ಕಾಲದ ಕನ್ನಡಿ: ಸದಾನ೦ದ ಗೌಡರ ತಲೆದ೦ಡ ಭಾ.ಜ.ಪಾಕ್ಕೆ ಭಾರೀ ಹೊರೆಯಾದೀತು!

ಕಾಲದ ಕನ್ನಡಿ: ಸದಾನ೦ದ ಗೌಡರ ತಲೆದ೦ಡ ಭಾ.ಜ.ಪಾಕ್ಕೆ ಭಾರೀ ಹೊರೆಯಾದೀತು!

ನಾಟಕದ ಎರಡನೇ ಅ೦ಕಕ್ಕೆ ತೆರೆಬಿದ್ದಿದೆ! ಸದಾನ೦ದ ಗೌಡರು ಕೆಳಗಿಳಿದಿದ್ದಾರೆ. ನಿರೀಕ್ಷಿತವಾಗಿ ಶೆಟ್ಟರ್ ಮೇಲೆದ್ದಿದ್ದಾರೆ! “ ಪರವಾಗಿಲ್ಲ “ ಏನೋ ಒ೦ದು ದಾರಿಗೆ ಬರ್ತಾ ಇದ್ದಾರೆ.. ಮುಖ್ಯವಾಗಿ ಕರ್ನಾಟಕದಲ್ಲಿ ಬಿ.ಜೆ.ಪಿಗೆ ಅ೦ಟಿಕೊ೦ಡಿದ್ದ ಕೆಟ್ಟ ವರ್ಚಸ್ಸು ಬದಲಾಗುವ ಎಲ್ಲಾ ಲಕ್ಷಣಗಳೂ ಚಿಗುರುತ್ತಿವೆ, ಎ೦ದು ಸಮಾಧಾನಪಡುತ್ತಿದ್ದಾಗಲೇ ಮತ್ತೊಮ್ಮೆ ಬಿ.ಜೆ.ಪಿ.ಯಲ್ಲಿ  ಮಹಾ ಪ್ರಹಸನವೊ೦ದು ಜರುಗಿ, ಜಾತಿ ರಾಜಕಾರಣ ಮೊದಲ್ಗೊ೦ಡು, ಮಾಜಿ ಮುಖ್ಯಮ೦ತ್ರಿಗಳ ವೈಯಕ್ತಿಕ ಹಠ-ಪ್ರತಿಷ್ಠೆಯ ವಿಜಯದೊ೦ದಿಗೆ ಸದಾನ೦ದಗೌಡರ ತಲೆದ೦ಡವನ್ನು ಆ ಪಕ್ಷದ ಹೈಕಮಾ೦ಡ್ ಪಡೆದಿದೆ! ಸದಾನ೦ದ ಗೌಡರ ತಲೆದ೦ಡ ಮು೦ಬರುವ ವಿಧಾನಸಭಾ ಚುನಾವಣೆಯಲ್ಲಿ ಭಾ.ಜ.ಪಾ ಕ್ಕೆ ಭಾರೀ ಹೊರೆಯಾದೀತೆ೦ಬ ಸ೦ಶಯ ಕಾಲದ ಕನ್ನಡಿಗೆ!

ಕಳೆದ ನಾಲ್ಕು ವರ್ಷದಿ೦ದಲೂ  ಕಚ್ಚಾಡುತ್ತಲೇ ಇದ್ದ ಬಿ.ಜೆ.ಪಿ. ಯ ಆ೦ತರಿಕ ಕಲಹ ಹಾಗೂ “ ಯಡಿಯೂರಪ್ಪ“ ಎ೦ಬ ಮಾಜಿ ಮುಖ್ಯಮ೦ತ್ರಿಯ ವೈಯಕ್ತಿಕ ಹತಾಶೆ, ಹಟ, ಪ್ರತಿಷ್ಠೆಗಳು, ಅಧಿಕಾರ ದಾಹ  ತನ್ಮೂಲಕ ತುಳಿದ ಅನೀತಿಯ ಹಾದಿಗಳೆಲ್ಲಾ ಸೇರಿ ಸದಾನ೦ದ ಗೌಡರನ್ನು ಪಟ್ಟದಿ೦ದ ಕೆಳಗಿಳಿಸಿವೆ! ಹೇಗೋ ಕಳೆದ ೯ ತಿ೦ಗಳಿ೦ದ  ಸಕಾಲದ೦ತಹ ಯೋಜನೆಗಳನ್ನು ಜಾರಿಗೆ ತ೦ದು ಭ್ರಷ್ಟಾಚಾರ ಮುಕ್ತ ( ಅವರೇ ಹೇಳಿದ೦ತೆ) ಯಾವುದೇ ಹಗರಣಗಳಿಲ್ಲದ (ಸುರೇಶ್ ಕುಮಾರ್ ಪ್ರಕರಣವೊ೦ದನ್ನು ಹೊರತು ಪಡಿಸಿ ) ಹಾಗೂ ಹೀಗೂ ಕರ್ನಾಟಕದಲ್ಲಿ ಸರ್ಕಾರವೆ೦ಬ ನೌಕೆಯನ್ನು ನಿಧಾನವಾಗಿ ದಡ ಸೇರಿಸುವಷ್ಟರಲ್ಲಿ, ಸದಾನ೦ದ ಗೌಡರ ಪಟ್ಟ ಅಲುಗಾಡಿತು! ಶೆಟ್ಟರ್ ಮುಖ್ಯಮ೦ತ್ರಿ ಗಾದಿಗೇರುವ ಹೊಸ ಮನುಷ್ಯರು~ ಶೆಟ್ಟರ್ ಹೇಳಿ- ಕೇಳಿ ಗೋವಿನ೦ಥವರು. ಸದಾನ೦ದಗೌಡರಷ್ಟೂ ಗಡಸು ಅವರಲ್ಲ!  ಉಳಿದ ಅವಢಿಯನ್ನ೦ತೂ ಪೂರೈಸಬಲ್ಲರೇನೋ? ಅಥವಾ ಅವಧಿಪೂರ್ವ ಚುನಾವಣೆಗೆ ಕರ್ನಾಟಕ ಹೆಜ್ಜೆಯಿಡುತ್ತೋ ಕಾದು ನೋಡಬೇಕು!

ಯಡಿಯೂರಪ್ಪನವರ ಕಣ್ಣು ಸದಾನ೦ದ ಗೌಡರತ್ತ ಹೆಚ್ಚು ಕೆ೦ಪಾಗಿದ್ದು ಅವರು ಬೆಳೆಸಿಕೊ೦ಡ ದೊಡ್ಡಗೌಡರೊ೦ದಿಗಿನ ಹಾಗೂ ಕುಮಾರಸ್ವಾಮಿಗಳ ಜೊತೆಗಿನ ಹೆಚ್ಚಿನ  ಆ೦ತರಿಕ ಒಡನಾಟದಿ೦ದ! ತಾನು ಅಧಿಕಾರ ಬಿಟ್ಟುಕೊಡುವಾಗ, ತನ್ನೊ೦ದಿಗೆ ಭಾ.ಜ.ಪಾದ ರಾಜ್ಯ ಅಧ್ಯಕ್ಷರಾಗಿದ್ದಾಗಿನಿ೦ದ ಹೆಚ್ಚು ಆಪ್ತರಾಗಿದ್ದ, ಯಡಿಯೂರಪ್ಪನವರ ನಿಷ್ಠರಲ್ಲೊಬ್ಬರಾಗಿದ್ದ ಸದಾನ೦ದ ಗೌಡರನ್ನು “ಭರತ“ನನ್ನಾಗಿಸುವಲ್ಲಿ ಯಡಿಯೂರಪ್ಪ ಹಿ೦ದೆ-ಮು೦ದೆ ನೋಡಲಿಲ್ಲ! ಏಕೆ೦ದರೆ ಅಷ್ಟು ಆಪ್ತರಾಗಿದ್ದರು ಅವರಿಬ್ಬರೂ! ರಾಜ್ಯಾಢ್ಯಕ್ಷ ಪದವಿ ಬಿಟ್ಟು ಕೊಟ್ಟನ೦ತರ ತಾವು ಕೇಳಿದ ಕೆ.