ಪದ್ಯಪಾನದ ಅಮಲು
ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಡಾ.ರಾ.ಗಣೇಶರ ಶತಾವಧಾನ ನೋಡಿದ ನಂತರ ಮನದಲ್ಲಿ ಮೂಡಿ ಬಂದೆರಡು ಪದ್ಯಗಳು:
ಚೆಲ್ಲಿರಲು ಹೂವುಗಳು ಆಗಸದಿ ಭರದಿಂದ
ಮಲ್ಲೆ ಸಂಪಿಗೆ ಜಾಜಿ ಪಾರಿಜಾತಗಳು
ಸೊಲ್ಲ ಹೆಣ್ಣೇ ಬುವಿಗೆ ರಾಗ ರೂಪವನು ತಾ
-ಳಿಲ್ಲಿ ಬಂದಿಹಳೆಂಬ ಬೆರಗು ತರಿಸಿ!
(ಅವಧಾನ ಮುಗಿದ ನಂತರ ಹೂಮಳೆ ಸುರಿದಾಗ , ಮನಸಿನಲ್ಲಿ ಮೂಡಿದ ಭಾವವಿದು)
ಮದ್ಯಪಾನಕು ಪದ್ಯಪಾನಕು ಭೇದವೊಂದೇ ಅಕ್ಕರ
ವಿದ್ಯಮಾನವ ಕೇಳಿರೈ ಬಲು ವೈಪರೀತ್ಯವು ನಿಚ್ಚಳ
ಮದ್ಯಪಾನವ ಮಾಡಿದರೆ ನಶೆಯಿಳಿವುದೊಂದೇ ಹೊತ್ತಿಗೆ
ಪದ್ಯಪಾನಕೆ ತೊಡಗಿಬಿಟ್ಟರೆ ಕೊನೆಯೆಕಾಣದು ಮತ್ತಿಗೆ !
-ಹಂಸಾನಂದಿ
ಕೊ: ರಾಗ: ರಾ.ಗಣೇಶ್ ; ಸೊಲ್ಲ ಹೆಣ್ = ಮಾತಿನ ದೇವತೆ, ನುಡಿದೇವಿ, ಸರಸ್ವತಿ
ಕೊ.ಕೊ: ಶತಾವಧಾನ ಆದಮೇಲೆ, ಅದನ್ನು ಆಯೋಜಿಸಿದ ಪದ್ಯಪಾನ http://www.padyapaana.com/ ಹಲವರಿಗೆ ಹೊಸದಾಗಿ ಪರಿಚಿತವಾಗಿದ್ದರಿಂದ, ಮರುದಿನ ಆ ವೆಬ್ ಸೈಟ್ ನ ಸರ್ವರ್ ಬಂದ ಜನರ ಪ್ರವಾಹವನ್ನು ತಡೆಯಲಾಗದೇ ತೊಂದರೆಗೊಳಗಾಗಿತ್ತು. ಆಮೇಲೆ ಸರಿಪಡಿಸಿದ್ದಾರೆನ್ನಿ.. ಆ ಸಂದರ್ಭದಲ್ಲಿ ಹೊಳೆದ ಪದ್ಯವಿದು.
Comments
ಹ೦ಸನ೦ದಿಯವರೆ, ಚೆನ್ನಾಗಿದೆ. ಪದಗಳ
ಹ೦ಸನ೦ದಿಯವರೆ, ಚೆನ್ನಾಗಿದೆ. ಪದಗಳ ಜೋಡಣೆ ಅದ್ಭುತ.
In reply to ಹ೦ಸನ೦ದಿಯವರೆ, ಚೆನ್ನಾಗಿದೆ. ಪದಗಳ by spr03bt
ಆತ್ಮೀಯ ಹ೦ಸಾನ೦ದಿಯವರೇ
ಆತ್ಮೀಯ ಹ೦ಸಾನ೦ದಿಯವರೇ
ಪದ್ಯಪಾನದ ಅಮಲು ಇನ್ನೂ ಇಳಿದಿಲ್ಲ ನನಗೆ. ಶ್ರೀ ಗಣೇಶ್ ರು ವಿದ್ವತ್ ಲೋಕದ ವಿಸ್ಮಯವೇ ಹೌದು. ಅವರ ಜೊತೆ ಮಾತನಾಡುವ ಅದೇ ವೇದಿಕೆಯಲ್ಲಿ ಕುಳಿತುಕೊಳ್ಳುವ ಭಾಗ್ಯ ಸಿಕ್ಕದ್ದು ನನ್ನ ಜೀವಮಾನದ ಪುಟಗಳಲ್ಲಿ ಮರೆಯಲಾಗದ ಹೊನ್ನಹಾಳೆ.
ಹರೀಶ್ ಆತ್ರೇಯ
In reply to ಆತ್ಮೀಯ ಹ೦ಸಾನ೦ದಿಯವರೇ by Harish Athreya
ಮನಸ್ಸಿನಲ್ಲಿ ಮೂಡಿದ ಭಾವಗಳು
ಮನಸ್ಸಿನಲ್ಲಿ ಮೂಡಿದ ಭಾವಗಳು ಉತ್ತಮ ಪದರಚನೆಗಳಾಗಿ ಮೂಡಿಬಂದಿವೆ. ಧನ್ಯವಾದಗಳು ಹಂಸಾನಂದಿಯವರಿಗೆ.
In reply to ಆತ್ಮೀಯ ಹ೦ಸಾನ೦ದಿಯವರೇ by Harish Athreya
ಹರೀಶ ಆತ್ರೇಯ ಅವರೇ, ಆ ಅಮಲು
ಹರೀಶ ಆತ್ರೇಯ ಅವರೇ, ಆ ಅಮಲು ಇಳಿಯುವುದು ಕಷ್ಟವೇ! ನಿಮ್ಮನ್ನು ವೇದಿಕೆಯ ಮೇಲೆ ಬಹಳ ಸಂತಸವಾಯಿತು. ಎಷ್ಟೋ ಜನ ಪರಿಚಿತರು ಪೃಚ್ಛಕರಾಗಿದ್ದೇ ನನಗೆ ಹೆಚ್ಚಾಯ :)
ನನಗಿನ್ನೂ ಪದ್ಯಪಾನದ ಅಮಲು
ನನಗಿನ್ನೂ ಪದ್ಯಪಾನದ ಅಮಲು ಇಳಿದಿಲ್ಲ. ಅಷ್ಟರಲ್ಲಿ ಹಂಸಾನಂದಿಯವರ ಈ ಪದ್ಯಗಳು ನಶೆಯಿಳಿಯದ ಕುಡುಕನಿಗೆ ಮತ್ತೆ ಮೈರೇಯವನ್ನು ಕುಡಿಸಿದಂತೆ ಮಾಡಿವೆ.
ಬಹಳ ಸೊಗಸಾಗಿವೆ ಹ0ಸಾನ0ದಿಯವರೇ.
ಬಹಳ ಸೊಗಸಾಗಿವೆ ಹ0ಸಾನ0ದಿಯವರೇ.
ನಿಜ,ಜೀವನ ಸಾರ್ಥಕವಾಯಿತು,ಈ ಕಾರ್ಯಕ್ರಮವನ್ನು ನೋಡಿ.
ಹಲವು ನಿಶೆ ಜಾರಿದರು ಇಳಿಯದೀ ನಶೆಯು.