ಹೀಗೊಂದು ಬೆಳಗಿನ ಸಂಭಾಷಣೆ !!

ಹೀಗೊಂದು ಬೆಳಗಿನ ಸಂಭಾಷಣೆ !!

ಮೊನ್ನೆ ಹೀಗೆ ಕವಿ ಮುದ್ದಣ’ನ ಬಗ್ಗೆ ಓದುತ್ತಿದ್ದೆ ... ಮುದ್ದಣ-ಮನೋರಮೆಯರು ಮನಸ್ಸನ್ನು ಆವರಿಸುತ್ತಿದ್ದರು ... ವಿಭಿನ್ನ ಪ್ರಯತ್ನ ಮಾಡೋಣ ಎನ್ನಿಸಿತು ... ಗಂಡ-ಹೆಂಡತಿ’ಯ ಒಂದು ಸಂಭಾಷಣೆ ನಿಮ್ಮ ಮನರಂಜನೆಗಾಗಿ ...

-------- ಬೆಳಿಗ್ಗೆ ಅಲಾರಂ ಸದ್ದು  ------------

ಹೆಂಡತಿ: ಅಲಾರಂ ಹೊಡೀತಿದೆ ಏಳಬಾರದೆ?

ಗಂಡ: ಓ! ಅಯ್ತು!! ಅಲಾರಂ ಹೊಡೆದದ್ದು ಕೇಳಲೇ ಇಲ್ವಲ್ಲಾ?

ಹೆಂಡತಿ: ಅಲ್ಲಾ, ’ರಂ’ ಹೊಡೆದು ಮಲಗಿದರೆ, ಅಲಾರಂ ಹೇಗೆ ಕೇಳುತ್ತೆ?

ಗಂಡ: ಅಲ್ಲಾ, ರಾಮ ಅಂತ ಮಲಗಿದ್ದೋನ ಬಗ್ಗೆ ನೀನು ಹೀಗೆ ಮಾತನಾಡಿದ್ದು, ಮನಸ್ಸಿಗೆ ಏಸುವಿಗೆ ಚಿತ್ರಹಿಂಸೆ ಕೊಟ್ಟ ಹಾಗಿದೆ ! ಹೋಗ್ಲಿ ಬಿಡು, ಟೈಮ್ ಎಷ್ಟಾಯ್ತು?

ಹೆಂಡತಿ: ಏಳಕ್ಕೆ ಇಟ್ಟ ಅಲಾರಂ ಏಳಕ್ಕೇ ಹೊಡೆದಿದ್ರೆ, ಈಗ ಏಳು ಘಂಟೆ ... ಅಲ್ಲಾ, ಏಳಕ್ಕೆ ಏಳೋದಕ್ಕೇ ಏಳಾಳುದ್ದ ಚರ್ಚೆ ಯಾಕೆ?

ಗಂಡ: ಘಂಟೆ ಏಳಾಗಿದ್ರೂ, ಏಳಲಾಗುತ್ತಿಲ್ವೇ? ಲೇಟ್ ಆಯ್ತು ಆಫೀಸಿಗೆ !

ಹೆಂಡತಿ: ಲೇಟಾಗಿರೋದು ನಿಮಗೆ, ಆಫೀಸಿಗಲ್ಲ !

ಗಂಡ: ಅಯ್ತು .. ಪರಮಾತ್ಮಾ, ಶರಣು ಶಂಕರ ಶಂಭೋ, ಎಡವಟ್ಟಾಗದ ಹಾಗೆ ಕಾಪಾಡೋ!

ಹೆಂಡತಿ: ಬಲವಟ್ಟಾದರೆ ಅಡ್ಡಿ ಇಲ್ವೋ?

ಗಂಡ: ಬೆಳಿಗ್ಗೇ ಬೆಳಿಗ್ಗೆ ನಿಂದೊಳ್ಳೇ ಹಾಡಾಯ್ತಲ್ಲ?

ಹೆಂಡತಿ: ನಾನೇನ್ ಮಾಡ್ಲಿ ಎಸ್.ಜಾನಕಿ ಬರೋಲ್ಲ ಅಂದ್ರು !

ಗಂಡ: ಹೋಗತ್ಲಾಗೆ, ನಾಳೆಯಿಂದ ಖಂಡಿತ ಬೇಗ ಏಳ್ತೀನಿ !

ಹೆಂಡತಿ: ಬೇಗ ಏಳೋದು ನಿಮ್ಮ ಪಂಚ ವಾರ್ಷಿಕ ಯೋಜನೆ ಅಲ್ವೇನು?

ಗಂಡ: ನಾನೇನ್ ಮಾಡ್ಲಿ, ಮಲಗಿರೋ ರಂಗನಾಥ ನಮ್ ಮನೆ ದೇವ್ರು !

ಹೆಂಡತಿ: ಅಂದ ಹಾಗೇ, ಪಕ್ಕದ್ಮನೆ ಪುರೋಹಿತ ರಂಗನಾಥರದು ಪಂಚ ವಾರ್ಷಿಕ ಯೋಜನೆಯಂತೇ?

ಗಂಡ: ವರ್ಷಕ್ಕೆ ಐದು ಸಾರಿಯಾದ್ರೂ ತಮ್ಮ ಕೊಳೆ ಪಂಚೆ ಒಗೆಯಬೇಕೂ ಅಂತ್ಲೋ?

ಹೆಂಡತಿ: ಕೊಳೆ ಪಂಚೆ ಉಟ್ರೆ ದಕ್ಷಿಣೆ ಧಾರಳ ಬರುತ್ತೆ ಕಣ್ರಿ ! ನಿಮಗೆ ಅವೆಲ್ಲ ಗೊತ್ತಾಗೊಲ್ಲ !

ಗಂಡ: ವರ್ಷಕ್ಕೆ ಕನಿಷ್ಟ ಪಂಚ (ಐದು) ವಾರ್ಷಿಕ ಮಾಡಿಸ್ಬೇಕೂ ಅನ್ನೋದೇನು?

ಹೆಂಡತಿ: ಇದ್ದೋರ್ದಾ? ಹೋದೋರ್ದಾ?

ಗಂಡ: ಇದ್ದು ಹೋದೋರ್ದು ಕಣೆ ... ಇದ್ದಾಗ ಇಲ್ಲದಂತೆ ಇದ್ದರೂ, ವಾರ್ಷಿಕಕ್ಕೆ ಅರ್ಹರು !!

ಹೆಂಡತಿ: ಹೇಗೋ ಒಂದು ... ಹೋಗಿದ್ದು ಮುಖ್ಯ ಪುರೋಹಿತರಿಗೆ .. ನಿಮ್ ಉತ್ತರ ಸರಿ ...

ಗಂಡ: ರಾಜ್ಯದಲ್ಲಿ ಪಂಚ ವರ್ಷ ಪೂರ್ತಿ ಒಬ್ಬರಾದಾರೂ ಕೂಡಲಿ ಅಂತ ಆಗಿರಬಾರದಿತ್ತೇ?

ಹೆಂಡತಿ: ಸದ್ಯ, ವರ್ಷಕ್ಕೆ ಪಂಚ ಆಗದಿದ್ರೆ ಸಾಕು ಅನ್ನೋದೇ ಬೇಡಿಕೆ ಅಷ್ಟೇ !

ಗಂಡ: ಕನಿಷ್ಟ ಪಂಚ ವರ್ಷಕ್ಕೊಮೆ ಕೇಂದ್ರದಲ್ಲಿ ಪ್ರಧಾನಿ ಬದಲಾಗ್ಲಿ ಅಂತಾನಾದ್ರೂ ಇರಬಾರದಿತ್ತೇ?

ಹೆಂಡತಿ: ಯಾವ ಪಕ್ಷ ಬಂದ್ರೇನು, ಪಿತೃ ಪಕ್ಷದ ಇವರ ಸಂಪಾದನೆಗೆ ಕುಂದು ಬರದಿದ್ದ ಮೇಲೆ ಇವರಿಗೇನಾಗಬೇಕು?

ಗಂಡ: ಅಯ್ಯೋ, ಹೋಗತ್ಲಾಗೆ, ಮುಂಜಾನೆ ರಾಜಕೀಯದ ಮಾತ್ಯಾಕೆ?

ಹೆಂಡತಿ: ಕೊಳಕು ಹಲ್ಲಲ್ಲಿ, ವಾಸನೆ ಬಾಯಲ್ಲಿ ನುಡಿದು ಅತ್ಲಾಗೆ ತೊಳ್ಕೊಂಡ್ರಾಯ್ತಲ್ವೇ?

ಗಂಡ: ವ್ಯವಸ್ಥೆಯೇ ಕೊಳಕಾಗಿರೋವಾಗ ನಾನು ಮಾತ್ರ ಶುದ್ದ ಆದ್ರೆ ಸಾಕೆ?

ಹೆಂಡತಿ: ನಿಂತ ಕೊಳಕು ನೀರಲ್ಲೂ ಅರಳಿದ ಕಮಲ ಚೆಂದ ಕಾಣೋಲ್ವೇ?

ಗಂಡ: ಕಮಲದ ಹೆಸರು ಎತ್ತದಿರು, ’ಕ’ ಹೋಗಿ ಈಗ ಬರೀ ’ಮಲ’ವಾಗಿದೆ !!

ಹೆಂಡತಿ: ’ಕೈ’ ಮಾತ್ರ ಶುದ್ದವೇ? ಸಭೆಯಲ್ಲಿ ಚಿದು ಚಪ್ಪಲಿ ಎಸೆಯಿಸಿಕೊಂಡ್ರು?

ಗಂಡ: ಕರ್ನಾಟದಲ್ಲಿ ಕಮಲವೂ ಕೇಳಿದೆಯಲ್ಲ, ಯಾಕೋ ಯಾರೂ ಅರ್ಥ ಮಾಡಿಕೊಳ್ಳಲಿಲ್ಲ ಅಷ್ಟೇ!

ಹೆಂಡತಿ: ಅದ್ಯಾವಾಗ ಕೇಳಿದ್ರೋ ನಾನರಿಯೆ!

ಗಂಡ: ಮೊನ್ನೆ ನಗರದ ಮಧ್ಯೆ ರೈಲು ಬಿಟ್ಟಾಗ ಕೇಳಲಿಲ್ವೇ?

ಹೆಂಡತಿ: ಏನಂತ?

ಗಂಡ: ’ನಮ್ಮ ಮೆಟ್ರೋ’ ಅಂತ ..

ಹೆಂಡತಿ: ಏನು ಮಾತಿನ ಅನರ್ಥ?

ಗಂಡ: "ನಮ್ಮ ಮೆಟ್ರೋ" ಅಂದ್ರೆ ’ನಾವು ಮಾಡಿದ್ ಕೆಟ್ಟ ಕೆಲಸಕ್ಕೆ ನಮ್ಮನ್ನು ಮೆಟ್ ರೋ !!! ಅಂತ

ಹೆಂಡತಿ: ಸರಿಹೋಯ್ತು ನಿಮ್ಮ ಪದಗಳ ಜೊತೆ ಆಟ ... ಹೋಗಿ ನೆಡೆಸಿ ನಿಮ್ಮ ಹಲ್ಲುಗಳ ತಿಕ್ಕಾಟ ...
 

 

Comments