ಅಭಿವ್ಯಕ್ತಿ ಸ್ವಾತಂತ್ರ್ಯ: ಕೆಲವು ಚಿಂತನೆಗಳು
ತನ್ನ ಜೀವಕ್ಕೆ ಅಪಾಯವಿದೆ ಎಂಬ ಕಾರಣವೊಡ್ಡಿ ಲೇಖಕ ಸಲ್ಮಾನ್ ರಶ್ಮಿ ಜೈಪುರ್ ಸಾಹಿತ್ಯಮೇಳಕ್ಕೆ ಹಾಜರಾಗದ ಸುದ್ದಿ ನೋಡಿದಾಗ ಅವರ ಭೀತಿಯ ಹಿಂದಿನ ಕಾರಣ ಮತ್ತದಕ್ಕೆ ತಳಕು ಹಾಕಿಕೊಂಡ ಧರ್ಮ, ನಂಬಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯ, ದೈವನಿಂದೆ- ಮುಂತಾದುವುಗಳ ಸುತ್ತ ಮನಸ್ಸು ಹರಿದಾಡಿತು...
ಮೊದಲಿಗೆ ಕಳೆದ ವರ್ಷದ ಕರಾಳ ಘಟನೆಯೊಂದರಿಂದ ಚರ್ಚೆಯನ್ನು ಆರಂಭಿಸೋಣ.
ಜುಲೈ 4, 2010ರ ಭಾನುವಾರ ಹಾಡುಹಗಲಲ್ಲೇ ಕೇರಳದ ತೊಡಪುಳದ ನ್ಯೂಮನ್ ಕಾಲೇಜಿನ ಪ್ರಾಧ್ಯಾಪಕ ಟಿ. ಜೆ. ಜೋಸೆಫ್ ಅವರ ಬಲಗೈಯನ್ನು ಅವರ ತಾಯಿ ಮತ್ತು ತಂಗಿಯ ಕಣ್ಣೆದುರೇ ದುಷ್ಕರ್ಮಿಗಳು ಕತ್ತರಿಸಿಹಾಕಿದ ಘಟನೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಪತ್ರಿಕಾವರದಿಗಳ ಪ್ರಕಾರ ಈ ಭೀಬತ್ಸ ಘಟನೆಯ ವಿವರಗಳು ಸಂಕ್ಷಿಪ್ತವಾಗಿ ಹೀಗಿವೆ:
ಆ ವರ್ಷದ ಮಾರ್ಚ್ನಲ್ಲಿ ನಡೆದ ಬಿ. ಕಾಂ. ಪರೀಕ್ಷೆಯ ಮಲಯಾಲಂ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿದ ಪ್ರೊ. ಜೋಸೆಫ್ ಅವರು punctuationಗೆ ಸಂಬಂಧಿಸಿದ ಪ್ರಶ್ನೆಗೆ ಸಿಪಿಐ (ಎಂ) ನಾಯಕ ಕೆ. ಟಿ. ಕುಂಜು ಮಹಮದ್ ಅವರ ಕಥೆಯೂಂದರ ಭಾಗವೊಂದನ್ನು ಉಪಯೋಗಿಸಿಕೊಂಡಿದ್ದರು. ಹಳ್ಳಿಯ ತಲೆತಿರುಕನೊಬ್ಬ ದೇವರೊಂದಿಗೆ ವಾದಕ್ಕಿಳಿಯುವ ಆ ಕಥೆಯಲ್ಲಿ ಆ ಹುಚ್ಚನಿಗೆ ಹೆಸರೇನೂ ಇರಲಿಲ್ಲ. ಆದರೆ ಪ್ರೊ. ಜೋಸೆಫ್ ತಮ್ಮ ಪ್ರಶ್ನೆಪತ್ರಿಕೆಯಲ್ಲಿ ಅವನನ್ನು ಮಹಮದ್ ಎಂದು ಹೆಸರಿಸಿದ್ದರು. ಜಮಾತ್ ಇ ಇಸ್ಲಾಂನ ಪತ್ರಿಕೆಯ ಸ್ಥಳೀಯ ಆವೃತ್ತಿ ಈ ಸುದ್ಧಿಗೆ ಪ್ರಾಮುಖ್ಯತೆ ನೀಡಿ ಪ್ರಕಟಿಸಿದಾಗ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಎಂಬ ಮುಸ್ಲಿಂ ಸಂಘಟನೆಯ ಕಣ್ಣು ಕೆಂಪಗಾಯಿತು. ಈ ಸಂಘಟನೆಯ ವಿದ್ಯಾರ್ಥಿ ವಿಭಾಗವಾದ ಕ್ಯಾಂಪಸ್ ಫ್ರಂಟ್ ಜೋಸೆಫ್ರ ವಿರುದ್ಧ ಪ್ರತಿಭಟನಾ ಚಳುವಳಿ ಆರಂಭಿಸಿತು. ಪಿಎಫ್ಐ ಸಂಘಟನೆಯಿಂದ ಜೋಸೆಫ್ರಿಗೆ ಬೆದರಿಕೆಗಳು ಬರಲಾರಂಭಿಸಿದವು. ಕೊನೆಗೆ ಜುಲೈ ೪, ೨೦೧೦ರಂದು ಪಿಎಫ್ಐ ಸಂಘಟನೆಗೆ ಸೇರಿದವರೆಂದು ಹೇಳಲಾಗುವ ವ್ಯಕ್ತಿಗಳು ಜೋಸೆಫ್ರ ಮೇಲೆ ಹಲ್ಲೆಯೆಸಗಿ ಆವರ ಬಲಗೈಯನ್ನು ಕತ್ತರಿಸಿ ಕಾಕಿದರು.
