ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು - ಒಂದು ಹಾಸ್ಯ ಅಥವಾ ಹಾಸ್ಯಾಸ್ಪದ ಬರೆಹ!!
ಚಿತ್ರ ಕೃಪೆ: ಮಿತ್ರನೊಬ್ಬ ಮಿಂಚಂಚೆಯಲ್ಲಿ ಕಳುಹಿಸಿದ್ದು, ಮೂಲ ತಿಳಿದಿಲ್ಲ.
ಒಮ್ಮೆ ಸಂಪದಿಗರೆಲ್ಲ ಸೇರಿ ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು ಎಂದು ಅದರ ಮೂಲ ಶೋಧಿಸಲು ಒಂದು ಮುಕ್ತ ವಿಚಾರಗೋಷ್ಠಿ ಏರ್ಪಡಿಸಿದರು. ಸಂಪದ ಎಂದ ಮೇಲೆ ಅದು ಮುಕ್ತ ಚರ್ಚೆಯೆಂದು ಬೇರೆ ಹೇಳಬೇಕಾಗಿಲ್ಲವಲ್ಲ, ಆದ್ದರಿಂದ ಎಲ್ಲರೂ ತಮಗೆ ಸರಿತೋರಿದ ವಿಚಾರಗಳನ್ನು ಒಂದೊಂದಾಗಿ ಮಂಡಿಸತೊಡಗಿದರು. ಅದಕೂ ಮೊದಲು ವಿಘ್ನಗಳು ಬರಬಾರದೆಂದು ಆಗಲೇ ಅಂಡಾಂಡ ಭಂಡ ಸ್ವಾಮಿಗಳೆಂದು ಖ್ಯಾತಿ ಇರುವ ಗಣೇಶರನ್ನೇ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಹೇಳಿದರು. ಅದರಂತೆ ಅಧ್ಯಕ್ಷ ಪೀಠದ ಮೇಲೆ ಆಸೀನರಾದ ಗಣೇಶರು ಮೊದಲು ಚಿಕ್ಕವರಿಂದ ಪ್ರಾರಂಭವಾಗಲಿ ಎಂದು ಚಿಕ್ಕು ಉರುಫ್ ಚೇತನ್ ಅವರ ಕಡೆ ನೋಡಿದರು. ಚೇತನ್ ಹೇಳಿದರು, ಇಲ್ಲಿ ಬಾಸುಗಳು ತಮ್ಮ ಸಬಾರ್ಡಿನೇಟ್ಸನ್ನ "ಬ್ಯಾಂಗ್" ಮಾಡುತ್ತಾರೆ, ಹಾಗೆಯೆ ಗರ್ಲ್ ಫ್ರೆಂಡುಗಳು ತಮ್ಮ ಬಾಯ್ ಫ್ರೆಂಡುಗಳನ್ನು, ಮನೆ ಓನರುಗಳು ತಮ್ಮ ಬಾಡಿಗೆದಾರರನ್ನ, ಗೂಂಡಾಗಳು ಶಾಸಕರನ್ನ, ಶಾಸಕರು ಆಫೀಸರುಗಳನ್ನ, ಆಫೀಸರುಗಳು ಜನಸಾಮಾನ್ಯರನ್ನ ಹೀಗೆ ಒಬ್ಬೊಬ್ಬರು ಮತ್ತೊಬ್ಬರನ್ನು "ಬ್ಯಾಂಗ್" ಮಾಡುತ್ತಿರುತ್ತಾರೆ. ಹಾಗಾಗಿ ಇದು ಬ್ಯಾಂಗ್ ಮಾಡುವವರ ಊರು ಬ್ಯಾಂಗಳೂರು ಅದೇ ಕ್ರಮೇಣ ಬೆಂಗಳೂರು ಆಗಿದೆ. ಇದಕ್ಕೆ ತಂತು-ನಿಸ್ತಂತು ಜೀವಿಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಸುಪ್ರೀತ್ ಅವರು ಅಮೇರಿಕದಲ್ಲೂ ಯಾವುದಾದರೂ ಸಾಫ್ಟವೇರ್ ಕಂಪನಿಯ ನೌಕರರನ್ನು ಬ್ಯಾಂಗ್ ಮಾಡಿದಾಗ, ಐ ಯಾಮ್ ಬೆಂಗಳೂರ್ಡ್ ಅಂತ ಅನ್ನುತ್ತಾರೆ ಎಂದು ಚಿಕ್ಕುವಿನ ಮಾತನ್ನು ಸಮರ್ಥಿಸಿದರು.
ಅಮೇರಿಕಾದಿಂದ ಈ ಸಭೆಗೆ ಆಗಮಿಸಿದ್ದ ಶ್ರೀನಾಥರು ನಕ್ಕು, ಬ್ಯಾಂಗ್ ಎನ್ನುವುದು ಇತ್ತೀಚೆಗೆ ಬಂದದ್ದು ಆದರೆ ಬೆಂಗಳೂರು ಅಭಿವೃದ್ಧಿ ಹೊಂದಿದ್ದು ಬ್ರಿಟೀಷರ ಕಾಲದಲ್ಲಿ, ಅವರು ಇಟ್ಟ ಹೆಸರು "ಬ್ಯಾಂಗಲ್" ಊರು ಅಂದರೆ ಬಳೆಗಳ ಊರು, ಇದಕ್ಕೆ ಉದಾಹರಣೆಯಾಗಿ ನೀವು ಮೆಜೆಸ್ಟಿಕ್ಕಿನ ಹತ್ತಿರವೇ ಇರುವ ಬಳೇಪೇಟೆಯನ್ನು ನೋಡಬಹುದು. ಅವರು ಇಲ್ಲಿಗೆ ಬಂದಾಗ ಮೊದಲು ಕಣ್ಣಿಗೆ ಬಿದ್ದದ್ದು ಈ ಬಳೇಪೇಟೆ ಆದ್ದರಿಂದ ಇದನ್ನು ಬ್ಯಾಂಗಲ್ ಊರು ಅದೇ ಈಗಿನ ಬ್ಯಾಂಗಲೂರು ಅಥವಾ ಬೆಂಗಳೂರು. ಆಗ ಸಭೆಯಲ್ಲಿದ್ದ ಜಯಂತರು ಬ್ಯಾಂಗಲ್ ಎನ್ನುವುದು ಆಂಗ್ಲ ಪದ ಅದು ಹೇಗೆ ನಮ್ಮ ಕನ್ನಡದ ಊರಿಗೆ ಇಡುತ್ತಾರೆ ಎಂದು ಸಿಡಿಮಿಡಿಗೊಂಡರು. ಆಗ ರಾಮಮೋಹನರು ಜಯಂತ್ ಅಷ್ಟೊಂದು ಆವೇಶ ಬೇಡ, ಬಹುಶಃ "ಬಳೇ ಊರು" ಅಂತ ಇದ್ದಿದ್ದು ಇಲ್ಲಿಗೆ ಬ್ರಿಟೀಷರು ಬಂದ ಮೇಲೆ ಅದು ಆಂಗ್ಲೀಕರಣಗೊಂಡಿರಬಹುದು ಅದಕ್ಕೇನಾದರೂ ನಮ್ಮ ಇತಿಹಾಸದಲ್ಲಿ ದಾಖಲೆ ಸಿಗುತ್ತದೆಯೇನೊ ನೋಡೋಣ. ಈಗ ನೋಡಿ ಅರಳೇಪೇಟೆ ಅಂತ ಇದ್ದಿದ್ದು "ಕಾಟನ್ ಪೇಟೆ"ಯಾಗಿಲ್ಲವೆ? ಹಾಗೇ ಇದು ಕೂಡ ಇರಬಹುದು ಸ್ವಲ್ಪ ತಾಳ್ಮೆಯಿಂದ ಬೇರೆಯವರು ಹೇಳುವುದನ್ನೂ ಕೇಳೋಣ ಎಂದಾಗ ಎಲ್ಲರೂ ಸುಮ್ಮನಾದರು.
ಆಗ ಕವಿಗಳು ಹೇಳಿದರು ನೋಡಿ ಬೆಂಗಳೂರು ಪುರಾಣ ಪ್ರಸಿದ್ಧವಾದ ಊರು ಅದರ ಕುರುಹಾಗಿ ಬೆಂಗಳೂರಿನಲ್ಲಿ ಧರ್ಮರಾಯನ ಕರಗ ನಡೆಯುತ್ತದೆ. ಅಂದರೆ ಇದು ಮಹಾಭಾರತಕಾಲದಿಂದಲೂ ಇದ್ದ ಊರು. ಮಹಾಭಾರತದಲ್ಲಿ ಭೀಮನು ದುರ್ಯೋಧನನ ತೊಡೆಯನ್ನು ಮುರಿದದ್ದು ಇಲ್ಲೇ, ದುರ್ಯೋಧನನು ಅಡಗಿಕೊಂಡಿದ್ದು ಇಲ್ಲೇ ಸ್ಯಾಂಕಿ ಕೆರೆಯೆಂದು ಕರೆಯಲ್ಪಡುವ ವೈಶಂಪಾಯನ ಸರೋವರದಲ್ಲಿ, ಅದರ ಇತಿಹಾಸದ ಬಗ್ಗೆ ಆಮೇಲೆ ಹೇಳುತ್ತೇನೆ. ಊರು ಅಂದರೆ ತೊಡೆ ಅದನ್ನು ಮುರಿದದ್ದು ಅಂದರೆ ಭಂಗ ಮಾಡಿದ್ದರಿಂದ ಈ ಪ್ರದೇಶ "ಊರುಭಂಗವಾದ ಪ್ರದೇಶ" ಅದು ಕನ್ನಡದಲ್ಲಿ ಭಂಗವಾದ ಊರು ಅದೇ ಜನರ ಬಾಯಲ್ಲಿ ಬಂಗವೂರು, ಬೆಂಗಳೂರು ಎಂದಾಗಿದೆ. ಅದಕ್ಕೆ ಅಲ್ಲೇ ಇದ್ದ ಆಸುರವರು ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆಂದರೆ ನನ್ನ ಬ್ಲಾಗ್ ಬರಹ "ನನಗಿಷ್ಟ ನನ್ನ ಸಖಿಯ ಊರು" ನೋಡಿ ಎಂದು ಹೇಳಿದರು.
