ಬಾಹುಬಲಿ - ೨ (ಮುಕ್ತಾಯ)
ಮೊದಲಬಾಗ :ಬಾಹುಬಲಿ
ಜೈನದರ್ಮವನ್ನು ಪ್ರಥಮಬಾರಿಗೆ ಉಪದೇಶಿಸಿದವರು ವೃಷಭನಾಥರು. ಮೊದಲಿಗೆ ಮಹಾರಾಜರಾಗಿದ್ದವರು ವೈರಾಗ್ಯಭಾವ ತಾಳಿ ರಾಜ್ಯವನ್ನು ಮಕ್ಕಳಿಗೆ ಹಂಚಿಕೊಟ್ಟು ತಪಸ್ಸಿಗೆ ತೆರಳಿದರು. ಅವರಿಗೆ ಇಬ್ಬರು ಪತ್ನಿಯರು ಸುನಂದ ಮತ್ತು ನಂದಾ. ಸುನಂದಳ ಮಗ ಬಾಹುಬಲಿ. ನೋಡಲು ಆಜಾನುಬಾಹು. ಯುದ್ದಕ್ಕೆ ನಿಂತರೆ ಎದುರಿಲ್ಲ, ಗೆಲುವು ನಿಶ್ಚಿತ. ಆದರೆ ಶಾಂತ ಭಾವ.
ಹಿರಿಯನಾದ ಭರತನು ತನ್ನ ರಾಜ್ಯದಲ್ಲಿ ಆಡಳಿತ ನಡೆಸಿಕೊಂಡಿದ್ದವನು. ಆದರೆ ತಾನು ದಿಗ್ವಿಜಯಿಯಾಗಿ ಚಕ್ರವರ್ತಿಯಾಗಿ ಮೆರೆಯಬೇಕೆಂಬ ಆಸೆ ಅವನಲ್ಲಿ ತಲೆಯೆತ್ತಿತ್ತು. ಮಹಾರಾಜನು ಮನಸ್ಸು ಮಾಡಿದ ಮೇಲೆ ಇನ್ನೇನು ಆಡ್ಡಿ. ಅವರ ದಿಗ್ವಿಜಯ ಯಾತ್ರೆ ಹೊರಟು ಬಿಟ್ಟಿತ್ತು. ಮುಂದೆ ಕೀರ್ತಿಚಕ್ರ, ಅದನ್ನವನು ದರ್ಮಚಕ್ರವೆಂದು ಕರೆಯುತ್ತಿದ್ದನು. ಹಿಂದೆ ಹಿಂದೆಗೆ ಸಾಗರದಂತ ಸೈನ್ಯ. ಸುತ್ತಮುತ್ತಲ ರಾಜ್ಯದ ಅರಸರೆಲ್ಲ ತಲೆಬಾಗಿ ಶರಣಾದರು, ಅವನ ಜಯವನ್ನು ಒಪ್ಪಿ ಕಪ್ಪಕಾಣಿಕೆ ಸಲ್ಲಿಸಲು ಒಪ್ಪಿದರು. ಎದುರಿಸಿದವರು ಯುದ್ದದ್ದ ಬಿರುಗಾಳಿಗೆ ಸಿಕ್ಕಿ ನಾಶವಾದರು.
ಅರಸ ಭರತನ ಮನ ಯುದ್ದೋನ್ಮಾದದಿಂದ ತಣಿಯಿತು. ಎಲ್ಲರನ್ನು ಜಯಿಸಿ, ತಾನು ಅಪ್ರತಿಮ ವೀರನೆಂಬ ಹಮ್ಮಿನಲ್ಲಿ ತನ್ನ ರಾಜ್ಯಕ್ಕೆ ಹಿಂದಿರುಗಿದ. ಆದರೆ ಅದೇನಾಯಿತು ಕಾಣೆ, ಅವನನ್ನು ದಾರಿ ತೋರಿ ಕರೆದೊಯ್ಯುತ್ತಿದ್ದ ದರ್ಮಚಕ್ರ ಅವರ ರಾಜ್ಯವನ್ನು ಪ್ರವೇಶಿಸದೆ ಹೆಬ್ಬಾಗಿಲಲ್ಲಿ ನಿಂತುಹೋಯಿತು. ಎಲ್ಲರಿಗು ಅಚ್ಚರಿ ಏಕೆ ಹೀಗೆ ಆಯಿತೆಂದು. ಕಡೆಗೆ ಹಿರಿಯರನ್ನು ಬಲ್ಲವರನ್ನು ಪ್ರಶ್ನಿಸಿದಾಗ ಅವರಂದರು
“ನೀನು ಜಗವನ್ನೆ ಜಯಿಸಿರಬಹುದು ಆದರೆ ನಿನ್ನ ತಮ್ಮಂದಿರನ್ನು ಇನ್ನು ಜಯಿಸಿಲ್ಲ, ಅವರು ಪ್ರತ್ಯೇಕವಾಗಿ ಆಡಳಿತ ನಡೆಸುತ್ತಿರುವದರಿಂದ, ಅವರು ಸಹ ನಿನ್ನ ಸಾಮಂತರಾಗುವುದು ಅವಶ್ಯ . ಆಗಲೆ ನಿನ್ನ ಜಯ ಪರಿಪೂರ್ಣ”
ಸರಿ ಇನ್ನೇನು ಭರತ ತನ್ನ ತಮ್ಮಂದಿರಿಗೆ ಕರೆ ಕಳಿಸಿದ. ಎಲ್ಲರು ನನ್ನ ಸಾಮಂತರಾಗಿ ರಾಜ್ಯವನ್ನು ಒಪ್ಪಿಸಿ, ಇಲ್ಲದಿದ್ದರೆ ಯುದ್ದಕ್ಕೆ ಸಿದ್ದರಾಗಿ. ಉಳಿದ ಸಹೋದರರೆಲ್ಲ ತಮ್ಮ ರಾಜ್ಯವನ್ನು ಭರತನಿಗೆ ಒಪ್ಪಿಸಿ , ರಾಜ್ಯವನ್ನು ತೊರೆದು ತಂದೆ ವೃಷಭನಾಥರಲ್ಲಿಗೆ ಹೊರಟು ಹೋದರು. ಆದರೆ ಅಪ್ರತಿಮ ವೀರನಾದ ಬಾಹುಬಲಿಗೆ ಸೋಲು ಒಪ್ಪಿಕೊಳ್ಳಲು ಇಷ್ಟವಿರಲಿಲ್ಲ. ತಾನೇನು ಭರತನ ರಾಜ್ಯದ ಮೇಲೆ ದಂಡೆತ್ತಿ ಹೋಗುತ್ತಿಲ್ಲ. ಆದರೆ ಅಣ್ಣನೆ ತನಗೆ ಯುದ್ದಕ್ಕೆ ಅಹ್ವಾನ ಕಳಿಸಿದಾಗ ಅದನ್ನು ಒಪ್ಪುವುದು ಕ್ಷತ್ರೀಯ ಧರ್ಮ , ತಾನು ತನ್ನ ತಂದೆ ವೃಷಭನಾಥರನ್ನು ಹೊರತು ಪಡಿಸಿ ಯಾರಿಗು ತಲೆ ತಗ್ಗಿಸೆ ಎಂದು ಬಿಟ್ಟ. ಯುದ್ದ ಘೋಷಣೆ ಅನಿವಾರ್ಯವಾಯಿತು.
