ಸುಬ್ಬನ ಇಂಟರ್ವ್ಯೂ !!
ಪ್ರಾಣಿ ದಯಾ ಸಂಘದವರು ನನ್ನ ಬಗ್ಗೆ ಅನುಕಂಪ ತೋರಿದ ವಿಷಯ ನಮ್ಮ ಬೀದಿಯಲ್ಲಿ ಲೀಕ್ ಆಗುತ್ತಲೇ, ಹರಿದು ಬಂದರು ಜನ ... ಏನೂ ಹರಿದು ಬರಲಿಲ್ಲ ಕಣ್ರೀ ... ನದಿಯಂತೆ ಹರಿದು ಬಂದರು ಮೊಸಳೆ ಕಣ್ಣೀರು ಸುರಿಸುತ್ತ ಅನ್ನೋಕ್ಕೆ ಹೋಗಿದ್ದು ನಾನು !
ಕೆಲವರಂತೂ ನನ್ನನೇ ಥೇಟ್ ಪ್ರಾಣಿಯಂತೆ ನೋಡಿದರು. ಗುಂಪಿನಲ್ಲಿ ಬಂದ ಒಬ್ಬರಂತೂ "ನಿಮ್ಮಂಥವರಿಗೆ ದೇವರು ಈ ಕಷ್ಟ ಕೊಡಬಾರದಿತ್ತು. ಆ ದೇವರು ಬೇಗ ಕರೆಸಿಕೊಂಡ್ರೆ ಒಳ್ಳೇದು" ಅನ್ನೋದೇ?
ಅರ್ಥವಾಗಲಿಲ್ಲ ಕಣ್ರೀ ... ಈ ಕೊನೇ ವಾಕ್ಯ ನನ್ನ ಬಗ್ಗೆ ಹೇಳಿದ್ರೋ ಅಥವಾ ಸುಬ್ಬನ ಬಗ್ಗೆಯೋ ಅಥವಾ ಸುಬ್ಬನ ಜೊತೆ ನಾನು ಏಗುತ್ತಿರೋ ಕಷ್ಟ ನೋಡಲಾಗದ ಅವರ ಬಗ್ಗೆ ಹೇಳಿಕೊಂಡ್ರೋ ಒಂದೂ ಅರೀವಲ್ದು ಕಣ್ರಿ! ಅಸಲಿಗೆ, ಪರಿಸ್ಥಿತಿ ಅವರಿಗೇನು ಅರ್ಥವಾಗಿತ್ತೋ ಏನೋ ನನಗೆ ಗೊತ್ತಿಲ್ಲ! ಎದ್ದು ಹೋಗೋ ಮಾತು ಬಿದ್ ಹೋಗಲಿ ಅಂತ ಅವರೂ ನುಡಿದ್ದರು ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡಿದ್ದೀನಿ.
ಕೆಲವರು ಹಾಗೇನೇ ... ಏನೇನೋ ಮಾತಾಡ್ತಾರೆ ... ನಮ್ ಅನಸೂಯಾಬಾಯಿ ಗಂಡ ರಮಣಮೂರ್ತಿಗಳ ತರಹ. ಯಾಕೆ ಅಂದ್ರೆ, ಮನೆಯಲ್ಲಿ ಅವರಿಗೆ ಮಾತನಾಡಲು ಅವಕಾಶ ಇರೋಲ್ಲ ... ಮಾತಾಡೋ ಅಭ್ಯಾಸ ತಪ್ಪಿ ಹೋಗಿರುತ್ತೆ ... ಹಾಗಾಗಿ ಅವಕಾಶ ಸಿಕ್ಕಾಗ, ಏನೇನೋ ಮಾತಾಡ್ತಾರೆ .. ಯಾವುದು ಏನೇ ಆಗಲಿ, ಒಟ್ಟಿನಲ್ಲಿ ನನ್ನ ಪರಿಸ್ಥಿತಿ ಈಗ Pathetically sympatheticಉ.
ಇದೇ ರೋಷದಿ ಸುಬ್ಬನನ್ನು ಸಂಧಿಸಿ ಅವನ ಸ್ಮೃತಿಪಟಲದಿಂದ ಇನ್ನೊಂದಿಷ್ಟು ವಿಷಯ ಹೊರತೆಗೆದು ನಾನೊಬ್ಬನೇ ಅಲ್ರೀ pitiable ಇನ್ನೂ ಹಲವಾರು ಮಂದಿ ಇದ್ದಾರೆ ಅಂತ ತೋರಿಸಬೇಕೂ ಅಂತ ಹೊರಡಲು ಸಿದ್ದನಾಗಿ, ಬಾಗಿಲು ತೆರೆದೆ ..... ಪಾಪಿ ... ಆಗ್ಲೇ ಬಾಗಿಲ್ಲ ನಿಂತಿದ್ದ !!! ನನ್ನನ್ನು ನೋಡಿಯೂ ಕಾಲಿಂಗ್ ಬೆಲ್ ಒತ್ತಿದ್ದ !
