ಅವಕಾಶ, ಲಭ್ಯ ಮತ್ತು ಪ್ರಾಪ್ತಿ ವಿವಿಧ ಕೋನಗಳಿಂದ

ಅವಕಾಶ, ಲಭ್ಯ ಮತ್ತು ಪ್ರಾಪ್ತಿ ವಿವಿಧ ಕೋನಗಳಿಂದ

    ಇತ್ತೀಚೆಗೆ ಸತೀಶರ ಅವಕಾಶ, ಲಭ್ಯ ಮತ್ತು ಪ್ರಾಪ್ತಿ ಕಥೆಯನ್ನು ಓದಿದ ನಂತರ ಇವನ್ನು ಬಿಂಬಿಸುವ ಕೆಲವು ಕತೆಗಳು ನೆನಪಾದವು ಅವನ್ನು ವಾಚಕರ ಅವಗಾಹನೆಗಾಗಿ ಇಲ್ಲಿ ದಾಖಲಿಸುತ್ತಿದ್ದೇನೆ.

ಕಥೆ: ೧ (ಶಿವ ಭಕ್ತನೊಬ್ಬನ ಕಥೆ)
    ಒಬ್ಬ ಶಿವಭಕ್ತನಿದ್ದ ಅವನು ಪ್ರತಿದಿನವೂ ನಿಷ್ಟೆಯಿಂದ ಈಶ್ವರನ ಪ್ರಾರ್ಥನೆಯನ್ನು ಮಾಡುತ್ತಿದ್ದ ಆದರೂ ಅವನು ಕಡುಬಡವನಾಗಿಯೇ ಇದ್ದ. ಇದನ್ನು ನೋಡಿದ ಪಾರ್ವತಿಗೆ ಅವನ ಮೇಲೆ ಕರುಣೆಯುಂಟಾಯಿತು. ಅವಳು ಶಿವನಿಗೆ ಆ ಬಡವನ ಕಷ್ಟವನ್ನು ಪರಿಹರಿಸೆಂದು ಕೇಳಿದಳು. ಆಗ ಶಿವನೆಂದ ಅವನಿಗೆ ನಾನು ಏನೇ ವರಕೊಟ್ಟರೂ ಅದನ್ನು ಅನುಭವಿಸುವ ಪ್ರಾಪ್ತಿ ಅವನಿಗಿಲ್ಲವೆಂದು ಹೇಳಿದ. ಶಿವನ ಮಾತನ್ನು ಒಪ್ಪದ ಪಾರ್ವತಿ ಆ ಭಕ್ತನಿಗೆ ಯಾವುದೋ ಒಂದು ರೀತಿಯಿಂದ ಸಹಾಯ ಮಾಡಿಯೇ ತೀರಬೇಕೆಂದು ಶಿವನಿಗೆ ದುಂಬಾಲುಬಿದ್ದಳು. ಪಾರ್ವತಿಯ ಮಾತಿಗೆ ಮಣಿದ ಶಿವ, ಒಂದು ದೊಡ್ಡ ಹಣದ ಗಂಟನ್ನು ಆ ಶಿವ ಭಕ್ತ ನಡೆಯುತ್ತಿದ್ದ ದಾರಿಯಲ್ಲಿರಿಸಿದ. ಆ ದಾರಿಯಲ್ಲಿ ನಡೆದು ಬಂದ ಆ ಭಕ್ತ, ಪಾಪ ಯಾರೋ ತಮ್ಮ ಗಂಟನ್ನು ಬೀಳಿಸಿಕೊಂಡು ಹೋಗಿದ್ದಾರೆಂದು ಅದನ್ನೆತ್ತಿ ರಸ್ತೆ ಬದಿಯಲ್ಲಿಟ್ಟು ತನ್ನ ದಾರಿ ಹಿಡಿದು ಹೊರಟುಹೋದ. ಆಗ ಪಾರ್ವತಿ ಶಿವನ ಮಾತನ್ನು ಒಪ್ಪಲೇಬೇಕಾಯಿತು.
ನೀತಿ: ದೇವರು ವರ ಕೊಟ್ಟರೂ ಅದನ್ನು ಅನುಭವಿಸುವ ಪ್ರಾಪ್ತಿ ಇರಬೇಕು.