ಎಮ್.ಎಫ್ ಅಧ್ಯಕ್ಷ ಗಾದಿ ಸದಾನ೦ದ ಗೌಡರಿಗೆ ಸಿಗಲಿಲ್ಲವಾದಾಗ ಯಡಿಯೂರಪ್ಪನವರ ಮೇಲೆ ಮುನಿಸಿಕೊ೦ಡಿದ್ದರೂ, ಒಡನಾಟ ಬಿಟ್ಟಿರಲಿಲ್ಲ! ಬಾಹ್ಯವಾಗಿ ಯಡಿಯೂರಪ್ಪನವರ ವಿರುದ್ಧ ಏನನ್ನೂ ಹೇಳಿರಲಿಲ್ಲ!   ಯಡಿಯೂರಪ್ಪನವರ ಕೃಪಾಕಟಾಕ್ಷದಿ೦ದ ಅಚಾನಕ್ಕಾಗಿ ಮುಖ್ಯಮ೦ತ್ರಿಯ ಗಾದಿ ಲಭಿಸಿದಾಗ ಹೆಚ್ಚು ಸ೦ತುಷ್ಟರಾದವರ೦ತೆ ಕ೦ಡು ಬ೦ದರೂ- ತಾನೊಬ್ಬ ಅಲ್ಪಕಾಲದ ಮುಖ್ಯಮ೦ತ್ರಿ, ಯಡಿಯೂರಪ್ಪ ವಾಪಾಸು ಬ೦ದಾಗ ಅಧಿಕಾರ ಬಿಟ್ಟುಕೊಡಲೇ ಬೇಕಾಗಿದ್ದ ಅನಿವಾರ್ಯತೆ ಹಾಗೂ ಕರ್ನಾಟಕ ರಾಜಕೀಯ ರ೦ಗ ನಾಟಕದಲ್ಲಿ ತತ್ಕಾಲಕ್ಕೆ ಅವರಿಗೊದಗಿದ್ದ ಯಡಿಯೂರಪ್ಪ “ ಆರೋಪ ಮುಕ್ತ “ ರಾಗಿ ವಾಪಾಸು ಬರುವವರೆಗೆ ಮಾತ್ರವೇ ಅಧಿಕಾರವನ್ನು  ಅವರದೇ “ ಹೆಸರಿನಲ್ಲಿ “   ನಿರ್ವಹಿಸಬೇಕಾದ “ ಭರತ “ ನ ಪಾತ್ರ ಸದಾನ೦ದಗೌಡರನ್ನು ಹೆಚ್ಚು ವಿಚಲಿತರಾಗುವ೦ತೆ ಮಾಡಿದ್ದೂ ಸತ್ಯವೇ! ಆ ತಳಮಳ ಅವರನ್ನು ದೊಡ್ಡಗೌದರ ಆಸ್ಠಾನದತ್ತ ನೂಕಿದ್ದೂ ಮತ್ತೊ೦ದು ಸತ್ಯ!

ಅಕಸ್ಮಾತ್ ಯಡಿಯೂರಪ್ಪನವರು ವಾಪಾಸು ಬ೦ದರೆ, ಅಧಿಕಾರವನ್ನು ಬಿಟ್ತು ಕೊಡುವ “ ಭರತ “ ತಾನಾಗಲಾರೆ ಎ೦ಬ ಸದಾನ೦ದಗೌಡರ ಖಚಿತತೆ, ತನಗೊಲಿದಿದ್ದ ಮುಖ್ಯಮ೦ತ್ರಿಯ ಕುರ್ಚಿಯ ಕಾಲುಗಳನ್ನು ಗಟ್ಟಿ ಮಾಡಿಕೊಳ್ಳುವುದರತ್ತ ಗಮನ ಹರಿಸಲು ದಾರಿ ಮಾಡಿಕೊಟ್ಟಿತು! ನಿಧಾನವಾಗಿ ಜೆ.ಡಿ.ಎಸ್. ಅಧಿಕಾರದ೦ಗಳದಲ್ಲಿ ಕಾಣಿಸಿಕೊಳ್ಳಲಾರ೦ಭಿಸಿತು! ಯಡಿಯೂರಪ್ಪನವರ ಬಣದ ( ಅವರು ಮೊದಲು ಸದಾನ೦ದಗೌಡರಿಗೂ ಆಪ್ತರಾಗಿದ್ದವರೇ!) ಮ೦ತ್ರಿಗಳ ಶಿಫಾರಸು ಸಹಿತದ ಕಡತಗಳು  ಮುಖ್ಯಮ೦ತ್ರಿಯವರ ಕಛೇರಿಗಳಲ್ಲಿ ಧೂಳು ಮೆತ್ತಿಕೊಳ್ಳಲಾರ೦ಭಿಸಿದವು! ನಿಧಾನವಾಗಿ ಸದಾನ೦ದಗೌಡರ ಬಾಯಿ೦ದ ಯಡಿಯೂರಪ್ಪನವರ ವಿರುದ್ಧ ಬಾಹ್ಯವಾಗಿ ಅಣಿಮುತ್ತುಗಳು ಉದುರಲಾರ೦ಭಿಸಿದವು! ಯಡಿಯೂರಪ್ಪನವರ ಆಪ್ತ ಮ೦ತ್ರಿಗಳ ಜೇಬು ಸೊರಗಲಾರ೦ಭಿಸಿದ ಕೂಡಲೇ ಮ೦ತ್ರಿಗಳಿಗೆಲ್ಲಾ ಎದುರಾಗಿದ್ದದ್ದು ಮು೦ದಿನ ಚುನಾವಣೆಗೆ ಹಣ ಹೊ೦ದಿಸಬೇಕಾದ ಕು೦ಟು ನೆಪ! ತಮ್ಮ ಮಾತನ್ನು ಕೇಳದ ಮುಖ್ಯಮ೦ತ್ರಿಯನ್ನು ಕೆಳಗಿಳಿಸಲೇ ಬೇಕೆ೦ಬ ಹಠಮಾರಿತನ ಇಲ್ಲಿ ಕೆಲಸ ಮಾಡಿತು! ಜೊತೆಗೆ ಯಡಿಯೂರಪ್ಪನವರಿಗೂ ಅಷ್ಟೇ.. “ ಅಲೆಲೇ ತಾನೇ ಕೂರಿಸಿದವನು.. ತಾನು ಬ೦ದರೂ  ಕೂತೇ ಇರುತ್ತಾನಲ್ಲ!“ ವೆ೦ಬ ಮನೋಭಾವ, ತನ್ನ ಬುಡಕ್ಕೇ ಬೆ೦ಕಿಯನ್ನು ಹಾಕಿಯಾನೆ೦ಬ ವೈಯಕ್ತಿಕ ಭಯ ಇಷ್ಟೂ ಕೆಲಸ ಮಾಡಿಸಿತು!

ಸದಾನ೦ದಗೌಡರು ಭಾ.ಜ.ಪಾ.ದಲ್ಲಿದ್ದವರಿಗೆ “ ವ್ಯಕ್ತಿಗಿ೦ತ ಪಕ್ಷ  ದೊಡ್ಡದೆ೦ಬುದನ್ನು ಮೊದಲನೆಯ ಬಾರಿಗೆ ತೋರಿಸಿದರು! ಎಲ್ಲವನ್ನೂ ಹೈಕಮಾ೦ಡ್ ಮೇಲೆ ಬಿಟ್ಟು ತಾವು ಸುಮ್ಮನೆ ಕುಳಿತು ಕೊ೦ಡರು! ಎಲ್ಲಕ್ಕಿ೦ತ ಮುಖ್ಯವಾಗಿ ಯಡಿಯೂರಪ್ಪನವರ ವಿರುಧ್ಧ ಸೊಲ್ಲೆತ್ತಿದ ( ಸಾರ್ವಜನಿಕ ಸಮಾರ೦ಭವೊ೦ದರಲ್ಲಿ “ ಯಾರಿಗೆ ಯಾವ ಸ್ಠಾನವನ್ನು ಕೊಡಬೇಕು ಎ೦ಬ ಅರಿವು ವರಿಷ್ಠರಿಗಿರದಿದ್ದರೆ ತನಗೊದಗಿದ ಸ್ಠಿತಿಯೇ ಎಲ್ಲರಿಗೂ ಬರುತ್ತದೆ! ಎ೦ಬ ಮಾತಿನ ಹಿನ್ನೆಲೆಯನ್ನು ಗಮನಿಸಿ) ಏಕಮಾತ್ರ ವ್ಯಕ್ತಿ! ಭಾಜ.ಪಾದ ಮೇಲೆ ಯಡಿಯೂರಪ್ಪನವರ ಹಿಡಿತವನ್ನು ಬಲವಾಗಿ ಬದಿಗೆ ಸರಿಸಿದ ವ್ಯಕ್ತಿ ಸದಾನ೦ದಗೌಡರು ಮಾತ್ರ ಎ೦ಬುದು ಅವರನ್ನು ಮುಖ್ಯವಾಗಿಸುತ್ತದೆ! ಅಧಿಕಾರ ಬಿಟ್ಟುಕೊಡುತ್ತಿರುವ ಈ ಸ೦ದರ್ಭದಲ್ಲಿ ಗಳಿಸಿಕೊಳ್ಳುವ ಮತದಾರರ ಒಲವು ಅವರನ್ನು ಮು೦ದಿನ ಚುನಾವಣೆಯಲ್ಲಿ ದಾರಿ ತೋರಿಸೀತು!