ತನ್ನ ಮೂವತ್ತೊಂದೂವರೆ ಹಲ್ಲುಗಳನ್ನು ತೋರಿ "ಎಲ್ಲಿಗೋ ಹೊರಟಿದ್ದೀಯಾ? ಹೋಗ್ಲಿ ಬಿಡು ನಾನೂ ಬರ್ತೀನಿ" ಅಂದಿದ್ದ ....
ನಮ್ಮಲ್ಲಿ ಒಂದು ಮಾತು ಹೇಳ್ತಾರೆ ... ಎಲ್ಲಿಗಾದರೂ ಹೊರಗೆ ಹೊರಟವರನ್ನು ’ಎಲ್ಲಿಗೆ ಅಥವಾ ನಾನೂ ಬರ್ತೀನಿ ಅಥವಾ ಊಟ ಮಾಡ್ಕೊಂಡ್ ಹೋಗಿ’ ಅಂತೆಲ್ಲ (ಕೇ)ಹೇಳಬಾರದಂತೆ. ಹಾಗೆ ಹೇಳಿದಲ್ಲಿ ಹೋದ ಕೆಲಸ ಆಗೋಲ್ವಂತೆ, ವಿಘ್ನವಾಗುತ್ತಂತೆ... ಎಷ್ಟು ಸತ್ಯ ನೋಡಿ ... ಸುಬ್ಬ ಹೇಳಿದ್ದ/ಕೇಳಿದ್ದ ... ಹೋಗೋಕೆ ಬಿಟ್ರಲ್ವೇ, ಹೋದ ಕೆಲಸ ಆಗಲು ಅಥವಾ ಆಗದಿರಲು ... ’ವಿಘ್ನ’ವೇ ಬಾಗಿಲಲ್ಲಿ ನಿಂತಿತ್ತು ಬಿಡಿ...
"ಏನಿಲ್ಲ ಕಣೋ ಸುಬ್ಬ ... ನಿನ್ನನ್ನೇ ಹುಡುಕಿಕೊಂಡು ಹೊರಟಿದ್ದೆ" ಅಂದೆ .. "ನನ್ನನ್ನು ಹುಡುಕೋದೇನೋ? ಕತ್ತೆ ತಪ್ಪಿಸಿಕೊಂಡ್ರೆ ಹಾಳು ಗೋಡೆ. ನಿನ್ನ ಹಾಗೇ ನಾನೂ ಮನೆಯಲ್ಲೇ ಸಿಗ್ತಿದ್ದೆ" ಅಂತ ಹಲ್ಕಿರಿದ ... ತನ್ನನ್ನು ತಾನು ಕತ್ತೆ ಅಂದುಕೊಳ್ಳುವುದರ ಜೊತೆ ನನ್ನೂ ಪರೋಕ್ಷವಾಗಿ ತನ್ನ ಲಿಸ್ಟ್’ಗೆ ಸೇರಿಸಿದ್ದ ... ಭಡವ ... "ಅದಿರ್ಲಿ, ಯಾಕೋ?" ಅಂದ ... "ನಿನ್ನನ್ನು ಇಂಟರ್ವ್ಯೂ ಮಾಡಲಿಕ್ಕೆ" ಅಂದೆ ... ಅಷ್ಟೇ ...
ನನ್ನನ್ನೂ ನೂಕಿಕೊಂಡು ಬಚ್ಚಲು ಸೇರಿದವನು ಹತ್ತು ನಿಮಿಷದ ಮೇಲೆ ಹೊರಗೆ ಬಂದ ... ಗಾಳಿಯಲ್ಲಿ ಬಂದ ವಾಸನೆಯಿಂದಲೇ ತಿಳಿಯುತ್ತೆ ... ಪಾಪಿ ... ನನ್ನ ಸಾಬೂನನ್ನು ಹಚ್ಚಿಕೊಂಡು ಮುಖ ತೊಳೆದಿದ್ದಾನೆ ಅಂತ .... ನಾನು ಸಾಬೂನು ಹಚ್ಚೋಲ್ಲ ಅಂತ ನಿರ್ಧಾರ ಮಾಡಿದ್ದರೂ, ತಂದಿಟ್ಟಿದ್ದ ಸ್ಟಾಕು ಇದೆಯೆಲ್ಲ? ...