ಕಥೆ ೨: (ಪೌರಾಣಿಕ ಕಥೆ)
      ದಾರಿಹೋಕನೊಬ್ಬ ಆಯಾಸವನ್ನು ಪರಿಹರಿಸಿಕೊಳ್ಳಲು ಒಂದು ಮರದ ಕೆಳಗೆ ಕುಳಿತ. ಆಗ ಅವನು ಮನಸ್ಸಿನಲ್ಲಿಯೇ ಅಂದುಕೊಂಡ, ಈಗ ನನ್ನ ಹಸಿವೆಯನ್ನು ನೀಗಿಸಲು ನನಗೆ ಮೃಷ್ಟಾನ್ನ ಭೋಜನ ದೊರಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲವೇ ಎಂದು ಯೋಚಿಸಿದ. ಅವನು ಕುಳಿತದ್ದು ಕಲ್ಪವೃಕ್ಷದ ಕೆಳಗೆ, ಹಾಗಾಗಿ ಅವನ ಮುಂದೆ ಪಂಚಭಕ್ಷ ಪರಮಾನ್ನಗಳು ಪ್ರತ್ಯಕ್ಷವಾದವು. ಭೂರಿ ಭೋಜನವನ್ನು ಸವಿದ ಆ ದಾರಿಹೋಕ, ಆಹಾ ಈಗ ಹಂಸತೂಲಿಕಾತಲ್ಪದ ಮೇಲೆ ಮಲಗಿಕೊಂಡು ಅದಕ್ಕೆ ಸುಂದರಿಯೊಬ್ಬಳು ಚಾಮರದಿಂದ ಗಾಳಿ ಬೀಸುತ್ತಿದ್ದರೆ ಎಷ್ಟು ಚೆನ್ನ ಅಂದುಕೊಂಡ. ಆ ಭಾವನೆ ಸುಳಿದದ್ದೇ ತಡ ಅವನು ಹಂಸತೂಲಿಕಾತಲ್ಪದ ಮೇಲಿದ್ದ ಮತ್ತು ಸುಂದರಿಯೊಬ್ಬಳು ಪ್ರತ್ಯಕ್ಷಳಾಗಿ ಅವನಿಗೆ ಗಾಳಿ ಬೀಸುತ್ತಿದ್ದಳು. ಆಗ ಅವನ ಮನಸ್ಸಿನೊಳಗೆ ಒಂದು ಆಲೋಚನೆ ಹುಟ್ಟಿಕೊಂಡಿತು. ಈ ಕಾಡಿನ ಮಧ್ಯದಲ್ಲೇನಾದರೂ ಹುಲಿ ಬಂದರೆ ಎನ್ನುತ್ತಿರುವಾಗಲೇ ಅಲ್ಲೊಂದು ಹುಲಿ ಪ್ರತ್ಯಕ್ಷವಾಯಿತು. ಆಗ ಭಯದಿಂದ ಅವನು ಈ ಹುಲಿಯೇನಾದರೂ ನನ್ನನ್ನು ತಿಂದು ಹಾಕಿದರೆ ಅಂದುಕೊಳ್ಳುತ್ತಿದ್ದಾಗಲೇ ಆ ಹುಲಿ ಅವನ ಮೇಲೆ ಹಾರಿ ಅವನನ್ನು ತಿಂದು ಮುಗಿಸಿತು.
ನೀತಿ: ದೇವರು ನಮಗೆ ಬೇಕಾದ್ದನ್ನೆಲ್ಲಾ ಕೊಡುತ್ತಾನೆ ಅವನ ಹತ್ತಿರ ಅನಾವಶ್ಯಕವಾದುದನ್ನು ಕೋರಿಕೊಂಡು ನಿನ್ನ ವಿನಾಶವನ್ನು ತಂದುಕೊಳ್ಳಬೇಡ.

