ಒಂದೇ ಹಾದಿಯ ಮೂವರು

ಒಂದೇ ಹಾದಿಯ ಮೂವರು

ನನ್ನ ತಂದೆ ನನಗೆ ಯಾವಾಗಲೂ ಹೇಳುತ್ತಿದ್ದ ಒಂದು ಪದ ಮತ್ತು ಪದದೊಳಗಿನ ವಾಕ್ಯವೆಂದರೆ - ಸಚ್ಚಿದಾನಂದ ಅಂದರೆ ಸತ್+ಚಿತ್+ಆನಂದ ಅಂದರೆ ಸತ್ಯವನ್ನು ಒಪ್ಪಿಕೊಂಡ ಮನಸ್ಸು ಆನಂದವಾಗಿರುತ್ತದೆ ಎಂದು. ನೀನೂ ಕೂಡ ಸತ್ಯವನ್ನು ಒಪ್ಪಿಕೋ ಎನ್ನುತ್ತಿದ್ದರು. ಪೋಲಿಯೋಗೆ ತುತ್ತಾಗಿ ಕಾಲು ಊನಗೊಂಡಿದ್ದ ನನ್ನನ್ನು ಎಲ್ಲರೂ ಕುಂಟ ಕುಂಟ ಎನ್ನುತ್ತಿದ್ದರು. ನನಗೆ ಇನ್ನಿಲ್ಲದ ಕೋಪ ಬರುವುದರ ಜೊತೆಗೆ ಇದು ಸಾಧ್ಯವಾಗದ ಮಾತೆಂದು ನಂಬಿಕೊಂಡಿದ್ದೆ. ನಾನು ನೇರವಾಗಿ ನಡೆಯಲು ಪ್ರಯತ್ನಿಸುತ್ತಿದ್ದೆ. ನೇರವಾಗಿ ನಡೆಯುತ್ತಿದ್ದೇನೆ ಎಂದುಕೊಂಡಿದ್ದೆ. ಆದರೆ, ಈ ರೀತಿಯಾಗಿ ಮೂದಲಿಸುವವರ ಸಂಖ್ಯೆ ಹೆಚ್ಚಾಗಿ ಅವರನ್ನು ತಡೆಯಲೂ ನನಗೆ ಅಸಾಧ್ಯವಾದಾಗ ನಮ್ಮ ತಂದೆಯ ಮಾತನ್ನು ಪರೀಕ್ಷಿಸಲೋಸುಗ ಒಮ್ಮೆ ನಿಲುಗನ್ನಡಿಯ ಮುಂದೆ ನಿಂತು ನನ್ನನ್ನು ನಾನು ನೋಡಿಕೊಂಡೆ. ಹೌದು, ನನ್ನೆರಡೂ ಕಾಲುಗಳು ಸಮವಾಗಿರಲಿಲ್ಲ. ಒಂದು ಕಾಲು ಊನವಾಗಿತ್ತು. ‘ಕುಂಟ ಕುಂಟ’ ಎಂದು ಛೇಡಿಸುವವರನ್ನು ದೂರ ಮಾಡುವ ಉಪಾಯ ಅರಿಯದ ಕಾಲದಲ್ಲಿ ನನ್ನನ್ನು ನಾನೇ ‘ಕುಂಟ’ ಎಂದು ಕರೆದುಕೊಂಡೆ. ಬೀದಿಗೆ ಬಂದೆ. ಕುಂಟ ಎಂದು ಕರೆವವರೆಡೆಗೆ ಏನೂ ಹಾನಿ ಆಗಲಿಲ್ಲವೆಂಬಂತೆ ನಗೆ ಬೀರಿದೆ. ಎಲ್ಲಾ ವಸ್ತುಗಳೂ ನಾನು ಕುಂಟುತ್ತ ನಡೆಯುತ್ತಿರುವಂತೆ ಪ್ರತಿಫಲಿಸಿದವು. ನನ್ನ ನಡಿಗೆ ನೇರವಾಗಿಲ್ಲದಿದ್ದರೂ ಗಂಭೀರವಾಗಿತ್ತು. ಮನಸ್ಸಿನ ನೆಮ್ಮದಿ ಹೆಚ್ಚಾಗಿ ನನ್ನ ನಡಿಗೆ ಸಹಜವಾಗಿಯೇ ಇದೆ, ಇಷ್ಟು ದಿನ ನಾ ಪಡುತ್ತಿದ್ದ ಪ್ರಯತ್ನ ನಕಲಾಗಿತ್ತು ಎಂದುಕೊಂಡೆ. ಮುಂದೊಂದು ದಿನ ಅಚಾನಕ್ಕಾಗಿ ನನ್ನ ತಂದೆ ತೀರಿಕೊಂಡಾಗ ಅವರ ಮುಖ ಹೊಳೆವ ಕೆಂಡದಂತೆ ಕಾಣುತ್ತಿತ್ತು. ನನಗೆ ಕಿಂಚಿತ್ತೂ ನೋವಾಗಲಿಲ್ಲ. ಸಾವೆಂಬ ಅಳಿಸಲಾಗದ ಸತ್ಯವನ್ನು ನಾನಲ್ಲಿ ಒಪ್ಪಿಕೊಂಡಿದ್ದೆ. ನನ್ನ ಮನಸ್ಸಿನಲ್ಲಿ ಪಕ್ವತೆಯಿತ್ತು.

ಆದರೆ, ಈ ವಿಚಾರದಲ್ಲಿ ನಾನು ಗೊಂದಲಕ್ಕೆ ಬಿದ್ದದ್ದು ಒಮ್ಮೆ ನನಗೆ ತಿಳಿದ ಇಬ್ಬರು ಅಭಿಮುಖವಾಗಿ ಚಲಿಸುತ್ತಿದ್ದ ವ್ಯಕ್ತಿಗಳ ಕೊನೆ ಒಂದೇ ಆದಾಗ. ಕುಂಟನಾಗಿದ್ದರೂ ನೀನು ಕೆಲಸದಲ್ಲಿ ಚಾಕಚಕ್ಯತೆ ಉಳ್ಳವನು ಎಂಬುದನ್ನು ಮೆಚ್ಚಿಕೊಂಡಿದ್ದವರೊಬ್ಬರು ನನ್ನನ್ನು ತಮ್ಮ ಕೊರಿಯರ್ ಆಫೀಸ್‍ನಲ್ಲಿ ಕಾಗದ ಪತ್ರ, ಉಡುಗೊರೆಗಳನ್ನು ಸದರಿ ಮನೆಗಳಿಗೆ ಮುಟ್ಟಿಸುವ ಕೆಲಸಕ್ಕೆ ನಿಯೋಜಿಸಿಕೊಂಡಿದ್ದರು. ಕಾಗದ ಪತ್ರಗಳನ್ನು ತಲುಪಿಸುವ ಕೆಲಸದಲ್ಲಿ ಒಂದಷ್ಟು ಬಣ್ಣ ಬಣ್ಣದ ವ್ಯಕ್ತಿಗಳನ್ನು ಕಂಡಿದ್ದೆ. ನಿನ್ನೆ ನಮ್ಮೂರಿನ ಟೆಂಟ್‍ನಲ್ಲಿ ಹೊಸ ಸಿನಿಮಾವೊಂದು ನನ್ನನ್ನು ಕೈಬೀಸಿ ಕರೆದಿತ್ತು. ಕೈಯಲ್ಲಿ ಉಳಿದದ್ದು ಒಂದೇ ಒಂದು ಪತ್ರವಷ್ಟೇ. ನನಗೆ ತಿಳಿದ ರತ್ನಾಕರನದು. ಮೊನ್ನೆಯಿಂದಲೂ ಈ ಕಾಗದಕ್ಕೋಸ್ಕರ ಅವನು ಅಲೆದಿದ್ದ. ಆದರೆ, ಮಧ್ಯಾಹ್ನದ ಹೊತ್ತಿನಲ್ಲಿ ಅವನು ಮನೆಯಲ್ಲಿರುವುದಿಲ್ಲವೆಂಬುದನ್ನರಿತಿದ್ದ ನಾನು ಸಿನಿಮಾ ಮುಗಿಸಿಕೊಂಡೇ ಕಾಗದ ತಲುಪಿಸುವ ನಿರ್ಧಾರಕ್ಕೆ ಬಂದಿದ್ದೆ. ಆದರೆ ಸಿನಿಮಾ ನೋಡುವಾಗ ಹಲವು ಬಾರಿ ನನ್ನ ಮೊಬೈಲ್ ಚೀರಿಕೊಂಡಿತ್ತು. ಆಫೀಸ್‍ನಿಂದ ಕರೆ ಮಾಡಿ ರತ್ನಾಕರ್‍ರವರು ಸುತ್ತಾಡುತ್ತಿದ್ದಾರೆ ಕೂಡಲೇ ಪತ್ರ ಮುಟ್ಟಿಸು ಎಂದು ಬೊಬ್ಬೆ ಹೊಡೆದರೂ ಸಿನಿಮಾದ ರುಚಿ ನನ್ನ ಅಂಡನ್ನು ಕೀಳಿಸಲಿಲ್ಲ. ಸಿನಿಮಾ ಮುಗಿದ ಕೂಡಲೇ ರತ್ನಾಕರ್ ಕರೆ ಮಾಡಿ ಒಂದಷ್ಟು ಬೈದ, ಬಾಲ್ಯ ಗೆಳೆಯನಾದ ಆತನ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ನಾನು ಆತನಿದ್ದ ಬಾರ್‍ಗೆ ನುಗ್ಗಿದ್ದೆ. 

‘ನಾನೀಗ ನಮ್ಮ ಮನೆಯವರನ್ನು ಬಿಟ್ಟು ಬಹಳ ದೂರ ಬಂದುಬಿಟ್ಟಿದ್ದೇನೆ, ತಂಗಿಯೊಬ್ಬಳಿದ್ದಾಳೆಂದು ಆಗಾಗ ಅವಳ ಮನೆಗೆ ಹೋಗಿ, ಮಕ್ಕಳೊಂದಿಗೆ ಆಟವಾಡಿಕೊಂಡು, ಇದ್ದದ್ದುಂಡು ಬರುತ್ತಿದ್ದೆ. ಈಗೀಗ ಅವಳೂ ದುಂಬಾಲು ಬೀಳೋದು ಕಂಡು ಅಲ್ಲಿಗೂ ಅಷ್ಟಾಗಿ ಹೋಗುತ್ತಿಲ್ಲ’ ಎಂದು ಒಂದು ಗುಟುಕು ಬಿಯರ್ ಹೀರಿಕೊಂಡ ರತ್ನಾಕರ ನೊಂದು ನುಡಿದಿದ್ದ. ಸರಿಯಿದ್ದರೂ, ಕುಡಿದು ಗಿರ್ಕಿ ಹೊಡೆಯುತ್ತಿದ್ದರೂ ತುಂಬಾ ಭಾವುಕನಂತೆ ಮಾತನಾಡುವುದು, ಮಧ್ಯೆ ಮಧ್ಯೆ ವಚನ, ವೇದಾಂತ, ಪುರಾಣ ಸಂಬಂಧಿ ವಿಚಾರಗಳನ್ನು ತುರುಕುವುದು, ಜೊತೆಗೆ ಎಂದೂ ಸಿಗರೇಟ್ ಸೇದದಿರುವುದು ಆತನ ದೈನಂದಿನ ಅಭ್ಯಾಸ. ನಾನು ಮತ್ತು ಆತ ಆಗಾಗ ಸಂಧಿಸಿದರೆ ಅದು ಈ ರೀತಿಯ ಮಬ್ಬುಗತ್ತಲಲ್ಲಿಯೇ, ಅದೂ ಇಷ್ಟವಾಗುವ ಮಂದಬೆಳಕು ಚೆಲ್ಲುವ ಬೆಂಗಳೂರು ಮೈಸೂರು ರೋಡಿನ ಈ ಬಾರ್‍ನಲ್ಲಿ. 

ರತ್ನಾಕರ, ತಾನಾಯಿತು, ತನ್ನಿಷ್ಟವಾಯಿತು ಎಂಬಂತೆ ಬದುಕಲು ಇಷ್ಟಪಡುವ ಹುಡುಗನಾದರೂ, ಈ ಲೋಕ ಆ ಪ್ರಕಾರವಾಗಿ ತನ್ನನ್ನು ಬದುಕಲು ಬಿಡುತ್ತಿಲ್ಲ ಎಂದು ಬೆಟ್ಟ ಅಗೆದು ಇಲಿ ಹಿಡಿದವನಂತೆ ಮಾತನಾಡುವವ. ಯಾವಾಗಲೂ ಮಂಕಾಗಿ, ತೂಕ ಜಾಸ್ತಿಯಾದ ಕಣ್ಣುಗಳೊಂದಿಗೆ, ಬೋಳಿಸದ ಗಡ್ಡ, ಬೆರಟು ಬೆರಟಾದಂತೆ ಕಾಣುವ ಚರ್ಮದೊಂದಿಗೆ ಒರಟೊರಟಾದ ಕೂದಲಿನ ಮನುಷ್ಯ. ಮೊದಲು ತಿಂಗಳಿಗೊಮ್ಮೆ ಕುಡಿಯುತ್ತಿದ್ದವ, ಮೊನ್ನೆ ಮೊನ್ನೆವರೆಗೂ ವಾರಕ್ಕೊಮ್ಮೆ ಬಾರಿನ ಮುಂದೆ ನಿಂತು ಫೋನಾಯಿಸಲು ಶುರುವಿಟ್ಟುಕೊಂಡ. ಈಗಿಗಂತೂ ಪ್ರತಿದಿನವೂ ಬಿಯರ್ ಹೀರುತ್ತಾನೆ, ಯಾವುದೇ ಕಾರಣಕ್ಕೂ ವಿಸ್ಕಿ, ಬ್ರಾಂಡಿ ಕುಡಿಯಬಾರದು ಎಂದು ಹೇಳಿದ್ದವನು ಬಿಯರ್ ಬೇಸರವಾಗಿ ಅವುಗಳನ್ನೇ ತರಿಸಿಕೊಂಡುಬಿಡುತ್ತಾನೆ.  ಕೆಲವು ದಿನಗಳ ಹಿಂದೆ ಅಚಾನಕ್ಕಾಗಿ ಅವನ ರೂಮಿಗೆ ಹೋಗಿದ್ದಾಗ ಟೇಬಲ್ಲಿನ ಮೇಲೆ ಬಿಯರ್ ಬಾಟಲ್, ಒಂದೆರಡು ಕೋಳಿ ಮಾಂಸದ ತುಂಡು ಇಟ್ಟುಕೊಂಡು ಕುಳಿತಿದ್ದ. ಅರ್ಧರಾತ್ರಿಯಲ್ಲಿ ನಾಯಿಯೊಂದು ಕುಯ್ಯೋ ಎಂದು ಬೊಗಳುವಂತೆ ಟೀವಿ ಕೂಗಿಕೊಳ್ಳುತ್ತಿದ್ದರೆ, ಮೂಲೆಯಲ್ಲಿ ಸುರಿದಿದ್ದ ಅದೆಷ್ಟೋ ದಿನದ ಕಸದಿಂದ ವಾಸನೆ ಬರುತ್ತಿತ್ತು. ಅಸ್ತವ್ಯಸ್ತವಾಗಿ ಬಿದ್ದಿದ್ದ ಹಾಸಿಗೆ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದ್ದ ಕಸ. ಪಕ್ಕದಲ್ಲೇ ಇದ್ದ ಮತ್ತೊಂದು ಬೆಂಚಿನ ಮೇಲೆ ಮಡಚಿಡದ, ಒಗೆಯದ ಬಟ್ಟೆಗಳು. ನನ್ನನ್ನು ಕಂಡವನೇ ‘ಹೇಳಿ ಬರೋದಲ್ಲವೇ, ಬಿಯರ್ ಈಗ ತಂದದ್ದಲ್ಲ, ಮೊದಲೇ ಇದ್ದದ್ದು’ ಎಂದು ಹೇಳುವುದರ ಮೂಲಕ ತಾನೇನು ನಿತ್ಯ ಕುಡುಕನಲ್ಲವೆಂದು ಸಾಬೀತು ಪಡಿಸಲು ಪ್ರಯತ್ನಿಸಿದ್ದ. ಬಟ್ಟೆಗಳನ್ನು ಸರಸರನೆ ಹ್ಯಾಂಗರ್‍ಗಳಿಗೆ ಸಿಕ್ಕಿಸಿ, ನೆಲ ಗುಡಿಸಲು ಕಸಪೊರಕೆ ಹಿಡಿದುಕೊಂಡು, ‘ಅಡುಗೆ ಮನೆಕಡೆ ಹೋಗ್ಬೇಡ, ಮೊದಲು ಕೆಲವು ಪಾತ್ರೆಗಳಿಗೆ ನೀರು ಚಿಮುಕಿಸ್ತೇನೆ’ ಎಂದಿದ್ದ. 
ಅಷ್ಟಕ್ಕೇ ಆತನ ರೂಮಿನ ಮುಂದೆ ಯಾವುದೋ ಬೈಕೊಂದು ಏಗುತ್ತ ನಿಂತುಕೊಂಡಂತೆ ಭಾಸವಾಗಿತ್ತು. ಯಾರಿರಬಹುದೆಂಬ ಗೊಂದಲ ನನಗಾದರೆ ರತ್ನಾಕರ ಯಾಕೋ ಭಯಗೊಂಡಿದ್ದ. ಆದರೆ, ನಾವಿಬ್ಬರೂ ನಿರಾಳರಾದದ್ದು ಬಂದಿದ್ದವ ಬೇರಾರೂ ಅಲ್ಲದೇ ನಮ್ಮ ಮತ್ತೊಬ್ಬ ಗೆಳೆಯ ಅನಂತು ಎಂದು ಗೊತ್ತಾದಾಗ. ಆತ ಬಂದೊಡನೆ ಮತ್ತೂ ಖಿನ್ನನಾದಂತೆ ಕಂಡ ರತ್ನಾಕರ್ ತನ್ನ ಶುಚಿಗೊಳಿಸುವ ಕಾರ್ಯವನ್ನು ವೇಗಗೊಳಿಸಿದ.