"ಅಲ್ಲಾ ಕಣೋ ಸುಬ್ಬ ... ನಿನ್ನನ್ನು ಟಿವಿ’ಗೆ ಇಂಟರ್ವ್ಯೂ ಮಾಡ್ತೀನಿ ಅಂದುಕೊಂಡ್ಯಾ ಅಲಂಕಾರ ಮಾಡಿಕೊಳ್ಳಲಿಕ್ಕೆ? ಹಾಳಾಗಿ ಹೋಗ್ಲಿ ಕೂತ್ಕೋ" ಅಂತ ಕೂರಿಸಿದೆ ... "ಹಣ್ಣಿನ ರಸ ಇದ್ರೆ ಮೇಡಮ್’ಗೆ ಹೇಳಿ ತರಿಸಿಕೊಡೋ.." ಅಂದ .. ಎಲಾ ಇವನ? ಆಗ್ಲೇ ಸೆಲೆಬ್ರಿಟಿ ಆಗಿಬಿಟ್ಟಿದ್ದಾನೆ ... ಹೋಗ್ಲಿ ಬಿಡಿ ಪಾಪ, ಅವನ ಬಗ್ಗೆ ಪ್ರಚಾರ ಆದ ಮೇಲೆ ಆ ಪಟ್ಟ ನನಗೆ ತಾನೇ ಬರೋದು ... ಈಗ ಅವನು ಮಜಾ ಮಾಡ್ಲಿ ...
ಸುಬ್ಬನನ್ನು ಕೇಳಿದೆ "ನಿನ್ನ ಶಾಲೆ ಜೀವನದ ದಿನಗಳಲ್ಲಿ ನೆಡೆದ ಸ್ವಾರಸ್ಯಕರ ಘಟನೆ ಬಗ್ಗೆ ಹೇಳು" ಅಂದೆ ... ಅವನು ಗರ ಗರ ಅಂತ ಗಂಟಲು ಸರಿಪಡಿಸಿಕೊಂಡು, ಒಮ್ಮೆ ಹಣ್ಣಿನ ರಸ ಹೀರಿ, ಕುತ್ತಿಗೆ ಪಟ್ಟಿ ಸೆರಿಪಡಿಸಿಕೊಂಡು, ಒಮ್ಮೆ ಹಾಗೇ ತಲೆಗೂದಲನ್ನು ಸವರಿಕೊಂಡು "ಹಾಗೆಂದರೆ ಏನು?" ಅಂತ ಕೇಳೋದೇ? ತಪ್ಪು ನಂದೇ! ಸುಬ್ಬ ಇದ್ದೆಡೆ ಸ್ವಾರಸ್ಯ ತಾನಾಗೇ ಇರುತ್ತೆ. ಇರಲಿ ಅಂತ, ಬಿಡಿಸೀ ಬಿಡಿಸಿ ಹೇಳಿದೆ ...
ಸುಬ್ಬ ಹೈಸ್ಕೂಲ್ ಸೇರಿದ ಮೊದಲ ದಿನವೇ ಮೇಷ್ಟರ ಕೈಲಿ ತಲೇ ಮೇಲೆ ಹೊಡೆಸಿಕೊಂಡಿದ್ದ. ಮೊದಲ ದಿನ ಮೇಷ್ಟ್ರು ಹೇಳಿದ್ರಂತೆ "ನನ್ನ ಕ್ಲಾಸ್’ನಲ್ಲಿ ಬಾಲಾ ಬಿಚ್ಚೋ ಹಾಗಿಲ್ಲ. ನಾನು ಮಾಡೊ ಪಾಠ ಚೆನ್ನಾಗಿ ಅರ್ಥ ಮಾಡಿಕೊಳ್ಳೀ, ಓದಿಕೊಂಡು ಸಿದ್ದವಾಗಿರಿ. ನಾನು ಯಾವಗ ಬೇಕಾದ್ರೂ ಟೆಸ್ತ್ ಕೊಡ್ತೀನಿ. ಅರ್ಥವಾಯ್ತೇನ್ರೋ ನಿದ್ದೆ ಮರಿಗಳಾ?" ಅಂತ.
ಒಂದು ರೀತಿ "ನಾನ್ ತುಂಬಾ ಕಟ್ ನಿಟ್ಟು ..." ಅಂತ ಪ್ರೇಮಲೋಕ ಚಿತ್ರದ ’ನೋಡಮ್ಮ ಹುಡುಗಿ’ ಹಾಡಿನಲ್ಲಿ ಪ್ರಭಾಕರ್ ನುಡಿದಂತೆ ... ಅದಕ್ಕೆ ನಮ್ ಸುಬ್ಬ ಹೇಳಿದ್ನಂತೆ "ಸರ್, ಈ ಗುರುವಾರಾನೇ ಸರ್ಪ್ರೈಸ್ ಟೆಸ್ಟ್ ಕೊಟ್ಟುಬಿಡಿ ಸಾರ್" ಅಂತ. ಮೊದಲೇ ವಯಸ್ಸಾದ ಮೇಷ್ಟ್ರು ... ’ಅಧಿಕಪ್ರಸಂಗಿ’ ಅಂತ ಬೈದು ತಲೇ ಮೇಲೆ ಕುಟ್ಟಿದ್ದರು ..
