"ಮೀಮಾಂಸ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೭ (೨)

"ಮೀಮಾಂಸ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೭ (೨)

     

ಈ ಸರಣಿಯ ಹಿಂದಿನ ಲೇಖನ ""ಮೀಮಾಂಸ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ  ಭಾಗ - ೭ (೧)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿ: http://sampada.net/blog/%E0%B2%AE%E0%B3%80%E0%B2%AE%E0%B2%BE%E0%B2%82%E0%B2%B8-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AD-%E0%B3%A7/24/04/2012/36497



                                                                       ಅಭೌತಿಕತೆ ಅಥವಾ ಅಧ್ಯಾತ್ಮ
(ಅ)  ಪ್ರಪಂಚ

    ಅದ್ವೈತ ಮೊದಲಾದ ಸಿದ್ಧಾಂತಗಳಿಗೆ ಹೊರತಾಗಿ ಮೀಮಾಂಸ ದರ್ಶನವು ಅಸಂಖ್ಯಾತ ವಸ್ತುಗಳಿಂದ ಕೂಡಿರುವ ಈ ವಿಶ್ವವು ಸತ್ಯವೆಂದು ನಂಬುತ್ತದೆ.  ಮೀಮಾಂಸ ದರ್ಶನದ ಪ್ರಕಾರ ಈ ಪ್ರಪಂಚವು, ಗ್ರಹಣೇಂದ್ರಿಯಗಳಿಂದ ಕೂಡಿದ ಜೀವಿಗಳನ್ನು ಒಳಗೊಂಡಿದ್ದು; ಅದರಲ್ಲಿ ಜೀವಿಗಳು ತಾತ್ಕಾಲಿಕವಾಗಿ ವಾಸಿಸಿ ತಮ್ಮ ಕರ್ಮಕ್ಕನುಸಾರವಾಗಿ ಒಳ್ಳೆಯ ಅಥವಾ ಕೆಟ್ಟ ಫಲಗಳನ್ನು ಅನುಭವಿಸುತ್ತವೆ. ವಿವಿಧ ಪ್ರಾಪಂಚಿಕ ವಸ್ತುಗಳು ಜೀವಿಗಳು ಒಳ್ಳೆಯ ಅಥವಾ ಕೆಟ್ಟ ಫಲವನ್ನು ಅನುಭವಿಸಲು ಪೂರಕ ಸಾಧನಗಳಾಗಿವೆ.

(ಬ) ಆತ್ಮ

    ಪ್ರಪಂಚದಲ್ಲಿ ಅಸಂಖ್ಯಾತವಾದ ಜೀವಾತ್ಮಗಳಿವೆ. ಅವುಗಳು ಶಾಶ್ವತವಾದರೂ ಕೂಡ ಅವು ನಿಜವಾದ ದೇಹವನ್ನು ಹೊಂದಿದ್ದಾಗ ತಾವು ನಿಜವಾದ ಪ್ರಪಂಚದಲ್ಲಿ ಕೈಗೊಂಡ ಸುಕರ್ಮ ಅಥವಾ ಕುಕರ್ಮಗಳಿಗನುಸಾರವಾಗಿ ಜನ್ಮಾಂತರಗಳನ್ನು/ಪುನರ್ಜನ್ಮವನ್ನು ಹೊಂದುತ್ತವೆ.

    ಆತ್ಮಕ್ಕೆ ತನ್ನದೇ ಆದ ಅರಿವೆನ್ನುವುದು ಇರುವುದಿಲ್ಲ. ಅದರಲ್ಲಿ ಅರಿವು ಅಥವಾ ತಿಳುವಳಿಕೆಯು ಅದು ಮನಸ್ಸು, ಜ್ಞಾನೇಂದ್ರಿಯಗಳು ಮತ್ತು ವಿಷಯ ವಸ್ತುಗಳೊಂದಿಗೆ ಸಹಯೋಗ ಹೊಂದಿದಾಗ ಉದ್ಭವವಾಗುತ್ತದೆ. ಇದು ವಿಶೇಷವಾಗಿ ಜ್ಞಾನೇಂದ್ರಿಯಗಳು ಅಥವಾ ಗ್ರಹಣೇಂದ್ರಿಯಗಳು ತಮಗೆ ಸಂಭಂದಪಟ್ಟ ವಿಷಯ ವಸ್ತುಗಳೊಂದಿಗೆ ಸಂಪರ್ಕವೇರ್ಪಡಿಸಿಕೊಂಡಾಗ ಉಂಟಾಗುತ್ತದೆ. ಗಾಢ ನಿದ್ರೆಯಲ್ಲಿ ಸ್ಪೃಹೆಯಿಲ್ಲದಿರುವುದು/ಅರಿವು ಇಲ್ಲದಿರುವುದು ಆತ್ಮಕ್ಕೆ ತನ್ನದೇ ಆದ ಅರಿವು ಇರುವುದಿಲ್ಲವೆನ್ನುವುದನ್ನು ನಿರೂಪಿಸುತ್ತದೆ.

