ಬೀchi ಜೋಕುಗಳು (೧೦): ಹಾಸ್ಯ ಬ್ರಹ್ಮರ ಇನ್ನೂ ಕೆಲವು ಜೋಕುಗಳು

ಬೀchi ಜೋಕುಗಳು (೧೦): ಹಾಸ್ಯ ಬ್ರಹ್ಮರ ಇನ್ನೂ ಕೆಲವು ಜೋಕುಗಳು

                                              ಬುದ್ಧನ ಉಪದೇಶಗಳು .......ಹೇಗೆ ನೆನಪಾದವು?
    ಪರೀಕ್ಷೆ ಹತ್ತಿರ ಬಂದದ್ದರಿಂದ ಉಪಾಧ್ಯಾಯರು ಹುಡುಗರನ್ನುದ್ದೇಶಿಸಿ ಪ್ರಶ್ನೆ ಕೇಳಲಾರಂಭಿಸಿದರು. ಸರತಿಯಂತೆ ಗುರುಗಳು ಹಲವಾರು ಪ್ರಶ್ನೆಗಳನ್ನು ಕೇಳುತ್ತಾ ಬಂದರು, ಹುಡುಗರೆಲ್ಲಾ ಅದರ ಪ್ರಕಾರ ತಮಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಬಂದರು. ಕಡೆಗೆ ತಿಮ್ಮನ ಸರದಿ ಬಂತು, ಆಗ ಗುರುಗಳು ಬುದ್ಧನ ಉಪದೇಶಗಳೇನೆಂದು ಕೇಳಿದಾಗ ತಿಮ್ಮ ತನಗೆ ಗೊತ್ತಿಲ್ಲವೆಂದ. ಹೋಗಲಿ ಕಡೇ ಪಕ್ಷ ಎಲ್ಲಾ ಉಪದೇಶಗಳನ್ನು ಹೇಳದಿದ್ದರೂ ಪರವಾಗಿಲ್ಲ ಒಂದಾದರೂ ಬೊಗಳು ಎಂದು ಘರ್ಜಿಸಿದರು ಗುರುಗಳು. ಅದಕ್ಕೂ ನಮ್ಮ ತಿಮ್ಮನ ಬಳಿ ಉತ್ತರವಿಲ್ಲ. ಕೊನೆಗೆ ವಿಪರೀತ ಸಿಟ್ಟಾದ ಗುರುಗಳು ತಮ್ಮ ಬೆತ್ತವನ್ನೆತ್ತಿಕೊಂಡು ತಿಮ್ಮನ ಬೆನ್ನಿಗೆ ಎರಡು ಬಾರಿಸಿದರು. ಆಗ ತಿಮ್ಮನಿಂದ ಥಟ್ಟನೆ ಉತ್ತರ ಬಂತು: "ಪ್ರಾಣಿ ಹಿಂಸೆ ಮಾಡಬಾರದು"

