ವೈಶ್ಯ, ಶೆಟ್ಟಿ, ಬನಿಯಾ, ಬಲಿಜ ಪದಗಳ ಅರ್ಥ ಮತ್ತು ವ್ಯಾಪ್ತಿ

ವೈಶ್ಯ, ಶೆಟ್ಟಿ, ಬನಿಯಾ, ಬಲಿಜ ಪದಗಳ ಅರ್ಥ ಮತ್ತು ವ್ಯಾಪ್ತಿ

    ರೋಮಿಲಾ ಥಪಾರ್ ಬರೆದಿರುವ "ಹಿಸ್ಟರಿ ಆಫ್ ಇಂಡಿಯಾ" ಭಾಗ - ೧: ಇದರಲ್ಲಿ ಶ್ರೇಷ್ಠಿ ಎಂಬ ಪದದ ಬಗ್ಗೆ ಉಲ್ಲೇಖವಿದೆ. ಅವರ ಪ್ರಕಾರ ಹಿಂದಿನ ಕಾಲದಲ್ಲಿ ಸಮಾಜದ ಉನ್ನತ ವ್ಯಕ್ತಿಗಳನ್ನು "ಶ್ರೇಷ್ಠಿ"ಗಳೆಂದು ಗುರುತಿಸುತ್ತಿದ್ದರಂತೆ. ಅದೇ ಮುಂದೆ ಉತ್ತರ ಭಾರತದಲ್ಲಿ "ಸೇಥ್" ಆಗಿ ದಕ್ಷಿಣ ಭಾರತದಲ್ಲಿ ಶೆಟ್ಟಿಯಾಗಿ ಪ್ರಾಂತವಾರು ಭಿನ್ನತೆಗಳಿಂದಾಗಿ ಶೆಟ್ಟಿ, ಸೆಟ್ಟಿ, ಚೆಟ್ಟಿ, ಚೆಟ್ಟಿಯಾರ್ ಆಗಿ ಮಾರ್ಪಾಡುಗೊಂಡಿದೆ.  ಇನ್ನು ವೈಶ್ಯರಿಗೇ ಏಕೆ ಈ ಪದ ಗಟ್ಟಿಯಾಗಿ ಅಂಟಿಕೊಂಡಿತೋ ಗೊತ್ತಿಲ್ಲ. ಬಹುಶಃ ಹಣವಿದ್ದವರು ವೈಶ್ಯರೇ ಆದ್ದರಿಂದ ಅವರೇ ಸಕಲ ಗುಣ ಸಂಪನ್ನರೆಂದು ಪರಿಗಣಿಸಿ ಮತ್ತು "ದುಡ್ಡಿದ್ದವನೇ ದೊಡ್ಡಪ್ಪ" ನಾದುದರಿಂದ ಸಮಾಜ ಅವರನ್ನೇ "ಶ್ರೇಷ್ಠಿ"ಗಳೆಂದು ಗುರುತಿಸಿತೋ ಏನೋ? ಏಕೆಂದರೆ ಭರ್ತೃಹರಿ ಹೇಳಿದಂತೆ "ಸರ್ವೇ ಗುಣಾಃ ಕಾಂಚನಮಾಶ್ರಯಂತಿ"
    ಸಂಸ್ಕೃತದಲ್ಲಿ "ವಣಿಕ" ಎಂಬ ಪದವಿದೆ ಅದರ ಅರ್ಥ ವ್ಯಾಪಾರ ಮಾಡುವವನು ಎಂಬುದರ ತದ್ಬವ ರೂಪಗಳೇ ಬಣಜಿಗ ಮತ್ತು ಬಲಿಜ. ಬಣಜಿಗ ಎಂಬ ಪದ ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಳಕೆಯಲ್ಲಿದ್ದರೆ ದಕ್ಷಿಣ ಕರ್ನಾಟಕದಲ್ಲಿ ಬಲಿಜ ಎಂಬ ಪದ ಹೆಚ್ಚು ಬಳಕೆಯಲ್ಲಿದೆ. ಇಲ್ಲಿ ಸರ್ವಜ್ಞನ ಒಂದು ತ್ರಿಪದಿ ನೆನಪಾಗುತ್ತದೆ.
