ಮನುಷ್ಯ, ಮಾನವತೆ ಮತ್ತು ಧರ್ಮ

ಮನುಷ್ಯ, ಮಾನವತೆ ಮತ್ತು ಧರ್ಮ

ನಿನ್ನೆ ಪ್ರಕಟಿಸಿದ "ಅಭಿವ್ಯಕ್ತಿ ಸ್ವಾತಂತ್ರ್ಯ: ಕೆಲವು ಚಿಂತನೆಗಳು" ಲೇಖನಕ್ಕೆ ಮೂಲ ನನ್ನ "ಬೊಳ್ಳೊಣಕಯ್ಯ" ಸಂಕಲನದಲ್ಲಿನ "ಗತ - ಗತಿ" ನೀಳ್ಗತೆಯ  ಒಂದು ಭಾಗ ಎಂದು ಸಂಪದಿಗ ಮಿತ್ರ  ಸಪ್ತಗಿರಿವಾಸಿ ಅವರ ಪ್ರತಿಕ್ರಿಯೆಗೆ ಉತ್ತರವಾಗಿ ಹೇಳಿದ್ದೆ.   ಕಥೆಯ ಆ ಭಾಗವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ, ಲೇಖನದ ಪೂರಕ ಓದಿಗೆಂದು.  (ಕಥೆಯ ಮತ್ತೊಂದು ಭಾಗವನ್ನು "ದೇವರ ಜಾಡಿನಲ್ಲಿ..." ಎಂಬ ಶಿರ್ಷಿಕೆಯಲ್ಲಿ ಕಳೆದ ವಾರ ಪ್ರಕಟಿಸಿದ್ದುದು ನಿಮಗೆ ನೆನಪಿರಬಹುದು)

 

...ಪ್ರಿನ್ಸಿಪಾಲರೂ ಡಿಂಡಿಮಾವನೂ ನನಗೆ ಮನೆ ಹುಡುಕಿಕೊಟ್ಟ ಎರಡೇ ದಿನಕ್ಕೆ ಲಲಿತೆ ಪುಟ್ಟಿಯೊಡನೆ ಕೊಳ್ಳೇಗಾಲಕ್ಕೆ ಬಂದು ಮನೆಯನ್ನು ಓರಣಗೊಳಿಸಿ ಅಡಿಗೆಮನೆಯನ್ನು ಅಣಿಮಾಡಿಕೊಟ್ಟುಹೋದಳು.  ನಾನೇನೂ ಪಾಕಪ್ರವೀಣನಲ್ಲ. ಬಿಡುವಾದಾಗಲೆಲ್ಲಾ ಲಲಿತೆಯ ಜತೆ ಅಡಿಗೆಮನೆಯಲ್ಲಿ ಕಳೆಯುವ ನಾನು ಅವಳು ಮಾಡುವುದನ್ನೆಲ್ಲಾ ವರ್ಷಗಳಿಂದ ನೋಡುತ್ತಾ ಬಂದಿದ್ದೆ.  ಆ ನೆನಪುಗಳ ಆಧಾರದ ಮೇಲೆ ತಕ್ಕಮಟ್ಟಿಗೆ ಅನ್ನ, ಒಂದೆರಡು ಬಗೆಯ ಸಾರು, ತಿಳಿಸಾರು, ಉಪ್ಪಿಟ್ಟು ಮಾಡಿಕೊಳ್ಳುತ್ತೇನೆ.  ವಾರದಲ್ಲಿ ಒಂದೆರಡು ದಿನ ಪ್ರೊಫೆಸರರ ಮನೆಯಲ್ಲೇ ಭರ್ಜರಿ ಭೋಜನ ನಡೆದುಹೊಗುವುದರಿಂದ ಹಾಗೂ ಪ್ರತೀವಾರಾಂತ್ಯದಲ್ಲಿ ಮತ್ತು ರಜಾದಿನಗಳಲ್ಲಿ ಲಲಿತೆಯ ಕೈಯಡಿಗೆ ಸವಿಯುವುದರಿಂದ ಊಟದ ಬಗ್ಗೆ ನನ್ನ ಯಾವ ಕಂಪ್ಲೇಂಟೂ ಇಲ್ಲ.

ನಾನಿರುವುದು ಕ್ರಿಶ್ಚಿಯನ್ ಸ್ಟ್ರೀಟ್‌ನಲ್ಲಾದರೂ ಇಲ್ಲಿರುವವರೆಲಾ ಕ್ರಿಶ್ಚಿಯನ್ನರೇನಲ್ಲ.  ಬ್ರಾಹ್ಮಣ ಲಿಂಗಾಯತರನ್ನು ಬಿಟ್ಟು ಸರಿಸುಮಾರು ಬೇರೆಲ್ಲರೂ ಇದ್ದರು.  ನನಗೆ ಹೆಚ್ಚು ಪರಿಚಯವಾಗಿದ್ದ ಪಕ್ಕದ ಮನೆಯವರು ಗಂಗಡಿಕಾರ ಗೌಡರು.  ಹೀಗಾಗಿ ಸುತ್ತಲಿನ ಕ್ರಿಶ್ಚಿಯನ್ನರ ಜತೆ ನನ್ನ ಸಂಬಂಧ ಅಷ್ಟಕ್ಕಷ್ಟೇ.  ಇದ್ದುದ್ದನ್ನು ಇದ್ದ ಹಾಗೇ ಹೇಳಬೇಕೆಂದರೆ ಕ್ರಿಶ್ಚಿಯನ್ನರ ಬಗ್ಗೆ ನನಗೆ ಅಂತಹ ಒಳ್ಳೆಯ ಅಭಿಪ್ರಾಯವೇನೂ ಇರಲಿಲ್ಲ.  ಕೆಳವರ್ಗದ ಬಡಜನರಿಗೆ ಊಟಬಟ್ಟೆ, ನೌಕರಿಯ ಅಮಿಷವೊಡ್ಡಿ ಇವರು ಮಾಡುತ್ತಿರುವ ಮತಾಂತರದ ದಾಂಧಲೆಯ ಬಗ್ಗೆ ನನಗೆ ಅಸಮ್ಮತಿ ಇತ್ತು.  ಬುಡಕಟ್ಟುಗಳ ಜನರೇ ಅಧಿಕವಾಗಿರುವ ಪೂರ್ವದ ನಾಗಾಲ್ಯಾಂಡ್, ಮಿಜೋರಾಂ ಮುಂತಾದ ಹಲವು ರಾಜ್ಯಗಳ ಜನರನ್ನು ಸಾರಾಸಗಟಾಗಿ ಮತಾಂತರಗೊಳಿಸಿದ್ದಲ್ಲದೇ ಅದೇ ಕೆಲಸವನ್ನು ಇತ್ತೀಚೆಗೆ ಗುಜರಾತ್ ಮತ್ತು ಒರಿಸ್ಸಾದಲ್ಲೂ ಮಾಡಹೊರಟು ಈ ಮಿಷನರಿಗಳು ಸೃಷ್ಟಿಸುತ್ತಿರುವ ಗೊಂದಲಗಳು ನನಗೆ ತುಂಬಾ ಬೇಸರವನ್ನುಂಟುಮಾಡಿದ್ದವು.  ತಾವೇ ಏನೋ ಕಿತಾಪತಿ ಮಾಡಿ ನಂತರ ಹಿಂದೂ ಸಂಘಟನೆಗಳು ತಿರುಗಿಬಿದ್ದು ನಾಕು ಇಕ್ಕಡಿಸಿದಾಗ ಅಲ್ಪಸಂಖ್ಯಾತ ಹಾಗೂ ಶಾಂತಿಪ್ರಿಯ ಕ್ರಿಶ್ಚಿಯನ್ನರ ಮೇಲೆ ಬಹುಸಂಖ್ಯಾತ ಮತಾಂಧ ಹಿಂದೂಗಳ ದೌರ್ಜನ್ಯ ಎಂದು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹುಯಿಲೆಬ್ಬಿಸುವ ಇವರ ಕುಟಿಲಬುದ್ಧಿಯ ಬಗ್ಗೆ ನನಗೆ ವಿಪರೀತ ಸಿಟ್ಟಿತ್ತು.  ಇವರು ಆರೋಪಿಸುವ ಹಾಗೆ ಹಿಂದೂಗಳು ಮತಾಂಧರೇ ಆಗಿದ್ದಿದ್ದರೆ ಈ ದೇಶದಲ್ಲಿ ಮಾರಿಗೊಂದು ಚರ್ಚು ಮಸೀದಿ ತಲೆಯೆತ್ತಲಾಗುತ್ತಿತ್ತೇ ಎಂಬುದು ನನ್ನ ಪ್ರಶ್ನೆ.