"ಊಟಕ್ಕೆ ಏನು ಅಡುಗೆ ಮಾಡಲಿ" ಅಂತ ಕೇಳೋಕ್ಕೆ ಅಂತ ನನ್ನ ಹೆಂಡತಿ ಆ ಕಡೆ ಬಂದಳು. ಊಟ ಅಂದ ಮೇಲೆ ನೆನಪಿಗೆ ಬಂತು ನೋಡಿ... ಊಟದ ಬಗ್ಗೆ ಸುಬ್ಬನ ಬಗೆಗಿನ ಹಲವಾರು ವಿಚಾರಗಳು ನಿಮ್ಮೊಡನೆ ಹಂಚಿಕೊಳ್ಳಬೇಕು ... ಅದಕ್ಕೂ ಮುಂಚೆ ಸುಬ್ಬ ಬಂದಿದ್ದೇಕೆ? ಊಟಕ್ಕೆ ನಿಲ್ತಾನೋ ಇಲ್ಲಾ ಕೂರ್ತಾನೋ ತಿಳಿದುಕೊಳ್ಳಬೇಕು ....
"ಅಲ್ವೋ, ಸುಬ್ಬ ನೀನೇನು ಈ ಕಡೆ?" ... ಅದಕ್ಕೆ ಸುಬ್ಬ "ಏನಿಲ್ಲ ಕಣೋ ಪರಮೇಶಿ ತಂಗಿ ಪಂಕಜಳ ಮದುವೆಗೆ ಹೋಗ್ತಿದ್ದೀನಿ. ನೀನೂ ಬರ್ತೀಯಾ ಅಂತ ಕೇಳೋಕ್ಕೆ ಬಂದೆ" ಅಂದ. ನಾನೆಂದೆ "ಅದಕ್ಕೇನಂತೆ, ಒಟ್ಟಿಗೆ ಹೋಗೋಣ. ಅದ್ಸರಿ ಈ ಪರಮೇಶಿ ಯಾರು?" ಅಂದೆ. ಅದಕ್ಕೆ ಸುಬ್ಬ "ಅಲ್ಲಾ ಕಣೋ ... ಪರಮೇಶಿ ಗೊತ್ತಿಲ್ಲ ನಿನಗೆ ಆದ್ರೆ ಅವನ ತಂಗಿ ಮಾತ್ರ ಗೊತ್ತಾ?" ಅನ್ನೋದೇ? ನನ್ನಾಕೆ ನಿಂತಲ್ಲಿಂದಲೇ ಗುರಾಯಿಸುತ್ತಿದ್ದಳು .. ಸುಬ್ಬನ ವಿಚಾರ ನನಗೆ ಗೊತ್ತಿಲ್ವೇ? ನಾನು "ಲೋ ಪುಣ್ಯಾತ್ಮಾ, ನನಗೆ ಇಬ್ಬರೂ ಗೊತ್ತಿಲ್ಲ... ನಿನಗೆ ಗೊತ್ತಾ ಪರಮೇಶಿ ಯಾರು" ಅಂತ?
ಸುಬ್ಬ ಉವಾಚ "ಇಲ್ಲ ಕಣೋ ... ಕಾಲೇಜಿಗೆ ಇಬ್ಬರೂ ಒಂದೇ ಬಸ್ಸಿನಲ್ಲಿ ಹೋಗ್ತಿದ್ವಿ ಅಷ್ಟೇ. ಅವನು ಯಾವಾಗ್ಲೂ ಫುಟ್ ಬೋರ್ಡ್ ಮೇಲೆ ಓಲಾಡಿಕೊಂಡು.. ನಾನು ಒಳಗೆ ಜೋಲಾಡಿಕೊಂಡು.. ನಿನಗೆ ಗೊತ್ತಿದ್ರೆ ನಿನ್ ಜೊತೆ ಹೋಗೋಣ ಅಂತ ಮಾಡಿದ್ದೆ" ... ಇಬ್ಬರೂ ಮನೆಯಲ್ಲೇ ಉಳಿಯುವುದು ಅಂತ ನಿರ್ಧಾರ ಆಯ್ತು. ನನ್ ಹೆಂಡತಿಗೂ ವಿಷಯ ತಿಳಿಸಿದೆ ’ಸುಬ್ಬ ಊಟಕ್ಕೆ ಕೂರ್ತಾನೆ ಅಂತ?
