ಜೀವನ ಸಂಧ್ಯಾಕಾಲ -1

ಜೀವನ ಸಂಧ್ಯಾಕಾಲ -1

ಅರ್ಧ ಜೀವನವ ನಿದ್ದೆಯಲಿ ಕಳೆವೆ

ಬಾಲ್ಯ ಮುಪ್ಪಿನಲಿ ಕಾಲುಭಾಗವ ಕಳೆಯೆ|

ಕಷ್ಟ ಕೋಟಲೆ ಕಾಲೆ ಉದರಭರಣೆಗೆ

ಕಳೆದುಳಿವ ಬಾಳಿನಲಿ ತಿರುಳಿರಲಿ ಮೂಢ||

   ವಿಚಿತ್ರವೆನಿಸಿದರೂ ಸರಿಸುಮಾರು ಸರಿಯಾದ ಲೆಕ್ಕವಿದು. ಈ ಲೆಕ್ಕಾಚಾರದಲ್ಲಿ ನಾವು ನಿಜವಾಗಿ ಬದುಕುವುದೆಷ್ಟು ಎಂಬುದು ವಿಚಾರ ಮಾಡಬೇಕಾದ ಸಂಗತಿಯೇ ಆಗಿದೆ. ಹುಡುಗಾಟದ ಬಾಲ್ಯ ಕಳೆದು, ಜವಾಬ್ದಾರಿಯ ಜೀವನ ಪ್ರಾರಂಭಿಸಿ ಮಾಡುವ ಹೋರಾಟ, ಹಾರಾಟಗಳಲ್ಲಿ ಹೈರಾಣಾಗಿ ಒಂದು ಸ್ಥಿತಿಗೆ ಬಂದೆವು ಅನ್ನುವಷ್ಟರಲ್ಲಿ ಮುಪ್ಪು ಬಂದುಬಿಡುತ್ತದೆ. ಇಳಿವಯಸ್ಸು ತನ್ನ ವಧುವನ್ನು ಹುಡುಕಿಕೊಂಡು ಬಂದಾಗ ಅಡಗಿಕೊಳ್ಳಲು, ಅದರಿಂದ ತಪ್ಪಿಸಿಕೊಳ್ಳಲು ಈ ಪ್ರಪಂಚದಲ್ಲಿ ಸ್ಥಳವೇ ಇಲ್ಲ. ಹೇಗೆ ಬದುಕಬೇಕು, ಹೇಗೆ ಸಾಯಬೇಕು ಎಂಬುದಕ್ಕೆ ತರಬೇತಿ ಕೊಡುವವರಿದ್ದಾರೆ. ಅದರಂತೆ, ಹೇಗೆ ಇಳಿವಯಸ್ಸನ್ನು ಎದುರಿಸಬೇಕೆಂಬುದಕ್ಕೆ ತರಬೇತಿ ಕೊಡುವ ಶಾಲೆಗಳೂ ಬರಬೇಕಿದೆ. ಮಾನಸಿಕ ಮುಪ್ಪು ಮತ್ತು ದೈಹಿಕ ಮುಪ್ಪು, ಈ ಎರಡು ರೀತಿಯ ಮುಪ್ಪುಗಳ ಪರಿಣಾಮ ವೈಯಕ್ತಿಕ ಜೀವನದ ಮೇಲೆ ಬೀರದೇ ಇರುವುದಿಲ್ಲ. ಒಂದು ರೀತಿಯಲ್ಲಿ ನೋಡಿದರೆ ತಮ್ಮ ಅದುವರೆಗಿನ ಕಾರ್ಯಗಳ, ಕರ್ಮಗಳ ಫಲ ಅನುಭವಿಸುವ ಕಾಲವದು. ಜೊತೆಜೊತೆಗೆ, ಇನ್ನು ಹೆಚ್ಚು ಸಮಯವಿಲ್ಲ, ಮಾಡಬೇಕೆಂದಿರುವ, ಮಾಡದೇ ಉಳಿದಿರುವ ಕೆಲಸಗಳನ್ನು ಬೇಗ ಮುಗಿಸಿಬಿಡಬೇಕು ಎಂಬ ಭಾವ ಜಾಗೃತವಾಗುವ ಸಮಯ. ಬೇಡವೆಂದರೆ ಮುಪ್ಪು ಬರದಿದ್ದೀತೆ? ಈ ಅನಿವಾರ್ಯತೆಯನ್ನು ಆನಂದದಿಂದ ಅನುಭವಿಸುವ, ಇದ್ದುದನ್ನು ಇದ್ದಂತೆ, ಬರುವುದನ್ನು ಬಂದಂತೆ ಸ್ವೀಕರಿಸುವ ಮನೋಭಾವ ತಾಪವನ್ನು ಕಡಿಮೆ ಮಾಡುವ ರಾಮಬಾಣ. ಮುಪ್ಪನ್ನು ಯಶಸ್ವಿಯಾಗಿ ಎದುರಿಸುವ ಇನ್ನೊಂದು ವಿಧಾನವೆಂದರೆ ಏಕಾಂತದೊಂದಿಗೆ ಒಂದು ಗೌರವಾನ್ವಿತ ಒಪ್ಪಂದವನ್ನು ಮಾಡಿಕೊಳ್ಳುವುದು. ಮುಪ್ಪು - ಇದು ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು. ಎರಡು ಮಗ್ಗಲುಗಳ ಕಡೆಗೂ ದೃಷ್ಟಿ ಹಾಯಿಸೋಣ. 