ಆಗ ಅಲ್ಲೇ ಆಸೀನರಾಗಿದ್ದ ಸಾಲಿಮಠರು, ಅದು ಸಕ್ಕದ ಹೆಸರಾದ್ದರಿಂದ ಅದನ್ನು ಸರಿಯೆಂದು ಸಮರ್ಥಿಸಲಾಗದು. ಅದಕ್ಕೆ ಕನ್ನಡದ ಮೂಲವಿದೆ. ಅದು ಹೇಗೆಂದರೆ, ಈ ಊರಿನಲ್ಲಿ ಎಲ್ಲರೂ ತಮ್ಮ ಕೆಲಸಗಳಿಗೆ ದೂರದ ಜಾಗಗಳಿಗೆ ಹೋಗಬೇಕಾದ್ದರಿಂದ ಇಲ್ಲಿಯವರು ಬಹಳ ಬೇಗನೆ ಏಳುತ್ತಾರೆ. ಆದ್ದರಿಂದ ಇದು ಬೇಗ+ಏಳುವವರ+ಊರು=ಬೇಗೇಳುವವರ ಊರು, ಮೊದಲನೆಯದು ಗುಣಸಂಧಿಯಾದರೆ ಆಮೇಲಿನದು ಸವರ್ಣದೀರ್ಘ ಸಂಧಿ, ಈ ಸಂಧಿಗಳನ್ನು ಕನ್ನಡಕ್ಕೆ ಎರವಲು ಪಡೆದಿದ್ದಾರೆ. ಅವು ಇಲ್ಲಿ ಬೇಡ. ಬೇಗೇಳುವವರ ಊರು ಇದು ಆಡುನುಡಿಯಲ್ಲಿ ಬೇಗಳೂರು ಆಗಿ "೦" ಪ್ರತ್ಯಯ ಸೇರಿಕೊಂಡು ಬೇಂಗಳೂರು ......ಬೆಂಗಳೂರು ಆಗಿದೆ. ಆಗ ಅಲ್ಲೇ ಇದ್ದ ಮೈಸೂರಿನ ಶಶಿಕುಮಾರ್ ಅವರು ಇದು ಸಕ್ಕದ ಪದವಲ್ಲವೆನ್ನುವುದು ದಿಟ ಆದರೆ ಬೆಂಗಳೂರು ಪದದ ಹಿನ್ನಲೆ ಅದಲ್ಲ. ಅದು ಹೀಗಿದೆ, ಮೊದಲು ಇಲ್ಲೆಲ್ಲಾ ಸುತ್ತು ವನಸಿರಿಯಿಂದ ಊರು ಸುಂದರವಾಗಿ ಕಂಗೊಳಿಸುತ್ತಿತ್ತು. ಇಲ್ಲಿ ಬ್ರಿಟೀಶರು ಬೀಡು ಬಿಟ್ಟು ಬಿಲ್ಡಿಂಗುಗಳು ಹೆಚ್ಚಾಗಿ ಬಿಸಿಲಿನ ಬೇಗೆ ಹೆಚ್ಚಾಯಿತು. ಮತ್ತು ಇಲ್ಲಿ ನೆಲದ ಬೆಲೆ ಹೆಚ್ಚಾದ್ದರಿಂದ ಭ್ರಷ್ಟಾಚಾರವೂ ಹೆಚ್ಚಾಗಿ ಇನ್ನೂ ಹೆಚ್ಚು ಕಟ್ಟಡಗಳಾಗಿ ಬಿಸಿಲು ಇನ್ನೂ ಹೆಚ್ಚಾಯಿತು ಮತ್ತು ದಿನನಿತ್ಯ ವಸ್ತುಗಳ ಬೆಲೆಗಳೆಲ್ಲಾ ವಿಪರೀತವಾಗಿ ಏರಿ ಸಾಮಾನ್ಯ ಜನರೂ ಬೇಗೆಯಿಂದ ಬಳಲುವಂತಾಯಿತು ಅದೇ ಜನರು ಬೆಂದಕಾಳಿನಂತಾದರು. ಆದ್ದರಿಂದ ಜನ ಇದನ್ನು ಬೆಂದಕಾಳೂರು ಅಥವಾ ಬೇಗೆ ಊರು, ಅದೇ ಈಗ ಬೇಂಗಳೂರು ಆಗಿದೆ. ಆಗ ಹೈದರಾಬಾದು ಸೇರಿ ಅಷ್ಟೋ ಇಷ್ಟೋ ತೆಲುಗು ಕಲಿತಿದ್ದ ಶ್ರೀಧರ್ ಸುಮ್ಮನಿರುತ್ತಾರೆಯೆ. "ಬೇಗೆ" ಎನ್ನುವುದು ಕನ್ನಡದ ಶಬ್ದ, ಅದನ್ನು ತೆಲುಗಿನಲ್ಲಿ "ಬೆಂಗ" ಎನ್ನುತ್ತಾರೆ ಮತ್ತು ಬೆಂಗಳೂರಿನಲ್ಲಿ ತೆಲುಗರೇ ಹೆಚ್ಚಿನ ಜನ ಸಂಖ್ಯೆಯಲ್ಲಿರುವುದರಿಂದ ಇದು ತೆಲುಗಿನ ಮೂಲದ್ದು, ಆದ್ದರಿಂದ ನನ್ನ ವಾದ ಸರಿ. ಅದು ಹೇಗೆ ಅಷ್ಟು ನಿಖರವಾಗಿ ಹೇಳುತ್ತೀರಿ ಎಂದು ಶಶಿಕುಮಾರ್ ಮತ್ತೆ ಪ್ರಶ್ನಿಸಿದರು. ಆಗ ಶ್ರೀಧರ್ ಮತ್ತೆ ಹೇಳಿದರು ನೋಡಿ ನಿಮ್ಮಲ್ಲಿ ಸಂಪಂಗಿ ರಾಮನಗರ ಅಂತ ಇದೆ. ತೆಲುಗಿನಲ್ಲಿ ಸಂಪಿಗೆಗೆ ಸಂಪಂಗಿ ಅನ್ನುತ್ತಾರೆ, ಅದೇ ರೀತಿ ಬೇಗೆ ಅಥವಾ ಬವಣೆಯೆನ್ನುವುದನ್ನು ಒಪ್ಪಿದರೂ ಕೂಡ ಬೆಂಗ ಅಂತ ಬಂದಿರುವುದರಿಂದ ಅದು ಖಚಿತವಾಗಿ ತೆಲುಗಿನದೇ ಅಂತ ಸಮರ್ಥಿಸುತ್ತೇನೆ ಎಂದರು.
