ಗೌತಮ ಬುದ್ಧ - ಜಿ.ಪಿ. ರಾಜರತ್ನಂರನ್ನು ನೆನೆದು

ಗೌತಮ ಬುದ್ಧ - ಜಿ.ಪಿ. ರಾಜರತ್ನಂರನ್ನು ನೆನೆದು

ತ್ಯಾಗ ಮಾಡುವಾಗ ಬುದ್ಧ ಬುದ್ಧನಾಗಿರಲಿಲ್ಲ, ಅಜ್ಞಾನಿಯಾಗಿದ್ದ. ಜ್ಞಾನೋದಯವಾದ ಮೇಲೆ ಅವನು ಮಾಡಿದ ಮೊದಲ ಕೆಲಸವೆಂದರೆ ಮತ್ತೆ ತನ್ನ ಮನೆಯನ್ನು ನೆನೆಸಿಕೊಂಡದ್ದು. ೧೨ ವರ್ಷಗಳ ನಂತರ ಮತ್ತೆ ಮನೆ ಬಾಗಿಲಿಗೆ ಬಂದ ಮಗನನ್ನು ಕಂಡ ಶುದ್ಧೋದನ ಒಂದೇ ಸಮನೆ ಕೂಗಾಡಿದ. ಕಾಡಿನಲ್ಲಿದ್ದಾಗಲೂ ಅವನನ್ನು ಹಿಂದಕ್ಕೆ ಕರೆತರಲು ಎಷ್ಟೋ ರೀತಿಯಲ್ಲಿ ಪ್ರಯತ್ನಿಸಿದ್ದ. ಆದರೆ ಯಾವುದೂ ಫಲಿಸಲಿಲ್ಲ. ಈಗ ಜ್ಞಾನೋದಯವಾದ ಮೇಲೆ ಅವನು ತಾನಾಗೇ ಮನೆಗೆ ಬಂದಿದ್ದ. ತಂದೆಯ ಕೂಗಾಟವನ್ನು ಪ್ರಶಾಂತವಾಗಿ ಕೇಳುತ್ತಿದ್ದ ಬುದ್ಧನಿಂದ ಯಾವ ಉತ್ತರ ಸಿಗದಿದ್ದಾಗ ಶುದ್ಧೋಧನನು ಇವನಿಗೆಲ್ಲೋ ಹುಚ್ಚು ಹಿಡಿದಿರಬೇಕು ಅಥವ ಕಿವುಡನಾಗಿರಬೇಕು ಎಂದುಕೊಂಡ. ಕೊನೆಗೆ ’ನನ್ನ ಪ್ರಶ್ನೆಗಳಿಗೆ ಏಕೆ ಉತ್ತರಿಸುತ್ತಿಲ್ಲ?’ ಎಂದು ಕೇಳಿ ಕೂಗಾಡಿದ. ಅಪ್ಪನ ಕೂಗಾಟವೆಲ್ಲ ನಿಂತ ಮೇಲೆ ಬುದ್ಧನು ’ಅಂದು ಅರಮನೆಯನ್ನು ತೊರೆದ ವ್ಯಕ್ತಿಗೂ, ಇಲ್ಲಿ ನಿಂತಿರುವ ನನಗೂ ಸಂಬಂಧವಿಲ್ಲ. ನೀನಿನ್ನೂ ನಿನ್ನ ಮಗನೊಡನೆ ಮಾತನಾಡುತ್ತಿರುವೆ. ಆದರೆ ಆ ವ್ಯಕ್ತಿ ಈಗಿಲ್ಲ’ ಎಂದು ಉತ್ತರಿಸಿದ. ’ನಿನ್ನ ಮಾತುಗಳಿಗೆ ಏನರ್ಥ..