ಪಿಎಫ್ಐ ಒಂದು ತೀವ್ರಗಾಮಿ ಸಂಘಟನೆ. ಇಸ್ಲಾಂನ ಮೌಲ್ಯಗಳನ್ನು ಎತ್ತಿ ಹಿಡಿಯುವ, ಇಸ್ಲಾಂನ ಪ್ರತಿಷ್ಠೆಯನ್ನು ಕಾಪಾಡುವ ಧ್ಯೇಯವನ್ನು ಹೊಂದಿದ ಈ ಸಂಘಟನೆ ತನ್ನ ಉದ್ದೇಶ ಸಾಧನೆಗಾಗಿ ಅಸಂವಿಧಾನಿಕ ಹಾಗೂ ಹಿಂಸಾಮಾರ್ಗ ಹಿಡಿಯಲು ತಯಾರಿರುವ ಸ್ಪಷ್ಟ ಸೂಚನೆಗಳಿವೆ. ಇದು ಸಂಗ್ರಹಿಸಿಟ್ಟಿದ್ದ ಭಾರೀ ಪ್ರಮಾಣದ ಆಯುಧಗಳನ್ನು ಜುಲೈ ೧೨, ೨೦೧೦ ರಂದು ಕಣ್ಣೂರಿನ ಜಾಮ ಮಸೀದಿಯಿಂದ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಸ್ಥೆಯ ಕಾರ್ಯವಿಧಾನಗಳು ಕೇರಳದ ಸಮಾಜ ಮತ್ತು ರಾಜಕೀಯ ತಾಲಿಬಾನೀಕರಣಗೊಳ್ಳುತ್ತಿರುವುದರ ಸೂಚನೆ ಎಂಬ ಆತಂಕ ಹಲವು ಕಡೆಗಳಿಂದ ವ್ಯಕ್ತವಾಗಿದೆ.
ಪ್ರೊ. ಜೋಸೆಫ್ರ ಮೇಲಿನ ಹಲ್ಲೆ ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ನಾಗರೀಕ ಸಮಾಜದಲ್ಲಿ ಇಂತಹ ಬರ್ಬರ ಕೃತ್ಯಗಳಿಗೆ ಅವಕಾಶವಿಲ್ಲ. ಪಿಎಫ್ಐನಂತಹ ತಾಲಿಬಾನೀ ಸಂಘಟನೆಗಳನ್ನು ಮೊಳಕೆಯಲ್ಲೇ ಚಿವುಟಿಹಾಕದಿದ್ದರೆ ನಮ್ಮ ಭವಿಷ್ಯ ಕರಾಳವಾಗುವುದು ಖಂಡಿತ. ಇಂತಹ ಜೀವವಿರೋಧೀ ಅನಾಗರೀಕ ತಾಲಿಬಾನೀ ಸಂಘಟನೆಗಳನ್ನು ನಿಗ್ರಹಿಸಲು ಅಗತ್ಯವಿರುವ ಯಾವುದೇ ಕ್ರಮವನ್ನು ಬೆಂಬಲಿಸುವುದರ ಜತೆಗೇ ಜೋಸೆಫ್ರ ಕೃತ್ಯವನ್ನೂ ವಿಮರ್ಶಿಸುವ ಅಗತ್ಯವಿದೆ.
ಮೂಲ ಕಥೆಯಲ್ಲಿ ಹೆಸರೇ ಇಲ್ಲದ ಹುಚ್ಚನಿಗೆ ಪ್ರವಾದಿಯವರನ್ನು ಸಂಕೇತಿಸುವ ಮಹಮರ್ ಎಂಬ ಹೆಸರನ್ನು ಪ್ರೊ. ಜೋಸೆಫ್ ಯಾಕೆ ಇಟ್ಟರು? ಇದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಕೆಲವರ ಪ್ರಕಾರ ಜೋಸೆಫ್ ಇದನ್ನು ಮಾಡಿದ್ದು ಉದ್ದೇಶಪೂರ್ವಕವಾಗಿ. ತಾವು ಕೆಲಸ ಮಾಡುತ್ತಿದ್ದ ಕಾಲೇಜಿನ ಅಧಿಕಾರಿಗಳ ಜತೆ ಅವರ ಸಂಬಂಧ ಹಿತಕರವಾಗಿರಲಿಲ್ಲ, ಹೀಗಾಗಿ ಕಾಲೇಜಿನ ಮ್ಯಾನೇಜ್ಮೆಂಟನ್ನು ತೊಂದರೆಗೆ ಸಿಲುಕಿಸುವ ಉದ್ದೇಶದಿಂದ ಅವರು ಹೀಗೆ ಮಾಡಿದ್ದಾರೆ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ನಿಜಸ್ಥಿತಿ ಹೀಗಿದ್ದರೆ ಜೋಸೆಫ್ ತಪ್ಪು ಮಾಡಿದ್ದಾರೆ ಎಂದು ಹೇಳಬೇಕಾಗುತ್ತದೆ. ತನಗೆ ಅನ್ನ ನೀಡುತ್ತಿರುವ ಸಂಸ್ಥೆಯನ್ನು ತೊಂದರೆಗೀಡುಮಾಡುವ ಅವರ ಇರಾದೆ ಒಪ್ಪತಕ್ಕದ್ದಲ್ಲ. ಬೇಕಿದ್ದರೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸಂಸ್ಥೆಯಿಂದ ಹೊರಬಂದು ನ್ಯಾಯಸಮ್ಮತ ವಿಧಾನದಲ್ಲಿ ಹೋರಾಡಬೇಕಾಗಿತ್ತು. ಮ್ಯಾನೇಜ್ಮೆಂಟ್ನಲ್ಲಿನ ಕೆಲವರ ಬಗೆಗೆ ಇದ್ದ ಬೇಸರದಿಂದಾಗಿ ಇಡೀ ಸಂಸ್ಥೆಯನ್ನೇ ತೊಂದರೆಗೀಡುಮಾಡಲು ಅವರು ಹೊರಟದ್ದು ಅಸಮರ್ಥನೀಯ. ಇಂಥವರು ನಮ್ಮ ಸುತ್ತಮುತ್ತ ಹಲವರಿದ್ದಾರೆ. ವಿದೇಶಮಂತ್ರಾಲಯದ ತನ್ನ ಮೇಲಧಿಕಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ರಾಷ್ಟ್ರದ ಹಲವು ರಹಸ್ಯಗಳನ್ನು ಪಾಕಿಸ್ತಾನೀ ಬೇಹುಗಾರರಿಗೆ ಒಪ್ಪಿಸಿದ ಐಎಫ್ಎಸ್ ಅಧಿಕಾರಿಣಿಯೊಬ್ಬರ ಉದಾಹರಣೆ ನಮ್ಮ ಮುಂದಿದೆ. ಹಾಗೆಯೇ, ಈ ದೇಶ ನೀಡುತ್ತಿರುವ ಎಲ್ಲ ಸವಲತ್ತುಗಳನ್ನೂ, ನಾಗರೀಕ ಹಕ್ಕುಗಳನ್ನೂ ಉಪಯೋಗಿಸಿಕೊಳ್ಳುತ್ತಲೇ ನಾಗರೀಕ ಹಕ್ಕುಗಳಿಗೆ ಸಂಪೂರ್ಣ ತಿಲಾಂಜಲಿ ಇಡುವ ಸಂಘಟನೆಗಗಳಿಗೆ ಬೆಂಬಲ ನೀಡುವ ಮಹನೀಯರು/ಮಹಿಳೆಯರು ನಮ್ಮಲ್ಲಿದ್ದಾರೆ. ಇಂಥವರ ಮುಂದೆ ಜೋಸೆಫ್ ಮಾಡಿದ್ದೇನು ಮಹಾ ಎಂಬ ಪ್ರಶ್ನೆ ಸಹಜ. ಆದರೆ, ಒಂದು ತಪ್ಪು ಮತ್ತೊಂದು ತಪ್ಪಿಗೆ ಸಮರ್ಥನೆಯಾಗಲಾರದು ಎನ್ನುವುದು ನನ್ನ ನಿಲುವು.
