ದೂಧ್ ಸಾಗರ್
ದೂಧ್ ಸಾಗರ್ ಜಲಪಾತ ಹೆಸರು ಕೇಳಿಯೆ ಕುತೂಹಲಗೊಂಡು ಓದತೊಡಗಿದ್ದೆ.ಹಾಲಿನ ಹೊಳೆಯೆ ಧುಮುಕಿದಂತೆ ,ಸೃಷ್ಟಿಮಾತೆ ಭುವಿಗೆ ಹಾಲಾಭಿಷೇಕ ಮಾಡಿದಂತೆ ಮನೋಹರವಾದ ದೃಶ್ಯವೈಭವ. ರೈಲಿನಲ್ಲಿ ಹೋಗಿ ರೈಲ್ವೆಹಳಿಯಲ್ಲಿ ನಡೆದು ಸಾಗಬೇಕೆಂದು ತಿಳಿದಾಗ ಪುಟ ತಿರುವಿದ್ದೆ ಆದಿನ.ಈ ಜಲಪಾತದ ಸೌಂದರ್ಯವನ್ನು ಕಣ್ತುಂಬಿಸುವ ಭಾಗ್ಯ ನನ್ನದಾಗುತ್ತದೆಂದು ಎನಿಸಿರಲಿಲ್ಲ. ನನ್ನವರು ಬ್ಯಾಂಕಿನಲ್ಲಿ ಉದ್ಯೋಗದಲ್ಲಿದ್ದು ಮೂರು ವರುಷಕೊಮ್ಮೆ ವರ್ಗಾವಣೆ. ನಾನಾ ಊರುಗಳ ಜನರು,ಅವರ ಭಾಷೆ, ಸಂಸ್ಕ್ರತಿ ಅರಿಯುವ ಅವಕಾಶ.ಈಗ ಮಲೆನಾಡಿನ ವನಸಿರಿಯನ್ನು,ಝರಿ,ಜಲಪಾತಗಳನ್ನು ನೋಡುವ ಯೋಗ.ಚೌತಿಯ ರಜದಲ್ಲಿ ನಮ್ಮ ಮಕ್ಕಳು ಮತ್ತು ಅವರ ಒಡನಾಡಿಗಳು ಒಟ್ಟು ಸೇರಿ ಬಂದಿದ್ದು ನಮ್ಮ ಮನೆ,ಮನ ಸಡಗರ ಸಂಭ್ರಮದಿಂದ ತುಂಬಿತ್ತು..ಎಲ್ಲರು ಚಿಗುರುಮೀಸೆಯ ಉತ್ಸಾಹದ ಚಿಲುಮೆಗಳು.
ಮೊದಲೆರಡು ದಿನ ಸುತ್ತಮುತ್ತಲಿನ ಪ್ರೇಕ್ಷಣೀಯ ಜಾಗಗಳನ್ನು ನೋಡಿದೆವು.ಮರುದಿನ ದೂಧ್ ಸಾಗರ್ ನೋಡಲು ಹೋಗುವುದೆಂದು ಪ್ಲಾನ್ ಮಾಡಿದೆವು. ಜೋರಾದ ಮಳೆ ಸುರಿಯುತ್ತಿರುವಾಗ ಜಲಪಾತ ನೋಡಲು ಸಿಗುವುದೋ ಇಲ್ಲ ಹೊಗೆಯಂತೆ ಇದ್ದು ಏನೂ ಕಾಣದಿದ್ದರೆ ಎಂಬ ಅನುಮಾನ ನನ್ನವರಿಗೆ ಕಾಡಿತ್ತು.ಏನೇ ಆಗಲಿ ಮಕ್ಕಳ ಜತೆಯಲ್ಲಿ ಹೋಗುವುದೆ ಸಂಭ್ರಮ ವೆಂದು ಹೊರಟೆವು.ದಾಂಡೇಲಿ ಸಮೀಪದ ಕ್ಯಾಸಲ್ ರಾಕ್ ರೈಲು ನಿಲ್ದಾಣ ತಲಪುವಾಗ ಗಂಟೆ ೧೨ ಆಗಿತ್ತು.ಅಲ್ಲಿಂದ ಸುಮಾರು ೧೨ಕಿ.