ಮತಕ್ಕಾಗಿ ಹಣ ನೀಡುವವ ಮಾಡುವುದೇನು? ಹಣ,ಸೀರೆ,ಸರಾಯಿ ಪಡೆದು ಮತ ಹಾಕುವವ ಮಾಡುವುದೇನು?

ಮತಕ್ಕಾಗಿ ಹಣ ನೀಡುವವ ಮಾಡುವುದೇನು? ಹಣ,ಸೀರೆ,ಸರಾಯಿ ಪಡೆದು ಮತ ಹಾಕುವವ ಮಾಡುವುದೇನು?

ಭ್ರಷ್ಟಾಚಾರ! ಹಗರಣ! ಜಾಮೀನು! ಆಸ್ಪತ್ರೆ ದಂಡ ಯಾತ್ರೆ! ಅಬ್ಬ ಈ ದಿನಗಳಲ್ಲಿ ನಮ್ಮ ಹೆಸರಿಗಿಂತ ಹೆಚ್ಚಾಗಿ ನಮಗೆ ಕೇಳುತ್ತಿರುವ ಶಬ್ದಗಳೆ ಇವಾಗಿವೆ. ಇಂದು ತಾಲೂಕು, ಜಿಲ್ಲೆ ,ರಾಜ್ಯ ಹಾಗೂ ದೇಶದ ಎಲ್ಲ ಮೂಲೆ ಮೂಲೆಯಲ್ಲಿ ಯಾವುದಾದರು ಸಾರ್ವತ್ರಿಕವಾಗಿದ್ದರೆ, ಜಾತಿ-ಧರ್ಮಗಳಿಗಿಂತ ಮಿಗಿಲಾಗಿ ಎಲ್ಲ ಭ್ರಷ್ಟರನ್ನು ಏನಾದರೂ ಒಗ್ಗೂಡಿಸಿದ್ದರೆ ಅದು ಭ್ರಷ್ಟಾಚಾರ ಮಾತ್ರ. ಭ್ರಷ್ಟಾಚಾರ ಎಂದರೆ ನೆನಪಾಗುವುದು ಅಥವ ಅದರ ಸಮಾನಾರ್ಥಕ ಪದದಂತಾಗಿರುವುದು ರಾಜಕಾರಣಿ. ಅದರಲ್ಲೂ ಆ ಕಡೆ ಬಾಬಾ ರಾಮ್‌ದೇವಜೀ, ಈ ಕಡೆ ಅಣ್ಣಾ ಹಜಾರೆ ಜೀ ಇವರ ಹೊರಾಟ, ಮಾಧ್ಯಮಗಳ ಹಾರಾಟ, ಲೋಟಿಕೋರರ ಪರದಾಟ, ಮುಲಾಜೆ ಇಲ್ಲದೆ ಜಾಮೀನು ನಿರಾಕರಿಸುತ್ತಿರುವ ನ್ಯಾಯಾಲಯದ ತೀರ್ಪುಗಳು, ಕೇಂದ್ರ ಸರ್ಕಾರದ ದಿನ ನಿತ್ಯದ ಕಣ್ಣೊರೆಸುವ ತಂತ್ರಗಳು, ಶುರುವಾದ ನಂತರವಂತೂ ಈ ಶಬ್ದಗಳು ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಅಂಗಗಳಾಗಿವೆ. ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡುತ್ತಿರುವುದು ಒಳ್ಳೆಯದೇ, ಕಪ್ಪು ಹಣವನ್ನು ಮರಳಿ ತರಬೇಕೆಂಬುದು ಸತ್ಯವೇ, ಪ್ರಧಾನಿ ಕೂಡ ಭ್ರಷ್ಟರಾಗಿದ್ದರೆ ಅವರನ್ನು ಸಹ ಶಿಕ್ಷೆಗೊಳಪಡಿಸಲೇ ಬೇಕು ಎಂಬುದು ಸಹ ನಿಜವೇ, ಅತ್ಯಂತ ಬಿಗಿ ಕಾನೂನುಗಳನ್ನು