ಈ ಮದುವೆ ಅಂದಾಗ ಒಂದು ವಿಷಯ ನೆನಪಾಯ್ತು ನೋಡಿ. ಒಂದು ರೀತಿಯಲ್ಲಿ ಹೇಳಿದರೆ ಸುಬ್ಬ ನನ್ನನ್ನು ಕೆಟ್ಟ ಪರಿಸ್ಥಿತಿಗೆ ಸಿಲುಕಿಸಿದ್ದ. ಸುಬ್ಬ ಅಂದ ಮೇಲೆ ಅದೇನು ಹೊಸತು ಅಂದ್ರ? ಕೇಳಿ ಹೇಳ್ತೀನಿ ...
ಸುಬ್ಬನ ಮದುವೆ ಯಾವುದೋ ತಿಂಗಳ ಮೂರನೆ ತಾರೀಖು. ತಿಂಗಳು ನೆನಪಿಲ್ಲ, ತಾರೀಖು ನೆನಪಿದೆ ... ಚೆನ್ನಾಗಿ ... ಎರಡನೇ ತಾರೀಖು ವರ ಪೂಜೆ ... ಮೂರನೇ ತಾರೀಖು ಮದುವೆ ಸಂಜೆ receptionಉ ... ಇಷ್ಟೂ ಕಲಾಪಗಳಿಗೆ ನಮ್ಮಿಬ್ಬರಿಗೂ ಆಹ್ವಾನ ನೀಡಿದ ಪುಣ್ಯಾತ್ಮ ನನಗೆ ಹೇಳಿದ್ದ "ಲೋ! first nightಉ ಬಂದು ಬಿಡೋ ... ಸ್ವಲ್ಪ ಸಹಾಯ ಬೇಕು" ಅಂತ !!!
ನನಗೆ ಏನು ಹೇಳಬೇಕೋ ತಿಳೀವಲ್ದು ... ಯಾರಾದರೂ ಈ ರೀತಿ ಆಹ್ವಾನ ಕೊಡ್ತಾರೆಯೇ? ನನ್ ಹೆಂಡ್ತಿ ನನ್ನನ್ನು ಗುರಾಯಿಸುತ್ತಿದ್ದಳು ... ಸುಬ್ಬನಿಗೆ ಏನು ಅರ್ಥವಾಯ್ತೋ ಏನೋ ಗೊತ್ತಿಲ್ಲ ... ಮತ್ತೆ ಹೇಳ್ದ ’ಒಂದನೇ ತಾರೀಖು ಶುಕ್ರವಾರ ... ಕೆಲ್ಸ ಮುಗಿಸಿಕೊಂಡು ರಾತ್ರಿ ನಂ ಮನೆಗೇ ಊಟಕ್ಕೆ ಬಂದುಬಿಡು. ಬಟ್ಟೆ ಬರೆ ಪ್ಯಾಕಿಂಗ್’ಗೆ ಸ್ವಲ್ಪ ಹೆಲ್ಪ್ ಬೇಕು’ ಅಂದ.... ಮನೆ ಪ್ರಶಾಂತವಾಯ್ತು ... ನಾನು ಫಸ್ಟ್ ನೈಟ್ ಅರ್ಥಾತ್ ಮೊದಲನೇ ತಾರೀಖು ರಾತ್ರಿ ಖಂಡಿತ ಬರ್ತೀನಿ ಅಂತ ಪ್ರಾಮಿಸ್ ಮಾಡಿದೆ...
ಈಗ ಸುಬ್ಬನ ಇಂಟರ್ವ್ಯೂ ಮುಂದುವರೆಸುತ್ತೇನೆ ... ಮೊದಲು ನನಗೇ ನೆನಪಿರುವ ವಿಷಯಗಳನ್ನು ಹೇಳಿಬಿಡ್ತೀನಿ, ಆಮೇಲೆ ಅವನನ್ನು ಕೇಳಿದರಾಯ್ತು ....
ಹೇಳಿ ಕೊಟ್ಟ ಮಾತು, ಕಟ್ಟಿ ಕೊಟ್ಟ ಬುತ್ತಿ ಎಷ್ಟು ದಿನ ಇದ್ದೀತು ಅಂತಾರಲ್ಲ ಆ ಮಾತು ಸುಬ್ಬನಿಗೆ ಚೆನ್ನಾಗಿ ಅನ್ವಯಿಸುತ್ತೆ ... ಯಾರ ಮನೆಗಾದರೂ ಹೋಗುವಾಗ ಕೈಲಿ ಚಿತ್ರಾವತಿ ಹಿಡಿದೇ ಹೋಗಬೇಡ, ಊಟಕ್ಕೆ ಏಳು ಅಂದ್ರೆ ಆಗಿದೆ ಅಂತ ಹೇಳು ಅನ್ನೋ ಮಾತು ಅವರಮ್ಮ ಕಿವಿ ತುಂಬಿದ್ದರು ... ಅದು ಕೆಲ ಕಾಲ ಮಾತ್ರ ಇತ್ತು ಅಷ್ಟೇ!