ಇದನ್ನೆಲ್ಲಾ ದೂರದಿಂದ ನಗುತ್ತಾ ವೀಕ್ಷಿಸುತ್ತಿದ್ದ ಮಂಜಣ್ಣನವರು ಬಹಳ ದಿನ ಬೆಂಗಳೂರಿನಲ್ಲಿದ್ದುದ್ದರಿಂದ ಸಹಜವಾಗಿಯೇ ಅವರಿಗೆ ತಮಿಳು ಬರುತ್ತಿತ್ತು. ಅವರೆಂದರು, ಅದು ಹಾಗಲ್ಲ ಸ್ವಾಮಿ ಇದು ತಮಿಳಿನ ವಾಂಗೋ ಶಬ್ದದಿಂದ ಬಂದದ್ದು. ವಾಂಗೋ ವಾಂಗೋ ಎಂದರೆ ತಮಿಳಿನಲ್ಲಿ ಬನ್ನಿ ಬನ್ನಿ ಅಂತ. ಬೆಂಗಳೂರಿಗರು ಎಲ್ಲರನ್ನೂ ವಾಂಗೋ ವಾಂಗೋ ಅಂದರೆ ಬನ್ನಿ ಬನ್ನಿ ಎಂದು ಆಹ್ವಾನಿಸುತ್ತಾರೆ ಆದ್ದರಿಂದ ಇಲ್ಲಿ ಎಲ್ಲೆಲ್ಲಿಯವರೋ ಬಂದು ವಕ್ರಿಸಿಕೊಂಡಿರುವುದು, ಅದು ಈಗ ಬೇಡ. ಅವರು ಈ ಊರಿಗೆ ಇಟ್ಟ ಹೆಸರು ವಾಂಗೋ ಊರು, ವಾಂಗೂರು ಅದು ಹೇಗೋ ಕನ್ನಡಿಗರ ಬಾಯಲ್ಲಿ ಬಾಂಗೋ ಆಗಿ ಬ್ಯಾಂಗೋ ಆಗಿ ಬೆಂಗಳೂರು ಆಗಿದೆ. ಆಗ ಚನ್ನೈನಲ್ಲಿ ವಾಸವಾಗಿದ್ದ ಶ್ರೀನಿವಾಸ್ ಅವರು ಸೂಪರ್ ಆಗಿ ಹೇಳಿದ್ರಿ ಮಂಜಣ್ಣನವರೆ. "ತಮಿಳರು ಇಲ್ಲಿನ ಏರಿಯಾವೊಂದಕ್ಕೆ "ಕಲೀಜು ಪಾಳ್ಯ" ಅದೇ ಗಲೀಜು ಪಾಳ್ಯ ಅಂತ ಹೆಸರಿಟ್ಟರೆ ಅದನ್ನು ನಮ್ಮವರು ಕಲಾಸಿಪಾಳ್ಯಂ ಅಂತ ಸ್ಟೈಲಾಗಿ ಕರೆಯುತ್ತಾರೆ, ಆದ್ದರಿಂದ ವಾಂಗೂರನ್ನು ನಮ್ಮವರು ಸ್ಟೈಲಾಗಿ ಬ್ಯಾಂಗಳೂರು ಎಂದು ಕರೆದಿರಬಹುದು ಅಂತ ಮಂಜಣ್ಣನವರು ಹೇಳಿದ್ದಕ್ಕೆ ಧ್ವನಿಗೂಡಿಸಿದರು.
ಸಭೆಯಲ್ಲಿ ಎಲ್ಲೋ ಮೂಲೆಯಲ್ಲಿ ಕುಳಿತಿದ್ದ ಕೃಷ್ಣ ಬೊಳಂಬುರವರು, ಬೇಗೆ ಎಂದು ಶಶಿಕುಮಾರ್ ಅವರು ಹೇಳಿದ್ದು ಸರಿ ಆದರೆ ಬೆಂಗಳೂರಿಗೆ ಆ ಹೆಸರು ಬರಲು ಅದು ಕಾರಣವಲ್ಲ. ಇಲ್ಲಿ ಬಿಸಿಲಿನ ಬೇಗೆಯಿಂದ ಮಾತ್ರವಲ್ಲ ಮಂಡೆ ಬಿಸಿಯಾಗುವುದು. ಇದಕ್ಕೆ ಹಲವಾರು ಕಾರಣಗಳಿವೆ, ಆಗೆಲ್ಲಾ ಇಲ್ಲಿಯ ಜನ ಎಳನೀರು ಅದೇ ಬೋಂಡಾ ಕುಡಿಯುತ್ತಾರೆ. ಇಲ್ಲಿಯ ಚನ್ನಪಟ್ಟಣ, ಮದ್ದೂರಿನಿಂದ ಬರುವ ಬೋಂಡಾಗಳು ಕಡಿಮೆ ಬರುವುದರಿಂದ ಮಂಗಳೂರು ಹಾಗು ಕೇರಳಗಳಿಂದ ಅವನ್ನು ತರಿಸಿ ಕುಡಿಯುತ್ತಾರೆ. ಅದಕ್ಕೆ ಇದನ್ನು ಬೋಂಡ ಕುಡಿಯುವವರ ಊರು, ಬೋಂಡ ಕುಡಿಯೂರು, ಇಲ್ಲಿ ಒಂದು ಅರಿಸಮಾಸ ಬರುವುದರಿಂದ ಅದನ್ನು ಬೋಂಡಊರು ಎಂದು ಬದಲಾವಣೆಗೊಂಡಿದೆ. ಮಧ್ಯದಲ್ಲಿ "ಡ" ಬದಲಿಗೆ "ಗ" ಸೇರಿ ಬೋಂಗ ಆಗಿದೆ. ಅದೇ ಕ್ರಮೇಣ ಬೋಂಗಊರು ಬೋಂಗಳೂರು-ಬೆಂಗಳೂರು ಆಗಿದೆ. ಅಷ್ಟರಲ್ಲಿ ಮೈಸೂರಿನ ಬಾಲುರವರು ಅದೇನು ಬೋಂಡ ಅಂದ್ರೆ ಎಳನೀರು ಬುರುಡೇನ?! ಅಂತ ಪ್ರಶ್ನಿಸಿದರು. ಆಗ ಪಾರ್ಥರವರಿಗೆ ತಮ್ಮ ಬುರುಡೆಯ ಕಥೆ ಜ್ಞಾಪಕಕ್ಕೆ ಬಂದು ಮನಸ್ಸಿನಲ್ಲಿಯೇ ನಕ್ಕರು, ಅದನ್ನು ಗಮನಿಸಿದ ಜಯಂತ್ ಅವರ ಮನಸ್ಸನ್ನು ಓದಿದವನಂತೆ ಅವನೂ ಕೂಡ ಕಿಸಕ್ಕನೆ ನಕ್ಕ, ಏಕೆಂದರೆ ಅವನು ಕೂಡ ಬುರುಡೇ ಸ್ಪೆಷಲಿಸ್ಟಲ್ಲವೇ?
