ಕವನಗಳು ಸ್ವಯಂಭುಗಳು

ಕವನಗಳು ಸ್ವಯಂಭುಗಳು

ಕವನಗಳು ಸ್ವಯಂಭುಗಳು

================

ಕವನಗಳೆಂದರೆ  ನನ್ನ ನಿಮ್ಮ ಸೃಷ್ಟಿಯಲ್ಲ

ಕವನಗಳು ಭಾವನೆಗಳ ಸ್ವಯಂಭುಗಳು

ಭಾವನೆಗಳಿಗು ಕವಿತೆಗಳಿಗು

ನಡುವೆ

ಮನುಜನೊಂದು ಮಾಧ್ಯಮ

ಭಾವನೆಗಳು ಆಲೋಚನೆಗಳು ಯಾರದೊ ಸ್ವತ್ತಲ್ಲ

ಅವು ಸರ್ವತಂತ್ರ ಸ್ವತಂತ್ರ ಸ್ವರೂಪಿಗಳು

ಸದಾ ಚಲನಶೀಲ

ಇಂದು ನನ್ನಲ್ಲಿ ನಾಳೆ ನಿಮ್ಮಲ್ಲಿ

ಮತ್ತೆ ಇನ್ನೆಲ್ಲೊ

ಮನಸಿನ ನಿಗೂಡ ತಾಣದಿ ನೆಲಸಿ ಮೆರೆಯುವುವು

ಭಾವನೆಗಳೆಂದರೆ ಎಲ್ಲರೂ

ಅಡಿಯಾಳುಗಳೆ

ಸಂಸಾರಿಯೊ ಸನ್ಯಾಸಿಯೋ

ಭಾವಶೂನ್ಯರನ್ನು ಎಲ್ಲಿಯೂ ಕಾಣಲಿಲ್ಲ

ಭಾವನೆಗಳ ಒತ್ತಡವೆ ಹಾಗೆ

ಕೆಲವರು ಕತೆ ಕವನ ರಚಿಸಿ ಪಾರಾಗುವರು

ಮತ್ತೆ ಕೆಲವರು ನಗರ ಬಸ್ ನಿಲ್ದಾಣಗಳಲ್ಲಿ

ಶೂನ್ಯದಲ್ಲಿ ದೃಷ್ಟಿಯಿಟ್ಟು ಮೈಮರೆತು ಕುಳಿತಿಹರು

Rating
No votes yet

Comments

Submitted by makara Fri, 08/30/2013 - 19:30

ಪಾರ್ಥರೆ ಕವನ ಚೆನ್ನಾಗಿದೆ. ಆದರೆ ಕವನಗಳು ಸ್ವಯಂಭುಗಳು ಎನ್ನುವುದು ಕವನದ ಆಶಯಕ್ಕೆ ಪೂರಕವಾಗಿಲ್ಲವೆನಿಸುತ್ತದೆ. ತಾರ್ಕಿಕ ದೃಷ್ಟಿಯಿಂದ ನೋಡಿದಾಗ ಅದು ತಪ್ಪಾಗುತ್ತದೆನಿಸುತ್ತದೆ; ಏಕೆಂದರೆ ಸ್ವಯಂಭೂ ಎಂದರೆ ಯಾವುದೇ ಪ್ರಚೋದನೆಯಿಲ್ಲದೆ ಉದ್ಭವವಾಗುವುದು. ಉದಾಹರಣೆಗೆ ಭಗವಂತನೊಬ್ಬನೇ ಸ್ವಯಂಭೂ ಏಕೆಂದರೆ ಅವನು ಯಾವುದೇ ಪ್ರಚೋದನೆ ಇಲ್ಲದೆ ಉದ್ಭವಿಸಿದವನು. ಕವನಗಳು ಭಾವನೆಗಳಿಂದ ಉದ್ಭವವಾಗಿರುವುದರಿಂದ ಅವು ಸ್ವಯಂಭುವೆನಿಸಿಕೊಳ್ಳುವುದಿಲ್ಲ ಎನ್ನುವುದು ನನ್ನ ಆಲೋಚನೆ. ಭಾವನೆಗಳೂ ಸಹ ಸ್ವಯಂಭುವಲ್ಲ ಏಕೆಂದರೆ ಯಾವುದೋ ಒಂದು ವಸ್ತುವನ್ನು ನೋಡಿದಾಗ ಅವು ಉಂಟಾಗುತ್ತವೆ. ಅವು ದಿಢೀರನೆ ಹುಟ್ಟಬಹುದಷ್ಟೇ! ನನ್ನ ಅನಿಸಿಕೆ ತಪ್ಪೆನಿಸಿದರೆ ವಿವರಿಸಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by partha1059 Fri, 08/30/2013 - 21:33