ಒಮ್ಮೆ ನಮ್ಮ ಮನೆಗೆ ಬಂದಿದ್ದ ... ಊಟಕ್ಕೆ ಏಳು ಅಂದಿದ್ದೆ ... ’ಬೇಡ ಆಗಿದೆ’ ಅಂದ ... ಹೋಗ್ಲಿ ಕಾಫೀ ಕುಡೀತೀಯಾ ಅಂತ ನಮ್ಮಮ್ಮ ಕೇಳಿದ್ದರು ... ಅದಕ್ಕವನು "ಇಲ್ಲ ಬೇಡ, ಹಸಿ ಹೊಟ್ಟೆಯಲ್ಲಿ ಕಾಫೀ ಕುಡಿದರೆ ನನಗೆ ಮೈಗಾಗಲ್ಲ" ಅಂದಿದ್ದ !!!
ಊಟ ಅಂದ ಮೇಲೆ ಮತ್ತೊಂದು ಘಟನೆ ನೆನಪಾಯ್ತು ನೋಡಿ ... ಒಮ್ಮೆ ಪಾಪ ಯಾರೋ ಅತಿಥಿಗಳು ಸುಬ್ಬನ ಮನೆಗೆ ಬಂದಿದ್ದರು. ಯಾವುದೋ ಪೂಜೆಯೋ ಏನು ಕಥೆಯೋ ಗೊತ್ತಿಲ್ಲ, ಕೊನೇ ಘಳಿಗೆಯಲ್ಲಿ ಅವರ ನೆನಪು ಬಂದು, ರಾತ್ರಿಯಲ್ಲಿ ಹೋಗಿ ಆಮಂತ್ರಿಸಿದ್ದ, ಊಟಕ್ಕೆ... ಪೂಜೆಗೂ ಕರೆದಾಗ ಕೊನೇ ಘಳಿಗೆ ಆದರೆ ಏನು ಅಂತ ವಿಶಾಲ ಮನೋಭಾವ ತೋರಿ ಅವರೂ ಬಂದಿದ್ದರು, ಸ್ವಲ್ಪ ಮುಂಚಿತವಾಗಿಯೇ ... ಇದೇ ಅವರು ಮಾಡಿದ ತಪ್ಪು!
ಮತ್ತೊಮ್ಮೆ ಇನ್ಯಾವುದೋ ಸಂದರ್ಭದಲ್ಲಿ, ನನಗೆ ಅವರ ಪರಿಚಯ ಇದ್ದರೂ ನನಗೆ ಪರಿಚಯ ಮಾಡಿಕೊಟ್ಟಿದ್ದ "ಇವರು ಲಂಬೋದರ ರಾವ್ ಅಂತ. ಬಹಳ ಒಳ್ಳೆಯ ಜನ. ಎಷ್ಟು ಹೊತ್ತಿಗೆ ಊಟಕ್ಕೆ ಕರೆದರೂ ಬೇಗ ಬರ್ತಾರೆ, ಪಾಪ" ಅಂದಿದ್ದ.
ಹೀಗೇ ಸುಬ್ಬನಿಗೆ ಒಂದು ಮದುವೆ ಆಮಂತ್ರಣ ಇತ್ತು. ಹೋಗಲಿಲ್ಲ ಅನ್ನೋದು ಬೇರೆ ವಿಷಯ ... ಟಿವಿ’ಯ ಕಾರ್ಯಕ್ರಮ ಒಂದಕ್ಕೆ ಕರೆ ಮಾಡಿ ಶುಭಾಶಯ ಹೇಳಬಹುದು ಅಂತ ಯಾರೋ ಹೇಳಿದ್ದರು. ಕಾರ್ಯಕ್ರಮ ಮೂಡಿ ಬರುವಾಗ ಕರೆ ಮಾಡಿದ್ದ ಸುಬ್ಬ. "ನನ್ನ ಗೆಳೆಯನ ಮದುವೆಗೆ ಶುಭಾಶಯ ತಿಳಿಸಲು ಕರೆ ಮಾದಿದೆ" ಎಂದಿದ್ದ. "ಮದುವೆ ಊಟ ಬಿಟ್ಟು ಏನ್ ಸಾರ್ ಮಾಡ್ತಿದ್ದೀರಾ ಮನೆಯಲ್ಲಿ" ಅಂತ ಹಾಸ್ಯವಾಗಿ ಆ ಲಲನೆ ನುಡಿದರೆ, ನಮ್ ಸುಬ್ಬ "ಇಲ್ಲ ನನಗೆ ಬೇರೆ ಕೆಲ್ಸ ಇದೆ ... ಮುಂದಿನ ಸಾರಿ ಹೋಗ್ತೀನಿ" ಅಂದಿದ್ದ !
