೮೦ ಸಾವಿರ ಕೋಟಿ ಬಜೆಟ್ಟೂ, ೩೦೦೦ ಕನ್ನಡ ಶಾಲೆಗಳೂ...

೮೦ ಸಾವಿರ ಕೋಟಿ ಬಜೆಟ್ಟೂ, ೩೦೦೦ ಕನ್ನಡ ಶಾಲೆಗಳೂ...

ಮಕ್ಕಳನ್ನು ಆಕರ್ಷಿಸುವಂತೆ ಸರ್ಕಾರಿ ಶಾಲೆಗಳನ್ನು ರೂಪಿಸುವುದನ್ನು ಬಿಟ್ಟು ಮಕ್ಕಳಿಲ್ಲ ಎಂಬ ನೆಪವೊಡ್ಡಿ ಅವುಗಳನ್ನು ಮುಚ್ಚುವುದಕ್ಕೆ ಮುಂದಾಗುತ್ತಿರುವುದು ಕರ್ತವ್ಯ ವಿಮುಖತೆ ಎನ್ನುತ್ತಾರೆ ರಾಘವೇಂದ್ರ ಗುಡಿ

"ಆರು ವರ್ಷದಿಂದ, ಹದಿನಾಲ್ಕು ವರ್ಷದೊಳಗಿನ ಪ್ರತಿಯೊಂದು ಮಗುವು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ತನ್ನ ಹತ್ತಿರದ ಶಾಲೆಯಲ್ಲಿ ಹೊಂದುವ ಹಕ್ಕನ್ನು ಹೊಂದಿರುತ್ತದೆ"- ಇದು ಭಾರತ ಸರ್ಕಾರ ೨೦೦೯ರ ಅಗಸ್ಟ್ ೨೭ರಂದು ಜಾರಿಗೊಳಿಸಿದ ’ಮಕ್ಕಳ ಶಿಕ್ಷಣ ಹಕ್ಕು’ ಕಾಯ್ದೆಯ ಎರಡನೇ ಅಧ್ಯಾಯದ ಮೊದಲ ಪುಟದಲ್ಲಿ ಸ್ಪಷ್ಟವಾಗಿ ನಮೂದಿಸಿದ ಅಂಶವಾಗಿದೆ.

ಆದರೆ, ಇಂದು ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳ ಕೊರತೆಯ ನೆಪವೊಡ್ಡಿ ೩೧೭೪ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಆದೇಶವನ್ನು ಹೊರಡಿಸಿದೆ. ಅಂದರೆ, ಮಕ್ಕಳು ಶಾಲೆಗಳಿಗೆ ಬರದಿರುವ ಕಾರಣವನ್ನು ಪರಾಮರ್ಶಿಸಿ ಅದಕ್ಕೆ ಪರಿಹಾರವನ್ನು ಹುಡುಕದೇ ಶಾಲೆಯನ್ನೇ ಮುಚ್ಚಿ ಕೈತೊಳೆದುಕೊಳ್ಳುವ ಪಲಾಯನವಾದಿ ನಿಲುವನ್ನು ತಾಳಿದೆ. ಇನ್ನೂ ನೇರವಾಗಿ ಹೇಳಬೇಕೆಂದರೆ ನೆಗಡಿಯಾಗಿದೆ ಎಂದರೆ ಅದನ್ನು ವಾಸಿ ಮಾಡಲು ಕ್ರಮ ಕೈಗೊಳ್ಳುವುದನ್ನು ಬಿಟ್ಟು ಮೂಗನ್ನೇ ಕತ್ತರಿಸಲು ಹೊರಟಂತಿದೆ ಸರ್ಕಾರದ ಈ ಕ್ರಮ.

ಇನ್ನೂ ಸರ್ಕಾರ ನೀಡಿರುವ ಕಾರಣಗಳಾದರೂ ಎಂತಹವು? ಅವುಗಳಿಂದ ಸರ್ಕಾರಕ್ಕೆ ಆರ್ಥಿಕ ಹೊರಯಾಗುತ್ತದೆ, ಹಳ್ಳಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿರುವ ಕಾರಣದಿಂದಾಗಿ ಶಾಲೆಗಳನ್ನು ವಿಲೀನಗೊಳಿಸಲಾಗುವುದು ಎಂಬಂತಹ ಹಾರಿಕೆಯ ಉತ್ತರಗಳು. ಆದರೆ ೨೦೧೧ನೇ ಸಾಲಿನ ಜನಗಣತಿ ಪ್ರಕಾರ ಈಗಲೂ ಇನ್ನು ೧,೦೮,೫೪೨ ಮಕ್ಕಳು ಶಾಲೆಯ ಮುಖವನ್ನೇ ಕಂಡಿಲ್ಲ.

