ಕಾಗೆಯೊಂದು ಹಾರಿಬಂದು_ ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ

ಕಾಗೆಯೊಂದು ಹಾರಿಬಂದು_ ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ

 

                                    ಕಾಗೆಯೊಂದು ಹಾರಿಬಂದು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ
                                                               ರಚನೆ  :  ಸಿ. ಫ. ಕಟ್ಟಿಮನಿ
                                                         
      ಸ್ವಾತಂತ್ರ್ಯಾನಂತರ ಶಾಲೆಗಳಲ್ಲಿ ಕಲಿಸುತ್ತಿದ್ದ ಹಲವಾರು ನೀತಿ ಕಥೆಗಳು ಹಾಡಿನ ರೂಪದವು. ಮಕ್ಕಳಿಗೆ ತಿಳಿಯುವ ಸುಲಭ ಮಾರ್ಗ ಎಂದರೆ ಚಿತ್ರರೂಪ ಇಲ್ಲವೆ ಕಥಾರೂಪ. ಈ ಹಾಡುಗಳು ಕಥಾರೂಪದಲ್ಲಿ ಇರುತ್ತಿದ್ದುದರಿಂದ ಆಡುತ್ತ, ಹಾಡುತ್ತ ಆನಂದಿಸುತ್ತಿದ್ದುದನ್ನು ಮರೆಯಲಾಗದು.  ಶಾಲೆಯು ಸಂಜೆ ಬಿಡುವ ಸಮಯದಲ್ಲಿ ಒಕ್ಕೊರಲಿನಿಂದ ಮೇಷ್ಟ್ರು (ಮಾಸ್ತರರು) ಪದ್ಯಗಳನ್ನು  ಗಟ್ಟಿಯಾಗಿ ಹೇಳಿಸುತ್ತಿದ್ದರು. ಅಂದು ಅವುಗಳನ್ನು ಆಸ್ವಾದಿಸಿದ ಯಾರಿಗೇ ಆಗಲಿ ಅವುಗಳನ್ನು ಮರೆಯಲು ಸಾಧ್ಯವೇ ಇಲ್ಲ ಅಲ್ಲವೇ! ಅಷ್ಟೊಂದು ಹೃದಯದಾಳಕ್ಕೆ ಇಳಿದ ಹಲವಾರು ಕನ್ನಡದ ಅಮೌಲ್ಯ ಪದ್ಯರತ್ನಗಳನ್ನು ಮತ್ತೊಮ್ಮೆ ಹೆಕ್ಕಿ, ಹುಡುಕಿ ತಂದು ‘ಸಂಪದ’ದ ಮೂಲಕ, ಇಂದಿನ ಮಕ್ಕಳಿಗೆ ಮತ್ತೊಮ್ಮೆ ಕನ್ನಡ ತಾಯಿಯ ‘ಗುಟುಕು’ ನೀಡುವ ಪ್ರಯತ್ನ ಮಾಡಲಾಗಿದೆ…. ಈ ‘ಗುಟುಕು’ ಬಾಲ್ಯದಲ್ಲಿ ನೀಡದಿದ್ದರೆ, ಮುಂದೆ ಕನ್ನಡದ ರಕ್ತವಾಗಲಿ, ಮಾಂಸಖಂಡಗಳಾಗಲಿ ಅದ್ಹೇಗೆ ತಾನೇ ಬೆಳೆದಾವು. ಇಂದು ಮಕ್ಕಳೊಂದಿಗೆ ಪಾಲಕರೂ ಕೂಡ ಕನ್ನಡಪ್ರೇಮ ಮೆರೆಯಬೇಕಾಗಿದೆ. ಬೇರೆ ಭಾಷೆಗಳು ಮೆದುಳಿಗಾದರೆ, ಅನ್ನಕ್ಕಾದರೆ,  ಮಾತೃಭಾಷೆ ಹೃದಯಕ್ಕೆ,ಪ್ರೇಮಕ್ಕೆ,ಪ್ರೀತಿಗೆ.
