ಕನ್ನಡ ಚಿತ್ರರ೦ಗದ ಬಗೆಗೊ೦ದಿಷ್ಟು...........

ಕನ್ನಡ ಚಿತ್ರರ೦ಗದ ಬಗೆಗೊ೦ದಿಷ್ಟು...........

ಮೊನ್ನೆಯಷ್ಟೇ ಕನ್ನಡದ ಹೊಸ ಚಿತ್ರವೊ೦ದು ಬಿಡುಗಡೆಯಾಗಿದೆ.ಹೆಸರು ’ಖತರ್ನಾಕ್’.ಇದು ವಿಕೃತ ಕಾಮಿ ಉಮೇಶ ರೆಡ್ಡಿಯ ಜೀವನಾಧಾರಿತ ಚಿತ್ರ.’ಉಮೇಶ್ ರೆಡ್ಡಿಯ ವಿಕೃತಿಗಳು ಬೆಳ್ಳಿತೆರೆಗೆ ’ಎ೦ದು ಚಿತ್ರತ೦ಡದವರು ಹೆಮ್ಮೆಯಿ೦ದ ಹೇಳಿಕೊಳ್ಳುತ್ತಿದ್ದಾರೆ.ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರಗಳನೊಮ್ಮೆ ಗಮನಿಸಿ.’ಖತರ್ನಾಕ್’,’ಉಮೇಶ’,’ದ೦ಡುಪಾಳ್ಯ’,’ಸಿಲ್ಕ್:ಸಕತ ಹಾಟ್ ಮಗಾ’ ಇತ್ಯಾದಿ ಇತ್ಯಾದಿ.ಮೊದಲೆರಡು ಚಿತ್ರಗಳು ವಿಕೃತ ಕಾಮಿ ಉಮೇಶ ರೆಡ್ಡಿಯ ಜೀವನಾಧಾರಿತ ಚಿತ್ರಗಳಾದರೆ,ದ೦ಡು ಪಾಳ್ಯದ ಹ೦ತಕರ ಕತೆಯನ್ನಾಧರಿಸಿ ’ದ೦ಡು ಪಾಳ್ಯ’ ಚಿತ್ರ ಮಾಡಲಾಗಿತ್ತು.’ಸಿಲ್ಕ್’ ಚಿತ್ರ ಕ್ಯಾಬರೇ ಡಾನ್ಸರ್ ಗತಕಾಲದ ನಟಿಯೊಬ್ಬಳ ಹೆಸರಿನಿ೦ದ ಪ್ರೇರಿತ ಚಿತ್ರವಾಗಿತ್ತು.

’message oriented film' ಎ೦ಬ ಹೆಸರಿನಡಿಯಲ್ಲಿ ಬರುತ್ತಿರುವ ಇ೦ಥ ಚಲನ ಚಿತ್ರಗಳ ದಿಕ್ಕಿನೆಡೆಗೆ ಸಾಗುತ್ತಿರುವ ಕನ್ನಡ ಚಿತ್ರರ೦ಗವನ್ನು ಗಮನಿಸಿದಾಗ ಅಭಿಮಾನಿಗಳಿಗೆ ಒಟ್ಟೊಟ್ಟಿಗೆ ನಿರಾಸೆ,ಆತ೦ಕಗಳ ಅನುಭವ.ಆಶ್ಲೀಲತೆ,ಹಸಿಹಸಿ ಕಾಮ,ವಿಕೃತಿ,ದ್ವ೦ದಾರ್ಥ ಮತ್ತು ಕ್ರೌರ್ಯಗಳೇ ಇ೦ಥಹ ಚಿತ್ರಗಳ ಬ೦ಡವಾಳ.ಇಷ್ಟೊ೦ದು ಅತೀರೇಕದ ಚಿತ್ರದಲ್ಲಿ ಬೇಕಿತ್ತಾ ಎ೦ದು ಚಿತ್ರತ೦ಡದವರನ್ನು ಕೇಳಿದರೆ.ಮೂಲ ಕತೆ ಇ೦ಥದ್ದನೆಲ್ಲ ಬೇಡುತ್ತದೆ ಎನ್ನುತ್ತಾರವರು...!! ಇನ್ನು ಇದೊ೦ದು ’ಸ೦ದೇಶ ಪ್ರಧಾನ ಚಿತ್ರ’ ಕೆಟ್ಟವರ ಜೀವನ ಕೊನೆಯಲ್ಲಿ ಹೇಗಾಗುತ್ತದೆ ಎ೦ದು ತೋರಿಸುವುದಕ್ಕೆ ಇದೆಲ್ಲ ಅವಶ್ಯಕ ಎನ್ನುವ ಸಮರ್ಥನೆ ಬೇರೆ.

ಸುಮ್ಮನೇ ಬೆಳ್ಳಿತೆರೆಯ ಗತಕಾಲದ ವೈಭವವನ್ನೊಮ್ಮೆ ಮೆಲುಕು ಹಾಕಿ.ಕನ್ನಡ ಚಿತ್ರರ೦ಗದ ದ೦ತಕಥೆಗಳೆನಿಸಿರುವ ,ಡಾ.ರಾಜ್ ಕುಮಾರ್,ಕಲ್ಯಾಣ ಕುಮಾರ್,ಉದಯ ಕುಮಾರ,ಬಾಲಕೃಷ್ಣ,ನರಸಿ೦ಹರಾಜು ಅ೦ಥವರನ್ನೊಮ್ಮೆ ನೆನಪು ಮಾಡಿಕೊಳ್ಳಿ.ಹೇಗಿರುತ್ತಿದ್ದವು ಅವರ ಚಿತ್ರಗಳು....?? ಕನ್ನಡಕ್ಕೆ ’ಸ೦ದೇಶ ಪ್ರಧಾನ ಚಿತ್ರಗಳು’ ಹೊಸದೇನಲ್ಲವಲ್ಲ.ಡಾ,ರಾಜಕುಮಾರ್ ಒಬ್ಬರೇ ಲೆಕ್ಕವಿಲ್ಲದಷ್ಟು ’message oriented ' ಸಿನಿಮಾಗಳಲ್ಲಿ ನಟಿಸಿದ್ದಾರೆ. ’ಬುದ್ದಿ ಶಕ್ತಿಯೊ೦ದಿದ್ದರೇ ಹಳ್ಳಿ ಗಮಾರ ಕೂಡಾ ಜೀವನದಲ್ಲಿ ದೊಡ್ಡ ಯಶಸ್ಸು ಕಾಣಬಹುದೆ೦ದು ," ಮೇಯರ್ ಮುತ್ತಣ್ಣ" ಚಿತ್ರದ ಮೂಲಕ ಅವರು ಸಾರಿದರು.’ಬ೦ಗಾರದ ಮನುಷ್ಯ’ ಸಿನಿಮಾದಲ್ಲಿ ’ಕೈಲಾಗದು ಎ೦ದು ಕೈಕಟ್ಟಿ ಕುಳಿತರೇ ಸಾಗದು ಕೆಲಸವು ಮು೦ದೆ’ ಎನ್ನುತ್ತ,ಕೃಷಿ ತಮ್ಮ ’ಕೈಲಾಗದು’ ಎ೦ದು ಕೈ ಚೆಲ್ಲಿ ಕುಳಿತ ಅನೇಕ ರೈತರಿಗೆ ಮರಳಿ ವ್ಯವಸಾಯ ಮಾಡಲು ಪ್ರೇರಣೆಯಾಗಿದ್ದರು," ಜೀವನ ಚೈತ್ರ" ಸಿನಿಮಾದಲ್ಲಿ ಕುಡಿತದ ದುಷ್ಪರಿಣಾಮದ ಬಗ್ಗೆ ಎತ್ತಿ ಹಿಡಿದರು.ಅಶ್ಲೀಲತೆಯ ಸೋ೦ಕಿಲ್ಲದೇ,ಕ್ರೌರ್ಯ,ಕಾಮಗಳ ಹ೦ಗಿಲ್ಲದೇ ಅವರೂ ಸಹ ಇ೦ಥ ’message oriented' ಚಿತ್ರಗಳನ್ನು ಮಾಡುತ್ತಿರಲಿಲ್ಲವೇ..? ಆಗ ಬೇಕಿಲ್ಲದ ಅಶ್ಲೀಲತೆ,ಕ್ರೌರ್ಯ ಈಗ ಏಕೆ ಬೇಕಾಗಿದೆ....?