ಇತ್ತ ಬೋಂಗ ಶಬ್ದ ಕಿವಿಗೆ ಬಿಳುತ್ತಿದ್ದಂತೆ ಸುಮಂಗಲಾ ಅವರು ನನ್ನ ಕಡೆ ನೋಡಿ, ಏನು ಗುರುಗಳೇ ಎಲ್ಲಾ ಗಂಡಸ್ರೇ ಮಾತಾಡ್ಲಿಕತ್ತಾರ ಹೆಣ್ಣು ಮಕ್ಳಿಗೂ ಸ್ವಲ್ಪ ಮಾತಾಡಕ ಅವಕಾಶ್ ಮಾಡಿ ಕೊಡಾಕ್ ಹೇಳ್ರಿ! ಇವರು ಹಾಗೆನ್ನುತ್ತಿದ್ದಂತೆ ನಾನು ಪಾರ್ಥರವರ ಕಡೆ ನೋಡಿದೆ, ಅವರು ಎಲ್ಲಾ ಒಂದು ಕ್ಷಣ ಸೈಲೆಂಟಾಗಿರಿ ಎಂದು ಎಲ್ಲರಿಗೂ ಸನ್ನೆ ಮಾಡಿದರು. ಆಗ ಸುಮಂಗಳಾ ಹೇಳಾಕ ಷುರು ಮಾಡಿದ್ರು, "ಎಲ್ಲಾ ಹಿರಿಯರಿಗೂ ನನ್ ನಮಸ್ಕಾರ್ರಿ! ನಮ್ ಉತ್ತರ್ ಕರ್ನಾಟಕದ್ ಕಡೀ ಬೋಂಗಾ ಅಂದ್ರ ಗ್ಯಾಸ್ ಬಿಡೂದ್ ರೀ, ಅದರೀ ಈ ಬೆಂಗ್ಳೂರ್ ಮಂದಿ ಅದೇನೋ ಅಂತಾರಲ್ರೀಪ ಅದ....ಅದ......ಈಗ ಹೊಳಿತ್ ನೋಡ್ರೆಲಾ ಅದ ರೀ....ರೀಲ ಬಿಡೂದು ಇಲ್ಲಾ ರೇಲು ಬಿಡೂ.....ದ್......ರೀಪ!. ಇಲ್ಲ್ ಬಾಳ್ ಮಂದೀಗ ಅದ ದಂಧಾರೀಪ ಅದ್ಕ ಇದ್ನ ಬೋಂಗಾ ಊರ್ ಅಂತಾರಿ. ಅದಾ....ಮಂದಿ ಬಾಯಾಗ ಬೊಳಂಬುರವ್ರು ಹೇಳಿಧಂಗ ಬೆಂಗ್ಳೂರ್ ಆಗ್ಯಾದ.