ತನ್ನ ಮಂತ್ರಿಗಳು, ಸೇನಾಧಿಕಾರಿಗಳು ಎಲ್ಲರನ್ನು ಸಭೆ ಸೇರಿಸಿದ ಮಹಾರಾಜ ಬಾಹುಬಲಿ. ಯುದ್ದ ತಂತ್ರದ ಬಗ್ಗೆ ಚರ್ಚಿಸಲು. ಯಾರ ಮುಖದಲ್ಲಿಯು ಗೆಲುವಿಲ್ಲ, ಯುದ್ದೋತ್ಸಾಹವಿಲ್ಲ. ಯುದ್ದ ಎಂದರೆ ವಿಜೃಂಬಿಸುತ್ತಿದ್ದ ತನ್ನ ಸೇನಾದಿಕಾರಿಗಳು ತಲೆತಗ್ಗಿಸಿ ಕುಳಿತಿರುವರು. ಎಲ್ಲವನ್ನು ನೋಡುತ್ತ ಬಾಹುಬಲಿ ತನ್ನ ಮಂತ್ರಿಗಳನ್ನು ಪ್ರಶ್ನಿಸಿದ
“ಮಂತ್ರಿಗಳ ಇದು ನಾವು ಬಯಸಿಬಂದ ಯುದ್ದವಲ್ಲ, ಅನಿವಾರ್ಯವಾಗಿ ಒದಗಿದ ಯುದ್ದ. ಯುದ್ದ ಕ್ಷತ್ರಿಯ ಧರ್ಮ ಆದರೆ ಏಕೆ ಮಂತ್ರಿವರ್ಗ ಹಾಗು ಸೇನಾದಿಕಾರಿಗಳು ಉತ್ಸಾಹ ಕಳೆದುಕೊಂಡಿದ್ದಾರೆ”
ಮಂತ್ರಿಗಳು ಯೋಚನೆ ಮಾಡುತ್ತ ಅರುಹಿದರು
“ಪ್ರಭು, ಯುದ್ದ ಎಂದರೆ ಕ್ಷತ್ರಿಯರಿಗೆ ಅನಿವಾರ್ಯ ನಿಜ.ಆದರೆ ಇದು ವಿಶಿಷ್ಟ ಸಂದರ್ಭ. ಎದುರಿಸಬೇಕಾಗಿರುವುದು ಒಮ್ಮೆ ನಮ್ಮದೆ ಆಗಿದ್ದ ಸೈನ್ಯವನ್ನು. ನಿಮ್ಮ ತಂದೆಯವರಿದ್ದ ಕಾಲಕ್ಕೆ ಎಲ್ಲವು ಒಂದೆ ಸೈನ್ಯವಾಗಿತ್ತು. ಈಗ ತಮ್ಮ ಅಣ್ಣ ಭರತ ಮಹಾರಾಜರಿರುವ ಸೈನ್ಯದಲ್ಲಿ ಇರುವರೆಲ್ಲ ನಮ್ಮವರೆ. ನಮ್ಮ ಸೈನಿಕರ, ಸೈನಾದಿಕಾರಿಗಳ, ಅಣ್ಣ ತಮ್ಮ ಮಾವ ಮೈದುನ ಹೀಗೆ ಎಲ್ಲ ಸಂಭಂದಿಕರೆ ಆಗಿದ್ದಾರೆ. ಧರ್ಮದ ಹೆಸರಿನಲ್ಲಿ ತಮ್ಮವರನ್ನೆ ತಾವು ಕೊಲ್ಲಲು ಎಲ್ಲರು ಹಿಂಜರಿಯುತ್ತಿದ್ದಾರೆ,ಹಾಗಾಗಿ ಎಲ್ಲರಲ್ಲು ಉತ್ಸಾಹ ಕುಂದಿದೆ ಮಹಾಪ್ರಭು” ಎಂದರು
ಮಹಾರಾಜ ಬಾಹುಬಲಿ ಯೋಚನೆಗೆ ಬಿದ್ದರು. ಹೌದು ಮಂತ್ರಿಗಳ ಮಾತಿನಲ್ಲಿ ಸತ್ಯವಿದೆ. ಅಣ್ಣ ಭರತನ ರಾಜ್ಯದಾಹಕ್ಕೆ , ನಾನು ಅವನ ವಿರುದ್ದ ಹೋರಾಡುವುದು ಅನಿವಾರ್ಯ, ಆದರೆ ಸಾವಿರಾರು ಸೈನಿಕರ ಜೀವ , ಬದುಕು ಇದರಿಂದ ನಾಶವಾಗುವುದು ಸತ್ಯ. ಎರಡು ಸೈನ್ಯದವರು ಪರಸ್ಪರ ಸಂಬಂದಿಕರೆ ಆಗಿದ್ದಾರೆ. ಹಾಗಿರಲು ನಮ್ಮ ನಮ್ಮ ಸ್ವಾರ್ಥಕ್ಕಾಗಿ ಇವರ ಬದುಕು ಬಲಿಕೊಡಬೇಕೇಕೆ. ಬಾಹುಬಲಿಯ ಮುಖದಲ್ಲಿ ಯೋಚನೆಯ ಕಾರ್ಮೋಡ ಕವಿಯಿತು. ಬಹಳ ಕಾಲದ ಮೌನದ ನಂತರ ಚಿಂತಿಸಿ ಅವರು ನುಡಿದರು
“ಮಂತ್ರಿಗಳೆ , ನಿಮ್ಮ ಭಾವನೆ ಸತ್ಯವಾಗಿದೆ, ನನಗೆ ಇದರಿಂದ ಅಸಮಾದಾನವೇನು ಇಲ್ಲ. ಬಲಾಬಲ ನಿರ್ದಾರವಾಗಬೇಕಿರುವುದು ನಮ್ಮ ಹಾಗು ನಮ್ಮ ಸಹೋದರ ಭರತರ ಮಧ್ಯೆ ಮಾತ್ರ. ಹಾಗಿರಲು ವೃತಾ ಸೈನದ ನಷ್ಟವೇಕೆ. ಅದರಿಂದ ನಮ್ಮಿಬ್ಬರ ನಡುವೆ ನೇರಯುದ್ದ ನಡೆಯಲಿ. ಆ ದರ್ಮಯುದ್ದದಲ್ಲಿ ಗೆಲುವು ಸಾದಿಸಿದವರನ್ನು ವಿಜಯಿ ಎಂದು ಒಪ್ಪಿಕೊಳ್ಳುವುದು. ಈ ವಿಷಯವನ್ನು ನೀವು ದೂತರ ಮುಖಾಂತರ ನಮ್ಮ ಸಹೋದರರಲ್ಲಿ ನಿರೂಪವನ್ನು ಕಳಿಸಿ ಅವರು ಸಹ ಇದ್ದಕ್ಕೆ ಒಪ್ಪುವರು ಎಂದು ನಮ್ಮ ಅಭಿಮತ. “ ಎಂದರು.
ಕಡೆಗೆ ಭರತ ಹಾಗು ಬಾಹುಬಲಿಯ ನಡುವೆ ದರ್ಮಯುದ್ದವೆಂದು. ನೇರ ಕಾಳಗದಲ್ಲಿ ವಿಜಯಿಯಾದವರು ಯುದ್ದದಲ್ಲಿ ಗೆದ್ದಂತೆ ಎಂದು ತೀರ್ಮಾನವಾಯಿತು. ದೃಷ್ಟಿಯುದ್ದ ಜಲಯುದ್ದ ಹಾಗು ಕಡೆಯದಾಗಿ ಮಲ್ಲಯುದ್ದ ಎಂದು, ಮೂರು ವಿಭಾದಗಲ್ಲಿ ಜಯಿಸಿದವರು ವಿಜಯಿಯೆಂದು ನಿರ್ದಾರವಾಯಿತು.
ಭರತ ಮತ್ತು ಬಾಹುಬಲಿ ಇಬ್ಬರು ಅಜಾನುಬಾಹು ಸ್ವರೂಪರು. ಯುದ್ದಕ್ಕೆ ನಿಂತರೆ ಮದಗಜಗಳ ನಡುವಿನ ಕಾಳಗವನ್ನು ನೆನಪಿಸುತ್ತಿತ್ತು. ಯುದ್ದವಸ್ತ್ರಗಳನ್ನು ಧರಿಸಿ ಇಬ್ಬರು ಸಿದ್ದರಾದರು. ನಡುವಿನಲ್ಲಿ ನಿರ್ಣಾಯಕರು ಆಸೀನರಾದರು. ಮೊದಲಿಗೆ ದೃಷ್ಟಿಯುದ್ದ. ಇಬ್ಬರು ಎದುರುಬದುರಾಗಿ ನಿಂತು, ಎವೆ ಇಕ್ಕದೆ, ಕದಲದೆ ಒಬ್ಬರನ್ನೊಬ್ಬರು ದೀರ್ಘಕಾಲ ದಿಟ್ಟಿಸುವುದು. ಕಾಲ ವಿಳಂಬಿಸುತ್ತ ಹೋಯಿತು, ಅಣ್ಣ ಭರತನಿಗೆ ತಮ್ಮನ ದೃಷ್ಟಿಯನ್ನು ಎದುರಿಸಲಾಗಲಿಲ್ಲ, ಸೋತು ಪಕ್ಕಕ್ಕೆ ಮುಖ ತಿರುವಿಬಿಟ್ಟ. ಎಲ್ಲರು ಬಾಹುಬಲಿಗೆ ಉಘೇ ಉಘೇ ಎಂದರು.