 ಸರ್ಕಾರದ ಈ ಕ್ರಮದಿಂದಾಗಿ ವಿಲೀನಗೊಳಿಸಿದ ಶಾಲೆಗಳಿಗೆ ಹೋಗಲಾಗದೆ ವಿದ್ಯಾ ವಂಚನೆಗೊಳಗಾಗುವ ಮಕ್ಕಳ ಕುರಿತು ಯೋಚಿಸುವವರಾರು? ಲಾಭ-ನಷ್ಟದ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಶಿಕ್ಷಣವೇನು ವ್ಯಾಪಾರವೇ? ಅಂದರೆ ಶಿಕ್ಷಣವನ್ನು ವ್ಯಾಪಾರವಾಗಿ ಪರಿಗಣಿಸಿರುವಂತಹ ಹಲವು ಖಾಸಗಿ ಶಾಲೆಗಳ ಸಾಲಿನಲ್ಲಿಯೇ ಸರ್ಕಾರ ಸಾಗುತ್ತಿದೆಯೇ ಅಥವಾ ಅಂತಹ ಖಾಸಗಿ ಶಾಲೆಗಳ ಒಡೆಯರೇ ಸರ್ಕಾರ ನಡೆಸುತ್ತಿದ್ದಾರೆಯೇ? ಹೀಗೆ ಶಾಲಗಳ ವಿಷಯದಲ್ಲಿ ಲಾಭ-ನಷ್ಟದ ಕುರಿತು ಯೋಚಿಸುತ್ತಿರುವ ಸರ್ಕಾರ, ಆಡಳಿತದಲ್ಲಾಗುವ ದುಂದು ವೆಚ್ಚದ ನಿಯಂತ್ರಣದ ಕುರಿತು ಎಂದಾದರೂ ಯೋಚಿಸಿದೆಯೇ? ಅವುಗಳಿಗೆ ಹೋಲಿಸಿದರೆ ಇದೊಂದು ಪ್ರಮಾಣವೆ?

