ಸಾಗರ‌ ಪ್ರವಾಸ‌ : ಇಡುಗುಂಜಿ ಹಾಗು ಅಪ್ಸರಕೊಂಡ‌

ಸಾಗರ‌ ಪ್ರವಾಸ‌ : ಇಡುಗುಂಜಿ ಹಾಗು ಅಪ್ಸರಕೊಂಡ‌

ಚಿತ್ರ

ಸಾಗರ‌ ಪ್ರವಾಸ‌ : ಇಡುಗುಂಜಿ ಹಾಗು ಅಪ್ಸರಕೊಂಡ‌

 

ಆಗಲೆ ಸಂಜೆಯಾಗುತ್ತಿತ್ತು. ಮುರುಡೇಶ್ವರದಿಂದ ಇಡುಗುಂಜಿ ಸುಮಾರು ಮೂವತ್ತು ಕಿ.ಮೀ ಏನೊ, ಇನ್ನೇನು ಒಂದು ಕಿ.ಮಿ, ಅಷ್ಟೆ ಇಡುಗುಂಜಿ ತಲುಪುವೆವು ಅನ್ನುವಾಗ, ವಾಹನದ ಹಿಂಬದಿಯಲ್ಲಿ ಎಂತದೋ ಪಟಪಟ ಎನ್ನುವ ಶಬ್ದ. 
ವಾಹನ ನಿಲ್ಲಿಸಿ ಕೆಳಗಿಳಿದ ಡ್ರೈವರ್, ನಾವು ಇಳಿದೆವು ,
'ಹಿಂದಿನ ಚಕ್ರ ಪಂಚರ್' !!!!!

 
ಇಡುಗುಂಜಿಯ ಗಣಪ :  

ಮತ್ತೇನು ? ಎಲ್ಲರೂ ಇಳಿದೆವು, ಡ್ರೈವರ್ ಚಕ್ರ ಬದಲಿಸಲು ಮುಂದಾದ. ನಾವು  ನಮ್ಮ ಕೈಲಾದ ಎಲ್ಲ ಸಹಾಯವನ್ನು ಅವನಿಗೆ ಮಾಡಿದೆವು. ಅಲ್ಪ ಕಾಲದಲ್ಲಿ ಮತ್ತೆ ಸಿದ್ದ. 

ಎಲ್ಲರೂ ವಾಹನ ಹತ್ತಿ ಇಡುಗುಂಜಿಯತ್ತ ಹೊರಟೆವು. ಬರೀ ಐದೇ ನಿಮಿಷ ದೇವಾಲಯದ ಮುಂದೆ ಇದ್ದೆವು. ಇಳಿಯುವಾಗ ವಯಸ್ಸಾದ ಮುದುಕಿ ಒಬ್ಬಳು ಎಳೆ ಗರಿಕೆಯನ್ನು ದಾರದಲ್ಲಿ ಕಟ್ಟಿ ಮಾರುತ್ತಿದ್ದಳು, ಅದನ್ನು ಪಡೆದು ದೇವಾಲಯದ ಒಳಹೊಕ್ಕೆವು. 

ಇಡುಗುಂಜಿ ಹೊನ್ನಾವರ ತಾಲೋಕಿನ ಚಿಕ್ಕ ಹಳ್ಳಿಯಾಗಿದ್ದು, ಇಲ್ಲಿರುವ ಪುರಾತನ ಗಣಪತಿ ದೇವಾಲಯದಿಂದರ ಪ್ರಸಿದ್ದ. ಬಾಲಕನ ರೂಪದಲ್ಲಿರುವ ನಿಂತಿರುವ ಗಣಪ, ಎರಡು ಕೈ, ಹಾಗು ಚಿಕ್ಕ ಕಾಲುಗಳು, 

ನೋಡಲು  ಸ್ವಲ್ಪ ಗೋಕರ್ಣದ ಗಣಪನ ರೀತಿಯೆ. 