ಕಾರ್ಯಕ್ರಮ ನೋಡುತ್ತಿದ್ದ ಕನ್ನಡ ಕುಲಕೋಟಿಗೆ ಸುಬ್ಬನ ಬುದ್ದಿಮತ್ತೆಯ ಪರಿಚಯವಾಗಿತ್ತು!
ಪುಣ್ಯಾತ್ಮ ಆ ಮದುವೆ ಗಂಡು ಮತ್ತೊಮ್ಮೆ ಸಿಕ್ಕಾಗ, ’ನನ್ ಶುಭಾಶಯ ಸಿಕ್ತಾ’ ಅಂದಿದ್ದ ಸುಬ್ಬ ... ಯಾವ ಶುಭಾಶಯವೂ ಬರಲಿಲ್ಲವಲ್ಲ ಅಂದಿದ್ದಕ್ಕೆ ಇವನು, ’ಅಲ್ವೋ ಮುಹೂರ್ತದ ಟೈಮಿಗೆ ಸರಿಯಾಗಿ ಟಿವಿ ಚಾನಲ್’ನಲ್ಲಿ ಹಾಡು ಹಾಕಿಸಿದ್ದೆ, ಟಿವಿ ನೋಡಲಿಲ್ವಾ?’ ಅಂದಿದ್ದ ...
ಈಗ ಅವನ ಇಂಟರ್ವ್ಯೂ ಮುಂದುವರೆಸುತ್ತೇನೆ .... ಸುಬ್ಬನನ್ನು ಕೇಳಿದೆ "ಆಲ್ವೋ, ಆಗ್ಲೇ ಬಸ್ಸಿನ ವಿಚಾರ ಹೇಳಿದಾಗ, ಅದೇನೋ ಒಲಾಡಿಕೊಂಡು, ಜೋಲಾಡಿಕೊಂಡು ಅಂದ್ಯಲ್ಲ ... ಹಾಗಂದ್ರೇನು?" ...
ಸುಬ್ಬ ನುಡಿದ "ಪರಮೇಶಿ ಸ್ಟೈಲಾಗಿ ಒಂದು ಕಾಲು ಫುಟ್ ಬೋರ್ಡ್ ಮೇಲೆ ಇಟ್ಟು ಒಂದೇ ಕೈನಲ್ಲಿ ಬಾರ್ ಹಿಡಿದುಕೊಂಡು, ಇನ್ನೊಂದು ಕಾಲು ಇಳೀಬಿಟ್ಟು ಮತ್ತೊಂದು ಕೈನಲ್ಲಿ ತಲೆಗೂದಲು ತೀಡಿಕೊಳ್ಳುತ್ತ ಇರುತ್ತಿದ್ದ. ಅಲ್ದೇ, ತರುತ್ತಿದ್ದ ಒಂದೇ ಪುಸ್ತಕವನ್ನು ಹೊಟ್ಟೆಗೋ ಬೆನ್ನಿಗೋ ಸಿಗಿಸಿಕೊಳ್ಳುತ್ತಿದ್ದ. ನಾನು ಬಸ್ಸಿನ ಒಳಗೆ. ಮೇಲಿನ ಬಾರ್ ಹಿಡಿದುಕೊಂಡು ಜೋಲಾಡಿಕೊಂಡು ... ಪರಮೇಶಿ ಒಮ್ಮೆ ಬಂದಿರಲಿಲ್ಲ ಅಂತ ಅವನ ಹಾಗೆ ಫುಟ್ ಬೋರ್ಡ್ ಮೇಲೆ ನಿಂತೆ. ಇಳೀ ಬಿಟ್ಟ ಕಾಲು ಯಾವುದೋ ಸೈಕಲ್ಲಿಗೆ ಬಡಿದು ಅವರು ರೋಡಿನ ಮೇಲೆ ಉರುಳಿದರು. ನಾನು ಬಿದ್ದೆಡೆ ತಲೆ ತಿರುಗಿಸಿ, ಅವರು ಬಿದ್ದದ್ದು ನೋಡಿ ಕಣ್ಣು ಮುಚ್ಚಿ "ಕ್ಷಮಿಸಿ ಬಿಡಿ ಸಾರ್" ಅಂದಿದ್ದೆ ... ಅಪಘಾತ ನೋಡಿದರೆ ನನಗೆ ತಲೆ ತಿರುಗುತ್ತೆ ... ಅದೇನೋ ಗೊತ್ತಿಲ್ಲ, ಅವತ್ತಿನಿಂದ ನಾನು ಫೇಮಸ್ ಆಗಿಬಿಟ್ಟೆ ... ಕನ್ನಡ ಕ್ಲಾಸಿನಲ್ಲಿ ಮೇಷ್ಟ್ರು ನನ್ನನ್ನೇ ಪ್ರಶ್ನೆ ಕೇಳ್ತಿದ್ರು. ನನಗೊಬ್ಬನಿಗೇ ಟೆಸ್ಟ್ ಕೊಡೋವ್ರು. ಯಾವುದಾದರೂ ಪುಸ್ತಕದಿಂದ ತಮಗೆ ವಿಷಯ ಬೇಕಿದ್ರೆ ಅದನ್ನು ಲೈಬ್ರರಿಯಲ್ಲಿ ಹುಡುಕಲು ನನಗೇ ಹೇಳ್ತಿದ್ರು ... ಆದ್ರೆ, ಸೈಕಲ್’ನಿಂದ ಬಿದ್ದಿದ್ದು ಯಾರು ಅಂತ ಇವತ್ತಿನವರೆಗೂ ಗೊತ್ತಿಲ್ಲ ನೋಡು!" .. ಅದಕ್ಕೇ ಅವನನ್ನು ಸುಬ್ಬ ಅನ್ನೋದು !