    ವ್ಯಕ್ತಿಯೊಬ್ಬನು ಸ್ವರ್ಗವನ್ನು ಪಡೆಯಲು 'ಜ್ಯೋತಿಸ್ತೋಮ' ಯಜ್ಞವನ್ನು ಕೈಗೊಂಡನೆಂದುಕೊಳ್ಳಿ; ಆಗ ಅದರ ಸುಪ್ತ ಪ್ರಭಾವವು ಸೂಕ್ಷ್ಮ ರೂಪದಲ್ಲಿ ಆತ್ಮದಲ್ಲಿ ನೆಲೆಸಿದ್ದು; ಆ ವ್ಯಕ್ತಿಯ ಮರಣಾನಂತರ ಅದರ ಫಲವು ಉಂಟಾಗುತ್ತದೆ. ಹೀಗೆ ಸುಪ್ತವಾಗಿರುವ ಮತ್ತು ಅಗೋಚರವಾದ ಶಕ್ತಿ ಅಥವಾ ಸತ್ವವನ್ನು 'ಅಪೂರ್ವ'ವೆನ್ನುತ್ತಾರೆ.

    ವೇದಗಳು ಪೂರ್ಣವಾಗಿ ಮನುಷ್ಯನನ್ನು ಕರ್ಮ(ಯಜ್ಞ-ಯಾಗಗಳು) ಮಾಡಲು ಆದೇಶಿಸುವುದರಿಂದ, ಪ್ರತಿಯೊಬ್ಬ ಮನುಷ್ಯನು ಕರ್ತವ್ಯಕ್ಕಾಗಿ ಕರ್ತವ್ಯ ಮಾಡಲು ಬದ್ಧನಾಗಿರುತ್ತಾನೆ. ಯಜ್ಞಕ್ರಿಯೆಯು ಮಾಡತಕ್ಕದ್ದು; ಏಕೆಂದರೆ ವೇದಗಳು ಹಾಗೆ ಮಾಡೆಂದು ಆದೇಶಿಸುತ್ತವೆಯಾದ್ದರಿಂದ; ಅವನ್ನು ಮಾಡಲಾರೆನೆಂದು ಅಥವಾ ಅವನ್ನು ಬೇರೆ ವಿಧಾನದಿಂದ ಮಾಡುತ್ತೇನೆನ್ನದೆ ಅನಿವಾರ್ಯವಾಗಿ ಅವನ್ನು ಮಾಡದೇ ವಿಧಿಯಿಲ್ಲ!

    ಈ ರೀತಿಯ ಕರ್ತವ್ಯಗಳನ್ನು ಎರಡು ವಿಶಾಲವಾದ ಗುಂಪುಗಳಾಗಿ ವಿಂಗಡಿಸಿದ್ದಾರೆ; ಅವೆಂದರೆ 'ನಿತ್ಯ' ಅಥವಾ ದಿನನಿತ್ಯ ಕೈಗೊಳ್ಳಲೇ ಬೇಕಾದ ಕರ್ಮಗಳು ಮತ್ತು 'ನೈಮಿತ್ತಿಕ' ಅಥವಾ ಸಾಂದರ್ಭಿಕವಾದ (ಆದರೆ ಕೈಗೊಳ್ಳಲೇ ಬೇಕಾದ) ಕರ್ಮಗಳು. ಇವು ಆತ್ಮನ ನೈತಿಕತೆಯನ್ನು ಉತ್ತಮಪಡಿಸಿ ಅದನ್ನು ಪರಿಶುದ್ಧಗೊಳಿಸುತ್ತವೆ.

