ಮಕ್ಕಳ ದಿನಾಚರಣೆ - ನಿಜವಾದ ಹಬ್ಬವಾಗುವುದು ಹೇಗೆ?

ಮಕ್ಕಳ ದಿನಾಚರಣೆ - ನಿಜವಾದ ಹಬ್ಬವಾಗುವುದು ಹೇಗೆ?

 ಇಂದು ಮಕ್ಕಳ ದಿನಾಚರಣೆ. ಮಕ್ಕಳ ದಿನಾಚರಣೆಯು ಕೇವಲ ಶಾಲೆಗಳಲ್ಲಿ ನೆಹರು ಭಾವಚಿತ್ರವಿಟ್ಟು, ದೀಪವಚ್ಚಿ, ಕೆಲವು ನಿಮಿಷಗಳ ಕಾಲ ಭಾಷಣವನ್ನು ಮಾಡಿ, ಒಂದೆರಡು ಹಿತವಚನ ಹೇಳಿ, ಸಿಹಿ ಹಂಚಿ, ಕೆಲವು ಸ್ಪರ್ಧೆ ನಡೆಸಿ, ಪ್ರಶಸ್ತಿ ಕೊಟ್ಟು ಮುಗಿಸಿದರೆ ಮಕ್ಕಳ ದಿನಾಚರಣೆ ಮುಗಿದಂತೆ ಶಾಲೆಗಳಲ್ಲಿ. ಪತ್ರಿಕೆಗಳಲ್ಲಿ ಕೆಲವಾರು ಲೇಖನಗಳು, ದೂರದರ್ಶನಗಳಲ್ಲಿ ಹಲವಾರು ಕಾರ್ಯಕ್ರಮಗಳು ಮಕ್ಕಳ ದಿನಾಚರಣೆಗೆ ಹಬ್ಬದ ಮೆರಗನ್ನು ನೀಡುತ್ತದೆ. ಮಕ್ಕಳ ದಿನಾಚರಣೆಯು ಹಬ್ಬವೇ. ಆದರೆ ಆ ಹಬ್ಬ ಎಲ್ಲರೂ ಆಚರಿಸವಂತಿರಬೇಕು, ಎಲ್ಲರಿಗೂ ಅದು ಹಬ್ಬವಾಗಿರಬೇಕು. ಎಷ್ಟೋ ಮಕ್ಕಳು ಸೂರಿಲ್ಲದೆ, ಅನ್ನವಿಲ್ಲದೆ, ವಿದ್ಯೆ ಇಲ್ಲದೆ ಭಿಕ್ಷಾಟನೆ ಮಾಡಿ, ಕ್ರೂರವಾಗಿ ದುಡಿಸಿಕೊಳ್ಳುವವರ ಕೈ ಕೆಳಗೆ ದುಡಿದು ಕಠೋರವಾದಂತಹ ಜೀವನ ಸಾಗಿಸುತ್ತಿದ್ದಾರೆ. ಇವರಿಗೂ ಮಕ್ಕಳ ದಿನಾಚರಣೆ ಹಬ್ಬವಾಗಬೇಕಲ್ಲವೇ? ಇವರು ಮಕ್ಕಳಲ್ಲವೇ? ಇಂತಹ ಎಷ್ಟೋ ಮಕ್ಕಳು ಇರುವಾಗ, ಮಕ್ಕಳ ದಿನಾಚರಣೆಯು ಒಂದು ಹಬ್ಬವಾಗಿ ಹೇಗೆ ಆಚರಿಸಲು ಸಾಧ್ಯ?

ಚಡ್ಡಿ ಹಾಕಿಕೊಂಡು ಆಡುವ ವಯಸ್ಸಲ್ಲಿ ಮಕ್ಕಳು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಯಾವ ಅಡ್ಡಿ-ಆತಂಕವಿಲ್ಲದೆ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಾರೆ. ಮಕ್ಕಳು ವೈಟ್ನರ್(whitener) ಒಂದು ಬಟ್ಟೆಯ ಮೇಲೆ ಹಾಕಿ, ಅದರ ವಾಸನೆಯನ್ನು ಎಳೆದುಕೊಳ್ಳುತ್ತಾರೆ. ಇದರ ಬಗ್ಗೆ ಪತ್ರಿಕೆಯಲ್ಲಿ ಒಂದು ಲೇಖನ ಓದಿದ್ದೆ. ಆದರೆ ಮೆಜೆಸ್ಟಿಕ್ ರಸ್ತೆಗಳಲ್ಲಿ ಓಡಾಡುತ್ತಿರುವಾಗ ಇಂತಹ ಎಷ್ಟೊ ಮಕ್ಕಳನ್ನು ಕಣ್ಣಾರೆ ರಸ್ತೆಯ ಬದಿಗಳಲ್ಲಿ ಕಂಡೆ. ಒಂದು ಬಾಟಲು ವೈಟ್ನರ್ ಮುಂದೆ ಇಟ್ಟು, ಒಂದು ಬಟ್ಟೆಗೆ ಅದನ್ನು ಲೇಪಿಸಿ ಅದರ ವಾಸನೆ ಎಳೆಯುತ್ತಿದ್ದರು ಯಾವುದೇ ಭಯವಿಲ್ಲದೆ ಸಾರ್ವಜನಿಕವಾಗಿ. ಅದು  ನಶೆಯಂತೆ. ಒಂದು ರೀತಿ ಮತ್ತು ತರಿಸುತ್ತದೆ.. ಅದು ಕಮ್ಮಿ ಬೆಲೆಯಲ್ಲಿ ಸಿಗುವುದರಿಂದ ಬಡ ಮಕ್ಕಳು, ದೊಡ್ಡವರು ಸಹ ಇಂತಹ ದುಶ್ಚಟದಲ್ಲಿ ಬೀಳುತ್ತಿದ್ದಾರೆ!