ನನ್ನ ಈ ಕ್ರಿಶ್ಚಿಯನ್ ವಿರೋಧಿ ಭಾವನೆಗಳಿಂದಾಗಿ ಮೊದಮೊದಲು ಪ್ರೊಫೆಸರ್ ಜೋಸೆಫ್‌ರನ್ನು ಹೆಚ್ಚು ಹಚ್ಚಿಕೊಳ್ಳಬಾರದು ಅಂದುಕೊಂಡಿದ್ದೆ.  ಅವರು ನಗುನಗುತ್ತಾ ಸ್ನೇಹದಿಂದ ಮಾತಾಡಿದರೆ ನಾನು ಮುಜುಗರದಿಂದ ಒಂದೆರಡು ಮಾತಷ್ಟೇ ಆಡುತ್ತಿದ್ದೆ.  ಅದರಲ್ಲೂ ಬಾರಿಬಾರಿಗೆ ಅವರ ಮನೆಗೆ ಊಟಕ್ಕೆಂದು ಹೋಗುವಾಗ ತುಂಬಾ ಇರಿಸುಮುರಿಸಾಗುತ್ತಿತ್ತು.  ನನ್ನನ್ನು ಮತಾಂತರಗೊಳಿಸುವ ಹುನ್ನಾರವೇನಾದರೂ ಈ ಮನುಷ್ಯನಿಗಿರಬಹುದೇ ಎಂದು ಅನುಮಾನವನ್ನೂ ಪಟ್ಟಿದ್ದೆ.  ಆದರೆ ಅವರ ಬಗ್ಗೆ ನನ್ನ ಪೂರ್ವಗ್ರಹಗಳೆಲ್ಲವೂ ಆಧಾರರಹಿತ ಎಂದು ಒಂದುದಿನ ಮನದಟ್ಟಾಗಿಹೋಗಿ ಇದುವರೆಗೂ ನನ್ನ ಕಲ್ಪನೆಗೂ ನಿಲುಕದಿದ್ದ ಅವರ ವ್ಯಕ್ತಿತ್ವ ಅನಿರೀಕ್ಷಿತವಾಗಿ ನನ್ನೆದುರು ಅನಾವರಣಗೊಂಡಿತು.

ಸ್ವಲ್ಪ ಸಲಿಗೆ ಬೆಳೆಯುತ್ತಿದ್ದಂತೇ ಹೀಗೇ ಮಾತಿನ ಮಧ್ಯೆ ನನ್ನ ಮನದಲ್ಲಿದ್ದುದನ್ನು ಚೂರೂಚೂರೇ ಹೊರಹಾಕತೊಡಗಿದ್ದೆ.  ಒಂದು ಸಂಜೆ ಹೀಗೇ ಮರಡೀಗುಡ್ಡದ ಮೆಟ್ಟಲಿಳಿಯುತ್ತಿದ್ದಾಗ "ಡಾ ವಿಂಚಿ ಕೋಡ್" ಕಾದಂಬರಿಯ ಬಗ್ಗೆ ಮಾತು ಬಂತು.  ಕೆಲವು ಕ್ರಿಶ್ಚಿಯನ್ ಸಂಘಟನೆಗಳು ವ್ಯಕ್ತಪಡಿಸುತ್ತಿರುವ ಪ್ರತಿರೋಧದ ಬಗ್ಗೆ, ಜೀಸಸ್ ಮತ್ತು ಮೇರಿ ಮ್ಯಾಗ್ಡಲೀನಾ ನಡುವಿನ ಸಂಬಂಧದ ಬಗ್ಗೆ ಡ್ಯಾನ್ ಬ್ರೌನ್ ಬರೆದಿರುವುದನ್ನು "blasphemy" ಅಥವಾ "ದೈವನಿಂದೆ" ಎಂದು ಹುಯಿಲೆಬ್ಬಿರುತ್ತಿರುವ ಬಗ್ಗೆ ಮಾತು ಬಂದಾಗ ನನ್ನ ಪ್ರಯತ್ನವನ್ನೂ ಮೀರಿ ನನ್ನ ಕ್ರಿಶ್ಚಿಯನ್ ವಿರೋಧಿ ಅನಿಸಿಕೆಗಳು ಹೊರಬಂದುಬಿಟ್ಟವು.  ಈಗ ದೈವನಿಂದೆಯ ಮಾತಾಡುತ್ತಿರುವ ಈ ಸಂಘಟನೆಗಳೇ ಹಿಂದೂ ಮುಸ್ಲಿಂ ಮುಂತಾದ ಅನ್ಯಧರ್ಮಗಳ ಬಗ್ಗೆ ಅವಹೇಳನಕಾರಿಯಾದ ಮಾತುಗಳನ್ನು ಶತಮಾನಗಳಿಂದಲೂ ಆಡುತ್ತಿರುವುದನ್ನು ಪ್ರಸ್ತಾಪಿಸಿದೆ.  ಮಾತಿಗೆ ಮಾತು ಸೇರಿಕೊಳ್ಳುತ್ತಾ ಹೋಗಿ ಮತಾಂತರದ ಅವಾಂತರಗಳ ಬಗ್ಗೆ ಸ್ವಲ್ಪ ಖಾರವಾದ ಮಾತುಗಳನ್ನೇ ಆಡಿಬಿಟ್ಟೆ.  ಅವರಿಗೆ ಚುಚ್ಚಿದಂತಾಯಿತೇನೋ.  ಸ್ವಲ್ಪ ಹೊತ್ತು ಮೌನವಾಗಿಬಿಟ್ಟರು.  ಆಮೇಲೆ ಏನೋ ನಿರ್ಧರಿಸಿದವರಂತೆ "ಇಲ್ಲಿ ಸ್ವಲ್ಪ ಹೊತ್ತು ಕೂರೋಣ" ಎನ್ನುತ್ತಾ ಬಂಡೆಯೊಂದರ ಮೇಲೆ ಚಕ್ಕಳಬಕ್ಕಳ ಹಾಕಿ ಕೂತೇಬಿಟ್ಟರು.  ನಾನು ಕೂರುವುದನ್ನೇ ಕಾದಿದ್ದು ಮಾತಿಗಾರಂಭಿಸಿದರು.