ಸುಳ್ಳು ಸಿಂಪಿಗ ಬಲ್ಲ, ಎಳ್ಳು ಗಾಣಿಗ ಬಲ್ಲ,
ಕಳ್ಳರನು ಬಲ್ಲ ತಳವಾರ, ಬಣಜಿಗ
ಎಲ್ಲವನು ಬಲ್ಲ ಸರ್ವಜ್ಞ!


    ಬಲಿಜ ಎಂಬುದು ಒಂದು ಜಾತಿಯಾಗಿ ಗುರುತಿಸಲ್ಪಟ್ಟಿದ್ದರೆ ಬಣಜಿಗ ಶಬ್ದವು ಲಿಂಗಾಯಿತರಲ್ಲಿ ಒಂದು ಉಪಜಾತಿಯಾಗಿ ಗುರುತಿಸಲ್ಪಡುತ್ತಿದೆ. ಮಧ್ಯ ಕರ್ನಾಟಕದಲ್ಲಿ ಲಿಂಗಾಯಿತ ಬಣಜಿಗ ಎಂದು ಇವರನ್ನು ಕರೆದರೆ ಬಿಜಾಪುರ ಜಿಲ್ಲೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ಪಂಚಮಸಾಲಿ ಲಿಂಗಾಯಿತ ಬಣಜಿಗ" ಎಂದು ಗುರುತಿಸಿಕೊಳ್ಳುತ್ತಾರೆ. ಇದನ್ನೇ ಕೆಲವರು ಇಂಗ್ಲೀಷಿನ ಪ್ರಭಾವದಿಂದ BPL (ಬಣಜಿಗ ಪಂಚಮಸಾಲಿ ಲಿಂಗಾಯಿತ) ಎಂದು ಸಂಕ್ಷಿಪ್ತಗೊಳಿಸಿದ್ದಾರೆ. ಬಲಿಜ ಜನಾಂಗದ ಇನ್ನೊಂದೆರಡು ಪ್ರಭೇದ(ಗುಂಪು)ಗಳನ್ನು ನಾವು ಆಂಧ್ರ ಪ್ರದೇಶದಲ್ಲಿ ಕಾಣುತ್ತೇವೆ ಅದೇ ಶೆಟ್ಟಿ ಬಲಿಜ ಮತ್ತು ಕಾಪು ಬಲಿಜ. ಕಾಪುಗಳಲ್ಲಿ (ಒಕ್ಕಲುತನ ಮಾಡುವವರಲ್ಲಿ) ವ್ಯಾಪಾರ ಕೈಗೆತ್ತಿಕೊಂಡವರು ಕಾಪು ಬಲಿಜ ಎಂದು ಪ್ರತೀತಿ ಹಾಗಾಗಿ ಇವೆರಡೂ ಒಂದೇ ಕುಲವೆಂದು ಕೆಲವರ ಅಭಿಪ್ರಾಯ. ಶೆಟ್ಟಿ ಬಲಿಜ ಎಂಬುದು ಬಲಿಜದ್ದೇ ಇನ್ನೊಂದು ರೂಪ ಎನ್ನುವವರಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಣಜಿಗರನ್ನು ಶೆಟ್ಟರೆಂದೇ ಕರೆಯುತ್ತಾರೆನ್ನುವುದು ಇಲ್ಲಿ ಸ್ಮರಿಸಬಹುದು. ಆಂಧ್ರದಲ್ಲಿಯೂ ಕೂಡ ಕರ್ನಾಟಕಕ್ಕೆ ಹೊಂದಿಕೊಂಡ ಜಿಲ್ಲೆಗಳಾದ ಕರ್ನೂಲು, ಅನಂತಪುರ, ಹೈದರಾಬಾದ್, ಮೆಹಬೂಬ್ ನಗರ, ಮೇದಕ್ ಜೆಲ್ಲೆಗಳಲ್ಲಿ ಲಿಂಗಾಯಿತ ಧರ್ಮೀಯರಿದ್ದಾರೆ ಅವರಲ್ಲಿ ಇರುವ ಬಣಜಿಗ ಉಪಜಾತಿಯವರು ತಮ್ಮನ್ನು "ಲಿಂಗ ಬಲಿಜ" ಎಂದು ಕರೆದುಕೊಳ್ಳುತ್ತಾರೆ.