                                                         ನೋವು ಒಂದು ಮಾನಸಿಕ ಸ್ಥಿತಿ!!
    ತಿಮ್ಮ ಹಾಗು ಅವನ ಗುರುಗಳು ನೋವಿನ ಬಗ್ಗೆ ಒಂದು ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ಹೊರಬಂದರು. ಆ ವಿಚಾರ ಸಂಕೀರ್ಣದ ತಾತ್ಪರ್ಯವೇನೆಂದರೆ, "ನೋವು ಅನ್ನುವುದು ನಿಜವಾಗಿಯೂ ಇರುವುದಿಲ್ಲ; ಅದೊಂದು ಮನಸಿನ ಭ್ರಾಮಕ ಸ್ಥಿತಿ". ಇದನ್ನೇ ಗುರು ಶಿಷ್ಯರಿಬ್ಬರೂ ಮಾತನಾಡಿಕೊಳ್ಳುತ್ತಾ ಬರುತ್ತಿದ್ದರು; ಆಗ ಇದ್ದಕ್ಕಿದ್ದಂತೆ ಕತ್ತೆಯೊಂದು ಅವರಿದ್ದೆಡೆಗೆ ನುಗ್ಗಿ ಬಂತು, ಆಗ ಸಹಜವಾಗಿ ತಿಮ್ಮ ಪಕ್ಕಕ್ಕೆ ತಪ್ಪಿಸಿಕೊಂಡ. ಗುರುಗಳೆಂದರು, "ಅಲ್ಲವೋ ತಿಮ್ಮ ನೋವು ಎನ್ನುವುದು ಒಂದು ಮಾನಸಿಕ ಸ್ಥಿತಿ ಅಷ್ಟೇ, ಆದ್ರೆ ನೋವೆನ್ನುವುದು ನಿಜವಾಗಿಯೂ ಇರುವುದಿಲ್ಲವೆಂದು ಈಗ ಕೆಲ ಸಮಯದ ಹಿಂದೆಯಷ್ಟೆ ತಿಳಿದುಕೊಂಡರೂ ಕೂಡ ನೀನು ಕತ್ತೆಗೆ ಹೆದರಿ ಓಡಿ ಹೋಗುತ್ತೀಯಲ್ಲಾ? ಛೇ!.......ಛೇ!". ಆಗ ತಿಮ್ಮನೆಂದ, "ನಿಜ ಗುರುಗಳೇ, ನೋವು ಎನ್ನುವುದು ಕೇವಲ ಭ್ರಮೆ ಎನ್ನುವುದು ನನಗೆ ಗೊತ್ತಿದೆ ಮತ್ತು ನಿಮಗೂ ಗೊತ್ತಿದೆ ಆದರೆ ಆ ಕತ್ತೆಗೆ ಗೊತ್ತಿಲ್ಲವಲ್ಲ!"


                                                                 ಜನಸಂಖ್ಯಾ ನಿಯಂತ್ರಣ!!!
    ತಿಮ್ಮನಿಗೆ ಅದೊಂದು ದಿನ ಒಮ್ಮೆಂದೊಮ್ಮೆಲೆ ದೇಶದ ಜನಸಂಖ್ಯೆಯ ಬಗ್ಗೆ ಯೋಚನೆ ಹತ್ತಿತು ಮತ್ತು ಅದರ ನಿಯಂತ್ರಣಕ್ಕೆ ಒಂದು ಮಾರ್ಗವನ್ನೂ ಕಂಡುಕೊಂಡ. ಅದನ್ನು ಇತ್ಯರ್ಥ ಮಾಡಿಕೊಳ್ಳಬೇಕೆಂದು ತನ್ನ ಗುರುಗಳ ಬಳಿಗೆ ಸಾಗಿ ತನ್ನ ಪ್ರಸ್ತಾಪವನ್ನು ಮುಂದಿಟ್ಟ.
    "ಗುರುಗಳೇ, ನಮ್ಮ ದೇಶದ ಜನಸಂಖ್ಯಾ ನಿಯಂತ್ರಣಕ್ಕೊಂದು ಮಾರ್ಗ ಕಂಡುಕೊಂಡಿದ್ದೇನೆ, ಅದೇನೆಂದರೆ ಇನ್ನು ಮುಂದೆ ಯುವಕರೆಲ್ಲರೂ ಬ್ರಹ್ಮಚರ್ಯ ಪಾಲಿಸಿದರೆ ಈ ಸಮಸ್ಯೆಯಿಂದ ದೇಶವನ್ನು ಉಳಿಸಬಹುದು!"
    "ಹೌದೌದು! ನೀನೊಬ್ಬನೇ ಅಲ್ಲ,  ನಿನ್ನ ಮಗ ಮತ್ತು ಅವನ ಮಗ - ನಿನ್ನ ಮೊಮ್ಮಗ, ಹೀಗೆ ಮೂರು ತಲೆಮಾರು ಬ್ರಹ್ಮಚರ್ಯವನ್ನು ಪಾಲಿಸಬೇಕು" ಎಂದು ಗುರುಗಳು ಮರು ನುಡಿದರು.
(ವಿಶ್ವದ ಜನಸಂಖ್ಯೆ ೭೦೦ ಕೋಟಿಗಳನ್ನು ದಾಟಿದ ಈ ಸಂಧರ್ಬದಲ್ಲಿ ಈ ಜೋಕು ಹೆಚ್ಚು ಸೂಕ್ತವೆನಿಸುತ್ತದೆಯಲ್ಲವೇ?)

Comments