"ಹುಟ್ಟಿದಾಗ ನಾನೇನಾಗಿದ್ದೆ ಅನ್ನೋದನ್ನ ಈ ಹರಿಜನ, ಶೆಡ್ಯೂಲ್ಡ್ ಕ್ಯಾಸ್ಟ್ ಅನ್ನೋ ಸೊಫಿಸ್ಟಿಕೇಟೆದ್ ಹಣೆಪಟ್ಟಿಗಳನ್ನ ಬಿಟ್ಟು ಈ ನೆಲದ ಭಾಷೆಯಲ್ಲೇ ಹೇಳೋದಾದ್ರೆ ಒಬ್ಬ ಹೊಲೆಯ.  ಈ ಸಮಾಜ ನನಗಿಟ್ಟ ಹೆಸರು ಅದು.  ಹೊಲೆಯನಾಗಿರೋದು ಅಂದ್ರೆ ಅದು ತೀರಾ ಅವಮಾನಕರ ಅನ್ನೂ ಭಾವನೆಯನ್ನ ನನ್ನಲ್ಲಿ ತುಂಬಿದ್ದೂ ಈ ಸಮಾಜವೇ.  ಕ್ರಿಶ್ಚಿಯಾನಿಟಿಗೆ ಕನ್ವರ್ಟ್ ಆದದ್ದು ನಮ್ಮಪ್ಪ.  ತನ್ನ ಜೊತೆ ಸಾರಾಸಗಟಾಗಿ ಇಡೀ ಕುಟುಂಬವನ್ನೇ ಶಿಲುಬೆಯ ಮುಂದೆ ಮಂಡಿಯೂರಿಸಿಬಿಟ್ಟ.  ಚರ್ಚ್‌ನೋರು ಕೊಡೋ ಗೋಧಿನುಚ್ಚು, ಹಾಲಿನಪುಡಿಗಾಗಿ ಕನ್ವರ್ಟ್ ಆದದ್ದಲ್ಲ ನಾವು.  ತನ್ನ ಮಕ್ಕಳು ನಾಕಕ್ಷರ ಕಲೀಲಿ ಅನ್ನೋ ಒಂದೇ ಒಂದು ಆಸೆಯಿಂದ ನಮ್ಮಪ್ಪ ಇದನ್ನ ಮಾಡಿದ್ರು.  ಅದರ ಹಿಂದೆ ಒಂದು ದೊಡ್ಡ ಕಥೆಯೇ ಇದೆ.  ನೋಡಿ, ನಮ್ಮಪ್ಪಂಗೆ ನಾವು ಒಟ್ಟು ಐದುಜನ ಮಕ್ಕಳು, ಮೂರು ಗಂಡು ಎರಡು ಹೆಣ್ಣು, ನಾನೇ ಕೊನೇವನು.  ಎಲ್ಲರಿಗಿಂತ ದೊಡ್ಡೋನು ನಮ್ಮಣ್ಣ.  ಶ್ಯಾನುಭೋಗರ ಗದ್ದೆಗಳನ್ನ ಅಪ್ಪ ಗೇಣಿಗೆ ಮಾಡ್ತಿದ್ದ.  ಅದು ಎರಡು ಮೂರು ಜನರೇಷನ್‌ಗಳಿಂದ ನಡೆದುಕೊಂದು ಬಂದಿತ್ತಂತೆ.  ಅಪ್ಪನ ಜೊತೆ ಅವ್ವ, ನಾವು ಮಕ್ಕಳೂ ಸಹಾ ಶ್ಯಾನುಭೋಗರ ಗದ್ದೆಗಳಲ್ಲಿ ದುಡೀತಾ ಇದ್ವಿ.  ಒಂದ್ಸಲ ಈ ಕಡೇಲೆಲ್ಲಾ ತುಂಬಾ ಬರಗಾಲ ಬಂದಿತ್ತು.  ಆಗ ಜನ ಕೆಲಸ ಹುಡುಕ್ಕೊಂಡು ಬೇರೆಬೇರೆ ಕಡೆ ಹೊರಟುಹೋದ್ರು.  ಒಂದಷ್ಟು ಜನ ಈ ಕಡೆ ಈರೋಡು ಸತ್ಯಮಂಗಲ ಅಂತ ಹೋದ್ರೆ ಇನ್ನೊಂದಷ್ಟು ಜನ ರಾಮನಗರ, ಅದನ್ನೂ ದಾಟಿ ಶಿಡ್ಲಘಟ್ಟ ಅಲ್ಲಿಗೆಲ್ಲಾ ಹೊರಟೋದ್ರು.  ಅಂಥೋರ ಗುಂಪಿಗೆ ಸೇರ್ಕೊಂಡು ನಮ್ಮಣ್ಣನೂ ಶಿಡ್ಲಘಟ್ಟಕ್ಕೆ ಹೋಗಿ ಅಲ್ಲೊಂದು ಸಿಲ್ಕ್ ಫಿಲೇಚರ್‌ನಲ್ಲಿ ಕೆಲಸಕ್ಕೆ ಸೇರಿಕೊಂಡ.  ಎರಡುವಾರ, ತಿಂಗಳಿಗೆ ತಪ್ಪದೇ ಅಪ್ಪನಿಗೆ ಮನಿಯಾರ್ಡರ್ ಮಾಡ್ತಾ ಇದ್ದ.  ಒಂದ್ಸಲ ಮನಿಯಾರ್ಡರ್ ಬಂದ ಮಾರನೇ ದಿನವೇ ಅಪ್ಪನಿಗೊಂದು ಇನ್‌ಲ್ಯಾಂಡ್ ಲೆಟರ್ ಬಂತು.  ಪೋಸ್ಟ್‌ಮ್ಯಾನ್ ಸುಬ್ಬಣ್ಣ ಬಾಗಿಲ ತಡಿಕೆಗೆ ಸಿಕ್ಕಿಸಿಹೋಗಿದ್ದ.  ನಮ್ಮ ಮನೆಯಲ್ಲಿರಲಿ ಇಡೀ ಕೇರಿನಲ್ಲೇ ಯಾರಿಗೂ ಓದೋಕೆ ಬರ್ತಾ ಇರ್ಲಿಲ್ಲ.  ಅಪ್ಪ ಸೀದಾ ಶ್ಯಾನುಭೋಗರ ಮನೆಗೆ ಹೋದ.  ಅಲ್ಲಿ ಅವರಿರ್ಲಿಲ್ಲ.  `ಎಲ್ಲೋ ಹೋಗಿದ್ದಾರೆ, ಇನ್ನೇನು ಬರ್ತಾರೆ, ಅವ್ರು ಬರೋವರ್ಗೆ ಸ್ವಲ್ಪ ಈ ಸೌದೆ ಸೀಳಿಹಾಕೋ ಸಿದ್ದಾ' ಅಂತ ಶ್ಯಾನುಭೋಗರ ಎರಡನೇ ಹೆಂಡತಿ, ವಯಸ್ಸಿನಲ್ಲಿ ಅಪ್ಪನಿಗಿಂತ ಕಾಲು ಶತಮಾನದಷ್ಟು ಚಿಕ್ಕೊವ್ಳು, ಒಂದು ಗೊಬ್ಬಳಿ ದಿಮ್ಮಿ ತೋರಿಸಿದ್ಲು.  ಅದನ್ನ ಸೀಳಿ ಮುಗಿಸಿದ ಮೇಲೆ ಇನ್ನೊಂದು ತೋರಿಸಿದ್ಲು.  ಮೂರು ನಾಕು ಗಂಟೆ ಕಳೀತು.  ಶ್ಯಾನುಭೋಗರು ಬರಲೇ ಇಲ್ಲ, ಅಪ್ಪ ಸೌದೆ ಸೀಳ್ತಾನೆ ಇದ್ದ.  ಎಲ್ಲಾ ಮುಗಿಯೋ ಹೊತ್ತಿಗೆ ಕತ್ತಲಾಗಿಹೋಗಿತ್ತು.  ಆಗ ಹೊರಗೆ ಬಂದ ಶ್ಯಾನುಭೋಗರ ಹೆಂಡತಿ `ಅಯ್ಯೋ ಮರೆತೇ ಹೋಗಿತ್ತು ಕಣೋ ಸಿದ್ದಾ.  ಶ್ಯಾನುಭೋಗರು ಹೋಗಿರೋದು ಮೈಸೂರಿಗೆ.  ಬರೋದು ನಾಳೆ ಸಾಯಂಕಾಲ.  ಮರೆತೇಬಿಟ್ಟಿದ್ದೆ, ಹಾಳು ಮರೆವು.  ಎಲ್ಲೀ ಆ ನಿನ್ ಕಾಗದಾನ ನಾನೇ ಓದಿಕೊಡ್ತೀನಿ ಕೊಡು ಅಂತ ಅಂದಳಂತೆ.  ಅಪ್ಪ ನಡುವಿಗೆ ಸಿಕ್ಕಿಸಿಕೊಂಡಿದ್ದ ಕಾಗದವನ್ನ ತೆಗೆದರೆ ಅದಂತೂ ಬೆವರಿನಲ್ಲಿ ತೊಯ್ದು ಮುದ್ದೆಯಾಗಿಹೋಗಿದೆ!  `ಅಯ್ಯೋ ಕೊಳಕು!  ಛೀ, ನಾ ಹ್ಯಾಗೆ ಮುಟ್ಟಲಿ ಅದನ್ನ?  ನೀನೆ ಅಗಲಿಸಿ ಹಿಡಕೋ, ನಾನು ಓದುತೀನಿ' ಅಂದ್ಲು ಆಯಮ್ಮ.  ಅಪ್ಪ ಅದನ್ನ ಬಿಡಿಸೋಕೆ ಹೋದ.  ಬಿಡಿಸಿದ್ರೆ ಅಲ್ಲೇನಿದೆ?  ಅಕ್ಷರಗಳೆಲ್ಲಾ ಕಲಸಿಹೋಗಿ ಬರೀ ಇಂಕು ಮೆತ್ತಿದ ಹಾಗಿದೆ.  ಓದಕ್ಕಾಗಲ್ಲ ಹೋಗು ಅಂತ ಕೈಯಾಡಿಸಿಬಿಟ್ಲು ಆಯಮ್ಮ.  ಅಪ್ಪ ಜೋಲುಮೋರೆ ಹಾಕ್ಕೊಂಡು ಮನೆಗೆ ಬಂದ.  ವಾರ ಕಳೆಯೋಹೊತ್ತಿಗೆ ಅಣ್ಣನ ಜೊತೆ ಶಿಡ್ಲಘಟ್ಟಕ್ಕೆ ಹೋಗಿದ್ದ ಕರುಗಣ್ಣ ಬಂದ.  ವಾಂತಿಭೇದಿಯಾಗಿ ಹತ್ತು ದಿನಗಳ ಹಿಂದೆಯೇ ಅಣ್ಣ ಸತ್ತುಹೋದ ಕಥೆ ಹೇಳಿದ.  ಅಣ್ಣನ ಸಾಮಾನುಗಳಿದ್ದ ಒಂದು ಪುಟ್ಟ ಗಂಟನ್ನ ನಮ್ಮ ಮುಂದಿಟ್ಟ.  ನಮ್ಮ ಮ್ಯಾನೇಜರ್ ಕೈಲಿ ಕಾಗದ ಬರೆಸಿ ಹಾಕಿದ್ದೆ.  ಸಿಗಲಿಲ್ವಾ ಅಂದ.