ಸಣ್ಣ ವಯಸ್ಸಿಗೆ ಮೊಬೈಲ್ ಗಳ ಬಳಕೆ ಹೆಚ್ಚುತ್ತಿದೆ. ಇಂದು ಬೆಳಗ್ಗೆ ಒಬ್ಬ ಶಾಲಾ ಹುಡುಗ ನಮ್ಮ ಮನೆಯ ಮುಂದೆ ಸಾಗುತ್ತಿದ್ದ. ನೋಡಿದರೆ ಕೇವಲ ಐದೋ-ಆರೋ ತರಗತಿಯಲ್ಲಿ ಓದುತ್ತಿರುವನಂತೆ ಕಾಣುತ್ತಿದ್ದ. ಶಾಲಾ ವಸ್ತ್ರ ತೊಟ್ಟಿದ್ದ, ಬ್ಯಾಗ್ ಸಹ ಇತ್ತು. ಇಂದು ಮಕ್ಕಳ ದಿನಾಚರಣೆಯಾದ್ದರಿಂದ ಅವನು ಶಾಲೆಯಲ್ಲಿ ಜರಗುವ ಮಕ್ಕಳ ದಿನಾಚರಣೆಯ ಕಾರ್ಯಕ್ರಮಕ್ಕೆ ಹೊರಟಿಹನೆಂದು ಅಂದಾಜಿಸಿದೆ. ಆದರೆ ಅವನ ಕೈಯಲ್ಲಿ ಮೊಬೈಲ್ ಇತ್ತು, ಅದರಲ್ಲಿ ಮಾತನಾಡುತ್ತ ಹೋಗುತ್ತಿದ್ದ. ಆ ವಯಸ್ಸಲ್ಲಿ ಅವನಿಗೆ ಅದು ಬೇಕಾಗಿತ್ತೆ? ಅವನೊಬ್ಬನೆ ಅಲ್ಲ, ದಿನವೂ ಸಾಕಷ್ಟು ಶಾಲಾಮಕ್ಕಳು ಮೊಬೈಲ್ ಬಳಸುವುದನ್ನು ಕಾಣುತ್ತಲೆ ಇರುತ್ತೇನೆ. ಅವರು ತಂದೆ-ತಾಯಿಗೆ ತಿಳಿಯದಂತೆ ಉಪಯೋಗಿಸುತ್ತಾರೊ ಅಥವ  ತಂದೆ-ತಾಯಿಗಳೆ ಅದನ್ನು ಕೊಡಿಸಿರುತ್ತಾರೊ ನನಗೆ ತಿಳಿಯದು. ಆದರೂ ಆ ವಯಸ್ಸಿಗೆ ಮೊಬೈಲ್ ಬಳಕೆ ಮಾಡುವುದರಿಂದ ಜೀವನದಲ್ಲಿ ತಪ್ಪು ದಾರಿ ಹಿಡಿಯುವುದು ಮಾತ್ರ ಹೆಚ್ಚು ಪ್ರಮಾಣದಲ್ಲಿ ನಿಶ್ಚಿತ.
