ಹಾತೊರೆತ

ಹಾತೊರೆತ

ಕಿವಿಯಲವನ ಹೆಸರು ಬಿದ್ದರೂ
ಮೈ ಮಿಂಚಾಡುವುದು ನವಿರೆದ್ದು;
ಕಂಡರವನ ಮೊಗಚಂದಿರವು
ಚಂದ್ರಶಿಲೆಯಂತೆ ಕರಗುವುದು!

ಇನಿಯ ಬಳಿಬಂದೆನ್ನ ಕೊರಳನು
ಅವನ ತೋಳಲಿ ಸೆಳೆದು ಅಪ್ಪಲು
ಒಡೆದ ಈ ಮನಕುಂಟು ತಲ್ಲಣ
ತಿರುಗಿ ಪೆಡಸಾದೇನೆಂಬ ಕಳವಳ

ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕದಿಂದ)

ಶ್ರುತ್ವಾ ನಾಮಾಪಿ ಯಸ್ಯ ಸ್ಫುಟಘನಪುಲಕಂ ಜಾಯತೇಂSಗಂ ಸಮಂತಾತ್
ದೃಷ್ಟ್ವಾ ಯಸ್ಯಾನನೇಂದುಂ ಭವತಿ ವಪುರಿದಂ ಚಂದ್ರಕಾಂತಾನುಕಾರಿ |
ತಸ್ಮಿನ್ನಾಗತ್ಯ ಕಂಠಗ್ರಹಣಸರಭಸಸ್ಥಾಯಿನಿ ಪ್ರಾಣನಾಥೇ
ಭಗ್ನಾ ಮನಸ್ಯ ಚಿಂತಾ ಭವತಿ ಮಯಿ ಪುನರ್ ವಜ್ರಮಯ್ಯಾಮ್ ಕದಾ ನು ||

श्रुत्वा नामापि यस्य स्फुटघनपुलकं जायतेऽङ्गं समन्तात्
दृष्ट्वा यस्याननेन्दुं भवति वपुरिदं चन्द्रकान्तानुकारि  ।
तस्मिन्नागत्य कण्ठग्रहणसरभसस्थायिनि प्राणनाथे
भग्ना मानस्य चिन्ता भवति मम पुनर्वज्रमय्याः कदा नु || 
 
-ಹಂಸಾನಂದಿ
 

ಕೊ: ಮೂರನೇ ಸಾಲಿಗೆ "ತಸ್ಮಿನ್ನಾಗತ್ಯ ಕಂಠಗ್ರಹನಿಕಟ ಪದಸ್ಥಾಯಿನಿ ಪ್ರಾಣನಾಥೇ" ಎಂಬ ಪಾಠಾಂತರವಿರುವಂತೆ ತೋರುತ್ತದೆ.

ಕೊ.ಕೊ: ಚಂದ್ರಶಿಲೆ (Moonstone) ಎಂಬ ಖನಿಜವು ಚಂದ್ರನ ಬೆಳಕಲ್ಲಿ ತೇವಗೊಳ್ಳುತ್ತದೆ, ಮೃದುವಾಗುತ್ತದೆ ಎಂಬುದೊಂದು ಕವಿಸಮಯ. ಇದು ಎಷ್ಟರ ಮಟ್ಟಿಗೆ ವೈಜ್ಞಾನಿಕ ಸತ್ಯ ಎನ್ನುವುದು ನನಗೆ ಗೊತ್ತಿಲ್ಲ!

ಕೊ.ಕೊ.ಕೊ: ಕೊನೆಯ ಸಾಲಿನಲ್ಲಿರುವ "ಭಗ್ನಾ ಮನಸ್ಯ ಚಿಂತಾ" ಎಂಬ ಮಾತುಗಳು, ಯಾವುದೋ ಕಾರಣಕ್ಕೆ ತನ್ನ ಇನಿಯನಿಂದ ಕೋಪಿಸಿಕೊಂಡು ದೂರಾದ ಹೆಣ್ಣೊಬ್ಬಳು, ದೂರವಿದ್ದಾಗಲೂ ಅವನನ್ನು ಮರೆಯಲಾರದೇ ಕೊರಗುವ ಹಾತೊರೆತವನ್ನು ಸೂಚಿಸುತ್ತದೆ ಎಂದು ನನ್ನೆಣಿಕೆ.

Rating
No votes yet

Comments