ವೈಶ್ಯರು ಮತ್ತು ಅಗರವಾಲ್ – ಕೆಲವೊಂದು ಸ್ವಾರಸ್ಯಕರ ಕತೆಗಳು

ವೈಶ್ಯರು ಮತ್ತು ಅಗರವಾಲ್ – ಕೆಲವೊಂದು ಸ್ವಾರಸ್ಯಕರ ಕತೆಗಳು

 

          ಆಂಧ್ರ ಪ್ರದೇಶದಲ್ಲಿ ವೈಶ್ಯರು ಅಧಿಕ ಸಂಖ್ಯೆಯಲ್ಲಿದ್ದಾರೆ. ಅವರ ಬಗ್ಗೆ ಇಲ್ಲಿ ಅನೇಕ ಸ್ವಾರಸ್ಯಕರ ಕಥೆಗಳು ಪ್ರಚಲಿತದಲ್ಲಿವೆ. ಅದೇನೆಂದರೆ ವೈಶ್ಯರ ಮನೆಯಲ್ಲಿ ಏನಿಲ್ಲವೆಂದರೂ ನಿಂಬೆಕಾಯಿ ಗಾತ್ರದಷ್ಟು ಬಂಗಾರವಿರುತ್ತದಂತೆ. ಅವರ ಮನೆಯಲ್ಲಿ ಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿರುತ್ತಾಳಂತೆ, ಇದು ಕರ್ನಾಟಕದಲ್ಲಿಯೂ ಪ್ರಚಲಿತದಲ್ಲಿತೆ ಬಿಡಿ. ಈ ಕುರಿತಾಗಿ ಒಂದು ಸ್ವಾರಸ್ಯಕರವಾದ ಕತೆಯನ್ನು ಇಲ್ಲಿನವರು ಹೇಳುತ್ತಾರೆ. ಅದೇನೆಂದರೆ, ದೀಪಾವಳಿಯ ದಿವಸ ಲಕ್ಷ್ಮಿ ಎಲ್ಲರ ಮನೆಗೂ ಭೇಟಿಯಿತ್ತು ಹಿಂತಿರುಗುತ್ತಿರುತ್ತಾಳೆ. ಒಬ್ಬ ವೈಶ್ಯನ ಮನೆಗೆ ಆಕೆ ಭೇಟಿಯಿತ್ತು ಹಿಂತಿರುಗಿ ಹೋಗಬೇಕೆನ್ನುವಷ್ಟರಲ್ಲಿ ಅವನಿಗೆ ಲಕ್ಷ್ಮಿಯನ್ನು ತನ್ನ ಮನೆಯಲ್ಲಿಯೆ ಉಳಿಸಕೊಳ್ಳಬೇಕೆಂಬ ಬಯಕೆಯಾಗುತ್ತದೆ. ಆಗ ಆ ಶೆಟ್ಟಿ ಉಪಾಯದಿಂದ ಒಂದಷ್ಟು ಔಡಲ (ಹರಳು) ಬೀಜಗಳನ್ನು ಲಕ್ಷ್ಮಿಯ ಕಾಲಬಳಿ ಚೆಲ್ಲಿದನಂತೆ, ಇದನ್ನು ತಿಳಿಯದ ಲಕ್ಷ್ಮಿಯು ಅದರ ಮೇಲೆ ಕಾಲಿಟ್ಟು ಜಾರಿಬಿದ್ದು ತನ್ನ ಕಾಲು ಮುರಿದುಕೊಂಡಳಂತೆ ಹಾಗಾಗಿ ಅವರ ಮನೆಗಳಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳಂತೆ. ಇನ್ನು ಕೆಲವರ ಪ್ರಕಾರ ಲಕ್ಷ್ಮಿದೇವಿಗೆ ತಿಳಿಯದಂತೆ ದೀಪಕ್ಕೆ ಎಣ್ಣೆ ಹಾಕುವ ನೆಪದಲ್ಲಿ ಆ ವೈಶ್ಯನು ಔಡಲೆಣ್ಣೆಯನ್ನು ನೆಲದ ಮೇಲೆ ಚಲ್ಲಿದನಂತೆ ಇದನ್ನು ಗಮನಿಸದ ಲಕ್ಷ್ಮೀದೇವಿಯು ನುಣುಪಾದ ನೆಲದ ಮೇಲೆ ಕಾಲಿಟ್ಟು,  ಜಾರಿಬಿದ್ದು ಕಾಲುಮುರಿದುಕೊಂಡಳಂತೆ. ಅಂತಿಮವಾಗಿ ಇಬ್ಬರ ಪ್ರಕಾರವೂ ವೈಶ್ಯರ ಮನೆಯಲ್ಲಿ ಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿರುವುದಂತೂ ಸತ್ಯ. ಕರ್ನಾಟಕದಲ್ಲಿಯೂ ವೈಶ್ಯರ ಮನೆಯಲ್ಲಿ ಲಕ್ಷ್ಮಿ ಏಕೆ ಇರುತ್ತಾಳೆನ್ನುವುದಕ್ಕೆ ಹಲವಾರು ವರ್ಷಗಳ ಹಿಂದೆ ಹಿರಿಯರೊಬ್ಬರಿಂದ ಒಂದು ಸ್ವಾರಸ್ಯಕರ ಕಥೆಯನ್ನು ಕೇಳಿದ್ದೆ. ಅದು ಈ ರೀತಿ ಇದೆ:

