ಭಾಗ - ೯

ಭಾಗ - ೯

ಈ ಭಾಗದಲ್ಲಿ ನನ್ನಲ್ಲಿ ಮಾನವೀಯತೆಯನ್ನು ರೂಪಿಸಿದ ಪುತ್ತೂರಾಯರು, ಬಾಬುರವಿಶಂಕರರ ಬಗ್ಗೆ ಒಂದೆರಡು ಮಾತುಗಳನ್ನು ಹೇಳುವೆ.

ಸೀತಾರಾಮ ಪುತ್ತೂರಾಯರು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಆರ್ಥಿಕ ಸಹಾಯಕರಾಗಿ ಕೆಲಸ ಮಾದುತ್ತಿದ್ದರು. ೧೯೬೪-೬೫ ರ ಸುಮಾರಿನಲ್ಲಿ ಪದವೀಧರರಾಗಿ ಬ್ಯಾಂಕಿಗೆ ಸೇರಿದ್ದರು. ಆಗಿನ ಕಾಲದಲ್ಲಿ ಸಾಮಾನ್ಯವಾಗಿ ಪದವೀಧರರಾಗಿದ್ದವರೆಲ್ಲರೂ ಅಧಿಕಾರಿಗಳಾಗಿ ಸೇರುತ್ತಿದ್ದರು. ಇವರು ಆಗಲೇ ಭಾರತೀಯ ಮಝ್ದೂರ್ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು. ಭಾರತೀಯ ಮಝ್ದೂರ್ ಸಂಘವು ಪ್ರಾರಂಭವಾಗಿದ್ದು ೧೯೬೫ ರಲ್ಲಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಮಿಕರ ಒಳಿತಿಗಾಗಿ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿನ ಕೆಲಸಗಾರರನ್ನು ಸಂಘಟಿಸಲು ಪುತ್ತೂರಾಯರು ಮುಂದಾಳತ್ವ ವಹಿಸಿದರು. ಬ್ಯಾಂಕಿನಲ್ಲಿ ಅಧಿಕಾರಿಯಾದರೆ, ವರ್ಗಾವಣೆ ನೋಡಬೇಕೆಂದೂ ಮತ್ತು ಯೂನಿಯನ್ನಿನ ಕೆಲಸ ಮಾಡಲಾಗುವುದಿಲ್ಲವೆಂದೂ ಅವರು ಬಡ್ತಿಯನ್ನು ತೆಗೆದುಕೊಳ್ಳಲಿಲ್ಲ. ೧೯೭೨ರ ಹೊತ್ತಿಗೆ ಇವರ ಕೈ ಜೋಡಿಸಿದವರು ಶ್ರೀಯುತ ಬಾಬು ರವಿಶಂಕರ ಅವರು. ಇವರಿಬ್ಬರಲ್ಲಿ ನಾನು ಕಂಡ ಒಂದು ಒಳ್ಳೆಯ ಅಂಶವೆಂದರೆ, ಯೂನಿಯನ್ ಸದಸ್ಯರಲ್ಲದೇ ಇತರ ಸಹೋದ್ಯೋಗಿಗಳನ್ನು ತಮ್ಮ ಕುಟುಂಬದ ಸದಸ್ಯರೆಂದೇ ಭಾವಿಸುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಮನೆ ಮನೆಗಳಿಗೆ ಹೋಗಿ ಕಷ್ಟ ಸುಖ ವಿಚಾರಿಸುವುದು, ಬೇಕಾದ ಮಾರ್ಗದರ್ಶನವೀಯುವುದೂ ಮಾಡುತ್ತಿದ್ದರು. ಇವರಿಬ್ಬರೂ ತಮ್ಮ ಹೆಚ್ಚಿನ ಕಾಲಾವಧಿಯನ್ನು ಸ್ನೇಹಿತರಿಗಾಗಿಯೇ ಮುಡುಪಾಗಿಟ್ಟಿದ್ದರೆಂದರೆ ಅತಿಶಯೋಕ್ತಿಯಲ್ಲ. ೧೯೮೫ರ ಸುಮಾರಿನಲ್ಲಿ ಹೌಸಿಂಗ ಸೊಸೈಟಿಯವರು ಹೊಸ ಸದಸ್ಯರನ್ನು ನೋದಾಯಿಸಿಕೊಳ್ಳಲು ಪುತ್ತೂರಾಯರೂ ಕಾರಣೀಭೂತರಾಗಿದ್ದರು. ಅದಲ್ಲದೇ ನಮಗೆಲ್ಲರಿಗೂ ನಿವೇಶನವನ್ನು ಹೊಂದಲು ಸಲಹೆ ಕೊಟ್ಟರು. ನಾನಂತೂ, 'ನನಗ್ಯಾಕೆ ಸಾರ್, ಈಗಲೇ ಸೈಟು. ಮುಂದೆ ನೋಡೋಣ. ಅದೂ ಅಲ್ಲದೇ ಈ ಹೌಸಿಂಗ್ ಸೊಸೈಟಿಯಲ್ಲಿ ಯಾವಾಗಲೂ ಜಗಳ ಕದನಗಳನ್ನು ನೋಡ್ತಿದ್ದೀನಿ, ನನಗೆ ಸೇರಲು ಮನಸ್ಸಿಲ್ಲ' ಎಂದಿದ್ದೆ. ಅದಕ್ಕೆ ಪುತ್ತೂರಾಯರು, 'ನೀವೇನೂ ಮಾಡಬೇಕಿಲ್ಲ. ಈ ಅಪ್ಲಿಕೇಷನ್ ಫಾರ್ಂ ತುಂಬಿ ನನ್ನ ಕೈಗೆ ಕೊಡಿ ಮತ್ತು ಕೋ ಆಪರೇಟಿವ್ ಬ್ಯಾಂಕಿನಲ್ಲಿ ಹತ್ತು ಸಾವಿರ ರೂಪಾಯಿಗಳ ಸಾಲ ತೆಗೆದುಕೊಂಡು, ಮೂಲಧನವನ್ನಾಗಿ ಕೊಡಿ. ನಿಮಗೆ ತಿಳಿಯದೆಯೇ ಆ ಸಾಲ ತೀರಿ ಹೋಗುವುದು', ಎಂದಿದ್ದರು. ಅವರ ಹಿತ ನುಡಿಗಳನ್ನು ನಾವೆಲ್ಲರೂ ಪಾಲಿಸಿದ ಕಾರಣವೇ - ನಾವುಗಳಿಂದು ಬೆಂಗಳೂರಿನಂತಹ ಮಹಾನಗರದಲ್ಲಿ ಒಂದು ಮನೆಯನ್ನು ಮಾಡಿಕೊಂಡಿರುವುದು. ತಂಪಾದ ಸಮಯದಲ್ಲಿ ಅವರನ್ನು ನೆನೆಯದಿದ್ದರೆ ಅದು ದ್ರೋಹ ಬಗೆದಂತೆಯೇ.