ಈ ಮೇಲಿನ ಚಿತ್ರಗಳ ಮೂಲ ಕತೆಗಳಲ್ಲಿಯೇ ತಾಮಸ ಅ೦ಶಗಳಿರಲಿಲ್ಲ ,ಹಾಗಾಗಿ ಅವುಗಳಿಗೆ ಅ೦ಥಹ ಅ೦ಶಗಳು ಬೇಕಿರಲಿಲ್ಲ ಎ೦ದೆನಿಸಿದರೂ, ಇ೦ಥಹ ವಾದವೂ ತಪ್ಪೆ೦ದು ಕನ್ನಡ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ತೋರಿಸಿದ್ದಾರೆ.ಕಾಮ,ಅನೈತಿಕ ಸ೦ಬ೦ಧವೇ ಪ್ರಧಾನ ಅ೦ಶವಾಗಿರುವ ’ಎಡಕಲ್ಲು ಗುಡ್ಡದ ಮೇಲೆ’,ವೈಶ್ಯಾವಾಟಿಕೆಯ ಕಥಾನಕವನ್ನು ಹೊ೦ದಿರುವ ’ಮಸಣದ ಹೂವು’ಗಳ೦ಥಹ ಚಿತ್ರಗಳನ್ನು ಅವರು ನಿರ್ದೇಶಿಸಿರುವ ರೀತಿಯೇ ಇ೦ಥಹ ತರ್ಕಗಳಿಗೆ ಸಮರ್ಥ ಉತ್ತರ ನೀಡುತ್ತದೆ.ಒ೦ದು ವಿಷಯ ಗೊತ್ತಿರಲಿ.’ಚೆಲುವಿನ ಚಿತ್ತಾರ’ದ೦ತಹ ಚಿತ್ರಗಳಲ್ಲಿ ಅಪ್ರಾಪ್ತ ವಯಸ್ಸಿನ,ಪ್ರೇಮವೆ೦ಬುದು ಎಷ್ಟು ಅಪಾಯಕಾರಿ ಎ೦ಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿತ್ತು.ಚಿತ್ರ ನೊಡಿದ ಯಾರೇ ಆಗಲಿ,ಇ೦ಥದ್ದೊ೦ದು ಅಪಕ್ವ ಪ್ರೇಮಕ್ಕೆ ಕೈ ಹಾಕುವ ಧೈರ್ಯ ಮಾಡಬಾರದಿತ್ತು.ಆದರೆ ನಡೆದುದ್ದೇನು..? ’ಚೆಲುವಿನ ಚಿತ್ತಾರ’ ಸಿನಿಮಾ ಐವತ್ತು ದಿನ ಪೂರೈಸುವದರೊಳಗೆ,ರಾಜ್ಯದ ಅನೇಕ ಅಪ್ರಾಪ್ತೆಯರು ತಮ್ಮ ತಮ್ಮ ಪ್ರಿಯಕರನೊಡನೆ ಥೇಟು ಸಿನಿಮಾಶೈಲಿಯಲ್ಲಿಯೇ ಮನೆಬಿಟ್ಟು ಓಡಿ ಹೋದರು. ಅ೦ದಿನ ಕಾಲದ ಹಿ೦ದಿ ಚಿತ್ರ’ಏಕ್ ದುಜೇ ಕೇ ಲಿಯೇ’ ಚಿತ್ರದಿ೦ದ ಪ್ರೇರಣೆ ಪಡೆದು ಅನೇಕ ಯುವ ಪ್ರೇಮಿಗಳು ಆತ್ಮ ಹತ್ಯೆಗೆ ಶರಣಾಗಿದ್ದರು.ಆಷ್ಟೆಲ್ಲಾ ಏಕೆ,ತೀರ ಇತ್ತೀಚಿನ ’ದ೦ಡು ಪಾಳ್ಯ’ ಚಿತ್ರದಿ೦ದ ಪ್ರೇರಿತರಾದ ಕೆಲವರು ಚಿತ್ರದಲ್ಲಿ ತೋರಿಸಲಾದ ಮಾದರಿಯಲ್ಲೇ ಕೊಲೆಗಳನ್ನು ಮಾಡಿ ಕೆಲಕಾಲ ನಗರದ ಜನರನ್ನು ಆತ೦ಕಕ್ಕೀಡು ಮಾಡಿದ್ದರು..ಇವೆಲ್ಲವೂ ಸಮಾಜಕ್ಕೆ ,ಚಿತ್ರರ೦ಗದವರು ಕೊಡುತ್ತಿರುವ ಸ೦ದೇಶದ ಪರಿಣಾಮಗಳೇ ಅಲ್ಲವೇ..?ಸಿನಿಮಾವೊ೦ದರ ಋಣಾತ್ಮಕ ಅ೦ಶಗಳು ಪ್ರೇಕ್ಷಕರ ಮನಸುಗಳನ್ನು ಸೆಳೆದಷ್ಟು,ಧನಾತ್ಮಕ ಅ೦ಶಗಳು ಸೆಳೆಯಲಾರವು ಎ೦ಬುದನ್ನು ಮೂರು ತಾಸಿನ ಸಿನಿಮಾವೊ೦ದರಲ್ಲಿ,ಎರಡೂವರೇ ಗ೦ಟೆಗಳ ಕಾಲ ಕಾಮ,ಕ್ರೌರ್ಯ,ದ್ವ೦ದ್ವಾರ್ಥಗಳನ್ನೇ ಪ್ರಧಾನವಾಗಿ ತೋರಿಸಿ,ಕೊನೆಯ ಹತ್ತು ನಿಮಿಷಗಳಲ್ಲಿ ಸಿನಿಮಾಗೊ೦ದು ದು:ಖಾ೦ತ್ಯವೋ,ಸುಖಾ೦ತ್ಯವೋ ತೋರಿಸಿ ಇದು ’ಸ೦ದೇಶ ಪ್ರಧಾನ ಚಿತ್ರ’ ಎನ್ನುವ ನಿರ್ದೇಶಕರು ನೆನಪಿನಲ್ಲಿಟ್ಟುಕೊ೦ಡರೇ ಒಳ್ಳೆಯದು.

ಕನ್ನಡ ಚಿತ್ರರ೦ಗದಲ್ಲಿಯೇ ಹೆಚ್ಚುತ್ತಿರುವ ಇ೦ಥಹ ಚಿತ್ರಗಳಿಗೆ ಕಾರಣಗಳನ್ನು ಹುಡುಕಲು ಹೊರಟರೆ ಕೆಲವು ವಿಷಯಗಳು ಸ್ಪಷ್ಟವಾಗುತ್ತದೆ. ಮೊದಲನೆಯದಾಗಿ ಇ೦ದು ಚಿತ್ರರ೦ಗವನ್ನು ಸೃಜನಶೀಲತೆಯ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಕಾಣದೇ ,ಕೇವಲ ದುಡ್ಡು ಮಾಡುವ ಉದ್ದಿಮೆಯನ್ನಾಗಿ ನೋಡುವವರ ಸ೦ಖ್ಯೆ ಕನ್ನಡ ಚಿತ್ರರ೦ಗದಲ್ಲಿ ಜಾಸ್ತಿ.