ಅರ್ಜೆಂಟು ಅಂದ್ರೆ ಆರು ತಿಂಗಳಲ್ಲ, ಇನ್ನೂ ಜಾಸ್ತಿ!!

ಅರ್ಜೆಂಟು ಅಂದ್ರೆ ಆರು ತಿಂಗಳಲ್ಲ, ಇನ್ನೂ ಜಾಸ್ತಿ!!

 

     ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಕಛೇರಿಯ ಕಾರ್ಯವೈಖರಿ ಸುಧಾರಣೆಯಾಗಲಿ ಎಂದು ಆಶಿಸಿ 'ಕಾರ್ಯದಕ್ಷತಾ ಸುಧಾರಣಾ ಯಜ್ಞ' ನಡೆಸಿದ್ದು, ಈ ರೀತಿಯ ಸಾತ್ವಿಕ ಪ್ರತಿಭಟನೆ ದೊಡ್ಡ ಸುದ್ದಿಯಾಗಿ ಪತ್ರಿಕೆಗಳಲ್ಲಿ, ವಿವಿಧ ದೃಷ್ಯ ಮಾಧ್ಯಮಗಳಲ್ಲಿ ಪ್ರಚುರಗೊಂಡಿತ್ತು. ಇಂತಹದಕ್ಕೆಲ್ಲಾ ಅವರು ಜಗ್ಗುವವರಲ್ಲ. ಆ ಕಛೇರಿಯ ಕಾರ್ಯವೈಖರಿಯ ಒಂದು ಸಣ್ಣ ಪರಿಚಯ ಇಲ್ಲಿದೆ.

     ಸೇವಾಜ್ಯೇಷ್ಠತೆಯಲ್ಲಿ ನನಗಿಂತ ಕಿರಿಯರಾಗಿದ್ದ ಕೆಲವರು ನನಗಿಂತ ಹೆಚ್ಚು ವೇತನ ಪಡೆಯುತ್ತಿದ್ದ ಬಗ್ಗೆ ಅವರ ಗಮನ ಸೆಳೆದು ಕಳೆದ ೧೬ ವರ್ಷಗಳಿಂದ ಪತ್ರ ವ್ಯವಹಾರಗಳನ್ನು ಮಾಡಿದ್ದು, ಉಚ್ಛ ನ್ಯಾಯಾಲಯ ಮತ್ತು ಕರ್ನಾಟಕ ಅಪೆಲೇಟ್ ಟ್ರಿಬ್ಯೂನಲ್ಲಿನ ಆದೇಶಗಳನ್ನೂ ಹಾಜರು ಪಡಿಸಿದ್ದರೂ ಆ ಕಛೇರಿ ಮರು ಉತ್ತರ ಬರೆಯುವ ಸೌಜನ್ಯ ತೋರಿಸಲಿಲ್ಲ. ಹೀಗಾಗಿ ನಾನು ಮಾಹಿತಿ ಹಕ್ಕು ಕಾಯದೆಯ ಪ್ರಕಾರ ೨೩-೦೫-೨೦೧೦ರಲ್ಲಿ ಅರ್ಜಿ ಸಲ್ಲಿಸಿ "ಶ್ರೀ. . ಮತ್ತು ಶ್ರೀ. .ರವರು ಸೇವಾಜ್ಯೇಷ್ಠತೆಯಲ್ಲಿ ನನಗಿಂತ ಯಾವುದೇ ಹಂತದಲ್ಲಿ ಹಿರಿಯರಾಗಿದ್ದರೇ" ಎಂಬ ಮಾಹಿತಿ ಕೊಡಲು ಕೋರಿದ್ದೆ. ಮಾಹಿತಿ ಹಕ್ಕು ಕಾಯದೆಯ ಪ್ರಕಾರ ಅರ್ಜಿ ಸಲ್ಲಿಸಿದ ೩೦ ದಿನಗಳ ಒಳಗೆ ಪೂರ್ಣ ಮಾಹಿತಿ ಒದಗಿಸಬೇಕು. ಈ ಪ್ರಸಂಗದಲ್ಲಿ ೩೬ ದಿನಗಳ ನಂತರ ಮಾಹಿತಿ ಒದಗಿಸಲು ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗಿದೆಯೆಂದೂ, ಮಾಹಿತಿ ಸ್ವೀಕೃತವಾದ ನಂತರ ಕ್ರಮ ಕೈಗೊಳ್ಳಲಾಗುವುದೆಂದು ಉತ್ತರಿಸಿದ್ದರು. ಈ ಮಾಹಿತಿ ಕೋರಿದ ೨ವರ್ಷ ೪ ತಿಂಗಳುಗಳ ನಂತರದಲ್ಲಿ ದಿನಾಂಕ ೨೧-೦೯-೧೦೧೨ರಲ್ಲಿ ಅವರು ಉತ್ತರಿಸಿದ್ದೇನೆಂದರೆ:

 ". . . ಅರ್ಜಿಗೆ ಸಂಬಂಧಿಸಿದಂತೆ, ಕಡತ ಸಂ. ಆರ್ ಡಿ ೩೭೪ ಎಎಸ್ ಡಿ ೨೦೧೦ರಲ್ಲಿ ವ್ಯವಹರಿಸಿದ್ದು, ಸದರಿ ಕಡತವನ್ನು 'ಡಿ' ವರ್ಗದಲ್ಲಿ ಮುಕ್ತಾಯಗೊಳಿಸಿ ನಾಶಪಡಿಸಲಾಗಿದೆ ಹಾಗೂ ಉಲ್ಲೇಖಿತ ಕೇಂದ್ರ ಸರ್ಕಾರದ ಅಧಿಕೃತ ಜ್ಞಾಪನದಲ್ಲಿ ತಿಳಿಸಿರುವಂತೆ ಅರ್ಜಿದಾರರು ಯಾವುದೇ ಪ್ರಶ್ನೆಗಳನ್ನು ಕೇಳುವಂತಿಲ್ಲ ಮತ್ತು ಸಾರ್ವಜನಿಕ ಮಾಹಿತಿ ಅದಿಕಾರಿಯು ಸದರಿ ಪ್ರಶ್ನೆಗಳಿಗೆ ಉತ್ತರ ಒದಗಿಸುವ ಅವಶ್ಯಕತೆರುವುದಿಲ್ಲ . ."

       ಹಾಗಾದರೆ, ಈ ಕಛೇರಿಯಿಂದ ನಾನು ಬಯಸಿದ್ದ ಮಾಹಿತಿಯನ್ನು ಹೇಗೆ ಪಡೆಯಬೇಕು? ಇಂತಹ ಉತ್ತರ ಕೊಡಲು ಅಲ್ಲಿನ ಶಿಖಾಮಣಿಗಳಿಗೆ ಎರಡೂವರೆ ವರ್ಷಗಳು ಬೇಕಾದವೇ? ಕೆಲಸ ಮಾಡುವುದಕ್ಕಿಂತ, ತಪ್ಪಿಸಿಕೊಳ್ಳುವ ಚಾಣಾಕ್ಷತೆಯನ್ನು ಇಲ್ಲಿ ಅವರು ತೋರ್ಪಡಿಸಿದ್ದರು. 

 

 

     ಇದೇ ಇಲಾಖೆಯೇ ಪ್ರಕಟಿಸಿದ ತಹಸೀಲ್ದಾರ್ ಗ್ರೇಡ್ -೧ರ ಸೇವಾಜ್ಯೇಷ್ಠತೆಯಲ್ಲಿ ನನ್ನ ಅರ್ಹತಾ ದಿನಾಂಕವನ್ನು ೧೯-೦೮-೨೦೦೫ ಎಂದು ನಿಗದಿಸಿದ್ದರು. [ವಾಸ್ತವವಾಗಿ ಆ ದಿನಾಂಕ ಇನ್ನೂ ಕೆಲವು ವರ್ಷಗಳ ಹಿಂದೆಯೇ ಆಗಬೇಕಿತ್ತು, ಇರಲಿ.] ಅವರೇ ಪ್ರಕಟ ಪಡಿಸಿದ ದಿನಾಂಕಕ್ಕೆ ಅನುಗುಣವಾಗಿ ನನ್ನ ವೇತನವನ್ನು ಪುನರ್ನಿಗದಿಗೊಳಿಸಲು ಕೋರಿದ್ದು, ಅದು ಇನ್ನೂ ಆಗುವ ಹಂತದಲ್ಲಿಯೇ ಇದೆ. ಮಹಾಲೇಖಾಪಾಲಕರು ಪ್ರಧಾನ ಕಾರ್ಯದರ್ಶಿಗಳಿಗೆ ೨೧-೦೭-೨೦೧೧ರಲ್ಲಿ ಈ ಕುರಿತು ಪತ್ರ ಬರೆದಿದ್ದು, ಆ ಪತ್ರಕ್ಕೆ ಇನ್ನೂ ಉತ್ತರಿಸುವ ಸೌಜನ್ಯ ತೊರಿಸಿದಂತಿಲ್ಲ. "ಮಹಾಲೇಖಾಪಾಲಕರಿಗೆ ಉತ್ತರ ಏಕೆ ಸಲ್ಲಿಸಿಲ್ಲ, ಪ್ರಕರಣ ಇತ್ಯರ್ಥಗೊಳಿಸಲು ಎಷ್ಟು ಸಮಯ ಬೇಕಾಗಬಹುದು" ಎಂಬ ಮಾಹಿತಿ ಕೋರಿ, ಮಾಹಿತಿ ಹಕ್ಕು ಕಾಯದೆ ಪ್ರಕಾರ ೨೩-೦೬-೨೦೧೨ರಲ್ಲಿ ಅರ್ಜಿ ಸಲ್ಲಿಸಿದ್ದೆ. ಆರು ತಿಂಗಳ ನಂತರದಲ್ಲಿ ದಿನಾಂಕ ೧೯-೧೨-೨೦೧೨ರಲ್ಲಿ "ತಮ್ಮ ವೇತನ ಪುನರ್ ನಿಗದಿ ಬಗ್ಗೆ ವ್ಯವಹರಿಸಲಾಗುತ್ತಿದ್ದು, ಶೀಘ್ರದಲ್ಲಿ ಈ ಬಗ್ಗೆ ಮಹಾಲೇಖಾಪಾಲಕರಿಗೆ ಮಾಹಿತಿ ಒದಗಿಸಲಾಗುವುದೆಂದು ತಿಳಿಸಲಾಗಿದೆ" ಎಂಬ ಉತ್ತರ ಬಂತು. ಇದು ಆಗಿ ಮತ್ತೂ ಆರು ತಿಂಗಳುಗಳ ಮೇಲಾಯಿತು. ಇನ್ನೂ ಆ ಕಡತವನ್ನು ಇಟ್ಟುಕೊಂಡವರು ನಿದ್ರಿಸುತ್ತಿದ್ದಾರೆ.