ಮತ್ತೆ ಕೆಲವರ ಪ್ರಕಾರ ಜೋಸೆಫ್ರ ಕೃತ್ಯದ ಹಿಂದೆ ಯಾವ ದುರುದ್ದೇಶವೂ ಇರಲಿಲ್ಲ. ಈ ವಾದವನ್ನು ಒಪ್ಪಲು ಸ್ವಲ್ಪ ಕಷ್ಟವಾಗುತ್ತದೆ. ಕೋಮು ವೈಷಮ್ಯ ಮತ್ತು ಮುಸ್ಲಿಂ ಮೂಲಭೂತವಾದ ಉಗ್ರರೂಪ ತಾಳುತ್ತಿರುವ ಈ ದಿನಗಳಲ್ಲಿ ಹೆಸರಿಲ್ಲದ ಹುಚ್ಚನೊಬ್ಬನಿಗೆ ಮಹಮದ್ ಎಂಬ ಹೆಸರಿಡುವುದು ಎಷ್ಟರ ಮಟ್ಟಿಗೆ ಉಚಿತ ಎಂಬ ಪರಿಜ್ಞಾನ ಐವತ್ತು ದಾಟಿದ ಪ್ರಾಧ್ಯಾಪಕರಿಗೆ ಇರಲಿಲ್ಲ ಎಂದರೆ ನಂಬಲು ಕಷ್ಟ. ಎರಡು ದಶಕಗಳಿಗೂ ಹಿಂದೆ ಈ ಇಸ್ಲಾಮಿಕ್ ಫಂಡಮೆಂಟಲಿಸಂ, ರಿಲಿಜಿಯಸ್ ಟೆರರಿಸಂ ಎಂಬ ಶಬ್ಧಗಳು ನಮ್ಮ ಕಿವಿಗಿನ್ನೂ ಹೆಚ್ಚಾಗಿ ಬೀಳದಿದ್ದ ದಿನಗಳಲ್ಲಿ ಪ್ರವಾದಿ ಮಹಮದ್ರಿಗೆ ಯಾವ ವಿಧದಲ್ಲೂ ಸಂಬಂಧಿಸಿರದ ಆದರೆ ಶಿರ್ಷಿಕೆಯಲ್ಲಿ "ಮಹಮದ್" ಎಂಬ ಹೆಸದನ್ನು ಉಪಯೋಗಿಸಿಕೊಂಡಿದ್ದ ಬಹುಮಾನಿತ ಮಲಯಾಳೀ ಕಥೆಯ ಇಂಗ್ಲಿಷ್ ಅನುವಾದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾಗಿ ಬೆಂಗಳೂರಿನಲ್ಲಿ ಉಂಟುಮಾಡಿದ ಅಶಾಂತಿ, ಹಿಂಸೆಗಳನ್ನು ಮರೆಯುವುದು ಹೇಗೆ?
ಈ ಹಿನ್ನೆಲೆಯಲ್ಲಿ ಮತ್ತೊಬ್ಬರ ಧಾರ್ಮಿಕ ನಂಬಿಕೆಗಳನ್ನು ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶರಹಿತವಾಗಿ ಘಾಸಿಗೊಳಿಸುವ ಕೆಲವರ ಸ್ವಭಾವದ ಬಗ್ಗೆ ಚಿಂತಿಸುವ ಅಗತ್ಯವಿದೆ. ಮುಸ್ಲಿಮರ ಧಾರ್ಮಿಕ ಭಾವನೆಗಳೊಡನೆ ಪ್ರೊ. ಜೊಸೆಫ್ ಚೆಲ್ಲಾಟವಾಡಿದ್ದಾರೋ ಇಲ್ಲವೋ ನಿಶ್ಚಿತವಾಗಿ ಹೇಳಲಾಗುವುದಿಲ್ಲ. ಆದರೆ ಹಾಗೆ ಚೆಲ್ಲಾಟವಾಡುವ ಮನೋಭಾವದ ಉದಾಹರಣೆಗಳು ಇತಿಹಾಸದುದ್ದಕ್ಕೂ ಸಿಗುತ್ತವೆ.
