ಗೀತೆಯ ಗುಟ್ಟು-3.
ಇನ್ನು ನಮ್ಮ ಧರ್ಮದ ಆದಿ ಗ್ರಂಥಗಳು ವೇದೋಪನಿಷತ್ತುಗಳೆಂದು ನಾವೆಷ್ಟೇ ಅಭಿಮಾನದಿಂದ ಹೇಳಿದರೂ ನಮ್ಮಲ್ಲಿ ಬಹು ಜನರಿಗೆ ವೇದಗಳೆಂದರೇನು, ಅವುಗಳಲ್ಲಿಯ ಮಂತ್ರಗಳೆಷ್ಟು, ಅವುಗಳ ಕರ್ತೃಗಳು ಯಾರು, ಅವುಗಳ ವಿಷಯವೇನು ಮುಂತಾದವುಗಳ ಕುರಿತು ಸ್ಪಷ್ಟ ಜ್ಞಾನವು ಇಲ್ಲದಿರುವುದು ಶೋಚನೀಯವೇ ಸೈ. ಅಲ್ಲಿ ಇಲ್ಲಿ ಒಬ್ಬಿಬ್ಬರಿಗೆ ಮಾತ್ರ ಈ ಜ್ಞಾನವು ಇರುವುದು. ಮಿಕ್ಕವರೆಲ್ಲರೂ ಕೇವಲ ಅಂಧಅಭಿಮಾನದಿಂದ ನಮ್ಮ ವೇದಗಳು ಶ್ರೇಷ್ಟ, ಅವು ಹಾಗೇ ಇವೆ, ಹೀಗೆ ಇವೆ, ಎಂದು ಹೇಳಿ ಆತ್ಮವಂಚನೆಯನ್ನು ಮಾಡಿಕೊಳ್ಳುತ್ತಿರುವರು. ಆದರೆ ಗೀತಾಗ್ರಂಥದ ಮಾತು ಹಾಗಿಲ್ಲ. ಅದು ಹಿಂದುಗಳಲ್ಲಿ ಅಬಾಲವೃದ್ಧರಿಗೆ ಗೊತ್ತಿದ್ದ ಗ್ರಂಥ. ಅದರ ವಿಷಯವೂ, ಮಹತ್ವವೂ, ಕತೃವೂ, ಎಲ್ಲರಿಗೂ ಪರಿಚಿತ. 6ನೇ ಶತಮಾನದಲ್ಲಿ ಕೂಡ ಗೀತೆ ನಿತ್ಯ ಪಠಣದ ಗ್ರಂಥವಾಗಿತ್ತೆಂದು ಐತಿಹಾಸಿಕ ಉಲ್ಲೇಖಗಳಿವೆ. ಇಡೀ ಚತುರ್ವೇದಗಳನ್ನೇ ಮುಖೋದ್ಗತ ಮಾಡಿ ಸಾವಿರಾರು ವರ್ಷಗಳ ವರೆಗೆ ಒಂದು ಅಕ್ಷರವೂ ಅಚ್ಚಳಿಯದಂತೆ ಅವುಗಳನ್ನು ಉಳಿಸಿಕೊಂಡಿರುವ ಹಿಂದುಗಳು ಗೀತೆಯಂಥ ಸಣ್ಣ ಪುಸ್ತಕವನ್ನು ಪಾಠಮಾಡುವುದು ದೊಡ್ಡ ವಿಷಯವಲ್ಲ. ಆದರೆ 6ನೇ ಶತಮಾನದಲ್ಲಿ ಕೂಡ ಗೀತೆಯು ಅಷ್ಟೊಂದು ಮಹತ್ವವನ್ನು ಪಡೆದಿತ್ತೆಂದು ಹೇಳುವುದೇ ನನ್ನ ಇಲ್ಲಿನ ಉದ್ದೇಶ. ತನ್ನ ಅನೇಕ ಸದ್ಗುಣಗಳ ಮೂಲಕ ಪ್ರಸ್ಥಾನತ್ರಯಿಯಲ್ಲಿ ಪ್ರವಿಷ್ಟವಾದುದಲ್ಲದೇ ಎಲ್ಲ ಜನತೆಯ ನಿತ್ಯ ಪಾಠದ ಪವಿತ್ರ ಪುಸ್ತಕವಾಗಿ ಮೆರೆದು ಗೀತೆಯು ಬೇರೆ ಅನೇಕ ಋಷಿಮುನಿಗಳಿಗೆ ಸ್ಫೂರ್ತಿಯನ್ನುಂಟುಮಾಡಿ ತನ್ನಂಥ ಬೇರೆ ಗ್ರಂಥಗಳನ್ನು ರಚಿಸುವ ಶಕ್ತಿಯನ್ನು ಕೊಟ್ಟಿತು. ಮನುಶ್ಯನು ಅನುಕರಣಶೀಲನಾದುದರಿಂದ ಒಂದು ಗ್ರಂಥವು ದೊಡ್ಡದೆಂಬ ಕೀರ್ತಿಯು ಹಬ್ಬಿದಕೂಡಲೇ ಆ ಗ್ರಂಥದಂಥಹ ಗ್ರಂಥಗಳನ್ನು ಬರೆಯುವ ಲವಲವಿಕೆಯು ಕೆಲವರಲ್ಲಿ ಉಂಟಾಗುತ್ತದೆ. ಉಪನಿಷತ್ತುಗಳು ಸರ್ವರಿಗೂ ಅತ್ಯಂತ ಲೋಕಪ್ರೀಯವಾದಕೂಡಲೇ ಮೂಲ 10-15 ಉಪನಿಷತ್ತುಗಳನ್ನು ಕಣ್ಣೆದುರಿಗೆ ಇಟ್ಟುಕೊಂಡು ಲೆಕ್ಕವಿಲ್ಲದಷ್ಟು – ಕೆಲವರು 108 ಎಂದು, ಕೆಲವರು 150 ಎಂದು ಹೇಳುವರು- ಉಪನಿಷತ್ತುಗಳು ಬರೆಯಲ್ಪಟ್ಟವು. ಅದೇ ರೀತಿ ಗೀತೆಯ ಮಾದರಿಯನ್ನು ಅನುಸರಿಸಿ ರಾಮಗೀತೆ, ಗಣೇಶಗೀತೆ, ಉದ್ಭವಗೀತೆ ಎಂಬ ಅನೇಕ ಹೆಸರುಗಳುಳ್ಳ ಗೀತೆಗಳು ಹುಟ್ಟಿದವು. ಈ ಪರಿಯ ಅನುಕರಣವು ಗೀತೆಯ ಲೋಕಪ್ರೀಯತೆಯನ್ನು ಅದರ ಮಹತ್ವವನ್ನೂ ಸ್ಪಷ್ಟವಾಗಿ ತೋರಿಸುವುದು. ಆದರೆ ಉಪನಿಷತ್ತುಗಳು ಎಂಬ ಅಡ್ಡ ಹೆಸರು ಇಟ್ಟುಕೊಂಡಾಕ್ಷಣಕ್ಕೆ, ಕಲಿಸಂತರಣೋಪನಿಷತ್ತು, ರುದ್ರಾಕ್ಷೋಪನಿಷತ್ತು ಮುಂತಾದ ಅನೇಕ ಉಪನಿಷತ್ತುಗಳು ದಶೋಪನಿಷತ್ತುಗಳನ್ನು ಸರಿಗಟ್ಟಬಲ್ಲವೇ? ಸರ್ವಥಾ ಇಲ್ಲ. ಹಾಗೆಯೇ ಗೀತಾ ಎಂಬ ಅಭಿದಾನವನ್ನು ಪಡೆದರೂ ಶ್ರೀಮದ್ಭಗವದ್ಗೀತೆಯ ನಂತರ ರಚಿಸಲ್ಪಟ್ಟ ಗಣೇಶಗೀತಾ, ರಾಮಗೀತಾ ಮುಂತಾದ ಯಾವುದೇ ಗೀತೆಗಳಲ್ಲಿ ಆ ಮೂಲ ಗೀತೆಯ ಗಾಂಭೀರ್ಯವಾಗಲೀ, ಮಹತ್ವವಾಗಲೀ ಕಾಣುವುದು ಅಸಂಭವನೀಯವು. ಅಥವಾ ಅಷ್ಟೇ ಏಕೆ, ಗೀತಾ ಗ್ರಂಥದ ಪಶ್ಚಾತ್ ಹಿಂದೂ ಜನರ ತತ್ವಜ್ಞಾನದ ವಾಙ್ಮಯದಲ್ಲಿ ಇದುವರೆಗೆ ಅಷ್ಟು ಆಧ್ಯಾತ್ಮಕ ತೇಜಸ್ಸುಳ್ಳ, ಅಷ್ಟು ಲೋಕಪ್ರೀಯವಾದ, ಅಷ್ಟು ಸ್ಫೂರ್ತಿಯುಕ್ತ, ಅಷ್ಟು ಅಧಿಕಾರಪೂರ್ಣವಾದ ಮತ್ತೊಂದು ಗ್ರಂಥವೆ ನಿರ್ಮಾಣವಾಗಿಲ್ಲವೆಂದು ಸ್ಪಷ್ಟವಾಗಿ ಹೇಳಬಹುದು. ನಕ್ಷತ್ರ ರಾಶಿಗಳಲ್ಲಿ ಏಕಮೇವಾದ್ವಿತೀಯವಾಗಿ ರಾರಾಜಿಸುವ ಚಂದ್ರಮಂಡಲದಂತೆ, ಮುತ್ತುಗಳ ಮೊತ್ತದಲ್ಲಿ ಮಿರಿಮಿರಿ ಮಿಂಚಿ ಮೆರೆಯುವ ವಜ್ರಗೋಲಕದಂತೆ, ನಮ್ಮ ಗ್ರಂಥರಾಶಿಗಳಲ್ಲಿ ಗೀತೆಯು ಅನ್ಯಾದೃಶವಾದ, ಅಸಮಾನವಾದ ವರ್ಚಸ್ಸಿನಿಂದ ಈಗ್ಯೂ ಬೆಳಗುತಿರುವುದು.
ಗೀತೆಯ ಮಾಹಾತ್ಮ್ಯದ ಕಾರಣಗಳು:
ಗೀತೆಗೆ ಈ ತರಹದ ಮಹತ್ವ ಬರಲಿಕ್ಕೆ, ಈರೀತಿ ಗೀತೆಯ ಮಾಹತ್ಮ್ಯವು ಬೆಳೆಯಲಿಕ್ಕೆ, ಅಂಥ ವಿಶೇಷ ಕಾರಣಗಳೂ ಇರುವವು. ಕಾರಣವಿರದೇ ಕಾರ್ಯವಾಗದು. ಕಾರ್ಯಕಾರಣ ಸಂಬಂಧವಿಲ್ಲದ ಯಾವ ಸಂಗತಿಯೂ ಈ ಜಗತ್ತಿನಲ್ಲಿ ಸಂಭವಿಸಲಾರದು. ಆದುದರಿಂದ ವಿಮರ್ಶಿಸಿ ನೋಡಿದರೆ ನಮಗೆ ಗೀತೆಯ ಲೋಕಪ್ರೀಯತೆಯ ಗುಟ್ಟು ಚನ್ನಾಗಿ ತಿಳಿಯುವುದು.
(ಮುಂದುವರೆಯುವುದು.....)
Comments
ಉ: ಗೀತೆಯ ಗುಟ್ಟು-3.