     ಮುಪ್ಪು ಬಂದಾಗ ಸಾಮಾನ್ಯವಾಗಿ ಸಾವಿನ ಪ್ರಜ್ಞೆ ಜಾಗೃತವಾಗುತ್ತದೆ. ತಲೆ ನರೆಯುತ್ತದೆ ಅಥವ ಬೋಳಾಗತೊಡಗುತ್ತದೆ, ಹಲ್ಲುಗಳು ಉದುರಲು ಆರಂಭವಾಗುತ್ತವೆ, ಕಿವಿ ಮಂದವಾಗುತ್ತದೆ, ಶರೀರ ಕುಗ್ಗಲು ತೊಡಗುತ್ತದೆ, ದೃಷ್ಟಿ ಮಸುಕಾಗತೊಡಗುತ್ತದೆ, ರೋಗಗಳು, ಕೀಲುಗಳ ನೋವು ಬಾಧಿಸತೊಡಗುತ್ತದೆ. ಅದುವರೆವಿಗೆ ರಾಜನಂತೆ ಮೆರೆದವರಿಗೆ ಇನ್ನೊಬ್ಬರ ಆಶ್ರಯ ಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಅವರ ಪ್ರಾಮುಖ್ಯವೂ ಕಡಿಮೆಯಾಗುತ್ತಾ ಹೋಗುತ್ತದೆ. ಕೇವಲ ಕರ್ತವ್ಯ ಅಥವ ಪ್ರೀತಿಯ ಕಾರಣದಿಂದ ಅವರನ್ನು ನೋಡಿಕೊಂಡರೂ ಅವರಿಗೆ ಪ್ರಾಶಸ್ತ್ಯ ಕೊಡುವುದಿಲ್ಲ. ಈ ಸ್ಥಿತಿಗೆ ಮಾನಸಿಕವಾಗಿ ಸಿದ್ಧರಿರದವರ ಪಾಡು ಶೋಚನೀಯವಾಗುತ್ತದೆ. ಯುವಕರು ಕಷ್ಟಗಳನ್ನು ಎದುರಿಸುತ್ತಾರೆ, ಆದರೆ ವೃದ್ಧಾಪ್ಯದಲ್ಲಿ ಕಷ್ಟಗಳೇ ಅವರನ್ನು ಎದುರಿಸುತ್ತವೆ. ಕೈಕಾಲುಗಳು ಗಟ್ಟಿಯಾಗಿದ್ದಾಗ ಬದುಕಿನ ಅರ್ಥ ತಿಳಿಯದಿದ್ದವರಿಗೆ ಯೌವನ ಮುಕ್ಕಾಗಿ, ಗೆಳೆಯರು, ಬಂಧುಗಳು ದೂರವಾಗಿ, ನಿಂದೆ, ಮೂದಲಿಕೆಗಳನ್ನು ಎದುರಿಸಬೇಕಾಗಿ ಬಂದಾಗ ಅರ್ಥ ಗೊತ್ತಾದರೂ ಪ್ರಯೋಜನವಿರುವುದಿಲ್ಲ. ಮುಪ್ಪಿನ ದಾರುಣ ಸ್ಥಿತಿಯೆಂದರೆ, ವೃದ್ಧರು ಸ್ವತಃ ತಮ್ಮನ್ನು ತಾವು ಉಪಯೋಗವಿಲ್ಲದವರು, ಯಾರಿಗೂ ಪ್ರಯೋಜನಕ್ಕೆ ಬಾರದವರು, ತಮ್ಮನ್ನು ಯಾರೂ ಇಷ್ಟಪಡುವುದಿಲ್ಲ ಎಂದುಕೊಳ್ಳುವುದೇ ಆಗಿದೆ. ಆದರೆ ಸಂತೋಷವಾಗಿರುವ ಗುಟ್ಟೆಂದರೆ ಸದಾ ಚಟುವಟಿಕೆಯಿಂದಿರುವುದು, ಜೀವನದಲ್ಲಿ ಆಸಕ್ತಿ ಹೊಂದಿರುವುದು, ಸಾಧ್ಯವಿರುವಷ್ಟು ಇನ್ನೊಬ್ಬರಿಗೆ ಪ್ರಯೋಜನಕಾರಿಯಾಗಿರುವುದು. ವಯಸ್ಸು ಅನ್ನುವುದು ಸಂಗತಿಯ ಬಗ್ಗೆ ಮನಸ್ಸಿನ ಸ್ಥಿತಿಯಾಗಿದೆ. ಅದನ್ನು ಲೆಕ್ಕಿಸದಿದ್ದರೆ ಅದು ಸಂಗತಿಯೇ ಅಲ್ಲ. ಯಾರೇ ಆಗಲಿ, ಆಸಕ್ತಿಯನ್ನು ಕಳೆದುಕೊಂಡರೆ, ಅವರು ಇಪ್ಪತ್ತು ವರ್ಷದವರಾಗಲೀ, ಎಂಭತ್ತು ವರ್ಷದವರಾಗಲೀ, ಮುದುಕರೇ. ಆಸಕ್ತಿ ಇರುವವರು ಎಷ್ಟೇ ವಯಸ್ಸಿನವರಾಗಿರಲಿ, ಅವರು ಯುವಕರೇ! ಬದುಕಿನ ಅರ್ಥ ತಿಳಿದವರು ವೃದ್ಧಾಪ್ಯದಲ್ಲಿ ಹೊಗಳಿಕೆಗೆ ಉಬ್ಬದೆ, ತೆಗಳಿಕೆ, ಮೂದಲಿಕೆಗಳಿಗೆ ಕುಗ್ಗದೆ ಇರುವ ಮನೋಸ್ಥಿತಿಗೆ ತಲುಪಿರುತ್ತಾರೆ. 

