ದೇವರ ಜಾಡಿನಲ್ಲಿ...
ನನ್ನ "ಗತ ಗತಿ" ನೀಳ್ಗತೆಯ ಒಂದು ಭಾಗ ಇದು. ಇದೇ ಒಂದು ಸ್ವತಂತ್ರ ಕಥೆಯಾಗಲೂಬಹುದು. ಓದಿ ನೋಡಿ...
ತಲೆದಿಂಬಿನ ಪಕ್ಕದಲ್ಲೇ ಇದ್ದ ಮೊಬೈಲ್ ಕಿಣಿಕಿಣಿಗುಟ್ಟಿ ಎಬ್ಬಿಸಿತು. ಎತ್ತಿಕೊಂಡರೆ ಅತ್ತಲಿಂದ ಪ್ರೊಫೆಸರ್ ಜೋಸೆಫ್ ಮಾತಾಡುತ್ತಿದ್ದರು. "ಸ್ವಲ್ಪ ಮನೆ ಕಡೆ ಬನ್ನೀ, ಸ್ವಲ್ಪ ಮಾತಾಡೋದಿದೆ. ತುಂಬಾ ಮುಖ್ಯವಾದ ವಿಷಯ" ಎಂದೇನೋ ಹೇಳಿ ನಿದ್ದೆಯನ್ನೆಲ್ಲಾ ಹಾರಿಸಿಬಿಟ್ಟರು. "ವಿಷಯ ಏನು ಸರ್?" ಅಂದರೆ "ಫೋನ್ನಲ್ಲಿ ಹೇಳಕ್ಕಾಗಲ್ಲ. ಮನೇಗೆ ಬನ್ನಿ. ಊಟ ಇಲ್ಲೇ ಮಾಡೋರಂತೆ" ಎಂದು ಗಂಭೀರದನಿಯಲ್ಲಿ ಹೇಳಿ ಫೋನ್ ಇಟ್ಟುಬಿಟ್ಟರು. ನನಗೆ ಅಚ್ಚರಿ. ಜತೆಗೆ ತುಸು ಭಯ. ಸಹೋದ್ಯೋಗಿಗಳ್ಯಾರಾದರೂ ಏನಾದರೂ ಕಿತಾಪತಿ ಮಾಡಿರಬದುದೇ ಎಂದು ಸಂಶಯವಾಯಿತು. ಈ ನಾಲ್ಕು ತಿಂಗಳಲ್ಲಿ ನಾನೇ ಗಮನಿಸಿದಂತೆ ಅಂತಹ ಕಿಡಿಗೇಡಿ ತಲೆಯ ಹಲವರು ಕಾಲೇಜಿನಲ್ಲಿದ್ದಾರೆ.
ಯೋಚಿಸುತ್ತಲೇ ಸ್ನಾನ ಮಾಡಿದೆ. ಟೀ ಕುಡಿದು ನಾಳೆಗೆ ಅಂತ ಒಂದು ಜೊತೆ ಬಟ್ಟೆಗಳನ್ನು ಇಸ್ತ್ರಿ ಮಾಡುವಾಗಲೂ ಮನಸ್ಸಿಡೀ ಏನೇನೋ ಪ್ರಶ್ನೆಗಳು.
ಪ್ರೊಫೆಸರರ ಮನೆ ತಲುಪಿದಾಗ ಅವರು ತಮ್ಮ ಸ್ಟಡಿ ರೂಮಿನಲ್ಲಿ ಏನೋ ಓದುತ್ತಾ ಕುಳಿತಿದ್ದರು. ಮೇಜಿನ ಮೇಲೆ ಹಲವಾರು ಪುಸ್ತಕಗಳು. ಕೆಲವು ತೆರೆದುಕೊಂಡು ಮತ್ತೆ ಕೆಲವು ಬೋರಲಾಗಿ ಬಿದ್ದಿದ್ದವು.
"ಈ ದೇವರು ಅನ್ನೋನು ಯಾರ್ರೀ?" ನಾನು ಕೂರುತ್ತಿದ್ದಂತೇ ಪ್ರಶ್ನೆ ಹಾಕಿದರು. ನನಗೆ ಗಾಬರಿ.
ಕಾಲೇಜಿನಲ್ಲಿ ಯಾರೋ ನರಮನುಷ್ಯರು ತೊಂದರೆ ಕೊಟ್ಟಿರಬಹುದು ಅಂದುಕೊಂಡಿದ್ದೆ. ಆದರೀಗ ಅವರಿಗೆ ತಲೆನೋವು ಹತ್ತಿಸಿರುವುದು ಸಾಕ್ಷಾತ್ ದೇವರು! ಅವರನ್ನೇ ಮಿಕಿಮಿಕಿ ನೋಡಿದೆ.
"ಹಂಗಲ್ಲಾ, ಈ ದೇವರು ಅನ್ನೋ ಆಸಾಮಿ ಯಾರು ಅಂತ ನಿಮಗೇನಾದರೂ ಗೊತ್ತಾ ಅಂತ ಕೇಳ್ತಿದೀನಿ" ಅಂದರು.
ಇದುವರೆಗಿನ ಬದುಕಿನಲ್ಲಿ ನಾನು ಅಷ್ಟಾಗೇನೂ ತಲೆಕೆಡಿಸಿಕೊಳ್ಳದ ವಿಷಯ ಈ ದೇವರು. ನಾನಾಗಿ ಯಾವ ದೇವಸ್ಥಾನ, ಗುಡಿಗುಂಡಾರಗಳಿಗೂ ಹೋದವನಲ್ಲ. ಹಾಗಂತ ದೇವರು ಅಥವಾ ಆ ಪರಿಕಲ್ಪನೆಯ ಬಗ್ಗೆ ನನಗೆ ಅಸಡ್ಡೆ ಅಂತೇನೂ ಇಲ್ಲ. ಅಮ್ಮ ಯಾವ ದೇವಸ್ಥಾನಕ್ಕೂ ಹೋಗುತ್ತಿರಲಿಲ್ಲ. ಆದರೆ ಮನೆಯಲ್ಲೇ ಪೂಜೆ ಮಾಡುತ್ತಿದ್ದಳು. ಹೀಗಾಗಿ ದೇವಸ್ಥಾನಗಳಿಗೆ ಹೋಗುವ ಅಭ್ಯಾಸ ಚಿಕ್ಕಂದಿನಲ್ಲಿ ನನಗಾಗಲಿಲ್ಲ. ಅಮ್ಮ ಮನೆಯಲ್ಲಿ ಪೂಜೆ ಮಾಡುವಾಗ ನನ್ನನ್ನೂ, ಸರಸಕ್ಕನನ್ನೂ ಕರೆಯುತ್ತಿದ್ದಳು. ಅವಳು ಕೈಮುಗಿ ಅಂದಾಗ ಮುಗಿಯುತ್ತಿದ್ದೆ, ಅಡ್ಡಬೀಳು ಅಂದಾಗ ಬೀಳುತ್ತಿದ್ದೆ. ಮದುವೆಯಾದ ಮೇಲೆ ಲಲಿತೆ ಅಲ್ಲಿ ಇಲ್ಲಿ ದೇವಸ್ಥಾನ ಅಂತ ಹೋಗುತ್ತಾಳೆ. ಅವಳಿಗೆ ಬೇಜಾರು ಮಾಡಬಾರದು ಅಂತ ಜತೆಯಲ್ಲಿ ಹೋಗುತ್ತೇನೆ. ಅವಳು ಕೈ ಮುಗಿದಾಗ ನಾನೂ ಮುಗಿಯುತ್ತೇನೆ. ಮನೆಯಲ್ಲೂ ಪೂಜೆ ಪುರಸ್ಕಾರ ನಡೆಯುತ್ತದೆ. ಅವಳ ಮನಸ್ಸನ್ನು ನೋಯಿಸಬಾರದು ಅಂತ ಅವಳು ಹೇಳಿದಂತೆಲ್ಲಾ ಮಾಡುತ್ತೇನೆ. ನನಗೆ ಅವಳು ಮುಖ್ಯ, ಅವಳು ಖುಷಿಯಾಗಿರುವುದು ಮುಖ್ಯ. ನನಗೂ ದೇವರಿಗೂ ಇರುವ ನಂಟು ಇಷ್ಟೇ.
