಬಸ್ಸಿನೊಳಗೆ ಕುಳಿತಿದ್ದ ಪ್ರಯಾಣಿಕರಿಗೆಲ್ಲ ಅಸಹನೆ. ಚಾಲಕ ಆಗಾಗ ಹಿಂತಿರುಗಿ ನೋಡುತ್ತಿದ್ದರು - ಖಾಲಿಯಾಗಿದ್ದ ಎರಡು ಸೀಟುಗಳ ಕಡೆಗೆ. ಹೀಗೇ ಸರಿದವು ಐದು ನಿಮಿಷಗಳು. “ಡ್ರೈವರ್ರೇ, ಟೈಂ ಆಯಿತಲ್ವಾ? ಇನ್ನೂ ಯಾಕೆ ಹೊರಟಿಲ್ಲ?” ಎಂದೊಬ್ಬರು ಕೇಳಿದಾಗ ಚಾಲಕ ಸ್ವರ ಏರಿಸಿ ಉತ್ತರಿಸಿದರು, “ಇಬ್ರು ಪುಣ್ಯಾತ್ಮರು ರಿಸರ್ವ್ ಮಾಡಿಸಿ ಇನ್ನೂ ಬಂದಿಲ್ಲ. ಅವ್ರಿಗಾಗಿ ಕಾಯ್ತಾ ಇದೀನ್ರೀ. ಅವ್ರನ್ನ ಬಿಟ್ಟು ಹೊರಟರೆ, ಆ ಮೇಲೆ ಅವ್ರು ಕನ್ ಸ್ಯೂಮರ್ ಕೋರ್ಟಿಗೆ ಹೋದರೆ, ಯಾರಿಗೆ ಬೇಕು ಆ ತಾಪತ್ರಯ?”
ಅಷ್ಟರಲ್ಲಿ ರಿಕ್ಷಾದಿಂದಿಳಿದ ಇಬ್ಬರು ಓಡೋಡಿ ಬಂದು ಬಸ್ಸೇರಿದರು. ತಕ್ಷಣ ಎಂಜಿನ್ ಚಾಲೂ ಮಾಡಿದ ಡ್ರೈವರ್, ಬಸ್ ಓಡಿಸುತ್ತಾ ಪಕ್ಕದಲ್ಲಿದ್ದ ಪ್ರಯಾಣಿಕರೊಂದಿಗೆ ಮಾತು ಶುರು ಮಾಡಿದರು. ಮುಂದಿನ ಅರ್ಧ ತಾಸು ಬಳಕೆದಾರರ ಕೋರ್ಟಿನಲ್ಲಿ ಅವರು ಎದುರಿಸಬೇಕಾದ ಒಂದು ವ್ಯಾಜ್ಯದ ರಂಗುರಂಗಾದ ವಿವರಣೆ. ಕೊನೆಗೆ ಕೋರ್ಟ್ ರೂಪಾಯಿ ೫೦೦ ದಂಡ ವಿಧಿಸಿದಾಗ ಅದನ್ನು ಅವರ ಸಂಬಳದಿಂದಲೇ ವಸೂಲಿ ಮಾಡಲಾಯಿತಂತೆ. “ಅಂಥ ಒಂದು ಕೋರ್ಟ್ ಇದೆ ಅಂತಾನೇ ನಂಗೆ ಗೊತ್ತಿರಲಿಲ್ಲ. ಹೀಗೆ ಆದರೇನೇ ಇದೆಲ್ಲ ಗೊತ್ತಾಗೋದು ನೋಡಿ” ಎಂದು ಸ್ವಾನುಭವದ ಕತೆ ಮುಗಿಸಿದರು ಡ್ರೈವರ್.