 

         ಒಮ್ಮೆ ವೈಕುಂಠದಲ್ಲಿ ಐಶ್ವರ್ಯಲಕ್ಷ್ಮಿ ಮತ್ತು ದರಿದ್ರ ಲಕ್ಷ್ಮಿ ಇವರಿಬ್ಬರಲ್ಲಿ ಯಾರು ಹೆಚ್ಚು ಸೌಂದರ್ಯವುಳ್ಳವರು ಎನ್ನುವುದರ ಬಗ್ಗೆ ಪೈಪೋಟಿ ಉಂಟಾಯಿತಂತೆ. ಆಗ ಅವರಿಬ್ಬರೂ ವಿಷ್ಣುವನ್ನು ಆ ಕುರಿತಾಗಿ ಕೇಳಿದಾಗ, ದರಿದ್ರ ಲಕ್ಷ್ಮಿ ಚೆನ್ನಾಗಿದ್ದಾಳೆಂದು ಹೇಳಿದರೆ ಐಶ್ವರ್ಯಲಕ್ಷ್ಮಿಗೆ ಕೋಪ ಬರುತ್ತದೆ. ಒಂದು ವೇಳೆ ಐಶ್ವರ್ಯ ಲಕ್ಷ್ಮಿ ಚೆನ್ನಾಗಿರುವಳೆಂದು ಹೇಳಿದರೆ ದರಿದ್ರ ಲಕ್ಷ್ಮಿಗೆ ಕೋಪ ಬರುತ್ತದೆ. ಆದ್ದರಿಂದ ಒಂದು ಕ್ಷಣ ಆಲೋಚನೆ ಮಾಡಿದ ವಿಷ್ಣುವು ಒಂದು ಉಪಾಯ ಮಾಡಿ ಭೂಲೋಕದಲ್ಲಿ ಒಬ್ಬ ನ್ಯಾಯನಿಪುಣನಾದ ವೈಶ್ಯನಿದ್ದಾನೆ ಅವನೇ ನಿಮ್ಮ ಪ್ರಶ್ನೆಗೆ ಸೂಕ್ತ ಉತ್ತರವನ್ನು ಕೊಡಬಲ್ಲ ಎಂದು ಅವರಿಬ್ಬರನ್ನೂ ಅವನಲ್ಲಿಗೆ ಸಾಗಹಾಕಿದ. ಈ ವೈಶ್ಯನಾದರೋ ಅಡ್ದಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುವವನು ಅಂದರೆ ಯಾರ ಪರವೂ ವಹಿಸದೇ ಇಬ್ಬರೊಂದಿಗೂ ಸಮಾನವಾದ ನಂಟನ್ನು ಉಳಿಸಿಕೊಂಡು ಹೋಗುವವನು. ಇವನ ಬಳಿಗೆ ಬಂದ ಲಕ್ಷ್ಮಿಯರಿಬ್ಬರೂ ತಮ್ಮಲ್ಲಿ ಯಾರು ಹೆಚ್ಚು ಸುಂದರಿ ಎಂದು ಪ್ರಶ್ನಿಸಿದರಂತೆ. ಆಗ ಈ ವೈಶ್ಯನು, ಶ್ರೀ ವಿಷ್ಣುವೇ ಇವರ ಸಮಸ್ಯೆಯನ್ನು ಬಗೆಹರಿಸದೆ ನನ್ನ ಬಳಿ ಕಳುಹಿಸಿದ್ದಾನೆಂದರೆ ಇದರಲ್ಲೇನೋ ಮರ್ಮವಿರಬೇಕೆಂದುಕೊಂಡು ಆಲೋಚಿಸಿದ. ಅವನಿಗೂ ಸಹ ವಿಷ್ಣುವಿಗೆ ಉಂಟಾದ ಜಿಜ್ಞಾಸೆಯೇ ಉಂಟಾಯಿತು, ಇಬ್ಬರಲ್ಲಿ ಯಾರೊಬ್ಬರು ಚೆನ್ನಾಗಿಲ್ಲವೆಂದರೂ ಅವರು ನನ್ನ ಮೇಲೆ ಮುಗಿ ಬೀಳುತ್ತಾರೆ. ಆದ್ದರಿಂದ ತನಗೆ ರೂಢಿಗತವಾಗಿದ್ದ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುವ ಚಾಣಾಕ್ಷತನವನ್ನು ಉಪಯೋಗಿಸಿ ಹೇಳಿದ, ನೋಡಿ ಐಶ್ವರ್ಯಲಕ್ಷ್ಮಿ ಮುಂದಿನಿಂದ ಚೆನ್ನಾಗಿ ಕಾಣುತ್ತಾಳೆ, ಆದರೆ ಈ ದರಿದ್ರ ಲಕ್ಷ್ಮಿ ಹಿಂದಿನಿಂದ ಚೆನ್ನಾಗಿ ಕಾಣಿಸುತ್ತಾಳೆ ಎಂದನಂತೆ. ಈ ಉತ್ತರವನ್ನು ಕೇಳಿ ಇಬ್ಬರೂ ಲಕ್ಷ್ಮಿಯರಿಗೆ ಆನಂದ ಉಂಟಾಯಿತಂತೆ ಮತ್ತು ಇಬ್ಬರಿಗೂ ತಾವು ಒಂದೊಂದು ಕೋನದಲ್ಲಿ ಅಂದವಾಗಿರುವೆವೆನ್ನುವುದು ಸಂತಸ ತಂದಿತು. ಆದ್ದರಿಂದ ಅಂದಿನಿಂದ ವೈಶ್ಯರ ಮನೆಯಲ್ಲಿ ದರಿದ್ರ ಲಕ್ಷ್ಮಿಯು ಹಿಮ್ಮುಖವಾಗಿದ್ದರೆ ಐಶ್ವರ್ಯ ಲಕ್ಷ್ಮಿಯು ಮುಮ್ಮುಖವಾಗಿ ಇರುತ್ತಾಳಂತೆ.