    ಇದೇ ಬಣಜಿಗ ಶಬ್ದದ ಪರ್ಯಾಯ ರೂಪ "ಬನಿಯಾ" ಉತ್ತರ ಭಾರತದಲ್ಲಿ ಪ್ರಚಲಿತವಿದೆ. ಅಲ್ಲಿಂದ ವ್ಯಾಪಾರ ಮಾಡಲು ಇಲ್ಲಿಗೆ ಬಂದವರನ್ನು ನಾವು ಗುರುತಿಸುವುದು ಸೇಥ್ ಅಥವಾ ಮಾರ್ವಾಡಿಗಳೆಂದು. ಅವರಿಗೆ "ಮಾರ್ವಾಡಿ" ಹೆಸರು ಬರಲು ಕಾರಣ ಅವರು ರಾಜಸ್ತಾನದ ಮಾರವಾರ್ ಅಥವಾ ಮಾರವಾಡ್ ಪ್ರದೇಶದಿಂದ ಬಂದವರಾದ್ದರಿಂದ. ಅವರಲ್ಲಿಯೂ ಮೂರು ವಿಧವಾದ ಮಾರ್ವಾಡಿಗಳಿದ್ದಾರೆ. ಮೊದಲನೆಯದು ಅಗ್ರಸೇನ ಮಹಾರಾಜನ ಅನುಯಾಯಿಗಳಾದ "ಅಗ್ರವಾಲ್" ಪಂಗಡ. ಅಗ್ರಸೇನ್ ಮಹಾರಾಜನಿಗೆ ಒಂದು ಪ್ರತ್ಯೇಕ ಮಂದಿರವಿದೆ, ಅದು ಹರಿಯಾಣ ರಾಜ್ಯದಲ್ಲಿರುವ ಆಗ್ರೋಹಿ ಪಟ್ಟಣದಲ್ಲಿದೆ, ಅದು ರಾಷ್ಟ್ರೀಯ ಹೆದ್ದಾರಿ ನಂ. ೧ ರಲ್ಲಿದೆ. ಎರಡನೆಯದು "ಮಾಹೇಶ್ವರಿ" ಇವರು ಮಹೇಶ್ವರನ ಅನುಯಾಯಿಗಳಾದ್ದರಿಂದ ಅವರಿಗೆ ಈ ಹೆಸರು ಬಂದಿದೆ. ಉಳಿದವರು ಜೈನ ಧರ್ಮವನ್ನವಲಂಭಿಸಿದ ಮಾರವಾಡಿಗಳು ಇವರಲ್ಲಿ ಬಹುತೇಕರು ಶ್ವೇತಾಂಬರರು. ದಿಗಂಬರರೇನಿದ್ದರೂ ಕರ್ನಾಟಕ ಮತ್ತು ದಕ್ಷಿಣ ಭಾರತಕ್ಕೆ ಸೀಮಿತವೆಂದುಕೊಳ್ಳುತ್ತೇನೆ. "ಅಗ್ರವಾಲ್" ರಲ್ಲಿಯೂ ಕೆಲವರು ಜೈನಮತಾನುಯಾಯಿಗಳಿದ್ದಾರೆ. ಅವರು ತಮ್ಮನ್ನು "ಅಗರವಾಲ್" (ಅಗ್ರವಾಲ್ ಮತ್ತು ಅಗರವಾಲ್ ಪದಗಳ ವ್ಯತ್ಯಾಸ ಗಮನಿಸಿ) ಎಂದು ಕರೆದುಕೊಳ್ಳುತ್ತಾರೆ. ಇನ್ನೂ ಒಂದು ರೀತಿಯ ಬನಿಯಾಗಳಿದ್ದರೆ ಅವರು ತಮ್ಮನ್ನು ಮಾಹೇಶ್ವರಿಗಳಿಂದ ಪ್ರತ್ಯೇಕಿಸಿಕೊಳ್ಳಲು "ವೈಷ್ಣವ್ ಬನಿಯಾ" ಎಂದು ಕರೆದುಕೊಳ್ಳುತ್ತಾರೆ, ಇವರು ಹೆಸರೇ ಹೇಳುವಂತೆ ವಿಷ್ಣುವಿನ ಆರಾಧಕರು. ಗುಜರಾತಿನಲ್ಲಿ ಇವರನ್ನು ಮೆಹತಾಗಳೆಂದೂ ಕರೆಯುತ್ತಾರೆ. ಗಾಂಧೀಜಿಯವರೂ ಕೂಡ ಈ "ವೈಷ್ಣವ್ ಬನಿಯಾ" ಪಂಗಡಕ್ಕೆ ಸೇರಿದವರು. ಅಂದಹಾಗೆ ಮೆಹತಾಗಳೆಲ್ಲರೂ ವೈಷ್ಣವ್ ಬನಿಯಾಗಳಲ್ಲ, ಉಳಿದವರು ಬಹುಶಃ ನರಸೀಮೆಹತಾನ ತತ್ವವನ್ನು ಪಾಲಿಸುತ್ತಾರೆಂದುಕೊಳ್ಳುತ್ತೇನೆ, ಆದ್ದರಿಂದ ಅವರಿಗೆ ಆ ಹೆಸರು ಬಂದಿರಬಹುದು.
    ಇನ್ನು ಈ ಶ್ರೇಷ್ಠಿ ಪದವನ್ನು ಗಮನಿಸೋಣ, ಮೊದಲೇ ತಿಳಿಸಿದಂತೆ ದುಡ್ಡಿದ್ದವರೆಲ್ಲರೂ ಶ್ರೇಷ್ಠಿಗಳು ಅಥವಾ ಅದರ ಅರ್ಥ ವಿಸ್ತಾರಗೊಂಡು ದುಡ್ಡಿನ ವ್ಯವಹಾರ ಮಾಡುವವರು ಅಂದರೆ ಬಡ್ಡಿ ವ್ಯವಹಾರ ಮಾಡುವವರಿಗೆ ಈ ಪದ ಅಂಟಿಕೊಂಡಂತೆ ಕಾಣುತ್ತದೆ. ಉದಾಹರಣೆಗೆ ಮಂಗಳೂರಿನ ಶೆಟ್ಟರು, ನನಗೆ ತಿಳಿದ ಹಾಗೆ ಮೀನಿನ ವ್ಯಾಪಾರ ಮಾಡುತ್ತಿದ್ದ ಕೆಲವು "ಬಂಟ" ಜನಾಂಗದವರು ಹಣಕಾಸಿನ ವ್ಯವಹಾರಕ್ಕೆ ಇಳಿದಿದ್ದರಿಂದ ಅವರಿಗೆ ಆ ಬಿರುದು ಬಂದಿರಬಹುದು. ಇದಕ್ಕೆ ಇನ್ನೊಂದು ಉದಾಹರಣೆ "ಶೆಟ್ಟೆಪ್ಪನವರ್" ಎಂಬ "ಸರ್-ನೇಮ್"ನವರು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಕಂಡು ಬರುತ್ತಾರೆ, ಆದರೆ ಅವರು ವೈಶ್ಯರಲ್ಲ. ಅವರಿಗೆ ಆ ಹೆಸರು ಅಂಟಿಕೊಳ್ಳಲು ಕಾರಣ ಅವರ ಪೂರ್ವಿಕರು ಬಡ್ಡಿ ವ್ಯವಹಾರ ಮಾಡುತ್ತಿದ್ದದ್ದು. ಇದೇ ಅರ್ಥವ್ಯಾಪ್ತಿಯಲ್ಲಿ ಉತ್ತರ ಭಾರತದಲ್ಲಿ ಬಡ್ಡಿ ವ್ಯಾಪಾರ ಮಾಡುವವರನ್ನು "ಮಹಾಜನ್" ಅನ್ನುತ್ತಾರೆ. ಅದು ಸಕ್ಕದ ಶ್ರೇಷ್ಠಿಯ ಹಿಂದಿ ಅನುವಾದ ಎಂದು ತಿಳಿಯಬಹುದು.