(ಕ) ಮೋಕ್ಷ ಅಥವಾ ಮುಕ್ತಿ

    ಒಬ್ಬ ವ್ಯಕ್ತಿ ಹೊಂದಬಹುದಾದ ಅತ್ಯುನ್ನತ ಒಳಿತೆಂದರೆ (ನಿಃಶ್ರೇಯಸವೆಂದರೆ), ಜನ್ಮಾಂತರಗಳ ಸರಪಳಿಯಿಂದ ಸಂಪೂರ್ಣ ಬಿಡುಗಡೆ. ಈ ಸ್ಥಿತಿಯಲ್ಲಿ ಆತ್ಮನು ಸಂಪೂರ್ಣವಾಗಿ ಯಾತನೆ ಮತ್ತು ದುಃಖಗಳಿಂದ ಮುಕ್ತನಾಗಿರುತ್ತಾನೆ ಆದರೆ ಆ ಸ್ಥಿತಿಯಲ್ಲಿ ಆತ್ಮನಿಗೆ ಅರಿವು ಮತ್ತು ಆನಂದವಿರುವುದಿಲ್ಲ!

    ಬಹುಶಃ ಜೀವನದ ಅಂತಿಮ ಗುರಿಯು ಸ್ವರ್ಗದಲ್ಲಿ 'ನಿತ್ಯಾನಂದ'ವನ್ನು ಪಡೆಯುವುದು ಮೀಮಾಂಸ ದರ್ಶನದ ಗುರಿಯಾಗಿತ್ತೆಂದು ತೋರುತ್ತದೆ; ಆದರೆ ಈಗ ಲಭ್ಯವಿರುವ ಸಾಹಿತ್ಯವು ಅದನ್ನು ಅನುಮೋದಿಸುವುದಿಲ್ಲ.

    ಮೋಕ್ಷವನ್ನು ಹೊಂದುವುದು ಹೇಗೆ? ಎನ್ನುವುದನ್ನು ಬಹುಶಃ ಬಹಳ ಸರಳವಾಗಿ ಮೀಮಾಂಸ ದರ್ಶನದಲ್ಲಿ ಉತ್ತರಿಸಿದ್ದಾರೆನಿಸುತ್ತದೆ. 'ಕಾಮ್ಯಕರ್ಮ'ಗಳನ್ನು ಅಥವಾ ಆಸೆಯಿಂದೊಡಗೂಡಿದ ಕರ್ಮಗಳನ್ನು ಮಾಡದೇ ಇರುವುದರಿಂದ ಪುನರ್ಜನ್ಮವು ಉಂಟಾಗುವುದಿಲ್ಲ. ಇಷ್ಟವಿಲ್ಲದೆ ಮಾಡಿದ ಪಾಪಕಾರ್ಯಗಳ ಫಲವನ್ನು ವಿವಿಧ ರೀತಿಯ 'ಪ್ರಾಯಶ್ಚಿತ್ತ'ವನ್ನು ಮಾಡಿಕೊಳ್ಳುವುದರ (ಪಾಪಗಳಿಂದ ಮುಕ್ತಿಹೊಂದುವ ಯಜ್ಞಕರ್ಮಗಳನ್ನು ಮಾಡುವುದರಿಂದ) ಮೂಲಕ ತೊಡೆದುಹಾಕಬಹುದು. 'ನಿತ್ಯ' ಮತ್ತು 'ನೈಮಿತ್ತಿಕ' ಕರ್ಮಗಳನ್ನು ಮಾಡುವುದರಿಂದ 'ಚಿತ್ತಶುದ್ಧಿ' ಅಥವಾ ಮನಸ್ಸಿನ ಶುದ್ಧತೆ ಉಂಟಾಗುತ್ತದೆ; ಒಂದು ವೇಳೆ ಈ ಕರ್ಮಗಳನ್ನು ಕೈಗೊಳ್ಳದಿದ್ದರೆ 'ಪ್ರತ್ಯವಾಯದೋಷ' ಅಥವಾ 'ಕರ್ಮರಾಹಿತ್ಯ ದೋಷ'ವುಂಟಾಗಿ ಅದು ಮೋಕ್ಷದ ಹಾದಿಯಲ್ಲಿ ತೊಡಕಾಗಿ ಪರಿಣಮಿಸುತ್ತದೆ. ಪ್ರಾರಬ್ಧಕರ್ಮವು (ಈ ಜನ್ಮಕ್ಕೆ ಕಾರಣವಾದ ಕರ್ಮವು) ಅದನ್ನು ಈ ಜನ್ಮದಲ್ಲಿ ಅನುಭವಿಸುವುದರಿಂದ ಕರಗಿಹೋಗುತ್ತದೆ. ಆದ್ದರಿಂದ ಈ ದೇಹವು ಬಿದ್ದುಹೋದ ನಂತರ ಯಾವುದೇ ಶೇಷವು ಉಳಿಯದಿರುವುದರಿಂದ ಆತ್ಮವು ಈ ಲೋಕಕ್ಕೆ ಮತ್ತೆ ಹಿಂತಿರುಗುವುದಿಲ್ಲ. ಮೇಲೆ ತಿಳಿಸಿರುವ ಕರ್ಮಗಳನ್ನು ಕೈಗೊಳ್ಳುವುದರ ಪರಿಣಾಮವಾಗಿ ಮುಕ್ತಿಯು ತನ್ನಷ್ಟಕ್ಕೇ ತಾನೇ ಉಂಟಾಗುತ್ತದೆ.