ಅತ್ಯಂತ ತ್ವರಿತವಾಗಿ ಜಾರಿಗೆ ತರಬೇಕೆಂಬುದು ಸಹ ದಿಟವೇ, ಆದರೆ, ಅದಕ್ಕೂ ಮೊದಲು ಸುಮಾರು ಒಂದು ಸಾವಿರ ಖೈದಿಗಳನ್ನಿಡಬಹುದಾದ ೧೦ ಲಕ್ಷ ಬಂದಿಖಾನೆಗಳನ್ನು ನಿರ್ಮಿಸಬೇಕು, ಒಂದು ಕೆಲವು ಸಾವಿರ ನೆಣುಬಿಗಿಯುವವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು, ಅಲ್ಲದೇ ಸುಮಾರು ನೂರು ಕೋಟಿ ಜನರು ಜೈಲಿನಲ್ಲಿರುವುದರಿಂದ ಅವರ ಆಹಾರಕ್ಕಾಗಿ ಲಕ್ಷಾಂತರ ಟನ್‌ಗಳಷ್ಟು ಆಹಾರವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಬೇಕು ಬರೀ ಇಷ್ಟಾದರೆ ಸಾಕೆ ನ್ಯಾಯದಾನವನ್ನು ನೀಡುವುದಕ್ಕೋಸ್ಕರ ಲಕ್ಷಾಂತರ ನ್ಯಾಯಾಲಯಗಳನ್ನು ನಿರ್ಮಿಸಬೇಕು, ಆದರೂ ನ್ಯಾಯಾಧೀಶರ ಕೊರತೆಯುಂಟಾಗಬಹುದಾದ್ದರಿಂದ ಹೊರಗುತ್ತಿಗೆಯನ್ನು ನೀಡುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು, ಇದಕ್ಕಾಗಿ ಕೆಲವು ಲಕ್ಷಕೋಟಿ ಹಣದ ಸಾಲದ ಹೊರೆಯನ್ನು ಹೊರಬೇಕು, ಇದಲ್ಲದೇ ಇನ್ನು ಹಲವು ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಇದೇನಪ್ಪ ಇದು ಯಾವುದೋ ಸಂಬಂಧವಿರದ ಕಥೆಯನ್ನು ಹೇಳುತ್ತಿರುವನಲ್ಲ, ಹೀಗಾಗಲು ನಮ್ಮಲ್ಲಿ ಅಷ್ಟುಜನ ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಮತ್ತು ಬೃಹತ್ ಉದ್ಯಮಿಗಳಾದರೂ ಎಲ್ಲಿದ್ದಾರೆ? ಎಂದು ಯೋಚಿಸುತ್ತಿರುವಿರಾದರೆ ಸ್ವಲ್ಪ ತಡೆಯಿರಿ !