   ನಾಡೋಜ ಪಾಟೀಲ್ ಪುಟ್ಟಪ್ಪನವರು ಒಮ್ಮೆ ಚನ್ನೈನಲ್ಲಿ ಪಾಸ್ ಪೋರ್ಟ ಕಚೇರಿಯಲ್ಲಿ ಉತ್ತಮ ಇಂಗ್ಲೀಷ ಮಾತನಾಡುತ್ತಿದ್ದ ಒಬ್ಬ ದರ್ಪದ ಅಧಿಕಾರಿಯನ್ನು ಅವನನ್ನು ಕನ್ನಡದವನೆಂದು ಗುರ್ತಿಸಿದ್ದು ಹೇಗೆ ಗೊತ್ತೆ. ಎಷ್ಟೇ ಕಲಿತರೂ ಎಣಿಕೆಯನ್ನು ಮಾತೃಭಾಷೆಯಲ್ಲಿ ಮಾಡುತ್ತಾರೆಂದು ತಿಳಿದಿದ್ದ ಅವರು ಹಣ ಕಟ್ಟಲು ಅವನ ಹತ್ತಿರ ತುಂಬಿದಾಗ, ಅದನ್ನು ಸಣ್ಣದಾಗಿ ಕನ್ನಡದಲ್ಲಿ ಎಣಿಸುತ್ತಿದ್ದುದನ್ನು ಕಂಡು ಅವನನ್ನು ಕನ್ನಡದಲ್ಲಿ ಮಾತನಾಡಿಸಿಯೇ ಬಿಟ್ಟರಂತೆ. ಹಾಗೆಯೇ ಎಷ್ಟೇ ದೊಡ್ಡವರಿರಲಿ,  ಆಘಾತವಾದಾಗ ವೊದಲು ಬಾಯಿಂದ ಹೊರಡುವುದು ಮಾತೃಭಾಷೆಯಲ್ಲಿ ‘ಅಮ್ಮ’ ಇಲ್ಲ ‘ಅಪ್ಪ’ ವೆಂಬ ಶಬ್ದಗಳು ಮಾತ್ರ ಅಲ್ಲವೇ.
   ಪ್ರಸ್ತುತ ‘ಮರುಳ ಕಾಗೆ’ ಪದ್ಯ ಸಿ. ಫ. ಕಟ್ಟಿಮನಿಯವರಿಂದ ರಚಿತವಾಗಿದೆ. ಬದುಕಿನಲ್ಲಿ ಹೆಜ್ಜೆ ಹೆಜ್ಜೆಗೆ  ಸಿಗುವ ಸುಳ್ಳು,  ಮೋಸಗಾರರನ್ನು ನಂಬದಿರಲು ಕಥಾರೂಪವಾಗಿ ಸುಂದರವಾಗಿ ಹೇಳುತ್ತ, ಬದುಕಿನಲ್ಲಿ ಯಾರನ್ನಾದರೂ ನಂಬುವ ಮೊದಲು ಎಚ್ಚರಿಕೆ ಅಗತ್ಯ. ಇಲ್ಲವಾದರೆ ಮೋಸಕ್ಕೆ ಬಲಿಬೀಳಬೇಕಾದೀತು ಎಂದು ಎಚ್ಚರಿಸುತ್ತದೆ ಪದ್ಯ. ಹೆಚ್ಚಿನ ವಿವರಣೆ ಬೇಕಾಗಿಲ್ಲ. ಕನ್ನಡದ ಹಂಡೆ, ತಪೇಲಿ, ಕಂದೀಲುಗಳಂತೆ ಕಳೆದುಹೋಗಿದ್ದ ಪದ್ಯವನ್ನು ಮತ್ತೆ ಕಳೆದುಕೊಳ್ಳದಂತೆ ಗಟ್ಟಿಯಾಗಿ ಹೃದಯದಲ್ಲಿ ಭದ್ರಪಡಿಸಿಕೊಳ್ಳಬೇಕಾದದ್ದು ಕನ್ನಡಿಗರಾದ ನಮ್ಮ ಕರ್ತವ್ಯವೆಂದು ಭಾವಿಸೋಣ. ಮಕ್ಕಳಿಂದ ನಾಲ್ಕಾರು ಸಲ ಹೇಳಿಸಿದರೆ ಎಂದೂ ಮರೆಯದ ಹಾಡಾಗಿ ಅವರ ಎದೆಯಲ್ಲಿ ಕುಳಿತುಬಿಡುವ ಹಾಡಿದು. ಎಲ್ಲ ಅಮ್ಮಂದಿರಿಗೆ ಇದನ್ನು ಮಕ್ಕಳಿಗೆ ಕಲಿಸಲು ವಿನಂತಿಸೋಣ. ಕಳೆದುಹೋದ ಈ ಮಕ್ಕಳ ಹಾಡುಗಳು ಕನ್ನಡಮ್ಮನ ಮನೆ ಮನಗಳಲ್ಲಿ ಮಕ್ಕಳ ಬಾಯಿಂದ  ಮತ್ತೆ ಮತ್ತೆ ಮೊಳಗುವಂತಾಗಲಿ  .................ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ………………
      ಮರುಳ ಕಾಗೆ
ಕಾಗೆಯೊಂದು ಹಾರಿ ಬಂದು
ಮರದ ಮೇಲೆ ಕುಳಿತುಕೊಂಡು
ಬಾಯೊಳಿದ್ದ ಮಾಂಸವನ್ನು ತಿನ್ನತೊಡಗಿತು