ನಂತರ ಜಲಯುದ್ದ, ನೋಡುಗರ ಕಣ್ಣಿಗೆ ಎರಡು ಆನೆಗಳು ನೀರಿಗಿಳಿದು ಕಾಳಗ ನಡೆಸಿದೆ ಎನ್ನುವಂತ ಭ್ರಮೆ. ದೀರ್ಘಕಾಲ ನಡೆದ ಯುದ್ದದ ಕಡೆಯಲ್ಲಿ ನಿರ್ಣಾಯಕರು ಪುನಃ ಬಾಹುಬಲಿಯೆ ವಿಜಯಿ ಎಂದು ನಿರ್ದರಿಸಿದರು.
ಕಡೆಯದಾಗಿ ಮಲ್ಲಯುದ್ದ. ಸುತ್ತಲು ಸೈನ್ಯ ನೆರೆದಿತ್ತು. ಅರಮನೆಯ ಮಹಾರಾಣಿಯಾದಿಯಾಗಿ ಎಲ್ಲ ಸ್ತ್ರೀಯರು ಅರಮನೆಯ ಮೇಲುಪ್ಪರಿಗೆಯಲ್ಲಿ ಆಸೀನರಾಗಿ ಮಲ್ಲಯುದ್ದವನ್ನು ವೀಕ್ಷಿಸಲು ಕಾಯುತ್ತಿದ್ದರು. ಉಭಯ ಸೈನ್ಯದ ಸೈನಿಕರು ತಮ್ಮ ಮಹಾರಾಜರನ್ನು ಉತ್ಸಾಹಿಸಿ ಪ್ರೋತ್ಸಾಹಿಸಲು ಜಯಕಾರ ಹಾಕುತ್ತಿದ್ದರು. ನಡುವೆ ಮಣ್ಣಿನ ಅಖಾಡದಲ್ಲಿ ಮಲ್ಲಯುದ್ದದ ಉಚಿತ ವಸ್ತ್ರದೊಂದಿಗೆ ಅಣ್ಣ ತಮ್ಮ ಇಬ್ಬರು ರಾಜ್ಯಕ್ಕಾಗಿ ಹೋರಾಡಲು ಸಿದ್ದರಾದರು
--
ಜೈನಮುನಿಗಳು ಹೇಳುತ್ತಿರುವ ಕತೆ ಕೇಳುತ್ತ ಕೇಳುತ್ತ ಲಕ್ಕೆಗೌಡನಿಗೆ, ಹಿಂದೆ ಇತಿಹಾಸದಲ್ಲಿ ನಡೆದಿರಬಹುದಾಗ ಯುದ್ದದ ಕಲ್ಪನೆ ಕಣ್ಣೆದುರು ಬರುತ್ತಿತ್ತು. ಅವನ ಮನ ವಿಹ್ವಲವಾಗುತ್ತಿತ್ತು, ರಾಜ್ಯದಾಹಕ್ಕಾಗಿ ಒಡಹುಟ್ಟಿದ ಸಹೋದರರೆ ಎದುರು ಬದುರು ನಿಲ್ಲುವಂತಾಯಿತಲ್ಲ ಎಂದು ಅವನ ಮನ ಮರುಗುತ್ತಿತ್ತು . ಎಂದೊ ನಡೆದಿರಬಹುದಾದ ಮಲ್ಲ ಯುದ್ದದ್ದ ದೃಷ್ಯ ಅವನ ಕಣ್ಣೆದುರು ಕುಣಿಯುತ್ತಿತ್ತು.
---
ಸುತ್ತಲು ನೋಡುತ್ತ ಭರತ ಮತ್ತು ಬಾಹುಬಲಿ ಇಬ್ಬರು ಮಲ್ಲಯುದ್ದದ್ದ ಅಖಾಡಕ್ಕೆ ಇಳಿದರು. ನಡುವಿನಲ್ಲಿ ಇಬ್ಬರನ್ನು ಕೈಮಿಲಾಯಿಸಿ ಹಿಂದಕ್ಕೆ ಸರಿದ ಇವರಿಬ್ಬರ ಗುರುವಾಗಿ ಮಲ್ಲಯುದ್ದ ಕಲಿಸಿದ ಗುರು. ದೂರದಲ್ಲಿ ಇವರ ಜಯ ಅಪಜಯ ನಿರ್ಣಯಿಸಲು ಸಿದ್ದವಾಗಿದ್ದರು ಮಲ್ಲಯುದ್ದದಲ್ಲಿ ಪಳಗಿದ ನಿರ್ಣಾಯಕರು.
ಅಣ್ಣನ ದೇಹವನ್ನು ತಮ್ಮ ತಬ್ಬುವನು, ಕೆಳೆಗೆ ಎಳೆಯುವನು, ಅಣ್ಣ ತಪ್ಪಿಸಿಕೊಳ್ಳುತ್ತ ಅದಕ್ಕೆ ಪ್ರತಿಪಟ್ಟು ಹಾಕುವನು. ಮತ್ತೆ ಮಣ್ಣನ್ನು ಸವರಿಕೊಳ್ಳುತ ತಮ್ಮ ಕುತ್ತಿಗೆಯ ಸುತ್ತ ತೋಳ ಬಳಸುತ್ತ ಹಾಕಿದ ಪಟ್ಟಿಗೆ ಅಣ್ಣ ನೋವಿನಿಂದ ಚೀರುತ್ತ, ಬಿಡಿಸಿಕೊಂಡು ತಮ್ಮನನ್ನು ಹೊಡೆಯುವನು. ನೋಡ ನೋಡುತ್ತ ಮಲ್ಲ ಯುದ್ದ ತೀವ್ರ ಸ್ವರೂಪ ಪಡೆಯಿತು. ಸುತ್ತಲಿದ್ದವರು ಪೂರ್ತಿಮೌನವಾಗಿದ್ದರು. ಅವರಿಬ್ಬರು ಮಣ್ಣಿನ ನೆಲದಲ್ಲಿ ಹಾಕುತ್ತಿದ್ದ ಹೆಜ್ಜೆಯ ಶಬ್ದಗಳ ಹೊರತಾಗಿ, ಅವರಿಬ್ಬರ ಶ್ವಾಸೊಚ್ವಾಸದ ಸದ್ದಿನ ಹೊರತಾಗಿ ಏನು ಕೇಳಿಸುತ್ತಿಲ್ಲ ಅನ್ನುವ ಭ್ರಮೆ ಆವರಿಸಿತು. ಇಬ್ಬರು ಗೆಲುವಿಗಾಗಿ ಹೂಂಕರಿಸುತ್ತಿದ್ದಾರೆ.
ಎರಡು ಮೂರು ಸುತ್ತುಗಗಳಾಗುತ್ತಿರುವಂತೆ , ನೋಡುವರ ಕಣ್ಣಿಗೆ ಎದ್ದು ಕಾಣುವಂತಿತ್ತು, ತಮ್ಮ ಬಾಹುಬಲಿ ಮಲ್ಲಯುದ್ದದಲ್ಲಿ ಸಹ ಮೇಲುಗೈ ಸಾದಿಸಿದ್ದ. ಅವನ ಗೆಲುವು ನಿಶ್ಚಿತ ಎಂದೆ ಎಲ್ಲರು ಭಾವಿಸುತ್ತಿದ್ದಾರೆ. ಭರತನ ರಾಣಿವಾಸದವರಂತು ಅವಮಾನದಿಂದ ಕುದಿಯುತ್ತಿದ್ದಾರೆ.