ಕಿಸೆಗಳ್ಳನ ಚಾಕಚಕ್ಯ
ಧರ್ಮಸ್ಥಳದಿಂದ ಹೊರಟ ಬಸ್ ಚಾರ್ಮಾಡಿ ಘಾಟಿ ಏರಿ, ಕೊಟ್ಟಿಗೆಹಾರ ದಾಟಿ, ಮೂಡಿಗೆರೆಗೆ ಬಂದು ನಿಂತಿತು. ಬಸ್ಸಿನಿಂದ ಇಳಿಯುವವರ, ಬಸ್ ಹತ್ತುವವರ ಗಡಿಬಿಡಿ, ಗದ್ದಲ. ಹಿಂಭಾಗದ ಬಾಗಿಲಿನ ಬಳಿ ಜೋರುಜೋರು ಮಾತು. ಮುಂಭಾಗದಲ್ಲಿ ಕೂತಿದ್ದ ನಾನು ಅದೇನೆಂದು ನೋಡಿದೆ. ವ್ಯಕ್ತಿಯೊಬ್ಬನನ್ನು ಮೂವರು ಹಿಡಿದುಕೊಂಡು ಗದರಿಸುತ್ತಿದ್ದರು. ಇವರು “ಯಾವೂರು ನಿಂದು? ಹೆಸರೇನು?” ಎಂದು ಕೇಳುತ್ತಿದ್ದರೆ ಅವನು ತಲೆ ಕೆಳಗೆ ಹಾಕಿ ನಿಂತಿದ್ದ. “ಇದೇ ಕೆಲಸ ಏನು ನಿನಗೆ? ಎಷ್ಟು ಕಳ್ಳತನ ಮಾಡಿದ್ದಿ ಹೇಳು?” ಎಂದು ದಬಾಯಿಸಿದರು.
ಅಷ್ಟರಲ್ಲಿ ಬಂದ ಕಂಡಕ್ಟರ್ ಕೇಳಿದರು, “ಏನ್ರೀ ಅದು ನಿಮ್ಮದು ಗಲಾಟೆ?” ಆ ವ್ಯಕ್ತಿಯ ಕತ್ತು ಪಟ್ಟಿ ಹಿಡಿದಿದ್ದವರು ಉದ್ವೇಗದಿಂದ ಉತ್ತರಿಸಿದರು, “ನೋಡ್ರೀ ಇವನು, ನನ್ನ ಪ್ಯಾಂಟ್ ಜೇಬಿಗೆ ಕೈಹಾಕಿ ಪರ್ಸ್ ಎಳೆದಿದ್ದ. ನಾನು ಅವನ ಕೈ ಹಿಡ್ಕೊಂಡ್ ಬಿಟ್ಟೆ. ಈಗ ಇಲ್ಲ ಅಂತಾನೆ. ಒದೀಬೇಕು ಇವ್ನಿಗೆ” ಆಗ “ಹೋಗ್ಲಿ ಬಿಡ್ರೀ, ಪರ್ಸ್ ಹೋಗಿಲ್ಲ ತಾನೇ?” ಎಂದು ಸಮಾಧಾನ ಪಡಿಸಲು ಕಂಡಕ್ಟರರ ಯತ್ನ. “ಅವನನ್ನ ಎಳ್ಕೊಂಡ್ ಹೋಗಿ ಪೊಲೀಸರಿಗೆ ಕೊಡ್ರೀ” ಎಂದೊಬ್ಬರ ಸಲಹೆ. “ಏನಾಗುತ್ತೇರಿ ಪೊಲೀಸರಿಗೆ ಕೊಟ್ರೆ? ಕೊನೆಗೆ ಸಾಕ್ಷಿ ಇಲ್ಲ ಅಂತ ಕೇಸ್ ಬಿದ್ದು ಹೋಗ್ತದೆ” ಮತ್ತೊಬ್ಬರ ಅನುಭವ ವಾಣಿ. “ತಡ ಆಯ್ತು ಕಣ್ರೀ. ಬಸ್ ಹೊರಡ್ತದೆ. ಅವನನ್ನ ಬಿಡ್ರೀ” ಎನ್ನುತ್ತಾ ಸೀಟಿ ಊದಿದರು ಕಂಡಕ್ಟರ್. ಇವರು ಕತ್ತಿನ ಪಟ್ಟಿ ಬಿಟ್ಟಿದ್ದೇ ತಡ, ಅವನು ಬಸ್ಸಿನಿಂದ ಇಳಿದು ಓಡಿ ಹೋದ.