 

ಈ ಮೇಲಿನ ಕಥೆಗಳು ಜ್ಞಾಪಕಕ್ಕೆ ಬಂದದ್ದು ಇತ್ತೀಚೆಗೆ ಉತ್ತರ ಭಾರತದ ವೈಶ್ಯರು ಅಥವಾ ಬನಿಯಾ ಅಗ್ರವಾಲ್ ಜನಾಂಗಕ್ಕೆ ಸೇರಿದ ನನ್ನ ಕಕ್ಷಿದಾರನೊಬ್ಬ ತನ್ನ ಜನಾಂಗದವರ ಬಗ್ಗೆ ಅತಿಯಾಗಿ ಕೊಚ್ಚಿಕೊಳ್ಳುತ್ತಿದ್ದದ್ದನ್ನು ಕೇಳಿದಾಗ. ನಮ್ಮ ಜನಾಂಗದಲ್ಲಿ ಯಾರಿಗೂ ಬಡತನವಿಲ್ಲ ಹಾಗೆ ಹೀಗೆ ಎಂದು ಏನೇನೋ ಕಥೆ ಹೇಳಿದ.  ಅವನು  ಜಂಬದಿಂದ ಹೇಳಿಕೊಂಡರೂ ಅವನು ಹೇಳಿದ್ದರಲ್ಲಿ ಸತ್ಯವಿದೆ ಎನ್ನಿಸಿತು ಆದ್ದರಿಂದ ಅದನ್ನು ಸಂಪದಿಗರೊಂದಿಗೆ ಹಂಚಿಕೊಳ್ಳೋಣವೆಂದು ಕೊಡುತ್ತಿದ್ದೇನೆ.

         ಅಗ್ರವಾಲ್ ಜನಾಂಗದವರ ಮೂಲ ಪುರುಷ ಅಗ್ರಸೇನ ಮಹಾರಾಜ. ಇವನು ಈಗ ಹರಿಯಾಣ ರಾಜ್ಯದಲ್ಲಿರುವ ಅಗ್ರೋಹಿ ಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯವಾಳುತ್ತಿದ್ದ. ಈ ರಾಜನ ಪ್ರತ್ಯೇಕತೆ ಏನೆಂದರೆ ಅಗ್ರೋಹಿ ಪಟ್ಟಣಕ್ಕೆ ಯಾರೇ ವ್ಯಾಪಾರ ಮಾಡುವ ಉದ್ದೇಶವಿಟ್ಟುಕೊಂಡು ಬರಲಿ ಅವರಿಗೆ ಪ್ರತಿಯೊಂದು ಮನೆಯವರು ಒಂದೊಂದು ರೂಪಾಯಿ ನಾಣ್ಯವನ್ನು ಹಾಗೂ ಒಂದೊಂದು ಇಟ್ಟಿಗೆಯನ್ನು ದೇಣಿಗೆಯಾಗಿ ಕೊಡಬೇಕೆಂದು ಕಟ್ಟಳೆಯನ್ನು ಮಾಡಿದ್ದ. ಆ ಪಟ್ಟಣದಲ್ಲಿ ಒಂದು ಲಕ್ಷ ಜನಸಂಖ್ಯೆಯಿತ್ತಂತೆ ಹಾಗಾಗಿ ಹೊಸಬನಿಗೆ ವ್ಯಾಪಾರ ಮಾಡಲು ಒಂದು ಲಕ್ಷ ರೂಪಾಯಿಗಳ ಬಂಡವಾಳ ಮತ್ತು ಮನೆಕಟ್ಟಿಕೊಳ್ಳಲು ಒಂದು ಲಕ್ಷ ಇಟ್ಟಿಗೆಗಳು ದೊರೆಯುತ್ತಿದ್ದವಂತೆ. ಹೀಗೆ ಒಂದು ರೂಪಾಯಿ ಬಂಡವಾಳವಿಲ್ಲದೆ ಹೊಸಬರು ಅಲ್ಲಿಗೆ ಬಂದು ವ್ಯಾಪಾರ ಮಾಡಲು ಅನುಕೂಲವಾಗಿ ಆ ಜನಾಂಗ ಅಭಿವೃದ್ಧಿ ಹೊಂದಿತಂತೆ. ಜನರೆಲ್ಲಾ ಸುಖ ಸಂತೋಷಗಳಿಂದ ಮೆರೆಯುತ್ತಿರುವುದನ್ನು ನೋಡಿ ಸ್ವತಃ ಲಕ್ಷ್ಮೀದೇವಿಗೂ ಈ ರಾಜನ ಬಗ್ಗೆ ಒಳ್ಳೆಯ ಅಭಿಪ್ರಾಯವುಂಟಾಗಿ ಇವನು ಅದೊಂದು ದಿನ ಪೂಜೆ ಮಾಡಿ ಮುಗಿಸಿದ ಮೇಲೆ ಅವನಿಗೆ ಪ್ರತ್ಯಕ್ಷಳಾಗಿ, ನಿನ್ನ ಕಾರ್ಯಗಳಿಂದ ನನಗೆ ಬಹಳ ಸಂತುಷ್ಟವಾಗಿದೆ, ನಿನಗೆ ಬೇಕಾದ ವರಗಳನ್ನು ಕೇಳಿಕೋ ಎಂದು ಹೇಳಿದಳಂತೆ. ಆಗ ಅಗ್ರಸೇನ ಮಹಾರಾಜನು, ನನಗೆ ನೀನು ಏನು ಕಡಿಮೆ ಮಾಡಿದ್ದೀಯೆಂದು ನಿನ್ನಲ್ಲಿ ವರಗಳನ್ನು ಬೇಡಲಿ, ನನಗೆ ಸಕಲ ಸೌಭಾಗ್ಯಗಳನ್ನೂ ಕರುಣಿಸಿದ್ದೀಯ, ಗುಣಶೀಲಳಾದ ಹೆಂಡತಿಯಿದ್ದಾಳೆ, ಸಕಲಗುಣ ಸಂಪನ್ನರಾದ ಮಕ್ಕಳಿದ್ದಾರೆ, ಸುಭಿಕ್ಷವಾದ ರಾಜ್ಯವಿದೆ, ಸಂತುಷ್ಟರಾದ ಪ್ರಜೆಗಳಿದ್ದಾರೆ, ಸಕಲೈಶ್ವರ್ಯವೂ ನನ್ನ ಭಾಂಡಾರದಲ್ಲಿ ತುಂಬಿ ತುಳುಕುತ್ತಿದೆ, ಕೀರ್ತಿಯಿದೆ, ಆರೋಗ್ಯವಿದೆ, ದೀರ್ಘಾಯುಷ್ಯವನ್ನು ಕೊಟ್ಟಿದ್ದೀಯ, ನನಗೆ ಇನ್ನೇನೂ ಬೇಡ ಎಂದನಂತೆ. ಆಗ ಲಕ್ಷ್ಮಿದೇವಿಯು ಇಲ್ಲ ಇಲ್ಲ, ನಾನು ನಿನಗೆ ವರವೊಂದನ್ನು ದಯಪಾಲಿಸಿಯೇ  ಹೋಗಬೇಕೆಂದಿದ್ದೇನೆ, ನೀನು ಏನಾದರೊಂದನ್ನು ಕೋರಿಕೊಳ್ಳಲೇ ಬೇಕು ಎಂದು ಪಟ್ಟು ಹಿಡಿದಳಂತೆ.  ಹೀಗೆ ಲಕ್ಷ್ಮಿದೇವಿಯೇ ಪರಿಪರಿಯಾಗಿ ಬೇಡಿಕೊಂಡದ್ದರಿಂದ, ಕಡೆಯಲ್ಲಿ ಅಗ್ರಸೇನ ಮಹರಾಜನು, ಯಾವತ್ತೂ ನನ್ನ ಜನಾಂಗದವರಾರು ಹಸಿವಿನಿಂದ ಮತ್ತು ಬಡತನದಿಂದ ನರುಳವಂತಾಗದಿರಲಿ ಎನ್ನುವ ಕೋರಿಕೆಯನ್ನು ಮುಂದಿಟ್ಟನಂತೆ. ಅದನ್ನು ಕೇಳಿ ಸಂತುಷ್ಟಳಾದ ಲಕ್ಷ್ಮಿಯು ನಿನ್ನ ಬೇಡಿಕೆಯನ್ನ ಈಡೇರಿಸುವುದಾಗಿ ತಿಳಿಸಿದಳಂತೆ ಆದರೆ ಅದು ನೆರವೇರಬೇಕೆಂದರೆ ತನ್ನ ಒಂದು ಕರಾರಿಗೆ ಅವರು ಬದ್ಧರಾಗಿರಬೇಕೆಂದು ಹೇಳಿದಳಂತೆ. ಅವೇನೆಂದರೆ, ನಿನ್ನ ಜನಾಂಗದವರು ಕುಡಿತಕ್ಕೆ ದಾಸರಾಗ ಬಾರದು, ಜೂಜಾಡಬಾರದು, ಮತ್ತು ವೇಶ್ಯೆಯರ ಸಹವಾಸವನ್ನು ಮಾಡಬಾರದು, ಈ ಮೂರನ್ನು ಕೈಗೊಂಡರೆ ನಾನು ನಿಮ್ಮ ಜನಾಂಗದವರ ಮನೆಯಲ್ಲಿ ನೆಲೆಸಿದ್ದು ಅವರು ಬಡತನ ಮತ್ತು ಹಸಿವಿನಿಂದ ಸಾಯದಂತೆ ನೋಡಿಕೊಳ್ಳುತ್ತೇನೆ ಎಂದು ವಾಗ್ದಾನವಿತ್ತಳಂತೆ. ಇದರಲ್ಲಿ ಒಂದು ನೀತಿ ಅಡಗಿದೆ ಅದೇನೆಂದರೆ ಯಾರು ಚಟಗಳಿಗೆ ದಾಸನಾಗುತ್ತಾನೆಯೋ ಅವನಲ್ಲಿ ಐಶ್ವರ್ಯವು ಸ್ಥಿರವಾಗಿ ನಿಲ್ಲುವುದಿಲ್ಲ ಎನ್ನುವುದು. ಮತ್ತೊಂದು ವಿಷಯವನ್ನೂ ಅವರ ಜನಾಂಗದಿಂದ ನೋಡಿ ಕಲಿತುಕೊಳ್ಳಬಹುದು ಅದೇನೆಂದರೆ, ಪರಸ್ಪರ ಸಹಕಾರದಿಂದ ಎಲ್ಲರೂ ಉತ್ತಮವಾದ ಬಾಳ್ವೆಯನ್ನು ನಡೆಸಬಹುದು, ಇದು ಅವರ ಪ್ರತಿ ಮನೆಯಿಂದ ಒಂದೊಂದು ರೂಪಾಯಿ ಮತ್ತು ಇಟ್ಟಿಗೆಗಳ ಪ್ರಸಂಗವು ತಿಳಿಸಿಕೊಡುತ್ತದೆ.

ಚಿತ್ರಕೃಪೆ: ಗೂಗಲ್

ಫೋಟೋ ೧ - ವೈಶ್ಯರ ಕುಲದೇವತೆ ವಾಸವಿ ಕನ್ಯಕಾ ಪರಮೇಶ್ವರಿ

ಫೋಟೋ ೨ - ಅಗ್ರವಾಲ್ ಬನಿಯಾಗಳ ಮೂಲ ಪುರುಷ ಅಗ್ರಸೇನ್ ಮಹರಾಜ್

 

Rating
No votes yet

Comments