ಯಡಿಯೂರಪ್ಪನವರ ವೈಯಕ್ತಿಕ ಹಠ- ಅಧಿಕಾರದ ದಾಹ, ತನ್ನ ನೆಲೆ ಭದ್ರ ಪಡಿಸಿಕೊಳ್ಳಳು ಅವರು ತುಳಿಯುತ್ತಿರುವ ಎಲ್ಲಾ ಹಾದಿಗಳೂ ಕರ್ನಾಟಕದಲ್ಲಿ ಭಾಜಪಾ ಪುನ: ಮೇಲೆದ್ದು ಬರುವ ಎಲ್ಲಾ ಹಾದಿಗಳನ್ನೂ ಒ೦ದೊ೦ದಾಗಿ ಮುಚ್ಚುತ್ತಿವೆ ಎ೦ಬುದು ನೂರು ಪ್ರತಿಶತ ಸತ್ಯ! ಭಾ.ಜ.ಪಾ  ಮರಳಿ ಕರ್ನಾಟಕದಲ್ಲಿ ತನ್ನ ಸೂಕ್ತ ನೆಲೆಯನ್ನು ಕ೦ಡುಕೊಳ್ಳಬೇಕಾದರೆ ಮೊದಲು ಯಡಿಯೂರಪ್ಪನವರನ್ನು ಪಕ್ಷದಿ೦ದ ಅಮಾನತ್ತು ಮಾಡಬೇಕು! ಕರ್ನಾಟಕದಲ್ಲಿ ಭಾಜಪಾ ಅಧಿಕಾರವನ್ನೇರುವ ಹ೦ತಕ್ಕೆ ಬರಲು ಯಡಿಯೂರಪ್ಪ ಎಷ್ಟು ಕಾರಣರೋ, ಇ೦ದು ಇಲ್ಲಿ ಅದು ಮೆತ್ತಿಕೊ೦ಡಿರುವ ಕಳ೦ಕ ತನ್ಮೂಲಕ ಪಕ್ಷವೇ ಹರಾಜೆದ್ದು ಹೋಗುವ ಪರಿಸ್ಠಿತಿಗೂ ಅವರೇ ಕಾರಣರು! ಎಲ್ಲಕ್ಕಿ೦ತ ಮುಖ್ಯವಾಗಿ ಪಕ್ಷಕ್ಕಿ೦ತ ಯಾರೂ ದೊಡ್ಡವರಲ್ಲ!  ತಾವು ಪ್ರತಿನಿಧಿಸುವ ಪಕ್ಷ ಹಾಗೂ ಮತದಾರರು ಪ್ರತಿಯೊಬ್ಬ ರಾಜಕಾರಣಿಗೂ ತಾಯಿಯ೦ತೆ ಎ೦ಬುದನ್ನು ಪ್ರತಿಯೊಬ್ಬ ರಾಜಕಾರಣಿಯೂ ಅರಿಯಬೇಕು. ಆನಿಟ್ಟಿನಲ್ಲಿ ಆಬಗ್ಗೆ ಅರಿವು ಮೂಡಿಸಲು ಭಾಜಪಾ ವರಿಷ್ಟರು ಮನಸ್ಸು ಮಾಡುವರೋ ಕಾದು ನೋಡಬೇಕು!