ಪ್ರೊಫೆಸರರಿಗೆ ಅದನ್ನೇ ಹೇಳಿದೆ. ಸ್ವಲ್ಪ ಹೊತ್ತು ಯೋಚಿಸಿದ ಅವರು ಕೈಲಿದ್ದ ಪುಸ್ತಕವನ್ನು ಮೇಜಿನ ಮೇಲೆ ಬೋರಲಾಗಿಟ್ಟು ಮಾತು ತೆಗೆದರು:
"ಅಲ್ಲಾ, ಇದನ್ನೆಲ್ಲಾ ಯಾಕೆ ಕೇಳ್ತಾ ಇದೀನಿ ಅಂದ್ರೆ... ಈ ದೇವರು ಅನ್ನೋನು ಅನ್ಯಗ್ರಹಜೀವಿ ಇರಬಹುದೇ ಅನ್ನೋ ಸಂಶಯಾನೂ ಇಪ್ಪತ್ತು ಮೂವತ್ತು ವರ್ಷಗಳಿಂದ ನನ್ನನ್ನ ಕಾಡ್ತಾ ಇದೆ. ಕೆಲವು ಮಹಾಮಹಾ ಪಂಡಿತರೂ ಸಹಾ ಈ ಪ್ರಶ್ನೆ ಎತ್ತಿದ್ದಾರೆ. ಟಿ. ಸಿ. ಲೇತ್ಬ್ರಿಜ್ ಅನ್ನೋ ಒಬ್ಬ ವಿಜ್ಞಾನಿ ಏನು ಹೇಳ್ತಾನೆ ಅಂದ್ರೆ ಭಾಳಾ ಹಿಂದೆ, ಅಂದ್ರೆ ಮನುಷ್ಯ ಇನ್ನೂ ಅನಾಗರೀಕನಾಗಿ ಗುಹೆಗಳಲ್ಲಿ ವಾಸ ಮಾಡ್ತಾ ಇದ್ದ ಕಾಲದಲ್ಲಿ ವೈಜ್ಞಾನಿಕವಾಗಿ ತುಂಬಾ ಮುಂದುವರಿದ ಜನರು ಈ ಅನಂತ ವಿಶ್ವದ ಬೇರೆ ಬೇರೆ ಗ್ರಹಗಳಲ್ಲಿ ಇದ್ರು. ಅವರು ತಮ್ಮ ರಾಕೆಟ್ಗಳಲ್ಲಿ ಇಲ್ಲಿಗೆ ನಮ್ಮ ಭೂಮಿಗೆ ಬರ್ತಾ ಇದ್ರು, ನಮ್ಮ ನೀಲ್ ಆರ್ಮ್ಸ್ಟ್ರಾಂಗ್, ಆಲ್ಡ್ರಿನ್ ಚಂದ್ರಲೋಕಕ್ಕೆ ಹೋಗಿದ್ರಲ್ಲಾ ಹಂಗೆ. ಆ ಜನ ಭೂಮಿ ಮೇಲಿನ ಅನಾಗರೀಕರಿಗೆ ತಂತಜ್ಞಾನವನ್ನ ಹೇಳಿಕೊಟ್ರು. ಅವರ ರಾಕೆಟ್ಟು, ಅವರ ಹತ್ರ ಇದ್ದ ಹಲವಾರು ವೈಜ್ಞಾನಿಕ ಉಪಕರಣಗಳು, ಅವುಗಳಿಂದ ಅವರು ಮಾಡ್ತಾ ಇದ್ದ ಕೆಲಸಗಳು ಎಲ್ಲಾನೂ ನಮ್ಮ ಪೂರ್ವಜರಿಗೆ ಅದ್ಭುತವಾಗಿ ಕಂಡಿದೆ. ಹೀಗಾಗಿ ಅವರನ್ನ ದೇವರು ಅಂತ ಪೂಜೆ ಮಾಡೋಕೆ ಶುರು ಮಾಡಿರಬೋದು. ಈ ವಾದವನ್ನ ಭಾಳಾ ದೊಡ್ಡದಾಗಿ ಮಂಡಿಸಿ ಸುದ್ದಿ ಮಾಡಿದ್ದು ಎರಿಕ್ ವಾನ್ ಡ್ಯಾನಿಕೆನ್ ಅನ್ನೋ ಸ್ವಿಸ್ ವಿದ್ವಾಂಸ, ತನ್ನ ‘ಚಾರಿಯಟ್ಸ್ ಆಫ್ ದ ಗಾಡ್ಸ್?’ ಅನ್ನೋ ಕೃತಿನಲ್ಲಿ. ಆದರೆ ಅವನ ಮಾತುಗಳನ್ನ ಸಂಪೂರ್ಣವಾಗಿ ಒಪ್ಪೋಕಾಗಲ್ಲ. ಯಾಕಂದ್ರೆ ಅವನು ಆ ಪುಸ್ತಕದಲ್ಲಿ ಎಲ್ಲಾನೂ ತುಂಬಾ ಉತ್ಪ್ರೇಕ್ಷೆ ಮಾಡಿ ಹೇಳಿದ್ದಾನೆ, ಹಲವಾರು ಅಸತ್ಯಗಳನ್ನೂ ನಿಜದ ತಲೆ ಮೇಲೆ ಹೊಡೆದ ಹಾಗೆ ಹೇಳಿದ್ದಾನೆ. ಅಷ್ಟೇ ಅಲ್ಲ, ತನ್ನ ‘ಗೋಲ್ಡ್ ಆಫ್ ದ ಗಾಡ್ಸ್’ ಅನ್ನೋ ಪುಸ್ತಕದಲ್ಲಿ ಸುಳ್ಳುಗಳನ್ನ, ಉದ್ದೇಶಪೂರ್ವಕ ಕಲ್ಪನೆಗಳನ್ನ ರಾಜಾರೋಷವಾಗಿ ಹೇಳ್ತಾನೆ. ಹೀಗಾಗಿ ಅವನನ್ನ, ಅವನ ಮಾತುಗಳನ್ನ ಈಗ ಯಾರೂ ಸೀರಿಯಸ್ ಆಗಿ ತಗೋಳ್ಳೋದಿಲ್ಲ. ಆದರೆ ಆನಂತರ ಬಂದ ಚಾರ್ಲಸ್ ಬರ್ಲಿಟ್ಜ್, ಗ್ರಹಾಂ ಹ್ಯಾನ್ಕಾಕ್ ಇನ್ನೂ ಹಲವಾರು ವಿದ್ವಾಂಸರು ಈ ವಿಷಯಗಳನ್ನ ಸತ್ಯಕ್ಕೆ ಅಪಚಾರ ಆಗದ ಹಾಗೆ ಹೇಳ್ತಾರೆ. ಅವರ ಮಾತುಗಳನ್ನ ನಂಬಬೋದು."
ನನಗೆ ವಿಷಯದ ತಲೆಬುಡ ತಿಳಿಯಲಿಲ್ಲ. "ಇದೇನ್ ಸಾರ್ ನೀವು ಹೇಳೋದು?" ಅಂದೆ.
"ಸ್ವಲ್ಪ ವಿವರವಾಗಿ ಹೇಳ್ತೀನಿ ಕೇಳಿ. ಎಲ್ಲಾ ಧರ್ಮಗಳು ಹೇಳೋ ಹಾಗೆ ದೇವರಿಗೆ ಮೂರು ಪ್ರಮುಖ ಲಕ್ಷಣಗಳು ಅಥವಾ ಸಾಮರ್ಥ್ಯಗಳಿವೆ. ದೇವರು ಸರ್ವಶಕ್ತ, ಸರ್ವಾಂತರ್ಯಾಮಿ, ಸರ್ವಜ್ಞ. ಆದ್ರೆ ಬೈಬಲ್ ಅನ್ನ ನೀವು ಓದಿದ್ರೆ ತಿಳಿಯೋದು ಏನಪ್ಪಾ ಅಂದ್ರೆ ಅಲ್ಲಿ ಬರೋ ದೇವರಿಗೆ ಅಥವಾ ದೇವದೂತರಿಗೆ ಮೊದಲ ಎರಡು ಸಾಮರ್ಥ್ಯಗಳು ಇರ್ಲಿಲ್ಲ. ಅಲ್ಲಿ ನಮಗೆ ಕಾಣೋ ದೇವರಿಗೆ ಸರ್ವಶಕ್ತಿ ಇರ್ಲಿಲ್ಲ. ಅವನ ಸಾಮರ್ಥ್ಯಕ್ಕೆ ಇತಿಮಿತಿಗಳಿದ್ವು. ಅಲ್ಲದೇ ಅವನು ಬೇಕಾದಾಗ ಬೇಕಾದ ಕಡೆ ನಮ್ಮ ಸಿನಿಮಾಗಳ ದೇವರುಗಳು ಮಾಡೋ ಹಾಗೆ ಝಂಗ್ ಅಂತ ಪ್ರತ್ಯಕ್ಷ ಆಗಿ ಹಂಗೇ ಝಂಗ್ ಅಂತ ಮಾಯ ಆಗ್ತಾ ಇರ್ಲಿಲ್ಲ. ಆ ದೇವರು ಭಾರೀ ಸದ್ದು ಮಾಡೋ ಒಂದು ಹಾರೋ ವಾಹನದಲ್ಲಿ ಕೂತುಕೊಂಡು ಬೇಕಾದ ಕಡೆ ಹೋಗ್ತಾ ಇದ್ದ. ಇದಕ್ಕೆಲ್ಲಾ ಉದಾಹರಣೆ ಕೊಡ್ತೀನಿ ನಾನು." ಹೇಳುತ್ತಾ ಮೇಜಿನ ಮೇಲಿದ್ದ ದಪ್ಪ ಬೈಬಲ್ಲನ್ನೆತ್ತಿಕೊಂಡರು. ಎಡಗೈಯಲ್ಲಿ ಹಿಡಿದ ಅದನ್ನು ಬಲ ಅಂಗೈಯಿಂದ ಬಡಿಯುತ್ತಾ ಹೇಳಿದರು: "ಈ ಬೈಬಲ್ ಅನ್ನ ನಾನು ಒಂದು ಧಾರ್ಮಿಕ ಗ್ರಂಥ ಅಂತ ನೋಡೋದಿಲ್ಲ. ನನ್ನ ಅಭಿಪ್ರಾಯದಲ್ಲಿ ಇದು ಮಾನವನ ಇತಿಹಾಸದ ಬಗೆಗಿನ ಒಂದು ಪ್ರಮುಖ ಆಕರಗ್ರಂಥ. ಅದೇ ದೃಷ್ಟೀಲಿ ನೋಡಿ ಅಂತ ನಿಮಗೂ ಹೇಳ್ತಿದೀನಿ." ಆತುರಾತುರವಾಗಿ ಪುಟ ಮಗುಚಿದರು.