ಕೋಟ್ಯಾಂತರ ಜನ ಪೂಜ್ಯಭಾವನೆ ಹೊಂದಿರುವ ರಾಮ, ಜೀಸಸ್, ಮಹಮದ್ ಮುಂತಾದ ಅನೇಕ ಹೆಸರುಗಳನ್ನು ಲೇವಡಿ ಮಾಡುವ ಪ್ರವೃತ್ತಿ ಇಂದು ನಿನ್ನೆಯದಲ್ಲ. ಎಂಟು - ಒಂಬತ್ತು ಶತಮಾನಗಳ ಹಿಂದೆಯೇ ಕ್ರೂಸೇಡ್ಗಳ ಕಾಲದಲ್ಲಿ ಯೂರೋಪಿನ ಕ್ರಿಶ್ಚಿಯನ್ನರು ಪ್ರವಾದಿ ಮಹಮದ್ರನ್ನು Mahound ಎಂದು ಕರೆದು ಹೀಯಾಳಿಸಿದ್ದರು. ನಮ್ಮ ಕಾಲದಲ್ಲಿ ಸಲ್ಮಾನ್ ರಶ್ದೀ ತನ್ನ Satanic Verses ಕೃತಿಯಲ್ಲಿ ಈ ಪದಪ್ರಯೋಗ ಮಾಡಿ ವಿಶ್ವಾದ್ಯಂತ ಮುಸ್ಲಿಂ ಶ್ರದ್ಧಾಳುಗಳ ಮನ ನೋಯಿಸಿದರು. ನಿಜ ಹೇಳಬೇಕೆಂದರೆ ಜೀವಂತ ಹಾಗೂ ಮೃತ ಪ್ರಸಿದ್ಧರನ್ನು ಅವಹೇಳನ ಮಾಡುವುದು ಆರಂಭದಲ್ಲಿ ರಶ್ದಿಯ ಸ್ವಭಾವವೇ ಆಗಿಹೊಗಿತ್ತು. ತನ್ನ ಬೂಕರ್ ಪ್ರಶಸ್ತಿ ವಿಜೇತ Midnight's Childrenನಲ್ಲಿ ಆತ ದೇಶದ ಅರ್ಥವ್ಯವಸ್ಥೆಯನ್ನು ಆಗಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ತಲೆಗೂದಲಿಗೆ ಹೋಲಿಸಿ ಲೇವಡಿ ಮಾಡಿದ್ದರು. ಅರ್ಥವ್ಯವಸ್ಥೆಯಲ್ಲಿದ್ದ ಬಿಳೀಹಣದ ಪ್ರಮಾಣವನ್ನು ಇಂದಿರಾಗಾಂಧಿಯವರ ತಲೆಯ ಬಲಬದಿಯಲ್ಲಿದ್ದ ಸ್ವಲ್ಪ ಬಿಳೀ ಕೂದಲಿಗೂ ಕಪ್ಪುಹಣದ ಪ್ರಮಾಣವನ್ನು ಅವರ ತಲೆಯ ಉಳಿದೆಲ್ಲಾ ಭಾಗವನ್ನು ಆವರಿಸಿಕೊಂಡಿದ್ದ ಕಪ್ಪುಕೂದಲಿಗೂ ಹೋಲಿಸಿದ್ದರು. ಶ್ರೀಮತಿ ಗಾಂಧಿ ಕಾನೂನುಕ್ರಮದ ಬೆದರಿಕೆ ಹಾಕಿದರು. ನಂತರ ರಶ್ದಿ ಪಾಕಿಸ್ತಾನದ ಬಗೆಗಿನ ತನ್ನ Shame ಕಾದಂಬರಿಯಲ್ಲಿ ಜುಲ್ಫಿಕರ್ ಆಲಿ ಭುಟ್ಟೋನನ್ನು ಸಂಕೇತಿಸುವ ಪಾತ್ರವೊಂದು ಮಿಲಿಟರಿ ಸರ್ವಾಧಿಕಾರಿ ಜಿಯಾ ಉಲ್ ಹಕ್ನನ್ನು ಸಂಕೇತಿಸುವ ಪಾತ್ರವನ್ನು "ಕುರಾನಿನ ಮೇಲೆ ಎರಡಕ್ಕೆ ಮಾಡುವ ಹೇತ್ಲಾಂಡ ಧರ್ಮಲಂಡ" ಎಂದು ಬೈಯುವಂತೆ ಚಿತ್ರಿಸಿದ್ದರು. ಈ ಕೃತಿಯನ್ನು ಜಿಯಾ ನಿಷೇಧಿಸಿದ. ಆನಂತರ Satanic Versesನಲ್ಲಿ ಪ್ರವಾದಿ ಮಹಮದ್ ಮತ್ತು ಕುರಾನ್ ಬಗ್ಗೆ ಉಪಯೋಗಿಸಿದ ಪದಗಳು ಮತ್ತು ರೂಪಕಗಳನ್ನು ಇರಾನೀ ನಾಯಕ ಆಯತೊಲ್ಲಾ ಖೊಮೇನಿ ದೈವನಿಂದೆ (blasphemy) ಎಂದು ತೀರ್ಮಾನಿಸಿ ಅವರ ತಲೆದಂಡ ಕೇಳಿದ ನಂತರವೇ ರಶ್ದಿ ತನ್ನ ಚಾಳಿ ಬಿಟ್ಟದ್ದು. ಆದಾಗ್ಯೂ, ಇತರರು ಮಹಮದ್ರನ್ನು ಬರಹಗಳಲ್ಲಿ, ಕಾರ್ಟೂನ್ಗಳಲ್ಲಿ ಲೇವಡಿ ಮಾಡುವುದು ಪಶ್ಚಿಮದಲ್ಲಿ ಆಗೊಮ್ಮೆ ಈಗೊಮ್ಮೆ ನಡೆಯುತ್ತಲೇ ಇದೆ.