ಗಣೇಶನಿಗೆ ನಮಸ್ಕರಿಸಿ, ಒಂದೆರಡು ನಿಮಿಶ ಕುಳಿತು ಹೊರಬರುವಾಗ, ಡ್ರೈವರ್ ವಾಹನವನ್ನು ಮೊದಲಿನಂತೆ ಪಕ್ಕಾ ಮಾಡಿದ್ದ ಈಗ ಯಾವುದೇ ಶಬ್ಧವೂ ಇಲ್ಲ 

ಮುಂದೆ ಹೊರಟ ಜಾಗ ಅಪ್ಸರಕೊಂಡ ಎಂಬ ಸ್ಥಳ 

ಅಪ್ಸರಕೊಂಡ : 

ಇದು ಹೆಚ್ಚು ಪ್ರಖ್ಯಾತವಾಗಿಲ್ಲದ ಸ್ಥಳ. ಅಲ್ಲಿಗೆ ತಲುಪುವಾಗಲು ನಮಗೆ ಅಲ್ಲಿ ಏನು ಇರಬಹುದೆಂಬ ಕಲ್ಪನೆ ಇಲ್ಲ. 

ಎದುರಿಗೆ ನರಸಿಂಹ ದೇವಾಲಯ ಒಂದು ಇತ್ತು. ಆದರೆ ಅದರ ಒಳಗೆ ಹೋಗದೆ ಎಡಬಾಗದಲ್ಲಿದ್ದ ಸಂದಿಯಂತ ಸ್ಥಳದಲ್ಲಿ ಮುಂದುವರೆದವು. ಕಾಲುದಾರಿ ಕಾಡಿನ ಮದ್ಯೆ. ಬಲಬಾಗಕ್ಕೆ ತಿರುಗಿ , ಕೆಳಗೆ ಇಳಿಯುವಾಗ ಕಾಣಿಸಿತು, ಸಣ್ಣದೊಂದು ಜಲಪಾತ. 
ಅದ್ಭುತ ದೃಶ್ಯ. ಸುತ್ತಲೂ ಮರಗಳಿಂದ ಆವರಿಸಿ, ಇಳಿಜಾರಿನಲ್ಲಿ ದೊಡ್ಡ  ತಗ್ಗುಪ್ರದೇಶ ಒಂದರಲ್ಲಿ ದುಮುಕುತ್ತಿರುವ ಜಲದಾರೆ. ನಿಜಕ್ಕು ಅಪ್ಸರೆಯರು ಬಂದು ಸ್ನಾನಮಾಡಿ ಹೊಗುತ್ತಿರಬಹುದು ಎಂದು ಅನ್ನಿಸುವ ಸ್ಥಳ. ಇಳಿಯಲು ಮೆಟ್ಟಿಲುಗಳು. ಅಲ್ಲಿಯೇ ಇರುವ ಮನಸ್ಸು. ಆದರೆ ಕತ್ತಲಾಗುತ್ತಿರುವ ಅನುಭವ. ಆಯಿತು ಎಂದು ಮೇಲೆ ಬರುತ್ತಿರುವಂತೆ, ಆತುರ ಪಡಿಸುತ್ತ ನಮ್ಮ ಡ್ರೈವರ್ ಮತ್ತು ಗೈಡ್  ಪ್ರಮೋದ ನಮ್ಮನ್ನು ಕಾಲುದಾರಿಯಲ್ಲಿ ಕರೆದುಕೊಂಡುಹೊರಟರು. 