ಮಿ.ದೂರದಲ್ಲಿ ದೂಧ್ ಸಾಗರ್ ರೈಲು ನಿಲ್ದಾಣ. ಚಾರಣಪ್ರಿಯರು ರೈಲುಹಳಿಯಲ್ಲಿ ನಡೆದುಕೊಂಡೇ ಹೋಗುತ್ತಾರೆ.ನಾವು ರೈಲಿನಲ್ಲಿ ಸಾಗಿದೆವು.ಇಕ್ಕೆಲಗಳಲ್ಲಿ ರಮಣೀಯ ನೋಟ.ಅಲ್ಲಲ್ಲಿ ಪುಟ್ಟ ಪುಟ್ಟ ಝರಿಗಳು. ಅನೇಕ ಸುರಂಗ ಮಾರ್ಗಗಳು ಸಿಗುತ್ತವೆ.ದೂಧ್ ಸಾಗರ್ ರೈಲುನಿಲ್ದಾಣದಲ್ಲಿ ಇಳಿದು ಸುಮಾರು ಮುಕ್ಕಾಲು ಕಿ.ಮಿ. ರೈಲುಹಳಿಯಲ್ಲಿ ನಡೆಯಬೇಕು.ಅಲ್ಲಿಯು ಒಂದು ಸುರಂಗಮಾರ್ಗ ಹಾದುಹೋಗಬೇಕಿತ್ತು.ಮಧ್ಯಭಾಗ ಸಮೀಪಿಸುತ್ತಿದ್ದಂತೆ ಕತ್ತಲು ಆವರಿಸಿತು.ಮೊಬೈಲ್ ನ ಬೆಳಕಿನಲ್ಲಿ ಸಾಗಿದೆವು.ಮುಂದೆ ಸಾಗುತ್ತಿದ್ದಂತೆ ಜಲಪಾತದ ಭೋರ್ಗರೆಯುವ ಶಬ್ದ ಕೇಳತೊಡಗಿತು.ಹತ್ತಿರ ಹೋಗುತ್ತಿದ್ದಂತೆ ರುದ್ರ ರಮಣೀಯ ಮೈನವಿರೇಳಿಸುವ ದೃಶ್ಯ.ಹುಡುಗರೆಲ್ಲ ಕೈಗಳನ್ನು ಮೇಲೆತ್ತಿ ಹೋ...ಎನ್ನುತ್ತಾ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ರೈಲು ಹಳಿಯ ಪಕ್ಕದಲ್ಲೇ ಈ ಜಲಪಾತ ಧುಮುಕುವುದರಿಂದ ಸಮೀಪದಿಂದ ಜಲಪಾತದ ಸಿರಿಯನ್ನು ನೋಡುವ ಅವಕಾಶ.ತಲೆಯೆತ್ತಿ ಮೇಲೆ ನೋಡಿದರೆ ಬೀಳುತ್ತಿರುವ ಜಲರಾಶಿ, ರೈಲುಹಳಿಯ ಸೇತುವೆಯ ಕೆಳಬಗ್ಗಿ ನೋಡಿದರೆ ಮುಂದುವರಿದ ಜಲಪಾತ.ಪದಗಳಲ್ಲಿ ವರ್ಣಿಸಲು ಅಸಾಧ್ಯವಾದ ಸೊಬಗು.ಜಲಪಾತದ ರಭಸದಿಂದ ಸಿಂಚನವಾಗುತಿದ್ದ ಹನಿಗಳು ಮಳೆಗಿಂತ ಹೆಚ್ಚಿದ್ದು ನಮ್ಮನ್ನು ತೋಯಿಸಿತು.ಪ್ರಕೃತಿಯ ಮಡಿಲಲ್ಲಿ ಎಲ್ಲರು ಮಕ್ಕಳಾದೆವು. ನಾವು ನೋಡಿದ ಯಾವ ಜಲಪಾತದ ದೃಶ್ಯವೂ ಇಷ್ಟೊಂದು ರೋಮಾಂಚನಕಾರಿಯಾಗಿರಲಿಲ್ಲ.