ಬುಟ್ಟಿಯೊಳಗಿನ ಮಾರಾಟ...
ಯಾಕೋ ಹೊಟ್ಟೆ ತೊಳೆಸಿದಂತಾಗಿ ಬಸ್ಸಿನ ಕಿಟಕಿಯನ್ನು ತೆರೆದೆ. ಒಮ್ಮೆಲೇ ಒಳ ನುಗ್ಗಿದ ಗಾಳಿಗೆ ಮೈ ಮನ ಇದ್ದಕ್ಕಿದ್ದಂತೆ ಪುಳಕಗೊಂಡಿತು. ಯಾವಾಗಲೂ ತುಂಬಿಕೊಳ್ಳುವ ಈ ಬಸ್ಸಿನಲ್ಲಿ ನನ್ನೂರಿನಿಂದ ದೂರದ ಪಟ್ಟಣಕ್ಕೆ ನೆಂಟರಿಷ್ಟರ ಮನೆಗೆ ತೆರಳುವಾಗ ಈ ಹಸಿರು ಹೊತ್ತು ಹೆಸರಿಗಲ್ಲದೇ ತಮ್ಮಷ್ಟಕ್ಕೇ ತಾವು ತಂಗಾಳಿಯನ್ನು ಬೀಸುವ ಮರಗಿಡಗಳ ಕಂಡರೆ ಇಂದೇಕೋ ಚೂರು ಹೊಟ್ಟೆ ಕಿಚ್ಚು. ಏನೋ ಸಿಡಿದಂತ ಶಬ್ದ.
"ಟೈರ್ ಹೊಡೆದುಹೋಗಿದೆ, ಬದಲಿಸಬೇಕಾಗಿದೆ, ಎಲ್ಲರೂ ಕೆಳಗಿಳಿಯಿರಿ" ಬಸ್ಸಿನ ಕ್ಲೀನರ್ ಕೂಗಿಕೊಂಡ.
ಮತ್ತೆ ಬಂದಾಗ ಗುರುತಿಸಿಕೊಳ್ಳುವುದಕ್ಕಲ್ಲದಿದ್ದರೂ
ಡಿಸೆಂಬರ್ ಚಳಿಯ ಜಿಟಿ ಜಿಟಿ ಮಳೆ. ಹೊದ್ದುಕೊಂಡಿದ್ದ ಶಾಲಿನೊಳಗೆ ಕೈ ಕಾಲುಗಳು ಮರಗಟ್ಟಿ, ತೊಟ್ಟಿದ್ದ ಬಳೆಗಳು ಘಲಿಸದೇ ನಿಶಬ್ದಗೊಂಡಿದ್ದವು. ಅಷ್ಟಗಲಕ್ಕೆ ಹರಡಿಕೊಂಡಿದ್ದ ಆ ಆಲದ ಮರದ ತುದಿಯಲ್ಲಿ ತೂಗಿಕೊಂಡಿದ್ದ ಗೂಡಿನಲ್ಲಿ ಇಣುಕಿದ ಅದೆಂತದೋ ಪಕ್ಷಿ ಮತ್ತದರ ಮರಿಗಳು ಚಿಲಿಪಿಲಿಗುಟ್ಟಿದವು. ಇಷ್ಟು ದೊಡ್ಡ ಮರದಲ್ಲಿರುವ ಸಾವಿರ ಸಾವಿರ ಎಲೆ, ಕೊಂಬೆ ರೆಂಬೆ, ತೂಗು ಜಡೆ ಯಾವುದೂ ಆ ಪಕ್ಷಿಗೆ ಗೂಡು ಕಟ್ಟಿ, ಮೊಟ್ಟೆಯಿಟ್ಟು ಮರಿ ಮಾಡಿ, ಅದರ ಒಸಗೆ ನೋಡಿಕೊಳ್ಳುವುದಕ್ಕೆ ಅಡ್ಡಿ ಮಾಡಿಲ್ಲ. ಈ ಲೋಕ ಆ ಪಕ್ಷಿಗಳ ಮಿಲನ ಮೈಥುನಕ್ಕೆ ಗೆರೆಯೆಳೆದು