(ಡ) ಈಶ್ವರ ಅಥವಾ ಭಗವಂತ

    ಮೀಮಾಂಸ ದರ್ಶನದ ಮತ್ತೊಂದು ಪ್ರಶ್ನೆಯೆಂದರೆ ಅದು ದೇವರು ಅಥವಾ ಈಶ್ವರನು ಇದ್ದಾನೋ ಇಲ್ಲವೋ ಎನ್ನುವುದನ್ನು ಚರ್ಚಿಸಿ; ದೇವರ ಅಸ್ತಿತ್ವವನ್ನು ಅಲ್ಲಗಳೆಯುವುದು. ಈ ಭೌತಿಕ ಜಗತ್ತನ್ನು ಉಂಟು ಮಾಡುವ ವಸ್ತುಗಳು ಯಾವಾಗಲೂ ಶಾಶ್ವತವಾಗಿ ಅಸ್ತಿತ್ವದಲ್ಲಿರುವುದರಿಂದ ಮತ್ತು ಜೀವಾತ್ಮರ ಅದೃಷ್ಟ ಅಥವಾ ಕರ್ಮಗಳಿಗನುಸಾರವಾಗಿ ಈ ವಸ್ತುಗಳು ಪ್ರಚೋದನೆಗೊಳಪಟ್ಟು ಸೃಷ್ಟಿ ಕ್ರಿಯೆಯನ್ನು ಉಂಟು ಮಾಡುತ್ತವೆಯಾದ್ದರಿಂದ, ಸೃಷ್ಟಿಯನ್ನು ರಚಿಸಲು ಯಾವುದೇ ವ್ಯಕ್ತಿಗತ ಭಗವಂತ ಅಥವಾ ಕರ್ತೃವಿನ ಅವಶ್ಯಕತೆಯನ್ನು ಒಪ್ಪಿಕೊಳ್ಳುವ ಪ್ರಮೇಯವಿಲ್ಲ. (ವಿಶ್ವದಲ್ಲಿರುವ ವಸ್ತುಗಳು ಶಾಶ್ವತ ಮತ್ತು ಜೀವ ಅಥವಾ ಆತ್ಮಗಳ ಕರ್ಮಕ್ಕನುಸಾರವಾಗಿ ಈ ಸೃಷ್ಟಿ ಕ್ರಿಯೆಯು ಸಹಜವಾಗಿ ಜರುಗುತ್ತದೆಯಾದ್ದರಿಂದ ಇದನ್ನು ನಿಯಂತ್ರಿಸುವ ಅಥವಾ ಅದಕ್ಕೆ ದಿಶೆಯನ್ನು ಕೊಡುವ ಇನ್ನೊಬ್ಬ ವ್ಯಕ್ತಿ ಅಥವಾ ಭಗವಂತನ ಅವಶ್ಯಕತೆಯಿಲ್ಲ; ಆದ್ದರಿಂದ ಅವನ ಇರುವಿಕೆಯನ್ನು ಮೀಮಾಂಸ ದರ್ಶನವು ಅಲ್ಲಗಳೆಯುತ್ತದೆ.)

ಉಪಸಂಹಾರ

    ಒಂದು ಸೋಜಿಗದ ಸಂಗತಿಯೆಂದರೆ ವೇದಗಳ ಪ್ರಭುತ್ವವನ್ನು ಎತ್ತಿಹಿಡಿಯಲು ಹೋದ ಪದ್ಧತಿಯು ಆ ಗ್ರಂಥವನ್ನೇ ಭಗವಂತನನ್ನಾಗಿಸಿ ಅದನ್ನು ಸೃಜಿಸಿದ ವ್ಯಕ್ತಿಯನ್ನೇ  (ಭಗವಂತನನ್ನೇ) ಬಹಿಷ್ಕರಿಸುತ್ತವೆ! ಭಗವಂತನ ಸಂಗತಿ ಒತ್ತಟ್ಟಿಗಿರಲಿ, ವೈದಿಕ ಕ್ರಿಯೆಗಳಲ್ಲಿ ತಮ್ಮ ಆಹುತಿಗಳನ್ನು ಸ್ವೀಕರಿಸಲು ಮೊರೆಯಿಡುವ ಇಂದ್ರ, ಮಿತ್ರ, ವರುಣ ಮೊದಲಾದವರನ್ನೂ ಕೂಡ ಕಟ್ಟು ಕಥೆಗಳಲ್ಲಿನ ಅಥವಾ ನಾಟಕಗಳಲ್ಲಿನ 'ಕಾಲ್ಪನಿಕ ಪಾತ್ರ'ಗಳೆಂದು ಮೀಮಾಂಸ ದರ್ಶನದ ಪ್ರತಿಪಾದಕರು ಪರಿಗಣಿಸುತ್ತಾರೆ.