‘ಏನು ಇದ್ದಕ್ಕಿದ್ದಂತೆ ಬಂದದ್ದು, ಒಂದೆರಡು ಪೈಸೆ ಖರ್ಚು ಮಾಡಿ ಫೋನ್ ಮಾಡಿದ್ರೆ ನಿಮ್ಮಪ್ಪಂದಿರ ಗಂಟೆಲ್ಲ ಮುಗಿದುಬಿಡುತ್ತಿತ್ತೆ?’ ಎಂದ ರತ್ನಾಕರ ನನಗೂ ಅನಂತುವಿಗೂ ಲೋಟಕ್ಕೆ ಬಿಯರ್ ಹಾಕಲು ಬಂದ. ‘ನಂದು ಊಟ ಆಗಿದೆ,  ಬಿಯರ್ ಬೇಡ, ಕುಡಿದರೆ ವಾಂತಿಯಾದೀತು? ಸಿಗರೇಟ್ ಹಚ್ಚಿಕೊಳ್ಳುತ್ತೇನೆ’ ಎಂದ ಅನಂತು ಸಿಗರೇಟ್ ಹಚ್ಚಿಕೊಂಡರೆ ನಾನು ಬಿಯರನ್ನು ಲೋಟಕ್ಕೆ ಬಗ್ಗಿಸಿಕೊಂಡಿದ್ದೆ. 

‘ಈ ಹಬ್ಬಕ್ಕಾದರೂ ನೆಕ್ಲೇಸ್ ಕೊಡಿಸಿ, ನಿಮ್ಮ ಯೋಗ್ಯತೆಗೆ ಪ್ರತಿ ಹಬ್ಬದಲ್ಲೂ ಸುಮ್ಮನೆ ಸುಳ್ಳು ಹೇಳೋದೆ ಆಯ್ತು’ ಎಂಬ ಹೆಂಡತಿಯ ಮಾತಿಗೆ ಬೇಸರಗೊಂಡು ಸುಮ್ಮನೆ ಗಾಡಿ ಓಡಿಸಿಕೊಂಡು ಆ ದಿನ ರತ್ನಾಕರನ ರೂಮಿಗೆ ಅನಂತು ಬಂದಿದ್ದ. 

‘ಮದುವೆಯ ಸಮಯದಲ್ಲಿ ಮಳ್ಳಿಯಂತಿದ್ದ ನನ್ನ ಹೆಂಡತಿಯ ಉಪಟಳ ಈಗೀಗಂತು ಮಿತಿಮೀರಿಹೋಯಿತು. ಮಾತು ಮಾತಿಗೂ ಚಿನ್ನ, ಸೀರೆ, ಮನೆ, ಕಾರು ಎಂದು ಅವಲತ್ತುಕೊಳ್ಳುತ್ತಾಳೆ. ರುಚಿಯಾದ ಅಡುಗೆ ಮಾಡಿಯೂ ಬಡಿಸುವುದಿಲ್ಲ, ಮನೆ ಎನ್ನುವುದು ಮಸಣವಾಗಿದೆ, ಒಳಗೆ ಕಾಲಿಟ್ಟರೆ ತಲೆಬೇನೆ ಶುರುವಾಗುತ್ತದೆ. ಕುಯ್ಯೋ ಕುಯ್ಯೋ ಎನ್ನುವ ಮಕ್ಕಳಿಗೂ ಹೇಳಿಕೊಟ್ಟಿದ್ದಾಳೆ. ಹೊಸ್ತಿಲು ದಾಟಿದರೆ ಸಾಕು ‘ಅಪ್ಪ ಅದು ಕೊಡಿಸು, ಇದು ಕೊಡಿಸು’ ಎಂದು ಪೀಡಿಸುವುದಲ್ಲದೇ ಈ ಎಳೆ ವಯಸ್ಸಿಗೆ ಅವರಿವರಿಗೆ ಹೋಲಿಸಿ ಹಂಗಿಸುತ್ತವೆ. ನೆರೆ ಮನೆಯವರು ಹೊಸ ಬಟ್ಟೆ ತಂದರೆ ಇವಳಿಗೆ ಉರಿ, ನೆಂಟರು ಹೊಸ ಕಾರು ತಂದರೆ ನನಗೆ ಸಾಲ ಮಾಡಲು ಪೀಡಿಸುತ್ತಾಳೆ, ಫೈನಾನ್ಸ್‍ನವರಿಗೆ ಫೋನ್ ಮಾಡಿ ಎನ್ನುತ್ತಾಳೆ, ಬೇಡವೆಂದರೆ ಎಗರುತ್ತಾಳೆ. ಹೆತ್ತವರ ಅವಸರಕ್ಕೋ, ಅಜ್ಜಿಯ ಕೊನೆಯಾಸೆಯ ಪೂರೈಕೆಗೋ, ಅಜ್ಜನಿಗೆ ಕಾಯಿಲೆ, ಅಪ್ಪನ ಕೊನೆಯಾಸೆಯಂತೆ ಅದು ಇದು ಎಂದುಕೊಂಡು ಕುಂಟು ಕಾರಣವೊಡ್ಡಿ  ಯಾರನ್ನೋ ತಂದು ಅವಸರಕ್ಕೆ ಗಂಟು ಹಾಕಿಬಿಟ್ಟು ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತಾರೆ. ನನ್ನ ಕೇಸೂ ಹಾಗೇ ಆಗಿದೆ ಎನಿಸುತ್ತಿದೆ. ಮದುವೆಗೆ ಮುಂಚಿನಿಂದಲೂ ನನಗೆ ನನ್ನ ಜನ, ನನ್ನ ದೇಶವೆಂದರೆ ಬಹಳ ಆಪ್ತ. ನನ್ನ ಜನರ ನಡುವೆಯೇ ಗೋಡೆ ನಿರ್ಮಿಸುವ ಪರಮ ದುಷ್ಟರಿದ್ದಾರೆ. ಅವರೆಲ್ಲರಿಗೂ ಎದೆಗೊಟ್ಟು ಹೋರಾಡುವುದನ್ನು ಕಾಲೇಜು ದಿನಗಳಿಂದಲೂ ಕಲಿತುಬಂದವನು ನಾನು. ನನ್ನ ಹಳ್ಳಿಯ ಮೇಲೆ ಹಾದು ಹೋಗುವ ಪ್ರತಿ ರಸ್ತೆಯಲ್ಲೂ ನನ್ನ ನಿಸ್ವಾರ್ಥ ಪ್ರಯತ್ನದ ಬೆವರಿದೆ. ಹಣಕ್ಕೆ ಆಸೆ ಪಡದೆ, ಇದ್ದದ್ದನ್ನೂ ಕೈ ಚಾಚಿದವರಿಗೆ ಕೈ ಮುಗಿದು ಎರೆದುಕೊಟ್ಟವನು. ಇವಳಿಗೋ ನನ್ನ ಸಮಾಜಸೇವೆಯೆಂದರೆ ಮೆಣಸಿನಕಾಯಿ ತಿಂದಂತೆ. ‘ಶ್ರೀಮಂತರಾಗಿ ಹುಟ್ಟಿದ್ದ ನಾವು ನಿಮ್ಮ ಸಮಾಜ ಸೇವೆಯಿಂದ ಈಗೀಗ ಬಡವರಾಗಿ ಸಾಯ್ತಾ ಇದ್ದೇವೆ, ಮನೆಮಂದಿ ನೆಮ್ಮದಿಗಿಲ್ಲದ ನಿಮ್ಮ ದೇಶ ಸೇವೆಗೆ ಮಣ್ಣು ಹಾಕ’ ಎಂದೊದರುತ್ತಾಳೆ. ನನ್ನ ನಿಸ್ವಾರ್ಥ ತುಡಿತ, ಸಮಾಜಸೇವೆಯೂ ಮದುವೆಗೆ ಮುಂಚೆ ಆಕೆ ನನ್ನನ್ನು ಮೆಚ್ಚಿಕೊಳ್ಳಲು ಒಂದು ಕಾರಣವಾಗಿತ್ತು. ಈಗಿಗಂತೂ ಅವಳೊಡನೆ ಹಾಸಿಗೆ ಮೇಲೂ ಮಲಗಲು ಆಸೆಯಾಗೋದಿಲ್ಲ, ಮೈಸೋಕಿದ ಕಡೆಯೆಲ್ಲ ಗಾಯ ಎದ್ದಂತೆ ನೋವಾಗುತ್ತದೆ ಕಣ್ರೋ’ ಎಂದು ಅನಂತು ಹೇಳುವಷ್ಟರಲ್ಲಿ ಆತನ್ನ ಕೈ ಹಿಡಿದಿದ್ದೆ.

‘ನಿಮ್ಮದು ಅರೆಂಜ್ ಮ್ಯಾರೇಜಲ್ಲವೇ?’ ಈ ಪ್ರಶ್ನೆ ಎಸೆದ ರತ್ನಾಕರನ ಮೊಗದಲ್ಲಿ ಮತ್ತೊಂದು ಪ್ರಶ್ನೆ ಕಾಣುತ್ತಿತ್ತು. ಅನಂತು ‘ಹೌದು’ ಎಂದಾಗ ‘ಲವ್ ಮ್ಯಾರೇಜಂತು ನಡೆಯೋಕೆ ಬಿಡದ ದೇಶಭಕ್ತರು ನೀವು, ಒಪ್ಪಿಕೊಂಡೇ ಅಪ್ಪಿಕೊಂಡಿರುವ ಮದುವೆ, ಇಲ್ಲಾದರೂ ನೆಮ್ಮದಿ ಬೇಡವೆ? ಥೂ..’ ಎಂದ.

ರತ್ನಾಕರನ ಬಾಲ್ಯ ಸ್ನೇಹಿತನಾದ ನಾನು ಅವನ ಮಾತಿನಲ್ಲಿ ಅರ್ಥವಿದೆಯೆಂದು ಒಪ್ಪಿಕೊಳ್ಳುವುದರಲ್ಲಿ ಎಡವಲಾರೆ. ನನಗಿಂತ ಕೇವಲ ಎರಡೇ ವರ್ಷ ದೊಡ್ಡವನಾದರೂ, ಇಬ್ಬರೂ ಒಟ್ಟಿಗೆ ಓದಿದವರು. ಇನ್ನೂ ಮದುವೆ ಆಗದೆ ತಾನು ಪ್ರೀತಿಸುತ್ತಿರುವ ಹುಡುಗಿಗೋಸ್ಕರ ಕಾಯುತ್ತಿರುವವನು. ಆಕೆ ಇನ್ನೂ ಓದುತ್ತಿರುವ ಹುಡುಗಿ. ಕೇವಲ ಒಂದು ವರ್ಷದವನಾಗಿದ್ದಾಗ ತಾಯಿಯನ್ನು ಕಳೆದುಕೊಂಡು ಮಲತಾಯಿಯ ದಬ್ಬಾಳಿಕೆಯಲ್ಲಿ ಬೆಳೆದವನು. ತಿಂದರೆ ಹಳಸಲು ಇಲ್ಲದಿದ್ದರೆ ಹಸಿವು ಎಂಬಂತೆ ಅವನ ಬಾಲ್ಯ ಸಾಗಿತ್ತು. ಕಾರಣವೇ ಇಲ್ಲದೆ ಬಡಿಯುತ್ತಿದ್ದ ಮಲತಾಯಿಯ ದಾಷ್ರ್ಯ ಆತ ಸಾಯುವವರೆವಿಗೂ ಮರೆಯಾಗದಿರಲೆಂದೋ ಏನೋ ಮೈಮೇಲೆಲ್ಲಾ ಏಟಿನ ಗುರುತುಗಳಿದ್ದವು, ಸುಟ್ಟ ಕಲೆಗಳಿದ್ದವು, ಇನ್ನೂ ಇವೆ. ವಾರದಲ್ಲಿ ಒಂದೈದು ದಿನವಾದರೂ ಆತ ಅನಾಥನಂತೆ ನಮ್ಮ ಬೀದಿಯ ಚರಂಡಿಯ ಮೇಲೆ ಇರುವ ಪಡಸಾಲೆಯ ಜಗಲಿಯಲ್ಲಿ ಚಳಿಗೆ ಅವಚಿಕೊಂಡು ಮಲಗಿಕೊಳ್ಳುತ್ತಿದ್ದ. ಮಗನಲ್ಲದವನು ಮನೆಗೆ ಬರದಿದ್ದರೆ ತಲೆ ಕೆಡಿಸಿಕೊಳ್ಳದ ಎರಡನೆ ತಾಯಿ ಒಂದೆಡೆಯಾದರೆ, ದಿನದ ಇಪ್ಪತ್ತ ನಾಲ್ಕು ಘಂಟೆಗಳಲ್ಲಿಯೂ ಕುಡಿದು ತೂರಾಡುತ್ತಿದ್ದ ಅವನಪ್ಪನೊಂದೆಡೆ. ಮನೆಗೆ ಬಂದರೆ ಮಕ್ಕಳ ಸಂಖ್ಯೆಯನ್ನು ಎಣಿಸುವಷ್ಟು ಒಳ್ಳೆಯವನು ಆತನಲ್ಲ, ಬದಲಾಗಿ ಸಿಕ್ಕ ಮಕ್ಕಳನ್ನು ಪಾಪಿಗಳು ಎಂದು ಕೂಗಿ ಕೂಗಿ ಬಡಿಯುತ್ತಿದ್ದವನು. ಇದೇ ಗತಿ ಇವನ ಅಣ್ಣಂದಿರಿಗೂ ಇತ್ತು. ರಾತ್ರಿ ಮನೆಗೆ ಹೋದರೆ ಕಾರಣವಿಲ್ಲದೇ ಏಟು ತಿನ್ನುವ ಕರ್ಮ, ಮುಂಜಾನೆ ಎದ್ದು ಹೋದರೆ ರಾತ್ರಿ ಮನೆಗೆ ಬಂದಿಲ್ಲವೆಂಬ ಕಾರಣದಿಂದ ಹೊಡೆತ. 