    ಇನ್ನು ನಮಗೆ ಬೆಂಗಳೂರು/ಹಳೇ ಮೈಸೂರು ಪ್ರಾಂತ ಹಾಗು ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಕೆಲವು ಜೆಲ್ಲೆಗಳಲ್ಲಿ ಕಂಡು ಬರುವ ಶೆಟ್ಟಿ/ಸೆಟ್ಟಿ (Setty), [ಮಂಗಳೂರಿನವರು ಬರೆದುಕೊಳ್ಳುವುದು-Shetty] ಇವರ ಬಗ್ಗೆ ನೋಡೋಣ. ಇವರು ತಮ್ಮನ್ನು ತಾವು ಆರ್ಯ-ವೈಶ್ಯ ಜನಾಂಗದವರೆಂದು ಗುರುತಿಸಿಕೊಳ್ಳುತ್ತಾರೆ. ಇವರು ಮೂಲತಃ ಆಂಧ್ರ ಪ್ರದೇಶದಿಂದ ವಲಸೆ ಬಂದವರು ಮತ್ತು ಇವರ ಕುಲದೇವತೆ ವಾಸವಿ-ಕನ್ಯಕಾಪರಮೇಶ್ವರಿ ಅಮ್ಮನವರು. ಇವರಲ್ಲಿ ೧೦೨ ಗೋತ್ರದವರನ್ನು ಎಣ್ಣೆ ಕೋಂಠರು (ಎಣ್ಣೆ ಕೋಮಟರು) ಎಂದು ಕರೆಯುತ್ತಾರೆ. ಉಳಿದ ಮೂರು ರೀತಿಯ ಪಂಗಡಗಳೆವೆಯೆಂದು ಕೇಳಿದ್ದೇನೆ. ಅದರಲ್ಲಿ ಹೆಚ್ಚು ಪ್ರಚಲಿತದಲ್ಲಿರುವವರು ತುಪ್ಪದ ಕೋಂಠರು (ತುಪ್ಪದ ಕೋಮಟರು), ಇವರು ಬಹುತೇಕ ಮಧ್ಯ ಕರ್ನಾಟಕದ ಜಿಲ್ಲೆಗಳಾದ ಚಿತ್ರದುರ್ಗ, ಬಳ್ಳಾರಿ ಜಿಲ್ಲೆಯ ಪಶ್ಚಿಮದ ತಾಲ್ಲೂಕುಗಳಲ್ಲಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಕಂಡು ಬರುತ್ತಾರೆ. ಒಂದು ಐತಿಹ್ಯದ ಪ್ರಕಾರ, ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜೆಲ್ಲೆಯ ಪೆನುಗೊಂಡ ಪಟ್ಟಣದಲ್ಲಿ ಕುಸುಮ ಶ್ರೇಷ್ಠಿ ಎಂಬ ವೈಶ್ಯ ರಾಜನ ಪುತ್ರಿಯಾದ ವಾಸವಿಯನ್ನು, ಕ್ಷತ್ರಿಯನಾದ ರಾಜಮಂಡ್ರಿಯ ಮಹಾರಾಜನಾದ ವಿಷ್ಣುವರ್ಧನನು ಮೋಹಿಸಿ ಅವಳನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದನಂತೆ.ಆದರೆ ಕುಲಾಚಾರದ ಪ್ರಕಾರ ವೈಶ್ಯರು ಕ್ಷತ್ರಿಯನಾದವನಿಗೆ ತನ್ನ ಮಗಳನ್ನು ಕೊಡಬಾರದೆಂದು ಸಮರ್ಥಿಸಿ ರಾಜನ ಪರ ನಿಂತವರು ಈಗಿನ ಎಣ್ಣೆ ಕೋಂಠರು. ಈ ೧೦೨ ಗೋತ್ರದಿಂದ ಒಬ್ಬೊಬ್ಬ ಸತಿ-ಪತಿಯರು ಕುಲಾಚಾರವನ್ನು ಎತ್ತಿ ಹಿಡಿಯುವುದಕ್ಕಾಗಿ ವಾಸವಿಯೊಡನೆ ಅಗ್ನಿಪ್ರವೇಶ ಮಾಡಿದರಂತೆ, ಹಾಗಾಗಿ ಇವರು ಮಾತ್ರ ಆರ್ಯ-ವೈಶ್ಯ ಜನಾಂಗದ ಪ್ರತಿನಿಧಿಗಳೆಂದು ಗುರುತಿಸಿಕೊಳ್ಳುತ್ತಾರೆ. ಕುಲಾಚಾರ ತಪ್ಪಿದರೂ ಪರವಾಗಿಲ್ಲ ಆ ರಾಜನ ಶತ್ರುತ್ವವನ್ನು ಕಟ್ಟಿಕೊಳ್ಳಬಾರದೆಂದವರನ್ನು ಆ ಕುಲದಿಂದ ಹೊರಗಟ್ಟಲಾಯಿತು. ಹೀಗೆ ಕುಲಚಾರಗಳನ್ನು ಬಿಟ್ಟವರು "ತಪ್ಪಿದ ಕೋಂಠ"ರು, ಅವರು ಕಾಲಕ್ರಮೇಣ "ತುಪ್ಪ"ದವರೆಂದು ಗುರುತಿಸಿಕೊಂಡರು, ಅವರೇ ಕರ್ನಾಟಕಕ್ಕೆ ಮೊದಲು ವಲಸೆ ಬಂದವರು. ಹೀಗೆ ಇವರು ತುಪ್ಪದವರಾದ್ದರಿಂದ ಆಮೇಲೆ ಇವರಿಂದ ತಮ್ಮ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಲು ಬಂದವರು "ಎಣ್ಣೆ"ಯವರಾದರು. ಈ ೧೦೨ ಗೋತ್ರದವರು ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಮಹಾರಾಷ್ಟ್ರದಲ್ಲಿರುವವರು ತೆಲುಗು ಮಾತನಾಡುವುದಿಲ್ಲವಾದರೂ ಅವರ "ಸರ್-ನೇಮ್"ಗಳು "ವಾರ್" ಪ್ರತ್ಯಯ ಹೊಂದಿರುತ್ತವೆ. ಉದಾ: ಪಾಡ್ಗಿಲ್‍ವಾರ್, ಬಚ್ಚುವಾರ್, ಉತ್ತರ‍್ವಾರ್ ಹೀಗೆ. ಕೋಮಟರು ಎಂದು ಹೆಸರು ಬರಲು ಆಂಧ್ರ ಪ್ರದೇಶದಲ್ಲಿದ್ದ ವೈಶ್ಯರನೇಕರು ಗೊಮ್ಮಟನ ಭಕ್ತರಾಗಿದ್ದರೆಂದು ಆಂಧ್ರುಲ ಚರಿತ್ರೆ ಪುಸ್ತಕದಲ್ಲಿ ಉಲ್ಲೇಖನವಿದೆ; ಆದ್ದರಿಂದ ಗೊಮ್ಮಟರು ಎನ್ನುವ ಶಬ್ದ ಕೊಮ್ಮಟ...ಕೋಮಟಿ...ಕೋಮಟಿಗ ಆಗಿದೆ ಎನ್ನುತ್ತಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
    ಆರ್ಯ-ವೈಶ್ಯರು ಅನೇಕರು ಗುಪ್ತ ಎಂಬ ಬಿರುದನ್ನು ಹೊಂದಿರುತ್ತಾರೆ. ಆದ್ದರಿಂದ ಆ ಪದದ ಬಳಕೆಯಿಂದಾಗಿ ಅವರು ಉತ್ತರ ಭಾರತದ ಗುಪ್ತರೂ ತಾವು ಒಂದೇ ಎಂದು ಪ್ರತಿಪಾದಿಸುತ್ತಾರೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಂದ್ರಗುಪ್ತ -ಚಾಣಕ್ಯರೂ ಕೂಡ ಗುಪ್ತರೆಂದರೆ ಅವರೂ ಕೂಡ ವೈಶ್ಯರಾಗಿದ್ದರೆಂದು ಹೇಳುತ್ತಾರೆ. ಚಾಣಕ್ಯನು "ಚಣಕ"ನ ವಂಶಸ್ಥನಾದ್ದರಿಂದ ಅವನಿಗೆ ಆ ಹೆಸರು ಬಂದಿತೆಂಬುದು ಇಲ್ಲಿ ಉಲ್ಲೇಖನೀಯ. ಅವನ ಮೂಲ ಹೆಸರು ವಿಷ್ಣುಗುಪ್ತ, ಹೀಗಾಗಿ ವೈಶ್ಯರು ಅವನೂ ಕೂಡ ತಮ್ಮವನೆಂದೇ ಪ್ರತಿಪಾದಿಸುತ್ತಾರೆ. ಭಾರತದ ಚರಿತ್ರೆಯಲ್ಲಿ ಸುವರ್ಣ ಯುಗವೆಂದು ಪ್ರಖ್ಯಾತಿಗೊಂಡ "ಗುಪ್ತ" ವಂಶದ ರಾಜರೂ ಕೂಡ ವೈಶ್ಯರೆಂದೇ ಹೇಳುತ್ತಾರೆ. ಇದಕ್ಕೆ ಪುರಾವೆಯಾಗಿ ಉತ್ತರ ಭಾರತದ ಹಲವಾರು ಬನಿಯಾ ಜನಾಂಗದವರು ಗುಪ್ತಾಯೆನ್ನುವ ಸರ್-ನೇಮ್ ಹೊಂದಿದ್ದಾರೆನ್ನುವುದೂ ಗಮನಾರ್ಹ.