ಇಷ್ಟು ಹೊತ್ತು ಸುಮ್ಮನೆ ಕೂತಿದ್ದ ಪ್ರಯಾಣಿಕರೊಬ್ಬರು ಸೀಟಿನಿಂದ ಜಿಗಿದು ನಿಂತು ಕೂಗಿಕೊಂಡರು, “ಹಿಡೀರಿ ಅವನನ್ನ, ಬಿಡಬೇಡಿ.” ತನ್ನ ಪ್ಯಾಂಟಿನ ಜೇಬು ಮುಟ್ಟಿಕೊಳ್ತಾ ಅವರು ಕೂಗಾಡಿದರು, “ನನ್ನ ಪರ್ಸ್ ಕದ್ದಿದ್ದಾನೆ ನೋಡಿ. ನಂಗೆ ಈಗ ಗೊತ್ತಾಗಿದ್ದು. ನನ್ನ ಪರ್ಸ್ ಇಲ್ಲ. ಅವನೇ ಕದ್ದಿದ್ದಾನೆ. ಯಾಕಂದ್ರೆ ಅವನು ಕೊಟ್ಟಿಗೆಹಾರದಲ್ಲಿ ನನ್ ಹಿಂದೆನೇ ನಿಂತಿದ್ದ.” ಈಗ ಎಲ್ಲರೂ ಮಾತಿಗೆ ಶುರುವಿಟ್ಟರು, “ಅದಕ್ಕೇ ನೋಡಿ, ಇವರನ್ನೆಲ್ಲ ಪೊಲೀಸ್ ಸ್ಟೇಷನಿಗೆ ಎಳ್ಕೊಂಡ್ ಹೋಗಬೇಕು ಅನ್ನೋದು. ಇವರನ್ನೆಲ್ಲ ಹೀಗೆ ಬಿಡೋದ್ರಿಂದಲೇ ಇವರು ಸೊಕ್ಕಿರೋದು.” ಅಲ್ಲಿಂದ ಚಿಕ್ಕಮಗಳೂರಿನ ವರೆಗೂ ಬಸ್ ಪ್ರಯಾಣಿಕರ ಬಾಯಿತುಂಬ ಜೇಬುಗಳ್ಳರ ಕತೆಗಳೇ.
ಅರ್ಧ ಟಿಕೇಟಿನ ಚೌಕಾಸಿ
ನಮ್ಮ ಬಸ್ ಬಿ.ಸಿ.ರೋಡಿನಿಂದ ಉಜಿರೆಯತ್ತ ಹೊರಟಿತ್ತು. ನನ್ನ ಪಕ್ಕದಲ್ಲೇ ನಿಂತಿದ್ದರು ಒಬ್ಬ ವಯಸ್ಸಾದ ಮಹಿಳೆ ಮತ್ತು ಅವಳ ಸುಮಾರು ೧೪ ವರುಷ ವಯಸ್ಸಿನ ಮಗ. ಕಂಡಕ್ಟರ್ ಬಂದು ಟಿಕೆಟ್ ಕೇಳಿದಾಗ, ಹರಿದಿದ್ದ ಸೀರೆ ತೊಟ್ಟಿದ್ದ ಈ ತಾಯಿ ಒಂದೂವರೆ ಟಿಕೇಟಿನ ಹಣ ಕೊಟ್ಟು ಹೇಳಿದಳು, “ಇವನಿಗೆ ಅರ್ಧ ಟಿಕೇಟ್.” ಕಂಡಕ್ಟರ್ ಖಡಾಖಂಡಿತ ಧ್ವನಿಯಲ್ಲಿ, “ಅದಾಗೋಲ್ಲ. ಇಷ್ಟ್ ದೊಡ್ಡೋನಿದಾನೆ. ಅವ್ನಿಗೆ ಫುಲ್ ಟಿಕೇಟ್ ತಗೋಬೇಕು” ಎಂದರು. “ಇಲ್ಲಾರೀ, ಅವಂಗೆ ವಯಸ್ಸಾಗಿಲ್ಲ. ಅರ್ಧ ಟಿಕೆಟ್ಟೇ ಅವಂಗೆ” ಅಂತ ತಾಯಿಯ ವಾದ. ತುಸು ಹೊತ್ತು ಹೀಗೇ ಚರ್ಚೆ. ಕೊನೆಗೆ ಕಂಡಕ್ಟರ್, “ಅವಂಗೆ ಫುಲ್ ಟಿಕೇಟ್ ತೆಗೀಲೇ ಬೇಕು. ಐವತ್ತೊಂದು ರೂಪಾಯಿ ಕೊಡು. ಇಲ್ಲಾಂದ್ರೆ ಬಸ್ ನಿಲ್ಲಿಸ್ ಬಿಡ್ತೀನಿ” ಎನ್ನುತ್ತಾ ಸೀಟಿ ಊದಿಯೇ ಬಿಟ್ಟರು.