ಮತ್ತಾವುದೋ ಪಕ್ಷಿಯನ್ನು ಗೊತ್ತಿರಿಸಿ ಕೂಡಿಸಿಲ್ಲ. ಇಷ್ಟು ದೊಡ್ಡ, ನಿಶ್ಚಲವೆನಿಸಿದರೂ ನಿಶ್ಚಲವಲ್ಲದ ಲೋಕದಲ್ಲಿ ಈ ಮರವೆಂಬುದೂ ಜೀವವಿರುವ ಒಂದು ವ್ಯವಸ್ಥೆಯಾದರೆ, ಅದರ ಕೊಂಬೆ ತುದಿಯಲ್ಲಿ ತೂಗಿದ ಪಕ್ಷಿಗೂಡು ಮತ್ತೊಂದು ವೃತ್ತ, ವೃತ್ತಾಂತ. ಮರಿಗಳೊಂದಿಗೆ ಯಾವುದೇ ಕಟ್ಟುಪಾಡಿಗಳಿಗೆ ಹೊಂದಿಕೊಳ್ಳದ ಪಕ್ಷಿ ಸಮತೆಯಲ್ಲಿ ತೂಗುತ್ತಿದೆ. ಅದರ ಪಾಡಿಗೆ ಅದು ಯಾವುದೇ ವಕ್ರರೇಖೆಗಳಿಗೆ ಒಗ್ಗಿಕೊಳ್ಳದೇ ಸ್ವಚ್ಛಂದ ಜೀವನ ನಡೆಸುತ್ತಿದೆ.
"ಎಲ್ಲಾ ಹತ್ತಿ ಹತ್ತಿ ಬೇಗ" ಮತ್ತೆ ಕ್ಲೀನರ್ ಕೂಗಿಕೊಂಡ
ನಾನು ತಂದಿದ್ದ ಬ್ಯಾಗ್ ನ ಒಂದು ಮೂಲೆ ಚೂರು ಅದುರುತ್ತಿತ್ತು. ಒದರುತ್ತಿದ್ದ, ಅದುರುತ್ತಿದ್ದ ಮೊಬೈಲ್ ನೋಡಿದಾಗ ಅಮ್ಮ, ಅಪ್ಪ, ಅಣ್ಣ, ಚಿಕ್ಕಪ್ಪ ಸೇರಿ ಒಟ್ಟು ಮೂವತ್ತು ಬಾರಿ ಫೋನಾಯಿಸಿದ್ದರು.
ಶಾಮುವಿನೊಂದಿಗೆ ಸುಮಾರು ಆರು ತಿಂಗಳಿನಿಂದ ಸತತವಾಗಿ ಮಾತನಾಡಿದ್ದೇನೆ. ಕಳ್ಳನೊಬ್ಬ ಅಗುಳಿ ಮುರಿದು ಮನೆಯೊಳಗೆ ನುಗ್ಗಿದ್ದು, ಮಳೆಯಲ್ಲಿ ನೆನೆದುಕೊಂಡೇ ಓಣಿಕೊನೆಯ ಹಳ್ಳದಿಂದ ಮನೆಗೆ ನೀರು ತುಂಬಿ ಜ್ವರ ಬರಿಸಿಕೊಂಡಿದ್ದರಿಂದಲೂ ಹಿಡಿದು ಇರುವೆ ಕಚ್ಚಿದ್ದರವರೆವಿಗೂ ಹರಟಿದ್ದೇನೆ, ಆತ ಸಿಡಿಸುತ್ತಿದ್ದ ಹಾಸ್ಯಕ್ಕೆ ಮನಗೊಟ್ಟು ನಕ್ಕಿದ್ದೇನೆ. ಅಲಾರಂ ಇಟ್ಟುಕೊಳ್ಳದ ಆತನಿಗೆ ಮುಂಜಾನೆಯ ನನ್ನ ಕರೆಯಿಂದಲೇ ಎಚ್ಚರ. ಅರೆನಿದ್ರೆಯಿಂದ "ಪ್ಲೀಸ್ ಹತ್ತು ನಿಮಿಷ ಮಲಗುತ್ತೇನೆ ಕಣೆ" ಎಂದರೆ ಪೀಡಿಸಿ ಪೀಡಿಸಿ ಎಬ್ಬಿಸುತ್ತಿದ್ದೆ. ರಾತ್ರಿ ಬೇಗ ಮಲಗಲೊಲ್ಲದಿದ್ದವನು, ಸರಿರಾತ್ರಿ ಎರಡರವರೆವಿಗೂ ನನ್ನೊಡನೆ ಹರಟಿ ಕೊನೆಗೆ ಮೊಬೈಲ್ ಸಂದೇಶದಲ್ಲಿಯೇ ತಬ್ಬಿ ಮಲಗಿಸಿಕೊಂಡು ಬಿಡುತ್ತಿದ್ದ. ರಾತ್ರಿಯೆಲ್ಲಾ ಹೀಗೇ ಮಲಗುತ್ತೇನೆ, ಗುಡ್ ನೈಟ್ ಎಂದು ಕೊನೆಗೆ ಸಂದೇಶವೊಂದನ್ನು ಕಳುಹಿಸಿ ತನ್ನ ತುಂಟತನ ಪ್ರದರ್ಶಿಸಿ ಮಲಗಿಕೊಳ್ಳುತ್ತಿದ್ದ.
ಈತನ ಸಾಂಗತ್ಯದ ಒಲವಿನಿಂದಲೇ ನಾನು ರಾಘುವನ್ನು ಸಂಪೂರ್ಣವಾಗಿ ಮರೆತೆ. ಆತನ ಜೀವನವೇ ಬೇರೆ, ನನ್ನದೇ ಬೇರೆ, ಇಷ್ಟು ದಿನದೊಂದಿಗಿನ ಆತನ ಗೆಳೆತನವೆಲ್ಲಾ ಕೇವಲ ಭ್ರಮೆ, ನಡೆದಾಡುವ ಜಾಗಗಳಲ್ಲೆಲ್ಲೋ ಆತ ಸಿಕ್ಕಿ ಮರೆಯಾಗಿಹೋಗಿದ್ದಾನಷ್ಟೇ ಎಂದುಕೊಂಡು ಆತನ ನೆನಪನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿದ್ದೆ.
-
'ಹಾಲೂ...' ಎಂದ ತಕ್ಷಣ ಓಡೋಡಿ ಹೊಸ್ತಿಲ ಬಳಿ ಬಂದು ಬಿಡುತ್ತಿದ್ದೆ. ರಾಘು ನಮ್ಮ ಮನೆಗೆ ಮುಂಜಾನೆಯೇ ಹಾಲು ಮಾರಲು ಬರುತ್ತಿದ್ದ ಹುರಿ ಮೀಸೆಯ ಸುಂದರಾಂಗ. ಜೊತೆಗೆ ಪೇಪರ್ ಕೂಡ ಹಂಚುತ್ತಿದ್ದ ರಾಘು ಕಷ್ಟಪಟ್ಟು ಓದಿಕೊಂಡಿದ್ದ. ಶಾಲಾ ದಿನಗಳಿಂದ ಜೊತೆಯಲ್ಲಿಯೇ ಬೆಳೆದ ನಾವಿಬ್ಬರೂ ಏನೋ ಆಕರ್ಷಣೆ ಬೆಳೆಸಿಕೊಂಡವರು. ಆತ ತಿರುಗಿದಂತೆ ನಾನು, ನಾನು ತಿರುಗಿದಂತೆ ಆತ ಗಕ್ಕನೇ ತಿರುಗಿ ತುಟಿ ಅರಳಿಸಿಬಿಡುತ್ತಿದ್ದೆವು. ಆಕರ್ಷಣೆ ಗೆಳೆತನಕ್ಕೆ ತಿರುಗಿದ್ದು ಹೇಳದೇ ಕೇಳದೇ ಪ್ರೇಮವಾಗಿ ಅಂಕುರಿಸಿತ್ತು. ನಾನಿರುವುದು ಸರಿಯಾಗಿ ಬಸ್ಸು ಬರಲಾಗದ, ಕೇರಿ ಕೇರಿಗೊಂದೊಂದು ಜಾತಿಗುಂಪುಗಳು ಕೂಡಿಕೊಂಡಿರುವ, ಒಂದು ಜಾತಿಯ ಹೋಟೆಲ್ಲಿಗೆ ಮತ್ತೊಂದು ಜಾತಿ ಜನರನ್ನು ಬಿಡದ ಹಳ್ಳಿಯೊಂದರಲ್ಲಿ ಎಂದು ತಿಳಿದಿದ್ದರೂ ಅನ್ಯ ಜಾತಿಯವನಾದ ಆತನನ್ನು ಪ್ರೇಮದಲ್ಲಿ ನನಗೇ ತಿಳಿಯದಂತೆ, ಆಲೋಚನೆಗಳನ್ನು ತಡೆದುಕೊಳ್ಳಲಾಗದಂತೆ ಆತನ ಮನಸ್ಸಿಗೆ ಒಗ್ಗಿಕೊಂಡಿದ್ದೆ.
ಮುಂದೇನಾಯಿತು?? ಆಗುವುದಾದರೂ ಏನು?? ಒಂದು ಕಡೆ ಹಗ್ಗ ಕತ್ತಿಗೆ ಸುತ್ತಿ ಕುಳಿತುಕೊಂಡ ಅಮ್ಮ, ವಿಷ ಹುಡುಕಿದ ಅಪ್ಪ, ನಮ್ಮ ಮರ್ಯಾದೆ ಮೂರು ಕಾಸಿಗೆ ಹಂಚುತ್ತಿದ್ದಾಳೆ ಎಂದು ಎದೆ ಹೊಡೆದುಕೊಂಡ ಅಜ್ಜಿ, ರಾಘುವನ್ನು ಕೊಂದೇಬಿಡುತ್ತೇನೆ ಎಂದು ಮಚ್ಚು ಹುಡುಕಿದ ಅಣ್ಣ, ನಿನ್ನನ್ನು ಇಷ್ಟು ಕಷ್ಟಪಟ್ಟು ಬೆಳೆಸಿ ಆ ಜಾತಿಯವನಿಗೆ ಕೊಡುವುದರ ಬದಲು ನಿನ್ನನ್ನು ಕೊಂದುಬಿಡುತ್ತೇನೆ ಎಂದ ಚಿಕ್ಕಪ್ಪ.
ಇದನ್ನೇ ಕಾದವರು ಊರಿನಲ್ಲೆಲ್ಲಾ ಗುಲ್ಲೆಬ್ಬಿಸಿ ನಲಿಯುವಾಗ, ಇಡೀ ಊರೇ ನನ್ನ ಮುಖಕ್ಕೆ ಕ್ಯಾಕರಿಸಿ ಉಗಿಯುವಾಗ ನಾನು ಸತ್ತ ಮನಸ್ಸನ್ನು ಮಣ್ಣು ಮಾಡಿ ಮನೆಯಲ್ಲಿ ಕುಳಿತುಬಿಟ್ಟೆ. "ನೀ ಮಾಡಿದ್ದು, ನೀನೇ ಅನುಭವಿಸಿ ಸಾಯಿ" ಎಂದು ಅಮ್ಮ ಅಂದಳು. "ನೀನು ನಾ ಮಾಡಿ ಪಾಪ" ಎಂದ ಅಪ್ಪ.