"ಇಲ್ಲಿದೆ ನೋಡಿ, ದೇವರು ಸೊಡೋಂ ಮತ್ತು ಗೊಮೋರಾ ಪಟ್ಟಣಗಳನ್ನ ನಾಶ ಮಾಡಿದ ಬಗೆ. ಅಲ್ಲಿನ ಜನ ತಾನು ವಿಧಿಸಿದ್ದ ಕಟ್ಟಳೆಗಳನ್ನೆಲ್ಲಾ ಕಡೆಗಣಿಸಿ ಅನಾಚಾರಗಳನ್ನ ಮಾಡೋದರಲ್ಲಿ ಮೈಮರೆತಿದ್ದಾಗ ಅವರನ್ನ ನಾಶ ಮಡೋಕೆ ದೇವರು ನಿರ್ಧಾರ ಮಾಡ್ತಾನೆ. ಆದ್ರೆ ಲಾಟ್ ಅನ್ನೋ ಸಂಭಾವಿತ ಮತ್ತವನ ಕುಟುಂಬವನ್ನ ಮಾತ್ರ ಕಾಪಾಡೋಕೆ ನಿರ್ಧಾರ ಮಾಡ್ತಾನೆ. ಅದಕ್ಕಾಗಿ ತನ್ನ ದೂತರನ್ನ ಲಾಟ್ನ ಮನೆಗೆ ಕಳಿಸ್ತಾನೆ. ಲಾಟನಿಗೆ ಆ ದೇವದೂತರು ಹೇಳೋದು ಏನಪ್ಪಾ ಅಂದ್ರೆ ‘ನಾಳೆ ಬೆಳಿಗ್ಗೆ ಈ ಪಟ್ಟಣ ನಾಶ ಆಗುತ್ತೆ. ಅಷ್ಟರೊಳಗೆ ನೀವೆಲ್ಲಾ ಈ ಊರನ್ನ ಬಿಟ್ಟು ಓಡಿಹೋಗಿ ಆ ಪರ್ವತಗಳ ಆಚೆ ಕಡೆ ಸೇರಿಕೋಬೇಕು. ಇಲ್ಲಾಂದ್ರೆ ನಿಮ್ಮನ್ನ ನಾವು ಕಾಪಾಡೋಕೆ ಆಗಲ್ಲ.’ ಅದೇನಪ್ಪ ಹಂಗೆ? ಆ ದೇವರು ಸರ್ವಶಕ್ತ ಆಗಿದ್ರೆ ಇಡೀ ಪಟ್ಟಣ ನಾಶ ಆಗ್ತಾ ಇದ್ರೂ ಅದರಲ್ಲಿರೋ ಸಕಲ ಜೀವಿಗಳೂ ಸಾಯ್ತಾ ಇದ್ರೂ ಆ ದುರಂತದ ನಡುಮಧ್ಯೇನೇ ಲಾಟ್ ಮತ್ತು ಅವನ ಫ್ಯಾಮಿಲಿಯವರನ್ನ ಕಾಪಾಡಬೇಕಾಗಿತ್ತು. ಆದ್ರೆ ಈ ಬೈಬಲ್ನ ದೇವರೀಗೆ ಅಂಥಾ ಶಕ್ತಿ ಇಲ್ಲ. ತನ್ನ ಶಕ್ತಿಯ ಇತಿಮಿತಿಗಳನ್ನ ಅವನು ಅರಿತಿದ್ದಾನೆ. ಸೊಡೋಂ ನಗರವನ್ನ ನಾಶ ಮಾಡೋದಿಕ್ಕೆ ತಾನು ಉಪಯೋಗಿಸೋ ಮಾರಕಾಶ್ತ್ರ ಎಲ್ಲವನ್ನೂ ಸಾರಾಸಗಟಾಗಿ ನಾಶ ಮಾಡುತ್ತೆ, ಅದರಿಂದ ಬೇಡವಾದವರನ್ನ ಕೊಂದು ಬೇಕಾದವರನ್ನ ಉಳಿಸೋದಿಕ್ಕೆ ಸಾಧ್ಯವಿಲ್ಲ, ಆ ಸಾಮರ್ಥ್ಯ ತನಗೂ ಇಲ್ಲ ಅಂತ ಅವನಿಗೆ ಗೊತ್ತಿತ್ತು."
"ಅದೆಂಥಾ ಮಾರಕಾಸ್ತ್ರ ಸರ್ ಅದೂ? ದೇವರ ಹತ್ರ ಆಟಂ ಬಾಂಬ್ ಗೀಟಂ ಬಾಂಬ್ ಏನಾದ್ರೂ ಇತ್ತಾ?" ನನ್ನ ಪ್ರಶ್ನೆಗೆ ನಾನೇ ನಕ್ಕೆ. ಅವರು ನಗಲಿಲ್ಲ.
"ಯೆಸ್, ಅದೇನೇ. ಊರು ತೊರೆದು ಪರ್ವತಗಳ ಕಡೆಗೆ ಓಡ್ತಾ ಇದ್ದಾಗ ಲಾಟನ ಹೆಂಡತಿ ಹಿಂತಿರುಗಿ ನೋಡ್ತಾಳೆ. ಅವಳು ಕಂಡದ್ದೇನು? ಅದೂ ಬೈಬಲ್ನಲ್ಲಿದೆ. ಒಂದು ಭಾರೀ ಅಣಬೆಯಂಥಾ ಹೊಗೆ ಊರಿನ ಮೇಲೆ ಏಳ್ತಾ ಇತ್ತಂತೆ. ಅಣ್ವಸ್ತ್ರದ ಆಸ್ಫೋಟನೆಯಿಂದ ಭಾರೀ ಅಣಬೆಯಂಥಾ ಹೊಗೆ ಏಳುತ್ತೆ ಅನ್ನೋದು ನಲವತ್ತೈದರ ಆಗಸ್ಟ್ ಆರನೇ ತಾರೀಖು ಅಮೆರಿಕಾದೋರು ಹಿರೋಷಿಮಾ ಮೇಲೆ ಆಟಂ ಬಾಂಬ್ ಹಾಕಿದಾಗಿನಿಂದ ನಮಗೆಲ್ಲಾ ಗೊತ್ತೇ ಇದೆ."
ನನಗೆ ಮಾತೇ ಹೊರಡಲಿಲ್ಲ. ಅವರೇ ಮುಂದುವರೆಸಿದರು:
"ದೇವರು ಸೊಡೋಂ ನಗರವನ್ನ ನಾಶ ಮಾಡಿದ್ದು ಆಟಂ ಬಾಂಬ್ನಿಂದಾನೇ ಅನ್ನೋದು ಇನ್ನೊಂದು ವಿಷಯದಿಂದ ಸ್ಪಷ್ಟ ಆಗುತ್ತೆ. ಲಾಟನಿಗೆ ಊರನ್ನ ಬಿಟ್ಟು ಆ ಪರ್ವತಗಳ ಆಚೆಬದಿಗೆ ಹೋದರೆ ಮಾತ್ರ ನಿನ್ನನ್ನ ಕಾಪಾಡೋಕೆ ಸಾಧ್ಯ ಅಂತ ದೇವರು ಯಾಕೆ ಹೇಳ್ದ? ಪರ್ವತದ ಈಚೆಬದೀಲಿ ಇರೊರೆಲ್ಲಾ ರೇಡಿಯೇಷನ್ ಅಂದ್ರೆ ಅಣುವಿಕಿರಣಕ್ಕೆ ಒಳಗಾಗಿ ಸಾಯ್ತಾರೆ, ಪರ್ವತದ ಆಚೆಬದಿಲಿರೋರು ವಿಕಿರಣದಿಂದ ತಪ್ಪಿಸಿಕೋಬೋದು, ಯಾಕೆಂದರೆ ಎತ್ತರಕ್ಕೆ ನಿಂತ ಪರ್ವತ ಅದನ್ನ ತಡೆಯುತ್ತೆ ಅಂತ ದೇವರಿಗೆ ಗೊತ್ತಿತ್ತು." ನನ್ನ ಮುಖದಲ್ಲಿ ಮೂಡಿರಬಹುದಾದ ಅಚ್ಚರಿಯನ್ನು ಗಮನಿಸಿಯೋ ಏನೋ ಸ್ವಲ್ಪ ಮುಂದೆ ಬಾಗಿ ಹೇಳಿದರು: "ಇದರ ಅರ್ಥ ದೇವರು ಸರ್ವಶಕ್ತ ಅಲ್ಲ. ಆಟಂ ಬಾಂಬ್ನಂಥಾ ಮಾರಕಾಸ್ತ್ರಗಳನ್ನ ಸಂಶೋಧಿಸಿ ಬಳಸೋದನ್ನ ಅರಿತಿದ್ದ ಒಬ್ಬ ವಿಜ್ಞಾನಿ. ನಮ್ಮ ಪೂರ್ವಜರು ಶಿಲಾಯುಗದ ಅನಾಗರೀಕರಾಗಿದ್ದ ಕಾಲದಲ್ಲಿ ಆಟಂ ಬಾಂಬ್ ಅವರಿಗೆ ಮನುಷ್ಯನ ಸಾಮರ್ಥ್ಯಕ್ಕೆ ಮೀರಿದ ಒಂದು ಅಸಾಮಾನ್ಯ ಮಾರಕಾಸ್ತ್ರ. ಈಗೇನಾಗಿದೆ ನೋಡಿ. ಆ ಪಾಕಿಸ್ತಾನದ ಎ. ಕ್ಯೂ ಖಾನ್ ಆಟಂ ಬಾಂಬ್ ತಂತ್ರಜ್ಞಾನದ ಪೆಟ್ಟಿಗೆ ಅಂಗಡಿ ಇಟ್ಕೊಂಡು ಲಿಬಿಯ, ಇರಾನ್, ನಾರ್ತ್ ಕೊರಿಯಾಗಳಿಗೆಲ್ಲಾ ಮಾರಾಟ ಮಾಡ್ತಾ ಇದ್ನಂತೆ ಭೂಪ. ಹ್ಞುಂ ಆ ವಿಷಯ ಬಿಡಿ. ದೇವರು ಸರ್ವಶಕ್ತ ಅಲ್ಲ ಅನ್ನೋದು ಈ ಪ್ರಕರಣದಿಂದ ಸಿದ್ಧ ಆಗುತ್ತೆ ಅನ್ನೋದಷ್ಟೇ ನಮಗೆ ಮುಖ್ಯ. ಇನ್ನು ಆ ದೇವರು ಸರ್ವಾಂತರ್ಯಾಮಿ ಅಲ್ಲ ಅನ್ನೋ ವಿಷಯಕ್ಕೆ ಬರೋಣ. ಕಿವಿ ಕಿತ್ತುಹೋಗೋವಂಥಾ ಭಯಂಕರ ಸದ್ದುಮಾಡೋ ಒಂದು ಹಾರಾಡೋ ವಾಹನದಲ್ಲಿ ಕೂತುಕೊಂಡು ಈ ದೇವರು ಒಂದುಕಡೆಯಿಂದ ಇನ್ನೊಂದು ಕಡೆಗೆ ಹೋಗ್ತಾ ಇದ್ದ ಅನ್ನೋದು ಈ ಬೈಬಲ್ನಲ್ಲೇ ಹಲವಾರು ಕಡೆ ಇದೆ. ಮೋಸೆಸ್, ಅಬ್ರಹಾಮ್ ಇವರನ್ನೆಲ್ಲಾ ದೇವರು ಭೇಟಿ ಮಾಡಿದಾಗೆಲ್ಲಾ ಅಂಥಾ ವಾಹನದಲ್ಲೇ ಅವನು ಬಂದು ಇಳಿಯೋದು. ತಾನು ಕಣ್ಣಾರೆ ಕಂಡ ಅಂಥಾ ಒಂದು ವಾಹನದ ಸಮಗ್ರ ವಿವರವನ್ನ ಎಜ಼ಕೀಲ್ ಕೊಡ್ತಾನೆ. ಇದನ್ನೆಲ್ಲಾ ನೋಡಿದ್ರೆ ದೇವರು ಅಥವಾ ದೇವರುಗಳು ಆ ಕಾಲದಲ್ಲಿ ವೈಜ್ಞಾನಿಕವಾಗಿ ಮುಂದುವರಿದ ಜನಾಂಗಕ್ಕೆ ಸೇರಿದೋರು ಅಂತ ನಂಬೋದಿಕ್ಕೆ ಅವಕಾಶ ಇದೆ. ಅವನು ಅಥವಾ ಅವರು ಬೇರೊಂದು ಗ್ರಹದಿಂದ ಭೂಮಿಗೆ ಬರ್ತಾ ಇದ್ರು ಅಂತಾನೂ ನಾವು ಊಹಿಸಬೋದು. ಆ ಜನ ಈಗಲೂ ಭೂಮಿಗೆ ಬರ್ತಾ ಇದಾರೆ. ಫ್ಲೈಯಿಂಗ್ ಸಾಸರ್ಸ್ ಬಗ್ಗೆ ನೀವು ಕೇಳಿರಬೋದು. ಅಂಥಾ ಸಾವಿರಾರು ಪ್ರಕರಣಗಳು ವರದಿಯಾಗಿವೆ. ಆಗ್ತಾ ಇವೆ. ವಿಧವಿಧವಾದ ಜೀವಿಗಳು ಫ್ಲೈಯಿಂಗ್ ಸಾಸರ್ಸ್ನಿಂದ ಇಳಿಯೋದು, ತಮ್ಮಲ್ಲಿರೋ ವಿಚಿತ್ರ ಆಯುಧಗಳಿಂದ ಮನುಷ್ಯರು ವಿದ್ಯುತ್ ಶಾಕ್ಗೆ ಒಳಗಾಗಿ ಕೆಳಗೆ ಬಿದ್ದುಹೋಗೋ ಹಾಗೆ ಮಾಡೋದು ಪ್ರಪಂಚದ ಎಲ್ಲಾ ಭಾಗಗಳಿಂದಲೂ ವರದಿಯಾಗಿದೆ. ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶ ಏನಪ್ಪಾ ಅಂದ್ರೆ ಸಾವಿರಾರು ವರ್ಷಗಳ ಹಿಂದೆ ದೇವರು ಅನ್ನಿಸಿಕೊಂಡ ಆ ಜೀವಿಗಳು ಉಪಯೋಗಿಸ್ತಾ ಇದ್ದ ವಾಹನಗಳೆಲ್ಲಾ ಸಿಡಿಲಿನಂಥಾ ಸದ್ದು ಮಾಡ್ಕೊಂಡು ಹಾರಾಡ್ತಾ ಇದ್ವು. ಆದರೆ ಈಗಿನ ಫ್ಲೈಯಿಂಗ್ ಸಾಸರ್ಗಳು ಅಷ್ಟು ಸದ್ದು ಮಾಡಲ್ಲ. ತುಂಬಾ ಮೆಲ್ಲಗೆ, ಎಲೆಕ್ಟ್ರಿಕ್ ಟ್ರಾನ್ಸ್ಫಾರ್ಮರ್ ಒಂಥರಾ ‘ಗುಂಯ್’ ಅಂತ ಸದ್ದು ಮಾಡುತ್ತಲ್ಲಾ ಅಷ್ಟು ಸಣ್ಣಗೆ ಸದ್ದು ಮಾಡ್ತವೆ. ಇದರರ್ಥ ಏನು ಅಂದ್ರೆ ನಮ್ಮ ಪೂರ್ವಜರು ದೇವರುಗಳು ಅಂದುಕೊಂಡ ಜೀವಿಗಳು ಈ ಸಾವಿರಾರು ವರ್ಷಗಳಲ್ಲಿ ತಮ್ಮ ಹಾರಾಡೋ ವಾಹನಗಳನ್ನ ಅಂದ್ರೆ ಫ್ಲೈಯಿಂಗ್ ಸಾಸರ್ಸ್ಗಳನ್ನ ತುಂಬಾ ಇಂಪ್ರೂವ್ ಮಾಡ್ಕೊಂಡಿವೆ. ನಿಶ್ಶಬ್ಧವಾಗಿ ಅಥವಾ ಅತೀ ಸಣ್ಣ ಸದ್ದು ಮಾಡ್ಕೊಂಡು ಹಾರಾಡೋವಂಥಾ ವಾಹನಗಳನ್ನ ಸೃಷ್ಟಿಸಿಕೊಂಡಿವೆ. ನಾವೀಗ ವೈಜ್ಞಾನಿಕವಾಗಿ ಸಾಕಷ್ಟು ಮುಂದುವರಿದಿರೋದರಿಂದ ಆ ಜೀವಿಗಳನ್ನ ನಾವು ದೇವರು ಅಂತ ಕರೆಯೋದಿಲ್ಲ. ಅನ್ಯಲೋಕದ ಜೀವಿಗಳು ಅಂತ ತಿಳಿದು ಅವುಗಳ ಬಗ್ಗೆ ಕುತೂಹಲ ಮೂಡಿಸ್ಕೊಂಡು ಅಧ್ಯಯನ ಮಾಡೋದಿಕ್ಕೆ ನೋಡ್ತೀವಿ."
ಅವರು ಹೇಳಿದ ಮಾತುಗಳನ್ನು ಅರಗಿಸಿಕೊಳ್ಳಲು ನಾನು ಹೆಣಗುತ್ತಿರುವಂತೆ ಅವರು ಕಾಫಿ ಮಾಡುವಂತೆ ತಮ್ಮ ಶ್ರೀಮತಿಯವರಿಗೆ ಕೂಗಿ ಹೇಳಿದರು. ಆ ಗಳಿಗೆಯಲ್ಲಿ ಅದು ನನಗೆ ಅತ್ಯಗತ್ಯವಾಗಿ ಬೇಕಾಗಿತ್ತು.
ಐದಾರು ನಿಮಿಷಗಳ ನಂತರ ಕಾಫಿಯ ಲೋಟ ಕೈಗೆ ಬಂದು ಅದು ಖಾಲಿಯಾಗುವವರೆಗೂ ನಮ್ಮ ನಡುವೆ ಮೌನವಿತ್ತು.
ಖಾಲಿ ಲೋಟವನ್ನು ಮೇಜಿನ ಮೇಲಿಟ್ಟು ನಾನೇ ಮಾತು ತೆಗೆದೆ:
"ಅಲ್ಲಾ ಸರ್, ಬೈಬಲ್ನಲ್ಲಿರೋದೆಲ್ಲಾ ನಿಜ ಅಂತ ತಿಳಿಯೋದು ಎಷ್ಟು ಸಾಧು?"