ಭ್ರಷ್ಟಾಚಾರಕ್ಕೆ ಕಾರಣ ಮತ್ತು ನೇರ ಹೊಣೆಗಾರರು ಕೇವಲ ರಾಜಕಾರಣಿಗಳು ಎಂಬ ಕಣ್ಣಿಗೆ ಕಟ್ಟಿಕೊಂಟಿರುವ ಪರದೆಯನ್ನು ಸ್ವಲ್ಪ ಸರಿಸಿ ನೋಡೋಣ, ಈಗ ನಾವು ಎಲ್ಲಾದರು ಹೊರಗೆ ಹೋಗಬೇಕೆಂದು ಆಟೋವನ್ನು ಕರೆಯುತ್ತೇವೆ, ಅವನು ಮೀಟರ್ ಹಾಕಲು ನಿರಾಕರಿಸುತ್ತಾನೆ ಅಥವಾ ಹೆಚ್ಚು ಹಣವನ್ನು ನೀಡುವಂತೆ ಕೇಳುತ್ತಾನೆ. ಇದು ಏನು? ನಮಗೆ ಬೆಳಗಾದರೆ ಕುಡಿಯಲು ಕಾಫಿ ಬೇಕು, ಇದಕ್ಕಾಗಿ ಗಟ್ಟಿ ಹಾಲು ನೀಡುವಂತೆ ಪ್ರತಿದಿನ ಕೇಳಿದರೂ, ಅದಕ್ಕಾಗಿ ಹೆಚ್ಚು ಹಣವನ್ನು ನೀಡಿದರೂ, ಒಂದು ದಿನವೂ ನೀರು ಬೆರೆಸದ ಹಾಲು ಸಿಗುವುದಿಲ್ಲ. ಇದು ಏನು? ನಾವು ಸಂಚರಿಸುವ ನಮ್ಮ ವಾಹನಗಳಿಗೆ ಇನ್‌ಶೂರೆನ್ಸ್ ಮಾಡಿಸಬೇಕೆಂದು ಗೊತ್ತಿದೆ, ಆದರೆ ಎಷ್ಟು ಜನರ ಎಲ್ಲ ಕಾಗದ ಪತ್ರಗಳು ಸರಿಯಾಗಿರುತ್ತವೆ? ಒಂದು ವೇಳೆ ಎಲ್ಲ ಸರಿಯಾಗಿದ್ದರೂ ಪೊಲೀಸಿನವನು ಅಡ್ಡಗಟ್ಟಿ ಕೇಳಿದಾಗ ಅವನು ಕೇಳುವ ಮೊದಲೇ ಲಂಚ ನೀಡಿ ಅಲ್ಲಿಂದ ಪಾರಾಗಲು ಹವಣಿಸುವ ನಾವು ಮಾಡುವುದೇನು? ಹಣ ಪಡೆದ ಪೊಲೀಸಿನವನು ಮಾಡುವುದು ಏನು? ಹಣ ಪಡೆದು ಪ್ರಶಸ್ತಿ ಕೊಡುವ ಸಂಘಟನಕಾರ ಮಾಡುವುದೇನು? ಹಣ ನೀಡಿ ಪ್ರಶಸ್ತಿ ಪಡೆಯುವವ ಮಾಡುವುದೇನು? ಮತಕ್ಕಾಗಿ ಹಣ ನೀಡುವವ ಮಾಡುವುದೇನು? ಹಣ, ಸೀರೆ, ಸರಾಯಿ ಪಡೆದು ಮತ ಹಾಕುವವ ಮಾಡುವುದೇನು? ಮತದಾನಕ್ಕಾಗಿ ನೀಡಿದ ರಜೆಯನ್ನು ಮಜಾ ಉಡಾಯಿಸಲು ಬಳಸುವ (ಅ)ನಾಗರಿಕ ಮಾಡುವುದೇನು (ಒಂದು ದಿನದ ರಜೆಯಿಂದಾಗಿ ಸರ್ಕಾರಕ್ಕಾಗುವ ನಷ್ಡದ ಹೊಣೆಗರರಾರು) ? ಶೇ.೮೦-ಶೇ.೯೦ ರಷ್ಟು ವ್ಯಾಪಾರಿಗಳು, ತೆರಿಗೆ ಉಳಿತಾಯಕ್ಕಾಗಿ ಸುಳ್ಳು ಲೆಕ್ಕ ನೀಡುವುದೇನು? ( ಬ್ಯಾಂಕಿನಿಂದ ಸಾಲ ನೀಡುತ್ತಿದ್ದೇವೆ ಎಂದು ದೂರವಾಣಿ ಕರೆ ಮಾಡಿ ಅವರ ಬಾಯಿಂದಲೇ ಕೇಳಬಹುದು, ಅದೂ ಕಪ್ಪು ಹಣವೇ!). ತಮಗೆ ಉಪಕರಿಸಿದ ಕಂಪನಿಗಳ ಔಷಧಿಯನ್ನೇ ಬರೆಯುವ ವೈದ್ಯ ಮಾಡುವುದೇನು? ಸುದ್ದಿಗಾಗಿ ಹಣ(ಪೇಡ್-ನಿವ್ಸ್)ದಂತಹ ಕೆಟ್ಟ ರೋಗಕ್ಕೊಳಗಾದ ಮಾಧ್ಯಮಗಳು ಮಾಡುತ್ತಿರುವುದೇನು?  