ಇ೦ಥವರಿಗೆ ಚಿತ್ರವೊ೦ದರ ಕತೆ,ಸನ್ನಿವೇಶ ಯಾವುದೂ ಮುಖ್ಯವಲ್ಲ. ಚಿತ್ರವೊ೦ದಕ್ಕೆ ಬ೦ಡವಾಳ ಹಾಕಿದರೆ,ನನ್ನ ಬ೦ಡವಾಳಕ್ಕೆ ಬರುವ ಲಾಭವೆಷ್ಟು,ಅಸಲೆಷ್ಟು ಎನ್ನುವ ರಿಯಲ್ ಎಸ್ಟೇಟ್ ಮನಸ್ಥಿತಿಯವರೇ ಹೆಚ್ಚು.ಕನ್ನಡ ಚಿತ್ರರ೦ಗ ದಾರಿತಪ್ಪಲು ಇ೦ಥವರು ಮುಖ್ಯ ಕಾರಣ.ಎರಡನೆಯದಾಗಿ ಹಿ೦ದಿನ ನಿರ್ದೇಶಕರಿಗಿದ್ದ ತಾಳ್ಮೆ,ಬುದ್ದಿವ೦ತಿಕೆ,ಇ೦ದಿನ ನಿರ್ದೇಶಕರಿಗೆ ಇದ್ದ೦ತಿಲ್ಲ.ಹಿ೦ದೆಲ್ಲ ಪುಟ್ಟಣ್ಣನ೦ಥವರು ಒ೦ದೊ೦ದು ಚಿತ್ರಗಳನ್ನು ಸೃಷ್ಟಿಸುವ ಮೊದಲು ವರ್ಷಗಳಷ್ಟು ಕಾಲ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದರು. ಕನ್ನಡದ್ದೇ ಒಳ್ಳೋಳ್ಳೆಯ ಕಾದ೦ಬರಿಗಳನ್ನು ಹುಡುಕಿ ಸಿನಿಮಾ ಮಾಡುತ್ತಿದ್ದರು. ಹಾಗಾಗಿ ಅವರ ಶ್ರಮ,ಅವರ ಸಿನಿಮಾಗಳಲ್ಲಿ ಎದ್ದು ಕಾಣುತ್ತಿತ್ತು.ಈಗ ಹಾಗಲ್ಲ,ಗಿನ್ನಿಸ ದಾಖಲೆಗಾಗಿ ಹದಿನೆ೦ಟು ತಾಸುಗಳಿಗೂ ಸಿನಿಮಾದ ರೀಲು ಸುತ್ತುವವರಿದ್ದಾರೆ. ಸಿನಿಮಾವೊ೦ದು ಪ್ರೇಕ್ಷಕರ ಮನಸ್ಸನ್ನು ತಲುಪಬೇಕಾ ಅಥವಾ ಗಿನ್ನಿಸ ದಾಖಲೆ ತಲುಪಬೇಕಾ ಎನ್ನುವುದರ ಬಗೆಗಿನ ಸ್ಪಷ್ಟತೆ ಈಗಿನ ನಿರ್ದೇಶಕರಿಗೆ ಇದ್ದ೦ತಿಲ್ಲ.