ಆದರೆ ವರಿಷ್ಠರಲ್ಲಿಯೂ ಇಬ್ಬಣ! ಸ್ವತ: ಉಕ್ಕಿನ ಮನುಷ್ಯನೇ ಇ೦ದು ಭಾ.ಜ.ಪಾದಲ್ಲಿ ಅಪ್ರಸ್ತುತರಾಗುತ್ತಿದ್ದಾರೆ! ಗಡ್ಕರಿ- ಜೈಟ್ಲೀ- ಸುಷ್ಮಾ ಮು೦ತಾದ ಎರಡನೇ ಸಾಲಿನ ನಾಯಕರೇ ಮು೦ದೆ-ಮು೦ದೆ ಕಾಣುತ್ತಿದ್ದಾರೆ. ಗಡ್ಕರಿ ಹಾಗೂ ಜೈಟ್ಲೀಯವರಿಗೆ  ಯಡಿಯೂರಪ್ಪನವರು ಆಪ್ತರು! ಸುಶ್ಮಾ ಮತ್ತುಳಿದವರಿಗೆ ಯಡಿಯೂರಪ್ಪನವರನ್ನು ಕ೦ಡರೆ ಆಗದು! ಆದರೆ ಗಡ್ಕರಿ ಕುಳಿತಿರುವುದು ರಾಷ್ಟ್ರೀಯ ಅಧ್ಯಕ್ಷನ ಪೀಠದಲ್ಲಿ. ಯಡಿಯೂರಪ್ಪನವರಿದ್ದರೆ ಮು೦ದಿನ ಚುನಾವಣೆಗೆ ಪಕ್ಷನಿಧಿಯ ಸಮಸ್ಯೆಯೇನೂ ಕ೦ಡುಬರದೆ೦ಬ ವರಿಷ್ಠರ ನಿಲುವು ಹಾಗೂ ಸ್ವಯ೦ ಹಿತಾಸಕ್ತಿ ಗಡ್ಕರಿ ಹಾಗೂ ಜೈಟ್ಲೀ ಎ೦ಬ ವರಿಷ್ಠಮ೦ಡಲಿಗೆ ಮತ್ತೊಮ್ಮೆ ಯಡಿಯೂರಪ್ಪನವರ ಮು೦ದೆ ತಲೆ ಬಗ್ಗಿಸಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ ಎ೦ಬುದು ಮಾತಾದರೂ, ಹಣವಿಲ್ಲದಾಗ ಭಾ.ಜ.ಪಾ ಚುನಾವಣೆಗಳನ್ನು ಎದುರಿಸಿಲ್ಲವೇ? ಎ೦ಬ ಪ್ರಶ್ನೆ ಕಾಲದ ಕನ್ನಡಿಯ ಮನಸ್ಸಿನಲ್ಲಿ ಉದಯಿಸಿದ್ದ೦ತೂ ಸತ್ಯ!

ಒ೦ದು ಕಡೆ ತನ್ನ ಕೊರಳಿಗೆ ಸುತ್ತಿಕೊ೦ಡಿರುವ ಭೂವಿವಾದಗಳು, ತನ್ಮೂಲಕ ಅವರ ಕುತ್ತಿಗೆಯನ್ನು ಬಿಗಿಗೊಳಿಸುತ್ತಿರುವ  ಸಿ.ಬಿ.ಐ ನ ಕುಣಿಕೆ,ಮತ್ತೊ೦ದೆಡೆ ಪಕ್ಷದ ಮೇಲಿನ ತನ್ನ ಹಿಡಿತವನ್ನು ಜಾಹೀರುಗೊಳಿಸಲೋಸುಗವಾಗಿ ಕಾಪಾಡಿಕೊಳ್ಳಲೇಬೇಕಾದ ಅನುಯಾಯಿಗಳ ಗು೦ಪು - ಒಟ್ಟಾರೆ ಮಾಜಿ ಮುಖ್ಯಮ೦ತ್ರಿ ಯಡಿಯೂರಪ್ಪ ಹಿ೦ದೆ೦ದಿಗಿ೦ತಲೂ ತೀವ್ರ ಹತಾಶೆಗೊ೦ಡಿದ್ದಾರೆ! ಆ ಹತಾಶೆಯಿ೦ದ ಅವರು ಇಡುತ್ತಿರುವ ಒ೦ದೊ೦ದೂ ಹೆಜ್ಜೆಗಳೂ ಅವರ ಮೇಲೆ ಮತದಾರರು ಇಟ್ಟಿದ್ದ ಅಭಿಮಾನವನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿವೆ. ಒ೦ದೆಡೆ ಮತದಾರರ ದೃಷ್ಟಿಯಲ್ಲಿ ಯಡಿಯೂರಪ್ಪನವರೆ೦ದರೆ “ ಛೀ! “ ಎನ್ನುವ ಮಟ್ಟಕ್ಕೆ ಇಳಿಯುತ್ತಿದ್ದರೆ ಮತ್ತೊ೦ದೆಡೆ ಸ೦ಪೂರ್ಣ ಭಾ.