ಸರ್ಕಾರೀ ಶಾಲೆಗಳು ಮುಚ್ಚುತ್ತಿರುವುದೇಕೆ?

ಸರ್ಕಾರೀ ಶಾಲೆಗಳು ಮುಚ್ಚುತ್ತಿರುವುದೇಕೆ?

ಇದು ಹತ್ತದಿನೈದು ವರ್ಷಗಳ ಹಿಂದೆ ನಾನು ಯೋಚಿಸಿದ್ದೆ, ಮುಂದೊಂದು ದಿನ ಘನವೆತ್ತ ಕರ್ನಾಟಕ ಸರ್ಕಾರ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚುವ ಚಿಂತನೆ ನಡೆಸಬಹುದೆಂದು, ನನ್ನ ಯೋಚನೆ ಇಂದು ನಿಜವಾಗುವ ಸೂಚನೆಗಳಿವೆ. 

 

ಪ್ರಿಯ ಕನ್ನಡಿಗರೆ, ನಿಮಗೆ ಹೇಗೆ ಅನ್ನಿಸುತ್ತದೆಯೋ ನಾನರಿಯೆ.  ಇದೆಲ್ಲಾ ನನ್ನ ಪಾಲಿಗೆ ನಾವೇ ಕನ್ನಡಮ್ಮನ ಗರ್ಭಕ್ಕೆ ಕೊಳ್ಳಿ ಇಡುವ ಪ್ರಯತ್ನ ಮಾಡಿದ್ದೇವೇನೋ ಅನ್ನಿಸುತ್ತಿದೆ. ಕರ್ನಾಟಕ ಸರ್ಕಾರದ ಈ ಯೋಚನೆಯ ಹಿಂದೆ ಒಬ್ಬ ಪ್ರಾಮಾಣಿಕ ಕನ್ನಡಿಗನ ಪಾತ್ರವೇನು? ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಹೋದರೆ ನಮ್ಮ ಮೇಲೆ ಆಂಗ್ಲ ಭಾಷೆಯ ಸೂತಕದ ಛಾಪು, ಥಳುಕು ಬಳುಕಿನ ಜೀವನ, ಕತ್ತಲೆಯ ಸಂಕೃತಿ ಹಾಗೂ ನಮ್ಮ ರಾಜಕಾರಣದ ವ್ಯವಸ್ಥೆ, ವ್ಯಾವಹಾರಿಕ ಸೊಗಡೇ ಇದಕ್ಕೆ ಕಾರಣವೆನ್ನಿಸಿದೆ.  ನಮ್ಮ ಮನಸ್ಸಿನ ದೌರ್ಬಲ್ಯಗಳೇ ಇಂದು ಸರ್ಕಾರಿ ಶಾಲೆಗಳು ಮುಚ್ಚುವ ಚಿಂತನೆಗೆ ಕಾರಣವೆಂದರೆ ತಪ್ಪಿಲ್ಲ. 

 

ಇಂದು ದೂರದರ್ಶನವಿಲ್ಲದ, ಕೇಬಲ್, ಡಿಷ್ ಸಂಪರ್ಕವಿಲ್ಲದ ಮನೆಗಳಿಲ್ಲ. ಪ್ರತಿ ಹಳ್ಳಿಗೂ, ಕಡು ದಾರಿದ್ರ್ಯ ವಿರುವ ಬಡವನ ಮನೆಗೂ ಇಂದು ದೂರದರ್ಶನ ತನ್ನ ಮುಖವಿಕ್ಕಿದೆ.  ನೂರಾರು ಚಾನಲ್ ಗಳಲ್ಲಿ ಚಂದನವೂ ಒಂದು.  ಕರ್ನಾಟಕದ ಹಿತಿಹಾಸವನ್ನು ಎತ್ತಿ ಹಿಡಿಯುವ ಹೆಚ್ಚು ಜಾಹಿರಾತುಗಳಿಲ್ಲದ ಚಾನಲ್ ಎಂದರೆ ಚಂದನವೊಂದೆ.  ಪ್ರಾಮಾಣಿಕವಾಗಿ ಹೇಳಿ ನಾವೆಷ್ಟು ಜನ ಈ ಚಾನಲ್ ಗಳನ್ನು ನೋಡ್ತಿದ್ದೇವೆ.  ಕೈಯಲ್ಲಿ ರಿಮೋಟ್ ಹಿಡಿದ ಮನಸ್ಸು ಚಿಕ್ಕ ಮಕ್ಕಳಿಗೆ ಚಿಂಟು, ಪೋಗೋ, ಕಾರ್ಟೂನ್ ನೆಟ್ ವರ್ಕ್ ಗಳ ಪಾಲಾದರೆ, ಯುವಕರ ಮನಸ್ಸು ಹೆಚ್.ಬಿ.ಒ, ಸ್ಟಾರ್ ಮೂವೀಸ್, ಎ.ಎಕ್ಸೆನ್, ಫ್ಯಾಶನ್ ಶೋಗಳ ಪಾಲಾಗಿದೆ.  ಇನ್ನು ವಯೋವೃದ್ಧರ ಜೀ ಕನ್ನಡ, ಉದಯದಲ್ಲಿ ಬರುವ ನಿತ್ಯ ಸಾಂಸಾರಿಕ ಬದುಕಿನಲ್ಲಾದ ಮುಜಲುಗಳಲ್ಲಿನ ಸಂಭ್ರಾಂತಿಯಲ್ಲಿ ಮನಸ್ಸು ಕಪಿಮುಷ್ಠಿಯಲ್ಲಿ ಸಿಲುಕಿವೆ.  ಇದಕ್ಕೆಲ್ಲಾ ಕಾರಣಗಳು ನಮ್ಮ ಮನೋದೌರ್ಬಲ್ಯಗಳನ್ನು ಆಧರಿಸಿ ಮನರಂಜನೆಯ ರೂಪದಲ್ಲಿ ನಮ್ಮ ಕಲೆ, ಸಂಕೃತಿಯತ್ತ ಲಗ್ಗೆ ಹಾಕಿವೆ.  ಕರ್ನಾಟಕದ ಹಿತಿಹಾಸವನ್ನು ಎತ್ತಿ ಹಿಡಿಯುವ ಚಂದನ ಚಾನಲ್ಲೇ ಸರ್ಕಾರಿ ಶಾಲೆಗಳು ಉಳಿದವು ಕಾನ್ವೆಂಟ್ ಶಾಲೆಗಳು. 