     ಇನ್ನೊಂದು ರೀತಿಯ ಜನರೂ ಇರುತ್ತಾರೆ. ದೇಹಕ್ಕೆ ಮುಪ್ಪಡರಿದರೂ ಅವರ ತೀರದ ಆಸೆಗೆ ಮುಪ್ಪು ಬರುವುದೇ ಇಲ್ಲ. ತಮಾಷೆಯ ಈ ಪ್ರಸಂಗ ನೋಡಿ. ಒಮ್ಮೆ ಗೋಂದಾವಲೀ ಮಹಾರಾಜರು ಭಕ್ತರೊಬ್ಬರ ಮನೆಗೆ ಹೋಗಿದ್ದಾಗ, ಆ ಮನೆಯಲ್ಲಿದ್ದ ಸುಮಾರು ೯೦ ವರ್ಷದ ವೃದ್ಧೆ ಅವರನ್ನು ಉದ್ದೇಶಿಸಿ, "ಗುರುಗಳೇ, ನನಗೆ ನಿಮ್ಮ ಪಾದದ ಅಡಿಯಲ್ಲಿ ತಲೆಯಿಟ್ಟು ಸಾಯಬೇಕು ಎಂಬುದೊಂದೇ ಆಸೆ" ಅಂದಳಂತೆ. ಗುರುಗಳು ತಕ್ಷಣ ಪದಾಸನ ಹಾಕಿ ಕುಳಿತು, "ಅದಕ್ಕೇನಂತೆ, ಹಾಗೇ ಮಾಡಿ" ಅಂದರು. ಆ ವೃದ್ಧೆ ಗಾಬರಿಯಾಗಿ, "ಈಗಲೇ ಅಲ್ಲ ಗುರುಗಳೇ, ನನ್ನ ಮೊಮ್ಮಗಳ ಮದುವೆ ಆಗಬೇಕು. ಅವಳ ಮಗುವಿನ ನಾಮಕರಣ ನೋಡಿಕೊಂಡು ಸಾಯುತ್ತೇನೆ" ಎಂದಳಂತೆ. ಇಂತಹುದೇ ಇನ್ನೊಂದು ತಮಾಷೆಯ ಪ್ರಸಂಗ. ಒಮ್ಮೆ ಹಿರಿಯರೊಬ್ಬರು ಇನ್ನೇನು ಸಾವಿನ ಸಮೀಪವಿದ್ದಾರೆ ಎನ್ನುವ ಸ್ಥಿತಿಯಲ್ಲಿದ್ದಾಗ ಅವರ ಮಕ್ಕಳೆಲ್ಲಾ ಅವರ ಬಳಿಗೆ ಧಾವಿಸಿಬಂದರು. ಹಿರಿಯ ಮಗನನ್ನು ಕಂಡ ಆ ವೃದ್ಧ ಏನನ್ನೋ ಹೇಳಲು ಚಡಪಡಿಸಿದರೂ ಮಾತು ಹೊರಡುತ್ತಿರಲಿಲ್ಲ. ಅವರು ಯಾವುದೋ ಸಂಪತ್ತು, ಆಸ್ತಿಯ ಬಗ್ಗೆ ಏನೋ ಹೇಳಹೊರಟಿದ್ದಾರೆ ಎಂಬ ಅನುಮಾನ ಮಕ್ಕಳಿಗೆ. ಎಲ್ಲರಿಗೂ ಅದೇನೆಂದು ತಿಳಿಯುವ ಕುತೂಹಲ. ವೈದ್ಯರ ಹರಪ್ರಯತ್ನದಿಂದ ಕೊನೆಗೂ ಹಿರಿಯ ಮಗನಿಗೆ ಆ ವೃದ್ಧರು ಹೇಳಿದ್ದಿಷ್ಟು, "ಇಷ್ಟು ಬೇಗ ಏಕೆ ಅಂಗಡಿ ಬಾಗಿಲು ಹಾಕಿಕೊಂಡು ಬಂದೆ?" ಇದನ್ನು ಹೇಳಿದವರೇ ಶಾಶ್ವತವಾಗಿ ಕಣ್ಣು ಮುಚ್ಚಿದ್ದರು.

ದಿನಗಳುರುಳುವುವು ಅಂತೆ ಮನುಜನಾಯುವು

ಶಾಶ್ವತನು ತಾನೆಂಬ ಭ್ರಮೆಯು ಮುಸುಕಿಹುದು |

ಚದುರಂಗದ ರಾಜ ಮಂತ್ರಿ ರಥ ಕುದುರೆ ಕಾಲಾಳು

ಆಟದಂತ್ಯದಲಿ ಎಲ್ಲರೂ ಒಂದೆ ಮೂಢ || 

     ಮುಪ್ಪು ಯಾವಾಗ ಪ್ರಾರಂಭವಾಗುತ್ತದೆ? ಯಾವಾಗ ತಮ್ಮ ನಿಜವಾದ ವಯಸ್ಸನ್ನು ಮುಚ್ಚಿಡಲು ಪ್ರಾರಂಭಿಸುತ್ತಾರೋ ಆಗ ಮುಪ್ಪು ಕಾಲಿಡಲು ಪ್ರಾರಂಭಿಸಿದೆ ಎನ್ನಬಹುದು. ಮುಂದೆ ಹೇಳುವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಗಂಡಸರಿಗೆ ಸಾಮಾನ್ಯವಾಗಿ ೩೦ ಮತ್ತು ಹೆಂಗಸರಿಗೆ ಇನ್ನೂ ಮುಂಚೆಯೇ ಮುಪ್ಪು ಪ್ರಾರಂಭವಾಗುತ್ತದೆ, ಏಕೆಂದರೆ ಆಗ ಅವರು ತಮ್ಮ ನಿಜವಾದ ವಯಸ್ಸಿಗಿಂತ ಕಡಿಮೆ ವಯಸ್ಸು ಹೇಳಿಕೊಳ್ಳಲು, ತಾವಿನ್ನೂ ಚಿಕ್ಕವರು ಎಂದು ತೋರಿಸಿಕೊಳ್ಳಲು ಇಷ್ಟಪಡುವ ಅವಧಿಯದು. ಇದನ್ನು ಮುಕ್ತಾಯದ ಆರಂಭವೆನ್ನೋಣವೇ? ಬುದ್ಧಿವಂತ ಗಂಡ ಹೆಂಡತಿಯ ವಯಸ್ಸನ್ನು ಮರೆತು ಅವಳ ಜನ್ಮದಿನಾಂಕವನ್ನು ಮಾತ್ರ ನೆನಪಿಟ್ಟುಕೊಂಡಿರುತ್ತಾನಂತೆ. ಕಾಲ ಸರಿದಂತೆ ವಯಸ್ಸು ಹೆಚ್ಚುತ್ತಾ ಹೋಗುವುದು ಮತ್ತು ಹುಟ್ಟಿದವರೆಲ್ಲರೂ ಸಾಯುವರು ಎಂಬ ಸಾಮಾನ್ಯ ಅರಿವನ್ನೂ ಮರೆಸುವಂತೆ ಮಾಡುವ ಆ ಮಾಯೆಯ ಮಹಿಮೆ ಅಪಾರವೇ ಸರಿ. ವಯಸ್ಸಾದವರು ತಮಗೆ ಇನ್ನೂ ಸಾವು ಏಕೆ ಬರಲಿಲ್ಲವೆಂದು ಅಲವತ್ತುಕೊಳ್ಳುವುದನ್ನು ಕಾಣುತ್ತೇವೆ, ಇದು ವೃದ್ಧಾಪ್ಯದ ಕಾರಣದಿಂದ ಕಷ್ಟಪಡುವಾಗ ಆಡುವ ಮಾತಷ್ಟೇ ಆಗಿದೆ. ಸಾವು ನಿಜಕ್ಕೂ ಸನಿಹಕ್ಕೆ ಬಂದಾಗ ಅವರು ಸಾಯಲು ಬಯಸುವುದೇ ಇಲ್ಲ ಮತ್ತು ಮುಪ್ಪು ಅವರಿಗೆ ಹೊರೆ ಅನ್ನಿಸುವುದಿಲ್ಲ.