ಇಸ್ಲಾಂ ಅಥವಾ ಬೇರಾವುದೇ ಧರ್ಮದ ಸಂಕೇತಗಳಿಗೆ ಅವಮಾನವೆಸಗುವ, ಅವಮಾನಿಸಿದವರನ್ನು ರಕ್ಷಿಸಿ ತಾವು ಅಭಿವ್ಯಕ್ತಿ ಸ್ವಾತಂತ್ರದ ಸಮರ್ಥಕರೆಂದು ಘೋಷಿಸಿಕೊಳ್ಳುವ ಪಾಶ್ಚಿಮಾತ್ಯ ಸಮಾಜಗಳು ಮತ್ತು ಸರಕಾರಗಳು ಕ್ರೈಸ್ತ ಧರ್ಮದ ಸಂಕೇತಗಳಿಗೆ ಅವಮಾನವಾದಾಗ ಹೇಗೆ ವರ್ತಿಸುತ್ತವೆ ಎನ್ನುವುದು ಕುತೂಹಲಕರ. ಐವತ್ತರ ದಶಕದಲ್ಲಿ ಗ್ರೀಕ್ ಲೇಖಕ ನಿಕೋಸ್ ಕಝಾನ್ಸ್ತಾಕಿಸ್ ತನ್ನ ಕಾದಂಬರಿ "The Last Temptation of Jesus Christ"ನಲ್ಲಿ ಮೇರಿ ಮ್ಯಾಗ್ಡಲೀನಾ ಮತ್ತು ಜೀಸಸ್ ನಡುವಿನ ಶಾರೀರಿಕ ಸಂಬಂಧದ ಬಗ್ಗೆ ಬರೆದಾಗ ಅದು ಪಾಶ್ಚಿಮಾತ್ಯ ಕ್ರಿಶ್ಚಿಯನ್ ಸಮಾಜಗಳಲ್ಲಿ ಕಡು ಟೀಕೆಗೊಳಗಾಯಿತು. ಕಾದಂಬರಿಯನ್ನು ಬ್ರಿಟಿಷ್ ಸರಕಾರ ನಿಷೇಧಿಸಿತು! ತೀರಾ ಇತ್ತೀಚೆಗೆ ಡ್ಯಾನ್ ಬ್ರೌನ್ನ Da Vinci Code ಬಗೆಗೂ ಅಲ್ಲಲ್ಲಿ ಅಸಹನೆ ಹೊಗೆಯಾಡಿದ್ದುಂಟು.
ಈ ಸಂದರ್ಭದಲ್ಲಿ ಎಂ. ಎಫ್. ಹುಸೇನ್ರ ಚಿತ್ರಗಳ ಬಗೆಗೂ ಉಲ್ಲೇಖಿಸುವುದು ಅವಶ್ಯಕ. ತಮ್ಮ ಚಿತ್ರಗಳಲ್ಲಿ ಅವರು ಹಿಂದೂ ದೇವತೆಗಳನ್ನು ನಗ್ನವಾಗಿ ಚಿತ್ರಿಸಿರುವುದನ್ನು ತಪ್ಪಲ್ಲವೆಂದು ಭಾವಿಸಿದರೂ ಆ ಚಿತ್ರಗಳು ಸಂಕೇತಿಸುವ ವಿಚಾರಗಳು ಒಪ್ಪತಕ್ಕವಲ್ಲ. ಗಣಪತಿಯ ತಲೆಯ ಮೇಲೆ ಕುಳಿತಿರುವ ನಗ್ನ ಲಕ್ಷ್ಮಿಯ ಚಿತ್ರ, ಸಿಂಹ ಮತ್ತು ಪಾರ್ವತಿ ಇರುವ ಚಿತ್ರ, ರಾವಣ, ಸೀತೆ ಮತ್ತು ಹನುಮಂತ ಇರುವ ಚಿತ್ರಗಳು ಕೆಲವು ಉದಾಹರಣೆಗಳಷ್ಟೇ. ಇದೇ ಹುಸೇನ್ ತನ್ನ ತಾಯಿ, ಮಗಳು, ಮುಸ್ಲಿಂ ಅರಸರು, ಕವಿಗಳು ಮತ್ತು ತತ್ವಜ್ಞಾನಿಗಳನ್ನು ಪೂರ್ಣ ಉಡುಪಿನಲ್ಲಿ ಚಿತ್ರಿಸುತ್ತಾರೆ. ನಕರಾತ್ಮಕ ವಿಚಾರಗಳನ್ನು ಸೂಚಿಸುವಂತಹ ಹಿಂದು ದೇವತೆಗಳ ಚಿತ್ರಗಳ ಜತೆ ಆತ ನಗ್ನವಾಗಿ ಚಿತ್ರಿಸಿರುವುದು ನನಗೆ ತಿಳಿದಂತೆ ಒಬ್ಬ ಬ್ರಾಹ್ಮಣ ಮತ್ತು ಜರ್ಮನ್ ಸರ್ವಾಧಿಕಾರಿ ಹಿಟ್ಲರ್ನನ್ನು ಮಾತ್ರ. ಇದನ್ನು ತಪ್ಪು ಎನ್ನಲಾಗದು, ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವ ವಾದವನ್ನು ನಾನು ಒಪ್ಪುವುದಿಲ್ಲ. ಕಲೆ ಅಥವಾ ಸಾಹಿತ್ಯ ಮತ್ತೊಬ್ಬರ ನಂಬಿಕೆಗಳನ್ನು ಅವಮಾನಿಸುವ ಸ್ವಾತಂತ್ಯ್ರವನ್ನು ನಮಗೆ ನೀಡುವುದಿಲ್ಲ. ಇದು ಸ್ವಾತಂತ್ರ್ಯದ ದುರುಪಯೋಗ. ಹುಸೇನರ ತಪ್ಪಿನಲ್ಲಿ ಅವರನ್ನು ಸಮರ್ಥಿಸುವವರದೂ ಪಾಲಿದೆ.