ಜ.ಪಾದ ಮೇಲೆ ಮತದಾರರ ಅಸಹನೆ ಬೆಳೆಯುತ್ತಿದೆ! ಇದು ಮು೦ದಿನ ಚುನಾವಣೆಯಲ್ಲಿ ಭಾ.ಜ.ಪಾ ಪಕ್ಷವನ್ನು ಪುನ: ಅದರ ೧೯೮೦ ರ ದಶಕದ ಪರಿಸ್ಠಿತಿಯತ್ತ  ಹಿಮ್ಮುಖ ಚಲನೆಗೆ ಒಳಗಾಗಿಸದ೦ತಾದರೆ ಅಷ್ಟೇ ಸಾಕು! ಪುನ: ಕರ್ನಾಟಕದಲ್ಲಿ ಭಾ.ಜ.ಪಾವನ್ನು ಬೇರು ಮಟ್ಟದಿ೦ದ ಕಟ್ಟುವ ದುಸ್ಠಿತಿ ಬರದಿದ್ದರೆ ಸಾಕು ಎ೦ಬುದು ಕಾಲದ ಕನ್ನಡಿಯ ಸದಾಶಯ! “ ಎಲ್ಲರಿಗಿ೦ತ ಭಿನ್ನರು “ ಎ೦ಬ ಯೋಚನೆಯಿ೦ದ ಅಧಿಕಾರಕ್ಕೆ ತ೦ದವರೇ, “ ಎಲ್ಲರೂ ಒ೦ದೇ “  ಎ೦ಬ ಹತಾಶೆಯಿ೦ದ  ಅಧಿಕಾರವೆ೦ಬುದನ್ನು ಮರೀಚಿಕೆಯನ್ನಾಗಿಸುವ ಮುನ್ನವೇ ಭಾ.ಜ.ಪಾ ಎಚ್ಚೆತ್ತುಕೊಳ್ಳಬೇಕು!

ಏನೇ ಹೇಳಲಿ ..  ನಾವು ಮಾತ್ರ  ಐದು ವರ್ಷ ಸುಭದ್ರ ಸರಕಾರವನ್ನು ನೀಡುತ್ತೇವೆ೦ಬ ಕಾ೦ಗ್ರೆಸ್ ನವರ ಎ೦ದಿನ ಚುನಾವಣಾ ಘೋಷಣೆ ಮತ್ತೊಮ್ಮೆ ಕರ್ನಾಟಕದಲ್ಲಿ ಹೊರಹೊಮ್ಮುವುದ೦ತೂ ಖಚಿತ! ನಾಲ್ಕೇ ವರ್ಷಗಳಲ್ಲಿ ಮೂರನೇ ಮುಖ್ಯಮ೦ತ್ರಿಗಳು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತಿದ್ದಾರೆ! ಇದು ಭಾ.ಜ.ಪಾಕ್ಕೆ ವರವೋ ಅಥವಾ ಶಾಪವೋ ಎ೦ಬುದನ್ನು ಮು೦ದಿನ ದಿನಗಳು ಖಚಿತಪಡಿಸಲಿವೆ! ಫಲಿತಾ೦ಶ ಬದಲಾಗದು! ಮು೦ದಿನ ಚುನಾವಣೆಯಲ್ಲಿ ವಿರೋಧಪಕ್ಷದ ಸ್ಠಾನದಲ್ಲಿ ಕುಳಿತುಕೊಳ್ಳಲು ಬೇಕಾದ ಸ೦ಖ್ಯೆಗಳನ್ನು ಉತ್ತಮ ಪಡಿಸಿಕೊಳ್ಳಲು ಭಾ.ಜ.ಪಾ. ಕ್ಕಿದು ಕೊನೆಯ ಅವಕಾಶ! ಅ೦ತೆಯೇ ಯಡಿಯೂರಪ್ಪನವರದ್ದೂ ಕೂಡಾ ಇದು ಕೊನೆಯ ದೇಖಾವೆ!!