 

ನಾವು ಓದುವಾಗ ಜೊತೆಗೆ ಗುರುವಿದ್ದ, ಗುರಿಯಿರಲಿಲ್ಲ.  ಏನೋ ಒಂದು ಕಸಿ ಚೀಲ ಹಾಕಿಕ್ಕೊಂಡು, ಗೋಧಿ ಉಪ್ಪಿಟ್ಟು ತಿಂದು, ನಾಲ್ಕು ಅಕ್ಷರ ಕಲಿತು, ಗುರು ತೋರಿದ ಗುರಿಯತ್ತ ಸಾಗಿ ಏನೋ ಬದುಕು ಸಾಗಿತು. ಈಗಿನ ಮಕ್ಕಳಿಗೆ ಗುರುವಿಲ್ಲ,  ಆದರೆ ಗುರಿಯಿದೆ.  ಆ ದಿನ ನಮ್ಮ ಗುರುವಿಗೆ ಗೊತ್ತಿತ್ತು ನನ್ನ ಗುರಿಯೇನೆಂಬುದು.  ಆದರೆ ಈ ದಿನ ಮಕ್ಕಳಿಗೆ ಗುರುವಿಲ್ಲದ ಗುರಿಯೊಂದೆ ಕಾಣ್ತಿದೆ. ಅಂತ ಗುರುವಿಲ್ಲದ ಗುರಿಯೇ ಇಂದಿನ ವೈಪರೀತ್ಯಗಳಿಗೆ ಕಾರಣವೆಂದರೆ ಹುಸಿಯಿಲ್ಲ.  ಹಾಗಾಗೆ ಈ ದಾಪುಗಾಲು.  ನಮ್ಮ ಭಾಷೆಯ, ಮಣ್ಣಿನ ಸೊಗಡಿನ ಪರಿಮಳವನ್ನು ಎತ್ತಿ ತೋರುವವರಾರು.  ಬೇರೇ ಯಾರೂ ಅಲ್ಲ ನಾವೇ!  ನಾವಂತೂ ಓದಲಿಲ್ಲ, ನಾವಂತೂ ಒಳ್ಳೇ ಬಟ್ಟೆಗಳನ್ನು ಉಡಲಿಲ್ಲ, ನಾವಂತೂ ಇವೆಲ್ಲಾ ಅನುಭವಿಸಲಿಲ್ಲ ಎಂಬ ಮೂಢ ಭಾವನೆಯಿಂದಲೇ ಈದಿನ ಸಾವಿರಾರು ಮಕ್ಕಳನ್ನು ಉತ್ತಮರನ್ನಾಗಿ ಮಾಡದೆ, ಉತ್ತಮ ಸಮಾಜ ನಿರ್ವಹಣೆಗೆ ಮುಂದೆ ಬಾರದೆ ಶಾಲೆಗಳು ಇಂದು ಕದ ಹಾಕುತ್ತಿವೆ ಎಂದರೆ ಇದು ನಾಚಿಕೆ ಸಂಗತಿಯಲ್ಲವೆ! 

 

ಇದಕ್ಕೆಲ್ಲ ಕಾರಣ ಇನ್ನೂ ಒಂದಿದೆ.  ಕನ್ನಡ ಭಾಷೆಯಲ್ಲಿ ಮೋಹ ಕಳೆದುಕೊಂಡಿರುವುದು!  ಕನ್ನಡ ಮಾತನಾಡಿದರೆ ಅವಮಾನ.  ನಮ್ ಮಕ್ಳು,  ಆಂಗ್ಲದಲ್ಲೇ ಮಾತಾಡಬೇಕು ಎಂಬ ಭ್ರಾಂತಿ. 