ಆಗಾಗ ‘ನನ್ನ ತಾಯಿಯನ್ನ ಕಿತ್ತುಕೊಂಡ ದೇವರು ನನಗೆ ಮೋಸ ಮಾಡ್ಬಿಟ್ಟ, ಜೊತೆಗೆ ಮಲತಾಯಿಯೊಬ್ಬಳನ್ನು ಕೊಟ್ಟು ಇನ್ನೂ ದೊಡ್ಡ ಮೋಸ ಮಾಡ್ಬಿಟ್ಟ’ ಎಂದು ಹೇಳಿಕೊಂಡು ‘ಚೆ’ ಎನ್ನುತ್ತಾನೆ. ಆದರೆ, ಕಣ್ಣಿಂದ ನೀರು ತೊಟ್ಟಿಕ್ಕುವುದಿಲ್ಲ. ಜೊತೆಗೆ, ಯಾವುದೇ ದೇವರ ವಿಗ್ರಹ, ಫೋಟೋ ಕಂಡರೆ ಕೈ ಮುಗಿಯುತ್ತಾನೆ. ಇಷ್ಟೆಲ್ಲಾ ಕಷ್ಟಕೊಟ್ಟ ಅದೇ ಮಲತಾಯಿಗೆ ಹೃದಯದ ಕಪಾಟಿನಲ್ಲಿ ತೊಂದರೆ ಕಾಣಿಸಿಕೊಂಡಾಗ ಈತನೇ ಮುಂದೆ ನಿಂತು ಖರ್ಚು ಮಾಡಿ ಗುಣಪಡಿಸಿದ್ದ, ತನ್ನ ತಂದೆ ಅಪಘಾತದಲ್ಲಿ ಮೂಳೆ ಮುರಿದುಕೊಂಡಾಗಲೂ ಹಗಲು ರಾತ್ರಿ ಜೊತೆಯಿದ್ದು ಆಪರೇಷನ್ ಮಾಡಿಸಿದ್ದ.

ವಾರಕ್ಕೆ ಮೂರು ಬಾರಿಯಾದರೂ ಆತನನ್ನು ನನ್ನನ್ನೂ ಅನಂತು ತನ್ನ ಮನೆಗೆ ಕೂಗುತ್ತಾನೆ. ಆದರೆ ರತ್ನಾಕರ ಬರಲೊಲ್ಲ. ಅಪರೂಪಕ್ಕೆ ಹೋದಾಗ ಅನಂತುವಿನ ಹೆಂಡತಿ ನಮ್ಮೊಡನೆ ಸರಿಯಾಗಿ ಮಾತನಾಡುವುದಿಲ್ಲ. 
‘ನನ್ನ ಗೆಳೆಯರು, ಸಂಬಂಧಿಕರು ಯಾರೇ ಬಂದರೂ ಆಕೆ ಮುಖಕೊಟ್ಟು ಮಾತನಾಡುವುದಿಲ್ಲ. ಒಂದು ರೀತಿಯ ಧಿಮಾಕು, ಅಹಂಕಾರ. ಗೆಳೆಯರಿಗೆ ಟೀ ಕೇಳಿದರೆ ಮುಖಕ್ಕೆ ಹೊಡೆದಂತೆ ಹಾಲಿಲ್ಲ ಎನ್ನುತ್ತಾಳೆ, ಊಟಕ್ಕೆ ತಂಗಳು ಬಡಿಸುತ್ತಾಳೆ. ಇದಕ್ಕೆಲ್ಲಾ ಕಾರಣ ಗೆಳೆಯರು, ಸಂಬಂಧಿಕರಲ್ಲ, ಬದಲಾಗಿ ಕೇಳಿದ್ದನ್ನು ಕೊಡಿಸುವಷ್ಟು ದುಡ್ಡು ನನ್ನಲ್ಲಿಲ್ಲ, ಓಡಾಡಲೂ ಕಾರಿಲ್ಲ, ಇರಲು ಸ್ವಂತ ಮನೆಯಿಲ್ಲ, ಮನೆಯಲ್ಲಿ ಫ್ರಿಡ್ಜ್ ಇಲ್ಲ, ವಾಷಿಂಗ್ ಮೆಷಿನ್ ಇಲ್ಲ, ಇವೇ ಕಾರಣ. ಈ ದೇಶದ ಸದ್ಗತಿಗೆ ಹೋರಾಡುವುದೆಂದರೆ ಆಕೆಗೆ ಒಂದು ರೀತಿಯ ವಾಕರಿಕೆ’ ಎಂದು ಅಳಲು ತೋಡಿಕೊಳ್ಳುತ್ತಿದ್ದ ಅನಂತುವನ್ನು ನಾನೇ ಸಮಾಧಾನ ಪಡಿಸುತ್ತಿದ್ದೆ. ಈಯೆಲ್ಲಾ ಗ್ರಹಿಕೆಗಳು ನನ್ನ ಪರಿಧಿಗೆ ಸೇರಿದ್ದಲ್ಲವೆಂಬಂತೆ ರತ್ನಾಕರ ಮೌನಕ್ಕೆ ಶರಣಾಗುತ್ತಿದ್ದ. ಇತರೆ ಕೆಲವು ಗೆಳೆಯರು ಬೇಸರಿಸಿಕೊಂಡರೂ ಆತ ಬೇಸರಿಸಿಕೊಳ್ಳುತ್ತಿರಲಿಲ್ಲ, ಬದಲಾಗಿ ‘ಅದೆಲ್ಲಾ ಕಾಮನ್ ಬಿಡಪ್ಪಾ’ ಎನ್ನುತ್ತಿದ್ದ. ಆಕೆ ತಿಳಿದೂ ಹೆಚ್ಚು ಉಪ್ಪು ಹಾಕಿದಾಗ ನಾನು ಕಷ್ಟಪಟ್ಟು ಉಂಡರೆ ಆತ ಸ್ವಲ್ಪವೂ ಮುಖ ಮುರಿದುಕೊಳ್ಳದೇ ಉಣ್ಣುತ್ತಿದ್ದ. ಆದರೆ, ಆತನಿಗೆ ಅನಂತುವಿನ ಹೆಂಡತಿಯ ಸ್ವಭಾವ ಮತ್ತು ಈ ಜೀವನವನ್ನು ಆಕೆ ಸ್ವೀಕರಿಸುವ ರೀತಿ ಇಷ್ಟವಾಗುವುದಿಲ್ಲ ಎಂಬುದು ಸತ್ಯ. ಬಂದವರ ಮುಂದೆ ತಾನು ಚಿನ್ನದ ಚಮಚವನ್ನು ಬಾಯಿಯಲ್ಲಿ ಹಿಡಿದಿಟ್ಟುಕೊಂಡೇ ಹುಟ್ಟಿದ್ದು ಎಂಬಂತೆ ನಟಿಸುವುದು, ಅಸ್ವಾಭಾವಿಕವಾಗಿ ಓಡಾಡುವುದು, ಹೆಚ್ಚು ಮೇಕಪ್ ಮಾಡಿಕೊಳ್ಳುವುದು ಆತನಿಗೆ ಒಂದು ರೀತಿಯ ಕಿರಿಕಿರಿ. ಈ ಹಿಂದೆ ಅನಂತು ಮತ್ತು ನಾನೊಂದು ಅನಾಥಾಶ್ರಮ ಕಟ್ಟುವ ಆಲೋಚನೆಯಲ್ಲಿದ್ದಾಗ ಆಕೆ ಅಡ್ಡಿಪಡಿಸಿದ್ದಳು. ಆಗ ಆತ ‘ಅದೆಂಥ ಹೆಂಗಸು, ಸಮಾಜಕ್ಕೆ ಒಳಿತಾಗೋ ಕೆಲಸಕ್ಕೂ ಸೈ ಎನ್ನುವುದಿಲ್ಲವೆಂದರೆ ಹೇಗೆ, ಇವರೆಲ್ಲಾ ಬದುಕಿರೋದು ಕೇವಲ ಸಾಯೋದಿಕ್ಕಾ? ಚೆ! ಒಂಟಿತನ ಅನ್ನೋದೂ ಬಂಧನ, ಮದುವೆ ಅನ್ನೋದೂ ಬಂಧನ’ ಎಂದಿದ್ದ.

ಮದುವೆಯ ವಯಸ್ಸು ಮೀರುತ್ತಿರುವ ನಾನು ಹೊಸ ಹುಡುಗಿಯನ್ನು ನೋಡಲು ಹೊರಟಾಗ ಈ ಇಬ್ಬರು ಗೆಳೆಯರನ್ನು ಜೊತೆ ಮಾಡಿಕೊಳ್ಳುತ್ತಿದ್ದೆ. ‘ನನ್ನನ್ನು ನೋಡಿಯೂ ಮದುವೆಯಾಗಬೇಕೆಂಬ ಸಾಹಸವೇ?’ ಎಂದು ಅನಂತು ತಮಾಷೆ ಹಾಡಿದರೂ ನನಗೆ ಮದುವೆಯಾಗುವ ಕೌತುಕ ಹೆಚ್ಚಾಗಿತ್ತು. ಎಲ್ಲೇ ಹೋದರೂ ನನ್ನೊಳಗಿನ ಸುಪ್ತ ಭಾವನೆಗಳಿಗೆ ಅವಕಾಶವೇ ನೀಡದಂತೆ ‘ಕುಂಟನಿಗೆ ಹುಡುಗಿ ಕೊಡುವುದೇ?’ ಎನ್ನುತ್ತಿದ್ದರು. ನನ್ನ ಬಗ್ಗೆ ಅತೀವ ಕಾಳಜಿ ವಹಿಸುವ ಅನಂತು ಅಲ್ಲಲ್ಲಿ ಕೆಲವು ಹುಡುಗಿಯರನ್ನು ಗೊತ್ತು ಮಾಡಲು ನನ್ನನ್ನು ಜೊತೆ ಮಾಡಿಕೊಳ್ಳುತ್ತಿದ್ದ. ಆದರೆ, ಎಲ್ಲಿಯೂ ಕೂಡಿಕೆಯಾಗದಿರುವುದು ದುಃಖ ತಂದಿತ್ತು. ಎಷ್ಟೋ ಸಂಬಂಧಗಳ ಬಗ್ಗೆ ತುಟಿ ಬಿಚ್ಚುವ ಅನಂತು ಕೆಲವು ಘಳಿಗೆಯಲ್ಲಿ ಮದುವೆಯ ವಿಚಾರ ಬಂದಾಗ ಉಗ್ರನಾಗಿಬಿಡುತ್ತಾನೆ. ಆದರೆ ಮದುವೆ ವಿಚಾರದಲ್ಲಿ, ಆಯ್ಕೆಯ ವಿಚಾರದಲ್ಲಿ ರತ್ನಾಕರನದು ತುಂಬು ವಿಮರ್ಶೆ.

      ಇಷ್ಟೆಲ್ಲಾ ತಿಳಿದ ರತ್ನಾಕರ, ಅನಂತು ಮತ್ತು ನಾನು ಕಳೆದ ವಾರ ನಮ್ಮ ಮನೆಯ ಟೆರೇಸ್ ಮೇಲೆ ಕುಳಿತಾಗ ರತ್ನಾಕರನ ತುಟಿ ಅದುರುವುದನ್ನು ನಾನು ಗಮನಿಸಿದ್ದೆ. ಆಶ್ಚರ್ಯಗೊಂಡು ‘ಏನಾಯಿತು ಮಾರಾಯ?’ ಎಂದಾಗ ತಾನು ಈಗ ಪ್ರೀತಿಸುತ್ತಿರುವ ಹುಡುಗಿಯ ಬಗ್ಗೆ ಹೇಳಿಕೊಂಡ. ‘ಓಹೋ! ನೀನು ಮೈಸೂರಿನಲ್ಲಿ ಓದುತ್ತಿದ್ದಾಗ ಪ್ರೀತಿಸಿದ್ದ ಹುಡುಗಿಯನ್ನು ಮರೆತುಬಿಟ್ಟೆಯಾ? ಹಗಲು ರಾತ್ರಿಯೆನ್ನದೇ ಅವಳದೇ ಧ್ಯಾನದಲ್ಲಿರುತ್ತಿದ್ದಲ್ಲೋ ಮಾರಾಯ’ ಎಂದೆ. ಆಕೆಯ ವಿಚಾರ ನೆನಪಿಸಿದ್ದೇ ಆತನ ಕಣ್ಣಿನಲ್ಲಿ ನೀರು ಜಿನುಗಿತು. ಏನೂ ಮಾತನಾಡದೆ ಮೌನಿಯಾಗಿ ಕುಳಿತುಕೊಂಡ. ತನ್ನ ಜೊತೆ ಓದುತ್ತಿದ್ದ ರಮ್ಯ ಎಂಬುವಳನ್ನು ಆತ ಮುಂದೆ ಕ್ಷಣವೂ ಬಿಟ್ಟಿರಲು ಸಾಧ್ಯವಾಗುವುದಿಲ್ಲವೇನೋ ಎಂಬಂತೆ ಪ್ರೀತಿಸುತ್ತಿದ್ದ. ‘ಸಾರಿ, ತಪ್ಪಾಯಿತು ಮಾರಾಯ, ಅದಕ್ಕೆ ಯಾಕೆ ಅಳೋದು?’ ಎಂದೆ. ‘ಇದೊಂಥರ ಖುಷಿ ಕೊಡೋ ಅಳು ಕಣೋ , ನಾನು ಆಕೆಯನ್ನು ಪ್ರೀತಿಸಿದ್ದೆ ಹೌದು, ಆದರೆ ಆಕೆ ಒಮ್ಮೆಯೂ ನನ್ನನ್ನು ಪ್ರೀತಿಸುತ್ತೇನೆಂದು ಹೇಳಲಿಲ್ಲವಲ್ಲ, ಈಗ ಆಕೆಗೆ ಮದುವೆ ಆಗಿದೆ, ಆಕೆಯ ವಿಚಾರ ನೆನಪು ನನಗೇತಕೆ?’ ಎಂದು ಆತನೇ ಹೇಳಿದ. ‘ಈಗ ಪ್ರೀತಿಸುತ್ತೀರೋ ಹುಡುಗಿ ನಾನು ಸಂಜೆ ಸಂಗೀತ ಕಲಿಯುವ ಶಾಲೆಗೆ ಬರುತ್ತಿದ್ದವಳು, ನೋಡೋಕೆ ಚೆನ್ನಾಗಿದ್ದಾಳೆ, ನನಗಿಂತ ಎಂಟು ವರ್ಷ ಚಿಕ್ಕವಳು, ಹೆಸರು ನವ್ಯ, ಅವಳ ಓದು ಮುಗಿಯಲು ಇನ್ನೂ ನಾಲ್ಕು ವರ್ಷ ಬೇಕು, ಯಾಕೆ ಅಷ್ಟು ಹಚ್ಚಿಕೊಂಡಳೋ ಗೊತ್ತಿಲ್ಲ, ಒಮ್ಮೆ ಧೈರ್ಯವಾಗಿ ಹೇಳಿಯೇಬಿಟ್ಟಳು, ಒಂಟಿಯಾಗಿ ಬೆಳೆದ ನನಗೆ ಆಕೆಯನ್ನು ಕಂಡಾಗ ಒಂದಷ್ಟು ದಿನವಾದರೂ ಅವಳೊಡನೆ ಬದುಕಬೇಕು ಎಂದೆನಿಸಿತ್ತು, ಆಗಾಗ ಆಕೆಯನ್ನು ಕದ್ದು ಕದ್ದು ನೋಡುತ್ತಿದ್ದೆ ಕೂಡ, ಆದರೆ ಆಕೆ ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದು ಧೈರ್ಯವಾಗಿ ಹೇಳಿದಾಗ ಆ ಕ್ಷಣದಲ್ಲಿ ಒಪ್ಪಿಕೊಳ್ಳುವುದೋ ಬೇಡವೋ ಎಂಬ ಗೊಂದಲಕ್ಕೆ ಬಿದ್ದಿದ್ದರೂ ಮುಂದಿನದ್ದು ಯೋಚಿಸದೇ ಒಪ್ಪಿಕೊಂಡು ಬಿಟ್ಟೆ. ಈ ಘಟನೆ ನಡೆದದ್ದು ಎರಡು ವರ್ಷದ ಹಿಂದೆ’ ಎಂದಿದ್ದ. 

      ಅನಂತು ಮತ್ತು ನನ್ನ ಜೊತೆ ರತ್ನಾಕರ ಅನೇಕ ಬಾರಿ ಕಂಠಪೂರ್ತಿ ಬಿಯರ್ ಹೀರಿದ್ದಾನೆ, ಎಷ್ಟೋ ದಿನ ಮೂವರೂ ಮನೆಗೆ ತಲುಪಿಕೊಳ್ಳುವುದು ಕಷ್ಟವಾಗಬಹುದೇನೋ ಎಂದುಕೊಂಡು ಪಕ್ಕದಲ್ಲಿಯೇ ಇದ್ದ ಲಾಡ್ಜ್‍ನಲ್ಲಿಯೇ ತಂಗಿದ್ದೇವೆ. ಆದರೆ, ಒಂದು ದಿನವೂ ಆತ ಈ ವಿಚಾರವನ್ನು ನಮಗೆ ತಿಳಿಸಿರಲಿಲ್ಲ,  ಕೊಂಚವೂ ಸಂದೇಹ ಬಂದಿರಲಿಲ್ಲ. ಆತ ಮಾತು ಮುಂದುವರೆಸುವಷ್ಟರಲ್ಲಿಯೇ ಅನಂತು ಹುಟ್ಟು ಹಾಕಿದ್ದ ಸ್ವಯಂ ಸೇವಾ ಸಂಸ್ಥೆಯಾದ ‘ದೇಶ ರಕ್ಷಣೆ, ನಮ್ಮ ಹೊಣೆ’ಯ ಕಾರ್ಯಕರ್ತರು ಬಂದು ದೆಹಲಿಯಲ್ಲಿ ನಡೆದಿದ್ದ ಅತ್ಯಾಚಾರದ ವಿರುದ್ಧದ ಪ್ರತಿಭಟನೆಯ ರೂಪು ರೇಶೆಯ ಬಗ್ಗೆ ಮಾತನಾಡುತ್ತ ಕುಳಿತುಕೊಂಡರು. ಹೆಂಡತಿಗೆ ಐದು ಟೀ ಮಾಡಿಕೊಂಡು ಬರಲು ಅನಂತು ಹೇಳಿದ್ದ, ನನ್ನೆಣಿಕೆಯಂತೆ ಆಕೆ ಮಾಡಿಕೊಡಲಿಲ್ಲ. ‘ನಿಮ್ಮ ಸಂಸ್ಥೆಗೆ ಮಣ್ಣು ಹಾಕಿ, ಮಕ್ಕಳಿಗೆ ಸಂಕ್ರಾಂತಿಗೆ ಬಟ್ಟೆ ಕೊಡಿಸುವ ಬಗ್ಗೆ ಯೋಚಿಸಿ’ ಎಂದಿದ್ದಳು.

    ಅನಂತುವಿನ ಪ್ರತಿಭಟನೆ ಕಾರ್ಯಕ್ರಮ, ಇತರೆ ಗೌಜು ಗದ್ದಲದ ನಡುವೆ ಇಂದಿನವರೆವಿಗೂ ರತ್ನಾಕರನೊಡನೆ ಮಾತನಾಡಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಲೆಟರ್ ನೀಡಲು ಬಂದವನು ಆತನೊಂದಿಗೆ ಬಾರ್ ನಲ್ಲಿ ಕುಳಿತ್ತಿದ್ದೇನೆ. ‘ಮನೆಯವರನ್ನು ದೂರ ಮಾಡುವಂತಹ ಪರಿಸ್ಥಿತಿ ಏನೋ ಬಂದಿದೆ ಈಗ? ನೀನು ತಾಯಿ ಇಲ್ಲದೇ ಬೆಳೆದವನು, ಹದಿನೈದು ತುಂಬೋವರೆವಿಗೂ ಹೇಗೋ ಬೆಳೆದ ನಿನ್ನನ್ನ ನಂತರ ಸಾಕಿದ್ದು ನಿನ್ನತ್ತಿಗೆಯಂದಿರು ಮತ್ತು ಅಣ್ಣಂದಿರು ಎಂಬುದನ್ನ ಮರಿಬೇಡ, ಸತ್ತು ಹೋದ ತಾಯಿ ನನ್ನ ಅತ್ತಿಗೆಯಂದಿರ ರೂಪದಲ್ಲಿ ಬಂದಿದ್ದಾಳೆಂದು ನೀನೇ ಹೇಳುತ್ತಿದ್ದೆ, ಅವರನ್ನು ದೂರ ಮಾಡಿಕೊಳ್ಳುವ ಇರಾದೆ ಯಾಕೆ?’ ಎಂದೆ.
ಅಷ್ಟು ಬೇಗ ಆತ ಒಂದು ಬಿಯರ್ ಬಾಟಲ್ ಮುಗಿಸಿದ್ದ, ಇಂದೇಕೋ ಸಿಗರೇಟ್ ಕೂಡ ಕೇಳಿದ, ನಾನು ನೀಡಲಿಲ್ಲ. ‘ಸಿಗರೇಟ್ ಸೇದೋದು, ಕುಡಿಯೋದು ಇವೆಲ್ಲಾ ನಮ್ಮ ಕಿಡ್ನಿ, ಲಿವರ್‍ನನ್ನು ತಿಂದು ಹಾಕಿಬಿಡುತ್ತವೆ ಕಣೋ, ಕುಡಿಯೋದನ್ನೇ ಬಿಟ್ಟುಬಿಡೋಣವೆಂದು ಎಷ್ಟು ಬಾರಿ ಹೇಳಿದ್ದೇನೆ, ಆದರೆ ಈಗ ನೀನು ಸಿಗರೇಟನ್ನು...’ ಎನ್ನುವಷ್ಟರಲ್ಲಿ ಆತ ಪ್ಯಾಕಿನಿಂದ ಒಂದು ಸಿಗರೇಟ್ ಕಸಿದುಕೊಂಡು ತುಟಿಗಿಟ್ಟು ಬೆಂಕಿ ಹಚ್ಚಿದ್ದ. 

    ಈತನನ್ನು ಸರಿಪಡಿಸಲು ಅನಂತುವಿನಿಂದ ಮಾತ್ರ ಸಾಧ್ಯವೆಂದು ಅರಿತ ನಾನು ಅನಂತುವಿಗೆ ಬರಲು ಮೆಸೆಜ್ ಮಾಡಿದ್ದೆ. ಸರಿಯಾದ ಘಳಿಗೆಗೆ ಆತ ಬಂದಿದ್ದ. ‘ನಾನೀಗ ಸಂದಿಗ್ಧತೆಯಲ್ಲಿದ್ದೇನೋ ಕಣ್ರೋ, ಮನೆಯಲ್ಲಿ ಮದುವೆ ಮಾಡಿಕೊಳ್ಳಲು ವಿಪರೀತ ಹಿಂಸೆ ಮಾಡ್ತಾ ಇದ್ದಾರೆ, ಒಂದು ವರ್ಷ ಹೇಗೋ ಸತಾಯಿಸಿಕೊಂಡು ಬಂದಿದ್ದೆ, ಆದರೆ ಈಗ ಹಾಸಿಗೆ ಹಿಡಿದಿರುವ ನಮ್ಮ ತಂದೆಯನ್ನು ಮುಂದಿಟ್ಟುಕೊಂಡು ಹೊಸ ರೀತಿ ಆಟ ಶುರುವಿಟ್ಟುಕೊಂಡಿದ್ದಾರೆ, ಬೀದಿ ಬೀದಿ ಸುತ್ತೋ ಹುಚ್ಚನನ್ನ ಹಿಡಿದು ಮದುವೆ ಮಾಡೋ ಹಾಗೆ ಆಡ್ತಾ ಇದ್ದಾರೆ. ಹುಡುಗಿ ಸಿಗೋಲ್ಲ, ಈಗ ಒಂದೆರಡು ಕಡೆ ಒಳ್ಳೆಯ ಸಂಬಂಧ ಬಂದಿದೆ, ಮದುವೆ ಖರ್ಚು ಅವರೇ ನೋಡ್ಕೋತಾರೆ, ನಿನ್ನಭಿಪ್ರಾಯ ಏನು ಅಂತಾರೆ, ಇನ್ನೆರಡು ವರ್ಷದವರೆವಿಗೆ ಮದುವೆ ಬೇಡ ಅಂದರೂ ಅವರು ಒಪ್ಪಲ್ಲ, ಹೇಗಾದರೂ ಮಾಡಿ ಒಪ್ಪಿಸಿಕೊಳ್ಳಬೇಕು ಅನ್ನೋದೇ ಅವರ ಹಠ...’ ಹೀಗೆ ಹೇಳುತ್ತ ಹೋದವನು ಒಂದು ಘಂಟೆವರೆವಿಗೂ ಮಾತನಾಡಿ ಹಗುರಾದ. 

ಮದುವೆಯ ಖರ್ಚನ್ನು ತಾವೇ ನೋಡಿಕೊಂಡು ಮದುವೆ ಮಾಡಿಕೊಡಲು ಹುಡುಗಿಯ ಮನೆಯವರು ತಯಾರಿದ್ದರೂ ಸಣ್ಣ ಪುಟ್ಟವು ಎಂದುಕೊಂಡೇ ಲಕ್ಷ ಲಕ್ಷ ಖರ್ಚಾಗುತ್ತದೆ. ಆದರೆ, ರತ್ನಾಕರನನ ಅಣ್ಣಂದಿರು ಆ ಖರ್ಚನ್ನೂ ನೋಡಿಕೊಂಡು ಮದುವೆ ಮಾಡಿಕೊಡಲು ತಯಾರಿದ್ದರು. ಯಾವಾಗಲೂ ಒಂಟಿ ಇರುತ್ತಾನೆ, ಊಟ ತಿಂಡಿಗೆ ತೊಂದರೆ, ಹೊರಗಿನ ಊಟ ಆರೋಗ್ಯಕ್ಕೆ ಒಳ್ಳೆಯದಲ್ಲ, ತನ್ನ ಬಟ್ಟೆ ತಾನೇ ಒಗೆದುಕೊಳ್ಳಬೇಕು, ಜೊತೆಗೆ ಮಲತಾಯಿಯ ಅಪೌಷ್ಠಿಕತೆಯಲ್ಲಿ ಬೆಳೆದಾತ ನಂತರದ ದಿನಗಳಲ್ಲಿ ಹಾಸ್ಟೆಲ್‍ಗಳಲ್ಲಿ ಬೆಳೆದಿದ್ದರಿಂದ ಆದಷ್ಟು ಬೇಗ ತನ್ನದೇ ಸಂಸಾರ ಕಟ್ಟಿಕೊಂಡು ಬಂದವಳ ಜೊತೆ ಆರಾಮವಾಗಿರಲಿ, ಹೆಂಡತಿ ಬಂದುಬಿಟ್ಟರೆ ಎಲ್ಲಾ ಕಷ್ಟಗಳು ಮಾಯವಾಗಿ ಸುಖ ಜೀವನ ದೊರಕಿಬಿಡುತ್ತದೆ ಎಂಬುದು ಅವರಭಿಪ್ರಾಯ. ಅದೂ ಇಲ್ಲದಿದ್ದರೆ ಆತ ಯಾರನ್ನಾದರೂ ಇಷ್ಟ ಪಟ್ಟಿದ್ದರೆ ಅವರನ್ನೇ ಮದುವೆಯಾಗಲಿ ಎಂದೂ ಹೇಳುತ್ತಾರಂತೆ. 

