ಹಳೆ ಕಥೆಯ ಹೊಸ ರೂಪ
ನನಗೆ ಚಿಕ್ಕಂದಿನಿಂದಲೂ ಕಥೆ ಕೇಳುವ ಆಸೆ. ದೊಡ್ಡವಳಾದಂತೆ ಕಥೆ ಹೇಳುವ ಆಸೆಯೂ ಹುಟ್ಟಿಕೊಂಡಿತು. ನನ್ನ ಕಥೆ ಕೇಳಲು ಯಾರೂ ಇಲ್ಲದಾಗ ಅದನ್ನು ಬರೆಯುವ ಚಟ ಶುರುವಾಯಿತು. ಚಿಕ್ಕ ಮಕ್ಕಳಿಗೆ ಕಥೆ ಹೇಳುವುದಕ್ಕೆ ಚೆನ್ನಾಗಿರುತ್ತದೆ ಏಕೆಂದರೆ ಅವರು ಆಸಕ್ತಿಯಿಂದ ಕೇಳುತ್ತಾರೆ. ಆದರೆ ಹೇಳಿದ್ದೇ ಕಥೆ ಹೇಳಿದರೆ ಬೋರ್ ಎಂದು ಎದ್ದು ಹೋಗುತ್ತಾರೆ. ಅದಕ್ಕಾಗಿ ನಾನು ಹಳೇ ಕಥೆಗಳನ್ನು ಹೊಸದಾಗಿ ಹೇಳಲು ಪ್ರಾರಂಭಿಸಿದ್ದೇನೆ. ಈಗ ನನ್ನ ಸುತ್ತಲೂ ಮಕ್ಕಳ ಹಿಂಡು ಕಥೆ ಕೇಳಲು ಕುಳಿತುಕೊಳ್ಳುತ್ತಾರೆ. ಈಗ ನನ್ನ ಬಳಿಯಿರುವ "ಹಳೆಯ ಹೊಸ ಕಥೆ"ಗಳಲ್ಲಿ ಒಂದನ್ನು ನಿಮಗೆ ಓದಲು ಇಲ್ಲಿ ಟೈಪ್ ಮಾಡಿದ್ದೇನೆ.
ನಮ್ಮೂರ ಪುಣ್ಯಕೋಟಿಯ ಅಮರ ಕಥೆ.
ನಮ್ಮ ಹಳ್ಳಿಯ ದನಗಳೆಲ್ಲಾ ನಮ್ಮೂರಿನ ಅಂಚಿನಲ್ಲಿರುವ ಕಾಡಿಗೆ ಮೇಯಲು ನಿತ್ಯವೂ ಹೋಗುತ್ತಿದ್ದವು. ಸೋಮನ ಮನೆಯ ಪುಣ್ಯಕೋಟಿಯೂ ಇತರೆ ಬೆಳ್ಳಿ, ಗೌರಿ, ಪುಟ್ಟಿ,ಕಾಳಿ, ಮಂಗಳಿ, ಲಚ್ಚಿ ಜೊತೆ ಕಾಡಿಗೆ ಹುಲ್ಲು ಮೇಯಲು ಹೋಗುತ್ತಿತ್ತು. ಒಂದು ದಿನ ಪುಣ್ಯಕೋಟಿಯು ತನ್ನ ಪುಟ್ಟ ಕರುವಿಗೆ ಹಾಲುಣಿಸಿ ಹೊರಡುವುದು ಸ್ವಲ್ಪ ತಡವಾಗಿ ಜೊತೆಗಾರರಿಗಿಂತ ಹಿಂದುಳಿಯಿತು. ಹೀಗೆ ಒಂಟಿಯಾಗಿ ಪುಣ್ಯಕೋಟಿ ಕಾಡಿನಲ್ಲಿ ಹುಲ್ಲು ಮೇಯುತ್ತಿರುವಾಗ ಅದಕ್ಕೆ ಹೆಬ್ಬುಲಿ ಎದುರಾಯಿತು. ಆ ಹೆಬ್ಬುಲಿ, ಇಂದು ಒಳ್ಳೆಯ ಆಹಾರ ತನಗೆ ಸಿಕ್ಕಿತೆಂದು ಹಿಗ್ಗಿ ಪುಣ್ಯಕೋಟಿಯ ಮೇಲೆ ಹಾರಿತು. ಆಗ ಪುಣ್ಯಕೋಟಿಯು ತಪ್ಪಿಸಿಕೊಂಡು ಹೆಬ್ಬುಲಿಗೆ ಹೇಳಿತು. " ಹುಲಿರಾಯನೇ ಇಂದು ನಾನು ನಿನಗೆ ಆಹಾರ ವಾಗಲು ಸಿದ್ಧ ಆದರೆ ಹಟ್ಟಿಯಲ್ಲಿರುವ ನನ್ನ ಪುಟ್ಟ ಕಂದನಿಗೆ ಒಮ್ಮೆ ಹಾಲುಣಿಸಿ, ಮೈದಡವಿ ಕೂಡಲೆ ಬರುತ್ತೇನೆ". ಆಗ ಹೆಬ್ಬುಲಿಯು ನಗುತ್ತಾ "ನಿನ್ನನು ಬಿಟ್ಟುಬಿಡಲು ನಾನೇನು ಪೆದ್ದ ಪೋಲೀಸ್ ಪೇದೆ ಅಂದುಕೊಂಡೆಯಾ? ನಿನ್ನನ್ನು ಈಗಲೇ ತಿನ್ನುತ್ತೇನೆ" ಎಂದಿತು. ಆದರೆ ಪುಣ್ಯಕೋಟಿಯು ಕಣ್ಣೀರಿಡುತ್ತಾ "ನಾನು ಸತ್ಯವನ್ನೇ ಹೇಳುತ್ತಿದ್ದೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುತ್ತಿಲ್ಲ. ನನ್ನ ಮಾತನ್ನು ನಂಬು" ಎಂದಿತು. ಪುಣ್ಯಕೋಟಿಯ ಕಣ್ಣೀರಿಗೆ ಹೆಬ್ಬುಲಿಯ ಮನಸ್ಸು ಕರಗಿ ಅದನ್ನು ಹಟ್ಟಿಗೆ ಹಿಂತಿರುಗಲು ಬಿಟ್ಟಿತು. ಪುಣ್ಯಕೋಟಿ ಕೋಡಲೆ ಮನೆಯ ಹಾದಿ ಹಿಡಿಯಿತು. ಇತ್ತ ಹಸಿದ ಹೆಬ್ಬುಲಿಗೆ ಬೇರೆ ಯಾವ ಬೇಟೆಯೂ ಸಿಗದೆ ಹಸಿವಿನಿಂದ ಬಳಲಿ ಬಂಡೆಯ ಮೇಲೆ ಮಲಗಿತು.
ಸ್ವಲ್ಪ ಸಮಯದ ನಂತರ ಪುಣ್ಯಕೋಟಿಯು ಹೆಬ್ಬುಲಿಯ ಮುಂದೆ ಬಂದು ನಿಂತಾಗ ಹೆಬ್ಬುಲಿಗೆ ಆಶ್ಚರ್ಯವಾಗಿ "ನನ್ನ ಆಹಾರವಾಗಲು ಬಂದೇಬಿಟ್ಟೆಯಾ?! ನಿನ್ನಂಥ ಸತ್ಯವಂತೆಯನ್ನು ನಾನೇಕೆ ತಿನ್ನಲಿ. ಹಸಿವಿನಿಂದ ನನ್ನ ಪ್ರಾಣ ಹೋದರೆ ಹೋಗಲಿ ನಿನ್ನನ್ನು ತಿನ್ನಲಾರೆ." ಎಂದಿತು. ಆಗ ಪುಣ್ಯಕೋಟಿಯು "ಪ್ರಕೃತಿ ನಿಯಮದಂತೆ ನಾನು ನಿನ್ನ ಆಹಾರವೆಂದು ನಿರ್ಧಾರವಾಗಿದೆ ಆದ್ದರಿಂದ ನೀನು ನನ್ನನ್ನು ತಿಂದು ಸುಖವಾಗಿರು" ಎಂದಿತು. ಆಗ ಹೆಬ್ಬುಲಿಯು ಪುಣ್ಯಕೋಟಿಯ ಜಾಣ್ಮೆಗೆ ವಿಸ್ಮಯಗೊಂಡು "ನಾನೊಂದು ದಿನ ಉಪವಾಸವಿದ್ದರೆ ಏನೂ ತೊಂದರೆಯಿಲ್ಲ. ನಾಳೆ ನನಗೆ ಬೇರೆ ಆಹಾರ ಸಿಗಬಹುದು ಈಗ ನೀನು ಹಟ್ಟಿಗೆ ಹಿಂತಿರುಗಿ ನಿನ್ನ ಕಂದನೊಂದಿಗೆ ಸುಖವಾಗಿ ಬಾಳು" ಎಂದಿತು. ಆಗ ಪುಣ್ಯಕೋಟಿಯು " ಅಯ್ಯೋ ಹೆಬ್ಬುಲಿಯೇ, ನೀನು ನಿನ್ನ ಪೂರ್ವಜರಂತೇ ವರ್ತಿಸುತ್ತಿದ್ದಿಯಾ. ಈಗಿನ ವಿಷಯ ನೀನು ತಿಳಿದಿಲ್ಲ. ನಾನು ಇನ್ನು ಕೆಲವೇ ದಿನಗಳಲ್ಲಿ ಕಟುಕರ ಪಾಲಾಗಿ ಮನುಷ್ಯರಿಗೆ ಆಹಾರವಾಗುತ್ತೇನೆ. ನಾನು ಸತತವಾಗಿ ಗಂಡು ಸಂತಾನವನ್ನೇ ಪಡೆದಿದ್ದುದರಿಂದ, ವಯಸ್ಸೂ ಆದುದರಿಂದ ನನ್ನ ಯಜಮಾನನಿಗೆ ಹೊರೆಯಾಗಿದ್ದೇನೆ ಆದ್ದರಿಂದ ನನ್ನ ಒಡೆಯನು ನನ್ನನ್ನು ಕಟುಕನಿಗೆ ಮಾರುತ್ತಾನೆ. ನಾನು ಮನುಷ್ಯನ ಆಹಾರವಾಗುವುದಕ್ಕಿಂತ ನಿನ್ನ ಆಹಾರ ವಾಗುವುದು ಪ್ರಕೃತಿ ನಿಯಮಕ್ಕೆ ಅನುಗುಣವಾಗುತ್ತದೆ. ನೀನು ನನ್ನನ್ನು ತಿಂದು ದಷ್ಟಪುಷ್ಟನಾಗಿ ನಿನ್ನ ಸಂತಾನವನ್ನು ಹೆಚ್ಚಿಸಿಕೋ. ಮಾನವನಿಂದ ಈಗ ನಿನ್ನ ಸಂತತಿಯೂ ಅವನತಿ ಹೊಂದುತ್ತಿದೆ" ಎಂದಿತು. "ಅಬ್ಬಾ ಪುಣ್ಯಕೋಟಿಯೇ ನೀನು ಬಹಳ ಜಾಣೆ. ನಿನ್ನಂಥವಳು ಖಂಡಿತವಾಗಿಯೂ ಮನುಷ್ಯನ ಆಹಾರವಾಗಬಾರದು. ನಾನೇ ನಿನ್ನನ್ನು ತಿಂದು ಬುದ್ಧಿವಂತನಾಗುತ್ತೇನೆ" ಎಂದು ಪುಣ್ಯಕೋಟಿಯನ್ನು ತಿಂದಿತು. ಪುಣ್ಯಕೋಟಿಯ ಆತ್ಮ ಮೋಕ್ಷ ಪಡೆಯಿತು. ಹೆಬ್ಬುಲಿ ಬಲಿಷ್ಠವಾಗಿ ಕಾಡೇ ನಡುಗುವಂತೆ ಘರ್ಜಿಸಿತು.
ಚಿತ್ರ: ಸುನಾದ ಹೆಬ್ಬಾರ್
Comments
ಉ: ಹಳೆ ಕಥೆಯ ಹೊಸ ರೂಪ
In reply to ಉ: ಹಳೆ ಕಥೆಯ ಹೊಸ ರೂಪ by neela devi kn
ಉ: ಹಳೆ ಕಥೆಯ ಹೊಸ ರೂಪ
ಉ: ಹಳೆ ಕಥೆಯ ಹೊಸ ರೂಪ
In reply to ಉ: ಹಳೆ ಕಥೆಯ ಹೊಸ ರೂಪ by spr03bt
ಉ: ಹಳೆ ಕಥೆಯ ಹೊಸ ರೂಪ
ಉ: ಹಳೆ ಕಥೆಯ ಹೊಸ ರೂಪ
In reply to ಉ: ಹಳೆ ಕಥೆಯ ಹೊಸ ರೂಪ by kavinagaraj
ಉ: ಹಳೆ ಕಥೆಯ ಹೊಸ ರೂಪ
ಉ: ಹಳೆ ಕಥೆಯ ಹೊಸ ರೂಪ