ಮಳೆ ಜೋರಾಯಿತು. ಮುಖಕ್ಕೆ ಎರಚುತ್ತಿದ್ದ ಹನಿ ಮನದೊಳಗೆ ಏನೋ ಸಂತಸ ಉಕ್ಕಿಸುತ್ತಿದ್ದರೂ ಪಕ್ಕ ಕುಳಿತಿದ್ದವರು ಬೇಸರಪಟ್ಟುಕೊಂಡಾರೇನೋ ಎಂದುಕೊಂಡು ಕಿಟಕಿ ಮುಚ್ಚಿದೆ.
"ಈಗಿನ ಕಾಲದಲ್ಲಿ ಲವ್ವುಗಿವ್ವು ಅನ್ನೋದೆಲ್ಲಾ ಕಾಮನ್ನು, ತೊಂದರೆ ಏನೂ ಇಲ್ಲ, ನಮ್ಮ ಶಾಮುವಿಗೆ ನಿಮ್ಮ ಮಗಳನ್ನು ತಂದುಕೊಳ್ಳುತ್ತೇನೆ" ಎಂದು ಲಕ್ಷ್ಮತ್ತೆ ಹೇಳಿದಾಗ ನಾನು ನೀರವತೆಯನ್ನು ಬೀಸಿದ ಮನಸ್ಸಿನೊಂದಿಗೆ ಭಾರಗೊಂಡು ಅತ್ತಿದ್ದೆ. ಮಗಳನ್ನು ತಂದುಕೊಳ್ಳಬಹುದು ಆದರೆ ಮನಸ್ಸನ್ನಲ್ಲ ಎಂದು ಹೇಳುವ ಮನಸ್ಸಾದರೂ ಈ ಮನೆಯಿಂದ, ಈ ಊರಿನಿಂದ, ಮನೆಯಿಂದ ಹೊರಗೆ ಕಾಲಿಟ್ಟರೆ ಬರೀ ಹಂಗಿಸುವ ಈ ಜನರಿಂದ ತಪ್ಪಿಸಿಕೊಳ್ಳುವುದೇ ದೊಡ್ಡ ವಿಚಾರವಾಗಿತ್ತೆನಗೆ.
ಶಾಮು, ನನಗಿಂತ ಒಂದು ತಿಂಗಳಷ್ಟೇ ದೊಡ್ಡವನು. ಇಬ್ಬರೂ ಮದುವೆ ವಯಸ್ಸಿಗೆ ಬರದ ಚಿಕ್ಕವರು. ಕೆಟ್ಟ ಹೆಸರು ಹೊತ್ತುಕೊಂಡ ಮಗಳಿಗೆ ಯಾರಾದರೂ ಸಿಕ್ಕರೆ ಸಾಕು ಎನ್ನುವ ನಮ್ಮ ಮನೆಯವರೊಂದೆಡೆಯಾದರೆ, ಗಂಡನಿಲ್ಲದ ಲಕ್ಷ್ಮತ್ತೆಯ ಒಬ್ಬನೇ ಮಗನಿಗೆ ತ್ವರಿತವಾಗಿ ಮದುವೆಯಾಗಿ ಆಕೆಗೆ ಒಬ್ಬಳು ಸೊಸೆ ಸಿಕ್ಕರೆ ಸಾಕು ಎಂಬಂತಿದ್ದ ಆ ಮನೆಯವರು. ನನ್ನ ಮೇಲೆ ಹೊರಿಸಲಾಗಿದ್ದ ಅಪರಾಧವಲ್ಲದ ಅಪರಾಧವನ್ನು ತಿಳಿದೂ ಶಾಮು ನಗುಮೊಗದಿಂದಲೇ ನನ್ನನ್ನು ಒಪ್ಪಿಕೊಂಡ. ಅಂದೇ ಫೋನಾಯಿಸಿ ಎಲ್ಲಾ ಮರೆತುಬಿಡು ನಾನಿದ್ದೇನೆ ಎಂದೂ ಹೇಳಿದ್ದು ನನ್ನಲ್ಲಿ ಆತನೆಡೆಗೆ ಹುಟ್ಟಿದ ಮೊದಲ ಗೌರವ. ದಿನವೆಲ್ಲಾ ಹರಟುತ್ತಿದ್ದ, ಅಲ್ಲಲ್ಲಿ ಬಂದ ಹಬ್ಬಗಳಿಗೆ ಒಡವೆ, ವಸ್ತ್ರ ಕೊಡಿಸಿದ್ದ.
