ಒಲವಿನ ಹಾಡಿಗೆ ಪಲ್ಲವಿ ಬಿಡಿಸಿ..
ಕವನ
ಒಲವಿನ ಹಾಡಿಗೆ ಪಲ್ಲವಿ ಬಿಡಿಸಿ
ಹೋದೆ ಎಲ್ಲಿ ಚೆನ್ನ?
ಮನವನು ತಣಿಸುವ
ಚರಣವ ಬರೆಯದೆ
ಹಾಡಾಗುವ ಮುನ್ನ
ತೊರೆದೆ ಏಕೆ ನನ್ನ?
ಕೆಲವೇ ಚಣದಲಿ ಬಾಳನು ಬೆಳಗಿ
ಮೆರೆಯಿತಲ್ಲ ಪ್ರೀತಿ
ಕರಗಿತೆ ಬಾನಲಿ ಮುಸುಕಿದ ಮುಗಿಲಲಿ
ಮಳೆ ಬಿಲ್ಲಿನ ರೀತಿ
ಇದೇ ಏನು ನೀತಿ?
ತಿಂಗಳ ಬೆಳಕಿನ ತಣ್ಣನೆ ಅಂಗಳ
ಕಂಗಳ ತಣಿಸಿದ ತಾನು
ಆಗಿದೆ ಕಾರಿರುಳಿನ ಕಾನು
ಶೃಂಗರಿಸಿರುವ ಅಂದದ ಅಂಗನೆ
ಸಂಗವ ಸಿಗದಿಹ ನಾನು
ನೀರಿರದಾ ಮೀನು
-ಮಾಲು
Comments
ಮಾಲು ರವರಿಗೆ ವಂದನೆಗಳು,
ಮಾಲು ರವರಿಗೆ ವಂದನೆಗಳು,
" ಒಲವಿನ ಹಾಡಿಗೆ ಪಲ್ಲವಿ ಬಿಡಿಸಿ " ಒಂದು ಸರಳ ಸುಂದರ ರಚನೆ. ಕವಿಯ ವಿರಹ ಅರ್ಥಪೂರ್ಣ, ಒಲವ ಹಾಡಿಗೆ ಪಲ್ಲವಿ ಬಿಡಿಸಿದವರು ಚರಣಗಳನ್ನೂ ಬರೆಯುತ್ತಾರೆ, ಪ್ರೇಮದ ಪಕ್ವತೆಗೆ ಒಂದು ಕಾಲಬೇಕು, ಅದಕಾಗಿ ಕಾಯಬೇಕು, ಕಾಯುವಿಕೆ ಕ್ಷಣ ಕಾಲದ್ದಾಗಿರಬಹುದು ಇಲ್ಲ ಧೀರ್ಘ ಅವಧಿಯದಾಗಿರಬಹುದು, ಆದರೆ ವಿಶ್ವಾಸ ಬೇಕು, ಕಾಯುವಿಕೆ ನಿರಂತರವಾಗಿರಬೇಕು. ಉತ್ತಮ ಕವನ ನೀಡಿದ್ದೀರಿ ಧನ್ಯವದಗಳು.
In reply to ಮಾಲು ರವರಿಗೆ ವಂದನೆಗಳು, by H A Patil
ನನ್ನ ಕವಿತೆಯನ್ನು ತಾವು ಓದಿ
ನನ್ನ ಕವಿತೆಯನ್ನು ತಾವು ಓದಿ ನಿಮ್ಮ ಸದಭಿಪ್ರಾಯ ತಿಳಿಸಿದುದುದಕ್ಕೆ ಧನ್ಯವಾದಗಳು.
ಹೌದು, ತಾವು ತಿಳಿಸಿದಂತೆ ಪ್ರೇಮದ ಪಕ್ವತೆಗೆ ಅದರದೇ ಕಾಲಬೇಕು ಮತ್ತು ವಿಶ್ವಾಸ ಬೇಕು.
ನಿಮಗೆ ನನ್ನ ಕವನ ಇಷ್ಟವೆನಿಸಿದ್ದಕ್ಕೆ ಸಂತಸವಾಗಿದೆ.
ಮಾಲು