ಮೂರು ಪ್ರಯೋಜನಗಳು!!!

ಮೂರು ಪ್ರಯೋಜನಗಳು!!!

     ಸಂಸ್ಕೃತ ಮೂಲದ ಈ ಕತೆಯನ್ನು ಬಹಳ ಹಿಂದೆ ಪತ್ರಿಕೆಯೊಂದರಲ್ಲಿ ಓದಿದ ನೆನಪು. ಅದರ ಸ್ವಾರಸ್ಯ ನೋಡಿ ಸಂಪದಿಗರೊಂದಿಗೆ ಹಂಚಿಕೊಳ್ಳೋಣವೆನಿಸಿ ಅದನ್ನು ಇಲ್ಲಿ ಕೊಡುತ್ತಿದ್ದೇನೆ. 

    ಒಬ್ಬ ಮನುಷ್ಯನಿಗೆ ಬಹಳ ಕೆಮ್ಮಾಗಿತ್ತು ಅದರ ನಿವಾರಣೆಗಾಗಿ ವೈದ್ಯರ ಬಳಿಗೆ ಹೋದ. ಆವನನ್ನು ಪರೀಕ್ಷಿಸಿದ ವೈದ್ಯರು ಹೇಳಿದರು, ನೋಡು ನಿನ್ನ ಕೆಮ್ಮು ಉಪಶಮನವಾಗಬೇಕಾದರೆ, "ಹುಳಿ, ಕಾರ ಹಾಗು ಎಣ್ಣೆಯ ಪದಾರ್ಥಗಳನ್ನು ತಿನ್ನುವುದನ್ನು ಬಿಟ್ಟು ತದನಂತರ ನಾನು ಕೊಡುವ ಮದ್ದನ್ನು ಸೇವಿಸಿದರೆ ನಿನ್ನ ರೋಗ ಉಪಶಮನವಾಗುತ್ತದೆ" ಎಂದು ತಿಳಿಸಿದರು. ಈ ರೀತಿ ಪಥ್ಯ ಮಾಡುವುದು ನನ್ನಿಂದ ಸಾಧ್ಯವಿಲ್ಲ ಎಂದು ತಿಳಿಸಿದ  ರೋಗಿ ಆ ವೈದ್ಯನಿಂದ ಉಪಚಾರ ತೆಗೆದುಕೊಳ್ಳುವುದಕ್ಕೆ ನಿರಾಕರಿಸಿದ.  ಈ ಕೆಮ್ಮಿನ ಮನುಷ್ಯ ಮತ್ತೊಬ್ಬ ವೈದ್ಯರನ್ನು ಭೇಟಿಯಾದ, ಅವರೂ ಕೂಡ ಮೊದಲನೇ ವೈದ್ಯ ಹೇಳಿದಂತೆ, ಪಥ್ಯ ಮಾಡಲು ತಿಳಿಸಿದರು. ಇವನು ಆ ವೈದ್ಯನನ್ನೂ ಬಿಟ್ಟು ಮತ್ತೊಬ್ಬನ ಬಳಿ ಹೋದ; ಅವರೂ ಕೂಡ ಮೊದಲಿಬ್ಬರು ವೈದ್ಯರು ಹೇಳಿದ್ದನ್ನೇ ಹೇಳಿದರು. ಇವನು ಅವರೆಲ್ಲರನ್ನೂ ತಿರಸ್ಕರಿಸಿ ಕಡೆಯದಾಗಿ ಒರ್ವ ವೈದ್ಯನ ಬಳಿ ಬಂದ. ಆ ವೈದ್ಯ ಇವನು ಹೇಳಿದ್ದೆಲ್ಲವನ್ನೂ ಪರಿಶೀಲಿಸಿ ನೀನೇನೂ ಇತರ ವೈದ್ಯರು ಹೇಳಿದ ಪಥ್ಯವನ್ನು ಅನುಸರಿಸಬೇಕಾಗಿಲ್ಲ, ಇದರಿಂದ ನಿನಗೆ ಮೂರು ರೀತಿಯ ಪ್ರಯೋಜನ ಉಂಟೆಂದು ಹೇಳಿದರು. ಕುತೂಹಲಗೊಂಡ ಈ ರೋಗಿ ಅದು ಹೇಗೆ ಸಾಧ್ಯವೆಂದು ತಿಳಿಸಿಕೊಡಬೇಕೆಂದು ವೈದ್ಯರನ್ನು ಕೇಳಿಕೊಂಡ. ಆಗ ವೈದ್ಯರು ಹೇಳಲಾರಂಭಿಸಿದರು, "ಮೊದಲನೇ ಪ್ರಯೋಜನವೇನೆಂದರೆ, ನಿನ್ನ ಹತ್ತಿರಕ್ಕೆ ನಾಯಿಗಳು ಸುಳದಾಡದೆ ನಿನ್ನಿಂದ ದೂರವೇ ಇರುತ್ತವೆ. ಎರಡನೆಯದೆಂದರೆ ನಿಮ್ಮ ಮನೆಗೆ ಕಳ್ಳ-ಕಾಕರು ಬರುವುದಿಲ್ಲ ಮತ್ತು ಮೂರನೆಯದು ನಿನಗೆ ಮುದಿತನವೆಂಬುದಿರುವುದಿಲ್ಲ". ಇದನ್ನು ಕೇಳಿದ ರೋಗಿಗೆ ಬಹಳ ಆನಂದವೂ ಆಶ್ಚರ್ಯವೂ ಆಯಿತು, ಅದು ಹೇಗೆಂದು ವೈದ್ಯರನ್ನು ಮರು ಪ್ರಶ್ನಿಸಿದ. ಆಗ ವೈದ್ಯರೆಂದರು, ನೀನು ಪಥ್ಯವನ್ನು ಮಾಡದೇ ಇರುವುದರಿಂದ, ನಿನ್ನ ಕೆಮ್ಮು ಇನ್ನೂ ಹೆಚ್ಚಾಗಿ ನೀನು ದುರ್ಬಲನಾಗುತ್ತೀಯ, ಆಗ ನೀನು ನಡೆಯಲು ಊರುಗೋಲನ್ನು ಅವಲಂಭಿಸ ಬೇಕಾಗುತ್ತದೆ; ನಿನ್ನ ಕೈಯ್ಯಲ್ಲಿನ ಕೋಲನ್ನು ನೋಡಿದ ಮೇಲೆ ನಿನ್ನ ಸನಿಹಕ್ಕೆ ಯಾವುದೇ ನಾಯಿ ಬರುವ ಸಾಹಸ ಮಾಡುವುದಿಲ್ಲ. ಎರಡನೆಯದು, ನಿನ್ನ ಕೆಮ್ಮು ಕಡಿಮೆಯಾಗದೇ ಇರುವುದರಿಂದ ನೀನು ಹಗಲು-ರಾತ್ರಿ ನಿರಂತರವಾಗಿ ಕೆಮ್ಮುತ್ತಲೇ ಇರುತ್ತೀಯಾ, ಹೀಗಾಗಿ ನಿಮ್ಮ ಮನೆಯಲ್ಲಿ ಯಾರೋ ಎಚ್ಚರವಾಗಿದ್ದಾರೆಂದು ತಿಳಿದು ಯಾವನೇ ಕಳ್ಳ ನಿನ್ನ ಮನೆಯೊಳಗೆ ಕಳ್ಳತನ ಮಾಡುವ ಕೃತ್ಯಕ್ಕೆ ಇಳಿಯುವುದಿಲ್ಲ. ಇನ್ನು, ನೀನು ಈ ರೀತಿ ಹಗಲು-ರಾತ್ರಿ ಕೆಮ್ಮುತ್ತಲೇ ಇದ್ದರೆ ನೀನು ಇನ್ನೂ ನಿಃಶಕ್ತನಾಗಿ ಬಹಳ ಬೇಗನೇ ಸತ್ತು ಹೋಗುತ್ತೀಯ! ಹಾಗಾಗಿ ನಿನಗೆ ಮುದಿತನ ಬರುವ ಸಂಭವವಿಲ್ಲ, ಇದು ಮೂರನೆಯ ಪ್ರಯೋಜನ!"
 

Rating
No votes yet

Comments