ಆದರೆ, ರತ್ನಾಕರನನ ಪರಿಸ್ಥಿತಿ ಗಂಟುಬಿದ್ದು ನುಲಿದುಕೊಂಡ ನೂಲನ್ನು ಬಿಡಿಸಿದಂತಿದೆ. ‘ನಿಮ್ಮ ಪ್ರೀತಿ ವಿಚಾರ ಎಲ್ಲರಿಗೂ ಮುಟ್ಟಿಸಿ ಮದುವೆಯ ಬಗ್ಗೆ ಯೋಚಿಸೋದಲ್ಲವೇ?’ ಎಂದರೆ ಅದೂ ಆಗುವುದಿಲ್ಲವೆನ್ನುತ್ತಾನೆ. ಆತ ಹೇಳುವಂತೆ ಹುಡುಗಿ ಇನ್ನೂ ಓದುತ್ತಿದ್ದಾಳೆ, ಅವರ ಮನೆಯಲ್ಲಿ ಮದುವೆಯ ಬಗ್ಗೆ ಆಲೋಚಿಸಿಲ್ಲ, ಇವಳಿಗಿಂತ ಮುಂಚೆ ಹುಟ್ಟಿರುವ ಇಬ್ಬರು ಹುಡುಗಿಯರಿಗೇ ಮದುವೆ ಆಗಿಲ್ಲ. ಜೊತೆಗೆ ಇಬ್ಬರದೂ ಬೇರೆ ಬೇರೆ ಜಾತಿ.  ಅವರೋ ರತ್ನಾಕರನ ಮನೆಯವರಂತೆ ಮಾನವೀಯತೆಗೆ ಬೆಲೆ ಕೊಡುವವರಲ್ಲ, ಬದಲಾಗಿ ಅಂತರ್ಜಾತಿ ವಿವಾಹಕ್ಕೆ ಉರಿದುಬೀಳುವ ಜನ, ಮರ್ಯಾದೆ ಹತ್ಯೆಗೂ ಹೆದರದೆ ಕೊಲೆ ಮಾಡಿ ಒಂದಷ್ಟು ವರ್ಷ ಜೈಲಿನಲ್ಲಿ ಇದ್ದು ಬರಲೂ ಹೇಸದವರು. ಈ ಪರಿಸ್ಥಿತಿಯಲ್ಲಿ ಆತ ತನ್ನಿಷ್ಟದ ಹುಡುಗಿಯನ್ನು ಸಾಮಾಜಿಕವಾಗಿ ತೋರಿಸಿಕೊಳ್ಳಲು ಬಹಳ ಹೆದರಿದ್ದ ಎನ್ನುವುದಕ್ಕಿಂತ ಗೊಂದಲದಲ್ಲಿದ್ದಾನೆ ಎಂಬುದು ಸ್ಪಷ್ಟವಾಗುತ್ತಿತ್ತು. ಗೊತ್ತಾಗುತ್ತಿತ್ತು. ತನ್ನ ಮನೆಯವರು ತನ್ನಭಿಲಾಶೆಗೆ ಎದುರು ಬರುವುದಿಲ್ಲವೆಂಬುದು ಆತನಿಗೆ ಸ್ಪಷ್ಟವಾಗಿತ್ತು, ಆದರೆ ಹುಡುಗಿಯ ಮನೆಯವರನ್ನು ಹೇಗೆ ಒಪ್ಪಿಸಿಕೊಳ್ಳುವುದು, ಈ ವಿಚಾರವಾಗಿ ಮಾತನಾಡಿದರೆ ನವ್ಯಳ ಓದನ್ನು ಅರ್ಧಕ್ಕೆ ಮೊಟಕುಗೊಳಿಸಿ ಮನೆಯಲ್ಲಿಯೇ ಉಳಿಸಿಕೊಳ್ಳಬಹುದು ಎಂಬ ಭಯ ಆತನನ್ನು ತೀವ್ರವಾಗಿ ಕಾಡುತ್ತಿತ್ತು.

‘ನೀನು ಬುದ್ಧಿವಂತ, ಇಷ್ಟೆಲ್ಲಾ ಗೊಂದಲಗಳ ಅರಿವಿರಲಿಲ್ಲವೇ?’ ಎಂದು ಕೇಳಿದ್ದೆ. ಅದಕ್ಕೆ ಆತ ‘ಆ ಸಮಯದಲ್ಲಿ ಆಕೆ ಪ್ರಪೋಸ್ ಮಾಡಿದಾಗ ನನಗೆ ಒಪ್ಪಿಕೋಬೇಕು ಅನ್ನಿಸ್ತು ಒಪ್ಪಿಕೊಂಡ್ಬಿಟ್ಟೆ, ಆದರೆ ಈಗ ದುಡುಕಿಬಿಟ್ಟೆ  ಅನ್ನಿಸ್ತಾ ಇದೆ, ನವ್ಯ ಶುದ್ಧ ಮನಸ್ಸಿನ ಹುಡುಗಿ, ನನ್ನನ್ನು ಎಷ್ಟು ಹಚ್ಚಿಕೊಂಡಿದ್ದಾಳೆಂದರೆ ‘ನನ್ನನ್ನು ಬಿಟ್ಟುಬಿಡು’ ಎಂದು ಒಮ್ಮೆ ತಮಾಷೆಗೆ ಹೇಳಿದಾಗ, ಜ್ವರ ಬಂದು ಒಂದು ವಾರ ಹಾಸಿಗೆ ಹಿಡಿದಿದ್ದಳು, ಆಕೆ ನನ್ನನ್ನು ಮತ್ತು ಆಕೆಯ ಕುಟುಂಬದವರನ್ನೂ ಬಿಡಲು ತಯಾರಿಲ್ಲ, ನೀನೊಂದು ಒಳ್ಳೆಯ ಸ್ಥಾನಕ್ಕೆ ಬಂದು ಸೆಲೆಬ್ರಿಟಿಯಾಗು ನಂತರ ಮನೆಯವರು ನಿನ್ನನ್ನೇ ಅರಸಿ ಬರ್ತಾರೆ, ನೀನು ಆ ರೀತಿ ಆಗ್ತೀಯ ಅಂತ ನನಗೆ ಗೊತ್ತು ಅಂತಾಳೆ’ ಎಂದಿದ್ದ. ನಿಜ ಹೇಳಬೇಕೆಂದರೆ ರತ್ನಾಕರ ದೊಡ್ಡ ಪ್ರತಿಭಾವಂತ, ಹಣದಲ್ಲಿ ಎಲ್ಲವನ್ನೂ ಅಳೆಯುವ ಈ ಜಗತ್ತಿನಲ್ಲಿ ಆತನ ಪ್ರತಿಭೆಗೆ ಬೆಲೆ ಸಿಕ್ಕಿರಲಿಲ್ಲ, ಮರು ಪ್ರಯತ್ನ ಮಾಡದೆ ಈ ಗೊಂದಲಕ್ಕೆ ಸಿಲುಕಿಕೊಂಡವನೇ ಹೈರಾಣಾಗಿಹೋಗಿದ್ದ. 

ರಾತ್ರಿ ಆತನ ಜೊತೆ ಮಲಗಿದ ನಾನು ಅನಂತುವಿನ ಮಾತಿಗಾಗಿ ಕಾದಿದ್ದೆ. ಆತ ಯಾವುದೋ ಸಂಬಂಧ ನೋಡಿದ್ದೇನೆ ಎಂದಿದ್ದ. ಒಬ್ಬಳು ಗಂಡಬಿಟ್ಟವಳು, ನೋಡಲು ತಕ್ಕಮಟ್ಟಿಗಿದ್ದಾಳೆ, ಮದುವೆಯಾಗಿ ಇನ್ನೂ ವರ್ಷವಾಗಿಲ್ಲ ಎಂದಿದ್ದ. ಆಗಲಿ ಎಂದಿದ್ದೆ. ಆದರೆ ಆತ ‘ಒಂದು ಕಡೆ ನನ್ನ ಹೆಂಡತಿ ಮಕ್ಕಳ ಗೋಳು, ಮತ್ತೊಂದೆಡೆ ಈ ರತ್ನಾಕರನ ಸಧ್ಯದ ತೊಳಲಾಟ ನನ್ನನ್ನು ತಿನ್ನುತ್ತಿವೆ’ ಎಂದು ಬೇಸರಿಸಿಕೊಂಡ. ನಾನು ಮೌನಿಯಾದೆ. ಕಂಠಪೂರ್ತಿ ಕುಡಿದಿದ್ದರೂ ರತ್ನಾಕರನ ಹಾಸಿಗೆಯ ಹೊರಳಾಟ ಆತನ ಮಾನಸಿಕ ಸಂಧಿಗ್ದತೆಯನ್ನು ನನಗೆ ಅರ್ಥ ಮಾಡಿಸುತ್ತಿತ್ತು.

ಮುಂಜಾನೆ ಬೇಗ ಎದ್ದವನೇ ಅನಂತು ನನ್ನನ್ನು ತನ್ನ ಮನೆಗೆ ಕರೆದುಕೊಂಡು ಬಂದ. ಇಲ್ಲಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿರುವ ಸೋಮನಹಳ್ಳಿಯಲ್ಲಿ ಒಂದು ಹುಡುಗಿಯನ್ನು ತೋರಿಸುತ್ತೇನೆ, ಚೂರು ಕಪ್ಪು ಆದರೂ ಸಂಸಾರ ತೂಗಿಸಬಲ್ಲ ಗಟ್ಟಿಗಿತ್ತಿ ಎಂದಿದ್ದ. ಅವನ ಮನೆಯಲ್ಲಿ ತಿಂಡಿ ಮಾಡಿಕೊಂಡು ಹೊರಡುವ ಪ್ಲಾನ್ ನಮ್ಮದಾಗಿತ್ತು. ಆದರೆ ಮನೆಗೆ ಬಂದೊಡನೆ ಮಕ್ಕಳು ತುಂಬಾ ತಾತ್ಸಾರದಿಂದ ನಮ್ಮ ಕಡೆಗೆ ಮುಖ ತಿರುಗಿಸಿದವು. ಅನಂತುವಿನ ಹೆಂಡತಿಯ ಬಳಿಗೆ ಹೋದರೆ ಆಕೆಯೂ ಒಣ ಅಹಂಕಾರದಿಂದ ನಮ್ಮೆಡೆಗೆ ನೋಡಲಿಲ್ಲ. ‘ಸಾರ್ರಿ ಭವ್ಯ, ರಾತ್ರಿ ಆ ರೀತಿ ಕೋಪ ಮಾಡಿಕೊಂಡು ಹೋಗ್ಬಾರದಾಗಿತ್ತು’ ಎಂದು ಅನಂತು ಹೇಳಿದಾಗ ನಾನಿರುವುದನ್ನೂ ಕಡೆಗಣಿಸಿದ ಆಕೆ ‘ನೀವು ಎಲ್ಲಿಗಾದ್ರೂ ಹೋಗಿ, ನಿಮ್ಮನ್ನ ಕಟ್ಟಿಕೊಂಡ ಮೇಲೆ ನಮಗೇನು ಉಪಯೋಗವಾಗಿದೆ’ ಎಂದಳು. ಅವಳ ಮೊಗದಲ್ಲಿ ರಾತ್ರಿಯೆಲ್ಲಾ ಗಂಡ ಎಲ್ಲಿದ್ದ, ಅವನ ಮನೆಯಿಂದ ಅವನೇ ಹೊರಗೆ ಹೋಗಿ ಎಷ್ಟು ಕಷ್ಟ ಅನುಭವಿಸಿರಬಹುದು, ನಿದ್ದೆ ಮಾಡಿದ್ದನೋ ಇಲ್ಲವೋ ಇತ್ಯಾದಿಯಾಗಿ ಯಾವ ಆಲೋಚನೆಯೂ ಇರಲಿಲ್ಲ. ಅನಂತನೂ ರೇಗಿಕೊಂಡ - ‘ಹಾಳಾಗಿ ಹೋಗಲಿ ಬಿಡು, ಈಗೇಕೆ ಅಮ್ಮ ಮಕ್ಕಳೆಲ್ಲಾ ಈ ರೀತಿಯಾಗಿ ಮುನಿಸಿಕೊಂಡಿರೋದು’ ಎಂದ ಕೂಡಲೇ ಆಕೆ ಯಾವುದೋ ಸಣ್ಣ ಕಾಗದವನ್ನು ಮುಖದ ಮೇಲೆಸೆದಳು. ಆ ಕಾಗದ ಅನಂತುವಿನ ಬ್ಯಾಂಕ್ ಅಕೌಂಟಿನ ‘ಮಿನಿ ಸ್ಟೇಟ್ ಮೆಂಟ್’ ಆಗಿತ್ತು, ರಾತ್ರಿ ಇಲ್ಲೇ ಎಲ್ಲೋ ಮರೆತು ಹೋಗಿದ್ದ ಅನಿಸುತ್ತದೆ. ‘ನಿಮ್ಮ ಹೆಂಡತಿ ಮಕ್ಕಳ ಮೇಲೆ ಆಸೆಯಿರೋರು ಅನಾಥಾಶ್ರಮ ಕಟ್ಟೋಕೆ ಈ ರೀತಿಯಾಗಿ ಮೂರು ಲಕ್ಷ ದುಡ್ಡನ್ನು ಬ್ಯಾಂಕಿನಿಂದ ಎಳೆದುಕೊಳ್ಳುತ್ತಿರಲಿಲ್ಲ, ಗಲ್ಲಿ ಗಲ್ಲಿಯಲ್ಲಿ ಹೆಕ್ಕಿ ತಿನ್ನುವ ದರಿದ್ರ ಮಕ್ಕಳ ಮೇಲಿರೋ ಆಸೆ ನಿಮಗೆ ನಮ್ಮ ಮೇಲಿಲ್ಲ, ಥೂ...’ ಎಂದಳು. ‘ಅಯ್ಯೋ, ನಾನೇನು ಕಡಿಮೆ ಮಾಡಿದ್ದೇನೆ ನಿಮಗೆ, ಮನೆಯಲ್ಲಿ ಎಲ್ಲವೂ ಇದೆಯಲ್ಲ, ಒಂದೇ ಒಂದು ದಿನ ಏನಾದ್ರೂ ನಿಮ್ಮನ್ನ ಖಾಲಿ ಹೊಟ್ಟೆಯಲ್ಲಿ ಇರಿಸಿದ್ದಿದೆಯೇ?’ ಎಂದ ಅನಂತುವಿನೆಡೆಗೆ ತಿರುಗಿದ ಆಕೆ ‘ಥೂ... ನಿಮ್ಮನ್ನು ಕಟ್ಟಿಕೊಂಡು ನಾನು ಹಾಳಾದೆ’ ಎಂದವಳು ಮನೆಯಿಂದ ಹೊರಗೆ ಹೋದಳು. ಅವಳು ಏನೇ ಹೇಳಿದರೂ ಅನಂತು ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲವೆಂಬುದನ್ನು ನಾನು ಅರಿತಿದ್ದೆ. ಬೀದಿ ಬದಿಯಲ್ಲಿ ಭಿಕ್ಷೆ ಬೇಡುವವರ ಮೇಲೆ ಕಾಳಜಿ ಇಟ್ಟಿರುವ ಅವನಿಗೆ ತನ್ನ ಹೆಂಡತಿ ಮಕ್ಕಳಿಗೆ ಅರ್ಧ ದಾರಿಯಲ್ಲಿ ಮೋಸ ಮಾಡದೆ ಹೋಗದಿರುವುದೂ ಗೊತ್ತು. ಎಷ್ಟೇ ಮಾಡಿದರೂ ಆತನೆಡೆಗೆ ಆಕೆಯ ಕೊಂಕು ನುಡಿಗಳು ಇದ್ದೇ ಇರುತ್ತದೆ. ಆದರೆ, ಆಗಾಗ ಈ ವಿಚಾರಗಳು ಅನಂತುವಿನ ಮಾನಸಿಕ ಸಮತೋಲನವನ್ನು ಅಲುಗಾಡಿಸಿ ಆತನ ಕೆಲಸಕ್ಕೆ ಅಡ್ಡಿಯಾಗುತ್ತವೆ ಎಂಬುದು ಸತ್ಯ.

ನನ್ನ ಕೊರಿಯರ್ ಕೆಲಸ ಢಾಳಾದಾಗ ಅನಂತು ಕಟ್ಟಿಸುತ್ತಿದ್ದ ಅನಾಥಾಶ್ರಮವನ್ನು ನೋಡಿಕೊಳ್ಳುತ್ತಿದ್ದೆ. ಅನಾಥಾಶ್ರಮದ ವಸತಿ ಗೋಡೆಗಳು ಈಗಷ್ಟೇ ಮೇಲೇಳುತ್ತಿವೆ, ಕಟ್ಟಡ ನಿರ್ಮಾಣಗಳಿಗೆ ಅನಂತು ಖರ್ಚು ಮಾಡುತ್ತಿರುವ ಮುಕ್ಕಾಲು ಭಾಗ ಸಾರ್ವಜನಿಕರಿಂದ ದೇಣಿಗೆಯಾಗಿ ಬಂದದ್ದು. ಕಟ್ಟಡ ಕಟ್ಟುವ ಮೇಸ್ತ್ರಿ ಅನಂತುವಿನ ಸ್ವಂತವಾದರೂ ಆತನ ಮೇಲೆ ನಂಬಿಕೆ ಇರಲಿಲ್ಲ. ಆದುದ್ದರಿಂದ  ನಿರ್ಮಾಣಗೊಳ್ಳುತ್ತಿರುವ ಕಟ್ಟದ ಸಮೀಪವೇ ಆತನಿರುತ್ತಿದ್ದ. ನಾನು ಬಂದಾಗಷ್ಟೇ ಸ್ವಲ್ಪ ವಿಶ್ರಾಂತಿ ಆತನಿಗೆ. ಇಂದು ಒಂದೆರಡು ವಿಚಾರಗಳ ಇತ್ಯರ್ಥ ಮಾಡಿಕೊಂಡು ಹೋಗೋಣವೆಂದೇ ಅನಂತುವಿನ ಬಳಿ ಬಂದಿದ್ದೆ. ಆತ ಮನಸ್ಸು ಮಾಡಿದರೆ ಕ್ಷಣದಲ್ಲೇ ಬಗೆ ಹರಿಯುವ ಸಮಸ್ಯೆಗಳು ಇವು. ಆತನೊಂದಿಗೆ ಪಕ್ಕದಲ್ಲೇ ಇದ್ದ ದಿಣ್ಣೆಯ ಮೇಲೆ ಕುಳಿತೆ.

‘ಈ ದಿಣ್ಣೆ ಕಟ್ಟಡಗಳು ಇನ್ನಷ್ಟು ತಲೆಮಾರುಗಳವರೆವಿಗೂ ಒಳ್ಳೆಯದಕ್ಕೇ ಉಪಯೋಗವಾಗಲಿ’ ಎಂದ.

‘ನಿನ್ನಂತಹವರ ಪರಿಶ್ರಮ ಮಣ್ಣಾಗುವುದಿಲ್ಲ ಕಣೋ. ಈ ಭೂಮಿ ಇರುವವರೆವಿಗೂ ನಿನ್ನನ್ನು ಎಲ್ಲರೂ ನೆನೆಯುತ್ತಾರೆ, ಸದ್ಯಕ್ಕೆ ನಮ್ಮನ್ನು ಉಳಿಸು’ ಎಂದೆ. ನನ್ನ ಮಾತು ಆತನಿಗೆ ಒಗಟಾಗಿ ಕಂಡಿತು. ಮುಖ ಅಗಲ ಮಾಡಿಕೊಂಡು ನನ್ನನ್ನೇ ದಿಟ್ಟಿಸಿದ.

‘ಅದಾವುದೋ ಹುಡುಗಿಯನ್ನು ತೋರಿಸುತ್ತೇನೆ ಅಂದಲ್ಲೋ, ಏನಾಯಿತು?’ - ನಾನಂದೆ.

‘ಅದೇ, ಆ ಗಂಡ ಬಿಟ್ಟವಳನ್ನೇ?’

‘ಹೌದು!’

‘ಆಕೆಯ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ ಕಣೋ, ಗಂಡ ಒಳ್ಳೆಯವನೇ ಆಗಿದ್ದನಂತೆ ಆದರೆ ಇವಳ ಗಯ್ಯಾಳಿತನಕ್ಕೆ ಹೆದರಿ ಓಡಿದ್ದಾನೆ, ಇನ್ನೂ ನೀನು ಬದುಕುವುದೆಂದರೆ...’ – ಮತ್ತೇನೋ ಹೇಳಲು ಬಂದ ಆತ ಮೌನವಾದ.

‘ಈ ಜನ್ಮದಲ್ಲಿ ನನಗೆ ಮದುವೆ ಇಲ್ಲವೆನ್ನು, ನನ್ನಮ್ಮನಿಗೂ ವಯಸ್ಸಾಗುತ್ತ ಬಂತು, ಒಂದು ಚರಿಗೆ ನೀರನ್ನು ಸೇದಲೂ ಆಕೆಯಿಂದಾಗುತ್ತಿಲ್ಲ ಕಣೋ ಅನಂತು’

‘ಗಂಡ ಹೋದ ಮೇಲೆ ಆಕೆ ತನ್ನನ್ನು ತಾನು ತಿದ್ದಿಕೊಂಡಿದ್ದಾಳೆ ಎಂದು ಬಲ್ಲವರು ಹೇಳಿದ್ದಾರೆ, ಒಮ್ಮೆ ವಿಚಾರಿಸುತ್ತೇನೆ ಇರು, ಅದಲ್ಲದೇ ಕೊಳ್ಳೇಗಾಲದ ಪಕ್ಕ ಇರುವ ಕಂಡಯ್ಯನಪಾಳ್ಯದಲ್ಲಿ ಒಬ್ಬರು ನನಗೆ ತಿಳಿದವರು ಹುಡುಗ ಬೇಕು ಎಂದಿದ್ದಾರೆ, ಆದರೆ...’

‘ಆದರೆ ಏನೋ?’

‘ಏನೂ ಇಲ್ಲ, ಮತ್ತೇನು ಸಮಸ್ಯೆ ಹೇಳು’

‘ನನ್ನದಿರಲಿ, ರತ್ನಾಕರನ ವಿಚಾರವೇನೋ, ಪ್ರತಿಭಾವಂತನಾದ ಆತನ ಜೀವನ ಯಾವ ಗತಿಯಲ್ಲಿದೆಯೆಂದು ಯೋಚಿಸಿದ್ದೀಯಾ?’

‘ಸÀಧ್ಯ ಮನಸ್ಸು ರತ್ನಾಕರ್ ಸ್ಥಿತಿಯ ಬಗ್ಗೆಯೇ ಯೋಚಿಸುತ್ತಿದೆ. ಆತನ ಅಣ್ಣಂದಿರಿಗೆ ವಿಚಾರ ಮುಟ್ಟಿಸೋಣವೆಂದರೆ ನನಗೂ ಆತನಂತೆಯೇ ಆ ಹುಡುಗಿಯ ವಿಚಾರದಲ್ಲಿ ಗೊಂದಲವಿದೆ. ಆತನ ಮೊಬೈಲ್‍ನಲ್ಲಿ ಆ ಹುಡುಗಿಯ ಅಮ್ಮನ ಮೊಬೈಲ್ ನಂಬರ್ ಇತ್ತು, ರಾತ್ರಿಯೇ ಆ ನಂಬರನ್ನು ಕೇಳಿ ತೆಗೆದುಕೊಂಡೆ. ಈಯೆಲ್ಲಾ ಗೊಂದಲದಲ್ಲಿ ಸಾವಧಾನವಾಗಿ ಮಾತನಾಡಲು ನನಗೆ ಸಾಧ್ಯವಿಲ್ಲ. ನೀನೇ ಮಾತನಾಡು’ ಎಂದವನೇ ಮೊಬೈಲ್ ನಂಬರನ್ನು ನನಗೆ ನೀಡಿದ್ದ.

ಮೊಬೈಲ್ ನಂಬರ್ ಪಡೆದ ನಾನು ಯಾವ ರೀತಿ ಮಾತನಾಡಬೇಕೆಂದು ಸಜ್ಜಾಗಿ ಸ್ವಲ್ಪ ಚೇತರಿಸಿಕೊಂಡು ಉಸಿರು ಎಳೆದುಕೊಂಡು ನವ್ಯಳ ಅಮ್ಮನಿಗೆ ಫೋನಾಯಿಸಿದೆ. ರಿಂಗ್ ಆಗುವ ಹೊತ್ತಿಗೆ ಯಾಕೋ ಗೊಂದಲ ಮೂಡಿ ಕಟ್ ಮಾಡಿದ್ದೆ. ‘ನಾನು ಮಾಡುತ್ತಿರುವುದು ಸರಿಯೇ?’ ಎಂದು ನನ್ನನ್ನು ನಾನೇ ಕೇಳಿಕೊಂಡೆ. ನಂತರ ಈ ಜನಗಳಿಗೆ ಸುಬುದ್ಧಿ ಹೇಳಿ ತಿದ್ದಿ ತೀಡಿ ರತ್ನಾಕರನನ್ನು ಉಳಿಸಿಕೊಳ್ಳಬೇಕು ಎಂದೆನಿಸಿತ್ತು. ಮತ್ತೆ ಫೋನಾಯಿಸಿದೆ.

ನನ್ನನ್ನು ಮೊದಲು ಪರಿಚಯಿಸಿಕೊಳ್ಳುವಾಗ ಅವರನ್ನು ಅಮ್ಮ ಎಂದು ಕರೆದೆ. ಅಮ್ಮ ಎಂಬ ಶಬ್ದ ಆಕೆಯ ಕಿವಿಗೆ ಬಿದ್ದೊಡನೆ ತುಂಬಾ ಮೃದುವಾಗಿ ಹೋದರು. ನಂತರ ಈ ಯಾವತ್ತೂ ವಿಚಾರಗಳನ್ನು ಆಕೆಗೆ ಮುಟ್ಟಿಸಿದೆ. ‘ನಿಮ್ಮ ಮಗಳು ಮತ್ತು ನನ್ನ ಗೆಳೆಯ ರತ್ನಾಕರ್ ಒಬ್ಬರನ್ನೊಬ್ಬರು ಪ್ರೀತಿಸ್ತಾ ಇದ್ದಾರೆ’ ಎಂದಾಗ ಆಕೆಯ ಧ್ವನಿ ನಡುಗಲು ಪ್ರಾರಂಭಿಸಿತು. ಈ ವಿಚಾರ ಹೇಳುವುದಕ್ಕಿಂತ ಮುಂಚೆ ಎಷ್ಟೋ ದುರಂತಗಳನ್ನು ಆಕೆಗೆ ಹೇಳುವುದಲ್ಲದೇ, ಕೇವಲ ಮಾನವೀಯತೆಯ ಈ ಜಗದಲ್ಲಿ ಮನುಷ್ಯರು ತಮ್ಮ ತಮ್ಮ ನಡುವೆ ಗೆರೆ ಎಳೆದುಕೊಂಡು ಹೇಗೆ ತಮ್ಮ ಅವಸಾನಗಳಿಗೆ ಕಾರಣವಾಗುತ್ತಿದ್ದಾರೆ ಎಂಬುದನ್ನು ಸುತ್ತಲಿನ ಉದಾಹರಣೆಗಳ ಮೂಲಕ ಸವಿವರವಾಗಿ ತಿಳಿಸಿದ್ದೆ, ಜೊತೆಗೆ ರತ್ನಾಕರ್ ಎಂಬ ಒಬ್ಬ ಒಳ್ಳೆಯ ಮತ್ತು ಪ್ರತಿಭಾವಂತ ಹುಡುಗನ ಬಗ್ಗೆಯೂ ತಿಳಿಸಿಕೊಟ್ಟಿದ್ದೆ. ಇದಾವುದನ್ನೂ ಕಿವಿಗೆ ಹಾಕಿಕೊಳ್ಳದ ಆಕೆ ಒಮ್ಮೆಲೇ ‘ನೀವು ಸುಳ್ಳು ಹೇಳ್ತಾ ಇದ್ದೀರಿ, ನನ್ನ ಮಗಳು ಅಂಥವಳಲ್ಲ’ ಎಂದರು. 

‘ಅಂಥವಳಲ್ಲ ಎಂದರೆ ಅರ್ಥವೇನು? ಆಕೆಯೇನು ವ್ಯಭಿಚಾರ ಮಾಡಿಲ್ವಲ.್ಲ ಆಕೆಯ ಮನಸ್ಸು ಇಷ್ಟ ಪಟ್ಟ ಹುಡುಗನನ್ನು ಬಿಟ್ಟು ಮತ್ತೊಬ್ಬ ಹುಡುಗನಿಗೆ ಆಕೆಯನ್ನ ನೀವು ಮದ್ವೆ ಮಾಡಿಕೊಟ್ಟದ್ದೇ ಆದ್ರೆ ಅದನ್ನ ನಾನು ವ್ಯಭಿಚಾರ ಅಂತ ಹೇಳ್ತೇನೆ’ ಎಂದೆ.

‘ಈ ವಿಚಾರ ನನ್ನ ಗಂಡ ಮತ್ತು ಅವರಣ್ಣನಿಗೆ ತಿಳಿದ್ರೆ ಅಲ್ಲೋಲ ಕಲ್ಲೋಲ ಆಗುತ್ತೆ, ಕೂಡಲೇ ಅವರಿಗೆ ತಿಳಿಸಿಬಿಡ್ತೇನೆ, ನೀವೇ ಮಾತಾಡ್ಕೊಳ್ಳಿ’ ಎಂದಾಗ ‘ದಯವಿಟ್ಟು ಅವಸರ ಪಡ್ಬೇಡಿ, ಈ ಎಲ್ಲಾ ಅವಸರಗಳಿಂದ ನಿಮ್ಮ ಮಗಳಿಗೆ ತೊಂದರೆ ಆಗಬಹುದು, ನಿಮ್ಮ ಗಂಡ, ಅವರ ಕಡೆಯೋರ ದುಡುಕಿನಿಂದ ಅಪಾಯ ಆಗಬಹುದು’ ಎಂದೆ. ಅದಕ್ಕವರು ‘ನನ್ನ ಪರಿಸ್ಥಿತಿಯನ್ನೂ ಅರ್ಥ ಮಾಡ್ಕೊಳ್ಳಿ, ಮಗಳು ಈ ರೀತಿ ಮಾಡಿರೋದನ್ನು ತಾಯಿಯೇ ಮುಚ್ಚಿಟ್ಟಳು ಅನ್ನೋ ಅಪವಾದ ಬರೋಲ್ವೇ?’ ಎಂದಾಗ ‘ಸದ್ಯಕ್ಕೆ ಏನೂ ನಿರ್ಧಾರ ಬೇಡ, ನಿಮ್ಮ ಮಗಳಿಗೆ ತಿಳಿಯದಂತೆ ಇರಿ, ಮೊದಲು ಆರಾಮವಾಗಿ, ನಂತರ ಯೋಚಿಸಿ ನನಗೆ ಫೋನ್ ಮಾಡಿ’ ಎಂದು ಹೇಳಿ ಫೋನ್ ಕಟ್ ಮಾಡಿದ್ದೆ. 