ಇನ್ನು ಮಾನ್ಯ ಶಿಕ್ಷಣ ಸಚಿವರು ಕನ್ನಡ ಪರ ಹೋರಾಟಗಾರರನ್ನು ಕುರಿತು, ವೈಯಕ್ತಿಕ ನೆಲೆಯಲ್ಲಿ ಅವರಲ್ಲಿ ಎಷ್ಟು ಜನರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ ಎಂದು ಕೇಳುತ್ತಾರೆ? ಯಾವ ಕಾರಣದಿಂದ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎನ್ನುವ ಪ್ರಶ್ನೆಗೆ ಅವರು ಮೊದಲು ಉತ್ತರಿಸಬೇಕು. ಅವರು ಮಾತ್ರವಲ್ಲ, ಅವರ ಸಹೋದ್ಯೋಗಿಗಳೇ, ಇಲ್ಲವೇ ಸರ್ಕಾರಿ ನೌಕರರೇ ಅಥವಾ ದೊಡ್ಡ ಹುದ್ದೆಗಳಲ್ಲಿರುವವರೇ ಇರಬಹುದು, ಅವರಲ್ಲಿ ಹೆಚ್ಚಿನವರಿಗೆ ಸರ್ಕಾರಿ ಶಾಲೆಗಳು ಆಕರ್ಷಿಸದೇ ಇರಲು ಕಾರಣರಾರು? ಸರ್ಕಾರಿ ಕನ್ನಡ ಶಾಲೆಗಳೆಂದರೆ ಅಲರ್ಜಿಯುಂಟಾಗಲು ಕಾರಣವೇನು ಎಂದು ಚಿಂತಿಸಿ ಸುಧಾರಣೆ ತರಬೇಕಾದ ಹೊಣೆ ಯಾರದು? ಆಳಿದ ಸರ್ಕಾರಗಳು ಎಂದಾದರೂ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಅಭಿವೃದ್ಧಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ. 
ಸರ್ಕಾರ ನಡೆಸುತ್ತಿರುವ ೪೬,೨೮೮ ಶಾಲೆಗಳಲ್ಲಿ, ಮುಚ್ಚುತ್ತಿರುವ ೩,೧೭೪ ಶಾಲೆಗಳ ಸಂಖ್ಯೆ ಸಣ್ಣದೇ ಇರಬಹುದು. ಆದರೆ ಆ ಶಾಲೆಗಳಲ್ಲಿ ಕಲಿಯುತ್ತಿರುವ ಸುಮಾರು ೧೦,೦೦೦ (ಒಂದು ಅಂದಾಜಿನಂತೆ ಪ್ರತಿ ಶಾಲೆಗೂ ಕೇವಲ ಮೂರೇ ಮಕ್ಕಳು ಎಂದರೂ) ಮಕ್ಕಳ ಭವಿಷ್ಯ ಡೋಲಾಯಮಾನವಾಗುವುದಿಲ್ಲವೇ? ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳ ಹಾಗೂ ಅತ್ಯಂತ ಕಡು ಬಡವರ ಗತಿ ಏನು? ಮಲೆನಾಡಿನಂತಹ ಅಥವಾ ಇತರೇ ಗುಡ್ಡಗಾಡು ಪ್ರದೇಶಗಳಲ್ಲಿ ಮನೆಗಳೇ ಅರ್ಧ ಇಲ್ಲವೇ ಒಂದೆರಡು ಕಿಲೋಮೀಟರ್‌ನಷ್ಟು ದೂರದಲ್ಲಿರುವಂತಹ ಸನ್ನಿವೇಶವಿದ್ದಾಗ, ಇನ್ನೂ ಒಂದು ಶಾಲೆಯನ್ನು ಮುಚ್ಚಿ ಹತ್ತಿರದ ಶಾಲೆಗಳಿಗೆ ವಿಲೀನಗೊಳಿಸುವುದು ಎಂದರೆ ಶಾಲೆಯನ್ನು ಮಕ್ಕಳಿಂದ ದೂರ ಒಯ್ದಂತೆ ಅಲ್ಲವೆ? ಅತೀ ಹಿಂದುಳಿದ ಜನಾಂಗದವರು ಇರುವಂತಹ, ಹಿಂದುಳಿದ ಜಿಲ್ಲೆಗಳಲ್ಲಿರುವ ಪ್ರದೇಶಗಳಲ್ಲಿ ಮೊದಲೇ ಶಿಕ್ಷಣದ ಪ್ರಮಾಣ ಕಡಿಮೆ. ಅಂತಹುದ್ದರಲ್ಲಿ ಎಲ್ಲ ಸವಾಲುಗಳನ್ನು ಮೆಟ್ಟಿ ವಿದ್ಯಾಭ್ಯಾಸ ಬಯಸುವ ಒಂದೆರಡು ಮಕ್ಕಳಿಂದಲೂ ಶಿಕ್ಷಣವನ್ನು ಕಿತ್ತುಕೊಳ್ಳುವ ಕ್ರಮವಲ್ಲವೆ ಇದು?
ಮಾಜಿ ಮುಖ್ಯಮಂತ್ರಿಗಳು ೮೦,೦೦೦ ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿ, ಅದರಲ್ಲಿ ಸುಮಾರು ೭೭೦೦ ಕೋಟಿ ರೂಪಾಯಿಗಳ ಅನುದಾನವನ್ನು ಪ್ರಾಥಮಿಕ ಶಾಲೆಗಳಿಗೆ ನೀಡಿದ್ದರು. ಹಾಲಿ ಮುಖ್ಯಮಂತ್ರಿಗಳು ಮುಂದಿನ ಸಾರಿ ಒಂದು ಲಕ್ಷ ಕೋಟಿ ರೂಪಾಯಿಗಳ ಬಜೆಟ್  ಮಂಡಿಸುವ ಮಾತುಗಳನ್ನು ಆಡುತ್ತಿದ್ದಾರೆ. ಹೀಗೆ ಬರೀ ಲಕ್ಷಾಂತರ ಕೋಟಿಗಳಲ್ಲೇ ಮಾತನಾಡುತ್ತಿರುವ ಸರ್ಕಾರಕ್ಕೆ ಕೇವಲ ೩೧೭೪ ಶಾಲೆಗಳನ್ನು ನಡೆಸುವುದು ಒಂದು ಹೊರೆಯಾಗುತ್ತದೆಯೆ?