ಮತ್ತೊಂದು ಪ್ರಶ್ನೆ ಕೇಳೋಣ ಅಂತ ಸಿದ್ದವಾದೆ ... ನನ್ನಾಕೆ ಅಡುಗೆ ಸಿದ್ದವಾಗಿದೆ ಅಂತ ಹೇಳಿದಳು ... ಅವನಾಡಿದ ಮಾತುಗಳನ್ನು ಟಿಪ್ಪಣಿ ಮಾಡಿಕೊಳ್ಳುತ್ತ "ಆಯ್ತು ಕಣೋ, ನಿನ್ನ ಸಹಕಾರಕ್ಕೆ ಧನ್ಯವಾದಗಳು " ಎಂದು ಹೇಳುತ್ತ ತಲೆ ಎತ್ತಿದೆ. ಅವನು ಅಲ್ಲೆಲ್ಲಿದ್ದ? ... ಒಳಗೆ ಚಿತ್ರಾವತಿ ಇಡ್ತಿದ್ದ !!
ನನ್ನನ್ನುಳಿದು ಹಲವಾರು ಮಂದಿ ಇವನಿಂದ ಕಷ್ಟ ಅನುಭವಿಸಿದ್ದಾರೆ ಅಂತ ಹೇಳಲು ಹೊರಟಿದ್ದೆ ... ಆದರೆ ನನ್ನಷ್ಟು ಅನುಭವಿಸಿದವರು ಇನ್ಯಾರೂ ಇಲ್ಲ ಅನ್ನಿಸುತ್ತಿದೆ ... ನಿಮಗೆ ಏನನ್ನಿಸಿತು?
Comments
ಉ: ಸುಬ್ಬನ ಇಂಟರ್ವ್ಯೂ !!
In reply to ಉ: ಸುಬ್ಬನ ಇಂಟರ್ವ್ಯೂ !! by sathishnasa
ಉ: ಸುಬ್ಬನ ಇಂಟರ್ವ್ಯೂ !!
ಉ: ಸುಬ್ಬನ ಇಂಟರ್ವ್ಯೂ !!
In reply to ಉ: ಸುಬ್ಬನ ಇಂಟರ್ವ್ಯೂ !! by partha1059
ಉ: ಸುಬ್ಬನ ಇಂಟರ್ವ್ಯೂ !!
ಉ: ಸುಬ್ಬನ ಇಂಟರ್ವ್ಯೂ !!
In reply to ಉ: ಸುಬ್ಬನ ಇಂಟರ್ವ್ಯೂ !! by venkatb83
ಉ: ಸುಬ್ಬನ ಇಂಟರ್ವ್ಯೂ !!
ಉ: ಸುಬ್ಬನ ಇಂಟರ್ವ್ಯೂ !!
In reply to ಉ: ಸುಬ್ಬನ ಇಂಟರ್ವ್ಯೂ !! by prasannakulkarni
ಉ: ಸುಬ್ಬನ ಇಂಟರ್ವ್ಯೂ !!
ಉ: ಸುಬ್ಬನ ಇಂಟರ್ವ್ಯೂ !!
In reply to ಉ: ಸುಬ್ಬನ ಇಂಟರ್ವ್ಯೂ !! by gopaljsr
ಉ: ಸುಬ್ಬನ ಇಂಟರ್ವ್ಯೂ !!
ಉ: ಸುಬ್ಬನ ಇಂಟರ್ವ್ಯೂ !!
In reply to ಉ: ಸುಬ್ಬನ ಇಂಟರ್ವ್ಯೂ !! by gopinatha
ಉ: ಸುಬ್ಬನ ಇಂಟರ್ವ್ಯೂ !!
ಉ: ಸುಬ್ಬನ ಇಂಟರ್ವ್ಯೂ !!
In reply to ಉ: ಸುಬ್ಬನ ಇಂಟರ್ವ್ಯೂ !! by partha1059
ಉ: ಸುಬ್ಬನ ಇಂಟರ್ವ್ಯೂ !!