ಮಕ್ಕಳು ಮುಗ್ಧರು, ಏನು ಅರಿಯದವರು ಎನ್ನುವ ಅಂಶ ಈ ಕಾಲದಲ್ಲಿ ಮೂರು ಅಥವ ನಾಲ್ಕನೆ ತರಗತಿಯವರೆಗೆ ಸೀಮಿತವಾಗಿದೆ. ನಾನು ಕಾಲೇಜಿಗೆ ಬಸ್ಸಲ್ಲಿ ಹೋಗುವ ವೇಳೆಯಲ್ಲಿ, ಶಾಲಾ ಆವರಣಗಳಲ್ಲಿ ಸಂಚರಿಸುವ ಸಮಯದಲ್ಲಿ, ರಸ್ತೆಯಲ್ಲಿ ಸಾಗುತ್ತಿರುವಾಗ ಗಮನಿಸುತ್ತಿರುತ್ತೇನೆ. ಬಹಳಷ್ಟು ಸಣ್ಣ ವಯಸ್ಸಿನ ಹುಡುಗರ ಬಾಯಲ್ಲಿ ಕೆಟ್ಟ ಶಬ್ಧಗಳು ಲೀಲಾಜಾಲವಾಗಿ ಹರಿದಾಡುತ್ತಿರುತ್ತದೆ. ಅಂತಹ ಪದಗಳು ಇಂದಿನ ಬಹಳಷ್ಟು ಮಕ್ಕಳಿಗೆ, ಅವರು ವ್ಯವಹರಿಸುವ ಭಾಷೆಯಲ್ಲಿ ಸೇರಿಹೋಗಿವೆ. ಮಕ್ಕಳು ಆ ಸಣ್ಣ ವಯಸ್ಸಿಗೆ ಅಂತಹ ಶಬ್ಧಗಳನ್ನು ಯಾವ ಹೆದರಿಕೆ ಇಲ್ಲದೆ ಉಪಯೋಗಿಸುತ್ತಿದ್ದರೆ, ಬೆಳೆಯುತ್ತಾ ಹೋದಂತೆ ಅವೆಲ್ಲವೂ ಇನ್ನಷ್ಟು ಬೆಳೆದು, ಕಡೆಗೆ ಅವುಗಳನ್ನು ತಮ್ಮ ಜೀವನದ ಪದಕೋಶದಲ್ಲಿ ಅಚ್ಚಾಗಿ ಉಳಿಸಿಕೊಳ್ಳುತ್ತಾರೆ. ಆ ಮಕ್ಕಳು ಅಂತಹ ಅವಾಚ್ಯ ನುಡಿಗಳನ್ನು ಸಾರ್ವಜನಿಕವಾಗಿ ನಿರಾತಂಕವಾಗಿ ಉಪಯೋಗಿಸುವ ವೇಳೆಯಲ್ಲಿ ಅವರ ತಂದೆ-ತಾಯಂದಿರೆ ಕೇಳಿಸಿಕೊಂಡರೆ, ಅವರ ಬಂಧುಗಳ ಕಿವಿಗೆ ಬಿದ್ದರೆ,  ತಂದೆ-ತಾಯಂದಿರ ಆಪ್ತರಿಗೆ ಕೇಳಿಸಿದರೆ ಎಷ್ಟು ಅವಮಾನವಲ್ಲವೇ? ಕಡೆಗೆ ಅದರಿಂದ ತೆಗಳಿಕೆಗೆ ಗುರಿಯಾಗುವುದು ತಂದೆ-ತಾಯಂದಿರು ಹಾಗೂ ಗುರುಗಳು. ಮಕ್ಕಳು ಹಿಡಿದ ತಪ್ಪು ದಾರಿಯಿಂದ, ಕೆಟ್ಟ ಸಹವಾಸದಿಂದ ಅವರ ತಂದೆ-ತಾಯಿಯರಿಗೆ ದೊಡ್ಡ ಉಡುಗೊರೆಯೇ ದೊರಕುತ್ತದೆ. ಹಾಗಾಗಿ ತಂದೆ-ತಾಯಂದಿರು ಮಕ್ಕಳಿಗೆ ಸಣ್ಣ ವಯಸ್ಸಿನಿಂದ ಒಳ್ಳೆಯ ಗುಣವನ್ನು ಕಲಿಸುತ್ತ ಬರಬೇಕು. ಹಾದಿ ತಪ್ಪದಂತೆ ಎಚ್ಚರವಹಿಸಬೇಕು. ಗುಣವಂತರಾಗಿ ಬೆಳೆದ ಮಕ್ಕಳು ಸಹ ತಪ್ಪು ದಾರಿ ಹಿಡಿಯುತ್ತಿರುವುದು ಅಧಿಕವಾಗಿದೆ. ಒಳ್ಳೆಯ ಹಾದಿಗಿಂತ, ಕೆಟ್ಟ ಹಾದಿಗಳು ಹೆಚ್ಚು ಆಕರ್ಶಿಸುತ್ತದೆ. ಆ ಹಾದಿಗೆ ಮೋಹಿತರಾಗಿ ಮಕ್ಕಳು ತಮ್ಮ ನಡಿಗೆ ಶುರು ಮಾಡುತ್ತಾರೆ.