ಹೀಗೆ ನಮ್ಮ ನಿತ್ಯ ಜೀವನವನ್ನು ಕೂಲಂಕುಷವಾಗಿ ಪರಾಮರ್ಷಿಸುತ್ತಾ ಹೋದರೆ ತಿಳಿದು ಬರುವುದೆಂದರೆ, ಬಹುತೇಕ ಎಲ್ಲ ವರ್ಗಗಳು ತಮ್ಮ ತಮ್ಮ ಸ್ಥರದಲ್ಲಿ, ತಮಗೆ ಸಾಧ್ಯವಾದಷ್ಟು ಭ್ರಷ್ಟಾಚಾರದ ಮರವನ್ನು ಪೋಷಣೆ ಮಾಡುತ್ತಾ ಬರುತ್ತಿದ್ದಾರೆ ಅದರ ಪ್ರಮಾಣ ಬೇರೆ ಬೇರೆ ಇರಬಹುದು ಅಷ್ಟೇ, ’ಸೈನಡ್’ಅನ್ನು ಸ್ವಲ್ಪವೇ ತಿನ್ನಿ ಇಲ್ಲ ಹೆಚ್ಚಾದರು ತಿನ್ನಿ ಪರಿಣಾಮ ಮಾತ್ರ ಒಂದೇ ಅಲ್ಲವೇ? ಈಗ ಹೇಳಿ ಇದರಲ್ಲಿರುವ ಪಿವುನ್‌ನಿಂದ-ಪಿ.ಎಮ್‌ವರೆಗೆ, ಅನಕ್ಷರಸ್ಥನಿಂದ-ಮಹಾಜ್ಞಾನಿವರೆಗೆ, ಆರಕ್ಷಕನಿಂದ-ಭಕ್ಷಕನವರೆಗೆ, ನ್ಯಾಯಾಧೀಶನಿಂದ-ಅಪರಾಧಿವರೆಗೆ,  ಯಾರು ಯಾರನ್ನು ಶಿಕ್ಷಿಸುತ್ತೀರಿ? ಏನು ಏನೆಂದು ವಿಚಾರಣೆಗೊಳಪಡಿಸುತ್ತೀರಿ? ನಿಜ ಕಠಿಣವಾದ ಕಾನೂನುಗಳು ಬೇಕು, ಮರಣದಂಡನೆಯಂತಹ ಶಿಕ್ಷೆಯನ್ನು ಕಾನೂನು ಜಾರಿಯಾಗಿದೆ ಎಂದೇ ಇಟ್ಟುಕೊಳ್ಳಿ, ಬರೀ ಇದರಿಂದ ಮಾತ್ರ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವೇ? ಕಾನುನುಗಳನ್ನು ರೂಪಿಸುವುದು ಸರಳ, ಅದನ್ನು ಜಾರಿಗೆ ತರುವುದು ಸುಲಭವೇ? ನಾಳೆ ಬರೀ ದೂರುಗಳು, ಪ್ರತಿದೂರುಗಳು ಧಾಕಲಾಗಲಾರಂಭಿಸಿದವೆಂದರೆ ಅವುಗಳನ್ನು ನಿಯಂತ್ರಿಸುವ ಬಗೆ ಹೇಗೆ? ಯಾವುದೇ ವಾಹನವನ್ನು ಪರಿಚಯಿಸಿ, ಅದು ಖಾಲಿಯಾಗಿ ಓಡಾಡಿದ್ದನ್ನು, ನಮ್ಮದೇಶದಲ್ಲಿ ಎಂದಾದರೂ ಗಮನಿಸಿದ್ದೀರ?


ಅದಿರಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿರುವ ಅಣ್ಣಾ ಹಜಾರೆ ನೇತೃತ್ವದ ಆಂದೋಳನ ’ಟೀಮ್ ಇಂಡಿಯಾ’ ಆಗದೇ ಕೇವಲ ’ಟೀಮ್ ಅಣ್ಣ’ಕ್ಕೆ ಮಾತ್ರಸೀಮಿತವಾಗುತ್ತಿದೆ, ಸುಂದರ ಗುಲಾಬಿ ಹೂವಿನಂತೆ ಕಾಣುತ್ತಿದ್ದ ಈ ತಂಡದ ಒಂದೊಂದೆ ಪಕಳೆಗಳು ಉದುರಿ ಹೋಗುತ್ತಿವೆ (ಉದಾ: ಸ್ವಾಮಿ ಅಗ್ನಿವೇಶ್,ಭೂಹಕ್ಕು ಹೋರಾಟಗಾರ ಪಿ ವಿ ರಾಜಗೋಪಾಲ, ಜಲ ಸಂರಕ್ಷಣ ಹೋರಾಟಗಾರ ರಾಜೇಂದ್ರ ಸಿಂಗ್ ಮುಂತಾದವರು), ಬಾಬಾ ರಾಮ್‌ದೇವ್ ಅವರ ಅಂದೋಳನ ’ಸರ್ವ ಭಾರತೀಯರ’ ಬೆಂಬಲ ಪಡೆಯದೆ ಕೇವಲ ಅವರ ಭಕ್ತವರ್ಗದ ಬೆಂಬಲ ಪಡೆದುಕೊಂಡಿದೆ, ಈಗ ಇವು ಕೇವಲ ಬಣಗಳಾಗಿ ಮಾತ್ರ ಗೋಚರಿಸುತ್ತಿವೆ, ಅಂದರೆ ಬಿಡಿ ಬೆರಳುಗಳು! ಪ್ರಾರಂಭದಲ್ಲಿ ಒಂದಿಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದ ಈ ಹೋರಾಟಗಳು ಸಮಗ್ರತೆಯನ್ನು  ಪಡೆದುಕೊಳ್ಳಲು ವಿಫಲವಾಗುತ್ತಿರುವುದಾದರು ಯಾಕೆ? ಯಾಕೆಂದರೆ, ಗಾಜಿನ ಮನೆಯಲ್ಲಿರುವವನು ಎಂದಿಗೂ ಇನ್ನೊಂದು ಗಾಜಿನ ಮನೆಗೆ ಕಲ್ಲನ್ನು ಎಸೆಯುವುದಿಲ್ಲ ಎಂಬ ಸರಳ ಸತ್ಯವನ್ನು ಮನಗಾಣುತ್ತಿಲ್ಲ ಅಥವ ಜಾಣಕುರುಡನ್ನು ಪ್ರದರ್ಶಿಸುತ್ತಿವೆ. ಜನರಿಗೆ ಇದು ಕೇವಲ ಸ್ವ ಪ್ರತಿಷ್ಠೆಯ ತಿಕ್ಕಾಟವೆನಿಸುತ್ತಿದೆ. ನೀವೆ ಹೇಳಿ ನಿಜವಾಗಿಯೂ ಜನಲೋಕಪಾಲ ಮಸೂದೆಯ ವಿವರಗಳು, ಉಪಯೋಗಗಳು, ಮಹತ್ವಗಳು ಎಷ್ಟು ಜನರಿಗೆ ತಿಳಿದಿವೆ? ಇಲ್ಲ ಬಹುತೇಕರಿಗೆ ತಿಳಿದಿಲ್ಲ, ಅಂದಮೇಲೆ ಇವುಗಳ ಸಾರ್ವತ್ರಿಕರಣ ಹೇಗೆ ಸಾಧ್ಯ? ಆ ಮೂಲಾಗ್ರವಾಗಿ ಬದಲಾವಣೆಯ ನಿರೀಕ್ಷೆ ಎಷ್ಟು ಸಮಂಜಸ? ಬಾಬಾರವರ ,ಅಣ್ಣಾ ಮತ್ತು ಅವರ ತಂಡದವರ ದೇಶಪ್ರೇಮ,ಪ್ರಾಮಾಣಿಕತೆಯ ಬಗ್ಗೆ ಎರಡು ಮಾತಿಲ್ಲ, ಆದರೆ  ಆಮೂಲಾಗ್ರವಾಗಿ ಬದಲಾವಣೆಯನ್ನು ತರಬಹುದಾದ ಅವಕಾಶವಿದ್ದರೂ, ಅವಸರವಾಗಿ ಪ್ರತಿಫಲ ನಿರೀಕ್ಷಿಸುತ್ತಿರುವದರ ಬಗ್ಗೆ ಆಕ್ಷೇಪವಿದೆ (ಇದಕ್ಕಾಗಿ ೪೨ವರ್ಷಗಳ ಕಾಲಾ ಕಾದಿದ್ದೇವೆ ಎಂಬ ಉತ್ತರವನ್ನು ಕೆಲವು ಜನರು ನೀಡಬಹುದು ಆದರೆ ಅದು ಜನರ ಹೋರಾಟವಾಗಿ ಬದಲಾಗಿ ಎಷ್ಟು ವರ್ಷಗಳಾಗಿವೆ ಎಂಬುದನ್ನು ಯೋಚಿಸಿದರೆ ಈಗ ನಡೆಯುತ್ತಿರುವುದೇನು ಎಂದು ಅರ್ಥವಾಗಬಹುದು). ಸಮರ್ಪಕ ತಿಳುವಳಿಕೆಯನ್ನು ನೀಡುವಲ್ಲಿ ಎಡವಿದ ಮಾಧ್ಯಮಗಳು ಅಪರೂಪಕ್ಕೆಂಬಂತೆ ಅಣ್ಣಾ ಅವರಿಗೆ ಬೆಂಬಲ ನೀಡಿ ಅವರನ್ನು ಜನಪ್ರೀಯಗೊಳಿಸಿವೆಯಾದರೂ, ಜನಮನದಲ್ಲಿ ನೆಲೆಸಲು ವ್ಯಾಪಕವಾಗಿ ಪ್ರಯತ್ನಿಸಬೇಕಾಗಿರುವವರು ಅಣ್ಣಾರವರೆ.

         ಈಗ ಸ್ವಲ್ಪ ಯೋಚಿಸಿ, ಗಾಂಧಿಜಿಯವರ ಸ್ವಾತಂತ್ರ್ಯ ಹೋರಾಟ ಅಷ್ಟು ಯಶಸ್ವಿಯಾಗಲೂ ಕಾರಣವೇನು ಎಂದು? ನಮಗೆ ತಿಳಿಯುವ ಸಂಗತಿ ಎಂದರೆ, ಅದು ಸಾರ್ವತ್ರಿಕವಾಗಿತ್ತು, ಅದು ಪ್ರತಿಯೊಬ್ಬ ಭಾರತೀಯನ ಕನಸಾಗಿತ್ತು ಮತ್ತು ಹಾಗೆ ರೂಪಿಸಲಾಗಿತ್ತು ಎಂಬುದು. ಗಾಂಧಿ ಎಂಬುದು ಕೇವಲ ವ್ಯಕ್ತಿಯಾಗಿರದೆ ಶ್ರೀಮಂತನಿಂದ ಶ್ರೀಸಾಮಾನ್ಯರನ್ನು ಉದ್ದೇಶದ ಸಾಧನೆಗಾಗಿ ಬೆಸೆಯುವ ಶಕ್ತಿಯಾಗಿತ್ತು ಹಾಗೂ ಆ ಉದ್ದೇಶದ ತಿಳುವಳಿಕೆ ಎಲ್ಲರಿಗೂ ಇತ್ತು ಅದೂ ಸಂಪರ್ಕಮಾಧ್ಯಮಗಳ ಕೊರತೆ ಇದ್ದರೂ ಸಹ!

        ಆದರೆ ಇಂದು ಎರಡನೆಯ ಸ್ವಾತಂತ್ರ್ಯ ಹೋರಾಟ ಎಂದು ಅಣ್ಣಾರಿಂದ ಕರೆಯಲ್ಪಟ್ಟ ಭ್ರಷ್ಟಾಚಾರಿ ವಿರೋಧಿ ಹೊರಾಟದ ಉದ್ದೇಶವೆ ಹೆಚ್ಚಿನವರಿಗೆ ತಿಳಿದಿಲ್ಲ, ಅದರಲ್ಲೂ, ಈ ಹೋರಾಟ ಸಮಗ್ರ ಭಾರತದ ಧ್ವನಿಯಾಗಿಯೂ ಆಗದಂತಾಗಿರುವುದು ವಿಪರ್ಯಾಸವೇ ಸರಿ. ಆದರೆ ಒಂದು ವಿಷಯವನ್ನು ಒಪ್ಪಬಹುದು, ಅದೆಂದರೆ ಎಂದಿಗೂ ಮನೆಯಿಂದ ಹೊರ ಬರದ ಮಧ್ಯಮ ವರ್ಗ, ಯುವಕರು, ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟದ ಭಾಗವಾಗುವಂತೆ ಮಾಡುವಲ್ಲಿ ಆ ಸಮಯದಲ್ಲಿ ಯಶಸ್ವಿಯಾದರೂ ಅದೇ ಆವೇಗವನ್ನು ಕಾಪಾಡಿಕೊಂಡು ಹೋಗುವಲ್ಲಿಯೂ ಸಹ ಎಡುವುತ್ತಿರುವುದೇನೋ ಎಂಬ ಸಂಶಯವು ಮೂಡುತ್ತಿದೆ.