ಅಷ್ಟರಲ್ಲಿ, ಅಲ್ಲೇ ಇದ್ದ ಹನುಮಂತ ಪಾಟೀಲರು, ಹೆಣ್ಮಗ್ಳಾದ್ರೂ ಭಾಳ್ ಧೈರ್ಯಾ ತಗೋಂಡ್ ಮಾತಾಡೀದ್ ನೋಡ್ವ ನೀ ಹೇಳೂದು ಒಂದು ರೀತಿ ಖರೇನ ನೋಡ್ ತಂಗಿ, ಆದ್ರೂ ಭೋಂಗಾ ಅಂದ್ರ "ಸೀಟಿ" ಅಂತಾನೂ ಅರ್ಥ್ ಬರ್ತದ. ಇದೇ ಹೆಚ್ ಸೂಕ್ತ ಅಂತ ನನಗನ್ನಿಸ್ಲಕ್ಕತ್ಯದ. ಇಲ್ಲಿ ಸಿಟಿ ಬಸ್ಸಿನ್ಯಾಗ ಕಂಡಕ್ಟರ್ಗೋಳು ಸೀಟಿ ಊದ್ತಾರ, ಹಂಗ ಟ್ರಾಫಿಕ್ ಪೋಲಿಸ್ರು, ರಾತ್ರಿ ಆತಂದ್ರ ಬೀಟಿನ್ ಪೋಲಿಸ್ರು ಮತ್ತ ರೈಲು ಹೊಂಡು ಮುಂದ ಅದುರ್ ಸೀಟಿ ಕೇಳಿಸ್ತೇತಿ, ಫ್ಯಾಕ್ಟರಿ ಬಿಟ್ಟಾಗೂ ಸೆತೆ ಈ ಬೋಂಗಾ ಶಬ್ದ ಕೇಳಿಸ್ತೇತಿ, ಅದೆಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ಪಾರ್.....ಯಾಗೋಳು (ಪಡ್ಡೆ ಹುಡುಗ್ರು) ಪೋರಿಗುಳಿಗೆ ಸೀಟಿ ಹೊಡಿತಾವ; ಅದ್ಕ ನಮ್ ಉತ್ತರ್ ಕರ್ನಾಟಕುದ್ ಮಂದಿ ಈ ಊರ್..ನ ಬೋಂಗಾ ಊರು ಅಂತಾ ಕರ್ದಾರ. ಇಷ್ಟು ಹೇಳಿದ ಪಾಟೀಲರು ಅಲ್ಲೇ ಹತ್ತಿರದಲ್ಲಿದ್ದ ಗೋಪಾಲ್ ಕುಲಕರ್ಣಿಗಳ ಕಡೆ ತಿರುಗಿ ನಾನು ಹೇಳಿದ್ದು ಸರಿನಾ ಅಂತ ಅಭಿಪ್ರಾಯಕ್ಕಾಗಿ ನೋಡಿದರು. ಗೋಪಾಲರು ಯಾರ ಪರವೂ ವಹಿಸಲು ಇಷ್ಟಪಡದೆ, ಒಂದೇ ಮಾತಿನಲ್ಲಿ ಇಲ್ಲಿಯವರೆಗೆ ಎಲ್ಲರೂ ಹೇಳಿದ್ದು ನಿಜ, ಅವರಿಗೆಲ್ಲ ನನ್ನ ಧನ್ಯವಾದಗಳು ಅಂತ ಹೇಳಿ ಸುಮ್ಮನಾಗಿಬಿಟ್ಟರು.
ಈ ವರದಿಯನ್ನು ತಮ್ಮ ಕಂಪ್ಯೂಟರ್ ಪರದೆಯ ಮೇಲೆ ಮುಂಬೈಯ್ಯಲ್ಲಿ ಲೈವ್ ಆಗಿ ನೋಡುತ್ತಿದ್ದ ಮಿಶ್ರಿಕೋಟಿಗಳು, ವೀಡಿಯೋ ಕಾನ್ಫರೆನ್ಸ್ ಟೆಕ್ನಿಕ್ಕಿನ ಮೂಲಕ ಸಂಪದಗರಿಗರನ್ನುದ್ದೇಶಿಸಿ ಮಾತನಾಡಿದರು. ನೋಡಿ ಬೆಂಗಳೂರಿಗೆ ಮೊದಲು ಉತ್ತರ ಭಾರತೀಯರು ವಲಸೆ ಬಂದಾಗ ಅಲ್ಲಿ ಹೆಚ್ಚು ಬದನೆಕಾಯಿಯನ್ನು ಬಳಸುತ್ತಿದ್ದರು. ಈಗಲೂ ಈರನಗೆರೆ ಬದನೆಕಾಯಿ ಅಲ್ಲಿ ಫೇಮಸ್ಸು, ಹಾಗೆಯೇ "ಬೇಂಗನ್ ಬಾತ್" ಅಲ್ಲಿನವರಿಗೆ ಹೆಚ್ಚು ಪ್ರಿಯವಾದ ತಿನಿಸು. ಹಾಗಾಗಿ ಅವರು ಇದನ್ನು "ಬೇಂಗನ್ ಊರು" ಅಂತ ಕರೆದರು. ಅದೇ ಕಾಲಕ್ರಮೇಣ ಈಗಿನ ಬೆಂಗಳೂರಾಗಿದೆ, ಎಂದು ತಿಳಿಸಿಕೊಟ್ಟರು. ಆಗ ಸಭೆಯಲ್ಲಿ ಗದ್ದಲ ಷುರುವಾಯಿತು, ಒಬ್ಬರು ಅದು ಸಂಸ್ಕೃತ ಮೂಲದ್ದೆಂದರೆ, ಇನ್ನೊಬ್ಬರು ಅದು ತೆಲುಗೆಂದು, ತಮಿಳೆಂದು, ಅದು ಕನ್ನಡವೆಂದು, ಕನ್ನಡದ್ದಾದರೆ ಕುಂದಾಪುರ ಕನ್ನಡದ್ದಾ, ಧಾರವಾಡದ್ದಾ ಅಥವಾ ಬೆಂಗಳೂರಿನದ್ದಾ ಅಂತ ಸದಸ್ಯರೆಲ್ಲ ತಾವು ಹೇಳಿದ್ದೇ ಸರಿ ಎಂದು ತಮ್ಮ ತಮ್ಮಲ್ಲೇ ವಾಗ್ಯುದ್ಧಕ್ಕೆ ಇಳಿದರು. ಇದನ್ನು ಕಂಡ ಪಾರ್ಥರು, ಕವಿಗಳ ಮೂಢ ಉವಾಚದಿಂದ ಒಂದು ಚೌಪದಿಯನ್ನು ಹೇಳಿದರು:
ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ
ನಿಜವ ನಂಬಲು ಹಿಂಜರಿಕೆಯೇಕೆ |
ಜಿಜ್ಞಾಸೆಯಿರಲಿ ಹೇಗೆ ಏನು ಏಕೆ
ಹಿರಿಯ ನಿಜವರಿತು ನಡೆವ ಮೂಢ!!