    ಅಂತಿಮ ಕೇಡನ್ನು ಹೋಗಲಾಡಿಸಿಕೊಳ್ಳಲು (ಮೋಕ್ಷದ ಹಾದಿಯನ್ನು ಸುಗುಮಗೊಳಿಸಿಕೊಳ್ಳಲು); ಕರ್ಮ(ಯಾಗ, ಯಜ್ಞ ಅಥವಾ ವೈದಿಕ ಕ್ರಿಯೆ)ಗಳನ್ನು ಮಾಡುವುದನ್ನು ಅತಿಯಾಗಿ ಹೇರಿದ್ದರಿಂದ ಅಥವಾ ವಿಪರೀತವಾಗಿ ಪ್ರತಿಪಾದಿಸಿದ್ದರಿಂದ ಮೀಮಾಂಸ ದರ್ಶನವು ತನ್ನ ಸಮಾಧಿಯನ್ನು ತಾನೇ ತೋಡಿಕೊಂಡು, ಅದರ ಜೀವಂತ ಅಸ್ತಿತ್ವವನ್ನು ಕಳೆದುಕೊಂಡಿತೆಂದು ಘಂಟಾಘೋಷವಾಗಿ ಹೇಳಿದರೆ ತಪ್ಪಿಲ್ಲವೆನಿಸುತ್ತದೆ. 

    ಆದರೂ ಕೂಡ, ಮೀಮಾಂಸ ದರ್ಶನದ 'ಜ್ಞಾನ ಸಿದ್ಧಾಂತ' ಮತ್ತು ಅದು ವೈದಿಕ ನುಡಿಗಟ್ಟುಗಳು ಅಥವಾ 'ಸೂತ್ರ'ಗಳನ್ನು ವಿಶ್ಲೇಷಿಸುವ ವಿಧಾನಗಳನ್ನು ಶ್ರದ್ಧೆಯಿಂದ ಅಭ್ಯಸಿಸಿದರೆ ಅವು ನಮಗೆ ವೇದಾಂತ ಪದ್ಧತಿಗಳನ್ನು ಚೆನ್ನಾಗಿ ಅರಿತುಕೊಳ್ಳುವುದರಲ್ಲಿ ಸಹಾಯಕವಾಗುತ್ತವೆ.

==========================================================================
ವಿ.ಸೂ.:ಇದು ಸ್ವಾಮಿ ಹರ್ಷಾನಂದ ವಿರಚಿತ The six systems of Hindu Philosophy ಯಲ್ಲಿಯ Mimamsa Darshanaನದ ೬೬ರಿಂದ ೭೦ನೆಯ ಪುಟದ ಅನುವಾದದ ಭಾಗ.
ಚಿತ್ರ: ಮೀಮಾಂಸ ದರ್ಶನದ ದ್ರಷ್ಟಾರ ಜೈಮಿನಿ ಮಹರ್ಷಿ
ಚಿತ್ರ ಕೃಪೆ: ಗೂಗಲ್; ಕೊಂಡಿ: http://www.google.co.in/imgres?q=sage+jaimini&hl=kn&client=firefox-a&hs=PsZ&sa=X&rls=org.mozilla:en-US:official&biw=1024&bih=629&tbm=isch&prmd=imvns&tbnid=vMpj9GA2siUMLM:&imgrefurl=http://sarbanirath.com/&docid=Z0NgUzJYc3NHOM&imgurl=http://sarbanirath.com/images/sage01.jpg&w=161&h=233&ei=ebyeT4T_LsTQrQettrRI&zoom=1&iact=hc&vpx=473&vpy=237&dur=1160&hovh=186&hovw=128&tx=85&ty=84&sig=102761278851796365273&page=4&tbnh=145&tbnw=109&start=61&ndsp=23&ved=1t:429,r:8,s:61,i:221
 

Rating
No votes yet

Comments