೨೨. ಶ್ರೀ ಲಲಿತಾ ಸಹಸ್ರನಾಮ ೫೩ ಮತ್ತು ೫೪ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೫೩ ಮತ್ತು ೫೪
Śiva शिवा (53)
೫೩. ಶಿವಾ
ಶಿವ ಮತ್ತು ಶಕ್ತಿಯರಿಗೆ ವ್ಯತ್ಯಾಸವಿಲ್ಲ ಆದ್ದರಿಂದ ದೇವಿಯನ್ನು ಶಿವಾ ಎಂದು ಕರೆದಿದ್ದಾರೆ. ಶಿವ ಎಂದರೆ ಮಂಗಳವೆಂದೂ ಅರ್ಥ. ದೇವಿಯು ಮಂಗಳದ ಮೂರ್ತರೂಪವಾಗಿದ್ದಾಳೆ. ಅವಳು ಶಿವನ ಇಚ್ಚಾ ರೂಪವಾಗಿದ್ದಾಳೆ. ಮೂರು ವಿಧವಾದ ಶಕ್ತಿಗಳಿವೆ; ಅವೆಂದರೆ ಇಚ್ಛಾ, ಜ್ಞಾನ ಮತ್ತು ಕ್ರಿಯಾ ಶಕ್ತಿಗಳು. ಶಿವನೆ ಪರಬ್ರಹ್ಮನಾಗಿರುವುದರಿಂದ ಅವನಿಗೆ ಯಾವುದೇ ರೀತಿಯ ಆಸೆಗಳಿಲ್ಲ. ಆದರೆ ಅವನ ಇಚ್ಛೆಯು (ಆಸೆಯು) ಲಲಿತಾಂಬಿಕೆಯ ರೂಪದಲ್ಲಿ ಪ್ರತಿಬಿಂಬಿತವಾಗಿದೆ. ಇಲ್ಲಿ ಆಸೆಯೆಂದರೆ ಆತ್ಮಸಾಕ್ಷಾತ್ಕಾರದ ಇಚ್ಛೆ ಎಂದು ತಿಳಿದುಕೊಳ್ಳಬೇಕು. "ಯಥಾ ಶಿವಾ-ತಥಾ ದೇವಿ; ಯಥಾ ದೇವಿ-ತಥಾ ಶಿವಾ" ಎನ್ನುವ ಹೇಳಿಕೆಯಿದೆ. ಎಲ್ಲೆಲ್ಲಿ ಶಿವನಿರುವನೋ ಅಲ್ಲೆಲ್ಲಾ ದೇವಿಯಿರುವಳು ಮತ್ತು ಎಲ್ಲೆಲ್ಲಿ ದೇವಿಯಿರುವಳೋ ಅಲ್ಲೆಲ್ಲಾ ಶಿವನಿರುವನು. ಆದ್ದರಿಂದ ಶಿವ ಮತ್ತು ಶಕ್ತಿಯರಿಗೆ ಭೇದವಿಲ್ಲವೆನ್ನುತ್ತಾರೆ. ಮತ್ತೊಂದೆಡೆ ಪಾರ್ವತಿ ಮತ್ತು ಪರಮೇಶ್ವರರನ್ನು ಬೇರ್ಪಡಿಸಲಾಗದು ಎಂದು ಹೇಳಲಾಗಿದೆ. ಇದನ್ನು ಒಂದು ‘ಶಬ್ದ’ಕ್ಕೆ ಹೋಲಿಸಲಾಗಿದೆ ಏಕೆಂದರೆ ಅದನ್ನು ಅದರ ಅರ್ಥದಿಂದ ಬೇರ್ಪಡಿಸಲಾಗದು. ಅವರಿಬ್ಬರನ್ನೂ ಈ ಪ್ರಪಂಚದ ತಂದೆ-ತಾಯಿಗಳೆಂದು ಪರಿಗಣಿಸಲಾಗಿದೆ. ಶ್ರುತಿಗಳು ಉಮಾ (ಶಕ್ತಿ) ಮತ್ತು ಶಂಕರ (ಶಿವ)ನಿಗೆ ವ್ಯತ್ಯಾಸವಿಲ್ಲವೆಂದು ಸಾರುತ್ತವೆ. ಶಂಕರಿಯು ಶಿವನ ಸಂಗಾತಿಯಾಗಿದ್ದು ಶಿವ-ಶಂಕರೀ ಎಂದು ಕರೆಯಲ್ಪಟ್ಟಿದ್ದಾಳೆ.