ಆಗ ಎಲ್ಲರೂ ಸುಮ್ಮನಾದರು, ಆಗ ಸಭೆಯ ಅಧ್ಯಕ್ಷತೆ ವಹಿಸಿದ್ದ ಗಣೇಶರು ಥೇಟ್ ಅಂಡಾಂಢ ಭಂಡ ಸ್ವಾಮೀಜಿಯ ಸ್ಟೈಲಿನಲ್ಲಿ ಪ್ರವಚನ ಷುರು ಮಾಡಿದರು. ನೋಡಿ ಈ ಎಲ್ಲಾ ಸಮಸ್ಯೆ ಬಗೆಹರಿಯ ಬೇಕೆಂದರೆ ನೀವು ನನ್ನ ಪೂಜೆ ಮಾಡ್ಬೇಕು. ಆಗ ಸಭೆಯಲ್ಲಿ ಒಂದು ಕ್ಷಣ ಆಶ್ಚರ್ಯ ಉದ್ವೇಗ ಉಂಟಾದವು ಇದೇನಿದು ಸ್ವಾಮಿಗಳು ಹೀಗೆ ಅಪ್ಪಣೆಕೊಡಿಸುತ್ತಿದ್ದಾರೆ ಎಂದು ಹಲವರ ಹುಬ್ಬುಗಳು ಮೇಲೇರಿದವು. ಸಭಿಕರನ್ನು ನೋಡಿ ಮೀಸೆಮರೆಯಲ್ಲೇ (ಮೀಸೆ ಇದೆಯಾ?) ನಕ್ಕ ಗಣೇಶರು ನನ್ನ ಅಂದರೆ ನನ್ನ ಹೆಸರಿನ ದೇವರ ಪೂಜೆಯನ್ನು ಮಾಡಬೇಕು ಎಂದಾಗ ಸಭೆ ನಿರಾಳವಾಯಿತು. ನೋಡಿ ನಿಮಗೆ ತಿಳಿದ ಹಾಗೆ ನಾನು ಈ ಬೆಂಗಳೂರಿನ ಗಲ್ಲಿ-ಗಲ್ಲಿ ತಿರುಗಿದ್ದೇನೆ, ಈ ಮೊದಲು ನಿಮಗೆ ಮಲ್ಲೇಶ್ವರದ ಪರಿಚಯ ಮಾಡಿದೆ, ಈಗ ಸದಾಶಿವ ನಗರ ಪಾರ್ಕ್ ಹಾಗೆ ಮುಂದುವರೆಯುತ್ತೇನೆ. ಈಗ ನಾನು ಹೇಳ ಹೊರಟಿರುವ ವಿಶ್ಯಾ ಏನಂದ್ರೆ ನನಗೆ ಈ ಬೆಂಗಳೂರಿನ ಸಂಪೂರ್ಣ ಪರಿಚಯ ಇದೆ. ಅದಕ್ಕೂ ಮುಂಚೆ ಒಂದು ಮಾತು, ನೋಡಿ ನೀವು ಬೇಗ ಏಳುವುದೇತಕ್ಕೆ ಬೇಗನೇ ಆಫೀಸಿಗೆ ಹೋಗುವುದಕ್ಕೆ, ಯಾಕೆ ಆಫೀಸಿಗೆ ಬೇಗ ಹೋಗ್ಬೇಕು ಅಂದ್ರೆ ಬಾಸಿನಿಂದ ಬ್ಯಾಂಗ್ ಆಗುವುದನ್ನ ತಪ್ಪಿಸಿಕೊಳ್ಳೋದಕ್ಕೆ. ನೀವು ಎಷ್ಟೇ ಬೇಗ ಎದ್ದರೂ ದಾರಿಯಲ್ಲಿ ಟ್ರಾಫಿಕ ಜ್ಯಾಮ್ ಅಗದಂಗೆ ಇರ್ಬೇಕು ಅಂದ್ರೇ ನೀವೆಲ್ಲಾ ಗಣೇಶನ ಪೂಜೆ ಮಾಡಬೇಕು. ಹಾಗೆ ಈ ಬೆಂಗಳೂರಿನಲ್ಲಿ ಬಳೇ ತಗೋಬೇಕಂದ್ರೂ, ಅಥವಾ ಬಿಸಿಲಿನ ಬೇಗೆ ಅಥವಾ ಬೆಲೆಯೇರಿಕೆಯ ಬವಣೆಯಿಂದ ತಪ್ಪಿಸ್ಕೋಬೇಕು ಅಂದ್ಕೊಂಡ್ರೂ ಮೊದ್ಲು ಗಣೇಶನ್ನ ಪೂಜೆ ಮಾಡ್ಬ್ಕೇಕು. ತೆಲುಗು, ತಮಿಳರು,ಇಂಗ್ಲೀಷಿನೋರು, ಉತ್ತರ ಭಾರತೀಯರು ಎಲ್ರೂ ನಡುವೆ ನೀವು ಏಗಿ ಈ ಊರಲ್ಲಿ ಬದುಕ್ಬೇಕಂದ್ರೂ ನೀವು ಗಣೇಶ್ನ ಪೂಜೆ ಮಾಡ್ಬೇಕು. ಕರ್ನಾಟಕದಲ್ಲಿ ಏನೇ ಬದ್ಲಾವಣೆ ತರ್ಬೇಕು ಅಂದ್ರೆ ಅದು ಬೆಂಗ್ಳೂರಿನಿಂದ್ಲೇ ಪ್ರಾರಂಭವಾಗ್ಬೇಕು. ಅದಕ್ಕೇ ಈ ಊರಿಗೆ ಇರೋ ಮಹತ್ವ ನೋಡಿ ಇಲ್ಲಿನ ಮೂಲನಿವಾಸಿಗಳಾದ ಈಗ ಅಲ್ಪಸಂಖ್ಯಾತರಾದ ಕನ್ನಡಿಗರ ಪೂರ್ವಿಕರು ಗಣೇಶನ ಪೂಜೆ ಮಾಡೋದು ಜನ ಮರೀಬಾರ್ದು ಅಂತೇಳಿ ಈ ಊರಿಗೆ ಗಣೇಶನ ಊರು ಅಂದ್ರೆ, "ಬೆನಕನ ಊರು" ಅಂತಾ ಹೆಸರಿಟ್ರು, ಅದು ಜನ್ರು ಬಾಯ್ನಲ್ಲಿ ಬೆಂಕೂರು ಆಗಿ ಆಮೇಲೆ ಬೆಂಕ್ಳೂರು ಆಗಿ ಬೆಂಗ್ಳೂರ್ ಆಯ್ತು. ಹೀಗೆ ಎಲ್ಲರಿಗೂ ಒಪ್ಪಿಗೆಯಾಗುವಂತೆ ಅಂಡಾಂಡ ಭಂಡ ಸ್ವಾಮಿಗಳು ಉತ್ತರಿಸಿದ್ದರಿಂದ ಅವರಿಗೆ ಆ ಪಟ್ಟವನ್ನು ಖಾಯಂ ಆಗಿ ಉಳಿಸಬೇಕೆಂದು ಆ ಸಭೆಯಲ್ಲಿ ಅವಿರೋಧವಾಗಿ ತೀರ್ಮಾನವಾಯಿತು. ಇದನ್ನು ಹಿರಿಯಾರಾದಂಥಹ ಕಾಮತರೂ ಕೂಡ ಅನುಮೋದಿಸಿದರು.