ಹಾಸಿಗೆ ಹಿಡಿದಿದ್ದ ಅಮ್ಮನ ಈಗೀಗಿನ ಉತ್ಸಾಹ, ಲವಲವಿಕೆ ಕಂಡು ನನಗೆ ಖುಷಿಯಾಗಿತ್ತು. ಎಲ್ಲೋ ಒಂದು ಕಡೆ "ಈ ಜೀವನವೆಂದರೆ, ಸಿಗದಿರುವುದನ್ನು ಅಲ್ಲಲ್ಲಿ ಮರೆತು, ಸಿಕ್ಕಿರುವುದರೊಂದಿಗೆ ನಾಲ್ಕು ದಿನ ಬದುಕಿ ಸಾಯುವುದಲ್ಲವೇ?" ಎಂದಂದುಕೊಂಡು ಬದಲಾಗಿದ್ದೆ. ಮದುವೆಗೆ ಇದಿರು ನೋಡುತ್ತಿದ್ದೆ.
"ಶಾಮು, ವಿಷ ಕುಡಿದುಕೊಂಡನಂತೆ" ಎಂಬ ವಾರ್ತೆ ಕೇಳಿದಾಗ ನಾನು ಮಲಗಿದ್ದಲ್ಲೇ ಒದ್ದಾಡಿದ್ದೆ. ಅದು ಕನಸೆಂಬ ನಂಬಿಕೆ ನನ್ನದು. ಮನಸ್ಸು ಹಗುರಾಗಿಸಲು ತೆರೆದುಕೊಳ್ಳದ ಕಣ್ಣನ್ನು ಕಷ್ಟಪಟ್ಟು ತೆರೆದೆ.
"ಯಾವ ಆಸ್ಪತ್ರೆಗೆ ಸೇರಿಸಿದ್ದೀರಿ?" ಎಂದು ಅಪ್ಪ ಯಾರನ್ನೋ ವಿಚಾರಿಸುತ್ತಿದ್ದರು. ಎದೆ ಜೊರಾಗಿ ಹೊಡೆದುಕೊಂಡಿತ್ತು.
ಕಳೆದ ತಿಂಗಳಿನಿಂದ ನಿನ್ನೆಯವರೆವಿಗೂ ಶಾಮುವಿಗೆ ಫೋನಾಯಿಸುತ್ತಿದ್ದೆ, ಒಮ್ಮೆಯೂ ಮಾತನಾಡದ ಆತ ನಿನ್ನೆ ಲಕ್ಷ್ಮತ್ತೆಯ ಜೊತೆ ಬಂದಿದ್ದ.
"ಮದುವೆ ಮಾಡಿಕೊಳ್ಳಲು ನಮ್ಮ ಬಳಿ ತಾಳಿಗೂ ದುಡ್ಡಿಲ್ಲ, ನೀವೇ ಹಣ ಹೊಂದಿಸಿಕೊಡಬೇಕು" ಎಂದಳು ಲಕ್ಷ್ಮತ್ತೆ.