ಇನ್ನೊಂದೆಡೆಗೆ ಸರ್ಕಾರವು ಕಾನೂನು ರಚಿಸುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿವೆ, ಆರ‍್ಟಿಐನಂತಹ ಪ್ರಬಲ ಕಾನೂನಿನ ಬಲವನ್ನು ಮೊಟಕುಗೊಳಿಸುವಂತಹ ಮಾತುಗಳನ್ನು "ಅತ್ಯಂತ ಪ್ರಾಮಾಣಿಕ"(?) ಪ್ರಧಾನಿ ಮನಮೋಹನ ಸಿಂಗ್ ಅವರು ಆಡುತ್ತಿದ್ದಾರೆ, ದುಷ್ಟ ಶಕ್ತಿಗಳಿಗೆ ಬಲಿಯಾಗುತ್ತಿರುವ ಆರ‍್ಟಿಐ ಹೋರಾಟಗಾರಂಥವರನ್ನು ರಕ್ಷಿಸಬೇಕಾದ ಸರ್ಕಾರವು, ಭ್ರಷ್ಟಾಚಾರ ವಿರೋಧಿ ಹೋರಾಟಗಾರರನ್ನೇ ಜೈಲಿಗಟ್ಟುತ್ತಿದೆ!

 ಹೀಗೆ ಒಂದೆಡೆ ಭ್ರಷ್ಟಾಚಾರಿಗಳು ಇನ್ನೂ ದಿನದಿಂದ ದಿನಕ್ಕೆ ಪ್ರಬಲಾಗುತ್ತಿರುವ ಸಂದರ್ಭದಲ್ಲಿ, ಭ್ರಷ್ಟಾಚಾರಿಗಳನ್ನು ನಿಯಂತ್ರಿಸುವ ಬದಲು, ಅದರ ವಿರೋಧಿ ಕಾನೂನುಗಳನ್ನು, ಹೋರಾಟಗಾರರನ್ನು ನಿಯಂತ್ರಿಸಲು ಹವಣಿಸುತ್ತಿರುವ ಸರ್ಕಾರಗಳು ಆಳುತ್ತಿರುವಾಗ ಎಲ್ಲೋ ಒಂದೆಡೆ ನಿರೀಕ್ಷೆ ಮೂಡಿಸಿದ್ದ ಹೋರಾಟಗಳು ಅಧೋಗತಿಗೆ ಹೋಗುತ್ತಿವೆ ಏನೋ ಎಂಬಂತಹ ಸೂಕ್ಷ್ಮ ಪ್ರಶ್ನೆ ಮಸ್ಸಿನಲ್ಲಿ ಮೂಡುತ್ತಿದೆ. ಆದ್ದರಿಂದ ಅಣ್ಣಾ ಹಜಾರೆಯವರಿಂದ ಹಿಡಿದು ಎಲ್ಲ ಮುಂಚೂಣಿಯಲ್ಲಿರುವ, ಭಾರತದ ಭ್ರಷ್ಟಾಚಾರಿ ವಿರೋಧಿ ಶಕ್ತಿಗಳು ತಮ್ಮ ತಮ್ಮಲ್ಲೇ ಕಚ್ಚಾಡುತ್ತ ತಮ್ಮ ಧ್ಯೇಯವನ್ನು ಮರೆಯದೇ, ಒಂದು ಜನ ಜಾಗೃತಿ ಅಭಿಯಾನವನ್ನು ರಾಷ್ಟ್ರಾದ್ಯಂತ ಕೈಗೊಳ್ಳುವ ಸಮಯವಿದು ಎಂದು ತಿಳಿಯಬೇಕಾಗಿದೆ. ಆದರೆ ಅದು ಯಾವುದೇ ಪಕ್ಷದ ವಿರುದ್ಧ ಅಥವ ಪರವಾಗಿರದೇ ದೇಶದ ಪರವಾಗಿರಬೇಕಾದದ್ದು ಅತ್ಯಂತ ಮುಖ್ಯ ಎಂಬುದು ನನ್ನ ಭಾವನೆ.