ನೀನು ನನ್ನ ಮಗನಲ್ಲವೇ, ಜನ್ಮ ಕೊಟ್ಟ ತಂದೆ ಮಗನನ್ನು ಗುರುತಿಸಲಾರೆನೇ? ಎಂದು ಶುದ್ಧೋಧನ ಸಿಡಿಮಿಡಿಗೊಂಡ. ’ಈ ದೇಹಕ್ಕೆ ನೀನು ಜನ್ಮ ನೀಡಿರಬಹುದು. ಆದರೆ ನಾನು ಈ ದೇಹವಲ್ಲ ಎಂದು ಈಗ ನನಗೆ ಗೊತ್ತಾಗಿದೆ. ನನ್ನ ನಿಜವಾದ ಸ್ವರೂಪವೇನು ಎಂದು ಈಗ ನನಗೆ ಗೊತ್ತಾಗಿದೆ’ ಎಂದು ತಂದೆಗೆ ಉತ್ತರಿಸಿ ಹೊರನಡೆದ ಬುದ್ಧ ಬಳಿಕ ಹೆಂಡತಿಯನ್ನು ಸಮಾಧಾನ ಪಡಿಸಲು ಹೋದ. ಅವಳು ತಂದೆಯಂತೆ ಸಿಡಿಮಿಡಿಗೊಳ್ಳದಿದ್ದರೂ ’ನನಗೆ ನೀನು ಸಾಮ್ರಾಜ್ಯವನ್ನು ತೊರೆದು ಹೋದೆ ಎಂದು ಸಿಟ್ಟಿಲ್ಲ. ಆದರೆ ನನಗೊಂದು ಮಾತನ್ನೂ ಹೇಳದೇ ಹೋಗಿಬಿಡುವುದೇ? ಹೇಳಿದ್ದರೆ ನಾನೇನೂ ಕಳಿಸುತ್ತಿರಲಿಲ್ಲವೇ? ನಾನೂ ಕೂಡ ಪರಾಕ್ರಮಿಗಳ ಮನೆತನದಿಂದ ಬಂದವಳಲ್ಲವೇ’ ಎಂದು ಕೇಳಿದಳು. ಯಶೋಧರೆಯ ಈ ಮಾತುಗಳಿಗೆ ಬುದ್ಧನಲ್ಲಿ ಉತ್ತರವಿರಲಿಲ್ಲ. ಏಕೆಂದರೆ ಅವಳ ಪ್ರಶ್ನೆ ಸಾಂಸಾರಿಕ ವಿಷಯದ್ದಾಗಿರಲಿಲ್ಲ, ಆ ಪ್ರಶ್ನೆ ಯಶೋಧರೆಯ ಬಗ್ಗೆ ಬುದ್ಧ ಇರಿಸಿಕೊಂಡಿದ್ದ ನಂಬಿಕೆಗೆ ಸವಾಲೆಸೆದಿತ್ತು. ಎರಡನೆಯ ಮಾತಿಲ್ಲದೆ ಬುದ್ಧ ಅವಳ ಬಳಿ ಕ್ಷಮೆ ಯಾಚಿಸಿದ. ಆಮೇಲೆ ಆಕೆ ಮತ್ತೊಂದು ಪ್ರಶ್ನೆಯನ್ನು ಕೇಳಿದಳು ’ಅರಮನೆಯನ್ನು ತೊರೆದು ನೀನು ಏನನ್ನು ಸಂಪಾದನೆ ಮಾಡಿದೆಯೋ ಅದನ್ನು ಇಲ್ಲೇ ಇದ್ದು ಸಂಪಾದಿಸಲು ಆಗುತ್ತಿರಲಿಲ್ಲವೇ?’. ಆ ಪ್ರಶ್ನೆಗೂ ಬುದ್ಧನ ಬಳಿ ಉತ್ತರವಿರದೆ ಅವನು ಅವಳೆದುರು ತಲೆ ತಗ್ಗಿಸಿ ನಿಂತ.

Rating
Average: 5 (1 vote)

Comments