ಯುದ್ದಕ್ಕೆ ಕೊನೆ ಹಾಡುವ ಕಾಲ ಬಂದು ಬಿಟ್ಟಿತು, ಭರತ ಪೂರ್ಣವಾಗಿ ನಿಶ್ಯಕ್ತನಾದ, ಅವನ ಸೋಲು ಅನಿವಾರ್ಯ ಎನಿಸಿತು. ಅಂತಹ ಸಮಯದಲ್ಲಿ ತಮ್ಮ ಬಾಹುಬಲಿ ಅಣ್ಣ ಭರತನನ್ನು ಎರಡು ಕೈಯಿಂದೆ ಮೇಲೆ ಎತ್ತಿ ಗಿರ ಗಿರನೆ ತಿರುಗಿಸುತ್ತಿದ್ದಾನೆ, ಯುದ್ದದ್ದ ಕಡೆಯ ಕ್ಷಣ ಅವನು ಭರತನನ್ನು ನೆಲಕ್ಕೆ ಒಗೆದರು ಆಯ್ತು, ಭರತನ ಕೀರ್ತಿಪತಾಕೆ ಮಣ್ಣು ಮುಕ್ಕಿದಂತೆ. ಅಟ್ಟಹಾಸದಿಂದ ಸುತ್ತಲು ನೋಡಿದ ಬಾಹುಬಲಿ, ಆಯಿತು ತನ್ನ ಗೆಲುವು ನಿಶ್ಚಿತ, ಅಣ್ಣನ ರಾಣಿವಾಸದತ್ತ ದಿಟ್ಟಿಸಿದ, ತಾನು ಗೌರವಿಸುತ್ತಿದ್ದ ಅತ್ತಿಗೆ, ತನ್ನ ಗಂಡನೆ ಸೋಲನ್ನು ನೋಡಲಾರರೆ, ತನ್ನ ಗಂಡನ ಕಿರೀಟ ಮಣ್ಣುಪಾಲುವ ದೃಷ್ಯವಾನು ನೋಡುವ ಶಕ್ತಿ ಇಲ್ಲದೆ ತಲೆ ತಗ್ಗಿಸಿಬಿಟ್ಟಿದ್ದಾಳೆ. ಸೈನಾಧಿಕಾರಿಗಳು, ಮಂತ್ರಿಗಳು ಎಲ್ಲರು ಮೌನವನ್ನು ಧರಿಸಿದ್ದರೆ, ಹಾಗೆ ತನ್ನ ರಾಣಿವಾಸದ ಕಡೆ ದೃಷ್ಟಿ ಹಾಯಿಸಿದ ತನ್ನ ಪತ್ನಿ ಸಹ ತನ್ನ ಗೆಲುವನ್ನು ಕಂಡು ಹರ್ಷಿಸುತ್ತಿಲ್ಲ. ಅವಳ ಮುಖವು ಮೋಡ ಕವಿದ ಹುಣ್ಣಿಮೆ ಚಂದ್ರನಂತೆ ಕಂದಿದೆ.
ಒಮ್ಮೆಲೆ ಬಾಹುಬಲಿಯ ಮನವನ್ನು ವಿಷಾದಭಾವ ಆವರಿಸಿತು. ತಾನು ಗೆಲುವು ಸಾದಿಸಬಹುದು ಆದರೆ ಅದು ಯಾರ ವಿರುದ್ದ , ತನ್ನ ಸ್ವಂತ ಅಣ್ಣನನ್ನು ಎದುರಿಸಿದ ಗಳಿಸಿದ ಅಂತಹ ಗೆಲುವು ತನಗೆ ಸಂತಸ ನೀಡಲು ಸಾದ್ಯವೆ. ಅವನ ಕಣ್ಣ ಮುಂದೆ ಚಿಕ್ಕವಯಸಿನಲ್ಲಿ ತನ್ನ ಜೊತೆ ಆಡುತ್ತಿದ್ದ ಅಣ್ಣನ ಸ್ವರೂಪ ನೆನೆಪಿಗೆ ಬಂದಿತು. ಆಡುವಾಗಲು ಜೊತೆ, ಗುರುಕುಲದಲ್ಲಿ ಒಟ್ಟೆಗೆ ಅಭ್ಯಾಸಮಾಡಿದ್ದು, ಜೊತೆ ಜೊತೆಯಾಗು ಪ್ರವಾಸಹೋಗಿದ್ದು. ಅಣ್ಣನ ಮದುವೆಯಲ್ಲಿ ತಾನು ಎಷ್ಟೆಲ್ಲ ಗೆಳೆಯರ ಜೊತೆ ಸಂಬ್ರಮಿಸಿದ್ದೇನೆ. ಇಂತಹ ಅಣ್ಣನ ವಿರುದ್ದ ಗಳಿಸುವ ಗೆಲುವು ನನಗೆ ಅನಿವಾರ್ಯವೆ ? ಇದು ತನಗೆ ಸಂತಸ ತರಲು ಸಾದ್ಯವೆ ?
ಬಾಹುಬಲಿಯ ಒಳಗಣ್ಣು ತೆರೆದಿತ್ತು, ಇಷ್ಟಕ್ಕು ತಾನು ತನ್ನ ಅಣ್ಣನ ವಿರುದ್ದ ಸೆಣಿಸುತ್ತಿರುವುದು ಯಾವುದಕ್ಕಾಗಿ, ಭೂಮಿಗಾಗಿ, ರಾಜ್ಯಕ್ಕಾಗಿ ಅಧಿಕಾರಕ್ಕಾಗಿ, ಸಿಂಹಾಸನಕ್ಕಾಗಿ . ಆದರೆ ಇದೆಲ್ಲ ಎಷ್ಟು ಕಾಲ, ಅದೇನು ಶಾಶ್ವತವೆ, ತನ್ನ ಆಯಸ್ಸು ಮುಗಿದೊಡನೆ ಎಲ್ಲವನ್ನು ತೊರೆದು ಹೋಗಲೆ ಬೇಕು ಅಲ್ಲವೆ. ರಾಜ್ಯವನ್ನು ತೊರೆದು ವೈರಾಗ್ಯದ ಹಾದಿ ಹಿಡಿದ ತಂದೆ ವೃಷಭನಾಥರು ನೆನಪಾದರು. ಒಮ್ಮೆಲೆ ಅನ್ನಿಸಿತು ಬೇಡ ತನಗೆ ಇಂತ ಗೆಲುವು ಬೇಡ .
ತಾನು ಮಣ್ಣಿಗೆ ಒಗೆಯಲು ಎತ್ತಿ ಹಿಡಿದಿರುವ ಅಣ್ಣ ಭರತನ ಬಗ್ಗೆ ಗೌರವ ಅವನಲ್ಲಿ ಮೂಡಿತು. ತನಗಿಂತ ಹಿರಿಯನಾದ ಅವನಿಗೆ ತಲೆ ತಗ್ಗಿಸುವದರಲ್ಲಿ ತಪ್ಪಾಗಲಿ ಅವಮಾನವಾಗಲಿ ಇಲ್ಲ. ಬದಲಿಗೆ ಅದು ಹೆಮ್ಮೆ ಮತ್ತು ತನ್ನ ಕರ್ತವ್ಯ ಅಲ್ಲವೆ ಅನಿಸಿತು. ಯುದ್ದ ಕ್ಷತ್ರಿಯ ದರ್ಮವಾದರೆ ಹಿರಿಯರನ್ನು ಗೌರವಿಸುವುದು ಅಣ್ಣನಿಗೆ ತಲೆಬಾಗುವುದು ತನ್ನ ಮನುಷ್ಯ ದರ್ಮವಲ್ಲವೆ , ಬಾಹುಬಲಿಯ ದೇಹ ನಿಶ್ಚಲವಾಯಿತು.