ಮಳೆಯಿದ್ದರೂ ಕೊಡೆಯ ಮರೆಯಲ್ಲಿ ಫೊಟೊ ಕ್ಲಿಕ್ಕಿಸಿದೆವು,ವಿಡಿಯೊ ಚಿತ್ರೀಕರಿಸಿದೆವು..ದೂಧ್ ಸಾಗರ್ ರೈಲು ನಿಲ್ದಾಣದಲ್ಲಿ ಕೊನೆಯ ರೈಲು ೫.೧೫ ಕ್ಕೆ ಹಿಡಿಯಬೇಕಾದುದರಿಂದ ಹಿಂತಿರುಗಲು ಮನಸ್ಸಿಲ್ಲದಿದ್ದರೂ ನಿಲ್ದಾಣದೆಡೆಗೆ ನಿಧಾನವಾಗಿ ಹೆಜ್ಜೆ ಹಾಕಲಾರಂಭಿಸಿದೆವು. ಪಶ್ಚಿಮ ಘಟ್ಟದ ಸೊಬಗನ್ನು ಹೆಚ್ಚಿಸುವ ಅನೇಕ ಜಲಪಾತಗಳಲ್ಲಿ ದೂಧ್ ಸಾಗರ್ ಜಲಪಾತವೂ ಒಂದು. ಇದು ಕರ್ನಾಟಕ ಮತ್ತು ಗೋವಾ ಗಡಿ ಸಮೀಪ ಗೋವಾ ರಾಜ್ಯದ ಗಡಿಯೊಳಗಿದೆ.ಮಾಂಡೋವಿ ನದಿ ಇಲ್ಲಿ ೧೦೧೭ ಅಡಿ ಎತ್ತರದಿಂದ ಧುಮುಕಿ ಈ ಜಲಪಾತವನ್ನು ಸೃಷ್ಟಿಸಿದೆ. ಭಾರತದ ೫ನೇ ಎತ್ತರದ ಜಲಪಾತ ಇದಾಗಿದೆ.ರಜಾದಿನಗಳಲ್ಲಿ ಪ್ರವಾಸಿಗರ ದಂಡೇ ಇಲ್ಲಿರುತ್ತದೆ.ದಟ್ಟಾರಣ್ಯದ ನಡುವೆ ಈ ಜಲಪಾತವಿರುವುದರಿಂದ ಆಹಾರವನ್ನು ನಾವು ಒಯ್ಯಬೇಕು. ಜೋರು ಮಳೆಯಿರುವ ಸಮಯದಲ್ಲಿ ಇಲ್ಲಿಗೆ ಬಂದರೆ ಈ ಜಲಪಾತದ ರೌದ್ರ ಸೌಂದರ್ಯವನ್ನು ಅನುಭವಿಸಬಹುದು.
Comments
ಉ: ದೂಧ್ ಸಾಗರ್
In reply to ಉ: ದೂಧ್ ಸಾಗರ್ by prasannakulkarni
ಉ: ದೂಧ್ ಸಾಗರ್
ಉ: ದೂಧ್ ಸಾಗರ್
In reply to ಉ: ದೂಧ್ ಸಾಗರ್ by krishnarajb
ಉ: ದೂಧ್ ಸಾಗರ್
In reply to ಉ: ದೂಧ್ ಸಾಗರ್ by Premashri
ಉ: ದೂಧ್ ಸಾಗರ್
In reply to ಉ: ದೂಧ್ ಸಾಗರ್ by ಗಣೇಶ
ಉ: ದೂಧ್ ಸಾಗರ್
ಉ: ದೂಧ್ ಸಾಗರ್
In reply to ಉ: ದೂಧ್ ಸಾಗರ್ by venkatb83
ಉ: ದೂಧ್ ಸಾಗರ್