"ಆವತ್ತು ಅಪ್ಪ ಅವ್ವ ಅತ್ತಷ್ಟು ಇನ್ಯಾವತ್ತು ಅತ್ತದ್ದನ್ನೂ ನಾ ನೋಡಿಲ್ಲ.  ಮಾರನೇ ಸಾಯಂಕಾಲ ನಮ್ಮನ್ನೆಲ್ಲಾ ಕರಕೊಂಡು ಇದೇ ಕೊಳ್ಳೇಗಾಲದ ರೋಮನ್ ಕ್ಯಾಥೋಲಿಕ್ ಚರ್ಚಿಗೆ ಬಂದ.  ಫಾದರ್ ಆಗಸ್ಟಿನ್ ಆರೋಗ್ಯಸ್ವಾಮಿ ಅವರ ಮುಂದೆ ಅಡ್ಡಬೀಳಿಸಿದ.  ನನ್ ಮಕ್ಕಳಿಗೆ ನಾಕಕ್ಷರ ಕಲಿಸಿ ವಿದ್ಯೆಬುದ್ಧಿ ಕೊಡಿ ಸ್ವಾಮಿಯೋರೇ' ಅಂತ ಗೋಳೋ ಅಂತ ಅತ್ತುಬಿಟ್ಟ.  ಅಷ್ಟೇ, ನಾವೆಲ್ಲಾ ಕ್ರಿಶ್ಚಿಯನ್ ಆಗಿಹೋದ್ವಿ.  ಚರ್ಚಿನ ಶಾಲೆಗೆ ಆಗ ಬಸ್ಸು ವ್ಯಾನು ಅಂತೇನೂ ಇರ್ಲಿಲ್ಲ.  ಇದ್ದದ್ದು ಎರಡು ಎತ್ತಿನ ಗಾಡಿಗಳು.  ಒಂದರ ಜವಾಬ್ದಾರಿ ಅಪ್ಪನಿಗೆ ಬಂತು.  ಅವ್ವನಿಗೆ ಹಾಸ್ಟೆಲ್ ಮಕ್ಕಳಿಗೆ ಅಡಿಗೆ ಮಾಡೋ ಕೆಲಸ.  ನನ್ನ ಮೂವರು ಅಕ್ಕಂದಿರಿಗೂ ಹೊಲಿಗೆ ತರಬೇತಿ, ಜತೆಗೇ ಕಲಿತಷ್ಟು ಅಕ್ಷರ.  ನನ್ನನ್ನ ಅಲ್ಲೇ ಚರ್ಚಿನ ಶಾಲೆಯಲ್ಲೇ ಒಂದನೇ ಕ್ಲಾಸಿಗೆ ಸೇರಿಸಿದ್ರು.  ನನಗಾಗ ಒಂಬತ್ತು ವರ್ಷ."

ನಾನು ದಂಗಾಗಿಹೋಗಿದ್ದೆ.  ಆತ ಮುಂದುವರೆಸಿದರು:

"ನಂಗೆ ಎಜುಕೇಷನ್ ಸಿಕ್ಕಿದ್ದು ಕ್ರಿಶ್ಚಿಯನ್ನರಿಂದ.  ನನ್ನದೇ ನೆಲದ ಜನ ಏನೇನನ್ನ ನನ್ನಿಂದ ದೂರ ಇಟ್ಟಿದ್ರೋ ಅದನ್ನೆಲ್ಲಾ ಈ ಜನ ನಂಗೆ ಕೊಟ್ರು.  ನನ್ನಂಥಾ ಕೋಟ್ಯಾಂತರ ಮಂದಿ ಶೋಷಿತರು ಈಗ ಮಾನವಾಗಿ ಅನ್ನ ಬಟ್ಟೆ ಸಂಪಾದಿಸಿಕೊಳ್ತಾ ಇರೋದು ಈ ಕ್ರಿಶ್ಚಿಯನ್ ಮಿಷನರಿಗಳು ಸ್ಕೂಲ್ ತೆರೆದದ್ದರಿಂದ, ಬ್ರಿಟಿಷ್ ಸರಕಾರ ಶಿಕ್ಷಣವನ್ನ ಸಾರ್ವತ್ರಿಕಗೊಳಿಸಿದ್ದರಿಂದ.  ಇನ್‌ಫ್ಯಾಕ್ಟ್, ಯೂರೋಪಿಯನ್ನರ ಆಗಮನದಿಂದ ಆದ ಒಂದು ಮಹಾನ್ ಕಾರ್ಯ ಅಂದ್ರೆ ಇಲ್ಲಿನ ಸಮಾಜದ ಎಲ್ಲಾ ವರ್ಗಗಳಿಗೆ ವಿದ್ಯಾಭ್ಯಾಸ ಸಿಗೋ ಹಾಗೆ ಮಾಡಿದ್ದು.  ಅವರು ಬಾರದೇ ಇದ್ದಿದ್ರೆ ಇಲ್ಲಿನ ಮೇಲುವರ್ಗದ ಜನ ಪುಸ್ತಕಗಳನ್ನ ಇನ್ನೂ ತಮ್ಮ ಕಚ್ಛೆ ಒಳಗೇ ಅಡಗಿಸಿಟ್ಟುಕೊಂಡಿರ್ತಿದ್ರು.  ನಮ್ಮಂಥಾ ಕೆಳವರ್ಗದ ಜನಗಳಿಗೆ ವಿದ್ಯೆ ಸಿಗೋದಕ್ಕೆ ಇನ್ನೂ ಅದೆಷ್ಟು ಶತಮಾನಗಳು ಕಾಯಬೇಕಾಗಿತ್ತೋ.  ಗಾಂಧಿಯಂಥ ಮಹಾತ್ಮಾ ಒಬ್ಬ, ಅವನಂಥೋರು ಒಂದಿಬ್ಬರು ಏನೋ ಪ್ರಯತ್ನ ಮಾಡ್ತಿದ್ರು, ನಿಜ.  ಆದರೆ ಅವರಿಗೆ ಎಷ್ಟರ ಮಟ್ಟಿಗೆ ಯಶಸ್ಸು ಸಿಗ್ತಾ ಇತ್ತು ಅನ್ನೋದು ಪ್ರಶ್ನೆ.  ಈ ಜನ ಅವರನ್ನ ಮಟ್ಟ ಹಾಕಿಬಿಡ್ತಿದ್ರು.  ಇದೇ ಈ ಗಾಂಧಿ ಬೆನ್ನ ಹಿಂದೇನೇ ಕಾಂಗ್ರೆಸ್ ಮಂದಿ ದೇಶೀಯ ಶಾಲೆಗಳನ್ನ ತೆರೆದು ಅಲ್ಲೆಲ್ಲಾ ಬರೀ ಮೇಲುವರ್ಗದವರ ಮಕ್ಕಳನ್ನೇ ಸೇರಿಸಿಕೊಳ್ತಾ ಇದ್ದ ಕಥೆ ಗೊತ್ತಿಲ್ವಾ ನಿಮಗೆ?  ಈ ಆಷಾಢಭೂತಿತನದ ಬಗ್ಗೇ ಅಲ್ಲವಾ ಪೆರಿಯಾರ್ ಬಂಡೆದ್ದು ದ್ರವಿಡಿಯನ್ ಮೂವ್‌ಮೆಂಟ್ ಶುರುಹಚ್ಚಿಕೊಂಡದ್ದು?