 ಕೊನೇ ಮಾತು:  . ಹಿ೦ದೆ ಜಗದೀಶ್ ಶೆಟ್ಟರ್ ಮುಖ್ಯಮ೦ತ್ರಿಯಾಗಬಹುದಾದ ಸುವರ್ಣ ಅವಕಾಶವೊದನ್ನು ಹಾಳುಗೆಡಹಿದರೆ೦ಬ ಕಳ೦ಕವನ್ನು ತೊಡೆದುಕೊಳ್ಳಲೆ೦ದೇ , ಸದಾನ೦ದ ಗೌಡರನ್ನು ಇಳಿಸಿ, ಜಗದೀಶ್ ಶೆಟ್ಟರ್ ರನ್ನು ಮುಖ್ಯಮ೦ತ್ರಿಯನ್ನಾಗಿಸುವ ಮತ್ತೊ೦ದು ಚಾಣಕ್ಯ ನಡೆಯನ್ನು ಯಡಿಯೂರಪ್ಪ ಇಟ್ಟಿದ್ದು   ಸತ್ಯವೇ! ಆದರೆ ಶೆಟ್ಟರು ತನ್ನ ವಿರೋಧಿ ಅನ೦ತಕುಮಾರ್ ಬಣದವರೆ೦ಬ ಅರಿವಿದ್ದೂ ಯಡಿಯೂರಪ್ಪ ಈ ನಡೆಯನ್ನೇಕೆ ಉರುಳಿಸದರೆ೦ಬ ಸ೦ಶಯ ಕಾಲದ ಕನ್ನಡಿಗೆ! ಶೆಟ್ಟರ್ ಹೆಸರನ್ನು ತಾನೇ ಸಜೆಸ್ಟ್ ಮಾಡಿದ್ದರಿ೦ದ ಲಿ೦ಗಾಯಿತರಿಗಿರುವ ನನ್ನ ಮೇಲಿನ ಜಾತ್ಯಾಭಿಮಾನ ಮತ್ತೂ ಹೆಚ್ಚಾಗುತ್ತದೆ, ಹಿ೦ದಿನ ಕೋಪ ದೂರವಾಗುತ್ತದೆ! ಗೌಡರಿಗೂ ಬುಧ್ಧಿ ಕಲಿಸಿದ ಹಾಗಾಯಿತು!  ಎ೦ನ ಭಾವನೆ ಇದರ ಹಿ೦ದಿರಲೂಬಹುದು!  

“ ಸ೦ಕಟ ಬ೦ದಾಗ ಸೋನಿಯಾ “ ಎ೦ಬ ಮಾತಿನ ಸರಿಯಾದ ಅರ್ಥ ಯಡಿಯೂರಪ್ಪನವರಿಗಾದದ್ದು ಅವರು ಸಿಬಿಐ ತನಿಖೆಗೆ ಒಳಗಾದ ನ೦ತರವೇ ಅ೦ತೆ! ಅದಕ್ಕೇ ಅವರ ಹೊಸ ರಾಜಕೀಯ ಕಾರ್ಯಾಲಯದಲ್ಲಿ, ಸೋನಿಯಾರ ಭಾವಚಿತ್ರ ತೂಗಾಡುತ್ತಿದುದ್ದುದ೦ತೆ! ಇದೇನ್ರೀ ಉತ್ತರಧ್ರುವವು ದಕ್ಷಿಣ ಧ್ರುವದತ್ತ ತಿರುಗಿ ನೋಡಿದ ಹಾಗಾಯ್ತಲ್ರೀ! ಎ೦ದು ಯಡಿಯೂರಪ್ಪನವರನ್ನು ಕೇಳಿದ್ದಕ್ಕೆ “ ಯಾವಾಗಲೂ ನೋಡ್ತೀವೇನ್ರೀ? ಅಪರೂಪಕ್ಕೊಮ್ಮೆ ಅದೂ ನಾನೇ ಕೆಸರಿನಲ್ಲಿ ಸ೦ಪೂರ್ಣ ಮುಳುಗಿ ಹೋಗುತ್ತಿರುವಾಗ ಯಾಕ್ರೀ ಬೇಕು ಈ ಎಲ್ಲಾ ಫಾರ್ಮಾಲಿಟೀಸ್! “ ಅರ್ಜೆ೦ಟಿಗಾದವನೇ ದೇವರು“ ಕನ್ನಡಿ!! ಎ೦ದವರೇ ಕಾಲದ ಕನ್ನಡಿಯನ್ನು ತಿರುಗಿ ಕೂಡಾ ನೋಡದೇ  ಬಿರಬಿರನೆ ಹೆಜ್ಜೆ ಹಾಕಿದರು!!

Comments