ಎತ್ತರದ ಸ್ಥಳಕ್ಕೆ ಹೋಗುತ್ತಿದ್ದೆವು. ಹತ್ತು ನಿಮಿಶ ನಡೆಯುತ್ತಿರುವಂತೆ,  ತಟ್ಟನೆ ನಮ್ಮ ಮುಂದೆ ಅದ್ಭುತ ಲೋಕವೊಂದು ತೆರೆದುಕೊಂಡಿತು.  ನಮ್ಮ ದಾರಿ ಕೊನೆಯಾಗಿತ್ತು ನಾವು ಗುಡ್ಡಒಂದರ ಮೇಲೆ ಇದ್ದೆವು ಮತ್ತು ಅಲ್ಲಿಂದ ಸುಮಾರು ಒಂದು ಕಿ.ಮೀ ದೂರದಲ್ಲಿ ಸಮುದ್ರ ಗೋಚರಿಸುತ್ತ ಇತ್ತು. ಹಾಗು ಸೂರ್ಯ ಆಗಲೆ ಮುಳುಗಿ ಆಗಿತ್ತು. ಮೈ ನವಿರೇಳಿಸುವ ದೃಷ್ಯ. 
ಗೈಡ್ ನಿರಾಸೆಯಿಂದ ನುಡಿದ
"ಸಾರ್ ಆಗಲೇ ಸೂರ್ಯ ಮುಳುಗಿ ಆಗಿದೆ, ಹತ್ತು ನಿಮಿಶ ಮುಂಚೆ ಬರಬೇಕಿತ್ತು" 
ಅಡ್ಡಿಯಿಲ್ಲ , ಸೂರ್ಯನಿಲ್ಲದೆಯು ಸಮುದ್ರ ನಸುಬೆಳಕಿನಲ್ಲಿ ಸುಂದರವಾಗಿ ಕಾಣುತ್ತಿತ್ತು. ಅಲೆಗಳು ದಡಕ್ಕೆ ಬಡಿಯುತ್ತಿರುವುದು ಅಲ್ಲಿಗೂ ಗೋಚರಿಸುತ್ತ ಇತ್ತು. 
ಹಾಗೆ ನಿಂತುಬಿಡುತ್ತಿದ್ದವೇನೊ, ಆದರೆ ಅವನು ಬಿಡಲಿಲ್ಲ, 
'ಸಾರ್ ಇಷ್ಟು ದೂರ ಬಂದಿರುವೆವು,  ಕೆಳಗೆ ಒಂದು ಪಾರ್ಕ್ ಇದೆ ನೋಡಿ ಹೋಗೋಣಾ' 
ನಮಗೆಲ್ಲ ಅನುಮಾನ ಆಗಲೇ ಕತ್ತಲಾಗುತ್ತ ಬಂದಿದೆ ಮತ್ತೆಂತ ಪಾರ್ಕ್ ಎಂದು,
ಆದರೆ ಅವನು ಬಿಡಲೊಲ್ಲ.ಅವನ ಬಲವಂತಕ್ಕೆ ಸರಿ ಎನ್ನುತ್ತ ಅವನ ಹಿಂದೆ ಹೊರಟೆವು. 
'ಅಯ್ಯೋ ಅದೇನೊ ಗಿಡಗಳ ನಡುವೆ ನಿಂತಿರುವುದು ಹುಲಿಯಾ?"  
ಆತಂಕ ಪಡುವದರಲ್ಲಿ ತಿಳಿಯಿತು ಅಲ್ಲಲ್ಲಿ ಹುಲಿ, ಚಿರತೆ, ಮುಂತಾದ ಬೊಂಬೆಗಳನ್ನು ಮಾಡಿ ನಿಲ್ಲಿಸಿದ್ದಾರೆ ಪೊದೆಗಳ ನಡುವೆ , ಅದು ಕತ್ತಲಲ್ಲಿ ನಿಜವಾದ ಹುಲಿಯೆ ಎಂದು ಭ್ರಮೆ ಮೂಡಿಸುತ್ತಿದೆ. 