ಅವಳು ಒಬ್ಬನ ಪ್ರಜ್ಞೆಗೆ ಸಂಭಂದಿಸಿದಂತೆ ಮಾಯಾ ಶಕ್ತಿಯಾಗಿದ್ದಾಳೆ. ಅವಳು ಹೇಗೆ ಕಾಣುತ್ತಾಳೆ? ಅವಳು ಜ್ಞಾನಿಯಾಗಿದ್ದಾಳೆ, ಸ್ವಯಂಪ್ರಕಾಶಿತಳು (ಹೆಚ್ಚಿನ ವಿವರಗಳಿಗೆ, ಪ್ರಕಾಶ ಮತ್ತು ವಿಮರ್ಶ ರೂಪದ ಬಗೆಗಿನ ಲೇಖನವನ್ನು ನೋಡಿ: http://sampada.net/blog/%E0%B3%A8-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE%E0%B2%A6-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86-%E0%B2%AA%E0%B3%8D%E0%B2%B0%E0%B2%95%E0%B2%BE%E0%B2%B6-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%B5%E0%B2%BF%E0%B2%AE%E0%B2%B0%E0%B3%8D%E0%B2%B6-%E0%B2%B0%E0%B3%82%E0%B2%AA%E0%B2%97%E0%B2%B3%E0%B3%81/17-4-2013/40668). ನಿರ್ಗುಣಳು, ಸಂಸಾರ ಬಂಧ ನಾಶಕಳು (ಆಸೆ ಮತ್ತು ಅದಕ್ಕೆ ಸಂಭಂದಿಸಿದ ವಿಷಯಗಳನ್ನು ಹೋಗಲಾಡಿಸುವವಳು) ಮತ್ತು ಪರಮಾನಂದ ರೂಪಿಣಿ. ಅವಳು ಶಿವಾ ಅಂದರೆ ಪರಮೋನ್ನತ ದೇವಿಯಾಗಿದ್ದಾಳೆ, ಕರುಣೆ ಮತ್ತು ದಯೆಗಳ ಸಾಗರವಾಗಿದ್ದಾಳೆ. ಜ್ಞಾನಿಗಳಾದ ಮನುಷ್ಯರು ಆ ದೇವಿಯಿಂದ ಸಕಲವನ್ನೂ ಪಡೆಯುತ್ತಾರೆ.
ಇಲ್ಲಿ ಎರಡು ಮುಖ್ಯ ವಿಷಯಗಳನ್ನು ಪ್ರಸ್ತಾವಿಸಲಾಗಿದೆ. ಮೊದಲೆನೆಯದು ಶ್ರೀ ಲಲಿತೆಯು ಶಿವನಿಗಿಂತ ಬೇರೆಯಲ್ಲ ಎನ್ನುವುದು ಮತ್ತು ಶಿವ ಮತ್ತು ಶಕ್ತಿಯರು ಒಂದೇ ರೂಪವನ್ನು ಹೊಂದಿದ್ದಾರೆನ್ನುವುದು. ಆದರೆ ಅಜ್ಞಾನದಿಂದಾಗಿ ನಾವು ಅವರನ್ನು ಎರಡು ವಿಭಿನ್ನ ರೂಪಗಳಾಗಿ ಪೂಜಿಸುತ್ತೇವೆ. ಎರಡನೆಯದಾಗಿ, ಒಂದು ವೇಳೆ ಈ ನಾಮದಲ್ಲಿ ತಿಳಿಸಿದಂತೆ ಅವಳ ವೈಯ್ಯಕ್ತಿಕ ರೂಪವನ್ನು ಪೂಜಿಸಿದರೂ ಕೂಡಾ ನಮಗೆ ಎಲ್ಲಾ ಮಂಗಳಕರವಾದ ವಸ್ತುಗಳು ಸಿಗುತ್ತವೆ. ಇದೇ ಅಂಶವನ್ನು ಕೆಳಗಿನ ನಾಮಗಳಲ್ಲೂ ಚರ್ಚಿಸಲಾಗಿದೆ.