     ಮುಪ್ಪಿನ ಕಾಲದ ಕಟು ವಾಸ್ತವತೆ, ಮುಪ್ಪು ಕುರಿತು ಹಿರಿಯರು ಮತ್ತು ಕಿರಿಯರ ದೃಷ್ಟಿಕೋನ ಹೇಗಿರಬೇಕು ಎಂಬ ಬಗ್ಗೆ ದೃಷ್ಟಿ ಹರಿಸಿದರೆ ಕಂಡು ಬರುವುದು ನಿರಾಶಾದಾಯಕ ಚಿತ್ರಣವೇ. ಈ ಉದಾಹರಣೆ ನೋಡಿ: ಅವರೊಬ್ಬರು ಆಗರ್ಭ ಶ್ರೀಮಂತರು. ಮಕ್ಕಳಿಬ್ಬರೂ ತಮ್ಮ ಸಂಸಾರದೊಂದಿಗೆ ಅಮೆರಿಕೆಯಲ್ಲಿದ್ದಾರೆ. ಪತಿ ತೀರಿದ ನಂತರ ಒಂಟಿಯಾದ ವೃದ್ಧೆ ವೃದ್ಧಾಶ್ರಮ ಸೇರಿದ್ದಾರೆ. ವೃದ್ಧಾಶ್ರಮದ ಕಟ್ಟಡಕ್ಕೆ ಆಕೆಯೇ ಉದಾರ ನೆರವು ನೀಡಿದ್ದಾರೆ. ಅವರ ಮಕ್ಕಳೂ ನಿಯತವಾಗಿ ಸಾಕಷ್ಟು ಹಣ ಕಳಿಸುತ್ತಾರೆ. ದೂರವಾಣಿಯಲ್ಲಿ ಮಾತನಾಡುತ್ತಾರೆ. ಆದರೆ, ಅವರು ನೆಮ್ಮದಿಯಿಂದ ಇದ್ದಾರೆಯೇ? ವೃದ್ಧಾಶ್ರಮದಲ್ಲಿ ಕಂಡು ಬರುವ ವೃದ್ಧ, ವೃದ್ಧೆಯರದು ಒಬ್ಬೊಬ್ಬರದು ಒಂದೊಂದು ರೀತಿಯ ಕಥೆ. ಮಕ್ಕಳು, ಸೊಸೆಯಂದಿರನ್ನು ದೂಷಿಸುವವರು, ಇದ್ದುದೆಲ್ಲವನ್ನೂ ಕಿತ್ತುಕೊಂಡು ಹೊರದೂಡಲ್ಪಟ್ಟವರು, ನೋಡಿಕೊಳ್ಳುವವರು ಯಾರೂ ಇಲ್ಲದವರು, ಅವಮಾನ ಸಹಿಸದೆ ಹೊರಬಂದವರು, ಹೀಗೆ ಹತ್ತು ಹಲವು ಕಾರಣಗಳು ಸಿಗುತ್ತವೆ. ನೋವು, ನಲಿವುಗಳನ್ನು ಹೇಳಿಕೊಳ್ಳದೆ ಮೌನವಾಗಿ ಸಹಿಸಿಕೊಂಡಿರುವವರು, ಕಾಯಿಲೆಗಳಿಂದ ಜರ್ಜರಿತರಾಗಿ ನರಳುವವರು, ನಿರ್ಲಿಪ್ತತೆ ಬೆಳೆಸಿಕೊಂಡವರು, ಕಣ್ಣುಗಳಲ್ಲಿ ಶೂನ್ಯ ನೋಟ ತುಂಬಿಕೊಂಡಿರುವವರು, ಕಳೆದ ತಿಂಗಳು ಇಷ್ಟು ಜನರು ಜೀವನಯಾತ್ರೆ ಅಂತ್ಯಗೊಳಿಸಿದರು, ನಮ್ಮ ಸರದಿ ಸದ್ಯದಲ್ಲೇ ಬರಲಿದೆ ಎಂಬ ಅರಿವಿರುವವರು, ಕಿರಿಕಿರಿಯ ಮನೋಭಾವದಿಂದ ಕುಟುಂಬದವರ ಕೆಂಗಣ್ಣಿಗೆ ಗುರಿಯಾದವರು, ಮುಂತಾದವರು ವೃದ್ಧಾಶ್ರಮಗಳಲ್ಲಿ ಕಾಣಸಿಗುತ್ತಾರೆ. ಹೆಚ್ಚಿನವರಿಗೆ ಸರ್ಕಾರದಿಂದ ಬರುವ ವೃದ್ಧಾಪ್ಯ ವೇತನ, ವಿಧವಾ ವೇತನಗಳು ಬರುತ್ತಿರುತ್ತವೆ. [ಮಕ್ಕಳೇ ತಮ್ಮ ತಂದೆ, ತಾಯಿಯರಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಮುಂತಾದ ಸವಲತ್ತುಗಳನ್ನು ಮಾಡಿಸಿಕೊಡಲು ಓಡಾಡುವುದನ್ನು ನನ್ನ ಸೇವಾವಧಿಯಲ್ಲಿ ಕಂಡಿದ್ದೇನೆ. ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಿಲ್ಲವೆಂದು ಛಾಪಾ ಕಾಗದದಲ್ಲಿ ಮುಚ್ಚಳಿಕೆ ಬರೆದುಕೊಟ್ಟರೆ ಅವರಿಗೆ ವೇತನ ಮಂಜೂರು ಮಾಡದಿರಲು ಸಾಧ್ಯವೇ? ಸಂಧ್ಯಾಸುರಕ್ಷಾ ವೇತನ ಪಡೆಯುವವರು ಕಾರಿನಲ್ಲಿ ಓಡಾಡುವುದನ್ನೂ ಕಂಡಿದ್ದೇನೆ]. ಸ್ಟೇಡಿಯಮ್ಮಿನ ಕಟ್ಟೆಯಲ್ಲಿ, ಪಾರ್ಕುಗಳ ಬೆಂಚುಗಳಲ್ಲಿ ನಿವೃತ್ತರು, ವಯಸ್ಸಾದವರು ಕುಳಿತು ತಮ್ಮ ಗೋಳನ್ನು, ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಾ, ಇತರರನ್ನು ಶಪಿಸುತ್ತಾ, 'ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ' ಎನ್ನುವವರ ಗುಂಪು ಸಾಮಾನ್ಯವಾಗಿ ಕಂಡುಬರುತ್ತದೆ.

ವೃದ್ಧಾಪ್ಯ ಮುಸುಕಿರಲು ದಂತಗಳುದುರಿರಲು

ಕಿವಿಯು ಕೇಳದಿರೆ ನೋಟ ಮಸುಕಾಗಿರಲು|

ತನುವು ಕುಗ್ಗಿರಲು ಯಾರು ಗಣಿಸುವರು ನಿನ್ನ

ಜಯವಿರುವವರೆಗೆ ಭಯವಿಲ್ಲ ಮೂಢ||

     ವಯಸ್ಸಾದ ದೇಹ ಒಂದು ಹಳೆಯ ಹಾಳಾದ ವಾದ್ಯದಂತೆ. ಅದರ ಒಳಗಿನ ಆತ್ಮ ಅದರಿಂದ ಯೌವನದ ಸುಂದರ ಸ್ವರಗಳನ್ನು ಹೊರಡಿಸಲು ಪ್ರಯತ್ನಿಸುತ್ತದೆ. ಆದರೆ ಎಂತಹ ಉತ್ತಮ ಸಂಗೀತಗಾರನೂ ಅಂತಹ ವಾದ್ಯದಿಂದ ಮಧುರ ನಾದ ಹೊರಡಿಸಲಾರ. ಆ ಕಿತ್ತ ತಂತಿಗಳ ವಾದ್ಯ ನುರಿತ ಸಂಗೀತಕಾರನ ಆದೇಶವನ್ನೂ ಪಾಲಿಸುವುದಿಲ್ಲ. 'ಶೀರ್ಯತೇ ಇತಿ ಶರೀರಮ್'-ಜೀರ್ಣವಾಗುವ ಗುಣವಿರುವುದರಿಂದಲೇ ಇದಕ್ಕೆ ಶರೀರವೆನ್ನುತ್ತಾರೆ. ಹಿರಿಯರೊಬ್ಬರು ಕೊಟ್ಟ ವಿವರದಂತೆ, ರಾಜ ಭರ್ತೃಹರಿಯ ಕವಿವಾಕ್ಯದಲ್ಲಿ ವೃದ್ಧಾಪ್ಯದ ವರ್ಣನೆ ಈ ರೀತಿ ಇದೆ: 'ಗಾತ್ರಂ ಸಂಕುಚಿತಂ (ಶರೀರ ಕುಗ್ಗುವುದು), ಗತಿರ್ವಿಗಲಿತಾ (ನಡಿಗೆ ಕುಂಠಿತವಾಗುವುದು), ಭ್ರಷ್ಠಾಚ ದಂತಾವರೀ (ಹಲ್ಲಿನ ಸಾಲು ಕಳಚುವುದು), ದೃಷ್ಟಿರ್ನಶ್ಯತಿ (ನೋಟ ನಾಶವಾಗುವುದು), ವರ್ಧತೇ ಬಧಿರತಾ (ಕಿವುಡುತನ ಹೆಚ್ಚುವುದು), ವಕ್ತಚ ಲಾಲಾಯತೆ (ಬಾಯಲ್ಲಿ ಜೊಲ್ಲು ಸುರಿಯುವುದು), ವಾಕ್ಯಂ ನಾದ್ರೀಯತೇ ಚ ಬಾಂಧವಂ (ಬಂಧುಗಳು ಮಾತನ್ನು ಆದರಿಸರು), ಭಾರ್ಯಾ ನ ಶುಶ್ರೂಷತೇ (ಪತ್ನಿ ಶುಶ್ರೂಷೆ ಮಾಡುವುದಿಲ್ಲ), ಹಾ ಕಷ್ಟಂ ಪುರುಷಸ್ಯ ಜೀರ್ಣವಯಸಃ ಪುತ್ರೋಪ್ಯವಜ್ಞಾಯತೇ (ಅಯ್ಯೋ ಕಷ್ಟ, ಇಳಿ ವಯಸ್ಸಿನಲ್ಲಿ ಪುತ್ರನೂ ಕಡೆಗಣಿಸುತ್ತಾನೆ). ಹಿರಿಯರನ್ನು ಆದರಿಸದಿರುವ ರೀತಿ ಇಂದಿನ ಕಾಲದ ಸಮಸ್ಯೆಯಲ್ಲ, ಹಿಂದಿನಿಂದಲೂ ಇದೆ. ಇದಕ್ಕೆ ಕಾಲವನ್ನು ದೂಷಿಸುವಂತಿಲ್ಲ, ದೂಷಿಸಬೇಕಾಗಿರುವುದು, ಸರಿಪಡಿಸಬೇಕಾಗಿರುವುದು ಇದಕ್ಕೆ ಕಾರಣವಾದ ಸಂಗತಿಗಳನ್ನು ಎಂದು ಅರಿತರೆ ಒಳಿತು.