ಆಗ ಚಿಕ್ಕುವಿನ ನೇತೃತ್ವದಲ್ಲಿ ಪಡ್ಡೆ ಹುಡುಗರ ಗುಂಪೊಂದು ತಯಾರಾಗಿ ಅವರೆಲ್ಲ ಒಕ್ಕೊರೊಲಿನಿಂದ ಭಜನೆ ಷುರು ಮಾಡಿದರು.
"ಅಂಡಾಂಡ ಭಂಡ ಸ್ವಾಮೀಜಿಯ ಕರುಣೆ
ಪಡೆದು ಆಗೋಣ ನಾವು ಜಾಣ ಜಾಣೆ!
ಇದ ಹಾಡಿದರು ಯಾರೂ ಕೊಡರು ಎಂಟಾಣೆ,
ಆದರೂ ಇದನೇಕೆ ಹಾಡಬೇಕೋ ನಾಕಾಣೆ!!
ಈ ಸಭೆಯ ಕಾರ್ಯಕಲಾಪಗಳನ್ನು ವರದಿ ಮಾಡಲೆಂದು ಅಲ್ಲಿಗೆ ಆಗಮಿಸಿದ್ದ "ಸತ್ಯ ಚರಣ" ಇನ್ನು ಹೆಚ್ಚು ಹೊತ್ತು ಇಲ್ಲಿದ್ದರೆ ತನಗೆ ನಿಮ್ಹಾನ್ಸೇ ಗತಿಯಾಗಬಹುದೆಂದು ಹೆದರಿ ಅಲ್ಲಿಂದ ಕಾಲ್ತೆಗೆದರು.
ವಿ.ಸೂ.: ಇದು ಕೇವಲ ಹಾಸ್ಯಕ್ಕಾಗಿ ಬರೆದದ್ದು, ಯಾರೂ ಇದರಿಂದ ಕೋಪಿಸಿಕೊಳ್ಳುವುದಿಲ್ಲವೆಂದು ಭಾವಿಸುತ್ತೇನೆ! ಹಾಗೊಂದು ವೇಳೆ ಕೋಪವಿದ್ದರೆ ಅದಕ್ಕೆ ಕ್ಷಮೆಯಿರಲಿ :))
Comments
ಉ: ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು - ಒಂದು ಹಾಸ್ಯ ಅಥವಾ ...
In reply to ಉ: ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು - ಒಂದು ಹಾಸ್ಯ ಅಥವಾ ... by shashikannada
ಉ: ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು - ಒಂದು ಹಾಸ್ಯ ಅಥವಾ ...
In reply to ಉ: ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು - ಒಂದು ಹಾಸ್ಯ ಅಥವಾ ... by makara
ಉ: ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು - ಒಂದು ಹಾಸ್ಯ ಅಥವಾ ...
In reply to ಉ: ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು - ಒಂದು ಹಾಸ್ಯ ಅಥವಾ ... by ಗಣೇಶ
ಉ: ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು - ಒಂದು ಹಾಸ್ಯ ಅಥವಾ ...
ಉ: ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು - ಒಂದು ಹಾಸ್ಯ ಅಥವಾ ...
In reply to ಉ: ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು - ಒಂದು ಹಾಸ್ಯ ಅಥವಾ ... by spr03bt
ಉ: ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು - ಒಂದು ಹಾಸ್ಯ ಅಥವಾ ...
ಉ: ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು - ಒಂದು ಹಾಸ್ಯ ಅಥವಾ ...
In reply to ಉ: ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು - ಒಂದು ಹಾಸ್ಯ ಅಥವಾ ... by venkatb83
ಉ: ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು - ಒಂದು ಹಾಸ್ಯ ಅಥವಾ ...