Svādhīna-vallabhā स्वाधीन-वल्लभा (54)
೫೪. ಸ್ವಾಧೀನ ವಲ್ಲಭಾ
ಅವಳ ಸಂಗಾತಿಯಾದ ಶಿವನು ಕೇವಲ ಅವಳಿಗೆ ಮಾತ್ರ ಸಂಭಂದಿಸಿದವನಾಗಿದ್ದಾನೆ. ಈ ವಿಷಯವು ಹಿಂದಿನ ನಾಮದ ವಿಶ್ಲೇಷಣೆಯನ್ನು ದೃಢಪಡಿಸುತ್ತದೆ. ಇದುವರೆಗೆ ಸ್ವಯಂ ಶಿವನೇ ತನ್ನ ಮೂರು ಶಕ್ತಿಗಳನ್ನು ನೋಡಿಕೊಳ್ಳಲು ಅವಳನ್ನು ಸೃಷ್ಟಿಸಿದನೆಂದು ಚರ್ಚಿಸುತ್ತಿದ್ದೇವೆ. ಶಿವನದು ಸ್ಥಿರ ಶಕ್ತಿಯಾದರೆ. ಶಕ್ತಿಯದು ಚಲನಶೀಲ ಅಥವಾ ಕ್ರಿಯಾಶೀಲ ಶಕ್ತಿ ಆದ್ದರಿಂದ ಕೇವಲ ಈ ಒಂದು ಕಾರಣಕ್ಕಾಗಿಯೇ ಶಿವನು ಶಕ್ತಿಯನ್ನು ಸೃಷ್ಟಿಸಿದನು. ಶಿವನು ಈ ಪ್ರಪಂಚಕ್ಕೆ ಕಾರಣನಾದರೆ ಶಕ್ತಿಯು ಅವನ ಶಕ್ತಿಯಾಗಿದ್ದಾಳೆ(ಬಲವಾಗಿದ್ದಾಳೆ). ಈ ಜೋಡಿಯು ಇಲ್ಲದಿದ್ದರೆ ಪ್ರಪಂಚದ ಇರುವಿಕೆಯು ಸಾಧ್ಯವಾಗದು. ಇದನ್ನು ಸೌಂದರ್ಯಲಹರಿಯ ಒಂದನೇ ಶ್ಲೋಕವೂ ಸಮರ್ಥಿಸುತ್ತದೆ, "ಶಕ್ತಿಯೊಂದಿಗೆ ಸಂಯೋಗ ಹೊಂದಿಲ್ಲದಿದ್ದರೆ ಶಿವನು ಒಂದೇ ಒಂದು ಹೆಜ್ಜೆಯನ್ನೂ ಮುಂದಿರಿಸಲಾರ".