"ನಾವೇ ಮನೆಪತ್ರ ಅಡವಿಗಿಟ್ಟು ದುಡ್ಡು ತಂದಿದ್ದೇವೆ, ದುಡ್ಡು ಹೊಂದಿಸಲು ಸಾಧ್ಯವಿಲ್ಲ" ಅಪ್ಪ ಖಡಕ್ಕಾಗಿ ಹೇಳಿದ.
ಹತ್ತಾರು ಲಕ್ಷ ಸಾಲ ಮಾಡಿಕೊಂಡಿದ್ದ ಶಾಮು ಸಾಲಗಾರರ ಕಾಟ ತಡೆಯಲಾಗದೇ ನನ್ನನ್ನೂ ಮರೆತು ವಿಷ ಕುಡಿದಿದ್ದ. ದುಡ್ಡಿನ ವಿಚಾರದಲ್ಲಿ ಅಲ್ಲಿ ಜಗಳವೇ ನಡೆಯಿತು. ಮದುವೆಗೆ ಒಂದು ರೂಪಾಯಿಯನ್ನು ನಾವು ಖರ್ಚು ಮಾಡಬಾರದು, ಬದಲಾಗಿ ಇರುವ ಸಾಲವನ್ನೂ ಇವರ ಮೇಲೇ ಹೊರಿಸಬೇಕೆಂಬ ಹಠ ಹೊತ್ತು ಬಂದವರಂತೆ ಕಂಡರು. ಹೆಣ್ಣು ಹೆತ್ತವರು ಸೋಲಲೇಬೇಕೆಂಬ ಹಠವೇನು ಹೊಸದಲ್ಲವಲ್ಲ.
"ಇದೇ ರೀತಿ ಸಾಲಗಾರರು ಮತ್ತೆ ಮನೆ ಮುಂದೆ ಬಂದು ಜಗಳ ಆಡಿದರೆ ಇನ್ನೊಂದು ಸಾರಿ ವಿಷ ಕುಡಿಯುತ್ತೇನೆ, ಸ್ವಲ್ಪ ದುಡ್ಡು ಹೊಂದಿಸಿಕೊಡಲು ನಿಮಗೆ ಕಷ್ಟವಾದರೆ ಮದುವೆಯಾಗುವುದು ಕಷ್ಟವಾಗುತ್ತದೆ, ಇನ್ನೊಬ್ಬ ಹುಡುಗನನ್ನು ಪ್ರೀತಿಸಿ ಜೊತೆ ಹೋಗಲು ತಯಾರಿದ್ದವಳನ್ನು ಯಾರು ಮದುವೆಯಾಗಲು ಒಪ್ಪುತ್ತಾರೆ" ಎಂದ ಮಾತು ಶಾಮುವಿನ ಬಾಯಿಂದ ಹೊರಟ್ಟಿದ್ದು ಕಂಡು ಒಮ್ಮೆಲೇ ಸಿಡಿಲು ಬಡಿದಂತಾಯಿತು. ಮನಸ್ಸೆಂಬ ಗೋರಿಯ ಮೇಲೆ ಇತ್ತೀಚೆಗೆ ಚಿಗುರಿದ್ದ ಹುಲ್ಲುಗಳು ಹಾಗೇ ಒಣಗಿಹೋದವು.
"ಮದುವೆಗಿಂತ ಮುಂಚೆ ಇಷ್ಟೆಲ್ಲಾ ಆಡುವ ತಾವು, ಮದುವೆಯ ನಂತರ ನನ್ನ ಮಗಳ ಸುಖ ಬಯಸುತ್ತೀರಿ ಎಂಬ ನಂಬಿಕೆ ನಮಗಿಲ್ಲ, ನಮ್ಮ ಮಗಳನ್ನೇನು ನಾವು ಬುಟ್ಟಿಯಲ್ಲಿಟ್ಟುಕೊಂಡು ಮಾರುತ್ತಿಲ್ಲ, ಇವನಲ್ಲದಿದ್ದರೇ ಇನ್ನೊಬ್ಬ" ಎಂದಪ್ಪನ ಮಾತಿನ ಧಾಟಿಗೆ ಲಕ್ಷ್ಮತ್ತೆ ಎದ್ದು ಹೋದಳು. ಬಾಗಿಲ ಬಳಿ ನಿಂತಿದ್ದ ನನ್ನ ಬಳಿ ಸುಳಿದಾಡಿದ ಗಾಳಿಯನ್ನೂ ಸೋಕಿಸಿಕೊಳ್ಳದೆ ಶಾಮು ಹೊರಟುಬಿಟ್ಟ...