ಕಥೆ: ೩ (ಸ್ವಾಮಿ ವಿವೇಕಾನಂದರು ಹೇಳಿದ್ದು)
     ಇಬ್ಬರು ಗಂಡ ಹೆಂಡತಿ ಇರುತ್ತಾರೆ ಅವರಿಬ್ಬರೂ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿರುತ್ತಾರೆ. ಒಮ್ಮೆ ಮಾತನಾಡುತ್ತಾ ದೇವರೊಮ್ಮೆ ಪ್ರತ್ಯಕ್ಷನಾದರೆ ಚೆನ್ನಾಗಿರುತ್ತಿತ್ತು ಅವನಿಂದ ಬೇಕಾದ ವರಗಳನ್ನು ಪಡೆಯಬಹುದಿತ್ತು ಎಂದುಕೊಳ್ಳುತ್ತಾರೆ. ಆಗ ಇವರ ಮಾತಿಗೆ ಓಗೊಟ್ಟನೋ ಎಂಬಂತೆ ದೇವರು ಪ್ರತ್ಯಕ್ಷನಾಗಿ ಅವರಿಗೆ ಮೂರು ವರಕೊಡುತ್ತೇನೆಂದೂ ತಮಗೆ ಬೇಕಾದ್ದನ್ನು ಕೇಳಿ ಪಡೆದುಕೊಳ್ಳಿರೆಂದು ಹೇಳುತ್ತಾನೆ. ಆಗ ಆ ಹೆಂಡತಿ ದೇವರ ವರವನ್ನು ಪರೀಕ್ಷಿಸಲೋಸುಗ ನನ್ನ ಗಂಡನ ಮುಖದ ತುಂಬೆಲ್ಲಾ ಮೂಗುಗಳು ಉಂಟಾದರೆ ಅದು ಎಷ್ಟು ಹಾಸ್ಯಾಸ್ಪದವಾಗಿರುತ್ತದೆ ಎಂದು ಆಲೋಚಿಸಿ ದೇವರನ್ನು ಅದರಂತೆ ಬೇಡಿಕೊಳ್ಳುತ್ತಾಳೆ. ದೇವರು ಅವಳ ಬೇಡಿಕೆಗೆ ತಥಾಸ್ತು ಎನ್ನುತ್ತಾನೆ, ಆಗ ಆಕೆಯ ಗಂಡನ ಮುಖದ ತುಂಬಾ ಮೂಗುಗಳುಂಟಾಗುತ್ತವೆ. ಅದನ್ನು ನೋಡಿ ಆಕೆಗೆ ನಗು ತಡೆದುಕೊಳ್ಳಲಾಗದೇ ಬಿದ್ದು-ಬಿದ್ದು ನಗಲಾರಂಭಿಸುತ್ತಾಳೆ. ಆಗ ಅವಳ ಗಂಡನಿಗೆ ಇದರಿಂದ ಕೋಪವುಂಟಾಗಿ ನನ್ನ ಹೆಂಡತಿಗೂ ಮುಖದ ತುಂಬಾ ಮೂಗುಗಳುಂಟಾಗಲಿ ಎಂದು ಬೇಡಿಕೊಳ್ಳುತ್ತಾನೆ, ಆಗ ದೇವರು ಅವನ ಬೇಡಿಕೆಗೂ ತಥಾಸ್ತು ಅನ್ನುತ್ತಾನೆ. ಈಗ ನಗುವ ಸರದಿ ಗಂಡನದಾಗುತ್ತದೆ. ಸ್ವಲ್ಪ ಹೊತ್ತು ಒಬ್ಬರ ಮುಖವನ್ನೊಬ್ಬರು ನೋಡುತ್ತಾ ನಗುತ್ತಿದ್ದವರಿಗೆ ತಮ್ಮ ವಿಕಾರವಾದ ಮುಖಗಳನ್ನಿಟ್ಟುಕೊಂಡು ಹೊರಗೆ ಹೋಗಲಾಗುವುದಿಲ್ಲವೆಂಬ ಅರಿವಾಗುತ್ತದೆ, ಆಗ ಅವರಿಬ್ಬರೂ ತಮ್ಮ ಮುಖಗಳು ಮೊದಲಿನಂತಾಗಲಿ ಎಂದು ದೇವರನ್ನು ಬೇಡಿಕೊಳ್ಳುತ್ತಾರೆ. ಅವರ ಕೋರಿಕೆಯನ್ನು ಮನ್ನಿಸಿ ದೇವರು ಅಂತರ್ಧಾನನಾಗುತ್ತಾನೆ. ಹೀಗೆ ದೇವರು ವರವನ್ನು ಕೊಟ್ಟರೂ ಕೂಡ ತಮ್ಮ ಮೂರ್ಖತನದಿಂದ ಅದರ ಸದುಪಯೋಗ ಪಡೆದುಕೊಳ್ಳುವುದಿಲ್ಲ.
ನೀತಿ: ದೇವರು ಅವಕಾಶ ಕೊಟ್ಟಾಗ ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು.