ಆ ಅಮ್ಮ ಮಾತಿನ ಮಧ್ಯೆ ‘ನಿಮ್ಮ ಮಗಳು ಮುಂದೆ ಈ ಸ್ಥಿತಿಗೆ ಬಂದ್ರೆ ನೀವು ಒಪ್ಪಿಕೊಂಡು ಬಿಡ್ತಿರಾ?’ ಎಂದರು, ಅದಕ್ಕೆ ನಾನು ‘ಖಂಡಿತವಾಗಿಯೂ’ ಎಂದಿದ್ದೆ. ಆದರೆ, ‘ಈ ಸ್ಥಿತಿ’ ಎಂಬುದೇ ನನಗೆ ಅರ್ಥವಾಗಲಿಲ್ಲ. ಯಾವ ಸ್ಥಿತಿಯದು? ಮನಸ್ಸಿಗೆ ಕಟ್ಟುಪಾಡನ್ನು ಎಳೆಯುವ ಆ ಸ್ಥಿತಿಯ ಜೀವಂತಿಕೆ ಇನ್ನೂ ಏಕೆ ಇರಬೇಕು, ಆ ಸ್ಥಿತಿಯನ್ನು ಹುಟ್ಟುಹಾಕಿದವರು ಯಾರು? ಇನ್ನೂ ಜೀವಂತಿಕೆಯಿಂದಿರುವಂತೆ ಪ್ರೇರೇಪಿಸಿ ಪೋಷಿಸುತ್ತಿರುವವರಾರು? ನಾಶವಾಗುವ ಬದಲು ದಿನದಿಂದ ದಿನಕ್ಕೆ ತನ್ನ ಕಬಂಧಬಾಹುವನ್ನು ವಿಸ್ತಿರಿಸಿಕೊಳ್ಳುತ್ತಿರುವುದಾದರೂ ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ. ಈ ಜೀವನ ಉದ್ಭವಿಸುವ ಘಟ್ಟದಲ್ಲಿ ಅರ್ಥಗೊಳ್ಳುವ ವಿಚಾರಗಳು ದಿನಗಳೆದಂತೆ ಅಪಾರ್ಥಗೊಳ್ಳುವುದೇ ಹೆಚ್ಚು. ಪ್ರಪಂಚ ಆಧುನಿಕತೆಯೆಡೆಗೆ ನುಗ್ಗುತ್ತಿದೆ ಎಂಬ ವಿಚಾರ ಗಲ್ಲಿ, ಬೀದಿ, ಮನೆ ಮನೆಗಳಿಗೆ ಬಂದಾಗ ಪೊಳ್ಳಾಗಿ ಕಾಣುತ್ತದೆ. 

ಇಷ್ಟೆಲ್ಲಾ ಮಾತನಾಡುವ ನಾನು, ಫೋನಾಯಿಸುವ ಮೊದಲು ಆ ತಾಯಿಯ ಸ್ಥಿತಿಯನ್ನೂ ಅರ್ಥಮಾಡಿಕೊಂಡಿದ್ದೆ. ಒಂದು ಕಡೆ ತನ್ನ ಮಗಳನ್ನು ರಕ್ಷಿಸಿಕೊಳ್ಳಬೇಕು, ಮತ್ತೊಂದೆಡೆ ಗಂಡ ಸಂಬಂಧಿಕರಿಗೆ ವಿಚಾರ ಮುಟ್ಟಿಸದೇ ಇರಲಾಗದು. ನಾಳೆದಿನ ಹುಡುಗಿ ಅವಸರಪಟ್ಟು ಹುಡುಗನ ಜೊತೆ ಓಡಿಹೋಗಿ ಎಲ್ಲಿಯಾದರೂ ಮದುವೆಯಾದರೆ ತಾಯಿಗೆ ಮೊದಲೇ ತಿಳಿದಿದ್ದೂ ಆಕೆ ಏನೂ ಮಾಡಲಿಲ್ಲವಂತೆ ಎಂಬ ಅಪವಾದವನ್ನು ಮೈಮೇಲೇರಿಕೊಳ್ಳುವ ಭಯ.  ಕೊಲೆ ಮಾಡಲು ಹೇಸದ ಆ ಜನಗಳ ನಡುವೆ ಆ ತಾಯಿ ಗೊಂದಲ, ಭಯ, ಆತಂಕ ಸಂದಿಗ್ಧತೆಯಲ್ಲಿ ಬದುಕಬೇಕಾಗುತ್ತದೆ. ನವ್ಯಳಿಗಿಂತ ದೊಡ್ಡವರಾದ ಮತ್ತೆರಡು ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಮೊದಲು ಯೋಚಿಸಬೇಕು, ನಂತರವೇನಿದ್ದರೂ ಈಕೆಯದು, ಈಕೆ ಅವಸರ ಪಟ್ಟರೆ ಅವರಿಬ್ಬರಿಗೆ ತೊಂದರೆಯಾಗಬಹುದು. ರತ್ನಾಕರನ ಮನೆಯಲ್ಲಿ ಒತ್ತಾಯಿಸುವಂತೆ ಮುಂದಿನ ವಾರದಲ್ಲಿಯೇ ಆಕೆಯನ್ನು ಧಾರೆಯೆರೆದು ಕೊಡಲು ಸಾಧ್ಯವಿಲ್ಲ. ಮದುವೆಯ ನಂತರ ಕೂಡಿಕೊಳ್ಳುವ ಭರವಸೆಯಿಂದ ನವ್ಯ ಮನೆಯನ್ನು ಬಿಟ್ಟು ಬಂದುಬಿಡಬಹುದು, ಆದರೆ, ಸಧ್ಯದ ಮತ್ತು ಆನಂತರದ ಪರಿಸ್ಥಿತಿಯಲ್ಲಿ ಸಂದಿಗ್ಧತೆಗೆ ಸಿಲುಕಿಕೊಳ್ಳುವುದೆಂದರೆ ನವ್ಯಳ ತಾಯಿಯೆ. ಆದರೆ, ಮನುಷ್ಯ ಮನುಷ್ಯ ನಡುವಿನ ಗೆರೆಗಳನ್ನು ನಾಶಪಡಿಸುವ ನಿಟ್ಟಿನಲ್ಲಿ ನಮ್ಮೆಯ ಸ್ಥಿತಿಗಳಿಂದ ನಾವು ಹೊರಗೆ ಬರಲೇಬೇಕಾಗುತ್ತದೆ. ಈಯೆಲ್ಲಾ ‘ಸ್ಥಿತಿ’ಗೆ ಮನುಷ್ಯನೇ ಕಾರಣ.

ಈ ಗೊಂದಲಗಳು ನನ್ನೆದೆಯಲ್ಲಿ ಅಳಿಸಿಹೋಗದಂತೆ ಮನೆ ಮಾಡಿಕೊಂಡಿದ್ದರೂ ಹೆಚ್ಚಾಗಿ ಅನಂತುವಿನ ಮನಸ್ಸಿನಲ್ಲಿ ಹುತ್ತಗಟ್ಟುತ್ತಿದ್ದರೂ ಹೇಗೋ ಅನಂತುವಿನ ಕನಸಾದ ಅನಾಥಾಶ್ರಮದ ಕಟ್ಟಡಗಳನ್ನು ಒಂದು ತಿಂಗಳಿನಲ್ಲಿ ಮುಕ್ಕಾಲು ಭಾಗ ಕಟ್ಟಿಸಿ ಮುಗಿಸಿಕೊಂಡಿದ್ದೆವು. ಈ ದಿನದಲ್ಲಿ ಉದ್ಘಾಟನೆಯಾಗುವುದೆಂದು ಅನಂತು ಒಡ್ಡೋಲಗ ಸಾರಿಬಿಟ್ಟಿದ್ದ, ಒಂದಷ್ಟು ಪತ್ರಗಳನ್ನೂ ಹಂಚಿದ್ದ. ಕಟ್ಟಡ ಬೆಳೆಸುವ ಅವಸರದಲ್ಲಿ ರತ್ನಾಕರ್ ವಿಚಾರಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಲಾಗಲಿಲ್ಲ, ಒಮ್ಮೊಮ್ಮೆ ಮನಸ್ಸನ್ನು ಗಟ್ಟಿ ಮಾಡಿಕೊಂಡು ಅನಂತು ತನ್ನ ಹೆಂಡತಿ, ಮಕ್ಕಳು, ಗೆಳೆಯರ ಪರಿಧಿಯಿಂದ ಹೊರಗೆ ಬಂದು ಪ್ರಾಪಂಚಿಕವಾಗಿ ಯೋಚಿಸಿ ಮುನ್ನುಗ್ಗುವುದನ್ನು ನಾನು ಕಂಡಿದ್ದೇನೆ. ಆದರೆ ರತ್ನಾಕರ್ ಆ ಬಗೆಯವನಲ್ಲ, ಕುಳಿತಲ್ಲೇ ಕೊಳೆಯುವ ಮನಸ್ಥಿತಿ. ಮೊನ್ನೆ ಆತನ ಕೊಠಡಿಗೆ ಹೋಗಿದ್ದೆ, ಆತ ಒಟ್ಟೊಟ್ಟಿಗೆ ಐದಾರು ವಿಸ್ಕಿ ಬಾಟಲ್ ಖಾಲಿ ಮಾಡುವುದನ್ನು ನೋಡಿ ಗಾಬರಿಗೊಂಡಿದ್ದೆ. ಆತ ಮತ್ತೂ ಖಿನ್ನನಾಗಿದ್ದ. ಎಂದಿನಂತೆ ಆತನ ಕೋಣೆ ಗಬ್ಬು ನಾರುತ್ತಿತ್ತು. ‘ಅಲ್ಲೋ ಮಾರಾಯ, ನಾನು ನೀನು ಅನಂತು ತಿಂಗಳಿಗೊಮ್ಮೆ ಶಾಸ್ತ್ರಕ್ಕೆ ಎಂಬಂತೆ ಚೂರು ಚೂರು ಬಿಯರ್ ಕುಡಿಯುತ್ತಿದ್ದವರು, ಆದ್ರೆ ಈಗ ನೀನು...’ ಎನ್ನುವಷ್ಟರಲ್ಲಿ ಆತ ಕೈ ಮೇಲಕ್ಕೆತ್ತಿ ‘ಏನೋ ಹಾಳಾಗಿಹೋಗಲಿ ಬಿಡು’ ಎಂಬಂತೆ ಲೊಚಗುಟ್ಟಿದ. ಯಾವುದೋ ನಂಬರಿನ ಕರೆ ಮತ್ತೆ ಮತ್ತೆ ಹೊಡೆದುಕೊಳ್ಳುತ್ತಿತ್ತು, ಆದರೆ, ಆತ ಕರೆ ಸ್ವೀಕರಿಸಿ ಮಾತನಾಡುತ್ತಿರಲಿಲ್ಲ. 