     ಜೀವನದ ಸಂಧ್ಯಾಕಾಲದಲ್ಲಿರುವವರ ದುಸ್ಥಿತಿಗೆ ಭೋಗವಾದ, ಭೌತಿಕವಾದ, ಉತ್ತಮ ಸಂಸ್ಕಾರಯುತ ಶಿಕ್ಷಣದ ಕೊರತೆ, ಇಂದಿನ ಮೌಲ್ಯ ರಹಿತ ಆಡಳಿತ ವ್ಯವಸ್ಥೆ ತಮ್ಮ ಕಾಣಿಕೆ ನೀಡಿವೆ. ಹಿಂದಿನ ಸಂಸ್ಕಾರಯುತ ಜೀವನ ಮತ್ತು ಶಿಕ್ಷಣ ಪದ್ಧತಿಯನ್ನು ಬದಲಿಸಿ ಗುಮಾಸ್ತರ ಸೈನ್ಯವನ್ನು ಸೃಷ್ಟಿಸುವ ಶಿಕ್ಷಣ ಪದ್ಧತಿ ಜಾರಿಗೆ ತಂದರೆ, ಇಂಗ್ಲಿಷ್ ಕಲಿತರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವೆಂಬ ಮನೋಭಾವ ಬೆಳೆಸಿದರೆ ಕರಿಚರ್ಮದ ಬ್ರಿಟಿಷರು ತಯಾರಾಗುತ್ತಾರೆ ಎಂಬ ಲಾರ್ಡ್ ಮೆಕಾಲೆಯ ಮಾತು ಸಾಕಾರವಾಗಿಬಿಟ್ಟಿದೆ. ಸುಮಾರು ನಾಲ್ಕು ಶತಮಾನಗಳ ಕಾಲ ಬ್ರಿಟಿಷರ ದಾಸ್ಯದಲ್ಲಿದ್ದ ಜನಾಂಗ ಇನ್ನೂ ಅವರು ಬೇರೂರಿಸಿರುವ ಮಾನಸಿಕ ದಾಸ್ಯದಲ್ಲೇ ತೊಳಲಾಡುತ್ತಿರುವುದು ದುರ್ದೈವದ ಸಂಗತಿ. ಭೋಗವಾದದ ದಾಸರಾಗಿ ಸಂಸ್ಕೃತಿ ಮರೆತ ಪಶುಗಳಂತೆ ವರ್ತಿಸುವುದು ಈಗ ಸಾಮಾನ್ಯವಾಗಿದೆ. ಸಾಫ್ಟ್ ವೇರ್ ಇಂಜನಿಯರ್ ಒಬ್ಬ ತನ್ನ ತಾಯಿಗೆ ಹಣ ಕಳುಹಿಸಿದ್ದನ್ನು ಆಕ್ಷೇಪಿಸಿ ಜಗಳವಾಡಿದ ಪತ್ನಿಯ (ಆಕೆಯೂ ಸಾಫ್ಟ್ ವೇರ್ ಇಂಜನಿಯರ್) ನಡವಳಿಕೆಯಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಈಚೆಗೆ ಓದಿದ್ದೆ. ನಿವೃತ್ತಿ ಅಂಚಿನಲ್ಲಿದ್ದ ಸರ್ಕಾರಿ ನೌಕರರನ್ನು ಹೆಂಡತಿ, ಮಕ್ಕಳೇ ಸೇರಿಕೊಂಡು ಕೊಂದು ಅನುಕಂಪದ ಆಧಾರದಲ್ಲಿ ನೌಕರಿಯನ್ನು ಗಿಟ್ಟಿಸಿಕೊಂಡಿರುವ, ಪಿಂಚಣಿ ಮತ್ತು ಇತರ ಸವಲತ್ತುಗಳನ್ನು ಪಡೆದಿರುವ ಉದಾಹರಣೆಗಳಿಗೆ ಕೊರತೆಯಿಲ್ಲ. ತಂದೆಯನ್ನೇ ತನ್ನ ಸ್ನೇಹಿತನ ಸಹಾಯದಿಂದ ಕೊಂದು ಅನುಕಂಪದ ಆಧಾರದಲ್ಲಿ ಗ್ರಾಮಲೆಕ್ಕಿಗನ ನೌಕರಿ ಪಡೆದಿದ್ದವನೊಬ್ಬನನ್ನು, ಕೊಲೆಗೆ ಸಹಕರಿಸಿದ ಅವನ ಸ್ನೇಹಿತನೇ ನಂತರದಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ವಸೂಲು ಮಾಡತೊಡಗಿದಾಗ ಬೇಸತ್ತು ಸ್ನೇಹಿತನನ್ನೂ ಕೊಂದ ಆರೋಪ ಹೊತ್ತು ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿದ್ದ ವ್ಯಕ್ತಿ ನನ್ನ ಅಧೀನ ನೌಕರನೊಬ್ಬನಾಗಿದ್ದ. ಆಸ್ತಿಯ ಆಸೆಗಾಗಿ ತಂದೆ, ತಾಯಿಯರನ್ನೇ ಕೊಂದವರನ್ನೂ ಕಂಡಿದ್ದೇವೆ. ಇಂತಹವರ ಮಕ್ಕಳೂ ಮುಂದೆ ತಮ್ಮ ಹಿರಿಯರನ್ನೇ ಅನುಕರಿಸುವುದಿಲ್ಲವೆಂಬುದಕ್ಕೆ ಖಾತ್ರಿಯಿದೆಯೇ? ವಿದ್ಯೆ ವಿನಯವನ್ನು ಕೊಡುತ್ತದೆ ಎಂಬುದು ಸನಾತನ ಸಂಸ್ಕಾರಯುತ ಶಿಕ್ಷಣ ಸಾರುತ್ತಿತ್ತು. ಇಂದು? ವಿನಯವನ್ನು ದೂರವಿಡುವ ಇಂದಿನ ಶಿಕ್ಷಣ ಪದ್ಧತಿ ಮಾನವೀಯತೆಯನ್ನು ಮರೆಸಿಬಿಟ್ಟಿದೆ.

'ನಮ್ಮ ಹಿರಿಯರನ್ನು ನಾವು ಗೌರವಿಸೋಣ; ನಮ್ಮ ಮಕ್ಕಳೂ ಮುಂದೆ ನಮ್ಮನ್ನು ಆದರಿಸಬಹುದು!'

-ಕ.ವೆಂ.ನಾಗರಾಜ್.

Comments

Submitted by naveengkn Mon, 02/24/2014 - 17:55

ಕವಿ‍ನಾಗರಾಜರೇ,,,, "ಸಾವು ಎನ್ನುವುದೊಂದು ಸಾರ್ವಕಾಲಿಕ‌ ಸತ್ಯ‌",,,,ಆ ಸಾವಿನ‌ ದವಡೆಯಲ್ಲಿ ಅನುಭವಿಸುವ‌ ಅನೇಕ ವಿಚಾರಗಳ‌ ಕಡೆ ಗಮನ‌ ಹರಿಸಿದ್ದೀರ‌,, ಬರಹ‌ ಮನಮುಟ್ಟುವಂತಿದೆ,
ಇಲ್ಲಿ ಇನ್ನೊಂದು ವಿಷಯ‌ ಸೇರಿಸಲು ಇಶ್ಟ‌ ಪಡುತ್ತೇನೆ, ಇಂದಿನ‌ ಜನಾಂಗ‌ ಧೀರ್ಘ‌ ಬದುಕಿನ‌ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ, ಇದ್ದಷ್ಟು ದಿನ‌ ಆದಷ್ಟು ಸುಖವಾಗಿ ಬಾಳಬೇಕೆನ್ನುವುದು ಇಂದಿನವರ‌ ವಾದ‌, ಹಾಗಾಗಿ ಯಾವ ಬಾವನಾತ್ಮಕ‌ ಬರಹಗಳಿಂದಾ ಅವರನ್ನು ಬದಲು ಮಾಡಲು ಸಾದ್ಯವಿಲ್ಲ‌,

(ವಿಜ್ಞಾನದ ತಳಹದಿಯ ಮೇಲೆ ನಿಂತು ನೋಡಿದರೆ, ಎಂದಿಗೂ ಶಕ್ತಿಯನ್ನು ಹುಟ್ಟುಹಾಕಲು ಸಾಧ್ಯವಿಲ್ಲ, ಹಾಗೆಯೇ ಶಕ್ತಿಯನ್ನು ನಾಶಗೊಳಿಸಲು ಸಾಧ್ಯವಿಲ್ಲ, ಜಗತ್ತಿನ ಒಟ್ಟು ಶಕ್ತಿಯ ಮೊತ್ತ ಎಂದೆಂದಿಗೂ ಸ್ತಿರ, ಹಾಗೆಯೇ ಜಗದ ಮೇಲಿನ ಜೀವ ಜಂತುಗಳನ್ನು ಶಕ್ತಿಯ ತುಣುಕುಗಳೆಂದು ಪರಿಗಣಿಸಿದರೆ ಇಂದು ಒಟ್ಟಾರೆ ಜನಸಂಖೆ ಜಾಸ್ತಿಯಾಗಿದೆ, ಆದರೆ ಬದುಕುವ ವರ್ಷಗಳು ಕಮ್ಮಿ (ನನ್ನ ಅನಿಸಿಕೆ ಅಷ್ಟೇ,, ಇದಕ್ಕೆ ಇನ್ನೂ ಅನೇಕ ಮಾನದಂಡಗಳು ಇರಬಹುದು!) )

ಜೊತೆಗೆ ಯುವ ಜನಾಂಗ ಹುಡುಕುವುದು ಸುಲಭದ ಮಾರ್ಗವನ್ನು, ಎಲ್ಲದರಲ್ಲೂ ಸುಖವನ್ನು, ಸ್ವಲ್ಪ ಕಷ್ಟವೂ ನಮಗೆ ಬೇಡ ಎನ್ನುವ ಪರಿಸ್ತಿತಿ, ಆದರೆ ಅದಕ್ಕೆ ಕಾರಣರು ಹೆತ್ತ ಪೋಷಕರೇ,

ಮಗು ಓದುವ ಸಮಯದಲ್ಲಿ

ಅಮ್ಮಾ/ಅಪ್ಪಾ : "ಮಗನೆ/ಮಗಳೇ ನೀನು ಓದಿ ದೊಡ್ಡ ವ್ಯಕ್ತಿ ಆಗಬೇಕು

ಮಗು : ದೊಡ್ಡ ವ್ಯಕ್ತಿ ಅಂದ್ರೆ ಹೇಗೆ?

ಅಮ್ಮಾ/ಅಪ್ಪಾ : ದೊಡ್ಡ ವ್ಯಕ್ತಿ ಅಂದ್ರೆ ಒಳ್ಳೆ ಕೆಲಸ ಹಿಡಿಬೇಕು, ಆಮೇಲೆ ಫಾರಿನ್ಗೆ ಹೋಗಿ ತುಂಬಾ ಹಣ ಮಾಡಬೇಕು,(ಎಲ್ಲರೂ ಅಲ್ಲ ಆದರೆ ಬಹಳಷ್ಟು ಪೋಷಕರು ಹೇಳುವ ಮಾತು, ಕಾರಣ ಇಷ್ಟೇ ಸಂಬಂದಿಕರ ಮುಂದೆ ಹತ್ತಿರದವರ ಮುಂದೆ ನನ್ನ ಮಗ ಕೂಡ ಫಾರಿನ್ ನಲ್ಲಿ ಇದಾನೆ ಎಂದು ಹೇಳಿಕೊಳ್ಳುವ ಚಪಲ)

ಅದಕ್ಕೆ ಸರಿಯಾಗಿ ಪರಕೀಯರ "ಪ್ರೊಫೆಶನಲ್" ಎನ್ನುವ ಗುಣಗಳ ಹೇಳಿಕೊಡುವಿಕೆ, ಅಲ್ಲಿ ಹಿರಿಯರಿಗೆ ಗೌರವದ ಸ್ಥಾನವಂತು ಇಲ್ಲ ಎನ್ನುವುದು ಎಲ್ಲಾರಿಗೂ ತಿಳಿದ ಸ್ತಿತಿ, ಮೆಕಾಲೆಯ ದೂರದರ್ಶಿತ್ವದ ಫಲ,,

ಮಗು ತನ್ನ ದೇಶವನ್ನು ದೇಶವೆಂದೇ ಪರಿಗಣಿಸುವುದಿಲ್ಲ, ಅಪ್ಪ ಅಮ್ಮಂದಿರು ಲೆಕ್ಕಕ್ಕೆ ಬರುವುದಿಲ್ಲ, ಅದಕ್ಕೆ ಹೊರ ದೇಶದ ಐಶಾರಾಮವೆ ಸುಖವೆಂದು ತೋರುತ್ತದೆ,ಅದರ ಪ್ರಕಾರ ಇಲ್ಲಿಯ ಹಿತ್ತಿಲಿನ ಗಿಡ ಮದ್ದಲ್ಲ, ಮುಂದೊಂದು ದಿನ ಹೆತ್ತವರ ನೆನಪಾದರು, ತಾಯ್ನಾಡಿನ ಆರ್ಥನಾದ ಕೇಳಿದರು ಏನು ಮಾಡಲಾಗದೆ ಸುಮ್ಮನಾಗಿರುತ್ತವೆ, ಆಗ ಮತ್ತೆ ಪೋಷಕರು ಕೂಗುತ್ತಾರೆ ಅಯ್ಯ್ಯೊ ವಿಪರ್ಯಾಸವೇ,,,,

ತಾಯಿ ಮಗುವಿಗೆ ಎದೆಹಾಲು ಕೊಡುವಾಗ ಹರಿಸುವ ಬಾವನೆಗಳು ಕೂಡ ಮಗುವಿನ ಮನಸ್ಸಿನ ಮೇಲೆ ಬೀರುವ ಪರಿಣಾಮ ಗಾಡ, ಶಿವಾಜಿ ಅದರ ಜೀವಂತ ಉದಾಹರಣೆ, ಇಂದಿನ ಜಂಜಾಟದಲಿ ಅದೆಷ್ಟು ತಾಯಂದಿರು ಮನಸ್ಪೂರ್ತಿ ಎದೆ ಹಾಲು ಕುಡಿಸಿಯಾರು,

ನಾವೆಲ್ಲಾ ಮಕ್ಕಳನ್ನು ತಯಾರು ಮಾಡುವ ಖಾರ್ಖನೆಗಳು, ಅಷ್ಟೇ ಅಲ್ಲವೇ ?? ಹೆಚ್ಚಿನದನ್ನು ಏನು ಮಾಡಿದ್ದೇವೆ?