ಇಡೀ ಪ್ರಕರಣದಲ್ಲಿ ನನಗೆ ತುಂಬಾ ಬೇಸರವನ್ನುಂಟುಮಾಡಿದ್ದೆಂದರೆ ಹುಸೇನರ ನಡವಳಿಕೆ. `ನನ್ನಿಂದ ತಪ್ಪಾಗಿದೆ' ಎಂಬ ಎರಡು ಪದಗಳು ಅವರ ಬಾಯಿಂದ ಬರಲೇ ಇಲ್ಲ. ಒಂದೇ ಒಂದು ಸಲ ಆ ಮಾತುಗಗಳನ್ನು ಅವರು ಉಚ್ಚರಿಸಿದ್ದರೂ ಸಾಕಿತ್ತು, ಈ ನಾಡು ಅವರನ್ನು ಕ್ಷಮಿಸಿ ಅಪ್ಪಿಕೊಳ್ಳುತ್ತಿತ್ತು. ಹಾಗೆ ಮಾಡುವ ಸುಸಂಸ್ಕೃತ ನಡವಳಿಕೆಗೆ ಬದಲಾಗಿ ಹುಸೇನ್ ಆಯ್ದುಕೊಂಡದ್ದು ದೇಶ ತೊರೆಯುವ ನಿರ್ಧಾರ. ದುಬೈನಲ್ಲಿ ಅವರು ತಮ್ಮ ಉಳಿದ ಆಯಸ್ಸನ್ನು ಸುರಕ್ಷಿತವಾಗಿಯೇ ಕಳೆದರು. ಯಾಕೆಂದರೆ ಇಸ್ಲಾಂಗೆ ಸಂಬಂಧಿಸಿದ ವ್ಯಕ್ತಿಗಳನ್ನು ಮತ್ತು ಸಂಕೇತಗಳನ್ನು ಅವರು ತಮ್ಮ ಚಿತ್ರಗಳಲ್ಲಿ ಅವಮಾನಿಸಲಿಲ್ಲ. ಹಿಂದೂ ಸಂಕೇತಗಳನ್ನು ಚಿತ್ರಿಸಿದ ಬಗೆಯಲ್ಲಿ ಇಸ್ಲಾಂ ಬಗ್ಗೆ ಒಂದೇ ಒಂದು ಚಿತ್ರ ರಚಿಸಿದ್ದರೂ ದುಬೈ ಇರಲಿ ಪ್ರಪಂಚದ ಯಾವುದೇ ಭಾಗದಲ್ಲಿ ಅವರು ನಿಶ್ಚಿಂತೆಯಿಂದ ಇರಲು ಸಾಧ್ಯವಾಗುತ್ತಿರಲಿಲ್ಲ.
ಇಲ್ಲಿ ಭಾರತಮಾತೆಯನ್ನು ಸೂಚಿಸುವ ಹುಸೇನ್ರ ಚಿತ್ರದ ಪ್ರಸ್ತಾಪವೂ ಅಗತ್ಯ. ಈ ಚಿತ್ರದಲ್ಲಿ ನಗ್ನ ಭಾರತಮಾತೆಯ ಜತೆ ಅಶೋಕ ಚಕ್ರದಂತಹ ರಾಷ್ಟ್ರೀಯ ಚಿನ್ಹೆಗಳೂ ನಕಾರಾತ್ಮಕ ಬಗೆಯಲ್ಲಿ ಉಪಯೋಗಿಸಲ್ಪಟ್ಟಿವೆ. ಭಾರತಮಾತೆ ಎಂಬ ದೇವತೆಯೇನೂ ಹಿಂದೂ ಧರ್ಮದಲ್ಲಿಲ್ಲ. ಕನ್ನಡಾಂಬೆ, ತೆಲುಗುತಲ್ಲಿ ಮುಂತಾದವುಗಳ ಹಾಗೆ ಇದೊಂದು ಕಲ್ಪನೆಯಷ್ಟೇ. ಆದರೂ ಈ ಕಲ್ಪನೆ ಕೋಟ್ಯಾಂತರ ಮಂದಿಯ ಮನದಲ್ಲಿ ಪವಿತ್ರ ಸ್ಥಾನ ಗಳಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ರಾಷ್ಟ್ರದ ಸ್ವಾತಂತ್ರ್ಯಹೋರಾಟದಲ್ಲಿ ಭಾರತಮಾತೆ ಎಂಬ ಒಂದು ಕಲ್ಪನೆ ಹೊಮ್ಮಿಸಿದ ಸ್ಪೂರ್ತಿ ಯಾವ ದೇವತೆಗೂ ಕಡಿಮೆಯಿಲ್ಲ. ಕೋಟ್ಯಾಂತರ ಜನ ಭಾರತಮಾತೆ ಎಂದರೆ ತಾಯಿ ಎಂದೇ ಭಾವಿಸುತ್ತಾರೆ. ಹೀಗಾಗಿ ಭಾರತಮಾತೆಯನ್ನು ಅವಮಾನಿಸುವುದೆಂದರೆ ಅಷ್ಟೂ ಜನರ ಮಾತೆಯರನ್ನು ಅವಮಾನಿಸಿದಂತೆ. ಆದರೆ ಹುಸೇನ್ರಂಥವರು ಮತ್ತವರ ಬೆಂಬಲಿಗರು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಹಾಗೆ ನೋಡಿದರೆ ಮಾತೆ ಅಥವಾ ತಾಯಿ ಎಂಬ ಪೂಜನೀಯ ವ್ಯಕ್ತಿಯನ್ನು ಹಿಂದಿದ್ದ ಉನ್ನತಸ್ಥಾನದಿಂದ ಕೆಳಗಿಳಿಸುವ ಪ್ರಕ್ರಿಯ ಇಂದಿನ ಜಗತ್ತಿನಲ್ಲಿ ಜಾರಿಯಲ್ಲಿರುವುದೂ ಕಾಣುತ್ತದೆ. ಇದಕ್ಕೆ ಸಂಬಂಧಿಸಿದಂತೆ ಹತ್ತು - ಹನ್ನೆರಡು ವರ್ಷಗಳ ಹಿಂದಿನ ಮಿಸ್ ಯೂನಿವರ್ಸ್ ಸ್ಪರ್ಧೆಯೊಂದು ನನಗೆ ನೆನಪಾಗುತ್ತದೆ. ಆ ಸ್ಪರ್ಧೆಯಲ್ಲಿ ರಾಣಿ ಜಯರಾಜ್ ಎಂಬ ಭಾರತೀಯ ಸುಂದರಿಯೊಬ್ಬಳು ಅಂತಿಮ ಸುತ್ತು ತಲುಪಿದ್ದಳು. ಅವಳಿಗೂ ಪ್ರಶಸ್ತಿಗೂ ಇದ್ದ ಅಂತರವೆಂದರೆ ಒಂದು ಪ್ರಶ್ನೆಗೆ ಉತ್ತರ ಮಾತ್ರ. "ನಿಮ್ಮ ಮೇಲೆ ಪ್ರಭಾವ ಬೀರಿದ ಮಹಿಳೆ ಯಾರು?" ಎಂಬ ತೀರ್ಪುಗಾರರ ಪ್ರಶ್ನೆಗೆ ಅಕೆ ಉತ್ತರಿಸಿದ್ದು ತನ್ನ ತಾಯಿ ಎಂದು. ಮಾರ್ಗರೇಟ್ ಥ್ಯಾಚರ್, ಇಂದಿರಾಗಾಂಧಿ, ಮದರ್ ಥೆರೆಸಾ, ಕೊನೇಪಕ್ಷ, ಲೇಡಿ ಡಯಾನಾರಂತಹ ಹೆಸರುಗಳನ್ನು ನಿರೀಕ್ಷಿಸಿದ್ದ ತೀರ್ಪುಗಾರರಿಗೆ ರಾಣಿಯ ಉತ್ತರ ಸಮ್ಮತವಾಗಲಿಲ್ಲ. ಆಕೆಗೆ ಕಿರೀಟ ಸಿಗಲಿಲ್ಲ. ಇದರರ್ಥ ವ್ಯಕ್ತಿಯೊಬ್ಬರಿಗೆ ತನ್ನ ತಾಯಿ ಮಾದರಿಯಾಗುವುದು ಸಾಧ್ಯವಿಲ್ಲವೇ? ಈ ದಿನಗಳಲ್ಲಿ ತಾಯಿ ಅಂತಹ ಯೋಗ್ಯತೆ, ಸಾಮರ್ಥ್ಯಗಳನ್ನು ಕಳೆದುಕೊಂಡಿದ್ದಾಳೆಯೇ? ಆ ತೀರ್ಪುಗಾರರು ತಮ್ಮ ತಾಯಂದಿರಿಂದ ಯಾವ ಸ್ಪೂರ್ತಿಯನ್ನೂ ಪಡೆಯಲಿಲ್ಲ ಅಂದರೆ ಉಳಿದರೂ ಪಡೆಯಲಿಲ್ಲವೇ? ಆ ಅಯೋಗ್ಯ ತೀರ್ಪುಗಾರರೂ, ಹುಸೇನರಂಥವರೂ ತಾಯಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ಳುವ ಅಗತ್ಯವಿದೆ. ತನ್ನ ತಾಯಿಯನ್ನು ವಸ್ತ್ರಸಹಿತವಾಗಿ ಗೌರವಪೂರ್ಣವಾಗಿ ಚಿತ್ರಿಸಿದಂತೇ ಮತ್ತೊಬ್ಬರ ತಾಯಿಯನ್ನೂ ಚಿತ್ರಿಸುವಂತಹ ಸುಸಂಸ್ಕೃತಿಯನ್ನು ಇಳಿವಯಸ್ಸಿನಲ್ಲಾದರೂ ಹುಸೇನ್ ಬೆಳೆಸಿಕೊಳ್ಳಬೇಕಾಗಿತ್ತು.
ರಾಮ, ಕೃಷ್ಣ, ಜೀಸಸ್, ಮೇರಿ, ಮಹಮದ್ ಮುಂತಾದವರ ಬಗ್ಗೆ ನಮಗೆ ಗೌರವ, ವಿಶ್ವಾಸ ಇಲ್ಲದಿದ್ದರೆ ನಷ್ಟವೇನೂ ಇಲ್ಲ. ಆದರೆ ಅವರನ್ನು ಮಹಾತ್ಮರು, ದೇವರು ಎಂದು ನಂಬಿ ಆರಾಧಿಸುವ ಕೋಟ್ಯಾಂತರ ಜನ ಈ ಭೂಮಿಯಲ್ಲಿದ್ದಾರೆ ಎಂಬ ಸತ್ಯವನ್ನು ನಾವು ಮರೆಯಬಾರದು. ಅವರ ನಂಬಿಕೆಗಳನ್ನು ಘಾಸಿಗೊಳಿಸುವ ಕೃತ್ಯವನ್ನು ನಾವು ಎಸಗಬಾರದು. ಅವರ ಭಾವನೆಗಳನ್ನು ಕೆರಳಿಸುವಂತಹದ್ದನ್ನು ನಾವು ಬರೆಯಬಾರದು, ಚಿತ್ರಿಸಬಾರದು. ಕಲೆ ಅಥವಾ ಸಾಹಿತ್ಯ ಅಂತಹ ಅಧಿಕಾರವನ್ನು ನಮಗೆ ಕೊಡುವುದಿಲ್ಲ ಎಂಬ ಪ್ರಜ್ಞೆ ನಮಗಿರಬೇಕು. ಇನ್ನೊಬ್ಬರ ಭಾವನೆಗಳನ್ನು ನೋಯಿಸದೇ ಮಹಾನ್ ಸಾಹಿತಿ, ಚಿತ್ರಕಾರರಾಗುವ ಹೇರಳ ಅವಕಾಶಗಳು ನಮಗಿವೆ.