ಅದೇ ಸಮಯಕ್ಕೆ ಸರಿಯಾಗಿ ನನಗೂ ಒಂದು ಅನಾಮಧೇಯ ಸಂಖ್ಯೆಯಿಂದ ಫೋನ್ ಬಂದಿತ್ತು. ಹೊರಗೆ ನಿಂತು ಹಲೋ ಎಂದಾಗ ಆ ದಡದಿಂದ ನವ್ಯ ಮಾತಾಡಿದ್ದಳು. ‘ಅಲ್ಲಮ್ಮ, ನೀನಿನ್ನೂ ಚಿಕ್ಕ ಹುಡುಗಿ, ಓದಿನ ಕಡೆ ಗಮನ ಕೊಡುವುದಲ್ಲವೇ?’ ಎಂದೆ, ‘ಅದಿರಲಿ, ಅವರು ತಲೆನೋವು ಎಂದು ಮೆಸೇಜ್ ಮಾಡಿದ್ರೂ, ಈಗ ಫೋನ್ ಮಾಡಿದ್ರೆ ರಿಸೀವ್ ಮಾಡ್ತಾ ಇಲ್ಲ, ಏನಾಯ್ತು ಅವರಿಗೆ?’ ಎಂದು ಅತ್ತುಕೊಂಡು ಕೇಳಿದಳು. ಅವಳ ಮಾತಿನಲ್ಲಿ ನಿಷ್ಕಾಮವಾದ ಪ್ರೇಮ ತುಂಬಿಕೊಂಡಿತ್ತು. ಎಲ್ಲೋ ಒಂದು ಕಡೆ ರತ್ನಾಕರ್‍ನನ್ನು ಸ್ವಲ್ಪ ಹೆಚ್ಚಾಗಿಯೇ ಮೊಗೆದುಕೊಂಡಿದ್ದಾಳೆ ಎಂದೆನಿಸಿತ್ತು. ‘ನನ್ನ ಜೊತೆಯಲ್ಲಿಯೇ ಇದ್ದಾನೆ, ಮಲಗಿಬಿಟ್ಟಿದ್ದಾನೆ’ ಎಂಬ ಸುಳ್ಳನ್ನು ಹೇಳಿದ್ದೆ. ಮಾತಿನ ಮಧ್ಯೆ ‘ನೀವು ಅಮ್ಮನಿಗೆ ತಿಳಿಸಿದ್ದು ಒಳ್ಳೆಯದೇ ಆಯಿತು, ನನ್ನ ಗೊಂದಲವನ್ನೆಲ್ಲಾ ನೀಗಿಸಿದ್ದೀರಿ, ನಾನು ಸ್ವಲ್ಪ ನಿರಾಳಳಾಗಿದ್ದೇನೆ ಈಗ’ ಎಂದಳು. ‘ಅಲ್ಲಮ್ಮಾ, ಈಗಿನ ಕಾಲ್ದಲ್ಲಿ ಲವ್ ಮ್ಯಾರೇಜ್‍ಗಳೆಲ್ಲಾ ಎಲ್ಲಿ ಗೆದ್ದಿವೆ? ಅಮ್ಮನ ಜೊತೆ ಮಾತನಾಡೋವಾಗ ನನ್ನ ಮಗಳು ನನ್ನ ಕಣ್ಣು ಅಂದ್ರು, ಅಂಥವರಿಗೆಲ್ಲಾ ಮೋಸ ಮಾಡಿ ಬಂದು ಕಷ್ಟ ಪಡೋದೆಲ್ಲಾ ಯಾಕೆ?’ ಎಂದೆ. ನನ್ನ ಮಾತಿನಲ್ಲಿ ಆಕೆಯನ್ನು ಬೇರೆಡೆಗೆ ತಿರುಗಿಸಿ ನಂತರ ರತ್ನಾಕರ್ ನನ್ನು ಒಪ್ಪಿಸಿಕೊಳ್ಳೋಣ ಎಂಬ ಅಪಕ್ವ ಆಸೆಯಿತ್ತು. ಆದರೆ ಆಕೆ ನಾನು ಹೇಳುವುದು ನಡೆಯುವುದಿಲ್ಲವೆಂಬಂತೆ ನಕ್ಕಳು. ‘ರತ್ನಾಕರ್ ಬಗ್ಗೆ ನಿಮಗೆ ಎಷ್ಟು ಗೊತ್ತೋ ಗೊತ್ತಿಲ್ಲ, ಆತ ಇಡೀ ಪ್ರಪಂಚವನ್ನೇ ಗೆಲ್ಲುತ್ತಾನೆ, ಮುಂದೆ ನಮ್ಮ ಮನೆಯವರೇ ಆತನ ಪಾದ ತೊಳೆದು ಆತನಿಗೆ ನನ್ನನ್ನು ಎರೆಯುತ್ತಾರೆ’ ಅಂದಾಗ ಈ ಸಂಬಂಧದ ಬೆಳವಣಿಗೆಯಲ್ಲಿ ರತ್ನಾಕರ್ ತಿಳಿದೋ ತಿಳಿಯದೆಯೋ ತುಂಬಾ ಸುಳ್ಳು ಹೇಳಿದ್ದಾನೆ ಎಂಬುದು ಗೊತ್ತಾಗಿಹೋಗಿತ್ತು. ‘ಹಾಗೇ ಆಗಲಿ, ಒಂದು ವೇಳೆ ರತ್ನಾಕರ್‍ಗೋಸ್ಕರ ನಿಮ್ಮ ಮನೆಯವರನ್ನು ಬಿಟ್ಟುಬರಬೇಕಾದ ಪರಿಸ್ಥಿತಿ ಬಂದ್ರೆ..’ ಎನ್ನುವಷ್ಟರಲ್ಲಿ ಆಕೆ ‘ಬರುವುದಿಲ್ಲ, ರತ್ನಾಕರ್ ಮೇಲೆ ನನಗೆ ನಂಬಿಕೆ ಇದೆ, ರತ್ನಾಕರ್ ಹಾಗೂ ನಮ್ಮ ಮನೆಯವರು ಇಬ್ಬರಲ್ಲಿ ಒಬ್ಬರನ್ನು ಬಿಟ್ಟರೂ ನಾನು ಬದುಕುವುದಿಲ್ಲ’ ಎಂದಿದ್ದಳು. ನನಗೆ ರತ್ನಾಕರ್ ಈಗ ಮತ್ತೂ ಗೊಂದಲವಾದಂತೆ ಕಂಡ, ಅವನ ಸಂದಿಗ್ಧತೆ ಮತ್ತು ಅವನ ಮುಂದೆ ಹೆಡೆಯೆತ್ತಿ ನಿಂತಿರುವ ಗೊಂದಲಗಳು ಅರ್ಥವಾಗಿದ್ದವು. ರತ್ನಾಕರ್ ಅತಿಯಾಗಿ ಕುಡಿಯುತ್ತಿರುವುದನ್ನು ಕಂಡ ನಾನು ಒಂದು ಗುಟುಕನ್ನು ಕೂಡ ಕುಡಿಯಲಿಲ್ಲ, ಆತನೊಡನಿದ್ದ ಗೊಂದಲಗಳು ಆತನನ್ನು ತಿನ್ನುತ್ತಿವೆಯೋ ಅಥವಾ ಇತ್ತೀಚೆಗೆ ಆತ ಚಟವಾಗಿ ಮಾಡಿಕೊಂಡ ಈ ಕುಡಿತವೇ ಆತನನ್ನು ನುಂಗುತ್ತಿರುವುದೋ ಅರ್ಥವಾಗಲಿಲ್ಲ.

ಈ ಯಾವತ್ತೂ ವಿಚಾರಗಳನ್ನು ಅನಂತುವಿಗೆ ಮುಟ್ಟಿಸಿದೆ. ಅನಾಥಾಶ್ರಮ ಕಟ್ಟಿಸುವ ಬರದಲ್ಲಿ ಆತನ ಬಗ್ಗೆ ಚಿಂತಿಸಲಾಗಲಿಲ್ಲವೆಂದು ಯೋಚಿಸಿದ. ಮೊದಲು ನೀನು ತಯಾರಾಗು ಇಲ್ಲೇ ಪಕ್ಕದ ಚಿಕ್ಕಮಾಲಾಪುರಕ್ಕೆ ಹೋಗಿಬರೋಣ, ನಿನಗಾಗಿ ಒಂದು ಹುಡುಗಿಯ ಗೊತ್ತಾಗಿದೆ ಎಂದವನೇ ತನ್ನ ಮನೆಗೆ ಕರೆದುಕೊಂಡು ಹೋದ. ಮನೆಗೆ ತಲುಪಿದೊಡನೆ ಇಬ್ಬರೂ ಗಾಬರಿಗೊಂಡೆವು. ಅನಂತುವಿನ ಹೆಂಡತಿ ಸೂಟ್ ಕೇಸ್ ಹಿಡಿದು ಮಕ್ಕಳನ್ನು ಕರೆದುಕೊಂಡು ಎಲ್ಲಿಗೋ ಹೋಗಲು ತಯಾರಿದ್ದಳು. ‘ಏನೇ ಇದು, ಎಲ್ಲಿಗೆ ಈ ಪಯಣ, ಅದೂ ಗಂಡನಿಗೂ ಹೇಳದೆ’ ಎಂದು ನಗುತ್ತ ಅನಂತು ಹೆಂಡತಿಯನ್ನು ಚುಡಾಯಿಸಿದ, ‘ಫೀಸ್ ಕಟ್ಟಲು ಅಪ್ಪ ಬೇಕು, ಈಗ ಎಲ್ಲಿಗೋ ಹೋಗೋದನ್ನ ಹೇಳಿ ಹೋಗೋಕೆ ಅಪ್ಪ ಬೇಡ್ವ?’ ಎಂದವನೇ ಮಗಳ ಹಣೆಗೆ ಮುತ್ತಿಕ್ಕಿದ. ಸಿಕ್ಕ ಸಿಕ್ಕ ವಸ್ತುಗಳನ್ನು ಜಾಡಿಸಿದ ಅನಂತುವಿನ ಹೆಂಡತಿ ‘ಈ ಸಂಕ್ರಾಂತಿ ಹಬ್ಬದಷ್ಟರಲ್ಲಿ ನನಗೊಂದು ವಾಷಿಂಗ್ ಮೆಷಿನ್ ತಂದ್ಕೊಡಿ ಅಂತ ಹೇಳಿದ್ದೆ, ನಿಮಗೆ ಯಾವುದೂ ಆಗೋಲ್ಲ, ನಿಮ್ಮಂತಹ ದರಿದ್ರದವರನ್ನು ಕಟ್ಟಿಕೊಂಡು ಇನ್ಮುಂದೆ ನಂಗೆ ಬದುಕೋಕೆ ಆಗೋಲ್ಲ, ನಾನು ನಮ್ಮಮ್ಮನ ಮನೆಗೆ ಹೋಗ್ತೇನೆ’ ಎಂದಳು. ಅಷ್ಟಕ್ಕೇ ಅನಂತುವಿನ ಮಕ್ಕಳು ‘ಪಪ್ಪಾ, ನಾವು ಟಿ.ಸಿ ತಕ್ಕೊಂಡಿದ್ದೇವೆ, ಅಲ್ಲೇ ಓದಿಕೊಳ್ತೇವೆ’ ಎಂದರು. ತನ್ನ ಹೆಂಡತಿಯ ಪ್ರತಿ ಹಠವನ್ನು ಸಹಿಸಿಕೊಂಡು ನಗುತ್ತಲೇ ಬಂದ ಅನಂತುವಿಗೆ ಇಂದೇಕೋ ತುಸು ಕೋಪ ಹೆಚ್ಚಿತ್ತು. ಕೋಪವನ್ನು ನಿಯಂತ್ರಿಸುವುದನ್ನು ಕಲಿ ಎಂದು ಆತನಿಗೆ ಅನೇಕ ಬಾರಿ ಹೇಳಿದ್ದೆ. ಆದರೆ ಇಲ್ಲಿ ನಿಯಂತ್ರಣ ಕಳೆದುಕೊಂಡ. ‘ನೋಡೋ, ಅಪ್ಪನ ವಿರುದ್ಧ ಮಕ್ಕಳನ್ನೇ ಎತ್ತಿ ಕಟ್ಟಿದಾಗಲೂ ನಾನು ಕೋಪಗೊಂಡಿರಲಿಲ್ಲ, ಆದರೆ ಇಂದು ನನಗೇ ತಿಳಿಯದಂತೆ ಶಾಲೆಗೆ ಹೋಗಿ ಮಕ್ಕಳ ಟಿ.ಸಿ ತೆಗೆದುಕೊಂಡಿದ್ದಾಳೆ. ಈ ವಿಚಾರವಾಗಿ ಇವಳು ಹಾಳಾಗೋದಲ್ಲದೆ ನನ್ನ ಮಕ್ಕಳನ್ನೂ ಹಾಳು ಮಾಡಿದ್ದಾಳೆ, ಇನ್ನಾದರೂ ಚೂರು ಮರ್ಯಾದೆಯಿಂದ ಇರಲು ಹೇಳು, ಸೂಟ್ ಕೇಸ್ ಒಳಗಿಡಲು ಹೇಳು' ಎಂದ. ಮತ್ತೊಂದು ಸಂಸಾರದ ಮಧ್ಯೆ ಮೂಗು ತೂರಿಸಲು ನಾನೆಷ್ಟರನೆಯವನು, ಒಂದು ವೇಳೆ ಆಕೆ ‘ಕೇಳಲು ನೀವ್ಯಾರು’ ಎಂದುಬಿಟ್ಟರೆ ಎಂದು ಯೋಚಿಸುವಷ್ಟರಲ್ಲೇ ಆಕೆ ‘ನೀವು ಏನೇ ಹೇಳಿದ್ರೂ ಕೇಳೋಲ್ಲ, ಕೋರ್ಟ್‍ನಲ್ಲಿ ಮಾತನಾಡಿ’ ಎಂದಳು. ಅಷ್ಟಕ್ಕೆ ಅನಚಿತು ಆಕೆಯ ಕೆನ್ನೆಗೆ ರಪ್ಪನೆ ಒಂದು ಬಿಟ್ಟ. ಅವನ ಜುಟ್ಟನ್ನು ಹಿಡಿದುಕೊಳ್ಳಲು ಬಂದ ಮಗನ ಎರಡು ಕೈಯನ್ನು ಅದುಮಿಟ್ಟುಕೊಂಡು ಬೆನ್ನಿಗೆರಡು ಭಾರಿಸಿದ. ಮಗಳನ್ನೊಮ್ಮೆ ಕೆಕ್ಕರಿಸಿಕೊಂಡು ನೋಡಿದ್ದೆ ಹೆದರಿಕೊಂಡು ಹಿಂದೆ ಸರಿದಳು. ಹೆಂಡತಿ ಎನಿಸಿಕೊಂಡವಳ ಜುಟ್ಟು ಹಿಡಿದುಕೊಂಡು ಮುಖವನ್ನು ಗೋಡೆಗೆ ಗುದ್ದಿಸಿದ್ದೆ ಕೋಣೆ ಸೇರಿಕೊಂಡಳು. ಜಾಡಿಸಿ ಒದ್ದ ರಭಸಕ್ಕೆ ಸೂಟ್ ಕೇಸ್ ಹೊಡೆದುಹೋಗಿ ಒಳಗಿದ್ದ ಬಟ್ಟೆಗಳೆಲ್ಲ ನೆಲದ ಮೇಲೆ ಚೆಲ್ಲಿಕೊಂಡವು.

‘ಈ ಮನೆಯಲ್ಲಿ ನಾನು ಮದುವೆಯಾದ ಸ್ವಲ್ಪ ದಿನಗಳ ನಂತರದಿಂದಲೂ ಒಂಟಿಯೇ, ಹೆಂಡತಿ ಮಕ್ಕಳೆಲ್ಲಾ ಆ ಕಡೆಯ ಕೋಣೆಗೆ ಸೇರಿಕೊಂಡರೆ ನಾನು ಈ ಕೋಣೆಯಲ್ಲಿ ಈ ರೀತಿಯಾಗಿ ಒಬ್ಬನೇ ಬಿದ್ದುಕೊಳ್ಳುತ್ತೇನೆ. ಮುದ್ದು ಮಾಡಿ ಒಲಿಸಿಕೊಂಡರೆ ತಿಂಗಳಿಗೊಂದೆರಡು ಬಾರಿ ನನ್ನೊಡನೆ ಮಲಗಿಕೊಳ್ಳುತ್ತಾಳೆ. ಸಮಾಜ, ದೇಶದ ಒಳಿತಿಗೋಸ್ಕರ ದುಡಿಯುತ್ತಿರುವುದೇ ತೊಡಕಾಗಿ ನನ್ನ ಸಂಸಾರವನ್ನು ನುಂಗಿಕೊಳ್ಳುತ್ತಿರುವುದೇನೋ ಅನಿಸುತ್ತಿದೆ. ಏನೇ ಕಾರಣವಿದ್ದರೂ ನನ್ನಂತಹವರು ಸೋಲಬಾರದು ಎಂದುಕೊಂಡೇ ಜೀವನ ಸಾಗಿಸುತ್ತಿದ್ದೇನೆ’ ಎಂದು ಅಸಹಾಯಕನಾಗಿ ಆತ ನುಡಿದಾಗ ನನಗೆ ಗಾಬರಿಯಾಯಿತು. 

    ಯಾವುದೋ ಹುಡುಗಿಯನ್ನು ನೋಡಲು ಹೋಗೋಣವೆಂದವನು ‘ನೀನಾದರೂ ಮದುವೆಯಾಗದೆ ಸುಖವಾಗಿರು’ ಎಂದ. ನವ್ಯಳ ತಾಯಿ ಕರೆ ಮಾಡುತ್ತಿದ್ದರು. ಮಾತನಾಡಲು ಉಳಿದಿರುವುದಾದರು ಏನು ಎಂಬುದೇ ತಿಳಿಯಲಿಲ್ಲ. ಆ ಮದುವೆಯಾಗಿ ಗಂಡ ಬಿಟ್ಟವಳನ್ನೇ ಕಟ್ಟಿಕೊಳ್ಳೋಣವೆಂದು ನಿರ್ಧರಿಸಿ ಅನಂತು ಜೊತೆ ಮಾತನಾಡಲು ಟೆರಸ್‍ಗೆ ಬಂದೆ. ಆತ ನೀಲಾಕಾಶ ನೋಡುತ್ತ ಶೂನ್ಯನಾಗಿ ನಿಂತಿದ್ದ. ಮರುಮಾತನಾಡದೆ ಅವನ ಜೊತೆ ನಾನೂ ನಿಂತುಬಿಟ್ಟೆ.

Comments