ಬಹುಶಃ ಇದನ್ನು ಈ ರೀತಿಯಾಗಿ ವಿಶ್ಲೇಷಿಸಬಹುದು - ಬ್ರಹ್ಮವು ಸರ್ವಾಂತರಯಾಮಿಯಾಗಿದೆ. ಆತ್ಮವು ಜೀವಿಯ ಕರ್ಮಗಳನ್ನು ಸಂಗ್ರಹಿಸಿಡುವ ಸ್ಥಳವಾಗಿದೆ. ಬ್ರಹ್ಮವಾಗಲಿ ಅಥವಾ ಆತ್ಮವಾಗಲಿ ತಮ್ಮ ವೈಯ್ಯಕ್ತಿಕ ಬಲದಿಂದ ಜೀವಿಯನ್ನು ಸೃಷ್ಟಿಸಲಾರರು. ಬ್ರಹ್ಮಕ್ಕೆ ಆತ್ಮವು ಕಾರ್ಯನಿರ್ವಹಿಸಲು ಒಂದು ಸ್ಥೂಲರೂಪದ ಅವಶ್ಯಕತೆಯಿದೆ ಮತ್ತು ಆತ್ಮಕ್ಕೆ ಬ್ರಹ್ಮವು ಜನ್ಮತೆಳೆಯುವುದು ಬೇಕಾಗಿದೆ. ಸೌಂದರ್ಯಲಹರಿಯ ಒಂದನೇ ಶ್ಲೋಕವು ಶಿವನೊಬ್ಬನೇ ಕಾರ್ಯನಿರ್ವಹಿಸಲಾರ ಎಂದು ಹೇಳುತ್ತದೆ. ಅದೇ ರೀತಿಯಾಗಿ ಶಕ್ತಿಯು ಕೂಡಾ ಒಬ್ಬಳೇ ಕಾರ್ಯ ನಿರ್ವಹಿಸಲಾರಳು. ಈ ಶ್ಲೋಕಗಳು ಶಕ್ತಿಯ ಕುರಿತಾಗಿ ಇರುವುದರಿಂದ ಸಾಮಾನ್ಯವಾಗಿ ಋಣಾತ್ಮಕ ಅಂಶಗಳನ್ನು (ಗುಣಗಳನ್ನಲ್ಲಾ) ಇಂತಹ ಸಂದರ್ಭಗಳಲ್ಲಿ ನಿಷ್ಕರುಣೆಯಿಂದ ತೆಗೆದು ಹಾಕಲಾಗುವುದು ಏಕೆಂದರೆ ಅವು ಕೇವಲ ಕಾವ್ಯಾತ್ಮಕ ಹೇಳಿಕೆಗಳಾಗಿವೆ.
ಈ ನಾಮದೊಂದಿಗೆ ಶ್ರೀ ಲಲಿತೆಯ ಭೌತಿಕ ರೂಪದ ವಿವರಣೆಯನ್ನು ಮುಕ್ತಾಯಗೊಳಿಸಲಾಗಿದೆ. ೫೩ರಿಂದ ೬೪ನೇ ನಾಮಾವಳಿಗಳು ’ಶ್ರೀ ನಗರ’ ಅಂದರೆ ದೇವಿಯು ನಿವಾಸವಾಗಿರುವ ಸ್ಥಳದ ವರ್ಣನೆಯಾಗಿದೆ. ೧೩ರಿಂದ ೫೪ನೇ ನಾಮಾವಳಿಗಳಲ್ಲಿ ಅವಳ ಭೌತಿಕ ರೂಪವನ್ನು ವರ್ಣಿಸಬೇಕಾದರೆ ಕೆಲವೊಂದು ವಿಷಯಗಳು ಚರ್ಚಿಸಲು ಸೂಕ್ಷ್ಮ ರೂಪದವುಗಳಾಗಿದ್ದವು. ಸಹಸ್ರನಾಮದಲ್ಲಷ್ಟೇ ಅಲ್ಲ ಸೌಂದರ್ಯ ಲಹರಿಯಲ್ಲೂ ಅಂತಹ ವರ್ಣನೆಗಳು ನಮಗೆ ಕಂಡು ಬರುತ್ತವೆ. ಸಾಮಾನ್ಯವಾಗಿ ಒಂದು ಪ್ರಶ್ನೆಯು ಉದ್ಭವವಾಗುತ್ತದೆ ಒಂದು ಹಂತಕ್ಕಿಂತ ಮುಂದೆ ಹೋಗಿ ಅಂತಹ ವಿಷಯಗಳನ್ನು ಚರ್ಚಿಸಬಹುದೇ ಎಂದು? ಈ ರೀತಿಯ ವರ್ಣನೆಗಳಿಗೆ ಎರಡು ರೀತಿಯಾದ ವಿವರಣೆಗಳನ್ನು ಕೊಡಬಹುದು. ಒಂದು ಬಹುಶಃ ವರ್ಣನೆಗಳನ್ನು ಕಾವ್ಯಮಯವಾಗಿಸಿರುವುದು; ಈ ರೀತಿಯ ವರ್ಣನೆಗಳನ್ನು ಕಾವ್ಯಗಳಲ್ಲಿ ಮಾನ್ಯ ಮಾಡಲಾಗಿದೆ. ಇದನ್ನು ಆದಿ ಶಂಕರರು ರಚಿಸಿರುವ ಸೌಂದರ್ಯ ಲಹರಿಗೆ ಅನ್ವಯಿಸಬಹುದು. ಶಂಕರರಂತಹ ಮಹಿಮಾನ್ವಿತ ಋಷಿಗಳು ಅಂತಹ ವರ್ಣನೆಗಳನ್ನು ಹೇಗೆ ಮಾಡಬಲ್ಲರು? ಶಂಕರರು ಸಾಮಾನ್ಯ ಮನುಷ್ಯರಲ್ಲ ಅವರು ಶಿವನ ಅವತಾರವೆಂದು ಪರಿಗಣಿಸಲ್ಪಟ್ಟಿದ್ದಾರೆ. ಇದು ನಿಜವಾದರೆ ಅವರ ವರ್ಣನೆಗಳನ್ನು ಒಪ್ಪಿಕೊಳ್ಳಬಹುದು ಆದರೆ ಒಂದು ಷರತ್ತಿನ ಮೇಲೆ ಅದೇನೆಂದರೆ ಅಂತಹ ವಿಷಯಗಳನ್ನು ಅವರು ಸಾರ್ವಜನಿಕವಾಗಿ ಹೇಳಿದ್ದೇಕೆ ಎನ್ನುವುದಕ್ಕೆ ಸರಿಯಾದ ಕಾರಣಗಳಿದ್ದರೆ ಮಾತ್ರ. ಇದಕ್ಕೆ ಸೂಕ್ತವಾದ ಉತ್ತರಗಳನ್ನು ಕಂಡುಕೊಳ್ಳುವುದು ಕಷ್ಟ. ಅಂತಹ ವಿವರಣೆಗಳಲ್ಲಿ ಸಾಮಾನ್ಯ ಮನುಷ್ಯನ ಬುದ್ಧಿಮತ್ತೆಗೆ ನಿಲುಕದ ಅತ್ಯಂತ ಸೂಕ್ಷ್ಮವಾದುದ್ದೇನೋ ಹುದುಗಿರಬೇಕು. ಯಾವಾಗಲೂ ಶ್ರೀ ಲಲಿತೆಯೊಂದಿಗೇ ಇದ್ದು ಈ ಸಹಸ್ರನಾಮವನ್ನು ರಚಿಸಿದ ವಾಗ್ದೇವಿಗಳನ್ನೇ ಉದಾಹರಣೆಗೆ ತೆಗೆದುಕೊಳ್ಳಿ ಮತ್ತು ಈ ಸಹಸ್ರನಾಮವು ಸಾಕ್ಷಾತ್ ಶ್ರೀ ಲಲಿತೆಯ ಸಮ್ಮುಖದಲ್ಲಿಯೇ ಹೇಳಲ್ಪಟ್ಟಿತ್ತೆನ್ನುವುದನ್ನು