    "ಕೃಷಿ, ವಾಣಿಜ್ಯ ಮತ್ತು ಗೋರಕ್ಷೆ" ವೈಶ್ಯರ ವೃತ್ತಿಯಾಗಿತ್ತೆಂದು ಸ್ಮೃತಿ ವಾಕ್ಯವಿರುವುದರಿಂದ ಅದನ್ನು ಕೈಗೊಳ್ಳುವವರೆಲ್ಲಾ ವೈಶ್ಯರೇ ಎಂದು ಹೇಳುವವರೂ ಕೂಡ ಇದ್ದಾರೆ. ಬೆಂಗಳೂರಿನಲ್ಲಿ ನಗರ್ತ ವೈಶ್ಯರೆಂಬ ಜನಾಂಗವಿದೆ ಅದಕ್ಕೂ ಉತ್ತರ ಕರ್ನಾಟಕದಲ್ಲಿ ಪಟ್ಟಣ ಶೆಟ್ಟರೆನ್ನುವ ಜನಾಂಗವೂ ಒಂದೇ ಏನೋ? ತಿಳಿದವರು ಹೇಳಬೇಕು. ಹಾಗೆಯೇ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ "ಕುರುಹಿನ ಶೆಟ್ಟಿ" ಜನಾಂಗವಿದೆ ಅದಕ್ಕೂ ಈ ಶೆಟ್ಟಿ ಪದಕ್ಕೂ ಇರುವ ಸಂಭಂದವೇನೋ ತಿಳಿಯದು. ಜೈನ ಶೆಟ್ಟರೂ ನಿಮಗೆ ಉತ್ತರ ಕರ್ನಾಟಕದ ಭಾಗಗಳಲ್ಲಿ ನಿಮಗೆ ಸಿಗುತ್ತಾರೆ. ತಮಿಳುನಾಡಿನಲ್ಲಿ "ಚೆಟ್ಟಿನಾಡ್" ಎಂಬ ಪ್ರದೇಶವಿದೆ ಅಲ್ಲಿಯವರೂ ವ್ಯಾಪಾರ ವಹಿವಾಟು ಮಾಡುತ್ತಾರೆ ಆದರೆ ಅವರಿಗೂ ಆರ್ಯವೈಶ್ಯರೆಂದು ಕರೆದುಕೊಳ್ಳುವ ಜನಾಂಗಕ್ಕೂ ಯಾವುದೇ ಸಂಭಂದವಿಲ್ಲ. ಅದೇ ತಮಿಳುನಾಡಿನಲ್ಲಿ ೨೪ ಮನೆಗಳ ಚೆಟ್ಟಿಯಾರ್ ಎಂಬ ಜನಾಂಗವೊಂದಿದೆ ಅವರು ಮಾತನಾಡುವುದು ತೆಲುಗು, ಅವರಿಗೂ ಈ ಆರ್ಯವೈಶ್ಯ ಜನಾಂಗಕ್ಕೂ ಸಂಭಂದವಿಲ್ಲ. ಹೀಗೆ ವೈಶ್ಯ ಅಥವಾ ಶೆಟ್ಟಿ ಪದದ ವ್ಯಾಪ್ತಿ ಬಹಳ ವಿಸ್ತಾರವಾಗಿದೆ ಮತ್ತು ಅನೇಕ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದು ಬಿಡುತ್ತವೆ.

(ಈ ಹಿಂದೆ ಸಂಪದದಲ್ಲಿ ಬ್ರಾಹ್ಮನ್ಸ್ ಫಾರ್ ಡಮ್ಮೀಸ್ ಎಂಬ ಲೇಖನ ಪ್ರಕಟವಾಗಿತ್ತು. ಆಗ ಬ್ರಾಹ್ಮಣ ಎಂದರೆ ಯಾರು ಎನ್ನುವುದರ ಬಗ್ಗೆ ಇರುವ ವಿಸ್ತೃತ ಚರ್ಚೆಯನ್ನು ಓದಿದ ಬಳಿಕ ಬ್ರಾಹ್ಮಣ ಶಬ್ದವನ್ನು ವಿವರಿಸುವುದು ಬಹಳ ಕಷ್ಟ ಏಕೆಂದರೆ ಅದರ ವ್ಯಾಪ್ತಿ ಅಂಥಹುದು. ಅದೇ ರೀತಿ ಬೇರೆ ಜನಾಂಗಗಳದೂ ಅದೇ ಪರಿಸ್ಥಿತಿ ಎನ್ನುವುದಕ್ಕೋಸ್ಕರ ಈ ಲೇಖನ.)
 

Comments