"ಮಳೆ ಬಂದರೆ ಕೆರೆ, ಬಿಸಿಲು ಬಿದ್ದರೆ ಆಟದ ಮೈದಾನ"ಗಳಾಗುವ ಶಾಲೆಗಳ ಸುಧಾರಣೆ ಯಾಕಾಗಿಲ್ಲ? ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆ ಜಾರಿಯಾಗಿದೆ. ಆದರೆ ಅದಕ್ಕೆ ತಕ್ಕುದಾದ ಸಿಬ್ಬಂದಿಗಳನ್ನು ನೇಮಕ ಮಾಡಿಲ್ಲ. ಇಂಗ್ಲಿಷ್ ಭಾಷಾ ಜ್ಞಾನವಿಲ್ಲದ ಶಿಕ್ಷಕರೇ ಅದನ್ನು ಕಲಿಸುವುದಾದರೆ? ಖಾಸಗಿ ಶಾಲೆಗಳಲ್ಲಿ ನಡೆಯುತ್ತಿರವ ಅವ್ಯಾಹತ ಡೊನೆಷನ್ ಹಾವಳಿಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವ ಹೊಣೆ ಯಾರದು? ಕೇಂದ್ರಸರ್ಕಾರ ೨೦೦೯ರಲ್ಲಿ ಜಾರಿಗೆ ತಂದಿರುವ ‘ಮಕ್ಕಳ ಶಿಕ್ಷಣದ ಹಕ್ಕು’ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರದೆ ಇರಲು ಕಾರಣ? ಅನೇಕ ಶಾಲೆಗಳಿಗೆ ಕಂಪ್ಯೂಟರ್‌ಗಳೇನೋ ಬಂದಿವೆ. ಆದರೆ ಅದನ್ನು ಕಲಿಸುವ ಶಿಕ್ಷಕರಿಲ್ಲ. ಈ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರದೆ ಶಾಲೆಗಳನ್ನು ಮುಚ್ಚುವ ನಿರ್ಧಾರ ಸರ್ಕಾರದ ಕರ್ತವ್ಯ ವಿಮುಖತೆಯಲ್ಲದೇ ಮತ್ತೇನಲ್ಲ. ಇಂದು ಕೇವಲ ರಾಜ್ಯ ಸರ್ಕಾರವೊಂದೇ ಶಾಲೆಗಳನ್ನು ನಡೆಸುವ ಸ್ಥಿತಿ ಇದೆಯೇ? ಸರ್ವ ಶಿಕ್ಷಣ ಅಭಿಯಾನ ಜಾರಿಗೆ ಬಂದ ನಂತರ, ಕೇಂದ್ರದಿಂದ ಬರುತ್ತಿರುವ ಅನುದಾನ, ಅನೇಕ ವಿವಿಧ ಮೂಲಗಳಿಂದ ಬರುತ್ತಿರುವ ಸಹಕಾರ, ಅಲ್ಲದೇ ಕಳೆದ ಬಜೆಟ್‌ನಲ್ಲಿ ರಾಜ್ಯ ಕಾಯ್ದಿರಿಸಿದ ಹಣ ಯಾವ ರೀತಿ ಬಳಕೆಯಾಗುತ್ತಿದೆ ಎನ್ನುವುದರ ಬಗ್ಗೆ ವಿಶ್ಲೇಷಣೆಯಾದರೂ ನಡೆದಿದೆಯೆ? ಇವುಗಳ  ಬಗ್ಗೆ ವಿಚಾರ ವಿಮರ್ಶೆ ನಡೆಸಿ ಸೂಕ್ತ ಸುಧಾರಣೆಗಳನ್ನು ಜಾರಿಗೆ ತರುವ ಹೊಣೆ ಸರ್ಕಾರದ್ದೇ ಅಲ್ಲವೆ?  ಇಷ್ಟೆಲ್ಲ ಅನುದಾನಗಳಿದ್ದರೂ ಪ್ರಾಥಮಿಕ ಶಿಕ್ಷಣ ಇಲಾಖೆ ಎದುರಿಸುತ್ತಿರುವ ವಿತ್ತೀಯ ಕೊರತೆ ಎಷ್ಟು? ಇದರ ಮೇಲೆ ಈ ೩೧೭೪ ಶಾಲೆಗಳಿಂದಾಗುವ  ಹೊರೆ ಎಷ್ಟು ಎಂಬುದರ ಕುರಿತು ದಾಖಲೆ ಸಹಿತ ವಿವರಣೆಯನ್ನು ನೀಡಬೇಕಾಗಿದೆ.

ಏನೇ ಇರಲಿ, ಸರ್ಕಾರದ ದೊಂಬರಾಟಗಳ ಪಟ್ಟಿಗೆ ಇದು ಹೊಸ ಸೇರ್ಪಡೆಯಾಗದಿರಲಿ. ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರದ ಬದಲಾಗಿ ಹೊಸ ಶಾಲೆಗಳನ್ನು ತೆರೆಯುವ ನಿರ್ಧಾರವಾಗಬೇಕಿದೆ. ಅಲ್ಲದೆ ಇರುವ ಶಾಲೆಗಳನ್ನು ಖಾಸಗಿ ಶಾಲೆಗಳ ಗುಣಮಟ್ಟಕ್ಕೆ ತಂದು ವಿದ್ಯಾರ್ಥಿಗಳನ್ನು ಆಕರ್ಷಿಸಬೇಕು.

"Its Piblished in "The Sunday Indian" news Megazine by me
 

Comments