ಗಮನಿಸಿ. ಒಂದು ವೇಳೆ ಇದರಲ್ಲಿ ಹೇಳಿರುವುದೇನಾದರೂ ತಪ್ಪಾಗಿದ್ದಲ್ಲಿ ಶ್ರೀ ಲಲಿತೆಯು ಅವರನ್ನು ಆ ಸ್ಥಳದಲ್ಲಿಯೇ ಸುಟ್ಟು ಹಾಕುತ್ತಿರಲಿಲ್ಲವೇ? ಅವಳು ಹಾಗೆ ಮಾಡಲಿಲ್ಲವಾದ್ದರಿಂದ ಈ ಎಲ್ಲಾ ವರ್ಣನೆಗಳನ್ನು ಸ್ವಯಂ ಶ್ರೀ ಲಲಿತೆಯೇ ಒಪ್ಪಿಕೊಂಡಂತಾಯಿತಲ್ಲವೇ? ಲಲಿತಾಂಬಿಕೆಯ ಪಂಚದಶೀ ಮಂತ್ರವು ಅವಳ ದೇಹದ ವಿವಿಧ ಅಂಗಗಳನ್ನು ಕುರಿತು ಧ್ಯಾನಿಸುವುದಾಗಿದ್ದು ಅದು ಬಹಳ ರಹಸ್ಯಾತ್ಮಕವಾದುದ್ದೆಂದು ಭಾವಿಸಲಾಗಿದೆ; ಆದರೆ ಅವುಗಳನ್ನು ಈ ಮಾಲಿಕೆಯಲ್ಲಿ ಮಧ್ಯಮ ಸ್ಥಾಯಿಯಲ್ಲಿ ಚರ್ಚಿಸಲಾಗಿದೆ.
ಈ ಸಹಸ್ರನಾಮ ಮತ್ತು ಬೇರೆಡೆಯಲ್ಲಿ ಅಂತಹ ವರ್ಣನೆಗಳು ಸಿಗುವುದಕ್ಕೆ ಈ ಕೆಳಗಿನ ಕೆಲವು ಕಾರಣಗಳೂ ಇರಬಹುದು. ಮೊದಲನೇ ಅಂಶವೇನೆಂದರೆ ಕಾವ್ಯಾತ್ಮಕ ಕಲ್ಪನೆಯಲ್ಲಿ ಅಂತಹ ವರ್ಣನೆಗಳಿಗೆ ಸಮ್ಮತಿಯಿದೆ. ಕಾವ್ಯಗಳ ಚತುರತೆಯನ್ನು ಅಂತಹ ವರ್ಣನೆಗಳಲ್ಲಿ ವ್ಯಕ್ತಮಾಡಲಾಗುತ್ತದೆ. ಎರಡನೇ ಕಾರಣವು ಭಕ್ತನು ಈ ರೀತಿಯ ವರ್ಣನೆಗಳಿಂದ ಪ್ರಚೋದನೆಗೆ ಒಳಪಡುತ್ತಾನೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಲೋಸುಗವಾಗಿರಬಹುದು. ಅಂದರೆ ಉನ್ನತ ಅವಸ್ಥೆಗಳಿಗೆ ಹೋಗಲು ಈ ರೀತಿಯ ಪರೀಕ್ಷೆಗಳನ್ನು ಎದುರಿಸಬೇಕಾಗಬಹುದು. ಮೂರನೆಯದಾಗಿ ಈ ರೀತಿಯ ವರ್ಣನೆಗಳು ಶಕ್ತಿಯ ಲೀಲೆಯಾದ ಮಾಯೆಯಿಂದ ಉಂಟಾದದ್ದು. ಎಲ್ಲಿಯವರೆಗೆ ಮಾಯೆಯು ವ್ಯಕ್ತಿಯೊಬ್ಬನ ಒಳಗಿನಿಂದ ದೂರ ಸರಿಯುವುದಿಲ್ಲವೋ ಅಲ್ಲಿಯವರೆಗೆ ಅವನಿಗೆ ಬ್ರಹ್ಮಸಾಕ್ಷಾತ್ಕಾರವಾಗುವುದಿಲ್ಲ ಏಕೆಂದರೆ ಈ ರೀತಿಯ ಎಲ್ಲಾ ವರ್ಣನೆಗಳು ಮಾಯೆಯ ಪ್ರಭಾವಕ್ಕೆ ಒಳಗಾಗಿರುವಂತಹವುಗಳು. ಇವು ಕುಂಡಲಿನೀ ಶಕ್ತಿ ಮತ್ತು ಅದರ ಮಾರ್ಗವನ್ನು ಸೂಚಿಸುವುದೂ ಆಗಿರಬಹುದು. ಈ ಎಲ್ಲಾ ವಿಶ್ಲೇಷಣೆಗಳ ಹೊರತಾಗಿ ಒಬ್ಬನು ಇದಕ್ಕಿಂತ ಹೆಚ್ಚಿಗೆ ಆಲೋಚಿಸಲು ಆಗುವುದಿಲ್ಲ ಅಥವಾ ಅವನಿಗೆ ಅಧಿಕಾರವಾಗಲಿ ಹಕ್ಕಾಗಲಿ ಇಂತಹ ವಿವರಣೆಗಳನ್ನು ವಿಶ್ಲೇಷಿಸಲು ಇಲ್ಲ. ಮೊದಲು ಒಬ್ಬನು ಈ ಮಾಯಾ ಪ್ರಪಂಚವನ್ನು ಅರ್ಥಮಾಡಿಕೊಳ್ಳಬೇಕು ಅದೇನೆಂದರೆ ಈ ಪ್ರಪಂಚವು ಸಂಪೂರ್ಣವಾಗಿ ಆಸೆಗಳಿಂದ ತುಂಬಿದೆ ಮತ್ತು ಒಬ್ಬನು ಈ ಉನ್ನತ ಸ್ಥಾಯಿಗೆ ಹೋಗಬೇಕಾದರೆ ಈ ಎಲ್ಲಾ ರೀತಿಯ ಕಾಮನೆಗಳನ್ನು ಅಧಿಗಮಿಸಬೇಕು; ಇಂತಹ ಸತ್ಯಗಳನ್ನು ಮನಗಂಡಲ್ಲಿ ಮಾತ್ರ ಅವನಿಗೆ ಅಂತಿಮ ಸತ್ಯವಾದ ಬ್ರಹ್ಮದ ಅರಿವಾಗುವುದು. ಈ ಚರ್ಚೆಯನ್ನು ಮುಕ್ತಾಯಗೊಳಿಸುವ ಮುನ್ನ ನಿರ್ಗುಣ ಬ್ರಹ್ಮವು ನಿರಾಕಾರವಾಗಿದೆ ಎನ್ನುವುದನ್ನು ಮನಗಾಣಬೇಕಾದರೆ ಒಬ್ಬನು ಸಗುಣ(ರೂಪ ಮತ್ತು ಗುಣಗಳನ್ನು ಹೊಂದಿದ) ಬ್ರಹ್ಮವನ್ನು ಮೊದಲು ತಿಳಿದುಕೊಳ್ಳಬೇಕು. ಬಹುಶಃ ಇಂತಹ ವಿವರಣೆಗಳನ್ನು ಅಷ್ಟೊಂದು ಬುದ್ಧಿವಂತರಲ್ಲದ ಅಥವಾ ಬ್ರಹ್ಮನ ಕುರಿತು ಕೇಳದೇ ಇರುವ ಸಾಮಾನ್ಯ ಜನರಿಗೆ ಕಡೇ ಪಕ್ಷ ಸಗುಣ ಬ್ರಹ್ಮನ ತಿಳುವಳಿಕೆಯು ಆಧ್ಯಾತ್ಮ ಸಾಧನೆಯ ಮೆಟ್ಟಿಲಾಗಿ ಉಪಯೋಗಕ್ಕೆ ಬರುತ್ತದೆ.