ತಪ್ಪೆಲ್ಲ ನಮ್ಮದೇ,,, ಅವರನ್ನು ಬೆಳೆಸುವಾಗ ಎಲ್ಲಿಯೋ ತಪ್ಪಿ ಹೋದೆವು,,,

ಅದೆಷ್ಟೋ ಪೋಷಕರು "ತಾನು ಅನುಭವಿಸಿದ ಕಷ್ಟ ತನ್ನ ಕರುಳಬಳ್ಳಿ ಅನುಭವಿಸದೆ ಇರಲಿ" ಎಂದು ಸುಖದ ಸುಪ್ಪತ್ತಿಗೆ ಏರಿಸುತ್ತಾರೆ,,,,ಇದು ತಪ್ಪಿನ ಇನ್ನೊಂದು ಮುಖ, ಅದು ತಪ್ಪೆಂದು ಸಾಮಾನ್ಯಕ್ಕೆ ಗೋಚರಿಸದಿದ್ದರು ಕಾಲಾಂತರದಲ್ಲಿ ಅದರ ಅರಿವಾಗುವುದು,, ಆಗ ಮತ್ತೆ ಹೆತ್ತವರಿಗೆ ಯಾತನೆ!

-- ನವೀನ್ ಜೀ ಕೇ

Submitted by kavinagaraj Tue, 02/25/2014 - 10:43

In reply to by naveengkn

ವಂದನೆಗಳು ನವೀನರೇ. ಬದುಕಿನ ಬಗ್ಗೆ ಆಸಕ್ತಿ ಕಡಿಮೆಯಾಗಲು ನಮ್ಮ ಜೀವನಶೈಲಿಯೂ ಒಂದು ಕಾರಣವಾಗಿದೆ. ಶತ ಶತಮಾನಗಳ ಮಾನಸಿಕ ದಾಸ್ಯದಿಂದ ಹೊರಬರಲು ಕಷ್ಟವೇ ಸರಿ. ಬದಲಾವಣೆ ಬಯಸುವ ಮಾನಸಿಕ ಸ್ಥಿತಿಗೆ ಜನರನ್ನು ಸಿದ್ಧಪಡಿಸುವ ಕೆಲಸ ಪ್ರಾಜ್ಞರು ಮಾಡಬೇಕಿದೆ.

Submitted by nageshamysore Wed, 02/26/2014 - 18:38

ಹಿಂದೆ ಕುಟುಂಬಗಳಲ್ಲಿ ಹಣದ ಕೊರತೆಯಿದ್ದರೂ ಸಮಯ ಭಾಂಧವ್ಯಗಳು ಹೇರಳವಾಗಿರುತ್ತಿತ್ತು. ಈಗ ಹಣದ ಹಿಂದೆ ಬಿದ್ದು ಮೊದಲು ಸಮಯದ ಅಭಾವ; ಸಮಯವಿಲ್ಲದೆ ಸಡಿಲಾಗುತ್ತ ಹೋಗುವ ಭಾಂಧವ್ಯದಿಂದ ಆ ಅನುಭೂತಿಗಳೂ ಮಾಯ. ಅಲ್ಲದೆ ಹೆಚ್ಚು ಹಣ ಗಳಿಕೆಯ ವೃತ್ತಿಯೆ ಪ್ರವೃತ್ತಿಯಾಗಿ ಗಳಿಸಿದ್ದನ್ನು ಹಂಚಿ ತಿನ್ನದಿದ್ದರೆ ಬೇಡ , ಹೆತ್ತವರ ಹಿರಿಯರ ಕನಿಷ್ಠ ಅಗತ್ಯಗಳ ಪೂರೈಕೆಗೂ ಅಡಿಯೊಡ್ಡುವ ಆಧುನಿಕ ಜೀವನ ಮಾರ್ಗವನ್ನು ಪ್ರಗತಿಯೆನ್ನಬೇಕೊ, ಯಾಂತ್ರಿಕ ಬದುಕಿನ ಗುಲಾಮರಾಗುವ ಅವನತಿಯೆನ್ನಬೇಕೊ ಗೊತ್ತಾಗದು. ಯಾರನ್ನು ಮೆಚ್ಚಿಸಲಲ್ಲದಿದ್ದರೂ ತಾನು ಮಾಡಬೇಕಾದ ಕರ್ತವ್ಯವೆಂದು ಹಿರಿಯರ ಕನಿಷ್ಠ ಅಗತ್ಯ ಪೂರೈಸಿಕೊಡುವ ಜವಾಬ್ದಾರಿಯಾದರೂ ತಂತಾನೆ ಬರಬೇಕು. ಆಗಲೆ ಹಳೆ ಬೇರು ಹೊಸ ಚಿಗುರಿಗೆ ನಿಜವಾದ ಅರ್ಥ ಬರುವುದು. ಪರಂಪರೆಯ ಉಳಿವಿನಲ್ಲೆ ಸಂಸ್ಕೃತಿಯ ಅಳಿವು ಉಳಿವು ಎನ್ನುವುದ್ದನ್ನು ಮರೆಯಬಾರದು.

Submitted by kavinagaraj Wed, 02/26/2014 - 20:29

In reply to by nageshamysore

ಧನ್ಯವಾದ ನಾಗೇಶರೇ. ಈ ರೀತಿ ಹೇಳಿದರೆ ನೀವು ಹಳೆಯ ಗೊಡ್ಡುಗಳೆನಿಸಿಕೊಳ್ಳುತ್ತೀರಿ. ಈಗ ಮದುವೆಯಾಗಬೇಕಾದರೇ ಷರತ್ತು ಹಾಕುತ್ತಾರೆ, 'ಅಪ್ಪ-ಅಮ್ಮ' ಜೊತೆಯಲ್ಲಿರಬಾರದೆಂದು! :(

Submitted by ಗಣೇಶ Wed, 02/26/2014 - 23:37

ಕವಿನಾಗರಾಜರೆ, ಜೀವನ ಸಂಧ್ಯಾಕಾಲದೆಡೆಗೆ ಹೆಜ್ಜೆ ಇಡುತ್ತಾ ಇದ್ದೇನೆ.:) ನಿಮ್ಮ ಮುಂದಿನ ಲೇಖನಗಳ ನಿರೀಕ್ಷೆಯಲ್ಲಿದ್ದೇನೆ. ಏನೇ ಅನ್ನಿ, ಈಗಿನ ಯುವಕರನ್ನು, ಸಮಾಜವನ್ನು ದೂರಿ ಪ್ರಯೋಜನವಿಲ್ಲ. ನಾವು ಅವರಿಗೆ ತಕ್ಕ ಹಾಗೆ ನಡಕೊಳ್ಳುವುದು ಉತ್ತಮ.