ಬಸ್ ನಿಂತಿತು. ಕಂಡಕ್ಟರ್ ಸ್ವರವೇರಿಸಿ ಹೇಳಿದರು, “ಐವತ್ತೊಂದು ರೂಪಾಯಿ ತೆಗಿ, ಇಲ್ಲಾಂದ್ರೆ ಇಲ್ಲೇ ಇಳ್ಕೋ. ನಮಗೂ ಕೇಳೋರಿದಾರೆ. ಏನ್ ಮಾಡ್ತೀ ಹೇಳು.” ಆ ತಾಯಿ ತಗ್ಗಿದ ಸ್ವರದಲ್ಲಿ ಉತ್ತರಿಸಿದಳು, “ಹೂಂ, ಕೊಡ್ತೀನಿ.” ಅನಂತರ ಬಸ್ ಹೊರಟಿತು.
ಆ ತಾಯಿ ನಿಂತಿದ್ದಲ್ಲೇ ಕುಕ್ಕರಗಾಲಿನಲ್ಲಿ ಕೂತಳು. ತನ್ನ ಚೀಲದೊಳಗಿಂದ ಹಳೆಯ ಸಂಚಿಯೊಂದನ್ನು ತೆಗೆದಳು. ಅದರಲ್ಲಿದ್ದ ಮಡಚಿದ್ದ ನೋಟುಗಳನ್ನು ಹೊರತೆಗೆದು ಎಣಿಸಿದಳು. ಅನಂತರ ಎದ್ದು ನಿಂತು, ದೈನ್ಯಭಾವದಿಂದ ಕಂಡಕ್ಟರನ್ನು ನೋಡುತ್ತಾ, “ಅವನಿಗೆ ಅರ್ಧ ಟಿಕೆಟ್. ಬರುವಾಗ್ಲೂನೂ ಅರ್ಧ ಟಿಕೆಟ್ಟೇ ಮಾಡ್ಸಿದ್ದು. ನಾನು ಇಷ್ಟು ಹೇಳಿದ್ರೂನೂ ನೀವು ಕೇಳಲ್ಲ. ನಿಮ್ದು ಹೆಣ್ಣು ಕರುಳೇನಲ್ವಾ?”ಎಂದು ನೋಟುಗಳನ್ನಿತ್ತಳು.
ಆಕೆ ಮಹಿಳಾ ಕಂಡಕ್ಟರ್. ಅವಳಿಗೆ ಏನೆನ್ನಿಸಿತೋ..... “ಸರಿ ಬಿಡು, ಅವ್ನಿಗೆ ಅರ್ಧ ಟಿಕೆಟ್ಟೇ ಕೊಡ್ತೀನಿ. ಚೆಕ್ಕಿಂಗ್ ನವರು ಬಂದ್ರೆ ಅವ್ರಿಗೆ ನೀವೇ ಹೇಳ್ಬೇಕು” ಎಂದು ಒಂದೂವರೆ ಟಿಕೆಟಿನ ಹಣ ತಗೊಂಡು, ಟಿಕೆಟ್ ಕೊಟ್ಟು ಮುಂದೆ ಸಾಗಿದಳು.
ಚಿತ್ರ ಕೃಪೆಃ www.skyscrapercity.com
- ಅಡ್ಡೂರು ಕೃಷ್ಣ ರಾವ್
Comments
ಉ: ಬಸ್ ಪ್ರಯಾಣದ ನೆನಪುಗಳು
In reply to ಉ: ಬಸ್ ಪ್ರಯಾಣದ ನೆನಪುಗಳು by Chikku123
ಉ: ಬಸ್ ಪ್ರಯಾಣದ ನೆನಪುಗಳು
ಉ: ಬಸ್ ಪ್ರಯಾಣದ ನೆನಪುಗಳು
ಉ: ಬಸ್ ಪ್ರಯಾಣದ ನೆನಪುಗಳು
ಉ: ಬಸ್ ಪ್ರಯಾಣದ ನೆನಪುಗಳು
ಉ: ಬಸ್ ಪ್ರಯಾಣದ ನೆನಪುಗಳು
In reply to ಉ: ಬಸ್ ಪ್ರಯಾಣದ ನೆನಪುಗಳು by ಗಣೇಶ
ಉ: ಬಸ್ ಪ್ರಯಾಣದ ನೆನಪುಗಳು