ಮತ್ತು ಕೆಳಗೆ ಹೋದಾಗ ಅಲ್ಲಿ ಇದ್ದದ್ದು ಒಂದು 'ಭೂತ ಬಂಗಲೆ' , ಆದರೆ ಯಾರು ಹೆದರಲಿಲ್ಲ ಬಿಡಿ, ಅಲ್ಲಿದ್ದ ಎಲ್ಲರೂ 'ಆಪ್ತಮಿತ್ರ' ಸಿನಿಮಾವನ್ನು ಒಂದಕ್ಕಿಂತ ಜಾಸ್ತಿ ಸರಿ ನೋಡಿದವರೆ. ಸಮಾದಿಯ ಮೇಲೆ ಕುಳಿತು ಫೋಟೊ ತೆಗೆಸಿಕೊಂಡೆವು. ಪೂರ್ಣ ಕತ್ತಲಾವರಿಸಿತು, 
ಹಿಂದಕ್ಕೆ ಹೊರಟಾಗ ನಿಜವಾದ ಸಮಸ್ಯೆ ಎದುರಾಯಿತು. ವನದ ಮಧ್ಯದ ಕಾಲುದಾರಿ. ಯಾರ ಹತ್ತಿರವು ಬ್ಯಾಟರಿ ಸಹ ಇಲ್ಲ. ಬಳಿಯಿಂದ ಮೊಬೈಲ್ ನಿಂದ ಬರುತ್ತಿದ ಬೆಳಕು. ಕತ್ತಲಲ್ಲಿ ಯಾವುದಾದರು ಪ್ರಾಣಿ ಬಂದರೆ ಎನ್ನುವ ಭಯ. ಹಾಗೆ ನಡೆದು ಬಂದು ಮುಂಬಾಗ ತಲುಪಿದೆವು. 
ಅಲ್ಲಿದ್ದ ಉಗ್ರನರಸಿಂಹನ ದೇವಾಲಯದ ಒಳಗೆ ಹೋಗಿ ನಮಸ್ಕರಿಸಿ, ಮತ್ತೆ ಬಂದು ವಾಹನ ಏರಿ ಹೊರಟಿದ್ದು 'ನಮ್ಮ ಮನೆಗೆ' ಎಂದರೆ ಸಾಗರದ ಕಡೆಗೆ. 
ಜೋಗ್ ಮಾರ್ಗವಾಗಿ , ಸುಮಾರು ಎಂಬಂತು ಕಿ.ಮೀ ದೂರ ಕ್ರಮಿಸಿ ಸಾಗರ ತಲುಪುವಾಗ ಆಗಲೇ ರಾತ್ರಿ ಒಂಬತ್ತು ಗಂಟೆ ದಾಟಿತ್ತು. ಮುಖ್ಯರಸ್ತೆಯಲ್ಲಿದ್ದ 'ಪವಿತ್ರ ಹೋಟೆಲ್ ' ಬಳಿ ವಾಹನ ನಿಲ್ಲಿಸಿ ಊಟ ಮುಗಿಸಿ. ನಮ್ಮ ಲಾಡ್ಜ್ ತಲುಪಿದೆವು. 
ಮಲಗಿ ಎರಡೇ ನಿಮಿಶ ಎಲ್ಲರೂ ನಿದ್ದೆಗೆ ವಶ.

ಚಿತ್ರ  : 1 , 2 ಅಪ್ಸರಕೊಂಡ‌,  3  ಚಾಲಕ ಪ್ರಮೋದ್ 

ಮುಂದುವರೆಯುವುದು..

Rating
No votes yet

Comments

Submitted by nageshamysore Wed, 01/29/2014 - 03:50

ಪಾರ್ಥಾ ಸಾರ್, ನೀವು ಇದುವರೆಗೆ ವಿವರಿಸಿದ ಜಾಗಗಳಲ್ಲಿ ಬರಿ ಮುರುಡೇಶ್ವರ, ಇಡಗುಂಜಿ ಮಾತ್ರ ನೋಡಿದ್ದೇನೆ. ಮಿಕ್ಕವುಗಳಿಗೆ ಒಳ್ಳೆ ಐಡಿಯ ಕೊಡುತ್ತಿದೆ ನಿಮ್ಮ ಬರಹ. ಯಾತ್ರೆ ಮುಂದುವರೆಯಲಿ!
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by H A Patil Wed, 01/29/2014 - 19:23