ಕಥೆ ೪: (ಹಳೇ ನೀತಿ ಕಥೆ)
    ಇಬ್ಬರು ಗಂಡ ಹೆಂಡತಿಯರಿದ್ದರು ಅವರಿಬ್ಬರದೂ ಅನ್ಯೋನ್ಯ ದಾಂಪತ್ಯ. ಅವರ ಮುಂದೆಯೂ ಮೇಲಿನ ಕಥೆಯಂತೆ ದೇವರು ಪ್ರತ್ಯಕ್ಷನಾಗಿ ಅವರಿಗೆ ವರವೊಂದನ್ನು ದಯಪಾಲಿಸಿ ಅವರಿಗೆ ಬೇಕಾದ್ದನ್ನು ಕೋರಿಕೊಳ್ಳುವಂತೆ ಹೇಳಿದ. ಆಗ ದೇವರಲ್ಲಿ ಸ್ವಲ್ಪ ಸಮಯವನ್ನು ಕೋರಿ ಆ ದಂಪತಿಗಳಿಬ್ಬರೂ ಪರಸ್ಪರ ಸಮಾಲೋಚಿಸಿಕೊಂಡು ತಮ್ಮ ಬೇಡಿಕೆಯನ್ನು ದೇವರ ಮುಂದಿಟ್ಟರು. ಅದು ಹೀಗಿದೆ: ನಾವಿಬ್ಬರೂ ನಮ್ಮ ಎರಡಂತಸ್ತಿನ ಉಪ್ಪರಿಗೆಯ ಮೇಲೆ ಹಂಸತೂಲಿಕಾತಲ್ಪದಲ್ಲಿ ಕುಳಿತು, ಸರಸ-ಸಲ್ಲಾಪ ವಾಡುತ್ತಾ ಬಂಗಾರದ ಹರಿವಾಣದಲ್ಲಿ ತಾಂಬೂಲವನ್ನು ಮೆಲ್ಲುತ್ತಾ ರಾಜನಿಂದ ಸನ್ಮಾನಿತನಾದ ನಮ್ಮ ಮೊಮ್ಮಗ ಚಿನ್ನದ ಅಂಬಾರಿಯ ಮೇಲೆ ಮೆರವಣಿಗೆಯಲ್ಲಿ ಬರುತ್ತಿರುವುದನ್ನು ನಾವು ಕಾಣಬೇಕು. ನೋಡಿ ಒಂದೇ ವರದಲ್ಲಿ ಮನೆಯನ್ನು, ಶ್ರೀಮಂತಿಕೆಯನ್ನು-ಹಂಸತೂಲಿಕಾತಲ್ಪ ಮತ್ತು ಬಂಗಾರದ ಹರಿವಾಣದಲ್ಲಿ ಎಲೆ-ಆಡಿಕೆಯನ್ನಿಟ್ಟುಕೊಳ್ಳುವುದು, ರಾಜಸನ್ಮಾನಿತನಾದ ಮೊಮ್ಮಗ - ಬುದ್ಧಿವಂತಿಕೆಯಿಂದ ಕೂಡಿದವನು ಮತ್ತು ತಮ್ಮ ವಂಶದ ಪ್ರತಿಷ್ಠೆಯನ್ನು ಹೆಚ್ಚಿಸುವವನು. ಹಾಗೆಯೇ ಮೊಮ್ಮಗನನ್ನು ನೋಡಬೇಕೆಂದರೆ ಅವರು ಪೂರ್ಣಾಯುಶಿಗಳಾಗಿರಲೇಬೇಕಲ್ಲವೆ?
ನೀತಿ: ದೇವರು ಕೊಟ್ಟ ಅವಕಾಶವನ್ನೂ ಪೂರ್ಣ ಪ್ರಮಾಣದಲ್ಲಿ ಬುದ್ಧಿವಂತಿಕೆಯಿಂದ ಉಪಯೋಗಿಸಿಕೊ.