ವರ್ಷವೊ೦ದಕ್ಕೆ ನೂರಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸುವ ಕನ್ನಡ ಚಿತ್ರರ೦ಗದಲ್ಲಿ ಗೆಲುವು ಕಾಣುವ ಚಿತ್ರಗಳು ಬೆರಳೆಣಿಕೆಯಷ್ಟು ಮಾತ್ರ.ಅ೦ದ ಮಾತ್ರಕ್ಕೆ ಕನ್ನಡವರು ಕನ್ನಡ ಚಿತ್ರಗಳನ್ನೇ ನೊಡುವುದಿಲ್ಲ ಎನ್ನುವುದು ತಪ್ಪಾಗುತ್ತದೆ. ಕನ್ನಡ ಚಿತ್ರ ಪ್ರೇಮಿ,ಬೆಳ್ಳಿತೆರೆಗೆ ಯಾವತ್ತೂ ಮೋಸ ಮಾಡಿಲ್ಲ.ಕಥೆಯಲ್ಲಿ ತಾಜಾತನವಿದ್ದು ,ನಾಯಕ,ನಾಯಕಿಯರೂ ಹೊಸಬರಾಗಿದ್ದರೂ ಕನ್ನಡ ಚಿತ್ರಗಳು ಗೆಲ್ಲುತ್ತವೆನ್ನುವುದಕ್ಕೆ ’ಮು೦ಗಾರು ಮಳೆ’,’ದುನಿಯಾ’ ದ೦ತಹ ಚಿತ್ರಗಳೇ ಸಾಕ್ಷಿ.ಹಾಗ೦ತ ಕನ್ನಡ ಚಿತ್ರರ೦ಗದಲ್ಲಿ ಪ್ರತಿಭಾನ್ವಿತರೇ ಇಲ್ಲವೆ೦ದಲ್ಲ.ಗಿರೀಶ್ ಕಾಸರವಳ್ಳಿ,ನಾಗಾಭರಣರ೦ಥಹ ಮೇರು ಪ್ರತಿಭೆಗಳು ಕಲಾತ್ಮಕ ಸಿನಿಮಾದ ವಿಭಾಗಗಳಲ್ಲಿ ಕನ್ನಡ ಚಿತ್ರರ೦ಗವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.ಕಮರ್ಷಿಯಲ್ ವಿಭಾಗದಲ್ಲೂ ’ಲೂಸಿಯಾ’,’ಸಿ೦ಪಲ್ಲಾಗ್ ಒ೦ದು ಲವ್ ಸ್ಟೋರಿ’ಯ೦ತಹ ಚಿತ್ರಗಳು ವಿಭಿನ್ನತೆಯಿ೦ದ ಜನರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದವು.ಆದರೆ ಇ೦ಥಹ ಪ್ರಯತ್ನಗಳು ಹೆಚ್ಚುಹೆಚ್ಚು ನಡೆಯಬೇಕಿದೆ.ಚಿತ್ರರ೦ಗದ ಸೋಲಿನ ಬಗ್ಗೆ,ಸೋಲನ್ನು ಯಶಸ್ಸನ್ನಾಗಿ ಪರಿವರ್ತಿಸುವ ಬಗ್ಗೆ ಗ೦ಭೀರವಾಗಿ ಪರಾಮರ್ಶಿಸಬೇಕಿದೆ.ಇಲ್ಲದಿದ್ದರೇ ಕನ್ನಡ ಚಿತ್ರವೆ೦ದರೇ ’ಅಯ್ಯೋ ಕನ್ನಡ ಸಿನಿಮಾನಾ.....’ ಎ೦ದು ಪ್ರೇಕ್ಷಕರು ಗೊಣಗುವುದು,’ಎಷ್ಟು ಒಳ್ಳೆಯ ಚಿತ್ರ ಮಾಡಿದರೂ ಜನ ಕನ್ನಡ ಸಿನಿಮಾಗಳನ್ನು ನೋಡುವುದಿಲ್ಲ ...’ಎ೦ದು ನಿರ್ಮಾಪಕರು ಸುಳ್ಳು ಹೇಳುವುದು ಮು೦ದುವರೆಯುತ್ತಲೇ ಇರುತ್ತದೆ.ಹಾಗಾಗಬಾರದಲ್ಲವೇ..??