"ಹ್ಞಾಂ ಅದನ್ನೇ ಹೇಳೋದರಲ್ಲಿದ್ದೆ. ಬೈಬಲ್ ರಚನೆಯಾಗಿ ಎರಡುಸಾವಿರ ವರ್ಷಗಳೂ ಆಗಿಲ್ಲ. ಆದರೆ ಅದಕ್ಕೂ ಹಿಂದಿನ ಸುಮಾರು ಹತ್ತು ಇಪ್ಪತ್ತು ಮೂವತ್ತು ಸಾವಿರ ವರ್ಷಗಳಷ್ಟು ಹಿಂದಿನ ಗುಹಾಚಿತ್ರಗಳಲ್ಲಿ ಹಾರಾಡೋ ವಾಹನಗಳು, ಖಗೋಳಯಾತ್ರಿಗಳು ಎಲ್ಲಾ ಇವೆ. ಇಂಥಾ ಚಿತ್ರಗಳು ಒಂದುಕಡೆ ಇಲ್ಲ. ಫ್ರಾನ್ಸ್, ಇಟಲಿ, ಸಹಾರಾ, ಸೌತ್ ಆಫ್ರಿಕಾ, ಇರಾನ್, ಚೈನಾ, ಪೆರು, ಬೊಲಿವಿಯಾ, ಈಕ್ವೆಡಾರ್, ಆಸ್ಟ್ರೇಲಿಯಾ- ಹೀಗೆ ಪ್ರಪಂಚದ ಎಲ್ಲಾ ಕಡೆ ಇವೆ. ಈ ಕಾಲದ ಅಮೆರಿಕನ್ ಖಗೋಳಯಾತ್ರಿಗಳನ್ನೇ ಹೋಲುವಂಥಾ, ಅವರು ರಾಕೆಟ್ನಲ್ಲಿ ಕೂತುಕೊಂಡು ಯಾವುಯಾವುದೋ ಬಟನ್ಗಳನ್ನ ಒತ್ತಾ ಇರೋವಂಥಾ ಚಿತ್ರಗಳು ಇಟಲೀನಲ್ಲೂ ಇವೆ, ಸಹಾರಾ ಮರುಭೂಮಿಯ ತಾಸಿಲೀನಲ್ಲೂ ಇವೆ. ಪೆರುನಲ್ಲಂತೂ ಅಂಥಾ ಚಿತ್ರಗಳನ್ನ ಕಲ್ಲಿನಲ್ಲೇ ಕೆತ್ತಿದ್ದಾರೆ." ಮಾತು ನಿಲ್ಲಿಸಿ ಮೇಜಿನ ಮೇಲಿದ್ದ ಪುಸ್ತಕಗಳನ್ನು ಒಂದೊಂದಾಗಿ ಎತ್ತಿಕೊಂಡು ಸರಸರ ಪುಟ ಮಗುಚಿ "ಇಲ್ಲಿ ನೋಡಿ, ಈ ಚಿತ್ರ ನೋಡಿ" ಎನ್ನುತ್ತಾ ಹಲವಾರು ಚಿತ್ರಗಳನ್ನ ತೋರಿಸಿದರು. ಅವುಗಳ ಬಗ್ಗೆ ಕೆಲವು ಸಾಲುಗಳನ್ನೂ ಓದಿ ಹೇಳಿದರು. ಅವರು ಹೇಳಿದ್ದೆಲ್ಲವೂ ಆ ಚಿತ್ರಗಳಲ್ಲಿದ್ದವು. ನಾನು ಮೂಕನಾಗಿ ಕುಳಿತೆ.
"ನೀವೇ ನೋಡಿದಿರಲ್ಲ. ರಾಕೆಟ್ಟು, ಆಸ್ಟ್ರೋನಾಟ್ಸ್ ಅಂಥಾದ್ದೇನೂ ಇಲ್ಲದ ಆ ಶಿಲಾಯುಗದಲ್ಲಿ ಇದೆಲ್ಲಾ ಹೇಗೆ ಸಾಧ್ಯ ಆಯ್ತು?" ಒಮ್ಮೆ ಕೆಮ್ಮಿ ಮುಂದುವರೆಸಿದರು: "ಆದಿಮಾನವ ತಾನು ಕಣ್ಣಾರೆ ಕಂಡದ್ದನ್ನ ತಾನು ವಾಸವಾಗಿದ್ದ ಗುಹೆಗಳ ಗೋಡೆಗಳ ಮೇಲೆ ಚಿತ್ರಿಸಿದ್ದಾನೆ. ಆತ ಅದನ್ನ ಕಲ್ಪನೆ ಮಾಡಿಕೊಂಡು ಚಿತ್ರಿಸಿರೋ ಸಾಧ್ಯತೆ ಇಲ್ಲ. ಅಂಥಾ ಕಲ್ಪನಾಶಕ್ತಿ ಶಿಲಾಯುಗದ ಅನಾಗರೀಕರಿಗೆ ಇರಲಿಲ್ಲ. ಕಲ್ಪನೆ ಅಂತ ಅಂದುಕೊಂಡ್ರೂ ಒಂದೇ ಸಮಯದಲ್ಲಿ ಒಂದೇ ರೀತಿಯ ಕಲ್ಪನೆ ಎಲ್ಲಾ ಕಡೆಯ ಆದಿಮಾನವರಿಗೆ ಬರೋದು ಅಸಾಧ್ಯ. ಒಬ್ಬರ ಕಲ್ಪನೆಯನ್ನ ಇನ್ನೊಬ್ಬರು ಅನುಸರಿಸಿದ್ರು ಅನ್ನೋದಕ್ಕೂ ಆಗಲ್ಲ. ಸಂಪರ್ಕ ಸಾಧನಗಳೇ ಇಲ್ಲದ ಕಾಲದಲ್ಲಿ ಅದು ಸಾಧ್ಯ ಇರಲೇಇಲ್ಲ. ಇದರರ್ಥ ಸಾವಿರಾರು ವರ್ಷಗಳ ಹಿಂದೆ ಅನ್ಯಗ್ರಹಜೀವಿಗಳು ತಂತಮ್ಮ ರಾಕೆಟ್ಗಳಲ್ಲಿ ಭೂಮಿಯ ಎಲ್ಲ ಕಡೆಗೂ ಬಂದಿದ್ದಾರೆ. ಶಿಲಾಯುಗದ ಆದಿಮಾನವನ ಊಹೆಗೂ ಮೀರಿದ ಕೆಲಸಗಳನ್ನ ತಮ್ಮ ಉಪಕರಣ ಆಯುಧಗಳಿಂದ ಅವರು ಇಲ್ಲಿ ಮಾಡಿದ್ದಾರೆ. ಇದನ್ನೆಲ್ಲಾ ಕಂಡ ಆದಿಮಾನವರು ಅವರನ್ನೇ ದೇವರುಗಳು ಅಂತ ತಿಳಿದು ಪೂಜೆ ಮಾಡೋಕೆ ಶುರುಮಾಡಿದ್ದಾರೆ. ದೇವರುಗಳು ಧರ್ಮಗಳು ಎಲ್ಲಾ ಶುರುವಾದದ್ದು ಹೀಗೇ ಇರಬೇಕು."
ಅಷ್ಟರಲ್ಲಿ ಊಟಕ್ಕೆ ಕರೆ ಬಂತು.
ಊಟದ ನಡುವೆ ಪ್ರೊಫೆಸರರು, ಅವರ ಶ್ರೀಮತಿಯವರು ಹಾಗೂ ಮಗ ಏನೇನೋ ಮಾತಾಡುತ್ತಾ ತಮಾಷೆ ಮಾಡಿಕೊಳ್ಳುತ್ತಾ ಇದ್ದರೆ ನಾನು ಪ್ರೊಫೆಸರರು ಹೇಳಿದ ವಿಷಯಗಳ ಬಗ್ಗೇ ಯೋಚಿಸುತ್ತಾ ತಲೆತಗ್ಗಿಸಿ ಮೌನವಾಗಿ ಊಟ ಮಾಡುತ್ತಿದ್ದೆ. "ಯಾಕೆ, ಮಾತೇ ಆಡ್ತಾ ಇಲ್ಲ? ಊಟ ರುಚಿಯಾಗಿಲ್ವಾ?" ಎಂದು ಕೇಳಿದರು ಪ್ರೊಫೆಸರರ ಹೆಂಡತಿ ಪುಷ್ಪಲತಾ. "ಇಲ್ಲ, ಹಂಗೇನಿಲ್ಲಾ" ಅಂದೆ. "ಮತ್ಯಾಕೆ ಒಂಥರಾ ಇದ್ದೀರಿ? ಮೈಸೂರಿಗೆ ಹೋಗಿ ಹೆಂಡತಿ ಮಗಳನ್ನ ನೋಡ್ಲಿಲ್ಲ ಅಂತ ಬೇಜಾರಾ?" ಅಂದರು.
ಊಟವಾದ ಮೇಲೆ ನಾನು ಹೊರಟು ನಿಂತೆ. "ಅರೆ ಎಲ್ಲಿಗ್ರೀ ಹೊರಡ್ತೀರೀ? ಮುಖ್ಯವಾದ ವಿಷಯವನ್ನೇ ನಾನಿನ್ನೂ ನಿಮಗೆ ಹೇಳಿಲ್ಲ" ಅಂದರು ಪ್ರೊಫೆಸರ್ ಜೋಸೆಫ್. ನಾನು ಬೆಚ್ಚಿದೆ. ಇಷ್ಟೊತ್ತಿನವರೆಗೂ ಹೇಳಿದ್ದು ಮುಖ್ಯವಾದ ವಿಷಯವಲ್ಲವಾ?