"ಕ್ರಿಶ್ಚಿಯನ್ನರಿಂದ ಇಷ್ಟೆಲ್ಲಾ ಒಳ್ಳೇದಾದರೂ, ವೈಯುಕ್ತಿಕವಾಗಿ ನನಗೇ ಇಷ್ಟೊಂದು ಅನುಕೂಲವಾದರೂ ಅವರು ಮಾಡೋ ಎಲ್ಲವನ್ನೂ ನಾನು ಸಮರ್ಥಿಸ್ತೀನಿ ಅಂತ ನೀವು ತಿಳೀಬೇಕಾಗಿಲ್ಲ.  ಆಮಿಷಗಳ ಮೂಲಕ ನಡೆಯೋ ಮತಾಂತರ, ಸ್ವರ್ಗಕ್ಕೆ ದಾರಿ ಯೇಸು ಕ್ರಿಸ್ತ ಮಾತ್ರ, ಹಿಂದೂ ದೇವತೆಗಳೆಲ್ಲಾ ಸುಳ್ಳುದೇವತೆಗಳು ಎಂಬ ಮಿಷನರಿಗಳ ಪ್ರಚಾರವನ್ನ ನಾನು ಒಪ್ಪೋದಿಲ್ಲ.  ಮತ್ತೊಬ್ಬರ ನಂಬಿಕೆಯ ಬಗ್ಗೆ ಕ್ಷುಲ್ಲಕವಾಗಿ ಮಾತಾಡಬಾರದು ಅನ್ನೋ ಮೌಲ್ಯದಲ್ಲಿ ನಂಬಿಕೆ ಇಟ್ಟೋನು ನಾನು.  ಈ ದೃಷ್ಟಿಯಿಂದಷ್ಟೇ ಜೀಸಸ್‌ನ ಬಗ್ಗೆ ಲಘುವಾದ ಹೇಳಿಕೆಗಳನ್ನ ನಾನು ತಿರಸ್ಕರಿಸ್ತೀನಿ.  ಹಾಗೇನೇ ಎಂಟುನೂರು - ಸಾವಿರ ವರ್ಷಗಳ ಹಿಂದಿನ ಕ್ರೂಸೇಡ್‌ಗಳ ಕಾಲದ ಮತಾಂಧ ಯುಗದಲ್ಲಿ ಯಾರೋ ಕೆಲವು ಬೇಜವಾಬ್ದಾರಿ ಕ್ರಿಶ್ಚಿಯನ್ನರು ಪ್ರವಾದಿ ಮಹಮದ್ದರ ಬಗ್ಗೆ ಉಪಯೋಗಿಸಿದ `ಮಾಹೌಂಡ್' ಅನ್ನೋ ಲೇವಡಿಯನ್ನ ಈ ಕಾಲದಲ್ಲಿ ಸಲ್ಮಾನ್ ರಷ್ದಿ ಉಪಯೋಗಿಸಿದ್ದು ತಪ್ಪು ಅಂತ ನನ್ನ ವಿವೇಕ ಹೇಳುತ್ತೆ.  ಕಲೆ ಹೆಸರಲ್ಲಿ ಎಂ. ಎಫ್ ಹುಸೇನ್ ಹಿಂದು ದೇವತೆಗಳನ್ನ ನಗ್ನವಾಗಿ ಚಿತ್ರಿಸೋದು ಸಂಸ್ಕೃತಿಯ ವಿಕೃತ ರೂಪ ಅಥವಾ ಸಂಸ್ಕೃತಿಯೇ ಇಲ್ಲದೋರು ಮಾಡೋವಂಥ ನೀಚಕೃತ್ಯ.  ಕಲೆ ಅಥವಾ ಸಾಹಿತ್ಯ ಮತ್ತೊಬ್ಬರ ನಂಬಿಕೆಗಳನ್ನ ಅವಮಾನಿಸೋ ಅಧಿಕಾರವನ್ನ ನಮಗೆ ಕೊಡೋದಿಲ್ಲ.  ಹಾಗೇನೇ ಹಿಂದೂಗಳು ದೇವರೆಂದೇ ನಂಬಿರೋ ರಾಮನ ಬಗ್ಗೆ ತಲೆತಿರುಕ ರಾಜಕಾರಣಿಗಳು ಬೇಜವಾಬ್ಧಾರಿ ಹೇಳಿಕೆ ನೀಡೋದೂ ತಪ್ಪು.  ರಾಮಸೀತೆಯರ ಬಗ್ಗೆಯಾಗಲೀ, ಜೀಸಸ್ ಬಗ್ಗೆಯಾಗಲೀ ಅಥವಾ ಮಹಮದ್ದರ ಬಗ್ಗೆಯಾಗಲೀ ನಮಗೆ ನಂಬಿಕೆ ಗೌರವ ಇಲ್ಲದಿದ್ದರೆ ಏನೂ ನಷ್ಟ ಇಲ್ಲ.  ಆದ್ರೆ ಅವರನ್ನ ದೇವರುಗಳು ಮಹಾತ್ಮರು ಅಂತ ಪೂಜಿಸೋ ಗೌರವಿಸೋ ಕೋಟ್ಯಾಂತರ ಜನ ಈ ಭೂಮಿ ಮೇಲಿದ್ದಾರೆ ಅನ್ನೋದನ್ನ ನಾವು ಮರೀಬಾರದು.  ಅವರ ನಂಬಿಕೆಗಳಿಗೆ, ಭಾವನೆಗಳಿಗೆ ಘಾಸಿಯಾಗೋವಂಥ ಯಾವುದನ್ನೂ ನಾವು ಆಡಬಾರದು, ಬರೀಬಾರದು, ಚಿತ್ರಿಸಬಾರದು.  ಆ ಅಧಿಕಾರ ನಮಗಿಲ್ಲ.  ಇದನ್ನ ಅರೀದೇ ಜನ ನೆರೆಮನೆಯವನ ಹಾದರದ ಬಗ್ಗೆ ಮಾತಾಡೋವಷ್ಟೇ ಹಗುರವಾಗಿ ಜೀಸಸ್ - ಮೇರಿ ಮ್ಯಾಗ್ಡಲೀನ ಬಗ್ಗೆ ಮಾತಾಡ್ತಾರೆ.  ರಾಮ ಹೆಂಡ ಕುಡೀತಿದ್ದ ಅಂತ ಹೇಳಿಕೆ ಕೊಡ್ತಾರೆ.  ಬಾಯಿಗೆ ಬಂದದ್ದು ಒದರಿಕೊಂಡು ಬೀದೀಲಿ ಹೋಗೋ ಒಬ್ಬ ಅರೆಹುಚ್ಚನ ಬಗ್ಗೆ ಮಾತಾಡೋವಷ್ಟೆ ಕ್ಷುಲ್ಲಕವಾಗಿ ಪ್ರವಾದಿ ಮಹಮದ್ದರ ಬಗ್ಗೆ ಮಾತಾಡ್ತಾರೆ.  ಜಾತಿಗಳೇ ಬೇಡ ಅಂದ ಬಸವಣ್ಣನ ಜಾತಿಮೂಲವನ್ನ ಕೆದಕ್ತಾರೆ.  ಜತೆಗೇ ಬಸವಣ್ಣ ಮಾದಿಗನಿರಬಹುದು ಅನ್ನೋ ಅನುಮಾನವನ್ನೇ ದೊಡ್ಡದು ಮಾಡಿ ರಗಳೆ ರಾದ್ಧಾಂತ ಎಬ್ಬಿಸೋ ಮಠಾಧೀಶರುಗಳು ಆ ಮಹಾಮಹಿಮ ಬಸವಣ್ಣನ ಆದರ್ಶಗಳನ್ನೇ ಮರೆತಿದ್ದಾರೆ ಅನ್ನೋದು ನನ್ನ ಅಭಿಪ್ರಾಯ.  `ಪ್ರಪಂಚದ ಏಕೈಕ ಕ್ರಿಶ್ಚಿಯನ್ ಅಂದರೆ ಜೀಸಸ್ ಕ್ರೈಸ್ಟ್ ಮಾತ್ರ' ಅಂತ ಯಾರೋ ಹೇಳಿದಹಾಗೆ `ಪ್ರಪಂಚದ ಏಕೈಕ ಜಾತಿರಹಿತ ಮಾನವ ಅಂದ್ರೆ ಬಸವಣ್ಣ ಮಾತ್ರ' ಅಂತ ಹೇಳಬೆಕಾಗುತ್ತೆ.  ಬಸವಣ್ಣ ಮಾದಿಗನಿರಲಿ ಬ್ರಾಹ್ಮಣನಿರಲಿ, ತನ್ನ ಜಾತಿಯನ್ನ ಅವನೇ ಸೀರಿಯಸ್ಸಾಗಿ ತಗೋಳ್ಳಿಲ್ಲ, ಮಾದಿಗನಾಗಿ ಕುಗ್ಗಲಿಲ್ಲ, ಬ್ರಾಹ್ಮಣನಾಗಿ ಹಿಗ್ಗಲಿಲ್ಲ.  ಬುದ್ಧ ಜೀಸಸ್‌ರಂಥಾ ನಿಜವಾದ ಜಗಜ್ಯೋತಿ ಕಣ್ರೀ ಅವನು.  ಹುಟ್ಟಿದಾಗ ಅವನು ಯಾವ ಜಾತಿಯವನಾಗಿದ್ದನೋ, ಸಾಯೋವಾಗಂತೂ ಅವನಿಗೆ ಯಾವ ಜಾತಿಯೂ ಇರಲಿಲ್ಲ.  ಇದನ್ನೇ ಪಾಲಿಸಿ ಅಂತ ತನ್ನ ಅನುಯಾಯಿಗಳಿಗೂ ಹೇಳಿದ ಮಹಾಮಹಿಮ ಅವನು.  ಅವನ ಮಾತನ್ನ ಅಕ್ಷರಷಃ ಪಾಲಿಸಿದ್ರೆ ಈ ದೇಶದಲ್ಲಿ ಜಾತಿ ಅನ್ನೋ ರಾಕ್ಷಸನ ಅಂತ್ಯ ಎಂದೋ ಆಗೋಗಿರ್ತಿತ್ತು."

"ಜಾತಿಯನ್ನ ನಿರ್ಮೂಲನ ಮಾಡೋದಿಕ್ಕೆ ಆಗೋದಿಲ್ಲ ಬಿಡಿ."  ಸಣ್ಣಗೆ ಗೊಣಗಿದೆ.

"ಯಾಕಾಗಲ್ಲ?  ರೈಲು, ಬಸ್ಸು, ಹೋಟೆಲ್ಲು, ಸಿನಿಮಾ ಥಿಯೇಟರ್‌ಗಳು ಬಂದಾಗಿನಿಂದ ಈ ಅನ್‌ಟಚಬಿಲಿಟಿ ಸಾಕಷ್ಟು ಕಡಿಮೆಯಾಗಿಹೋಗಿದೆ.  ಯಾವನ ಪಕ್ಕ ಯಾವನು ಕೂರ್‍ತಾನೋ, ಯಾವನು ಕುಡಿದ ಲೋಟಕ್ಕೇ ಮತ್ಯಾವನು ಬಾಯಿ ಹಾಕ್ತಾನೋ ಹೇಳೋದಿಕ್ಕೆ ಆಗೋದಿಲ್ಲ."

"ಸ್ಕೂಲು ಕಾಲೇಜು, ಆಫೀಸ್‌ಗಳಲ್ಲಿ ಜಾತಿ ಇದೆಯಲ್ಲಾ ಸಾರ್?  ಎಲ್ಲರ ಜಾತಿ ಎಲ್ಲರಿಗೂ ಗೊತ್ತೇ ಇರ್ತದಲ್ಲಾ?  ಅಲ್ಲದೇ ಈ ರಿಜರ್ವೇಷನ್‌ನಿಂದಾಗಿ ಯಾರು ಶೆಡ್ಯೂಲ್ಡ್ ಕ್ಯಾಸ್ಟ್ ಅನ್ನೋದು ಎಲ್ಲಾ ಕಡೇ ಢಾಣಾಡಂಗೂರವಾಗಿಬಿಟ್ಟಿದೆಯಲ್ಲ?" ಅಂದೆ.