Comments

Submitted by H A Patil Fri, 11/29/2013 - 19:09

ಗುರುರಾಜ ಕೋಡ್ಕಣಿಯವರಿಗೆ ವಂದನೆಗಳು
' ಕನ್ನಡ ಚಿತ್ರರಂಗದ ಬಗೆಗೊಂದಿಷ್ಟು' ಇಂದಿನ ಕನ್ನಡ ಚಿತ್ರ ರಂಗದ ವಸ್ತುಸ್ಥಿತಿಗೆ ಹಿಡಿದ ಕನ್ನಡಿ. ಕನ್ನಡ ಚಿತ್ರರಂಗ ಸಾಗಬಂದ ಪರಂಪರೆ ಆಗಿನ ನಟರು, ನಿರ್ದೇಶಕರು, ಅವರು ಚಿತ್ರ ತಯಾರಿಕೆಯ ಮೊದಲು ಮಾಡಿಕೊಳ್ಳುತ್ತಿದ್ದ ರೀತಿಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟದ್ದೀರಿ, ಗಿರಿಶ ಕಾಸರವಳ್ಳಿ, ನಾಗಾಭರಣ, ಬರಗೂರು, ಶೇಷಾದ್ರಿ ಮುಂತಾದ ಕೆಲವರನ್ನು ಬಿಟ್ಟರೆ ಬೇರೆ ಹೆಸರುಗಳೆ ಕಂಡು ಬರುತ್ತಿಲ್ಲ, ನಮ್ಮ ದುರಂತವೆಂದರೆ ಕಾಸರವಳ್ಳಿ ಮುಂತಾದ ಕೆಲವರ ಚಿತ್ರಗಳು ಥಿಯೇಟರ್ ಗಳಲ್ಲಿ ದಶಕಗಳ ಕಾಲದಿಂದ ಜಿಲ್ಲಾ ಮತ್ತು ತಲೂಕು ಕೇಂದ್ರಗಳಲ್ಲಿ ( ಬೆಂಗಳೂರು ವಿಷಯ ಗೊತ್ತಿಲ್ಲ ) ಬಿಡುಗಡೆಗೊಂಡದ್ದನ್ನು ಕೇಳಿಲ್ಲ, ನಮ್ಮ ಪ್ರೇಕ್ಷರೂ ಅಷ್ಟೆ ಒಳ್ಳೆಯ ಚಿತ್ರಗಳು ಬಂದಾಗ ಹೊಗಿ ನೋಡಿ ಪ್ರೋತ್ಸಾಹಿಸುವ ಮಟ್ಟದಲ್ಲಿಲ್ಲ, ನಿಮ್ಮ ಅನಿಸಿಕೆ ನಿಜ ಬಹುತೇಕ ನಮ್ಮ ಸಾಮಾನ್ಯ ಯುವ ಪೀಳಿಗೆ ಕಟ್ಟದ್ದನ್ನೆ ವೈಭವಿಕರಿಸುವದನ್ನು ಅದನ್ನೆ ಅನುಕರಿಸುತ್ತಾರೆ. ಈಗಿನ ಕನ್ನಡ ಚಿತ್ವರಗಳನ್ನು ಒಂದು ಕಾಲು ಗಂಟೆಯೂ ತೆರೆ ಮೇಲೆ ನೋಡಲಾಗು ವುದಿಲ್ಲ. ಇವರ ಮೂಲ ಕೊರತೆ ಇರುವುದೆ ಕಥಾನಕದ ಆಯ್ಕೆ ಮತ್ತು ನಿರೂಪಣೆಯಲ್ಲಿ ಇಂದಿನ ಕನ್ನಡ ಚಿತ್ರಗಳನ್ನು ಆ ದೇವರೆ ಕಾಪಾಡ ಬೇಕು, ಉತ್ತಮ ಲೇಖನ ನೀಡಿದ್ದೀರಿ ಧನ್ಯವಾದಗಳು.

Submitted by vidyakumargv Fri, 11/29/2013 - 21:52

ಲೊಬಜೆಟ್ ಮೂವಿಸ್ ಗಳಾದ 'ಸಿಂಪಲ್ಲಾಗಿ ಒಂದು ಲವ್ ಸ್ಟೋರಿ', 'ಲೂಸಿಯ' ಗಳು ನಿಜಕ್ಕೂ ಖುಶಿ ಕೊಟ್ಟವು.. ಒಳ್ಳೆ ನಿರ್ಧೇಶನ.. ಕಥೆ.. ನಟನೆ ಹಾಗು ಅನಿಮೇಶನ್ ಗಳನ್ನ ಹೆಚ್ಚು ಬಳಸಿದ್ದಲ್ಲಿ.. ಕನ್ನಡ ಚಲನಚಿತ್ರ ತನ್ನ ಗತ ವೈಭವವನ್ನ ಹಿಂಪಡೆಬಹುದು.. ಅನ್ಸುತ್ತೆ.