 

ಇದರಲ್ಲಿ ಸರ್ಕಾರದ ಪಾತ್ರವೇನೂ ಇಲ್ಲ ಎಂಬುದು ನನ್ನ ಭಾವನೆಯಲ್ಲ.  ಕೇವಲ ಮಕ್ಕಳಿಗೆ ಸೈಕಲ್ ಕೊಡಿಸಿ, ಮಧ್ಯಾಹ್ನದ ಬಿಸಿಯೂಟ ತಿನಿಸಿ, ಬಟ್ಟೆ ಪುಸ್ತಕಗಳನ್ನು ಕೊಟ್ಟರೆ ಸಾಲದು. ರಾಜಕಾರಣಕ್ಕಾಗಿ ದೊಡ್ಡ ದೊಡ್ಡ ಮಹಲುಗಳನ್ನು ಕಟ್ಟುವ ಬದಲು ಮಕ್ಕಳಿಗಾಗಿ ಉತ್ತಮ ಶಿಕ್ಷಣಕ್ಕಾಗಿ ಶಾಲೆಯೆಂಬ ದೇಗುಲವನ್ನು ಕಟ್ಟಬೇಕಿದೆ.  ಮೌಲ್ಯಯುತ ದಿನಚರಿಯಲ್ಲಿ ಮಕ್ಕಳನ್ನು ಸಾಗಿಸಬೇಕಿದೆ.  ಕೇವಲ ೪ - ೫ ಮಕ್ಕಳಿರುವ ಶಾಲೆಗಳಲ್ಲಿ ೪ ಜನ ಮೇಷ್ಟ್ರುಗಳಿರುವ ಸರ್ಕಾರೀ ಶಾಲೆಗಳನ್ನು ನಾನು ನೋಡಿದ್ದೇನೆ.  ಇದಕ್ಕೆಲ್ಲಾ ಸರ್ಕಾರದ ಜೊತೆ ಪರೋಕ್ಷವಾಗಿ ನಾವೂ ಹೊಣೆಯಲ್ಲವೆ.  ಇದೇ ಸರ್ಕಾರೀ ಶಾಲೆಯ ಮೇಷ್ಟ್ರುಗಳ ಮಕ್ಕಳೆಲ್ಲಿ ಓದುತ್ತಿದ್ದಾರೆ, ಯೋಚಿಸಿ ನೋಡಿ.   ತನ್ನ ಮಕ್ಕಳಿಗೆ ಉತ್ತಮ ಭವಿಷ್ಯ ಬೇಕು, ಬೇರೆಯವರಿಗೆ ಸರ್ಕಾರೀ ಶಾಲೆ ಸಾಕು ಎನ್ನುವ ಮೇಷ್ಟ್ರುಗಳು ಸರ್ವ ಶಿಕ್ಷಣ ಅಭಿಯಾನಕ್ಕಿಂತ, ಉತ್ತಮ ಸರ್ಕಾರೀ ಶಿಕ್ಷಣ ಅಭಿಯಾನವನ್ನು ನಡೆಸಬೇಕಿದೆ.  ಮಕ್ಕಳಿಗೆ ಬೇಕಿರುವುದು ನಾಗಾಲೋಟದಲ್ಲಿ ಓಡುತ್ತಿರುವ ಇಂದಿನ ವೈಜ್ಞಾನಿಕ ಮಾಯಾಮೃಗದ ಭವಿಷ್ಯವನ್ನು ಬೆನ್ನಟ್ಟುವದಲ್ಲ.  ತನ್ನ ಬದುಕನ್ನ ಗಾಂಧಿ ಕಂಡ ಗ್ರಾಮ ಏಳ್ಗೆಯಲ್ಲೇ ಕಾಣುವುದಾಗಿದೆ.  ಉತ್ತಮ ಗ್ರಾಮ ಏಳ್ಗೆಯಿಂದಲೆ ದೇಶದ ಪ್ರಗತಿ ಸಾಧ್ಯ, ಕೇವಲ ಕಾಂಕ್ರೀಟಿನ ಗಗನ ಚುಂಬಿ ಕಟ್ಟಡಗಳಿಂದಲ್ಲ ಎಂಬ ಗಾಂಧೀ ಹೇಳಿಕೆಯನ್ನು ನಾವಿಂದು ಪರಿಗಣಿಸಬೇಕಿದೆ.  

 

 

ಬನ್ನಿ ಕನ್ನಡಿಗರೇ ಸರ್ಕಾರದ ಈ ನಿರ್ಧಾರಕ್ಕೆ ನಮ್ಮ ನಿಲುವನ್ನು ಎತ್ತಿ ತೋರಿಸೋಣ.

 

ಇತಿ ಷಣ್ಮುಖ

ತುಮಕೂರು.

 

Comments