ಅಂದು ಸಂಜೆ...
"ಅಪ್ಪ, ಛತ್ರವನ್ನು ಬುಕ್ ಮಾಡಲು ಅಡ್ವಾನ್ಸ್ ಕೇಳುತ್ತಿದ್ದಾರೆ ರಾಯರು" ಎಂದ ಅಣ್ಣ...
"ಮದುವೆ ನಡೆಯುವುದಿಲ್ಲವೆಂದು ಹೇಳಿಬಿಡು" ಎಂದು ಅಪ್ಪ ಹೇಳಿದಾಗ ಹಗ್ಗವನ್ನು ನಾನೇ ಹುಡುಕಿದ್ದೆ. ಸಿಕ್ಕರೂ ಯಾಕೋ ಕೈಗಳು ಹಿಂದೆ ಸರಿದವು.
-
’ಮೇಡಂ, ಆಶ್ರಮ ಬಂದಿದೆ’ ಎಂದು ಕಂಡಕ್ಟರ್ ಕೂಗಿಕೊಂಡ. ಏನೋ ಯೋಚಿಸುತ್ತಿದ್ದ ನಾನು ಒಮ್ಮೆಲೇ ನಿರಾಳಗೊಂಡಂತೆನಿಸಿ ಕೆಳ ಇಳುಗಿದೆ.
"ಸು-ಮನಸ್ವಿ ಆಶ್ರಮ", 'ಸಂಬಂಧಗಳು ನಮ್ಮ ಮನಸ್ಸನ್ನು ಕಟ್ಟಿಹಾಕಲೆಂದೇ ಹುಟ್ಟಿಕೊಂಡ ಲೌಕಿಕ ಜಗತ್ತಿನ ಬಂಧನಗಳು, ಬನ್ನಿ ಮನಸ್ಸನ್ನು ಅರಳಿಸಿಕೊಂಡು ಜಗದೊಳಿತಿಗೆ ದುಡಿಯೋಣ" ಎಂಬ ಬೋರ್ಡ್ ಕಂಡಿತು. ಕೆಲ ದಿನಗಳ ಹಿಂದೆ ಪತ್ರಿಕೆಯಲ್ಲಿ ಓದಿದ ಆಶ್ರಮವಿದೇ ಎಂದು ಖಚಿತವಾಯಿತು.
"ಅಮ್ಮಾ.." ಎಂದು ಕೂಗಿಕೊಂಡ ವೃದ್ಧನೋರ್ವ ಕೈ ಚಾಚಿದ. ಸಿಮ್ ಕಿತ್ತೆಸೆದು ಕೈಯಲ್ಲಿರುವ ಮೊಬೈಲ್ ಆತನಿಗೆ ನೀಡಿ "ಎಲ್ಲಾದರೂ ಮಾರಿಬಿಟ್ಟು ಏನಾದರೂ ತಿನ್ನು" ಎಂದು ಹೇಳಿ ಆಶ್ರಮದೊಳಗೆ ನಡೆದೆ.
Comments
ಮೋಹನ ಕೊಳ್ಳೆಗಾಲರೇ, ಲಕ್ಷ್ಮೀಕಾಂತ
ಧನ್ಯವಾದಗಳು ಸರ್... :)
ಹೊರ ಪ್ರಪ೦ಚದ ಗೊಡವೆಯೇ ಬೇಡ
ಧನ್ಯವಾದಗಳು ಸರ್... :)