          ಈ ಲೇಖನದ ಉದ್ದೇಶ ಕತ್ತಲೆಯ ಕಾರ್ಮೋಡದಲ್ಲಿ ಬೆಳಕಿನ ಕಿರಣವಾಗಿ ಕಂಡಿರುವ ಅಣ್ಣಾ ಹಜಾರೆ,ಬಾಬಾ ರಾಮದೇವ್ ಅಂಥವರ ಹೋರಾಟ ನಿಷ್ಕ್ರೀಯವಾಗದಿರಲಿ ಎಂಬ ಕಳಕಳಿಯೇ ಹೊರತು ಭ್ರಷ್ಟಾಚಾರ ವಿರೋಧಿ ಆಂದೋಳನವನ್ನು ಟೀಕಿಸುವುದಲ್ಲ.ನಾವು ಬಯಸುವುದಿಷ್ಟೆ ಪ್ರತಿಬಾರಿ ಬೇಡಿಕೆ ಇಡೇರದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ರಚ್ಚೆ ಹಿಡಿಯುವುದರಿಂದ  ತಾತ್ಕಾಲಿಕ ಯಶಸ್ಸು ದೊರೆತರೂ, ಸಂಪೂರ್ಣ ಯಶಸ್ಸು ಮರೀಚಿಕೆಯಾಗಿಯೇ ಬಿಡುವ ಅಪಾಯವಿರುತ್ತದೆ, ಆದ್ದರಿಂದ ಒಂದೇ ಕೂಗಿಗೆ ಇಡೀ ದೇಶವನ್ನೆ ದೆಹಲಿಯಡೆಗೆ ಮುಖಮಾಡುವಂಥ, ಜನ ಗಣ ಮನದಲ್ಲಿ ನೈತಿಕ ಸ್ಥ್ಯರ್ಯವನ್ನು ರೂಪಿಸಿ, ಮಾನಸಿಕವಾಗಿ ಸಿದ್ಧಗೊಳಿಸಿ ಸಂಪೂರ್ಣ ಜನಾಂದೋಲನವಾಗಿ ರೂಪಗೊಳ್ಳಬೇಕು ಮತ್ತು ಜನರೂ ಸಹಿತ ಮತದಾನದ ಸಂದರ್ಭದಲ್ಲಿ ಕುಂಟುನೆಪ ಹೇಳಿ ತಪ್ಪಿಸಿಕೊಳ್ಳುವುದು ಇಲ್ಲವೇ ಹಣ ಪಡೆದು ತಮ್ಮ ಆತ್ಮ ಸಾಕ್ಷಿಗೆ ವಿರುದ್ಧವಾಗಿ ಮತಹಾಕುವುದು ಮಾಡದೇ, ಪ್ರಾಮಾಣಿಕರಾಗಿ ಪ್ರಾಮಾಣಿಕರನ್ನು ಆರಿಸಿ, ಪ್ರಾಮಾಣಿಕತೆಯನ್ನು ತಮ್ಮಂದಿಲೇ ರೂಪಿಸಿಕೊಳ್ಳುವಂತಾಗ ಬೇಕು ಎಂಬುದು ಹೀಗಾದಾಗ ಮಾತ್ರ ಭವ್ಯ ಭಾರತ ನಿಜವಾಗಿಯು ಭವ್ಯವಾಗುತ್ತದೆ!

      (ITS ALSO PUBLISHED IN TSI KANNADA WEBSITE BY ME)

ಪ್ರತಿಫಲನದ ಪ್ರತಿಫಲಾಕಾಂಕ್ಷೆಯೊಂದಿಗೆ-ರಾಘವೇಂದ್ರ ರಾ ಗುಡಿ

Comments