ಇಷ್ಟೇ ಅಲ್ಲ, ಪುತ್ತೂರಾಯರು ಇನ್ನೊಂದು ಮಾತನ್ನೂ ನಮಗೆಲ್ಲರಿಗೂ ಹೇಳಿದ್ದರು. ಎಂದಿಗೂ ನಿಮ್ಮ ಬ್ಯಾಂಕಿನ ಅಕೌಂಟಿನಲ್ಲಿ ಕಡಿಮೆಯೆಂದರೆ ಹತ್ತು ಸಾವಿರ ರೂಪಾಯಿಗಳನ್ನು ಇಟ್ಟುಕೊಂಡಿರಿ. ಹಣವಿಲ್ಲದವನು ಹೆಣದಂತೆ. ದುಶ್ಚಟಗಳಿಂದ ದೂರವಾಗಿರಿ. ಹೆಚ್ಚಿನ ಹಣ ಕೈನಲ್ಲಿದ್ದರೆ ಇಲ್ಲದವರಿಗೆ ನೀಡಿ. ಇದು ಒಳ್ಳೆಯತನ. ಮುಂದೆ ನಿಮ್ಮ ಮಕ್ಕಳನ್ನು ಇದೇ ಒಳ್ಳೆಯತನ ಕಾಪಾಡುವುದು. ಪುತ್ತೂರಾಯರು ಈ ಮಾತುಗಳನ್ನು ಹೆಳುತ್ತಿದ್ದುದಲ್ಲದೇ ಪಾಲಿಸುತ್ತಿದ್ದರು ಕೂಡಾ. ನಾನು ೧೯೮೯ರಲ್ಲಿ ಮುಂಬೈಗೆ ಬಂದ ಕೆಲವು ವರ್ಷಗಳಲ್ಲಿ ಪುತ್ತೂರಾಯರು ಅಕಾಲಿಕ ಮರಣಕ್ಕೆ ತುತ್ತಾಗಿದ್ದರು. ಅವರಿಗಿದ್ದ ಇಬ್ಬರೂ ಗಂಡು ಮಕ್ಕಳು ವೈದ್ಯ ವೃತ್ತಿ ಹಿಡಿದು ಬಹಳ ಹೆಸರುವಾಸಿಯಾಗಿದ್ದಾರಂತೆ.

Rating
No votes yet

Comments