ವಿಶ್ಲೇಷಣೆಯನ್ನು ಇನ್ನೂ ಒಂದು ದಿಕ್ಕಿನಲ್ಲಿ ಬೆಳೆಸುವುದಾದರೆ, ಎಲ್ಲ ದೇವದೇವತೆಯರು, ಮಹಾತ್ಮರು ಅಂತಿಮವಾಗಿ ಜೇಡಿಮಣ್ಣಿನ ಕಾಲಿನವರೇ. ಟೀಕೆಗೆ, ಅಪಹಾಸ್ಯಕ್ಕೆ, ಗಂಭೀರ ವಿಮರ್ಶೆಗೆ ಒಳಗಾಗಬಲ್ಲ ವಿಚಾರಗಳು ಪ್ರತಿಯೊಂದು ಧರ್ಮದಲ್ಲೂ ಇವೆ. ಅದನ್ನು ಅಲ್ಲಗಳೆಯಲಾಗುವುದಿಲ್ಲ. ವಾಲ್ಮೀಕಿ ಅದೆಷ್ಟೇ ಬಗೆಯಲ್ಲಿ ಸಮರ್ಥಿಸಿಕೊಂಡರೂ ರಾಮನ ಅನೇಕ `ಅನಾಚಾರ'ಗಳು ವಾಲ್ಮೀಕಿ ರಾಮಾಯಣದಲ್ಲೇ ಉಲ್ಲೇಖಿತವಾಗಿವೆ. ಪ್ರವಾದಿ ಮಹಮದ್ ಇಸ್ಲಾಂ ಧರ್ಮವನ್ನು ಬೋಧಿಸುವುದರ ಜತೆಗೇ ತಮ್ಮ ಖೊರೆಶ್ ಬುಡಕಟ್ಟಿನ ನೇತೃತ್ವದಲ್ಲಿ ಅರಬ್ ಸಾಮ್ರಾಜ್ಯವನ್ನು ಸ್ಥಾಪಿಸಲು ಹೊರಟಿದ್ದರು ಮತ್ತು ಅದಕ್ಕಾಗಿ ಈ ಆಧುನಿಕ ಯುಗದಲ್ಲಿ ಸಮ್ಮತವೆನಿಸದ ಮಾರ್ಗಗಳನ್ನು ಅನುಸರಿಸಲು ಅವರು ಹಿಂಜರಿಯಲಿಲ್ಲ ಎಂಬ ವಿಷಯ ಅವರ ಜೀವನವನ್ನು ಸಮಗ್ರವಾಗಿ ಅಭ್ಯಸಿಸಿದರೆ ತಿಳಿಯುತ್ತದೆ. ಹಾಗೆಯೇ ಜೀಸಸ್ ಕ್ರೈಸ್ಟ್ ಬೋಧಿಸಿದ್ದರಲ್ಲಿ ಹೊಸತೇನೂ ಇಲ್ಲ, ಆತ ಅದನ್ನೆಲ್ಲ ಕಲಿತದ್ದು ಲಡಾಖ್ನ ಬೌದ್ಧ ಆಶ್ರಮವೊಂದರಲ್ಲಿ ಎಂದು ಹೇಳಲೂ ಅವಕಾಶವಿದೆ. ಕನ್ಯೆಯೊಬ್ಬಳು ಪುರುಷಸಂಪರ್ಕವಿಲ್ಲದೇ ಗರ್ಭಧರಿಸಲು ಸಾಧ್ಯ ಎಂಬ ನಂಬಿಕೆಯನ್ನು ಈವರೆಗಿನ ವಿಜ್ಞಾನ ಮನ್ನಿಸುವುದಿಲ್ಲ. ಹೀಗೆಂದ ಮಾತ್ರಕ್ಕೆ ಕೋಟ್ಯಾಂತರ ಜನರಿಗೆ ಪೂಜನೀಯರಾಗಿರುವ ರಾಮ, ಮಹಮದ್ ಮತ್ತು ಜೀಸಸ್ ಮತ್ತಿತರ ಧಾರ್ಮಿಕ ಸಂಕೇತಗಳನ್ನು ಬರಹಗಳಲ್ಲಿ, ಚಿತ್ರಗಳಲ್ಲಿ ಅಥವಾ ಇನ್ನಾವುದೇ ವಿಧದಲ್ಲಿ ಅವಮಾನಿಸುವ ಕೀಳುಮಟ್ಟಕ್ಕೆ ನಾವು ಇಳಿಯಬಾರದು. ಮನುಷ್ಯಪ್ರೀತಿ, ಮಾನವತೆಯ ಕಾಳಜಿ ಇಲ್ಲದ ಕಲೆ, ಸಾಹಿತ್ಯಗಳಿಂದ ಒಳಿತಿಗಿಂತಲೂ ಕೆಡುಕೇ ಆಗುತ್ತದೆ.
Comments
ಉ: ಅಭಿವ್ಯಕ್ತಿ ಸ್ವಾತಂತ್ರ್ಯ: ಕೆಲವು ಚಿಂತನೆಗಳು
In reply to ಉ: ಅಭಿವ್ಯಕ್ತಿ ಸ್ವಾತಂತ್ರ್ಯ: ಕೆಲವು ಚಿಂತನೆಗಳು by venkatb83
ಉ: ಅಭಿವ್ಯಕ್ತಿ ಸ್ವಾತಂತ್ರ್ಯ: ಕೆಲವು ಚಿಂತನೆಗಳು
ಉ: ಅಭಿವ್ಯಕ್ತಿ ಸ್ವಾತಂತ್ರ್ಯ: ಕೆಲವು ಚಿಂತನೆಗಳು
ಉ: ಅಭಿವ್ಯಕ್ತಿ ಸ್ವಾತಂತ್ರ್ಯ: ಕೆಲವು ಚಿಂತನೆಗಳು
In reply to ಉ: ಅಭಿವ್ಯಕ್ತಿ ಸ್ವಾತಂತ್ರ್ಯ: ಕೆಲವು ಚಿಂತನೆಗಳು by makara
ಉ: ಅಭಿವ್ಯಕ್ತಿ ಸ್ವಾತಂತ್ರ್ಯ: ಕೆಲವು ಚಿಂತನೆಗಳು
ಉ: ಅಭಿವ್ಯಕ್ತಿ ಸ್ವಾತಂತ್ರ್ಯ: ಕೆಲವು ಚಿಂತನೆಗಳು