"ಬನ್ನಿ, ಬನ್ನಿ" ಎನ್ನುತ್ತಾ ನನ್ನ ತೋಳು ಹಿಡಿದು ಸ್ಟಡಿ ರೂಮಿನತ್ತ ನಡೆದರು. ಕೂರುತ್ತಿದ್ದಂತೇ "ಅಷ್ಟೊತ್ತಿನಿಂದ ನಾನು ಹೇಳಿದ್ದು ಬರೀ ಇಂಟ್ರೊಡಕ್ಷನ್ನು. ಅಸಲೀ ವಿಷಯಾನ ಈಗ ಕೇಳಿ." ಕುರ್ಚಿಯಲ್ಲಿ ದೇಹ ಹೊಂದಿಸುತ್ತಾ ಮುಂದುವರೆಸಿದರು. "ಪ್ರಪಂಚದ ನಾನಾಕಡೆ ಶಿಲಾಯುಗದ ಆದಿಮಾನವ ತಾನು ಕಂಡ ಅನ್ಯಲೋಕದ ಜೀವಿಗಳನ್ನ, ಅವುಗಳ ವಾಹನಗಳನ್ನ ಗುಹೆಗಳ ಗೋಡೆಗಳ ಮೇಲೆ ಚಿತ್ರಿಸಿರೋದನ್ನ ನೋಡಿದ್ರಿ. ಅವೆಲ್ಲಾ ಇರೋದು ದೂರದೂರದ ದೇಶಗಳಲ್ಲಿ. ಅವೆಲ್ಲಕ್ಕಿಂತಲೂ ಅದ್ಭುತವಾದ, ಪರಿಪೂರ್ಣವಾದ ಚಿತ್ರಗಳು ನಮ್ಮ ದೇಶದಲ್ಲೇ ನಮಗೆ ಹತ್ತಿರದಲ್ಲೇ ಇವೆ."
"ಹೌದೇ ಸರ್? ಹತ್ತಿರದಲ್ಲೇ ಅಂದ್ರೆ ಎಲ್ಲಿ?" ಅಚ್ಚರಿಯ ಪ್ರಶ್ನೆ ಹಾಕಿದೆ.
"ಇಲ್ಲಿಂದ ಮೂವತ್ತು ನಲವತ್ತು ಮೈಲಿ ಹತ್ತಿರದಲ್ಲಿ ಅಷ್ಟೇ. ಮಹದೇಶ್ವರನ ಬೆಟ್ಟದ ಆಚೆಕಡೆ. ಮಂಗಳಾ ನದಿ ತೀರದಲ್ಲಿ. ಕಾವೇರಿಯ ಉಪನದಿ ಅದು. ಇಲ್ಲೇ ಐದಾರು ಮೈಲಿ ಹತ್ತಿರದಲ್ಲೇ ಸಿದ್ದಪ್ಪನ ಬೆಟ್ಟದಲ್ಲಿ ಹುಟ್ಟುತ್ತೆ. ಹಾಗೇ ಬೆಟ್ಟಗಳ ಮಧ್ಯೆ ಆಳ ಕೊರಕಲುಗಳಲ್ಲಿ ಹರೀತಾ ಪೂರ್ವಕ್ಕೆ ಹೋಗಿ ಮಹದೇಶ್ವರನ ಬೆಟ್ಟಗಳ ಆಚೆ ಕಾವೇರಿಗೆ ಸೇರುತ್ತೆ. ಸಂಗಮಕ್ಕೆ ಏಳೆಂಟು ಮೈಲಿ ದೂರದಲ್ಲಿ ನದಿ ಆಳವಾದ ಸಾಕಷ್ಟು ಅಗಲವಾದ ಕೊರಕಲಿನಲ್ಲಿ ಹರಿಯುತ್ತೆ. ಲಕ್ಷಾಂತರ ವರ್ಷಗಳಿಂದ ನದೀನೀರು ಕೊರೆದು ಮಾಡಿರೋ ಕೊರಕಲು ಅದು. ಅಲ್ಲಿ ನದಿ ಪಾತಾಳದಲ್ಲಿ ಹರಿಯುತ್ತೆ. ಆ ಕೊರಕಲಿನಲ್ಲಿ ಮುನ್ನೂರು ನಾನೂರು ಅಡಿ ಕೆಳಗೆ ಇಳಿದರೆ ಏಳೆಂಟು ವಿಶಾಲವಾದ ಗುಹೆಗಳಿವೆ. ಆ ಗುಹೆಗಳಲ್ಲೇ ನಾ ಹೇಳೋ ಚಿತ್ರಗಳು ಇರೋದು. ಪ್ರಪಂಚದ ಬೇರೆ ಕಡೆ ಇರೋ ಗುಹಾಚಿತ್ರಗಳಿಗಿಂತ ಇವು ಯಾವ ರೀತೀಲಿ ಅದ್ಭುತ ಅಂದ್ರೆ ಈಗ ವರದಿಯಾಗ್ತಾ ಇರೋವಂಥಾ ಫ್ಲೈಯಿಂಗ್ ಸಾಸರ್ನಂಥವು ಅಂತರಿಕ್ಷದಿಂದ ಹಾರಿಕೊಂಡು ಬಂದು ಇಳಿಯೋದು, ಅವುಗಳಿಂದ ಸುಂದರವಾದ ಮನುಷ್ಯರು ಹೊರಗೆ ಬರೋದು, ಅವರ ಮುಂದೆ ಶಿಲಾಯುಗದ ಮನುಷ್ಯರು, ಗಂಡಸರು ಹೆಂಗಸರು, ಮಕ್ಕಳೂ ಸಹಾ ಅಡ್ಡಬೀಳೋದು ಎಲ್ಲಾ ಇವೆ. ಅಷ್ಟೆ ಅಲ್ಲಾ, ಆ ಅಂತರಿಕ್ಷದ ಮನುಷ್ಯರು ಭೂಮಿಯ ಮನುಷ್ಯರಿಗೆ ಮಡಿಕೆ ಮಾಡೋದು, ಚಕ್ರಗಳನ್ನ ತಯಾರಿಸಿ ವಾಹನಗಳನ್ನ ಮಾಡೋದು, ಬೀಜಗಳನ್ನ ಬಿತ್ತೋದು, ಬೆಳೆ ಕೊಯ್ಲು ಮಾಡೋದು ಇನ್ನೂ ಏನೇನೋ ವಿದ್ಯೆಗಳನ್ನ ಕಲಿಸಿಕೊಡೋ ಚಿತ್ರಗಳೂ ಇವೆ. ಒಟ್ಟಿನಲ್ಲಿ ಅಂತರಿಕ್ಷದಿಂದ ಬಂದ ನಾಗರಿಕ ಜನಾಂಗವೊಂದು ಭೂಮಿ ಮೇಲಿದ್ದ ಅನಾಗರೀಕ ಜನಕ್ಕೆ ನಾಗರೀಕತೆ ಕಲಿಸಿದ್ದನ್ನ ದಾಖಲಿಸೋ ಚಿತ್ರಗಳು ಅವು. ಎಲ್ಲಾ ಕಲಿಸಿಯಾದ ಮೇಲೆ ಆ ಜನ ತಂತಮ್ಮ ಫ್ಲೈಯಿಂಗ್ ಸಾಸರ್ಗಳಲ್ಲಿ ಕೂತು ವಾಪಸ್ ಹೋಗೋದು, ಅವರು ಹೋದತ್ತಲೇ ಭೂಮಿ ಜನ ಕೈಜೋಡಿಸಿಕೊಂಡು ನೋಡ್ತಾ ನಿಂತಿರೋದು, ಆಮೇಲೆ ದೊಡ್ಡದಾದ ಒಂದು ದೇವಸ್ಥಾನದಂಥಾ ಕಟ್ಟಡ ಕಟ್ಟೋದು- ಇದೆಲ್ಲಾನೂ ಬಿಂಬಿಸೋ ಚಿತ್ರಗಳೂ ಇವೆ. ಈ ಸಂದರ್ಭದಲ್ಲಿ ನಾನು ನಿಮಗೆ ಇನ್ನೂ ಒಂದು ಮುಖ್ಯವಾದ ವಿಷಯಾನ ಹೇಳಬೇಕು. ದಕ್ಷಿಣ ಅಮೆರಿಕಾದ ಇಂಕಾ ಜನರ ಒಂದು ಬಹು ಪುರಾತನ ಪುರಾಣದಲ್ಲಿ ವೀರಕೋಚ ಅನ್ನೋ ಬೆಳ್ಳಗಿನ ಎತ್ತರದ ಮನುಷ್ಯ ಅದೆಲ್ಲಿಂದಲೋ ಬಂದು ಸ್ಥಳೀಯರಿಗೆ ನಾಗರೀಕತೆಯನ್ನ ಕಲಿಸೋದರ ವರ್ಣನೆ ಇದೆ. ಇನ್ ಫ್ಯಾಕ್ಟ್, ರೂಪಿನಲ್ಲಿ, ಮೈಕಟ್ಟಿನಲ್ಲಿ, ಮೈಬಣ್ಣದಲ್ಲಿ ಬೇರೆಯಾದ ವ್ಯಕ್ತಿಗಳು ಅದೆಲ್ಲಿಂದಲೋ ಬಂದು ಸ್ಥಳಿಯರಿಗೆ ನಾಗರೀಕತೆ ಕಲಿಸೋ ಪುರಾಣಗಳು ಪ್ರಪಂಚದ ನಾನಾ ಕಡೆ ಇವೆ. ಆದರೆ ಅವೆಲ್ಲಾ ಚಿತ್ರಗಳಲ್ಲಿ ನಿರೂಪಿತವಾಗಿರೋ ಉದಾಹರಣೆ ಇದೊಂದು ಮಾತ್ರ." ನಾನು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದಂತೇ "ಇಲ್ಲಿ ನೋಡಿ" ಎನ್ನುತ್ತಾ ಬಿಳಿಯ ಹಾಳೆಗಳ ಮೇಲೆ ಪೆನ್ಸಿಲ್ನಿಂದ ಬಿಡಿಸಿದ್ದ ಹಲವಾರು ಚಿತ್ರಗಳನ್ನು ಒಂದೊಂದಾಗಿ ನನ್ನ ಮುಂದೆ ಹಿಡಿದರು. ಅವರು ಹೇಳಿದ್ದೆಲ್ಲವೂ ಆ ಚಿತ್ರಗಳಲ್ಲಿದ್ದವು. ಅನ್ಯಲೋಕದ ಮನುಷ್ಯರು ತಲೆಗಳ ಮೇಲೆ ಕಿರೀಟದಂಥವುಗಳನ್ನು ಹಾಕಿಕೊಂಡಿದ್ದರು.