ನನಗೆ ತಿಳಿದವನೆ ಒಬ್ಬ ಹುಡುಗನನ್ನು ಕೇಳಿದೆ, " ಯಾಕಪ್ಪ ಸಣ್ಣ ವಯಸ್ಸಲ್ಲಿ ಕೆಟ್ಟ ಪದಗಳನ್ನು ಬಳಸುತ್ತೀಯ? ನಿನ್ನ ತಂದೆ-ತಾಯಿಯೊಡನೆ ಅಥವ ಹಿರಿಯರೊಡನೆ ಮಾತನಾಡುವಾಗ ನಿನಗೆ ತಿಳಿಯದೆ ಆ ನುಡಿಗಳು ನಿನ್ನ ಮಾತಿನಲ್ಲಿ ಸೇರುತ್ತದೆ. ಅಂತಹ ಪದಗಳ ಬಳಕೆ ಕಡಿಮೆ ಮಾಡು ".
ಅದಕ್ಕೆ ಅವನು ಕೊಟ್ಟ ಉತ್ತರ ಈ ರೀತಿ ಇತ್ತು, " ಇದು ಕೆಟ್ಟ ಪದಗಳು ಎಂದು ನನಗೇನು ಅನಿಸುವುದಿಲ್ಲಾ. ಈಗ ಗೆಳೆಯರೆಲ್ಲರೂ ಹಾಗೆ ಮಾತನಾಡುವುದು, ನಾನು ಸಹ ಹಾಗೆಯೇ ಮಾತನಾಡಬೇಕು. ಇಲ್ಲವೆಂದರೆ ನನಗೆ ಏನು ತಿಳಿಯದವನೆಂದು ಹೀಯಾಳಿಸುತ್ತಾರೆ. ಅದು ಅಭ್ಯಾಸವಾಗಿ ಹೋಗಿದೆ. ನಾನು ಮಾತನಾಡುವುದೇ ಹಾಗೆ. ನಿಮಗೇನು ಕಷ್ಟ? ". ಇಂತಹ ಉತ್ತರಕ್ಕೆ ನಾನೇನು ಉತ್ತರ ನೀಡಲಿ? ಆದರೂ ಎಷ್ಟೋ ಹೇಳಿ ಅರ್ಥೈಸಲು ಪ್ರಯತ್ನಿಸಿದೆ. ಆದರೆ ಅವನು ಅರಿಯಲಿಲ್ಲ. ನನ್ನ ಮುಂದೆ ಹೂಂ ಎಂದರು, ಗೆಳೆಯರು ಸಿಕ್ಕಾಗ ಮಾಮೂಲಿ. ಇನ್ನೊಮ್ಮೆ ನನಗೆ ಸಿಕ್ಕಾಗಲು ಹಿಂದೆ ಹೇಳಿದ್ದು ಮರೆತಿರುತ್ತದೆ.
ಈ ರೀತಿ ಮಕ್ಕಳು ಹಾಳಾಗುತ್ತಿರುವಾಗ, ಸಂಸ್ಕಾರವನ್ನು ಕಳೆದುಕೊಳ್ಳುತ್ತಿರುವಾಗ ಮಕ್ಕಳ ದಿನಾಚರಣೆಯ ಬೆಲೆಯು ಕಳೆದುಕೊಳ್ಳುತ್ತಿದೆ. ದೊಡ್ಡವರು ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ಬುದ್ಧಿ ಹೇಳಿ, ಕೆಟ್ಟ ದಾರಿ ಹಿಡಿದರೆ ಮುಂದಾಗುವ ಅವಾಂತರ, ದುಶ್ಪರಿಣಾಮವನ್ನು ತಿಳಿಸಬೇಕು, ಒಳ್ಳೆಯತನದಲ್ಲಿ ಬೆಳೆಸಬೇಕು. ಮಕ್ಕಳು ಕೆಟ್ಟದಾರಿ ಹಿಡಿದಾಗಲು ತಾಳ್ಮೆ ಕೆಳೆದುಕೊಳ್ಳದೆ, ಯಾವ ರೀತಿಯಲ್ಲಿ ಮಕ್ಕಳನ್ನು ಅದರಿಂದ ಆಚೆತರಬೇಕು ಎನ್ನುವುದನ್ನು ಯೋಚಿಸಿ, ಅದನ್ನು ಕಾರ್ಯಗತಗೊಳಿಸಬೇಕು. ಒಂದು ಮಗುವು ತನ್ನ ಜೀವನದಲ್ಲಿ ಒಳ್ಳೆಯ ಸಂಸ್ಕಾರ, ನಡುವಳಿಕೆ ರೂಢಿಸಿಕೊಂಡರೆ, ಒಳ್ಳೆಯ ತನದಲ್ಲಿ ಬೆಳೆದರೆ, ಆಗ ಮಕ್ಕಳ ದಿನಾಚರಣೆಯು ನಿಜವಾದ ಹಬ್ಬವಾಗುತ್ತದೆ.

Comments