ಲಕ್ಷ್ಮಣನ ಕೈ ಬಿಟ್ಟ ಬಿಜೆಪಿ

ಲಕ್ಷ್ಮಣನ ಕೈ ಬಿಟ್ಟ ಬಿಜೆಪಿ

 ಒಂದು ಲಕ್ಷ ರೂಪಾಯಿ ಲಂಚ ಸ್ವೀಕಾರವನ್ನು ಕೋರ್ಟೊಂದು ಎತ್ತಿ ಹಿಡಿಯುತ್ತಿದ್ದಂತೆಯೇ, ಬಿಜೆಪಿ ತನ್ನ ಮಾಜೀ ಅಧ್ಯಕ್ಷ ಬಂಗಾರು ಲಕ್ಷ್ಮಣರ ಕೈ ಬಿಟ್ಟಿದೆ. 'ಅದಕ್ಕೆ ಪಕ್ಷದ ಆಗು-ಹೋಗಿನ ಸಂಬಂಧವಿಲ್ಲ' ಎಂದು ವಕ್ತಾರರು ಉತ್ತರೀಯ ಝಾಡಿಸಿಕೊಂಡಿದ್ದಾರೆ. ಆದರೆ ಸಿಡಿಲು ಸಮಾನರಾದ ಕರ್ನಾಟಕದ ಚಾಲ್ತಿ ನೇತಾರ ಯೆಡಿಯೂರಪ್ಪನವರನ್ನು ಪಾರ್ಟಿ ಬಿಟ್ಟುಕೊಟ್ಟಿಲ್ಲ್ಲ; ಅವರೇನೇ ಮಾಡಿದ್ದರೂ, ಮಾಡುತ್ತಿದ್ದರೂ ಅದೆಲ್ಲಾ ಪಕ್ಷದ ಅಧೀಕೃತ ವ್ಯವಹಾರವೆಂದೇ ಇದರ ಅರ್ಥವಲ್ಲವೇ? ಪಕ್ಷದ ವಕ್ತಾರರು, ಸಮಯ ಸಿಕ್ಕಾಗಲೆಲ್ಲಾ ಪುನರುಚ್ಚರಿಸುತ್ತಾರೆ, ’ಯಡಿಯೂರಪ್ಪ ಆರೋಪಿಯೇ ಹೊರತು ಅಪರಾಧಿ ಅಲ್ಲ’ ಎಂದು. ಹಾಗೆಯೇ ಬಂಗಾರು ಲಕ್ಷ್ಮಣರಿಗೂ, ಕೊನೆಯವರೆಗೂ ಆರೋಪಿಯಾಗಿಯೇ ಉಳಿಯಲು ನ್ಯಾಯಾಂಗದ ಇನ್ನೂ ಒಂದೊಂದೇ ಮೆಟ್ಟಿಲುಗಳಿಲ್ಲವೇ? ಅದೇ ಕೆಲಸವನ್ನು ದಶಕೋಟಿ-ಶತಕೋಟಿಗಳ ಲೆಕ್ಕದಲ್ಲಿ ಮಾಡುವ ಅವಕಾಶವಿದ್ದಾಗ, ಪಕ್ಷದ ಮಾನವನ್ನು ಒಂದೇ ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದರೆಂದು ಅವರಮೇಲೆ ಕೋಪವೋ ಏನೋ? ನೀತಿಯಲ್ಲಿ ಇದು ’ನೆಗೆಟಿವ್’ ಇರಬಹುದು; ಪ್ರಸ್ತುತ ರಾಜಕೀಯದಲ್ಲಂತೂ ಅಪ್ಪಟ ’ಪಾಸಿಟಿವ್’ ಎಂದೇ ಇಟ್ಟುಕೊಳ್ಳೋಣ! ಆದರೆ ಮಠ-ಪೀಠಗಳೆಂಬ ಕೃತಕದ ಮೂಲಕ ಜಾತಿಯ ಕೃತಕ ವೋಟುಗಳನ್ನು ಇವರು ಕಲೆ ಹಾಕಬಹುದೆಂಬುದು ರಾಜ್ಯ ರಾಜಕೀಯದಲ್ಲಿ ಲಾಭದಾಯಕವಿರಬಹುದು. ಇಂತಹ ಪ್ರಯೋಜನ ರಾಷ್ಟ್ರ ಮಟ್ಟದಲ್ಲಿ ನಗಣ್ಯ ಎನ್ನುವ ವಿವೇಕಕ್ಕೆ, ’ರಾಷ್ಟ್ರೀಯ ಪಕ್ಷ’ ಚುನಾವಣಾ ವರ್ಷದಲ್ಲಾದರೂ ಏರುವುದು ಅಪೇಕ್ಷಣೀಯವೆನಿಸೀತು.
 

Rating
No votes yet

Comments