"ಯಾರು ಬರೆದದ್ದು ಸರ್ ಈ ಚಿತ್ರಗಳನ್ನ?" ಕುತೂಹಲ ತಡೆಯಲಾರದೇ ಕೇಳಿದೆ.
"ನಾನೇ."
"ಹೌದೇ? ನೀವು ನೋಡಿದ್ದೀರಾ ಆ ಗುಹೇಲಿರೋ ಚಿತ್ರಗಳನ್ನ?" ನನಗೆ ಹೇಳಲಾರದಷ್ಟು ಅಚ್ಚರಿ.
"ನಾನು ನೋಡಿಲ್ಲ. ಆದರೆ ನೋಡಿದೋನು ಒಬ್ಬ ಇದ್ದಾನೆ. ಅವನು ಹೇಳಿದ ಹಾಗೇ ಈ ಚಿತ್ರಗಳನ್ನ ಬರೆದೆ."
"ಯಾರು ಸರ್ ಆತ?"
"ಸೈಮನ್ ಕ್ಯಾತಯ್ಯ."
ಇದು ಆಂಟಿ ಕ್ಲೈಮ್ಯಾಕ್ಸ್. ನನ್ನ ಉತ್ಸಾಹವೆಲ್ಲಾ ಜರ್ರನೆ ಇಳಿದುಹೋಯಿತು. ಕುರ್ಚಿಯಲ್ಲಿ ಹಿಂದಕ್ಕೆ ಒರಗಿ ಅವರನ್ನೇ ಅಪನಂಬಿಕೆಯಿಂದ ನೋಡಿದೆ. ಅವರು ನನ್ನ ಭುಜ ಅಲುಗಿಸಿದರು.
"ಇದರಲ್ಲಿ ನೀವು ಅನುಮಾನ ಪಡೋದೇನೂ ಇಲ್ಲ. ಬೆಳಿಗ್ಗೆ ಡಿಸ್ಕವರಿ ಚಾನಲ್ನಲ್ಲಿ ಮಧ್ಯಪ್ರದೇಶದ ಭೀಂಬೆಟ್ಕಾ ಗುಹೆಗಳಲ್ಲಿರೋ ಚಿತ್ರಗಳನ್ನ ನೋಡ್ತಾ ಇದ್ದಾಗ ನೀವು ಹೊರಟುಹೋದ್ರಿ ಅಲ್ವಾ, ಆಮೇಲೆ ಅವುಗಳನ್ನ ನೋಡಿದ ಈ ಸೈಮನ್ ಕ್ಯಾತಯ್ಯ ಅಂಥಾ ಚಿತ್ರಗಳನ್ನ ತಾನೂ ನೋಡೀರೋದಾಗಿ ಹೇಳ್ದ. ಎಲ್ಲಿ ಅಂತ ಕೇಳಿದ್ದಕ್ಕೆ ಎಲ್ಲಾನು ವಿವರವಾಗಿ ಹೇಳ್ದ. ಅವನೂರಿಗೆ ಆರೇಳು ಮೈಲಿ ದೂರದಲ್ಲಿ ಈ ಗುಹೆಗಳಿರೋದು. ಅವನು ಚಿಕ್ಕೋನಾಗಿದ್ದಾಗ ಆ ಕಡೆಯೆಲ್ಲಾ ಸಾಕಷ್ಟು ತಿರುಗಾಡಿದ್ದಾನಂತೆ. ಈ ಗುಹಾಚಿತ್ರಗಳನ್ನ ಅದೆಷ್ಟೋ ಸಲ ನೋಡಿದ್ದಾನಂತೆ."
ನನಗೆ ನಂಬಿಕೆಯಾಗಲಿಲ್ಲ.
"ಈ ಕ್ಯಾತಯ್ಯ ಅದೇನು ನೋಡಿದ್ನೋ. ಈ ಅರಳುಮರುಳು ವಯಸ್ನಲ್ಲಿ ಅದೇನು ನೆನಪಿಸಿಕೊಂಡ್ನೋ." ಗೊಣಗಿದೆ.
"ನೋ ನೋ ನೋ. ನೀವು ಅನುಮಾನ ಪಡಬೇಡಿ. ನಾನು ಅವನನ್ನ ಮತ್ತೆ ಮತ್ತೆ ಪ್ರಶ್ನೆ ಮಾಡಿ ಎಲ್ಲಾನೂ ಖಚಿತ ಪಡಿಸಿಕೊಂಡಿದ್ದೀನಿ. ಚಿತ್ರಗಳು ತಪ್ಪಾದಾಗ ಅವನು ಹೇಳಿದ ಹಾಗೆ ತಿದ್ದಿದ್ದೀನಿ. ಅವನ ನೆನಪಿನ ಶಕ್ತಿ ಬಗ್ಗೆ ನಂಗೆ ನಂಬಿಕೆ ಇದೆ."
ನಾನು ಮಾತಾಡಲಿಲ್ಲ. ಅವರೇ ನನ್ನ ಕೈ ತಟ್ಟಿದರು. "ನೋಡಿ, ಇದೇನೂ ಏಳು ಸಾಗರದಾಚೆ ಇಲ್ಲ. ನಡೀರಿ ಒಂದ್ಸಲ ನೋಡಿಕೊಂಡೇ ಬಂದುಬಿಡೋಣ. ಅಲ್ಲೇನೂ ಇಲ್ಲ ಅಂದ್ರೆ ಏನೂ ನಷ್ಟ ಇಲ್ಲ. ಕಾಡಿನಲ್ಲಿ ಒಂದೆರಡು ದಿನ ನೆಮ್ಮದಿಯಾಗಿ ಅಲೆದಾಡಿಕೊಂಡು ಬಂದ ಹಾಗಾಗುತ್ತೆ. ಒಂದುವೇಳೆ ಸೈಮನ್ ಕ್ಯಾತಯ್ಯ ಹೇಳಿದ ಹಾಗೇ ಅಲ್ಲಿ ಗುಹಾಚಿತ್ರಗಳು ನಮಗೆ ನೋಡಲು ಸಿಕ್ಕಿಬಿಟ್ರೆ..."
"ಸಿಕ್ಕಿಬಿಟ್ರೆ...?"
"ಈ ಶತಮಾನದ ಒಂದು ಅದ್ಭುತ ಸಂಶೋಧನೆ ಆಗುತ್ತೆ ಅದು. ದೇವರ ಬಗ್ಗೆ, ಧರ್ಮಗಳ ಬಗ್ಗೆ ನಮ್ಮ ಪರಿಕಲ್ಪನೆಗಳನ್ನೇ ಸಾರಾಸಗಟಾಗಿ ಬದಲಾಯಿಸಿಬಿಡುತ್ತೆ. ಧರ್ಮಗಳ ಬುಡವನ್ನೇ ಅಲ್ಲಾಡಿಸಿಬಿಡುತ್ತೆ. ದೇವರು ಅತಿಮಾನುಷ ಶಕ್ತಿ ಅಲ್ಲ, ನಮ್ಮ ಸೃಷ್ಟಿಕರ್ತ ಅಲ್ಲ, ಆತ ನಮಗಿಂತಲೂ ಮುಂದುವರೆದ ನಮಗೆ ನಾಗರೀಕತೆ ಕಲಿಸಿದ ಅನ್ಯಲೋಕದ ಜೀವಿ ಅಷ್ಟೇ ಅಂತ ಸಾಕ್ಷಾಧಾರಗಳ ಸಹಿತ ಪ್ರೂವ್ ಮಾಡೋದಿಕ್ಕೆ ಸಾಧ್ಯ ಆಗುತ್ತೆ. ಅಷ್ಟೇ ಅಲ್ಲ ದೇವರನ್ನ ಕೇಂದ್ರವಾಗಿಟ್ಕೊಂಡು ಹುಟ್ಟಿದ ಧರ್ಮಗಳೆಲ್ಲಾ ಕಲ್ಪನೆಗಳ ಕಂತೆ. ಅವುಗಳನ್ನ ಹಿಡಕೊಂಡು ನಾವು ಕಚ್ಚಾಡೋದರಲ್ಲಿ ಅರ್ಥ ಇಲ್ಲ ಅಂತ ಘಂಟಾಘೋಷವಾಗಿ ಹೇಳೋದಿಕ್ಕೆ, ತನ್ಮೂಲಕ ಮಾನವಜನಾಂಗ ಧರ್ಮಗಳ ಆಧಾರದಲ್ಲಿ ಡಿವೈಡ್ ಆಗಿರೋದನ್ನ ಸರಿಪಡಿಸೋ ಪ್ರಯತ್ನಕ್ಕೆ ಅವಕಾಶ ಆಗುತ್ತೆ. ಈ ಹಾಳು ಜಿಹಾದ್, ಕ್ರೂಸೇಡ್, ಹಿಂದುತ್ವ ಮಣ್ಣುಮಸಿ ಎಲ್ಲಾ ಧೂಳೀಪಟ ಆಗಿಬಿಡುತ್ತೆ. ವಿಶ್ವಶಾಂತಿಗೆ ದಾರಿ ಆಗುತ್ತೆ."