ಸುತ್ತಲಿದ್ದವರು ಅಚ್ಚರಿಯಿಂದ ದಿಟ್ಟಿಸುತ್ತಿದ್ದಾರೆ , ಇದೇನು ಅಣ್ಣನನ್ನು ಗಾಳಿಯಲ್ಲಿ ಎತ್ತಿಹಿಡಿದು, ಸುಂಟರಗಾಳಿಯಂತೆ ತಿರುಗುತ್ತಿದ್ದ ಬಾಹುಬಲಿ ಒಮ್ಮೆಲೆ ಸ್ಥಿರನಾಗಿ ನಿಂತನೇಕೆ, ಅಣ್ಣನನ್ನು ಕೆಳಗೆ ಒಗೆಯದೆ, ಸುಮ್ಮನಾದನೇಕೆ ಎಂದು ಚಿಂತಿಸುತ್ತಿರುವಾಗಲೆ , ಬಾಹುಬಲಿ ನಿದಾನವಾಗಿ ತನ್ನ ಅಣ್ಣ ಭರತನನ್ನು ಕೆಳಗೆ ಇಳಿಸಿದ. ಅಣ್ಣ ಚೇತರಿಸಿಕೊಳ್ಳುತ್ತಿರುವಂತೆ , ಅಣ್ಣನ ಎದುರಿಗೆ ಮಂಡಿ ಊರಿದ. ಕಣ್ಣಲಿ ನೀರು ತುಂಬಿಕೊಳ್ಳುತ್ತ ನುಡಿದ
“ಅಣ್ಣ ನಿನ್ನ ವಿರುದ್ದ ಯುದ್ದಕ್ಕೆ ನಿಂತ ಉದ್ದಟತನವನ್ನು ಕ್ಷಮಿಸು, ನನ್ನ ಕಣ್ಣಿಗೆ ಕತ್ತಲು ಕವಿದಿತ್ತು. ನಾನು ನಿನ್ನಿಂದಪರಾಜಿತನಾಗಿದ್ದೇನೆ, ನಾನು ಯುದ್ದದಲ್ಲಿ ಸೋತಿರುವೆ ಎಂದು ಒಪ್ಪಿಕೊಳ್ಳುತಿರುವೆ “
ಸುತ್ತಲಿದ್ದವರೆ ಏನು ನಡೆಯುತ್ತಿದೆ ಎಂದು ಅರಿವಾಗುವ ಮೊದಲೆ, ತಮ್ಮ ಬಾಹುಬಲಿ ರಾಜ್ಯವನ್ನು ಅಣ್ಣನಿಗೆ ಒಪ್ಪಿಸಿ , ಹೊರಟುಬಿಟ್ಟ. ಮುಂದೆ ನಡೆದಿದ್ದು ಇತಿಹಾಸ. ಬಾಹುಬಲಿಯ ಮನ ಪೂರ್ಣ ನೊಂದಿತ್ತು. ನಶ್ವರವಾದ ಪ್ರಪಂಚಕ್ಕೆ ಅವನು ಬೆನ್ನು ಮಾಡಿದ್ದ. ನಿಜವಾದ ಜ್ಞಾನವನ್ನು ಅವನು ಅರಿಸಿ ಹೊರಟಿದ್ದ
ಇದೆ ಇಂದ್ರಗಿರಿಯನ್ನು ಹತ್ತಿದ ತನ್ನದೆಲ್ಲವನ್ನು ತೊರೆದ ಭಾವದಿಂದ ನಿಂತು ತಪ್ಪಸಿಗೆ ತೊಡಗಿದ. ವರ್ಷ ವರ್ಷಗಳು ಕಳೆದವು, ಆದರೆ ಬಾಹುಬಲಿ ಮನಸಿಗೇಕೊ ನೆಮ್ಮದಿ ದೊರಕುತ್ತಿಲ್ಲ, ಜ್ಞಾನದ ಸಾಕ್ಷತ್ಕಾರವಾಗುತ್ತಿಲ್ಲ , ಅವನ ಮನಸಿಗೆ ಹತ್ತಿದೆ ಯಾವುದೊ ಕೊರಗು , ಅವನನ್ನು ಕಾಡುತ್ತಿತ್ತು . ತಾನು ತನ್ನ ಅಣ್ಣನಿಗೆ ಸೇರಿದ ನೆಲದಲ್ಲಿ ನಿಂತಿರುವೆ ಎಂಬ ಭಾವ ಅವನನ್ನು ಕಾಡಿಸುತ್ತಿತ್ತು. ವಿಷಯ ತಿಳಿದ ಭರತ ಮಹಾರಾಜ ಓಡೋಡಿ ಬಂದ
“ಇದು ನನ್ನ ರಾಜ್ಯವಾದರು, ನೀನು ಗೆದ್ದು ನನಗೆ ಹಿಂದೆ ಕೊಟ್ಟಿರುವ ರಾಜ್ಯ, ಇದು ನಿನ್ನದು ಹೌದು, ನೀನು ಚಿಂತೆಯನ್ನು ಬಿಡು , ನಿನ್ನ ಗುರಿಯನ್ನು ಸಾದಿಸು “ ಎನ್ನುವ ಮಾತನಾಡಿಹೋದ.
ಕಡೆಗೊಮ್ಮೆ ಬಾಹುಬಲಿ ಆತ್ಮಸಾಕ್ಷತ್ಕಾರ ಸಾದಿಸಿದ್ದ. ಅವನು ಪ್ರಕೃತಿಯಲ್ಲಿ ವಿಲೀನನಾಗಿದ್ದ ಎಲ್ಲರಿಗು ಗೊಮ್ಮಟನಾಗಿದ್ದ. ಕಾಲನಂತರದಲ್ಲಿ ಗಂಗರ ಮಂತ್ರಿ ಚಾವುಂಡರಾಯ ಅದೆ ಗೊಮ್ಮಟನ ಬೃಹುತ್ ಆಕಾರದ ಕಲ್ಲಿನ ಮೂರ್ತಿಯನ್ನು ನಿಲ್ಲಿಸಿದ.
------------------------------------------
ಇಂದ್ರಗಿರಿಯ ಬೆಟ್ಟದಿಂದ ಒಂದೊಂದೆ ಮೆಟ್ಟಿಲನ್ನು ಇಳಿಯುತ್ತಿರುವಾಗ ಲಕ್ಕೆಗೌಡನಿಗೆ ತನ್ನ ಅಹಂಕಾರದ ಒಂದೊಂದೆ ಮೆಟ್ಟಿಲು ಇಳಿಯುತ್ತಿರುವ ಅನುಭವವಾಗುತ್ತಿತ್ತು. ಬಾಹುಬಲಿಸ್ವಾಮಿಯ ಕತೆ ಕೇಳಿದ ಅವನಲ್ಲಿ ಹುದುಗಿದ್ದ ವಿವೇಕ ಜಾಗೃತವಾಗಿತ್ತು. ಅವನು ಚಿಂತಿಸುತ್ತಿದ್ದ, ಇರುವ ಒಂದು ತುಂಡು ನೆಲಕ್ಕಾಗಿ ಇಬ್ಬರು ಅಣ್ಣ ತಮ್ಮಂದಿರು ಹೊಡೆದಾಡಿ ಸಾಯಬೇಕೆನು?. ತನ್ನನ್ನು ಹೊರತುಪಡಿಸಿ ಮನೆಯಲ್ಲಿ ಎಲ್ಲರು ಒಬ್ಬರಿಗೊಬ್ಬರು ಅನ್ಯೋನ್ಯವಾಗಿದ್ದಾರೆ. ಚಿಕ್ಕವರಿಗೆ ಬುದ್ದಿ ಹೇಳಬೇಕಾದ ನಾನು ಹಾಗು ಅಣ್ಣ ಕಿತ್ತಾಟದಲ್ಲಿ ತೊಡಗಿದ್ದೇವೆ. ಹೆಂಗಸರು ಹಾಗು ಮಕ್ಕಳ ಮುಂದೆ ನಾವಿಬ್ಬರು ಅಪಹಾಸ್ಯಕ್ಕೆ ಅವಮಾನಕ್ಕೆ ಒಳಗಾಗಿರುವುದು ತಮ್ಮದೆ ತಪ್ಪಿನಿಂದ ಎಂದು ಅವನಿಗೆ ಅರಿವಾಗುತ್ತಿತ್ತು.