ಕಥೆ ೫: ಅಣ್ಣ ತಮ್ಮಂದಿರು (ಜಾನಪದ ಕಥೆ)
      ಒಂದೂರಿನಲ್ಲಿ ಇಬ್ಬರು ಅಣ್ಣ ತಮ್ಮಂದಿರಿದ್ದರು. "ಹುಟ್ಟುವಾಗ ಅಣ್ಣ ತಮ್ಮಂದಿರು ಬೆಳೆದ ಮೇಲೆ ದಾಯಾದಿಗಳು" ಎನ್ನುವ ಗಾದೆ ಮಾತಿನಂತೆ ದೊಡ್ಡವರಾದ ಮೇಲೆ ಒಬ್ಬರನ್ನೊಬ್ಬರು ದ್ವೇಷಿಸುತ್ತಾ ಬೇರೆ ಬೇರೆ ಸಂಸಾರ ಹೂಡಿದರು. ಅಣ್ಣ ಸ್ವಲ್ಪ ಬುದ್ಧಿವಂತನಾದ್ದರಿಂದ ಸಹಜವಾಗಿಯೇ ತಮ್ಮನಿಗಿಂತ ತುಸು ಹೆಚ್ಚು ಸ್ಥಿತಿವಂತನಾದ. ಇದನ್ನು ಕಂಡು ತಮ್ಮ ತಾನೂ ಕೂಡ ಶ್ರೀಮಂತನಾಗ ಬಯಸಿ ದಿನಾಲೂ ದೇವರನ್ನು ಪೂಜಿಸತೊಡಗಿದ. ಒಂದು ದಿನ ಇವನ ಭಕ್ತಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾಗಿ ಇವನಿಗೆ ವರಕೊಡುವುದಾಗಿ ಹೇಳಿದ ಜೊತೆಯಲ್ಲೇ ಒಂದು ನಿಭಂದನೆಯನ್ನೂ ಹಾಕಿದ. ಅದೇನೆಂದರೆ ಇವನಿಗೆ ಎಷ್ಟು ಸಿರಿ-ಸಂಪದಗಳನ್ನು ದಯಪಾಲಿಸುತ್ತಾನೆಯೋ ಅದರ ಎರಡರಷ್ಟು ಸಿರಿ-ಸಂಪದಗಳು ಅವರ ಅಣ್ಣನಿಗೆ ಉಂಟಾಗುತ್ತವೆಯೆಂದು ತಿಳಿಸಿದ. ತಾನು ಏನು ಬೇಡಿಕೊಂಡರೂ ಅಣ್ಣನಿಗೆ ಅದರ ದುಪ್ಪಟ್ಟು ಲಾಭವಾಗುತ್ತದೆ ಎಂದು ಆಲೋಚಿಸಿದ ತಮ್ಮ ದೇವರಲ್ಲಿ ಹೀಗೆ ಬೇಡಿಕೊಂಡ, ದೇವರೇ ನನ್ನ ಒಂದು ಕಣ್ಣು ಕುರುಡಾಗುವಂತೆ ವರಕೊಡು.

ನೀತಿ: ಇದನ್ನು ಸಂಪದಿಗರೇ ಆಲೋಚಿಸಿ ಹೇಳಿ.

Rating
No votes yet

Comments