*******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 53, 54 http://www.manblunder.com/2009/07/lalitha-sahasranamam-5354.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ನಮಸ್ಕಾರ ಶ್ರೀಧರರವರಿಗೆ,
ನಮಸ್ಕಾರ ಶ್ರೀಧರರವರಿಗೆ,
ನನ್ನ ಅನಿಸಿಕೆ : ಮೇಲ್ನೋಟಕ್ಕೆ ಬರಿಯ ಸೌಂದರ್ಯ ವರ್ಣನೆಯ ಹಾಗೆ ತೋರಿದರೂ, ಆಂತರ್ಯದಲ್ಲಿ ಮತ್ತಾವುದೋ ನಾವರಿಯಲಾಗದ ನಿಗೂಢ ಸಂದೇಶವಿರಬೇಕು. ಅದನ್ನು ಅರಿಯುವ ಸ್ತರಕ್ಕೆ ನಮ್ಮ ಮೆದುಳು ತಲುಪುವ ತನಕ, ಅದು ಮಾನವ ಸೃತಿಯಿಂದ ಸುಲಭದಲ್ಲಿ ಮಾಯವಾಗದಿರದಂತೆ, ಈ ಸೌಂದರ್ಯವರ್ಣನೆಯ ಹೊದಿಕೆಯಡಿ ಕಟ್ಟಿಟ್ಟಿರಬೇಕು - ಆಸೆ, ಕಾಮನೆಗಳ ಸುಲಭ ಪ್ರಲೋಭನೆಗೆ ಒಳಪಾಡುವ ಹುಲುಮನುಜ ಮನ, ಆ ಕಾರಣದಿಂದಾದರೂ ಇದನ್ನು ನಿರಂತರವಾಗುಳಿಸಿಕೊಂಡು, ಮುಂದೊಮ್ಮೆ ಆ ಒಳಗಡಗಿದ ರಹಸ್ಯವನ್ನು ಭೇಧಿಸಬಲ್ಲ ಸಾಮರ್ಥ್ಯ ಪಡೆಯಲೆಂದೆ ಮಾಡಿಟ್ಟ ಚಾತುರ್ಯಪೂರ್ಣ ಪ್ರಕ್ರಿಯೆಯೂ ಇರಬಹುದೇನೊ? ಅಥವಾ ನೀವು ಆಗಲೆ ಹೇಳಿದ ಕಾರಣಗಳ ಜತೆ ಇನ್ನು ಈ ತರದ ಅನೇಕ ಕಾರಣಗಳ ಸಮ್ಮಿಶ್ರವೂ ಇದ್ದೀತೂ. ಕೊನೆಗೂ ಅಲ್ಲಿ ಮಿಕ್ಕುವುದು ಏನಿರಬಹುದೊ ಆ ರಹಸ್ಯ ಎಂಬ ಕುತೂಹಲವೆ! ಧನ್ಯವಾದಗಳು, - ನಾಗೇಶ ಮೈಸೂರು, ಸಿಂಗಪುರದಿಂದ
In reply to ನಮಸ್ಕಾರ ಶ್ರೀಧರರವರಿಗೆ, by nageshamysore
ನಿಮ್ಮ ಅನಿಸಿಕೆ ನಿಜ ನಾಗೇಶರೆ.
ನಿಮ್ಮ ಅನಿಸಿಕೆ ನಿಜ ನಾಗೇಶರೆ. ನಿಗೂಢವಾದ ರಹಸ್ಯವನ್ನು ಈ ರೀತಿ ತೋರಿಕೆಯ ಬಾಹ್ಯ ವರ್ಣನೆಗಳೊಳಗೆ ಅಡಗಿಸಿಟ್ಟಿರಬಹುದು. ಮೂಲ ಲೇಖಕರ ಅಭಿಪ್ರಾಯದಂತೆ ನಾವು ಮಾಯೆಯನ್ನು ಅಧಿಗಮಿಸಿದಾಗ ನಿಜವಾದ ಅರ್ಥವು ಹೊಳೆಯುತ್ತದೆ ಅಥವಾ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