ಅವರು ದನಿ ತಗ್ಗಿಸಿದರು: "ಹೌದು ಇವರೇ, ಅದೇ ನೋಡಿ ತಾಪತ್ರಯ.  ಈ ರಿಜರ್ವೇಷನ್ ಒಂದು ಕಾಲದಲ್ಲಿ ಹರಿಜನರಿಗೆ ಅನುಕೂಲಕರವಾಗೇನೋ ಇತ್ತು.  ಅವ್ರು ವಿದ್ಯೆ ಪಡೆಯೋದಿಕ್ಕೆ, ನೌಕರಿ ಗಳಿಸೋದಿಕ್ಕೆ ಸಹಾಯಕವಾದದ್ದೇನೋ ನಿಜ.  ಅದನ್ನ ಅಲ್ಲಗಳೆಯೋಕೆ ಆಗಲ್ಲ.  ಆದರೀಗ ಪರಿಸ್ಥಿತಿ ತಿರುವುಮುರುವಾಗಿದೆ.  ಈ ರಿಜರ್ವೇಶನ್‌ನಿಂದಾನೇ ಹರಿಜನರಿಗೆ ಅವರ ಯೋಗ್ಯತೆಗನುಸಾರವಾಗಿ ಸಿಗಬೇಕಾದ ಉನ್ನತ ಸ್ಥಾನಮಾನಗಳು ಸಿಗ್ತಾ ಇಲ್ಲ.  ಇವರು ಎಲ್‌ಕೆಜಿಗೆ ಸೇರಿದಾಗಿನಿಂದಲೇ ಇವರ ವಿರುದ್ಧ ಡಿಸ್‌ಕ್ರಿಮಿನೇಷನ್ ಫ್ರಾರಂಭ ಆಗುತ್ತೆ.  ನಿಮಗೇನು ಸೆಕೆಂಡ್ ಕ್ಲಾಸ್ ಬಂದ್ರೆ ಸಾಕು ಅಂತ ಹೇಳಿ ಮೇಷ್ಟ್ರುಗಳು ಇವರಿಗೆ ನ್ಯಾಯವಾಗಿ ಸಿಗಬೇಕಾದ ಅಂಕಗಳನ್ನ ಕೊಡೋದಿಲ್ಲ.  ಯೂನಿವರ್ಸಿಟಿ ಲೆವಲ್‌ಗೆ ಹೋದಂತೇ ಈ ತಾರತಮ್ಯ ಉಗ್ರ ರೂಪ ತಾಳುತ್ತೆ.  ನಮ್ಮ ಯೂನಿವರ್ಸಿಟಿ ಪ್ರೊಫೆಸರ್‌ಗಳು ಆಚರಿಸೋವಂಥ ಕೀಳುಮಟ್ಟದ ಜಾತೀಯತೆಯನ್ನ ಯಾರೂ ಆಚರಿಸೋದಿಲ್ಲ.  ಇನ್ನು ಹೇಗೋ ಡಿಗ್ರೀ ತಗೊಂಡು ಈ ಹರಿಜನರು ಕೆಲಸದ ಬೇಟೆ ಶುರು ಮಾಡಿದ್ರೆ ಅವರಿಗೆ ಕಾದಿರೋದೇನು?  ಅಪ್ಲಿಕೇಷನ್ ಜೊತೆ ಇರೋ ಫಾರ್ಮ್ ನಂಬರ್ ವನ್ ನೋಡಿದ ಕೂಡಲೇ ಇಂಟರ್‌ವ್ಯೂ ಕಮಿಟಿನಲ್ಲಿರೋ ಮಹಾನುಭಾವರ ಧೋರಣೆಯೇ ಬದಲಾಗಿಬಿಡುತ್ತೆ.  ಕಾಟಾಚಾರಕ್ಕೆ ಒಂದು ನಾಕು ಪ್ರಶ್ನೆ ಕೇಳಿ ಸಾಗಹಾಕಿಬಿಡ್ತಾರೆ.  ಮೀಸಲಾತಿ ಹುದ್ದೆಗಳ ಬಗ್ಗೆ ಹೇಳೋದಾದ್ರೆ ಸ್ವೀಪರ್, ವಾಚ್‌ಮನ್, ಅಟೆಂಡರ್‌ನಂಥಾ ಗ್ರೂಪ್ ಡಿ ಕೆಲಸಗಳಲ್ಲಿ ಮೀಸಲಾತಿಯನ್ನ ನಿಷ್ಟೆಯಿಂದ ಪಾಲಿಸ್ತಾರೆ.  ಗ್ರೂಪ್ ಎ ಅಂಥಾ ಉನ್ನತ ಹುದ್ದೆಗಳ ಭರ್ತಿಯಲ್ಲಿ ಈ ನಿಷ್ಟೆ ಇರೋದಿಲ್ಲ.  ಯಾವುಯಾವುದೋ ಕುಂಟುನೆಪ ಎತ್ತಿ ಯೋಗ್ಯ ಅಭ್ಯರ್ಥಿ ಇಲ್ಲ ಅಂತ ಘೋಷಿಸಿಬಿಡ್ತಾರೆ.  ಹೀಗೆ ಒಂದೆರಡು ಸಲ ನಾಟಕ ನಡೆದ ಮೇಲೆ ಆ ಪೋಸ್ಟ್‌ಗಳೆಲ್ಲಾ ಜನರಲ್ ಕ್ಯಾಟಗರಿಗೆ ಹೋಗಿಬಿಡ್ತವೆ.  ಇದರರ್ಥ ಏನು ಅಂದ್ರೆ ಹರಿಜನರು ಹಿಂದೆ ಮಾಡ್ತಾ ಇದ್ದಂಥಾ ದೈಹಿಕ ಶ್ರಮದ ಹಾಗೂ ಕೆಳಮಟ್ಟದ ಕೆಲಸಗಳನ್ನೇ ಈಗಿನ ಆಫೀಸುಗಳಲ್ಲೂ ಮಾಡ್ತಿದಾರೆ.  ಇವರಲ್ಲಿ ಏಸಿ ರೂಂಗಳಲ್ಲಿ ಕೂತುಕೊಂಡು ಅಧಿಕಾರ ಚಲಾಯಿಸೋ ಸವಲತ್ತು ಅನುಭವಿಸೋ ಅವಕಾಶ ಸಿಗೋದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ.  ನಿಜ ಹೇಳಬೇಕು ಅಂದ್ರೆ ಬುದ್ಧಿಶಕ್ತಿ ಹಾಗೂ ಕಾರ್ಯಕ್ಷಮತೇಲಿ ಹರಿಜನರು ಯಾರಿಗೂ ಕಮ್ಮಿ ಇಲ್ಲ.  ಆದ್ರೆ ಕ್ಲಾಸ್‌ರೂಂಗಳಲ್ಲಿ ಹಾಗೂ ಆಫೀಸುಗಳಲ್ಲಿ ಅವರ ವಿರುದ್ಧ ನಡೆಯೋ ಡಿಸ್‌ಕ್ರಿಮಿನೇಷನ್ ನಿಲ್ಲೋವರೆಗೂ ಅವರ ಉದ್ಧಾರ ಆಗೋಲ್ಲ.  ಇದಾಗಬೇಕಾದರೆ ತಮಗೆ ರಿಜ಼ರ್ವೇಷನ್ ಬೇಡ ಅಂಥ ಹರಿಜನರು ತಾವಾಗೇ ನಿರ್ಧರಿಸ್ಕೊಂಡು ಎಲ್ಲ ಕಡೆ ಫಾರ್ಮ್ ನಂಬರ್ ವನ್ ಕೊಡೋದನ್ನ ನಿಲ್ಲಿಸಿಬಿಡಬೇಕು.  ಇವರ ಜಾತಿ ಯಾವುದು ಅನ್ನೋದು ಅಧ್ಯಾಪಕರಿಗಾಗಲೀ, ಇಂಟರ್‌ವ್ಯೂ ಕಮಿಟಿ ಪ್ರಭೃತಿಗಳಿಗಾಗಲೀ ಅಥವಾ ಆಫೀಸ್ ಕಲೀಗ್ಸ್‌ಗಾಗಲೀ ಗೊತ್ತಾಗಲೇಬಾರದು.  ಆಗ ನೋಡಿ ಇವರ ಯೋಗ್ಯತೆಗೆ ಅನುಸಾರವಾಗಿ ಸಿಗಬೇಕಾದ ಮಾರ್ಕ್ಸ್, ಹುದ್ದೆ, ಅಧಿಕಾರ, ಸವಲತ್ತು, ಗೌರವ, ಸ್ನೇಹ, ಒಡನಾಟ ಎಲ್ಲಾನೂ ಸಿಗುತ್ತೆ."

ನಾನು ಸುಸ್ತಾಗಿಹೋದೆ.  ಅವರ ಮಾತು ಸಾಗಿತ್ತು.

"ಜಾತಿಗಳನ್ನ ಸಂಪೂರ್ಣವಾಗಿ ಅಳಿಸಿಹಾಕೋದಿಕ್ಕೆ ಇನ್ನೊಂದು ರ್‍ಯಾಡಿಕಲ್ ಮಾರ್ಗ ಇದೆ.  ಇದನ್ನ ಆ ಜಗಜ್ಯೋತಿ ಬಸವಣ್ಣನೇ ತೋರಿದ್ದಾನೆ.  ಅವನು ನೆರವೇರಿಸಿದಂಥ ಅಂತರ್ಜಾತಿ ವಿವಾಹಗಳನ್ನ ಸಾರ್ವತ್ರಿಕವಾಗಿ ರೂಢಿಸಿ ಜನ ತಮ್ಮ ಮೂಲಜಾತಿ ಯಾವುದು ಅನ್ನೋದನ್ನೇ ಮರೆತು ಓಂಥರಾ ಕನ್‌ಫ್ಯೂಸ್, ಕನ್‌ಫ್ಯೂಸ್ ಕಣ್ರೀ, ಅದಾಗೋ ಥರಾ ಮಾಡಿಬಿಡಬೇಕು.  ಆಗ ನೋಡಿ ಇನ್ನು ಒಂದೆರಡು ಜನರೇಷನ್‌ಗಳಲ್ಲಿ ಜಾತಿಗಳೇ ಮಾಯ ಆಗಿಬಿಡ್ತವೆ.  ಇದನ್ನ ಮಾಡೋದು ಬಿಟ್ಟು ಜನ ತಮ್ಮ ಜಾತಿ ಧರ್ಮವೇ ಶ್ರೇಷ್ಟ ಅಂತ ಕೂಗ್ಕೊಂಡು ಅನ್ಯಜಾತಿ, ಧರ್ಮಗಳನ್ನ, ನಂಬಿಕೆಗಳನ್ನ ಲೇವಡಿ ಮಾಡಿಕೊಂಡು ಬದುಕು ಕಳೀತಾ ಇದಾರೆ.  ಇನ್ನೊಂದಷ್ಟು ಜನ ಉಳಿದವರ ನಂಬಿಕೆಗಳನ್ನೆಲ್ಲಾ ತಿರಸ್ಕಾರದಿಂದ ನೋಡ್ತಾ, ಬಾಯಿಗೆ ಬಂದದ್ದನ್ನ ವಿವೇಚನೆ ಇಲ್ಲದೇ ಹೊರಕ್ಕೆ ಹಾಕ್ತಾ ಓಡಾಡ್ತಿರ್ತಾರೆ.  ದುರಂತ ಅಂದ್ರೆ ಇಂಥವರ ಮಾತುಗಳಿಗೆ ಪ್ರಚಾರ ಕೊಡೋ ಪತ್ರಿಕೆಗಳ ಒಂದು ಗುಂಪೇ ಇದೆ.  ಪ್ರಗತಿಯ ಲಕ್ಷಣ ಅಂದರೆ ಮತ್ತೊಬ್ಬರ ನಂಬಿಕೆಗಳನ್ನ ಲೇವಡಿ ಮಾಡೋದು ಅನ್ನೋ ವಿಲಕ್ಷಣ ಸಂಸ್ಕೃತಿಯನ್ನ ಈ ಪತ್ರಿಕೆಗಳು ಹುಟ್ಟು ಹಾಕ್ತಾ ಇವೆ.  ಮದುವೆಮನೆಯಲ್ಲಿ ಬಾಸಿಂಗ ಕಟ್ಟಿಕೊಂಡ ಮದುಮಗ, ಶವಯಾತ್ರೆಯಲ್ಲಿ ಸಿಂಗರಿಸಿದ ಹೆಣ ಆಗೋ ತೆವಲು ಇರೋ ಕೆಲವು ಬುದ್ಧಿಜೀವಿಗಳು ಎಲ್ಲದಕ್ಕೂ ಬಾಯಿ ಹಾಕ್ತಾ ಇಂಥಾ ಪತ್ರಿಕೆಗಳ ಮೂಲಕ ಸದಾ ಸುದ್ಧಿಯಲ್ಲಿರ್ತಾರೆ.  ಆದರೆ ಬುದ್ಧಿಜೀವಿಯೊಬ್ಬ ಸುದ್ಧಿಜೀವಿಯಾದ್ರೆ ಅವನು ಲದ್ದಿಜೀವಿಯಾಗೋ ಕಾಲ ದೂರ ಇಲ್ಲ ಅನ್ನೋದು ಇವರಿಗೆ ಗೊತ್ತಿಲ್ಲ."

ಥಟಕ್ಕನೆ ಮಾತು ನಿಲ್ಲಿಸಿದರು.  ಮುಖದಲ್ಲಿ ನಗೆ ತಂದುಕೊಂಡು "ಮಾತು ಎಲ್ಲೆಲ್ಲಿಗೋ ಹೊರಟುಬಿಡ್ತು.  ಬೇಜಾರಾಗ್ಲಿಲ್ಲ ತಾನೆ?" ಅಂದರು.  "ಇಲ್ಲ ಇಲ್ಲ" ಎಂದು ತೊದಲಿದೆ.  ಬೇಜಾರಿನ ಪ್ರಶ್ನೆಯೆಲ್ಲಿ ಬಂತು?  ಅವರ ಮಾತುಗಳನ್ನು ಕೇಳುತ್ತಿದ್ದ ನಾನು ಸೂರ್ಯ ಮರೆಯಾಗಿ ಚಂದ್ರ ಮೇಲೆದ್ದು ಬಂದಿದ್ದನ್ನೂ ಗಮನಿಸಿರಲಿಲ್ಲ.

ಒಟ್ಟಿನಲ್ಲಿ ಆ ಸಂಜೆಯ ನಂತರ ಧರ್ಮ-ಧರ್ಮಗಳ ನಡುವಿನ ಸಂಬಂಧಗಳ ಬಗ್ಗೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ, ಹರಿಜನೋದ್ಧಾರದ ಬಗ್ಗೆ, ಸಾಮಾಜಿಕ ಸಮಾನತೆಯ ಬಗ್ಗೆ ನಾನು ಬೇರೆಯದೇ ನಿಟ್ಟಿನಲ್ಲಿ ಆಲೋಚಿಸಲಾರಂಭಿಸಿದೆ.  ಅಷ್ಟೇ ಅಲ್ಲ, ಅವರ ಬಗ್ಗೆ ನನ್ನ ಅಭಿಪ್ರಾಯಗಳು ಬೇರೆಯೇ ಆಗಿಹೋದವು.  ಅವರ ಜತೆ ಮಾತಾಡಲು ಉತ್ಸಾಹವೆನಿಸುತ್ತಿತ್ತು.  ಯಾವ ವಿಷಯವನ್ನೇ ಆಗಲಿ ನೇರವಾಗಿ ಸ್ಪಷ್ಟವಾಗಿ ಮತ್ತು ಸರಳವಾಗಿ ಹೇಳುವ ಅವರ ಸ್ವಭಾವ ನನಗೆ ಆಪ್ತವಾಯಿತು...

Rating
No votes yet

Comments