ಅವನ ಮನ ತನ್ನ ಚಿಕ್ಕಂದಿನ ದಿನವನ್ನು ನೆನೆಯುತ್ತಿತ್ತು. ಸದಾ ತಾನು ಹಾಗು ಅಣ್ಣ ಕೈ ಕೈ ಹಿಡಿದು ತಿರುಗುತ್ತಿದ್ದೆವು. ಊರ ಜನರೆಲ್ಲ ರಾಮ ಲಕ್ಷ್ಮಣರೆಂದೆ ಕರೆಯುತ್ತಿದ್ದರು. ತನ್ನ ತಂದೆ ತೀರಿಹೋದಾಗ ಅರಿವಾಗದ ವಯಸ್ಸು ನನ್ನದು . ಅಣ್ಣ ರಾಮೆಗೌಡ ಅಳುತ್ತಿದ್ದ ತನ್ನ ಕಣ್ಣನ್ನು ಒರೆಸಿ ಸಮಾದಾನ ಮಾಡಿದ್ದ. ನಾನು ನಿನ್ನನ್ನು ಅಪ್ಪನಂತೆ ನೋಡಿಕೊಳ್ಳುವೆ ಎಂದು ಪ್ರೀತಿಯಿಂದ ಹೇಳಿದ್ದ. ಅಣ್ಣ ಮದುವೆಯಾಗಿ ಬಂದ ನಂತರ ಅತ್ತಿಗೆ ಮಾದೇವಿಯು ತನ್ನನ್ನು ಅದೆ ತಾಯಿ ಪ್ರೀತಿಯಿಂದ ಕಂಡಳು. ‘ಕೋಣನಂತೆ ಬೆಳೆದು ನಿಂತಿದ್ದಾನೆ ಅವನಿಗೆ ಏಕೆ ಉಪಚಾರ” ಎಂದು ಎಲ್ಲರು ಹಾಸ್ಯಮಾಡುತ್ತಿದ್ದರು, ಕೇಳದೆ ತನ್ನನ್ನು ಕೂಡಿಸಿ ತಲೆನೆನೆಯುವಂತೆ ಎಣ್ಣೆ ಹಚ್ಚಿ ಬಿಸಿನೀರು ಹುಯ್ಯುತ್ತಿದ್ದಳು. ಮನೆಯಲ್ಲಿದ್ದ ಹಾಲು ಮೊಸರು ಎಲ್ಲವನ್ನು ನನಗೆ ಸುರಿಯುತ್ತಿದ್ದಳು ಎಂದು ಅವನ ಮನ ನೆನೆಯಿತು. ಅವನ ಕಣ್ಣು ಏಕೊ ಮಂಜು ಮಂಜಾಗುತ್ತಿತ್ತು.
ಕೆಳಗೆ ಇಳಿದು, ಸುತ್ತ ಮುತ್ತಲ ಅಂಗಡಿಗಳನ್ನೆಲ್ಲ ಸುತ್ತಿದ್ದ. ಬಟ್ಟೆ ಅಂಗಡಿಯೊಳಗೆ ಹೋಗಿ ತನ್ನ ಹೆಂಡತಿಗೊಂದು ಸೀರೆ ಮಗನಿಗೊಂದು ಶರ್ಟ್ ಕರಿದಿಸಿದ. ನಂತರ ಅವನ ಮನಸಿಗೆ ಬೇರೆ ಯೋಚನೆ ಬಂದಿತು. ಪುನ: ತನ್ನ ಅತ್ತಿಗೆ ಮಾದೇವಿಗೊಂದು ಸೀರೆ. ಅವ್ವನಿಗೊಂದು ಸೀರೆ, ಅಣ್ಣನಿಗೆ ಹಾಗು ಅಣ್ಣನ ಮಗನಿಗೆ ಎಂದು ಒಂದೊಂದು ಶರ್ಟ್ ಖರೀದಿಸಿದ. ಎಲ್ಲವನ್ನು ಕೈಯಲ್ಲಿ ಹಿಡಿದು. ಬಸ್ ನಿಲ್ದಾಣಕ್ಕೆ ಬಂದು, ತಿಪಟೂರಿನ ಕಡೆಗೆ ಹೋಗುವ ಬಸ್ಸನ್ನು ಹುಡುಕಿ ಹತ್ತಿ ಕಿಟಕಿಯ ಪಕ್ಕ ಕುಳಿತಾಗ ಅವನ ಮನಸಿನಲ್ಲಿ ಎಂತದೊ ಒಂದು ಶಾಂತಿ ನೆಲಸಿತ್ತು.
ಲಕ್ಕೆಗೌಡ ಕುಳಿತಿದ್ದ ಬಸ್ಸು ಶ್ರವಣಗೆಳಗೊಳ ಬಿಟ್ಟು ಹೊರಟಂತೆ, ಮೇಲೆ ಬೆಟ್ಟದಲ್ಲಿನ ಗೋಮಟೇಶ್ವರನ ಮುಖದಲ್ಲಿ ನಗು ಸ್ಥಾಯಿಯಾಗಿ ನಿಂತಿತು, ಆ ನಗುವಿನಲ್ಲಿ ಎಂತದೊ ಸಾರ್ಥಕ ಭಾವ ಎದ್ದು ಕಾಣುತ್ತಿತ್ತು.
ಮುಗಿಯಿತು
Comments
@ಗುರುಗಳೇ- ಈಗ ಅದು ನಿಜವಾಯ್ತು...!!
ಗುರುಗಳೇ-
ನಿಮ್ಮ ಈ ಬರಹದ ಮೊದಲ ಭಾಗಕ್ಕೆ ಪ್ರತಿಕ್ರಿಯಿಸುವಾಗಲೇ ಅನ್ನಿಸಿತ್ತು....
ಇದು ಆಧುನಿಕ ಭರತ- ಬಾಹುಬಲಿಗಳ ಕಥೆಯಿರಬಹುದೇ ಅಂತ....!!
ಈಗ ಅದು ನಿಜವಾಯ್ತು...
ಪೌರಾಣಿಕ ನೈಜ ಘಟನೆಯೊಂದನ್ನು ಎಳೆಯಾಗಿಟ್ಟುಕೊಂಡು -ಎಂದೋ ಓದಿ ಮರೆತಿದ್ದ ಆ ಭರತ ಬಾಹುಬಲಿಗಳ ಕಥೆಯನ್ನು ಸವಿಸ್ತಾರವಾಗ್ ಹೇಳಿರುವಿರಿ...
ಪೌರಾಣಿಕ ದೃಶ್ಯದಂತೆ ಇಲ್ಲೂ ಕಥೆ ಸುಖಾಂತ್ಯವಾಗಿದ್ದು ಖುಷಿ ತಂತು...
ಎಲ್ರೂ ಹಾಗೆ ಯೋಚಿಸಿದರೆ ದಿನಂಪ್ರತಿ ನಾವ್ ಪತ್ರಿಕೆಗಲ್ಲಿ ಓದುವ ದೃಶ್ಯ ಮಾಧ್ಯಮಗಳಲ್ಲಿ ನೋಡುವ -
ಅಣ್ಣ ತಮ್ಮಂದ್ರ ವಿರಸ- ಕೊಲೆ -ಮಾರಣಾಂತಿಕ ಧಾಳಿ- ಹೊಡೆತ ಇತ್ಯಾದಿ ಕೆಟ್ಟ ಸುದ್ಧಿಗಳಿಗೆ ವಿರಾಮ ಬೀಳಬಹ್ದು...
ನನ್ನಿ
ಆ ಬಾಹುಬಲಿ ಎಲ್ರಿಗೂ ಸದ್ಬುದ್ಧಿ ನೀಡಲಿ....
ಶುಭವಾಗಲಿ..
\|
In reply to @ಗುರುಗಳೇ- ಈಗ ಅದು ನಿಜವಾಯ್ತು...!! by venkatb83
ಬಾಹುಬಲಿ * ವೆಂಕಟೇಶ್ ರವರೆ
ನಿಜ ಇದೊಂದು ಸಕಾರಾತ್ಮಕ ಪ್ರಯೋಗ, ಇಂದಿನ ಟೀವಿಗಳಲ್ಲಿ ಸಂಸಾರದಲ್ಲಿ ಅಣ್ಣ ತಮ್ಮ , ಗಂಡ ಹೆಂಡತಿ , ಅತ್ತೆ ಸೊಸೆ ನಡುವೆ ಬರಿ ಕ್ರೌರ್ಯವನ್ನೆ, ಅಪರಾದದ ಭಾವನೆಯನ್ನೆ ತೋರುತ್ತಿದ್ದಾರೆ, ಸಮಾಜದಲ್ಲಿ ಎಲ್ಲ ಸಂಸಾರಗಲು ಕ್ರಿಮಿನಲ್ ಗಳು ಅನ್ನುವ ಹಾಗಿ ಬಿಂಬಿಸುತ್ತಿದ್ದಾರೆ , ಕೆಲವರಾದರು ಈ ರೀತಿ ಒಳ್ಳೆಯ ಭಾವ ಪ್ರಚೋದಿಸುವ ಕತೆಗಳನ್ನು ತೆಗೆಯಲಿ ಅನ್ನುವುದೆ ನನ್ನ ಆಶಯ
ಒಳ್ಳೆಯ ಸಂದೇಶ ನೀಡಿದ್ದೀರಿ,
ಒಳ್ಳೆಯ ಸಂದೇಶ ನೀಡಿದ್ದೀರಿ, ಪಾರ್ಥರೇ. ಒಳ್ಳೆಯ ಕಡೆಗೆ ಹೋಗಲು ನಿರ್ಧರಿಸಿದವರನ್ನೂ ಕಾಲೆಳೆಯುವವರಿದ್ದಾರೆ, ಅವರುಗಳೇ ಹೆಚ್ಚು ಅಪಾಯಕಾರಿ. ಧನ್ಯವಾದಗಳು.
In reply to ಒಳ್ಳೆಯ ಸಂದೇಶ ನೀಡಿದ್ದೀರಿ, by kavinagaraj
ಬಾಹುಬಲಿ * ಕವಿ ನಾಗರಾಜ್ ರವರಿಗೆ
ನಿಜ ಇದೊಂದು ಸಕಾರಾತ್ಮಕ ಪ್ರಯೋಗ, ಇಂದಿನ ಟೀವಿಗಳಲ್ಲಿ ಸಂಸಾರದಲ್ಲಿ ಅಣ್ಣ ತಮ್ಮ , ಗಂಡ ಹೆಂಡತಿ , ಅತ್ತೆ ಸೊಸೆ ನಡುವೆ ಬರಿ ಕ್ರೌರ್ಯವನ್ನೆ, ಅಪರಾದದ ಭಾವನೆಯನ್ನೆ ತೋರುತ್ತಿದ್ದಾರೆ, ಸಮಾಜದಲ್ಲಿ ಎಲ್ಲ ಸಂಸಾರಗಲು ಕ್ರಿಮಿನಲ್ ಗಳು ಅನ್ನುವ ಹಾಗಿ ಬಿಂಬಿಸುತ್ತಿದ್ದಾರೆ , ಕೆಲವರಾದರು ಈ ರೀತಿ ಒಳ್ಳೆಯ ಭಾವ ಪ್ರಚೋದಿಸುವ ಕತೆಗಳನ್ನು ತೆಗೆಯಲಿ ಅನ್ನುವುದೆ ನನ್ನ ಆಶಯ
>>ಬಾಹುಬಲಿಯ ಒಳಗಣ್ಣು ತೆರೆದಿತ್ತು
>>ಬಾಹುಬಲಿಯ ಒಳಗಣ್ಣು ತೆರೆದಿತ್ತು, ಇಷ್ಟಕ್ಕು ತಾನು ತನ್ನ ಅಣ್ಣನ ವಿರುದ್ದ ಸೆಣಿಸುತ್ತಿರುವುದು ಯಾವುದಕ್ಕಾಗಿ, ಭೂಮಿಗಾಗಿ, ರಾಜ್ಯಕ್ಕಾಗಿ ಅಧಿಕಾರಕ್ಕಾಗಿ, ಸಿಂಹಾಸನಕ್ಕಾಗಿ . ಆದರೆ ಇದೆಲ್ಲ ಎಷ್ಟು ಕಾಲ, ಅದೇನು ಶಾಶ್ವತವೆ, ತನ್ನ ಆಯಸ್ಸು ಮುಗಿದೊಡನೆ ಎಲ್ಲವನ್ನು ತೊರೆದು ಹೋಗಲೆ ಬೇಕು ಅಲ್ಲವೆ<< ಈ ರೀತಿ ಒಮ್ಮ ಯೋಚಿಸಿದರೆ ಸಾಕು ಆದರೆ ....??? ಸೊಗಸಾದ ಸಂದೇಶ ನೀಡುವ ಕಥೆ ಧನ್ಯವಾದಗಳೊಂದಿಗೆ
...ಸತೀಶ್
>>ಬಾಹುಬಲಿಯ ಒಳಗಣ್ಣು ತೆರೆದಿತ್ತು
>>ಬಾಹುಬಲಿಯ ಒಳಗಣ್ಣು ತೆರೆದಿತ್ತು, ಇಷ್ಟಕ್ಕು ತಾನು ತನ್ನ ಅಣ್ಣನ ವಿರುದ್ದ ಸೆಣಿಸುತ್ತಿರುವುದು ಯಾವುದಕ್ಕಾಗಿ, ಭೂಮಿಗಾಗಿ, ರಾಜ್ಯಕ್ಕಾಗಿ ಅಧಿಕಾರಕ್ಕಾಗಿ, ಸಿಂಹಾಸನಕ್ಕಾಗಿ . ಆದರೆ ಇದೆಲ್ಲ ಎಷ್ಟು ಕಾಲ, ಅದೇನು ಶಾಶ್ವತವೆ, ತನ್ನ ಆಯಸ್ಸು ಮುಗಿದೊಡನೆ ಎಲ್ಲವನ್ನು ತೊರೆದು ಹೋಗಲೆ ಬೇಕು ಅಲ್ಲವೆ<< ಈ ರೀತಿ ಒಮ್ಮೆ ಯೋಚಿಸಿದರೆ ಸಾಕು ಆದರೆ...?? ಒಳ್ಳೆಯ ಸಂದೇಶ ನೀಡುವ ಕಥೆ ಧನ್ಯವಾದಗಳೋಂದಿಗೆ .....ಸತೀಶ್
ಪ್ರತಿಕ್ರಿಯೆಗೆ ಬೆರಳಚ್ಚು ಮಾಡಿದ
ಪ್ರತಿಕ್ರಿಯೆಗೆ ಬೆರಳಚ್ಚು ಮಾಡಿದ ವಾಕ್ಯಗಳು ಪೂರ್ಣವಾಗಿ ಗೋಚರಿಸುತ್ತಿಲ್ಲ
>>>>ಬಾಹುಬಲಿಯ ಒಳಗಣ್ಣು ತೆರೆದಿತ್ತು, ಇಷ್ಟಕ್ಕು ತಾನು ತನ್ನ ಅಣ್ಣನ ವಿರುದ್ದ ಸೆಣಿಸುತ್ತಿರುವುದು ಯಾವುದಕ್ಕಾಗಿ, ಭೂಮಿಗಾಗಿ, ರಾಜ್ಯಕ್ಕಾಗಿ ಅಧಿಕಾರಕ್ಕಾಗಿ, ಸಿಂಹಾಸನಕ್ಕಾಗಿ . ಆದರೆ ಇದೆಲ್ಲ ಎಷ್ಟು ಕಾಲ, ಅದೇನು ಶಾಶ್ವತವೆ, ತನ್ನ ಆಯಸ್ಸು ಮುಗಿದೊಡನೆ ಎಲ್ಲವನ್ನು ತೊರೆದು ಹೋಗಲೆ ಬೇಕು ಅಲ್ಲವೆ<< ಈ ರೀತಿ ಒಮ್ಮೆ ಯೋಚಿಸಿದರೆ ಸಾಕು ಆದರೆ...?? ಒಳ್ಳೆಯ ಸಂದೇಶ ನೀಡುವ ಕಥೆ ಧನ್ಯವಾದಗಳೋಂದಿಗೆ .....ಸತೀಶ್
In reply to ಪ್ರತಿಕ್ರಿಯೆಗೆ ಬೆರಳಚ್ಚು ಮಾಡಿದ by sathishnasa
ಬಾಹುಬಲಿ * ಸತೀಶ ರವರಿಗೆ
ಸತೀಶ ವಂದನೆಗಳು
ಪಾರ್ಥ ಸಾರಥಿ ಯವರಿಗೆ ವಂದನೆಗಳು
ಪಾರ್ಥ ಸಾರಥಿ ಯವರಿಗೆ ವಂದನೆಗಳು
ಬಾಹುಬಲಿ ಕುರಿತು ತಾವು ಬರೆದ ಲೇಖನಗಳನ್ನು ಓದಿದೆ, ಆತನ ಕುರಿತು ಬಹಳ ಅರ್ಥಪೂರ್ಣವಾಗಿ ದಾಖಲಿಸಿದ್ದೀರಿ, ಅಪ್ಯಾಯಮಾನವಾದ ಲೇಖನ, ಮೇಲಾಗಿ ಪುನಃ ಪುನಃ ಮರು ಓದಿಗೆ ಒತ್ತಾಯಿಸುವ ಬರವಣಿಗೆಯ ಶೈಲಿ ಅದರ ಅರ್ಥವಂತಿಕೆ ನನಗೆ ಹಿಡಿಸಿದವು, ಧನ್ಯವಾದಗಳು.