In reply to by makara

ವಂದನೆಗಳು ಶ್ರೀಧರ್ ಬಂಡ್ರಿಯವರಿಗೆ
ಕವನಗಳಿಗೆ ಭಾವನೆಗಳಷ್ಟೆ ಪ್ರಚೋದನೆ , ಅದಕ್ಕೆ ಮನುಷ್ಯ ಕೇವಲ ಮಾದ್ಯಮ, ಎಂದು ನಾನು ಹೇಳಲು ಪ್ರಯತ್ನಿಸಿದ್ದೇನೆ
ಕವನಗಳು ನಾವು ಬರೆಯುವದಿಲ್ಲ, ಭಾವನೆಗಳು ತಾವಾಗಿಯೆ ಕವನದ ರೂಪ ಧರಿಸುತ್ತವೆ ಹಾಗಾಗಿ ಅವು ಭಾವನೆಗಳ ಸ್ವಯಂಭೂಗಳು ಎಂದಿರುವೆ, ಇಲ್ಲಿ ಕವನ ಎನ್ನುವುದು ರೂಪವಾದರು ಅದು ಭಾವನೆಗಳು ಅಷ್ಟೆ ಅವೆ ಆ ರೂಪ ಧರಿಸಿವೆ
ಹಾಗೆ ಭಾವನೆಗಳು ಸರ್ವ ತಂತ್ರ ಸ್ವತಂತ್ರ ಎಂದು ಹೇಳಿದ್ದೇನೆ, ಅವು ಯಾರದೆ ಹಿಡಿತದಲ್ಲಿಲ್ಲ, ಅವು ಬೇಕಾದ ಮನಸಿಗೆ ಹೋಗಿ ಅಲ್ಲಿ ನೆಲೆಸಿ ಕವನದ ರೂಪ ತಾಳುತ್ತವೆ,
ಬೇಕಾದಲ್ಲಿ ಭಾವನೆಗಳನ್ನು ತಾವು ಭಗವಂತನೆಂದು ಕರೆದರೆ ನನ್ನ ಅಭ್ಯಂತರವೇನಿಲ್ಲ !!
(ಹಾಗೆ ನೋಡಿದರೆ ಭಗವಂತನು ಭಾವನಾ ಸ್ವರೂಪನೆ ಅವರವರ ಭಾವಕ್ಕೆ ತಕ್ಕಂತೆ ಅವನು ಇರುವನು ಅವನಿಗೆ ನಿಶ್ಚಿತ ರೂಪವು ಇಲ್ಲ , ಜಾಗವು ಇಲ್ಲ..........)

Submitted by partha1059 Fri, 08/30/2013 - 21:34

In reply to by partha1059

ಭಾವನೆಗಳು ಯಾವುದೋ ವಸ್ತುವನ್ನು ನೋಡಿದಾಗ ಮಾತ್ರ ಹುಟ್ಟುತ್ತದೆ ಅಂತ ಏಕೆ ಹೇಳುವಿರಿ,
ಕಣ್ಣು ಮುಚ್ಚಿ ಕುಳಿತ್ತಿದ್ದರು ಸಹ ಭಾವನೆಗಳ ಅಲೆಗಳಿಂದ ಯಾರು ತಪ್ಪಿಸಿಕೊಳ್ಳಲು ಸಾದ್ಯವಿಲ್ಲ

Submitted by nageshamysore Sat, 08/31/2013 - 03:31

In reply to by makara

ಪಾರ್ಥಾ ಸಾರ್ ಮತ್ತು ಶ್ರೀಧರರಿಗೆ, ನಿಮ್ಮ ಸೀರಿಯಸ್ ಚರ್ಚೆಗೆ ತುಸು ಲಘು ಲಹರಿಯಲ್ಲಿ ಈ 'ಮಿನಿ ಮಸಲಾ'  :-)

ಆಗಲಿ ಬಿಡಲಿ ಕವನ ಸ್ವಯಂಭು,
ಕವಿಗಳಿಗಂತು ಅದೆ ತಲೆ ದಿಂಬು,
ಭಾವನೆ ತಲೆದೂಗಿಸೊ ಕೂರಂಬು,
ಅದನ್ಹುಟ್ಟಿಸಿ ಮನಕೇನೊ ಕರುಬು,
ಆ ಮನಸು ಜೀವಾತ್ಮದ ತುರುಬು,
ಅದಕಟ್ಟಿದ ಪರಮಾತ್ಮ ಸ್ವಯಂಭು,
ಅವನ್ಹುಟ್ಟಿಸಿದ ಕವಿಚಿತ್ತವೆ ಬಾಂಬು,
ಅದಕೆ -
ಕವಿಗಿದ್ದರು ತಪ್ಪೇನಿಲ್ಲ ತಲೆಕೊಂಬು,
ಯಾಕೆಂದರೆ -
ಕವಿತೆಗಳಿಗಂತೂ ಇರದಾರ ಹಂಗು,
ಬ್ರಹ್ಮದಂತವನ ಬರಹ ಸ್ವಯಂಭು!
 

ಧನ್ಯವಾದಗಳೊಂದಿಗೆ,
- ನಾಗೇಶ ಮೈಸೂರು