ಪಾರ್ಥ ಸಾರಥಿ ಯವರಿಗೆ ವಂದನೆಗಳು
ತಮ್ಮ ಪ್ರವಾಸ ಕಥನ ಅದ್ಭುತವಾಗಿ ಮೂಡಿ ಬರುತ್ತಿದೆ, ಅಪ್ಸರಕೊಂಡ ಒಂದು ಬಿಟ್ಟು ಉಳಿದೆಲ್ಲವುಗಳ ಹೆಸರು ಕೇಳಿದ್ದೇನೆ ಹಲವನ್ನು ನೋಡಿದ್ದೇನೆ ಕೂಡ. ಆದರೆ ನಿಮ್ಮ ಬರಹ ಓದುತ್ತಿದಂತೆ ಒದುಗನಾದ ನಾನೂ ಸಹ ಅಪ್ಸರಕೊಂಡ ದರ್ಶಿಸಿದ ಅನುಭವವಾಯಿತು. ಸರಳ ಸುಂದರ ಬರವಣಿಗೆ ಧನ್ಯವಾದಗಳು.

Submitted by ಗಣೇಶ Sat, 02/01/2014 - 23:41

ಪಾರ್ಥರೆ, ಇಡುಗುಂಜಿ ಅಲ್ಲ‍ ಇಡಗುಂಜಿ‍. http://www.youtube.com/watch?v=nBz-XTOl7j8
ಅಪ್ಸರಕೊಂಡದ ಬಗ್ಗೆ ಗೊತ್ತಿರಲಿಲ್ಲ.
>>>"ಭೂತ ಬಂಗಲೆ" -ಆದರೆ ಯಾರು ಹೆದರಲಿಲ್ಲ ಬಿಡಿ, ಅಲ್ಲಿದ್ದ ಎಲ್ಲರೂ ಪಾರ್ಥರ ದೆವ್ವದ ಕತೆ ಒಂದಕ್ಕಿಂತ ಜಾಸ್ತಿ ಸರಿ ಓದಿದವರೆ. ಸಮಾಧಿಯ ಮೇಲೆ ಕುಳಿತು ಫೋಟೊ ತೆಗೆಸಿಕೊಂಡೆವು. ಪೂರ್ಣ ಕತ್ತಲಾವರಿಸಿತು, :)

Submitted by nkumar Wed, 02/12/2014 - 17:48

ಅಪ್ಸರಕೊಂಡ ಮಳೆಗಾಲದಲ್ಲೇ ಚಂದ. ಹಾಗೆ ಹತ್ತಿರದ ಯಾಣ ಮತ್ತು ವಿಭೂತಿ ಜಲಪಾತಕ್ಕೆ ಹೋಗಬೇಕಿತ್ತು. ಬಹಳ ಚಂದದ ಸ್ಥಳಗಳು. ಅಪ್ಸರಕೊಂಡ ಬೆಟ್ಟ ಹತ್ತಿದ್ರ? ಬೆಟ್ಟದ ಮೇಲಿನಿಂದ ಸಮುದ್ರದ ದೃಶ್ಯ ನಯನಮನೊಹರವಾಗಿದೆ. ನಾವು ಮಳೆಗಾಲದಲ್ಲಿ ಅಪ್ಸರಕೊಂಡಕ್ಕೆ ಭೇಟಿ ನೀಡಿದಾಗ ತೆಗೆದ ವೀಡಿಯೊ ಇಲ್ಲಿದೆ. ಸಿಕ್ಕಾಪಟ್ಟೆ ಮಳೆ ಕೂಡ: http://www.youtube.com/watch?v=Y3DLGTG-0_w

ವಿಡಿಯೋ ಸುಂದರವಾಗಿದೆ, ನನಗೆ ಮತ್ತೊಮ್ಮೆ ಅಪ್ಸರಕೊಂಡಕ್ಕೆ ಹೋದಂತೆ ಅನ್ನಿಸಿತು ! ನಾವಲ್ಲಿ ಹೋದಾಗ‌ ಸೂರ್ಯಾಸ್ತದ‌ ಸಮಯ‌!