ಠಕ್ಕ ನರಿಯು ಇದನು ಕಂಡು
ಮಾಂಸವನ್ನು ಎತ್ತಲೆಂದು
ಮರದ ಕೆಳಗೆ ಓಡಿಬಂದು ನಿಂತುಕೊಂಡಿತು

ಕಾಕರಾಜ ನೀನು ನಮ್ಮ
ವನಕೆ ಬಹಳ ದಿನಕೆ ಬಂದೆ
ನಿನ್ನ ಕಂಡು ನನ್ನ ಮನಕೆ ಹರುಷವಾಯಿತು

ನಿನ್ನ ಗರಿಗಳೆಷ್ಟು ಚಂದ
ನಿನ್ನ ಬಣ್ಣವೆಷ್ಟು ಅಂದ
ನಿನ್ನ ರಾಗವನ್ನು ಕೇಳಿ ಜನರು ಕುಣಿವರು

ಕಾಕರಾಜ ನೀನು ಈಗ
ಹಾಡನೊಂದು ಹಾಡು ಬೇಗ
ವನದೊಳಿದ್ದ ಪಶುಗಳೆಲ್ಲ ಕೇಳಿ ಕುಣಿಯಲಿ

ಮರುಳ ಕಾಗೆ ನರಿಯ ನುಡಿಗೆ
ಮರುಳುಗೊಂಡು ಹರುಷದಿಂದ
ಕಾವು ಕಾವು ಎಂದು ದೊಡ್ಡ ದನಿಯ ತೆಗೆಯಿತು

ದನಿಯ ತೆಗೆಯಲೊಡನೆ ಅದರ
ಬಾಯೊಳಿದ್ದ ಮಾಂಸವೆಲ್ಲ
ನರಿಯ ಬಾಯಿಯೊಳಗೆ ಬಂದು ಬಿದ್ದು ಬಿಟ್ಟಿತು

ಮಾಂಸವನ್ನು ನುಂಗಿ ನರಿಯು
ಹರುಷದಿಂದ ಕುಣಿದು ಕುಣಿದು
ಕಾಗೆಯನ್ನು ನೋಡಿ ನೋಡಿ ನಗುತ ನಿಂದಿತು

ಮಾಂಸವನ್ನು ಕಳೆದುಕೊಂಡು
ಅದಕೆ ಬಹಳ ಬುದ್ಧಿ ಬಂದು
ಠಕ್ಕರನ್ನು ನಂಬಬೇಡಿ ಎಂದು ಸಾರಿತು.

ಸಂಗ್ರಹ : ಲಕ್ಷ್ಮೀಕಾಂತ ಇಟ್ನಾಳ

Rating
Average: 4.4 (7 votes)

Comments