In reply to ಪಾರ್ಥ ಸಾರಥಿ ಯವರಿಗೆ ವಂದನೆಗಳು by H A Patil
ಬಾಹುಬಲಿ * ಪಾಟೀಲರೆ
ಪಾಟೀಲರೆ ತಮ್ಮ ಆತ್ಮೀಯ ಅಭಿಪ್ರಾಯಕ್ಕೆ ವಂದನೆಗಳು. ಈ ರೀತಿ ಸಮಾಜಮುಖಿ ಕತೆಯನ್ನು ಎಲ್ಲರು ಒಪ್ಪಿಕೊಳ್ಳುವುದು ಸಹ ಸಂತಸವೆ. ಆದರೆ ಅದೇಕೊ ನಮ್ಮ ಸಿನಿಮಾ ಕತೆಗಾರರಿಗೆ , ಟೀವಿ ಸೀರಿಯಲ್ ಕತೆಗಾರರಿಗೆ ಇಂತಹುದೇಕೊ ತಿಳಿಯುತ್ತಿಲ್ಲ
In reply to ಬಾಹುಬಲಿ * ಪಾಟೀಲರೆ by partha1059
ಪಾರ್ಥ ಸಾರಥಿ ಯವರೆ ವಂದನೆಗಳು
ಪಾರ್ಥ ಸಾರಥಿ ಯವರೆ ವಂದನೆಗಳು
ತಮ್ಮ ಮರುಪ್ರತಿಕ್ರಿಯೆ ಓದಿದೆ, ಈಗಿನ ಸಿನೆಮಾ ಮತ್ತು ಟೀವಿ ಸೀರಿಯಲ್ ನ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಕನ್ನಡ ಸಾಹಿತ್ಯ ಲೋಕದ ಉದ್ದಗಲಗಳ ಪರಿಚಯವಿಲ್ಲ, ಕಥೆ ಕಾದಂಬರಿಗಳನ್ನು ಓದುವ ತಾಳ್ಮೆ ಇಲ್ಲ, ಅವರು ಶ್ರಮ ಪಡದೆ ಎಲ್ಲವೂ ಆಗಬೇಕೆನ್ನುವವರು, ಹೀಗಾಗಿ ಕನ್ನಡ ಚಲನಚಿತ್ರ ಮತ್ತು ಸೀರಿಯಲ್ ಗಳು ಅಧಃಪತನ ಕಂಡಿವೆ.
ಬಾಹು ಬಲಿ
ಪಾರ್ಥಸಾರಥಿ ಅವರಿಗೆ ನಮಸ್ಕಾರಗಳು,
ಒಂದು ಸುಂದರವಾದ ಐತಿಹಾಸಿಕ ಕಥೆಯ ಎಳೆಯನ್ನಿಡುದು ಲಕ್ಕೆಗೌಡನ ಮನಪರಿವರ್ತನೆ ಆದ ಘಟನೆ ಕಥೆ ಎನಿಸಿದರೂ ಓದುಗರ ಮನದಲ್ಲಿ
ಲ್ಲಿ ಒಟ್ಟುಕುಟುಂಬದ ಅನ್ಯೋನತೆ ಕುರಿತು ಸದಾಭಿಪ್ರಾಯ ಬರುವ ಹಾಗೆ ಬರೆದಿರುವಿರಿ.
ವಂದನೆಗಳು
ರಮೇಶ ಕಾಮತ್
In reply to ಬಾಹು ಬಲಿ by swara kamath
ಬಾಹುಬಲಿ * ಸ್ವರಕಾಮತ್ ರವರೆ
ವಂದನೆಗಳು ಸ್ವರಕಾಮರ್ ರವರೆ , ಒಟ್ಟು ಕುಟುಂಬದ ಬಗ್ಗೆ ಸದಾಭಿಪ್ರಾಯವಿರುವುದು ಒಳ್ಳೆಯದೆ ಅಲ್ಲವೆ.
In reply to ಬಾಹುಬಲಿ * ಸ್ವರಕಾಮತ್ ರವರೆ by partha1059
ಬಾಹು ಬಲಿ
ನಿಜ,ಪಾರ್ಥಅವರೆ, ನಿಮ್ಮ ಅನಿಸಿಕೆಗೆ ನನ್ನ ಪೂರ್ಣ ಸಹಮತವಿದೆ.
ವಂದನೆಗಳು.
ಬಲಿ ಎಲ್ಲಿ?
ಪಾರ್ಥಸಾರಥಿಯವರೆ,
ಕತೆ ಚೆನ್ನಾಗಿದೆ. ಎಂಡಲ್ಲಿ ಒಂದು ಫೈಟ್ ಬೇಕೇ ಬೇಕು..
ಬಾಹು"ಬಲಿ" ಎಂದು ಶೀರ್ಷಿಕೆಯಿದ್ದು ಕತೆಯಲ್ಲಿ ಒಂದೆರಡಾದರೂ ಮರ್ಡರ್ ಇಲ್ಲದಿದ್ದರೆ ಹೇಗೆ?
ಬೇಕಿದ್ದರೆ ಜೈಲಲ್ಲಿ ತಪಸ್ಸಿಗೆ ಕುಳಿತುಕೊಳ್ಳಲಿ :)
In reply to ಬಲಿ ಎಲ್ಲಿ? by ಗಣೇಶ
ಬಾಹುಬಲಿ * ಗಣೇಶರೆ
ಗಣೇಶರೆ ... ಬಾಹು"ಬಲಿ" ಎನ್ನುವುದು ನಿಜವೆ. ಅಲ್ಲಿ ಬಾಹು ಎಂದರೆ ಶಕ್ತಿಯ ಸಂಕೇತ. ಬಾಹುಬಲಿಯ ಕತೆಯಲ್ಲಿ ಅವನು ಮೊದಲಿಗೆ ತನ್ನಶಕ್ತಿಯನ್ನು ನಂಬಿ ಅಣ್ಣನ ಮೇಲೆ ಯುದ್ದಕ್ಕೆ ಹೊರಟವನು, ನಂತರ ತನ್ನ ಶಕ್ತಿಯ ಅಹಂಮಿಕೆಯನ್ನು ಮನಗಂಡು, ತನ್ನ ಶಕ್ತಿಯನ್ನು ಬಲಿಕೊಟ್ಟು, ಅಣ್ಣನಿಗೆ ಶರಣಾದವನು. ನೀವನ್ನುವುದು ನಿಜ ಅಲ್ಲಿ 'ಬಲಿ' ಆಗಿದೆ ಅದು ಬಾಹು(ಶಕ್ತಿ)ಯದು , ಅಲ್ಲದೆ ಇದು 'ಮರ್ಡರ್' ಗಳನ್ನು ತಪ್ಪಿಸಬೇಕೆಂದೆ ಸ್ವಯಂ ಅಣ್ಣ ತಮ್ಮ ಇಬ್ಬರೆ ಯುದ್ದಕ್ಕೆ ನಿಂತಿದ್ದು.