ಈ ಮನುಷ್ಯನಿಗೆ ಹುಚ್ಚು ಹಿಡಿದಿರಬಹುದೇ ಅನಿಸಿತು. ಅವರನ್ನೇ ನೇರವಾಗಿ ನೋಡಿದೆ. ಹಾಗೇನೂ ಇರಲಿಲ್ಲ. ಅವರ ದನಿಯಲ್ಲಿ ಯಾವುದೇ ಏರಿಳಿತವಾಗಲೀ ಹುಚ್ಚು ಉದ್ವೇಗ ಆವೇಶವಾಗಲೀ ಇರಲಿಲ್ಲ. ಆದರೆ ಕಣ್ಣುಗಳಲ್ಲಿ ಮಾತ್ರ ಉಜ್ವಲ ಕಾಂತಿ.
"ಯಾವಾಗ ಹೋಗೋಣ ಸರ್ ಅಲ್ಲಿಗೆ?" ಅಂದೆ.
"ತಡ ಯಾಕೆ? ಮುಂದಿನ ಶನಿವಾರಾನೇ ಹೊರಟುಬಿಡೋಣ. ಹೇಗೂ ಸೋಮವಾರ ಕ್ರಿಸ್ಮಸ್, ಮಂಗಳವಾರ ಮೊಹರ್ರಂ ಅಂತ ಎರಡುದಿನ ರಜಾ ಇದ್ದೇ ಇದೆಯಲ್ಲ."
ಅವರು ಎಲ್ಲವನ್ನೂ ನಿರ್ಧಾರ ಮಾಡಿಕೊಂಡೇ ಇರುವಂತೆ ಕಂಡಿತು.
"ಯಾರ್ಯಾರು ಹೋಗೋದು?"
"ನಾನು, ನೀವು. ದಾರಿ ತೋರಿಸೋದಿಕ್ಕೆ ಸೈಮನ್ ಕ್ಯಾತಯ್ಯ ಬರಲೇಬೇಕು. ಆಸಾಮಿ ಮೊದಲು ಒಪ್ಪಲಿಲ್ಲ. ‘ಆ ದಿಕ್ಕಿಗೆಲ್ಲಾ ಪುನಃ ಹೋಗೋದಿಕ್ಕೆ ಮನ್ಸಿಲ್ಲಾ ಸಾ’ ಅಂತ ಒಂದು ಹತ್ತು ನಿಮಿಷ ತಲೆ ಕೆಳಗೆ ಹಾಕಿ ಕೂತುಬಿಟ್ಟ. ಅವನಿಗೆ ಹಳೆಯ ನೆನಪುಗಳು ಕಾಡಿರಬೇಕು. ನಾನೇ ಪುಸಲಾಯಿಸಿದೆ. ಕೊನೆಗೆ ತನ್ನೂರಿನ ದಿಕ್ಕುತಪ್ಪಿಸಿ ಬೇರೊಂದು ದಾರಿಯಲ್ಲಿ ಗುಹೆಗಳಿಗೆ ಕರಕೊಂಡು ಹೋಗೋದಾಗಿ ಹೇಳಿದ. ನಾವು ಮೂವರೂ ಹೊಗೋದು ತಿಳಿದರೆ ಡಿಂಡಿಮಾವ ತಾನೂ ಹೊರಟುನಿಂತುಬಿಡ್ತಾನೆ. ಹ್ಞುಂ, ಅವನೊಬ್ಬ ಬರಲಿ ಬಿಡಿ. ಸಣ್ಣಪುಟ್ಟ ಸಹಾಯಕ್ಕೆ ಬೇಕಾಗುತ್ತೆ. ಆದ್ರೆ ಒಂದು ಮಾತು, ಮೂರುದಿನ ರಜಾ ಇರೋದ್ರಿಂದ ಸುಮ್ನೆ ಕಾಡ್ನಲ್ಲಿ ಸುತ್ಕೊಂಡು ಬರೋಕೆ ಹೋಗ್ತಿರೋದು ಅಂತ ಇವನಿಗೆ ಹೇಳಿದ್ರೆ ಸಾಕು. ಸಧ್ಯಕ್ಕೆ ನಿಜ ಸಂಗತಿ ಹೇಳೋದು ಬೇಡ. ಬಾಯಿಹರಕ ಇಡೀ ಊರಿಗೆ ಸುದ್ಧಿ ಹರಡಿಬಿಡ್ತಾನೆ. ವಿಷಯ ಈಗಲೇ ಯಾರಿಗೂ ಗೊತ್ತಾಗೋದೂ ಬೇಡ ಅನ್ನೋದು ನನ್ನ ಅಭಿಪ್ರಾಯ. ನಾವೇ ಕಣ್ಣಾರೆ ಕಾಣೋವರೆಗೆ ಯಾರಿಗೂ ಹೇಳೋದು ಒಳ್ಳೇದಲ್ಲ."
"ಸರಿ" ಅಂದೆ.
ಪ್ರೊಫೆಸರರ ಮನೆಯಿಂದ ಹೊರಟಾಗ ರಾತ್ರಿ ಹನ್ನೆರಡಾಗುತ್ತಿತ್ತು. ಹೊರಗೆ ಕಾಲಿಡುತ್ತಿದ್ದಾಗ ಅಲ್ಲೇ ವರಾಂಡಾದಲ್ಲಿ ಮಲಗಿದ್ದ ಸೈಮನ್ ಕ್ಯಾತಯ್ಯ ಕಣ್ಣಿಗೆ ಬಿದ್ದ.
ದಿಂಬನ್ನು ಅದೆತ್ತಲೋ ತಳ್ಳಿ ತೋಳನ್ನೇ ತಲೆಯಡಿ ಹಾಕಿಕೊಂಡು ಬಾಯಿಯನ್ನು ತೆರೆದುಕೋಂಡು ಸಣ್ಣಗೆ ಶಿಳ್ಳೆ ಹಾಕುವಂತೆ ಗೊರಕೆ ಹೊಡೆಯುತ್ತಿದ್ದ. ಕಟಬಾಯಿಂದ ಜೊಲ್ಲು ದಾರದಂತೆ ಇಳಿಯುತ್ತಿತ್ತು. ಖಾಕಿ ನಿಕ್ಕರ್, ಮಾಸಲು ಬಿಳೀ ಬನಿಯನ್ನಲ್ಲಿದ್ದ ಬಡಕಲು ದೇಹ ಮೂರುಮಡಿಕೆಯಲ್ಲಿ ದಯನೀಯವಾಗಿ ಮುದುರಿ ಬಿದ್ದುಕೊಂಡಿತ್ತು.
ಮಾನವ ಇತಿಹಾಸದ ಗತಿಯನ್ನೇ ಬದಲಿಸಬಲ್ಲಂಥಾ ರಹಸ್ಯದ ಕೀಲಿಕೈ ಈ ಬಡಜೀವದ ಕೈಯಲ್ಲಿ!
ಅನುಮಾನವಾಯಿತು.
ಪ್ರೊಫೆಸರರಿಗೆ ಗುಡ್ನೈಟ್ ಹೇಳಲು ನೆನಪಾಗಲಿಲ್ಲ.
*** *** ***
Comments
ಉ: ದೇವರ ಜಾಡಿನಲ್ಲಿ...
In reply to ಉ: ದೇವರ ಜಾಡಿನಲ್ಲಿ... by makara
ಉ: ದೇವರ ಜಾಡಿನಲ್ಲಿ...
ಉ: ದೇವರ ಜಾಡಿನಲ್ಲಿ...
In reply to ಉ: ದೇವರ ಜಾಡಿನಲ್ಲಿ... by cherryprem
ಉ: ದೇವರ ಜಾಡಿನಲ್ಲಿ...
In reply to ಉ: ದೇವರ ಜಾಡಿನಲ್ಲಿ... by makara
ಉ: ದೇವರ ಜಾಡಿನಲ್ಲಿ...
In reply to ಉ: ದೇವರ ಜಾಡಿನಲ್ಲಿ... by Shreekar
ಉ: ದೇವರ ಜಾಡಿನಲ್ಲಿ...
In reply to ಉ: ದೇವರ ಜಾಡಿನಲ್ಲಿ... by makara
ಉ: ದೇವರ ಜಾಡಿನಲ್ಲಿ...
ಉ: ದೇವರ ಜಾಡಿನಲ್ಲಿ...
In reply to ಉ: ದೇವರ ಜಾಡಿನಲ್ಲಿ... by venkatb83
ಉ: ದೇವರ ಜಾಡಿನಲ್ಲಿ...