 

 

     ಕರ್ನಾಟಕ  ರಾಜ್ಯದ ಮಹಾಲೇಖಾಪಾಲಕರು ಕೇಳಿದ ಮಾಹಿತಿಗೆ ಎರಡು ವರ್ಷಗಳ ನಂತರದಲ್ಲೂ ಉತ್ತರಿಸದಿರುವ ಕಂದಾಯ ಇಲಾಖೆಯ ರಾಜ್ಯದ ಅತ್ಯುನ್ನತ ಕಛೇರಿಯ ಕಾರ್ಯದಕ್ಷತೆಯನ್ನು ಯಾವ ಪದಗಳಿಂದ ಬಣ್ಣಿಸಬಹುದು? "ಆಹಾ, ನಿಮ್ಮಯ ಕೆಲಸದ ಮಹಿಮೆಯು ಬಣ್ಣಿಸಲಸದಳವು" ಎಂದು ಹಾಡುವ ಮನಸ್ಸಾಗಿದೆ!! ಕೇಳುವ ಮನಸ್ಸು ಯಾರಿಗಿದೆಯೋ ಗೊತ್ತಿಲ್ಲ!!

 
 

Comments

Submitted by ಗಣೇಶ Wed, 06/26/2013 - 00:05

>>ಹಾಡುವ ಮನಸ್ಸಾಗಿದೆ!:) ಕವಿನಾಗರಾಜರೆ, ಇಂತಹ ಜನಕ್ಕೆ ಬಿಸಿ ಮುಟ್ಟಬೇಕಾದರೆ, ಹೋಮ ಮಾಡುವುದಲ್ಲ, ಹೋಮಕ್ಕಿಟ್ಟ ಸಮಿತ್ತು‌ನಿಂದ ಬಿಸಿಬಿಸಿ ಬರೆ ಎಳೆಯಬೇಕು.
Submitted by makara Wed, 06/26/2013 - 08:44

"ಆಹಾ, ನಿಮ್ಮಯ ಕೆಲಸದ ಮಹಿಮೆಯು ಬಣ್ಣಿಸಲಸದಳವು" ಎಂದು ಹಾಡುವ ಮನಸ್ಸಾಗಿದೆ!! ಕೇಳುವ ಮನಸ್ಸು ಯಾರಿಗಿದೆಯೋ ಗೊತ್ತಿಲ್ಲ!! ನಮ್ಮ ಕಣ್ಣ ಮುಂದೇ ಎಲ್ಲಾ ನಡೆಯುತ್ತಿದ್ದರೂ ಸಹ; ನಾವು ಎಷ್ಟು ಜಡ ಅಲ್ಲ ಝಡವಾಗಿ ಹೋಗಿದ್ದೇವೆಂದರೆ ಯಾವುದೇ ವಿಧವಾದ ಪ್ರತಿಭಟನೆ ಮಾಡಲಾರದಷ್ಟು ಹದಗೆಟ್ಟು ಹೋಗಿದ್ದೇವೆ. ಹಾಗಾಗಿ ನಿಮ್ಮ ಹಾಡು ಅರಣ್ಯರೋಧನವಾಗಬಹುದಷ್ಟೇ ಕವಿಗಳೇ! :(
Submitted by ksraghavendranavada Wed, 07/03/2013 - 09:53

ಏನೂ ಮಾಡಲೊಕ್ಕಾಗೋದಿಲ್ಲ! ನಿದ್ರೆ ಬ೦ದವರನ್ನು ಎಬ್ಬಿಸಬಹುದು.. ನಿದ್ರೆ ಬ೦ದ೦ತೆ ನಟಿಸುವವರನ್ನು ಎಬ್ಬಿಸಲಿಕ್ಕಾಗುವುದೇ ಹಿರಿಯರೇ? ಕಾಲಾಯ ತಸ್ಮೈ ನಮ: ಎ೦ದು ಕೈ ಮುಗಿಯುವುದೊ೦ದೇ ದಾರಿ!